Tag: jayanagar

  • ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬುಗೆ ಜಯನಗರ ಟಿಕೆಟ್

    ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬುಗೆ ಜಯನಗರ ಟಿಕೆಟ್

    ಬೆಂಗಳೂರು: ಕುತೂಹಲಕ್ಕೆ ಕಾರಣವಾಗಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವುದಕ್ಕೆ ತೆರೆಬಿದ್ದಿದೆ. ಆದರೆ, ನಮಗೆ ಟೀಕೆಟ್ ನೀಡಬೇಕು ಎಂದು ಹಾಲಿ ಹಾಗೂ ಮಾಜಿ ಪಾಲಿಕೆ ಸದಸ್ಯರು ಪಟ್ಟು ಹಿಡಿದಿದ್ದಾರೆ.

    ಬಿಜೆಪಿಯಿಂದ ಮಾಜಿ ಶಾಸಕ ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರ ಹೆಸರು ಪ್ರಕಟವಾಗಿದೆ. ಈ ಬೆನ್ನಲ್ಲೆ, ಪಟ್ಟಾಭಿರಾಮನಗರದ ಮಾಜಿ ಕಾರ್ಪೋರೆಟರ್ ಸಿ.ಕೆ.ರಾಮಮೂರ್ತಿ, ಬಿಬಿಎಂಪಿ ಮಾಜಿ ಮೇಯರ್ ಎಸ್.ಕೆ.ನಟರಾಜ್ ಹಾಗೂ ಬೈರಸಂದ್ರದ ವಾರ್ಡ್ ಬಿಬಿಎಂಪಿ ಸದಸ್ಯ ನಾಗರಾಜ್ ಅವರು ನಮ್ಮ ಮೂರು ಜನರಲ್ಲಿ ಒಬ್ಬರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಇಂದು ಸಂಜೆ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ, ಅನಂತ್ ಕುಮಾರ್ ಅವರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆ.

    ಸ್ಥಳೀಯರನ್ನು ಹೊರತುಪಡಿಸಿ ಬೇರೆಯವರಿಗೆ ಆದ್ಯತೆ ನೀಡಿದರೆ ಚುನಾವಣೆ ಕೆಲಸಕ್ಕೆ ಬೆಂಬಲ ಸಿಗಲ್ಲ. 30 ವರ್ಷದಿಂದಲೂ ಪಕ್ಷದಲ್ಲಿ ಸೇವೆ ಸಲ್ಲಿಸಿರುವೆ. ಮೂರು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿರುವೆ. ಪಕ್ಷದಲ್ಲಿ ಕೆಲಸ ಮಾಡದವರಿಗೆ ಟಿಕೆಟ್ ಕೊಟ್ಟರೆ ಠೇವಣಿ ಕೂಡಾ ಮರಳುವುದಿಲ್ಲ. ನನಗೆ ಒಂದು ಅವಕಾಶ ಮಾಡಿಕೊಡುವಂತೆ ನಮ್ಮ ನಾಯಕರಿಗೆ ಮನವಿ ಸಲ್ಲಿಸಿರುವೆ ಎಂದು ಬಿಬಿಎಂಪಿ ಸದಸ್ಯ ಎನ್ ನಾಗರಾಜ್ ಹೇಳಿದ್ದಾರೆ.

    ಜಯನಗರ ಮಾಜಿ ಕಾರ್ಪೋರೇಟರ್ ಸಿ.ಕೆ.ರಾಮಮೂರ್ತಿ ಅವರು ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ತಮ್ಮನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಸಲ್ಲಿಸಿದ್ದಾರೆ.

    ಕಾರ್ಯಕರ್ತರೇ ವಿಜಯ್ ಕುಮಾರ್ ಅವರ ಕುಟುಂಬವಾಗಿದ್ದರು. ಅವರ ಮನೆಯಲ್ಲಿ ಯಾರು ಪಕ್ಷಕ್ಕಾಗಿ ಕೆಲಸ ಮಾಡಲಿಲ್ಲ. ಕ್ಷೇತ್ರದಲ್ಲಿ ಸರ್ವೇ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ದವಾಗಿದ್ದೇವೆ. ಆದರೆ ಹೊಸ ಮುಖಗಳಿಗಿಂತ, ಕಾರ್ಪೋರೇಟರ್ ಗಳಿಗೆ ಅವಕಾಶ ನೀಡುವುದು ಒಳಿತು ಎಂದು ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯ ರಾಮಮೂರ್ತಿ ಹೇಳಿದ್ದಾರೆ.

    ಹಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದ ವಿಜಯ್ ಕುಮಾರ್ ಅವರು ಜಯನಗರ ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿದ್ದರು. ಚುನಾವಣೆಗೆ ಕೆಲ ದಿನಗಳು ಬಾಕಿ ಇರುವ ವೇಳೆಯಲ್ಲಿ ವಿಜಯ್ ಕುಮಾರ್ ಅವರು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದರು. ಮೇ 3 ರಂದು ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡು ಏಕಾಏಕಿ ಕುಸಿದು ಬಿದ್ದಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕಾರ್ಯಕರ್ತರು ಅವರನ್ನು ತಕ್ಷಣ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಕರೆತರುವಾಗಲೇ ಅವರ ಹೃದಯ ಬಡಿತ, ಬಿಪಿ ಕುಸಿತ ಕಂಡಿತ್ತು. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 1 ಗಂಟೆ ಸುಮಾರಿಗೆ ಮೃತಪಟ್ಟಿದ್ದರು.

  • ಜಯನಗರ ಕ್ಷೇತ್ರದಿಂದ ಸ್ಪರ್ಧಿಸಲು ರಾಮಲಿಂಗಾರೆಡ್ಡಿ ಪುತ್ರಿ ತಯಾರಿ

    ಜಯನಗರ ಕ್ಷೇತ್ರದಿಂದ ಸ್ಪರ್ಧಿಸಲು ರಾಮಲಿಂಗಾರೆಡ್ಡಿ ಪುತ್ರಿ ತಯಾರಿ

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರಾಗ್ತಿದ್ದಂತೆ ಹಿರಿಯ ರಾಜಕಾರಣಿಗಳ ಮಕ್ಕಳು ರಾಜಕೀಯ ರಂಗಕ್ಕೆ ಧುಮುಕ್ತಿದ್ದಾರೆ. ಇದೀಗ ಗೃಹಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ ಕೂಡಾ ಚುನಾವಣಾ ಕಣಕ್ಕೆ ಧುಮುಕುವುದಾಗಿ ಘೋಷಿಸಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯ ಎಸ್‍ಎಫ್‍ಎಸ್ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯವರು ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಗೃಹಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ ಭಾಗಿಯಾಗಿದ್ರು. ಈ ವೇಳೆ ಮಾತನಾಡಿದ ಅವರು, ತಾವು ಜಯನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಯಾರಿ ನಡೆಸಿದ್ದೇನೆ ಅಂತಾ ಹೇಳಿದ್ರು.

    ಇನ್ನು ತಾವು ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದು ಅಲ್ಲಿ ಮಾಡಿರುವ ಸಾಧನೆ ಹಾಗು ತಂದೆ ರಾಮಲಿಂಗಾರೆಡ್ಡಿಯವರ ಹೆಸರು ತಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿದೆ. ಈಗಾಗಲೇ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿರುವುದಾಗಿ ತಿಳಿಸಿದ್ರು.

  • ಲಿಮ್ಕಾ ದಾಖಲೆ ಬರೆದ ಜಯನಗರದ ಕನ್ನಡ ಬಾವುಟ!

    ಲಿಮ್ಕಾ ದಾಖಲೆ ಬರೆದ ಜಯನಗರದ ಕನ್ನಡ ಬಾವುಟ!

    ಬೆಂಗಳೂರು: ಜಯನಗರದ ಕನ್ನಡ  ಮನಸ್ಸುಗಳ ವೇದಿಕೆಯಿಂದ ಇಂದು ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು.

    ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಉದ್ದದ ಕನ್ನಡ ಬಾವುಟ ಪಥ ಸಂಚಲನ ಮಾಡಿದ್ರು. ಸುಮಾರು 2040 ಮೀಟರ್ ಉದ್ದದ ಕನ್ನಡ ಬಾವುಟವನ್ನು ತಯಾರಿಸಿ ಜಯನಗರದ ಸಂಗಮ ಸರ್ಕಲ್ ಬಳಿಯಿಂದ ಪಥ ಸಂಚಲನ ಪ್ರಾರಂಭ ಮಾಡಿದ್ರು.

    ಕರ್ನಾಟಕ ಹಾಗೂ ದೇಶದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಉದ್ದದ ಕನ್ನಡ ಬಾವುಟ ಪಥಸಂಚಲನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬೃಹತ್ ಆಕಾರದ ಬಾವುಟ ಲಿಮ್ಕಾ ಬುಕ್ ಆಫ್ ರೆಕಾರ್ಡ್‍ಗೆ ಸೇರಿದೆ.

    ಇಷ್ಟೇ ಅಲ್ಲದೆ ಪ್ರಥಮ ಬಾರಿಗೆ ಸಂಚಾರಿ ಕವಿಗೋಷ್ಠಿಯನ್ನು ಕೂಡ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ಸಾಹಿತಿ ಚಂಪಾ, ಶಾಲಾಮಕ್ಕಳು ಸೇರಿದಂತೆ ನೂರಾರು ಕನ್ನಡಿಗರು ಹಾಗೂ ಶಾಸಕ ಸೋಮಶೇಖರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.