Tag: Jammu And Kashmir Elections

  • J&K Elections | ಬಿಜೆಪಿಯಿಂದ 10 ಅಭ್ಯರ್ಥಿಗಳನ್ನೊಳಗೊಂಡ 6ನೇ ಪಟ್ಟಿ ರಿಲೀಸ್

    J&K Elections | ಬಿಜೆಪಿಯಿಂದ 10 ಅಭ್ಯರ್ಥಿಗಳನ್ನೊಳಗೊಂಡ 6ನೇ ಪಟ್ಟಿ ರಿಲೀಸ್

    ಶ್ರೀನಗರ: ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ (Jammu and Kashmir elections) ಹತ್ತು ಅಭ್ಯರ್ಥಿಗಳನ್ನೊಳಗೊಂಡ 6ನೇ ಪಟ್ಟಿಯನ್ನು ಬಿಜೆಪಿ (BJP) ಬಿಡುಗಡೆ ಮಾಡಿದೆ.

    ಪಟ್ಟಿಯಲ್ಲಿ ಕಥುವಾ ಕ್ಷೇತ್ರದಿಂದ ಭರತ್ ಭೂಷಣ್, ಸೋನಾವರಿ ಕ್ಷೇತ್ರದಿಂದ ಅಬ್ದುಲ್ ರಶೀದ್ ಖಾನ್, ಉಧಂಪುರ ಪೂರ್ವ ಕ್ಷೇತ್ರದಿಂದ ಆರ್.ಎಸ್ ಪಠಾನಿಯಾ ಮತ್ತು ಬಂಡಿಪೋರಾ ಕ್ಷೇತ್ರದಿಂದ ನಸೀರ್ ಅಹ್ಮದ್ ಲೋನ್ ಸ್ಪರ್ಧಿಸಲಿದ್ದಾರೆ.

    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯನ್ನು ಅನಾವರಣಗೊಳಿಸಿದ್ದರು. ಇದಾದ ನಂತರ ಪಕ್ಷದಲ್ಲಿ ಈ ಬೆಳವಣಿಗೆಯಾಗಿದೆ ಎಂದು ಹೇಳಿದ್ದರು.

     

    ಕಾಶ್ಮೀರಕ್ಕೆ ಭೇಟಿ ನಿಡಿದ್ದ ವೇಳೆ ಪಕ್ಷದ ಪ್ರಾಥಮಿಕ ಉದ್ದೇಶ ಈ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ತೊಡೆದುಹಾಕುವುದು. ಅಭಿವೃದ್ಧಿ, ಪ್ರಗತಿ ಮತ್ತು ಅಂಚಿನಲ್ಲಿರುವ ಸಮುದಾಯಗಳ ಸಬಲೀಕರಣವನ್ನು ಉತ್ತೇಜಿಸುವುದು ಎಂದು ಶಾ ಒತ್ತಿ ಹೇಳಿದ್ದರು.

    370ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರದಲ್ಲಿ ಇದು ಮೊದಲ ವಿಧಾನಸಭಾ ಚುನಾವಣೆಯಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್, ಇದೇ ಸೆಪ್ಟೆಂಬರ್ 30 ರೊಳಗೆ ಚುನಾವಣಾ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು.

    ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 18, 25, ಮತ್ತು ಅಕ್ಟೋಬರ್ 1 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

  • ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನ – ಅಮಿತ್ ಶಾ ಆರೋಪ

    ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ ಯತ್ನ – ಅಮಿತ್ ಶಾ ಆರೋಪ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಸಂವಿಧಾನದ 370ನೇ ವಿಧಿ ಮರುಸ್ಥಾಪಿಸಲು ಕಾಂಗ್ರೆಸ್ (Congress) ಹಾಗೂ ನ್ಯಾಷನಲ್ ಕಾನ್ಸರೆನ್ಸ್ (NC) ಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

    ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ (Jammu And Kashmir Elections) ಹಿನ್ನೆಲೆಯಲ್ಲಿ ಬಿಜೆಪಿಯ (BJP) `ವಿಜಯ ಸಂಕಲ್ಪ’ ಯಾತ್ರೆಯಲ್ಲಿ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಕಣಿವೆ ರಾಜ್ಯದಲ್ಲಿ ಐತಿಹಾಸಿಕ ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

    ಮುಂಬರುವ ಚುನಾವಣೆ ಐತಿಹಾಸಿಕವಾಗಿರಲಿದೆ. ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದ ಜನರು ಒಂದೇ ತ್ರಿವರ್ಣ ಧ್ವಜದ ಅಡಿಯಲ್ಲಿ ಮತ ಚಲಾಯಿಸಲಿದ್ದಾರೆ. ಡಾ.ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಚುನಾವಣೆ ನಡೆಯಲಿದೆ’. ದೇಶದಲ್ಲಿ ಇಬ್ಬರು ಪ್ರಧಾನಿಗಳು ಇರಲು ಸಾಧ್ಯವಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಜನರು ಪ್ರಧಾನಿ ಮೋದಿ ಅವರನ್ನು ಆಯ್ಕೆ ಮಾಡಿದ್ದಾರೆ. ಹಾಗೆಯೇ ಜಮ್ಮುವಿನಲ್ಲಿ ಎರಡು ಧ್ವಜಗಳು ಇರಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾಯತ್ತತೆಯ ಬಗ್ಗೆ ಯಾವುದೇ ಶಕ್ತಿಗಳು ಮಾತನಾಡಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಹಾಗೂ ಅಬ್ದುಲ್ಲಾ ಅವರು ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ನಾನು ರಾಹುಲ್ ಹಾಗೂ ಅಬ್ದುಲ್ಲಾ ಅವರನ್ನು ಕೇಳುತ್ತೇನೆ. ನಿಮ್ಮಿಂದ ರಾಜ್ಯ ಸ್ಥಾನಮಾನ ಮರಳಿಸಲು ಹೇಗೆ ಸಾಧ್ಯ? ನೀವು ಕಾಶ್ಮೀರದ ಜನರನ್ನು ಏಕೆ ಮೂರ್ಖರನ್ನಾಗಿ ಮಾಡುತ್ತಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ.

    ಚುನಾವಣೆಯ ನಂತರ ಸೂಕ್ತ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರುಸ್ಥಾಪಿಸುವುದಾಗಿ ನಾನು ವಾಗ್ದಾನ ನೀಡಿದ್ದೇನೆ. ಇದು ಯಾವುದೇ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಲ್ಲ. ಸಂಸತ್ತಿನಲ್ಲಿ ಹೇಳಿರುವುದು ಎಂದು ಇದೇ ಸಮಯದಲ್ಲಿ ಅವರು ಉಲ್ಲೇಖಿಸಿದ್ದಾರೆ.