Tag: Jaipur

  • ಪಾಕ್ ಡ್ರೋನ್ ಹೊಡೆದುರುಳಿಸಿದ ಏರ್ ಫೋರ್ಸ್

    ಪಾಕ್ ಡ್ರೋನ್ ಹೊಡೆದುರುಳಿಸಿದ ಏರ್ ಫೋರ್ಸ್

    ಜೈಪುರ: ಭಾರತ ಭೂ ಪ್ರದೇಶವನ್ನು ಪ್ರವೇಶ ಮಾಡಿದ್ದ ಪಾಕಿಸ್ತಾನದ ಡ್ರೋನನ್ನು ಭಾರತೀಯ ವಾಯುಪಡೆ ರಾಜಸ್ಥಾನದ ಬಿಕಾನೇರ್ ಪ್ರದೇಶದಲ್ಲಿ ಹೊಡೆದುರುಳಿಸಿದೆ.

    ಮೂಲಗಳ ಪ್ರಕಾರ ಸೋಮವಾರ ಬೆಳಗ್ಗೆ 11.30ರ ಸಮಯದಲ್ಲಿ ಭಾರತ ಗಡಿ ಪ್ರದೇಶವನ್ನು ದಾಟಿ ಪಾಕಿಸ್ತಾನದ ಡ್ರೋನ್ ಆಗಮಿಸಿತ್ತು. ಕೂಡಲೇ ಎಚ್ಚೆತ್ತ ಭಾರತ ವಾಯುಪಡೆ ಡ್ರೋನ್ ಹೊಡೆದುರುಳಿಸಲು ಯಶಸ್ವಿಯಾಗಿದೆ.

    ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನೀಡಿರುವ ಮಾಹಿತಿಯಂತೆ 11.30ರ ಸಮಯದಲ್ಲಿ ಪಾಕಿಸ್ತಾನದ ಘರ್ಸನಾ ಗಡಿ ಭಾಗದಲ್ಲಿ 2 ಬಾಂಬ್ ಬ್ಲಾಸ್ಟ್ ಆಗಿರುವುದು ಖಚಿತವಾಗಿದ್ದು, ಡ್ರೋನ್ ಅವಶೇಷಗಳು ಭಾರತದ ಗಡಿ ಭಾಗದಲ್ಲಿ ಬಿದ್ದಿದೆ. ಆದರೆ ಈ ವರದಿಯನ್ನು ಪಾಕಿಸ್ತಾನ ಮಾಧ್ಯಮಗಳು ಅಲ್ಲಗೆಳೆದಿವೆ.

    ರಾಷ್ಟ್ರಿಯ ಮಾಧ್ಯಮ ನೀಡಿರುವ ಮಾಹಿತಿಯ ಅನ್ವಯ ಪಾಕಿಸ್ತಾನದ ಡ್ರೋನ್ ಭಾರತ ಗಡಿ ಪ್ರವೇಶ ಮಾಡಿರುವುದನ್ನು ರೆಡಾರ್ ಗಳು ಪತ್ತೆ ಮಾಡಿದ್ದು, ಈ ವೇಳೆ ಸುಖೋಯ್ 30ಎಂಕೆಐ ವಿಮಾನ ಬಳಸಿ ಡ್ರೋನ್ ಹೊಡೆದುರುಳಿಸಲಾಗಿದೆ.

    ಇತ್ತ ಪಾಕಿಸ್ತಾನ ಸೇನೆ ತನ್ನ ಉದ್ಧಟತನವನ್ನು ಮುಂದುವರಿಸಿದ್ದು, ಜಮ್ಮು ಕಾಶ್ಮೀರದ ಪೂಂಚ್ ವಲಯದಲ್ಲಿ ಗುಂಡಿನ ದಾಳಿ ನಡೆಸಿದೆ. ಅಲ್ಲದೇ ಕಳೆದ ಒಂದು ವಾರದ ಅವಧಿಯಲ್ಲಿ 57 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮನೆಗೆ ವಿದ್ಯಾರ್ಥಿನಿಯರನ್ನು ಕರೆದ ವಾರ್ಡನ್ – ಪತಿ, ಸ್ನೇಹಿತರ ಜೊತೆ ಸೇರಿ ಲೈಂಗಿಕ ದೌರ್ಜನ್ಯ

    ಮನೆಗೆ ವಿದ್ಯಾರ್ಥಿನಿಯರನ್ನು ಕರೆದ ವಾರ್ಡನ್ – ಪತಿ, ಸ್ನೇಹಿತರ ಜೊತೆ ಸೇರಿ ಲೈಂಗಿಕ ದೌರ್ಜನ್ಯ

    ಜೈಪುರ: ಸರ್ಕಾರಿ ಹಾಸ್ಟೆಲ್‍ನ ಇಬ್ಬರು ವಿದ್ಯಾರ್ಥಿನಿಯರಿಗೆ ವಾರ್ಡನ್, ಆಕೆಯ ಪತಿ ಮತ್ತು ಆತನ ಸ್ನೇಹಿತರು ಲೈಂಗಿಕ ಕಿರುಕುಳ ನೀಡಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.

    ಹಾಸ್ಟೆಲ್ ವಾರ್ಡನ್ ಹಾಸ್ಟೆಲ್‍ನಲ್ಲಿದ್ದ 12ನೇ ತರಗತಿ ವಿದ್ಯಾರ್ಥಿನಿಯರನ್ನು ಮನೆಗೆ ಕರೆಸಿಕೊಳ್ಳುತ್ತಿದ್ದಳು. ಅಲ್ಲಿ ಆಕೆಯ ಪತಿ ಮತ್ತು ಆತನ ಸ್ನೇಹಿತರು ಸೇರಿಕೊಂಡು ಕೆಲವು ದಿನಗಳವರೆಗೂ ಹುಡುಗಿಯರ ಮೇಲೆ ಅತ್ಯಾಚಾರ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಎಸ್‍ಪಿ ಮಹೇಶ್ ತ್ರಿಪಾಠಿ ಹೇಳಿದ್ದಾರೆ.

    ಮಿಗ್ ಕಮಾಂಡರ್ ಅಭಿನಂದನ್ ಅವರು ಪಾಕಿಸ್ತಾನದಿಂದ ಭಾರತಕ್ಕೆ ವಾಪಸ್ ಬಂದಿದ್ದರಿಂದ ಮಕ್ಕಳಿಗೆ ಸಿಹಿ ಹಂಚಲು ಶಾಲೆಯ ಪ್ರಿನ್ಸಿಪಾಲ್ ಸುಖಿ ರಾಮ್ ಹೋಗಿದ್ದರು. ಈ ವೇಳೆ ತಮಗೆ ಹಾಸ್ಟೆಲ್ ವಾರ್ಡನ್, ಪತಿ ಮತ್ತು ಇತರರು ಕೆಲವು ದಿನಗಳವರೆಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪತ್ರ ಬರೆದು ಕೊಟ್ಟಿದ್ದಾರೆ. ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

    ಪ್ರಿನ್ಸಿಪಾಲ್ ಸಹಾಯದಿಂದ ಹುಡುಗಿಯರು ಶನಿವಾರ ಕಿಶನ್‍ಗಢ ಬಾಸ್ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಹಾಸ್ಟೆಲ್ ವಾರ್ಡನ್ ಪತಿ ನೀಲ್ ಕಮಲ್ ಮತ್ತು ಇನ್ನೊಬ್ಬನನ್ನು ರಮೇಶ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಆರೋಪಿಗಳ ವಿರುದ್ದ ಪೋಕ್ಸೋ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಪ್ರಕರಣ ಕುರಿತು ತನಿಖೆ ನಡೆಸಲು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಪೊಲೀಸರು ಸಂತ್ರಸ್ತೆಯರ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆದರೆ ಇಲ್ಲಿಯವರೆಗೆ ಯಾವುದೇ ಬಂಧನವಾಗಿಲ್ಲ. ಇತ್ತ ಶಾಲಾ ಅಧಿಕಾರಿಗಳು ಹಾಸ್ಟೆಲ್ ವಾರ್ಡನ್ ಅನ್ನು ಅಮಾನತುಗೊಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಮ್ಮ ಮಗುವಿಗೆ ಅಭಿನಂದನ್ ಎಂದು ಹೆಸರಿಟ್ಟ ದಂಪತಿ

    ತಮ್ಮ ಮಗುವಿಗೆ ಅಭಿನಂದನ್ ಎಂದು ಹೆಸರಿಟ್ಟ ದಂಪತಿ

    ಜೈಪುರ: ಪೈಲಟ್ ಮಿಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನದಿಂದ ಬಿಡುಗಡೆಯಾಗಿ ಭಾರತಕ್ಕೆ ಕಾಲಿಟ್ಟ ದಿನದಂದೇ ಹುಟ್ಟಿದ ಮಗುವಿಗೆ ದಂಪತಿ ಅಭಿನಂದನ್ ಹೆಸರನ್ನಿಟ್ಟು ಗೌರವ ಸಲ್ಲಿಸಿದ್ದಾರೆ.

    ಅಭಿನಂದನ್ ಅವರ ಬಗ್ಗೆ ದೇಶಾದ್ಯಂತ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ ರಾಜಸ್ಥಾನದ ಅಲ್ವಾರ ಜಿಲ್ಲೆಯ ದಂಪತಿ ತಮ್ಮ ಗಂಡು ಮಗುವಿಗೆ ಅಭಿನಂದನ್ ಎಂದು ಹೆಸರಿಡುವ ಮೂಲಕ ಮಿಗ್ ಕಮಾಂಡರ್ ಗೆ  ಗೌರವ ಸಲ್ಲಿಸಿದ್ದಾರೆ. ಈ ಕುಟುಂಬವು ಅಲ್ವಾರ್ ಕಿಶನ್‍ಗಢ್ ನಲ್ಲಿ ನೆಲೆಸಿದೆ.

    ನನ್ನ ಸೊಸೆ ಶುಕ್ರವಾರ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವಿಗೆ ವಾಯಸೇನೆಯ ಪೈಲಟ್ ಗೌರವರ್ಥವಾಗಿ ಅಭಿನಂದನ್ ಎಂದು ಹೆಸರಿಟ್ಟಿದ್ದೇವೆ. ನಮ್ಮ ಪೈಲಟ್ ಬಗ್ಗೆ ನಮಗೆ ಹೆಮ್ಮೆ ಇದೆ. ಹೀಗಾಗಿ ಅವರ ಹೆಸರನ್ನು ನಾವು ಮಗುವಿಗೆ ನಾಮಕರಣ ಮಾಡಿದ್ದೇವೆ ಎಂದು ಮಗುವಿನ ಅಜ್ಜ ಜಾನೇಶ್ ಭೂತನಿ ಅವರು ಹೇಳಿದ್ದಾರೆ.

    ಮಿಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಸಂದರ್ಭದಲ್ಲಿ ನಡೆಯುತ್ತಿದ್ದ ಬೆಳವಣಿಗೆಯ ಬಗ್ಗೆ ನನ್ನ ಸೊಸೆ ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಟಿವಿ ನೋಡುತ್ತಿದ್ದೆವು. ಈ ವೇಳೆ ನನ್ನ ಸೊಸೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದೆವು. ನನ್ನ ಸೊಸೆ ಅಂದಿನ ದಿನವೇ ಗಂಡು ಮಗುವಿಗೆ ಜನ್ಮ ನೀಡಿದ್ದರು ಎಂದು ಜಾನೇಶ್ ತಿಳಿಸಿದ್ದಾರೆ.

    ನನ್ನ ಮಗುವಿಗೆ ಅಭಿನಂದನ್ ಎಂದು ನಾಮಕರಣ ಮಾಡುವ ಮೂಲಕ ನಾವು ಭಾರತೀಯ ಪೈಲಟ್ ನ ಶೌರ್ಯವನ್ನು ಸದಾ ನೆನಪಿಸಿಕೊಳ್ಳುತ್ತೇವೆ. ಜೊತೆಗೆ ಮುಂದೆ ನನ್ನ ಮಗನೂ ಒಬ್ಬ ವೀರ ಯೋಧನಾಗಲಿ ಎಂದು ನಾನು ಬಯಸುತ್ತೇನೆ ಎಂದು ತಾಯಿ ಸಪ್ನಾ ದೇವಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಿಕ್ಷೆ ಬೇಡಿ ಕೂಡಿಟ್ಟಿದ್ದ 6.61 ಲಕ್ಷ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ್ರು!

    ಭಿಕ್ಷೆ ಬೇಡಿ ಕೂಡಿಟ್ಟಿದ್ದ 6.61 ಲಕ್ಷ ಹಣವನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ್ರು!

    ಜೈಪುರ: ಉಗ್ರರ ದಾಳಿಗೆ ಹುತಾತ್ಮರಾದ ಯೋಧರ ಕುಟುಂಬದವರಿಗೆ ಸರ್ಕಾರ ಸೇರಿದಂತೆ ಅನೇಕರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಆದರೆ ರಾಜಸ್ಥಾನದ ಅಜ್ಮೇರ್‍ದಲ್ಲಿ ಬದುಕಿದ್ದಾಗ ಭಿಕ್ಷೆ ಬೇಡಿ ಸಂಪಾದನೆ ಮಾಡಿದ್ದ ಅಜ್ಜಿಯೊಬ್ಬರ ಹಣವೂ ಈಗ ಯೋಧರ ಕುಟುಂಬಕ್ಕೆ ಸಹಾಯವಾಗಿದೆ.

    ಭಿಕ್ಷುಕಿ ನಂದಿನಿ ಶರ್ಮಾ ಸಂಪಾದನೆ ಮಾಡಿದ್ದ ಹಣವನ್ನು ಈಗ ಹುತಾತ್ಮರ ಕುಟುಂಬಕ್ಕೆ ನೀಡಲಾಗಿದೆ. ನಂದಿನಿ ಶರ್ಮಾ 2018 ಆಗಸ್ಟ್ ರಲ್ಲಿ ಮೃತಪಟ್ಟಿದ್ದು, ಮೃತಪಡುವುದಕ್ಕೂ ಮೊದಲು ನನ್ನ ಬಳಿ ಇರುವ ಹಣವನ್ನು ದೇಶ ಮತ್ತು ಸಮಾಜಕ್ಕಾಗಿ ಬಳಸಬೇಕೆಂಬುದು ಹೇಳಿಕೊಂಡಿದ್ದರಂತೆ. ಹೀಗಾಗಿ ಭಿಕ್ಷೆ ಬೇಡಿ ಸಂಪಾದನೆ ಮಾಡಿದ್ದ 6.61 ಲಕ್ಷ ಹಣವನ್ನು ಪುಲ್ವಾಮಾ ದಾಳಿಯಲ್ಲಿ ವೀರಮರಣ ಹೊಂದಿದ್ದ ಕುಟುಂಬದವರಿಗೆ ನೀಡಲಾಗಿದೆ.

    ಮೃತ ನಂದಿನಿ ಶರ್ಮಾ ಅಜ್ಮೇರ್  ಬಜರಂಗಢದಲ್ಲಿರುವ ಅಂಬೆ ಮಾತೆ ದೇವಸ್ಥಾನದ ಮುಂದೆ ಭಿಕ್ಷೆ ಬೇಡುತ್ತಿದ್ದರು. ಅವರು ಪ್ರತಿದಿನ ಗಳಿಸುತ್ತಿದ್ದ ಹಣವನ್ನು ಅಂದೇ ಬ್ಯಾಂಕಿಗೆ ಹೋಗಿ ಜಮಾ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ತಾವು ಸಂಪಾದಿಸಿ ಹಣವನ್ನು ಸುರಕ್ಷಿತವಾಗಿ ಬಳಸಬೇಕೆಂದು ಇಬ್ಬರು ಟ್ರಸ್ಟಿಗಳ ಬಳಿ ಸಹ ಕೇಳಿಕೊಂಡಿದ್ದರು. ಅಷ್ಟೇ ಅಲ್ಲದೇ ಮೃತಪಟ್ಟ ನಂತರ ಈ ಹಣ ದೇಶಕ್ಕಾಗಿ ವಿನಿಯೋಗಿಸಬೇಕು ಎಂದು ವಿಲ್ ಬರೆದಿಟ್ಟಿದ್ದರು.

    ಶರ್ಮಾ 2018 ಮೃತಪಟ್ಟಿದ್ದಾರೆ. ಆದರೆ ಟ್ರಸ್ಟಿಗಳು ಸೂಕ್ತ ಸಮಯ ಬಂದಾಗ ಹಣವನ್ನು ದಾನ ಮಾಡಲು ಕಾಯುತ್ತಿದ್ದರು. ಇತ್ತೀಚೆಗೆ ಪುಲ್ವಾಮಾ ಉಗ್ರ ದಾಳಿಯಲ್ಲಿ 44 ಯೋಧರು ಮೃತಪಟ್ಟಿದ್ದರು. ಇದೇ ಸೂಕ್ತ ಸಮಯ ಎಂದು ಟ್ರಸ್ಟಿಗಳು ನಿರ್ಧಾರ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಹುತಾತ್ಮ ಸೈನಿಕರ ಕುಟುಂಬಕ್ಕೆ ನೀಡಲಾಗುವ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಟ್ರಸ್ಟ್ ಗಳಿಂದ ಹಣವನ್ನು ಪಡೆದು ಅವರಿಗೆ ರಶೀದಿ ನೀಡಲಾಗಿದೆ ಎಂದು ಅಜ್ಮೇರ್ ಜಿಲ್ಲಾಧಿಕಾರಿ ವಿಶ್ವ ಮೋಹನ್ ಶರ್ಮಾ ತಿಳಿಸಿದ್ದಾರೆ.

    ಮೃತ ಅಜ್ಜಿ ಸಂಪಾದನೆ ಮಾಡಿದ್ದ ಹಣವನ್ನು ಹುತಾತ್ಮರ ಕುಟುಂಬಕ್ಕೆ ನೀಡಲಾದ ವಿಷಯ ತಿಳಿದು ದೇವಾಲಯ ಭಕ್ತರು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಅವರಿಗೆ ಭಕ್ತರು ಯಾವಾಗಲೂ ಗೌರವ ಕೊಡುತ್ತಿದ್ದರು. ಶರ್ಮಾ ಅವರಿಗೆ ಹಣದ ಜತೆ ಊಟ, ಬಟ್ಟೆಯನ್ನು ಸಹ ದಾನ ಮಾಡುತ್ತಿದ್ದರು. ಅವರು ಪ್ರತಿದಿನ ಹಣವನ್ನು ಬ್ಯಾಂಕ್‍ನಲ್ಲಿ ಜಮೆ ಮಾಡುತ್ತಿದ್ದ ವಿಚಾರ ಬಗ್ಗೆ ನಮಗೆಲ್ಲ ತಿಳಿದಿತ್ತು ಎಂದು ದೇವಸ್ಥಾನದ ಪುರೋಹಿತರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆ ಮೆರವಣಿಗೆಯಲ್ಲಿ ಹೋಗ್ತಿದ್ದವರ ಮೇಲೆ ಹರಿದ ಟ್ರಕ್ – 13 ಮಂದಿ ದುರ್ಮರಣ, 18 ಜನ ಗಂಭೀರ

    ಮದ್ವೆ ಮೆರವಣಿಗೆಯಲ್ಲಿ ಹೋಗ್ತಿದ್ದವರ ಮೇಲೆ ಹರಿದ ಟ್ರಕ್ – 13 ಮಂದಿ ದುರ್ಮರಣ, 18 ಜನ ಗಂಭೀರ

    ಜೈಪುರ: ವೇಗವಾಗಿ ಬರುತ್ತಿದ್ದ ಟ್ರಕ್ ಒಂದು ಮದುವೆ ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಹರಿದ ಪರಿಣಾಮ 13 ಮಂದಿ ಮೃತಪಟ್ಟಿದ್ದು, 18ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ರಾಜಸ್ಥಾನದ ಪ್ರತಾಪ್‍ಗಢ ಜಿಲ್ಲೆಯಲ್ಲಿ ನಡೆದಿದೆ.

    ಈ ಅಪಘಾತ ರಾಮದೇವ ದೇವಸ್ಥಾನ ಬಳಿ ರಾಜ್ಯ ಹೆದ್ದಾರಿ 113 ರಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಟ್ರಕ್ ನಿಂಬಹೆರಾದಿಂದ ಬಾನ್ಸ್ವಾರಾಕ್ಕೆ ಹೋಗುತ್ತಿತ್ತು. ಪ್ರತಾಪ್‍ಗಢ ಜಿಲ್ಲೆಯ ಬಳಿ ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಮದುವೆ ಮೆರವಣಿಗೆಯ ಜನರ ಮೇಲೆ ಏಕಾಏಕಿ ವೇಗವಾಗಿ ಬಂದು ಟ್ರಕ್ ಹರಿದಿದೆ. ಇದರಿಂದ ಸ್ಥಳದಲ್ಲೇ ಮಕ್ಕಳು ಸೇರಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಡಿಎಸ್‍ಪಿ ವಿಜಯ್ ಪಾಲ್ ಸಿಂಗ್ ಸಂಧು ತಿಳಿಸಿದ್ದಾರೆ.

    ದೌಲತ್ರಂ (60), ಭರತ್ (30), ಶುಭಾಮ್ (5), ಚೊಟು (5), ದಿಲೀಪ್ (11), ಅರ್ಜುನ್ (15), ಇಶು (19), ರಮೇಶ್ (30) ಮತ್ತು ಕರಣ್ (28) ಮೃತ ದುರ್ದೈವಿಗಳು. ಇನ್ನುಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತಪಟ್ಟವರಲ್ಲಿ ಅಧಿಕ ಮಕ್ಕಳಿದ್ದಾರೆ ಎಂದು ಪೊಲೀಸ್ ಹೇಳಿದ್ದಾರೆ.

    ಅಪಘಾತದ ಬಗ್ಗೆ ತಿಳಿದು ನನಗೆ ತುಂಬಾ ನೋವಾಗಿದೆ. ಗಾಯಗೊಂಡವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಅಪಘಾತದಲ್ಲಿ ಗಾಯಗೊಂಡವರನ್ನು ಚೋಟಿ ಸದ್ರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡವರನ್ನು ಉದಯ್‍ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಹೇಳಿದ್ದಾರೆ.

    ಸದ್ಯಕ್ಕೆ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ತನಿಖೆ ಮುಂದುವರಿಸಿದ್ದೇವೆ. ರಾತ್ರಿಯಾದ ಕಾರಣ ಟ್ರಕ್ ಚಾಲಕನಿಗೆ ಮದುವೆ ಮೆರವಣಿಗೆ ಕಾಣಿಸಲಿಲ್ಲ ಎಂದು ಡಿಎಸ್‍ಪಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಂದಮ್ಮನ ಮುಖ ನೋಡುವ ಮುನ್ನವೇ ಹುತಾತ್ಮನಾದ ಯೋಧ!

    ಕಂದಮ್ಮನ ಮುಖ ನೋಡುವ ಮುನ್ನವೇ ಹುತಾತ್ಮನಾದ ಯೋಧ!

    ಜೈಪುರ: ತನ್ನ ಪುಟ್ಟ ಕಂದಮ್ಮನ ನೋಡಿ, ಮುದ್ದಾಡುವ ಮುನ್ನವೇ ಉಗ್ರರ ಆತ್ಮಾಹುತಿ ದಾಳಿಗೆ ಸಿಆರ್‌ಪಿಎಫ್‌ ಯೋಧ ರೋಹಿತಾಷ್ ಲಾಂಭಾ ಪುಲ್ವಾಮದಲ್ಲಿ ಹುತಾತ್ಮರಾಗಿದ್ದು, ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

    ಗುರುವಾರದಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪುರದಲ್ಲಿ ನಡೆದ ಭೀಕರ ಉಗ್ರರ ಆತ್ಮಾಹುತಿ ದಾಳಿಗೆ 44 ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದಾರೆ. ದೇಶಕ್ಕಾಗಿ ಮಣಿದ ವೀರ ಯೋಧರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ದಾಳಿಯಲ್ಲಿ ಜೈಪುರದ ಗೋವಿಂದ್‍ಪುರದ ಯೋಧ ರೋಹಿತಾಷ್ ಲಾಂಭಾ(27) ಕೂಡ ಹುತಾತ್ಮರಾಗಿದ್ದಾರೆ.

    ಗೋವಿಂದ್‍ಪುರದ ಅಮರ್‌ಸಾರ್ ಗ್ರಾಮದ ನಿವಾಸಿಯಾಗಿರುವ ರೋಹಿತಾಷ್ ಲಾಂಭಾ ತಮ್ಮ 25ನೇ ವಯಸ್ಸಿನಲ್ಲಿಯೇ ಸಿಆರ್‌ಪಿಎಫ್‌ ಅನ್ನು ಸೇರಿದ್ದರು. ಅಲ್ಲದೇ ಕಳೆದ ವರ್ಷ ಅವರ ವಿವಾಹ ನಡೆದಿತ್ತು. 2018ರ ಡಿಸೆಂಬರ್ ತಿಂಗಳಲ್ಲಿ ಅವರಿಗೆ ಮುದ್ದಾದ ಹೆಣ್ಣು ಮಗುವೊಂದು ಜನಿಸಿತ್ತು.

    ಕರ್ತವ್ಯದಲ್ಲಿದ್ದ ಕಾರಣ ರೋಹಿತಾಷ್ ಅವರು ತಮ್ಮ ಮಗಳನ್ನು ನೋಡಲು ಬರಲು ಆಗಿರಲಿಲ್ಲ. ಆದ್ರೆ ಮಗಳ ಮುದ್ದು ಮೊಗವನ್ನು ನೋಡುವ ಮುನ್ನವೇ ರೋಹಿತಾಷ್ ಹುತಾತ್ಮರಾಗಿದ್ದಾರೆ. ರೋಹಿತಾಷ್ ಅವರ ಅಗಲಿಕೆಯಿಂದ ಗ್ರಾಮದೆಲ್ಲೆಡೆ ಸ್ಮಶಾನ ಮೌನ ಆವರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದ್ವೇಷವನ್ನು ಮರೆಯಲು ಮೋದಿಯನ್ನ ಅಪ್ಪಿಕೊಂಡೆ: ರಾಹುಲ್ ಗಾಂಧಿ

    ದ್ವೇಷವನ್ನು ಮರೆಯಲು ಮೋದಿಯನ್ನ ಅಪ್ಪಿಕೊಂಡೆ: ರಾಹುಲ್ ಗಾಂಧಿ

    ಜೈಪುರ: ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿರುವ ದ್ವೇಷವನ್ನು ಮರೆಯಲು ಸಂಸತ್ತಿನಲ್ಲಿ ನಾನು ಅವರನ್ನು ಅಪ್ಪಿಕೊಂಡಿದ್ದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಕಾಂಗ್ರೆಸ್ ಸೇವಾ ದಳದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನನ್ನನ್ನು ಹಾಗೂ ನನ್ನ ಕುಟುಂಬದವನ್ನು ಬಹಳಷ್ಟು ಬಾರಿ ನಿಂದಿಸಿದ್ದಾರೆ. ಆದರೂ ನಾನು ಮೋದಿಯವರನ್ನು ಸಂಸತ್ತಿನಲ್ಲಿ ಅಪ್ಪಿಕೊಂಡಿದ್ದೇನೆ. ಬಿಜೆಪಿಯ ದ್ವೇಷವನ್ನು ದ್ವೇಷದಿಂದಲೇ ಎದುರಿಸಲು ಆಗುವುದಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆ ದ್ವೇಷವನ್ನು ತೆಗೆದು ಹಾಕಲೆಂದೇ ನಾನು ಪ್ರಧಾನಿಯನ್ನು ಅಪ್ಪಿಕೊಂಡದ್ದು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

    ಲೋಕಸಭೆಯಲ್ಲಿ ರಾಹುಲ್ ಗಾಂಧಿ ತಮಗೆ ನೀಡಿದ ಅಪ್ಪುಗೆ ಹಾಗೂ ಕಣ್ಣು ಹೊಡೆದ ಪರಿಯನ್ನು ಮೋದಿ ಅವರು 2019ರ ಲೋಕಸಭೆಯ ಅಧಿವೇಶನದ ಕೊನೆಯ ದಿನ ಪ್ರಸ್ತಾಪಿಸಿ ರಾಹುಲ್ ಗಾಂಧಿ ಅವರ ಕಾಲೆಳೆದಿದ್ದರು.

    ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಅಂದರೆ 2014ರ ಮೊದಲು ಭಾರತವು ನಿದ್ರಿಸುತ್ತಿದ್ದ ರಾಷ್ಟ್ರವಾಗಿತ್ತು ಎಂದು ಪ್ರಧಾನಿ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ಮೋದಿ ಅವರು ಈ ಹೇಳಿಕೆ ನೀಡುವ ಮೂಲಕ ಇಡೀ ದೇಶದ ಜನರಿಗೆ ಅವಮಾನ ಮಾಡಿದ್ದಾರೆ. ಅವರ ಹೇಳಿಕೆ ಪಂಡಿತ್ ಜವಹರಲಾಲ್ ನೆಹರು, ಡಾ.ಅಂಬೇಡ್ಕರ್, ನಮ್ಮ ರೈತರು, ಸಣ್ಣ ಉದ್ಯಮಿಗಳು ಅವರಿಗಿಂತ ಮೊದಲು ಏನನ್ನೂ ಮಾಡಿಲ್ಲ ಎನ್ನುವ ಅರ್ಥ ಕಲ್ಪಿಸಿಕೊಡುತ್ತದೆ. ಈ ರೀತಿ ಹೇಳಿಕೆ ನೀಡಿ ಅವರು ಕಾಂಗ್ರೆಸ್ಸಿಗೆ ಅವಮಾನ ಮಾಡಿಲ್ಲ. ಬದಲಾಗಿ ಇಡೀ ದೇಶದ ಜನತೆಯನ್ನು ಅವಮಾನಿಸಿದ್ದಾರೆ ಎಂದು ಟೀಕಿಸಿದರು.

    ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಛತ್ತೀಸ್‍ಗಢದಲ್ಲಿರುವ ಕಾಂಗ್ರೆಸ್ ಸರ್ಕಾರಗಳು ಹಾಗೂ ಕರ್ನಾಟಕದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವು ರೈತರ ಸಾಲ ಮನ್ನಾ ಮಾಡಿದ್ದರೆ, ಮೋದಿ ಅವರು ಅನಿಲ್ ಅಂಬಾನಿ, ನೀರವ್ ಮೋದಿ ಮತ್ತು ಮೆಹುಲ್ ಚೋಸ್ಕಿ ಮುಂತಾದ ಉದ್ಯಮಿಗಳ 3,50,000 ಕೋಟಿ ರೂ. ಮೊತ್ತದ ಸಾಲವನ್ನು ಮನ್ನಾ ಮಾಡಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

    ಬಿಜೆಪಿ ಹಾಗೂ ಆರ್‍ಎಸ್‍ಎಸ್ ಅವರು ದೇಶದ ಶ್ರೀಮಂತ ಸ್ನೇಹಿತರನ್ನ ಉಳಿಸಲು ನೋಡುತ್ತಿದ್ದಾರೆ. ಆದರೆ ನಾವು ದೇಶದ ಜನಸಾಮಾನ್ಯರ ಪರವಾಗಿ ಕೆಲಸ ಮಾಡಲು ಇಚ್ಛಿಸುತ್ತೇವೆ. ಸೇವಾ ದಳ ಕಾಂಗ್ರೆಸ್ ಪಕ್ಷದ ಬೆನ್ನೆಲಬು. ಇದನ್ನು ಇನ್ನಷ್ಟು ಗಟ್ಟಿ ಮಾಡಬೇಕು. ಆಗ ಪಕ್ಷಕ್ಕೆ ಮತ್ತಷ್ಟು ಶಕ್ತಿ ದೊರೆತಂತಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • RTI ಅಡಿ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ರೆ ಬಂತು ಬಳಕೆಯಾದ ಕಾಂಡೋಮ್!

    RTI ಅಡಿ ಮಾಹಿತಿ ಕೇಳಿ ಅರ್ಜಿ ಸಲ್ಲಿಸಿದ್ರೆ ಬಂತು ಬಳಕೆಯಾದ ಕಾಂಡೋಮ್!

    ಜೈಪುರ್: ರಾಜಸ್ಥಾನದ ಇಬ್ಬರು ಆರ್‌ಟಿಐ ಕಚೇರಿಗೆ ಪ್ರಶ್ನೆಯೊಂದಕ್ಕೆ ಉತ್ತರಬೇಕೆಂದು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗೆ ಪೋಸ್ಟ್ ಮೂಲಕ ಬಳಿಸಿದ್ದ ಕಾಂಡೋಮ್ ಗಳು ಬಂದಿದ್ದು, ಇದರಿಂದ ಇಬ್ಬರು ಶಾಕ್ ಆಗಿದ್ದಾರೆ.

    ವಿಕಾಸ್ ಚೌಧರಿ ಮತ್ತು ಮನೋಹರ್ ಲಾಲ್ ಎಂಬವರು ಆರ್‌ಟಿಐ ಅಡಿ ಮಾಹಿತಿ ಕೇಳಿದ್ದರು. ಇವರಿಬ್ಬರು ರಾಜಸ್ಥಾನದ ಹನುಮಾಂಗಢ್ ಜಿಲ್ಲೆಯ ಭದ್ರಾ ತೆಹ್ಸಿಲ್ ನಲ್ಲಿನ ಚನಿ ಬಡಿ ನಿವಾಸಿಗಳಾಗಿದ್ದು, ಏಪ್ರಿಲ್ 16 ರಂದು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳ ಕುರಿತಾಗಿ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿಯಲ್ಲಿ ಎರಡು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

    ವಿಕಾಸ್ ಚೌಧರಿ ಮತ್ತು ಮನೋಹರ್ ಲಾಲ್ ಇಬ್ಬರು 2001 ರಿಂದ ಕೈಗೊಂಡ ಅಭಿವೃದ್ಧಿ ಯೋಜನೆಗಳ ವಿವರಗಳು ಬೇಕೆಂದು ಆರ್‌ಟಿಐಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇಬ್ಬರಿಗೂ ಉತ್ತರವಾಗಿ ಬಳಸಿದ ಕಾಂಡೋಮ್‍ಗಳನ್ನು ರಾಜ್ಯ ಮಾಹಿತಿ ಆಯೋಗದ ನಿರ್ದೇಶನದಲ್ಲಿ ಗ್ರಾಮ ಪಂಚಾಯತ್ ಅವರು ಕಳುಹಿಸಿದ್ದಾರೆ.

    ನಾನು ಮೊದಲ ಎನ್ವಲಪ್ ತೆಗೆದು ನೋಡಿದಾಗ ಅದರಲ್ಲಿ ಹಳೆಯ ಪತ್ರಿಕೆಯಿಂದ ಸುತ್ತವರಿದಿದ್ದ ಕಾಂಡೋಮ್ ಗಳು ಪತ್ತೆಯಾದವು. ನಾನು ತುಂಬಾ ಆಶಯದಿಂದ ಕೇಳಿದ್ದ ಮಾಹಿತಿ ಬಂದಿರುತ್ತದೆ ಅಂದುಕೊಂಡಿದ್ದೆ. ಆದರೆ ಇದನ್ನು ನೋಡಿ ನನಗೆ ಶಾಕ್ ಆಗಿತ್ತು. ಬಳಿಕ ಕೆಲವು ಪ್ರಮುಖ ಗ್ರಾಮದ ಸದಸ್ಯರ ಉಪಸ್ಥಿತಿಯಲ್ಲಿ ಮತ್ತೊಬ್ಬರಿಗೆ ಬಂದಿದ್ದ ಎನ್ವಲಪ್ ತೆಗೆಯಲಾಗಿದೆ. ಅದರಲ್ಲೂ ಇದೇ ರೀತಿಯಾಗಿ ಹಳೆಯ ಪತ್ರಿಕೆಯಲ್ಲಿ ಮುಚ್ಚಿ ಬಳಸಿದ ಕಾಂಡೋಮ್ ಕಳುಹಿಸಿದ್ದಾರೆ. ಈ ಬಾರಿ ಪ್ಯಾಕ್ ತೆಗೆದು ನೋಡುವಾಗ ಅದನ್ನು ಮೊಬೈಲಿನಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ವಿಕಾಸ್ ಚೌಧರಿ ತಿಳಿಸಿದ್ದಾರೆ.

    ಈ ಘಟನೆಯಿಂದ ವಿಕಾಸ್ ಚೌಧರಿ ಖಿನ್ನತೆಯಿಂದ ಮಾನಸಿಕವಾಗಿ ಬಳಲುತ್ತಿದ್ದಾರೆ. ಪಂಚಾಯತ್ ಹೇಗೆ ಕೆಲಸ ಮಾಡುತ್ತಿದೆ? ಒಂದು ನಾಗರಿಕ ಸಂಸ್ಥೆಯಾಗಿ ಈ ರೀತಿ ಉತ್ತರ ನೀಡಿದೆ ಎಂದರೆ ನನಗೆ ನಂಬಲು ಸಾಧ್ಯವಿಲ್ಲ. ಆರ್‌ಟಿಐ ಪ್ರತ್ಯುತ್ತರವನ್ನು ಸ್ವೀಕರಿಸಿದ ನಂತರ ನನಗೆ ನಿಜಕ್ಕೂ ಬೇಸರವಾಗಿದೆ ಎಂದು ಲಾಲ್ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪರಿಷದ್‍ನ CEO ನವನೀತ್ ಕುಮಾರ್, ಅಪರಿಚಿತ ವ್ಯಕ್ತಿಗಳು ಈ ರೀತಿ ಆರ್‌ಟಿಐ ಅಡಿ ಉತ್ತರವಾಗಿ ಕಾಂಡೋಮ್ ಗಳನ್ನು ಪೋಸ್ಟ್ ಮಾಡಿದ್ದಾರೆ. ನಿಜಕ್ಕೂ ಇದು ವಿಷಾದನೀಯ ಮತ್ತು ಕಾನೂನುಬಾಹಿರವಾದ ಕಾರ್ಯವಾಗಿದ್ದು, ಶೀಘ್ರವೇ ಈ ಕುರಿತು ತನಿಖೆ ನಡೆಸಲಾಗುವುದು. ಇನ್ನು ಮುಂದೆ ಇಂತಹ ಘಟನೆಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೆರಿಗೆ ವೇಳೆ ನರ್ಸ್ ನಿರ್ಲಕ್ಷ್ಯದಿಂದ ಮಗು 2 ಭಾಗ – ಹೊಟ್ಟೆಯಲ್ಲಿ ತಲೆ, ಉಳಿದಿದ್ದು ಹೊರಗೆ

    ಹೆರಿಗೆ ವೇಳೆ ನರ್ಸ್ ನಿರ್ಲಕ್ಷ್ಯದಿಂದ ಮಗು 2 ಭಾಗ – ಹೊಟ್ಟೆಯಲ್ಲಿ ತಲೆ, ಉಳಿದಿದ್ದು ಹೊರಗೆ

    ಜೈಪುರ: ಹೆರಿಗೆ ಮಾಡಿಸುತ್ತಿದ್ದ ಸಮಯದಲ್ಲಿ ಮಗುವನ್ನು ಹೊರತೆಗೆಯುವಾಗ ನರ್ಸ್ ನಿರ್ಲಕ್ಷ್ಯದಿಂದಾಗಿ ಈಗ ತಾಯಿ ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ರಾಜಸ್ಥಾನದ ರಾಮಗಢ ಜಿಲ್ಲೆಯಲ್ಲಿ ನಡೆದಿದೆ.

    ಸರ್ಕಾರಿ ವೈದ್ಯಕೀಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಪುರುಷ ನರ್ಸ್ ಎಡವಟ್ಟು ಮಾಡಿದ ಪರಿಣಾಮ ಮಗುವಿನ ಅರ್ಧ ಭಾಗ ಹೊಟ್ಟೆಯಲ್ಲಿದ್ದರೆ, ಉಳಿದ ಅರ್ಧ ಭಾಗ ಹೊರ ಬಂದಿದೆ.

    ನಡೆದಿದ್ದು ಏನು?
    ಗರ್ಭಿಣಿಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ತಾಯಿಯ ಗರ್ಭದಿಂದ ಹಸುಗೂಸನ್ನು ಹೊರತೆಗೆಯುವಾಗ ಪುರುಷ ನರ್ಸ್ ಮಗುವನ್ನು ಜೋರಾಗಿ ಎಳೆದಿದ್ದಾನೆ. ಪರಿಣಾಮ ಮಗು ಎರಡು ತುಂಡಾಗಿದೆ. ಆದರೆ ಮಗುವಿನ ಕಾಲು ಮಾತ್ರ ಹೊರಬಂದಿದ್ದು, ತಲೆ ಹೊಟ್ಟೆಯಲ್ಲಿ ಉಳಿದುಕೊಂಡಿದೆ.

    ಇದಾದ ನಂತರ ನರ್ಸ್, ಆತನ ಸಹೋದ್ಯೋಗಿಗಳು ಸೇರಿಕೊಂಡು ಮಗುವಿನ ಅರ್ಧ ಭಾಗವನ್ನು ಆಸ್ಪತ್ರೆಯ ಶವಾಗಾರದಲ್ಲಿಟ್ಟು, ಈ ವಿಚಾರವನ್ನು ಮುಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಹೆಚ್ಚಿನ ಚಿಕಿತ್ಸೆಗಾಗಿ ತಾಯಿಯನ್ನು ಜೈಸಲ್ಮೇರ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕುಟುಂಬದವರಿಗೆ ತಿಳಿಸಿದ್ದಾರೆ.

    ಡಾ.ರವೀಂದ್ರ ಸಂಖ್ಲಾ ನೇತೃತ್ವದ ತಂಡ ಮಹಿಳೆಯನ್ನು ಪರಿಶೀಲನೆ ಮಾಡಿದ್ದಾರೆ. ಆಗ ಹೊಟ್ಟೆಯಲ್ಲಿ ಮಗುವಿನ ತಲೆ ಭಾಗವಿರುವುದು ಪತ್ತೆಯಾಗಿದೆ. ತಕ್ಷಣ ಈ ಬಗ್ಗೆ ವೈದ್ಯರು ಗರ್ಭಿಣಿಯ ಕುಟುಂಬದವರಿಗೆ ತಿಳಿಸಿದ್ದಾರೆ. ಇದಲ್ಲದೇ ಗರ್ಭಿಣಿ ಹೊಟ್ಟೆಯಲ್ಲಿ ಪ್ಲೆಸೆಂಟಾ(ಜರಾಯು ಅಥವಾ ಹೆರಿಗೆ ಕಸ)ವನ್ನು ಕೂಡ ಬಿಟ್ಟಿದ್ದಾರೆ. ನಂತರ ಡಾ.ರವೀಂದ್ರ ತಂಡ ಮಹಿಳೆಗೆ ಚಿಕಿತ್ಸೆ ನೀಡಿ ಮಗುವಿನ ತಲೆಯನ್ನು ಹೊರ ತೆಗೆದಿದ್ದಾರೆ. ಸದ್ಯಕ್ಕೆ ತಾಯಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

    ಈ ಬಗ್ಗೆ ಮಾಹಿತಿ ತಿಳಿದ ಮಹಿಳೆಯ ಪತಿ ತಕ್ಷಣ ರಾಮಗಢ ಆಸ್ಪತ್ರೆಗೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರು ಇದುವರೆಗೂ ಯಾರೊಬ್ಬರನ್ನು ಬಂಧಿಸಿಲ್ಲ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಐಪಿಎಲ್ ಅಚ್ಚರಿ: ಮಿಲಿಯನ್ ಡಾಲರ್ ಬೇಬಿ ವರುಣ್ ಚಕ್ರವರ್ತಿ!

    ಐಪಿಎಲ್ ಅಚ್ಚರಿ: ಮಿಲಿಯನ್ ಡಾಲರ್ ಬೇಬಿ ವರುಣ್ ಚಕ್ರವರ್ತಿ!

    ಜೈಪುರ: 2019ರ ಐಪಿಎಲ್ ಭಾರತೀಯ ಕ್ರಿಕೆಟರ್‍ಗಳ ಪಾಲಿನ ಅತ್ಯುತ್ತಮ ಅವಕಾಶಗಳನ್ನು ತೆರೆದಿಟ್ಟಿದೆ ಎಂದು ಕರೆಯಬಹುದಾಗಿದ್ದು, ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಹೆಚ್ಚು ಯುವ ಆಟಗಾರು ಕೋಟಿ ಕೋಟಿ ರೂ. ಮೊತ್ತಕ್ಕೆ ಹರಾಜು ಆಗುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.

    ಐಪಿಎಲ್ ಅಚ್ಚರಿಯ ಸಾಲಿಗೆ ಸೇರಿದ ಮತ್ತೊಬ್ಬ ಯುವ ಆಟಗಾರ ವರುಣ್ ಚಕ್ರವರ್ತಿ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬರೋಬ್ಬರಿ 8.4 ಕೋಟಿ ರೂ.ಗೆ ಖರೀದಿ ಮಾಡಿದೆ. 27 ವರ್ಷದ ವರುಣ್ ತಮಿಳುನಾಡು ತಂಡದ ಆಟಗಾರರಾಗಿದ್ದು, ಕಳೆದ ವರ್ಷದ ವಿಜಯ್ ಹಜರೆ ಟ್ರೋಫಿ ಹಾಗೂ ಈ ವರ್ಷದ ತಮಿಳುನಾಡು ಪ್ರೀಮಿಯರ್ ಲೀಗ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿ ಸಂತಸ ವ್ಯಕ್ತಪಡಿಸಿರುವ ವರುಣ್ ಚಕ್ರವರ್ತಿ, ಪ್ರೀಮಿಯರ್ ಲೀಗ್ ಬಳಿಕ ನನಗೆ ಹೆಚ್ಚಿನ ಅವಕಾಶಗಳು ಲಭಿಸುವ ಬಗ್ಗೆ ಆತ್ಮವಿಶ್ವಾಸ ಇತ್ತು. ಆದರೆ ಪಂಜಾಬ್ ತಂಡ ಇಷ್ಟು ಮೊತ್ತಕ್ಕೆ ನನ್ನನ್ನು ಪಡೆದುಕೊಳ್ಳುತ್ತದೆ ಎಂಬುವುದನ್ನು ನಾನು ಊಹೆ ಕೂಡ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.

    ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಬೌಲರ್ ಎಂದು ಗುರುತಿಸಿಕೊಂಡಿದ್ದ ವರುಣ್, 22 ವಿಕೆಟ್ ಪಡೆಯುವ ಮೂಲಕ 4.23 ಎಕಾನಮಿಯಲ್ಲಿ ಟೂರ್ನಿಯ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದರು. ಅಲ್ಲದೇ ವರುಣ್ 8 ಶೈಲಿಯಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.

    ಸದ್ಯ ನಾನು ಐದು ಶೈಲಿಗಳನ್ನು ಮಾತ್ರ ಇದುವರೆಗೂ ಆಟದಲ್ಲಿ ಪ್ರಯೋಗ ಮಾಡಿದ್ದು, ಸ್ಟ್ರೈಟ್, ಇನ್ ಸ್ವಿಂಗ್, ಔಟ್ ಸ್ವಿಂಗ್, ಫ್ಲಿಪರ್, ಝೂಟರ್ ಶೈಲಿಗಳಲ್ಲಿ ಎಸೆದಿದ್ದೇನೆ. ಮತ್ತು ಕೆಲ ಬದಲಾವಣೆಗಳನ್ನು ನನ್ನ ಬೌಲಿಂಗ್‍ನಲ್ಲಿ ಕಾಣಬಹುದು. ಕಳೆದ 2 ವರ್ಷಗಳಲ್ಲಿ ನನ್ನ ಬೌಲಿಂಗ್‍ನಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಸಿಕ್ಕ ಎಲ್ಲಾ ಜವಾಬ್ದಾರಿಗಳನ್ನು ಸಾಮರ್ಥವಾಗಿ ನಿಭಾಯಿಸಿದ್ದಾಗಿ ವರುಣ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರ ನೆಟ್ ಬೌಲರ್ ಆಗಿಯೂ ವರುಣ್ ಕಾರ್ಯನಿರ್ವಹಿಸಿದ್ದರು. ಹರಾಜು ಪ್ರಕ್ರಿಯೆ ವೇಳೆ ಇತ್ತಂಡಗಳು ಪಂಜಾಬ್ ತಂಡಕ್ಕೆ ಪೈಪೋಟಿ ನೀಡಿದ ಕಾರಣ ವರುಣ್ ಕೋಟಿ ಕೋಟಿ ರೂ. ಹಣಗಳಿಸಲು ಕಾರಣವಾಯಿತು.

    ಆರ್ ಅಶ್ವಿನ್ ಮುಂದಾಳತ್ವದ ಪಂಜಾಬ್ ಅಂತಿಮವಾಗಿ ವರುಣ್‍ರನ್ನು ಪಡೆಯಲು ಸಫಲವಾಯಿತು. 1991 ರಲ್ಲಿ ಜನಿಸಿರುವ ವರುಣ್ 9 ಲಿಸ್ಟ್ `ಎ’ ಪಂದ್ಯಗಳನ್ನು ಆಡಿದ್ದು, 22 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಏಕೈಕ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದಾರೆ. ಅಂದಹಾಗೇ ಈ ಬಾರಿ ಪಂಜಾಬ್ ಪರ ದುಬಾರಿ ಪ್ಲೇಯರ್ ಕೂಡ ಆಗಿದ್ದಾರೆ.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv