Tag: Jaipur

  • ಹೈಟೆನ್ಷನ್ ತಂತಿ ತಗುಲಿ ಹೊತ್ತಿ ಉರಿದ ಬಸ್ – ಮೂವರು ಕಾರ್ಮಿಕರು ಸಾವು

    ಹೈಟೆನ್ಷನ್ ತಂತಿ ತಗುಲಿ ಹೊತ್ತಿ ಉರಿದ ಬಸ್ – ಮೂವರು ಕಾರ್ಮಿಕರು ಸಾವು

    ಜೈಪುರ: ಉತ್ತರ ಪ್ರದೇಶದ (Uttar Pradesh) ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್‌ನ ಮೇಲ್ಭಾಗವು ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಸ್ಥಳದಲ್ಲೇ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಸುಮಾರು 12 ಮಂದಿಗೆ ಗಂಭೀರ ಸುಟ್ಟು ಗಾಯಗಳಾಗಿವೆ.

    ಜೈಪುರ (Jaipur) ಗ್ರಾಮೀಣ ಜಿಲ್ಲೆಯ ಶಹಪುರ ಉಪವಿಭಾಗದ ಮನೋಹರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಅಪಘಾತ ಸಂಭವಿಸಿದೆ. ಟೋಡಿ ಗ್ರಾಮದ ಇಟ್ಟಿಗೆ ಗೂಡಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್‌ಗೆ 11,000 ವೋಲ್ಟ್ ಸಾಮರ್ಥ್ಯದ ಹೈಟೆನ್ಷನ್ ಲೈನ್ ತಗುಲಿದೆ. ಇದನ್ನೂ ಓದಿ: ಕೀನ್ಯಾ | 12 ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಪತನ – ಎಲ್ಲರೂ ಸಾವನ್ನಪ್ಪಿರುವ ಶಂಕೆ

    ಮನೋಹರಪುರದ ಹಳ್ಳಿಯೊಂದರ ಬಳಿಯ ರಸ್ತೆಯಿಂದ ಬಸ್ ಹಾದು ಹೋಗುವಾಗ ಬಸ್‌ನ ಮೇಲ್ಭಾಗದಲ್ಲಿ ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳು ಹೈಟೆನ್ಷನ್ ವಿದ್ಯುತ್ ತಂತಿಗೆ ತಾಗಿವೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತೇಜ್‌ಪಾಲ್ ಸಿಂಗ್ ತಿಳಿಸಿದ್ದಾರೆ.

    ಬಸ್‌ನ ಮೇಲ್ಭಾಗವು ಹೈಟೆನ್ಷನ್ ಲೈನ್‌ಗೆ ತಗುಲುತ್ತಿದ್ದಂತೆ, ಜೋರಾದ ಸ್ಫೋಟ ಸದ್ದು ಕೇಳಿತ್ತು. ಕಾರ್ಮಿಕರ ಕಿರುಚಾಟ ಸದ್ದು ಕೇಳಿ ಹತ್ತಿರದ ನಿವಾಸಿಗಳು ಸ್ಥಳಕ್ಕೆ ಧಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮನೋಹರ್‌ಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನು ತಕ್ಷಣವೇ ಶಹಪುರ ಉಪ-ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಿದ್ದಾರೆ.

  • ದೀಪಾವಳಿ ಗುಡ್‌ ನ್ಯೂಸ್;‌ ಹುಬ್ಬಳ್ಳಿಯಿಂದ ಮೈಸೂರು, ಬೆಂಗಳೂರು, ಜೈಪುರ, ಗೋವಾಕ್ಕೆ ವಿಶೇಷ ರೈಲು

    ದೀಪಾವಳಿ ಗುಡ್‌ ನ್ಯೂಸ್;‌ ಹುಬ್ಬಳ್ಳಿಯಿಂದ ಮೈಸೂರು, ಬೆಂಗಳೂರು, ಜೈಪುರ, ಗೋವಾಕ್ಕೆ ವಿಶೇಷ ರೈಲು

    ಹುಬ್ಬಳ್ಳಿ: ದೀಪಾವಳಿ (Deepavali) ಹಬ್ಬದ ಪ್ರಯುಕ್ತ ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈರುತ್ಯ ರೈಲ್ವೆ ಮಂಡಳಿ ಮೈಸೂರು ಮತ್ತು ಜೈಪುರ ನಡುವೆ ಪ್ರತಿ ದಿಕ್ಕಿನಲ್ಲಿ ತಲಾ ಎರಡು ಟ್ರಿಪ್‌ಗಳಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆಗೆ ಅನುಮೋದನೆ ನೀಡಿದೆ. ಬೆಂಗಳೂರು-ವಾಸ್ಕೊ-ಡ-ಗಾಮ ನಡುವೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

    ಟ್ರೈನ್ ವಿವರಗಳು ಈ ಕೆಳಗಿನಂತಿವೆ:
    ರೈಲು ಸಂಖ್ಯೆ 06231 ಮೈಸೂರು–ಜೈಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಅ.18 ಮತ್ತು 25 ರಂದು ಮೈಸೂರಿನಿಂದ ರಾತ್ರಿ 11:55 ಗಂಟೆಗೆ ಹೊರಡಲಿದೆ. ಸೋಮವಾರ ಸಂಜೆ 6:40 ಗಂಟೆಗೆ ಜೈಪುರವನ್ನು ತಲುಪಲಿದೆ. ಮತ್ತೆ ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06232 ಜೈಪುರ–ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಅ.21 ಮತ್ತು 28 ರಂದು ಜೈಪುರದಿಂದ ಮುಂಜಾನೆ 4 ಗಂಟೆಗೆ ಹೊರಟು, ಗುರುವಾರ ಮುಂಜಾನೆ 3:30ಕ್ಕೆ ಮೈಸೂರಿಗೆ ಆಗಮಿಸಲಿದೆ. ಇದನ್ನೂ ಓದಿ: ಲೋಕ ಕಲ್ಯಾಣಕ್ಕಾಗಿಯೇ ಜನ್ಮ ತಾಳಿದ ಮಹಾನದಿ ಈ‌ ಕಾವೇರಿ – ಪುರಾಣ ಪುಣ್ಯಕಥೆ ನಿಮಗೆ ಗೊತ್ತೆ?

    ಈ ವಿಶೇಷ ರೈಲು ಮಾರ್ಗಮಧ್ಯೆ ಮಂಡ್ಯ, ಕೆಎಸ್‌ಆರ್ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ದಾವಣಗೆರೆ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ಪಾಲ್ಘರ್, ವಾಪಿ, ವಲ್ಸಾದ, ಸೂರತ್, ವಡೋದರಾ, ಅಹಮದಾಬಾದ್, ಸಾಬರಮತಿ ಬಿಜಿ, ಮಹೆಸನಾ, ಪಾಲನ್‌ಪುರ, ಅಬು ರೋಡ್, ಫಲ್ನಾ, ರಾಣಿ, ಮಾರ್ವಾರ್, ಸೋಜತ್ ರೋಡ್, ಬೇವರ್, ಅಜ್ಮೀರ್, ಮತ್ತು ಕಿಶನ್‌ಗಢ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

    ಜೈಪುರದ ಕಡೆಗೆ ಹೋಗುವ ರೈಲು ಸಂಖ್ಯೆ 06231 ತನ್ನ ಪ್ರಯಾಣದಲ್ಲಿ ಸಾಬರಮತಿ ಬಿಜಿ ನಿಲುಗಡೆಯನ್ನು ಬಿಟ್ಟುಬಿಡುತ್ತದೆ. ಮತ್ತು ಮೈಸೂರಿನ ಕಡೆಗೆ ಹಿಂದಿರುಗುವ ಪ್ರಯಾಣದಲ್ಲಿ ರೈಲು ಸಂಖ್ಯೆ 06232 ಅಹಮದಾಬಾದ್ ನಿಲುಗಡೆ ಇರುವುದಿಲ್ಲ.

    ಈ ವಿಶೇಷ ರೈಲು ಒಟ್ಟು 18 ಬೋಗಿಗಳನ್ನು ಒಳಗೊಂಡಿರುತ್ತದೆ. ಅವುಗಳಲ್ಲಿ 2 ಎಸಿ ಟು-ಟೈರ್, 12 ಎಸಿ ತ್ರಿ-ಟೈರ್, 2 ಸ್ಲೀಪರ್ ಕ್ಲಾಸ್ ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ.

    ಬೆಂಗಳೂರು-ವಾಸ್ಕೊ-ಡ-ಗಾಮ ನಡುವೆ ವಿಶೇಷ ರೈಲುಗಳು
    ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು ನೈಋತ್ಯ ರೈಲ್ವೆಯು ಕೆಎಸ್ಆರ್ ಬೆಂಗಳೂರು– ವಾಸ್ಕೊ-ಡ-ಗಾಮ – ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ಎಕ್ಸ್‌ಪ್ರೆಸ್‌ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಇದನ್ನೂ ಓದಿ: ಸರ್ಕಾರಿ ಜಾಗಗಳಲ್ಲಿ ನಮಾಜ್‌ ಮಾಡಲು ಅವಕಾಶ ಕೊಡಬೇಡಿ – ಸರ್ಕಾರಕ್ಕೆ ಯತ್ನಾಳ್‌ ಪತ್ರ

    ರೈಲು ಸಂಖ್ಯೆ 07317/07318 ಕೆಎಸ್ಆರ್ ಬೆಂಗಳೂರು – ವಾಸ್ಕೊ-ಡ-ಗಾಮ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್‌ಪ್ರೆಸ್‌ ವಿಶೇಷ (ಒಂದು ಟ್ರಿಪ್):
    ರೈಲು ಸಂಖ್ಯೆ 07317 ಕೆಎಸ್ಆರ್ ಬೆಂಗಳೂರು – ವಾಸ್ಕೊ-ಡ-ಗಾಮ ವಿಶೇಷ ಎಕ್ಸ್‌ಪ್ರೆಸ್‌ ರೈಲು ಅ.17ರ ರಾತ್ರಿ 11:25ಕ್ಕೆ ಕೆಎಸ್ಆರ್ ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 2:55ಕ್ಕೆ ವಾಸ್ಕೊ-ಡ-ಗಾಮ ತಲುಪಲಿದೆ. ಮರಳಿ ಪ್ರಯಾಣದಲ್ಲಿ, ರೈಲು ಸಂಖ್ಯೆ 07318 ವಾಸ್ಕೊ-ಡ-ಗಾಮ – ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್‌ ರೈಲು ಅ.18 ರಂದು ಸಂಜೆ 5 ಕ್ಕೆ ವಾಸ್ಕೊ-ಡ-ಗಾಮದಿಂದ ಹೊರಟು, ಮರುದಿನ ಬೆಳಗ್ಗೆ 8:30ಕ್ಕೆ ಬೆಂಗಳೂರು ಕಂಟೋನ್ಮೆಂಟ್‌ಗೆ ತಲುಪಲಿದೆ.

    ರೈಲು ಸಂಖ್ಯೆ 07317 ಮಾರ್ಗ ಮಧ್ಯೆ ಬೆಂಗಳೂರು ಕಂಟೋನ್ಮೆಂಟ್, ಎಸ್ಎಂವಿಟಿ ಬೆಂಗಳೂರು, ತುಮಕೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸ್ಯಾನ್‌ವೊರ್ಡೆಮ್ ಮತ್ತು ಮಡಗಾಂವ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಅದೇ ರೀತಿ, ರೈಲು ಸಂಖ್ಯೆ 07318 ಸಹ ಬೆಂಗಳೂರು ಕಂಟೋನ್ಮೆಂಟ್‌ನತ್ತ ಹಿಮ್ಮುಖ ದಿಕ್ಕಿನಲ್ಲಿ ಇದೇ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ. ಈ ರೈಲು ಒಟ್ಟು 22 ಬೋಗಿಗಳ ಸಂಯೋಜನೆಯನ್ನು ಹೊಂದಿದ್ದು, ಅದರಲ್ಲಿ 13 ಎಸಿ 3-ಟೈರ್, 7 ಸ್ಲೀಪರ್ ದರ್ಜೆ ಮತ್ತು 2 ಲಗೇಜ್-ಕಮ್-ಬ್ರೇಕ್ ವ್ಯಾನ್‌ಗಳು ಇರಲಿವೆ.

  • LPG ತುಂಬಿದ್ದ ಟ್ರಕ್‌ಗೆ ಟ್ಯಾಂಕರ್ ಡಿಕ್ಕಿ – ಸಿಲಿಂಡರ್‌ಗಳ ಸರಣಿ ಸ್ಫೋಟ, ಕಿ.ಮೀಗಟ್ಟಲೇ ಕಾಣಿಸಿದ ಜ್ವಾಲೆ

    LPG ತುಂಬಿದ್ದ ಟ್ರಕ್‌ಗೆ ಟ್ಯಾಂಕರ್ ಡಿಕ್ಕಿ – ಸಿಲಿಂಡರ್‌ಗಳ ಸರಣಿ ಸ್ಫೋಟ, ಕಿ.ಮೀಗಟ್ಟಲೇ ಕಾಣಿಸಿದ ಜ್ವಾಲೆ

    ಜೈಪುರ: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು (LPG cylinders) ತುಂಬಿದ್ದ ಟ್ರಕ್‌ಗೆ (Truck), ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಭಾರೀ ಸ್ಫೋಟ ಸಂಭವಿಸಿರುವ ಘಟನೆ ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ (Jaipur-Ajmer highway) ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಏಳು ವಾಹನಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

    ಚಾಲಕ ರಸ್ತೆಬದಿಯಲ್ಲಿ ಟ್ರಕ್ ಅನ್ನು ನಿಲ್ಲಿಸಿ, ಊಟಕ್ಕೆಂದು ಹೋಟೆಲ್ ಹೋಗಿದ್ದ. ಈ ವೇಳೆ ಟ್ಯಾಂಕರೊಂದು (Tanker) ತಿರುವು ಪಡೆಯುತ್ತಿದ್ದಾಗ ನಿಯಂತ್ರಣ ತಪ್ಪಿ ಸಿಲಿಂಡರ್ ತುಂಬಿದ್ದ ಟ್ರಕ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಫಿಲ್ಮಿ ಸ್ಟೈಲ್‌ ಗಂಗಾವತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಕೊಲೆ

    ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡು, ನಂತರ ಗ್ಯಾಸ್ ಸಿಲಿಂಡರ್‌ಗಳು ಒಂದರ ನಂತರ ಒಂದರಂತೆ ಸರಣಿ ಸ್ಫೋಟಗೊಂಡಿದೆ. ಸ್ಫೋಟದ ಸದ್ದು ಕಿಲೋಮೀಟರ್ ಉದ್ದಕ್ಕೂ ಕೇಳಿಸಿದ್ದು, ಬೆಂಕಿಯ ಜ್ವಾಲೆಯು ಹತ್ತು ಕಿ.ಮೀ ದೂರಕ್ಕೂ ಕಾಣಿಸಿದೆ ಎನ್ನಲಾಗಿದೆ.

    ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಕೂಡಲೇ ಅಗ್ನಿಶಾಮಕ ದಳ ಧಾವಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.

  • ಜೈಪುರ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಡ – 8 ರೋಗಿಗಳು ಸಜೀವ ದಹನ

    ಜೈಪುರ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಡ – 8 ರೋಗಿಗಳು ಸಜೀವ ದಹನ

    ಜೈಪುರ: ಇಲ್ಲಿನ ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ ಐಸಿಯು ವಾರ್ಡ್‌ನಲ್ಲಿ ಬೆಂಕಿ ಅವಘಡ (Fire Accident) ಸಂಭವಿಸಿ 8 ಮಂದಿ ರೋಗಿಗಳು ಸಜೀವ ದಹನವಾಗಿದ್ದಾರೆ.

    ಇದೀಗ ಶಾರ್ಟ್ ಸರ್ಕ್ಯೂಟ್‌ನಿಂದ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ ಐವರು ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ಹ್ಯಾಂಡ್‌ಪೋಸ್ಟ್ ಬಳಿ ಪ್ರೇತಾತ್ಮ – ಲೈಕ್ಸ್‌ಗಾಗಿ ದೆವ್ವದ ಕಥೆ ಕಟ್ಟಿದ್ದವನಿಗೆ ಪೊಲೀಸರ ಕ್ಲಾಸ್

    ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಎರಡು ಐಸಿಯುಗಳಿದ್ದವು. ಒಂದರಲ್ಲಿ 11 ರೋಗಿಗಳು, ಮತ್ತೊಂದರಲ್ಲಿ 13 ರೋಗಿಗಳಿದ್ದರು ಎನ್ನಲಾಗಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಾಗ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷ ಸೇರಿ 8 ರೋಗಿಗಳು ಮೃತಪಟ್ಟಿದ್ದಾರೆ. ಐವರ ಸ್ಥಿತಿ ಗಂಭೀರವಾಗಿದೆ ಎಂದು ಟ್ರಾಮಾ ಸೆಂಟರ್ ಉಸ್ತುವಾರಿ ಡಾ.ಅನುರಾಗ್ ಧಾಕಡ್ ತಿಳಿಸಿದ್ದಾರೆ.

    ಆಸ್ಪತ್ರೆಯ ದಾಖಲೆ ಪತ್ರಗಳು, ಐಸಿಯು ಉಪಕರಣಗಳು, ಲ್ಯಾಬ್ ಬೆಂಕಿಗಾಹುತಿಯಾಗಿದೆ. ಆಸ್ಪತ್ರೆಯ ಸಿಬ್ಬಂದಿ ಹಾಗೂ ರೋಗಿಗಳ ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿ, ಸತತ 2 ಗಂಟೆಗಳ ಕಾರ್ಯಚರಣೆ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಯಿತು.

    ಇನ್ನೂ ದುರಂತ ಸಂಭವಿಸುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿಯು ರೋಗಿಗಳ ರಕ್ಷಣೆಗೆ ನಿಲ್ಲದೇ ಸ್ಥಳದಿಂದ ಓಡಿಹೋಗಿದ್ದಾರೆಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.

  • ಅಪ್ರಾಪ್ತೆ ಮೇಲೆ 2 ವರ್ಷಗಳಿಂದ ಅತ್ಯಾಚಾರ ಎಸಗಿದ ಆರೋಪ – RCB ಸ್ಟಾರ್‌ ಯಶ್‌ ದಯಾಳ್‌ ವಿರುದ್ಧ ಪೋಕ್ಸೊ ಕೇಸ್‌

    ಅಪ್ರಾಪ್ತೆ ಮೇಲೆ 2 ವರ್ಷಗಳಿಂದ ಅತ್ಯಾಚಾರ ಎಸಗಿದ ಆರೋಪ – RCB ಸ್ಟಾರ್‌ ಯಶ್‌ ದಯಾಳ್‌ ವಿರುದ್ಧ ಪೋಕ್ಸೊ ಕೇಸ್‌

    ಜೈಪುರ: ಬಾಲಕಿಯೊಬ್ಬಳ ಮೇಲೆ 2‌ ವರ್ಷಗಳಿಂದ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ವೇಗಿ ಯಶ್ ದಯಾಳ್‌ಗೆ (Yash Dayal) ವಿರುದ್ಧ ಪೋಕ್ಸೋ ಪ್ರಕರಣ (POCSO Case)ಲಾಗಿದೆ.

    ಹೌದು.‌ 2025ರ ಐಪಿಎಲ್‌ (IPL 2025) ಮುಕ್ತಾಯಗೊಂಡ ಕೆಲ ದಿನಗಳಿಂದ ಸ್ಟಾರ್‌ ವೇಗಿಗೆ ಮೇಲಿಂದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಗಾಜಿಯಾಬಾದ್‌ನ ಯುವತಿಯೊಬ್ಬಳು ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ, ದೂರು ದಾಖಲಿಸಿದ್ದರು. ಈ ಸಂಬಂಧ ಕೇಸ್‌ ಕೂಡ ದಾಖಲಾಗಿತ್ತು. ಇದೀಗ ಅಪ್ರಾಪ್ತೆ ಮೇಲೆ ಅತ್ಯಾಚಾರ (Minor Girl Rape) ಎಸಗಿರುವ ಆರೋಪ ಮೇಲೆ ಪೋಕ್ಸೋ ಕೇಸ್‌ ದಾಖಲಾಗಿದೆ. ಇದನ್ನೂ ಓದಿ: ಹಲವು ಮಹಿಳೆಯರ ಜೊತೆ ಅಫೇರ್‌ ಇಟ್ಕೊಂಡಿದ್ದ – ಯಶ್‌ ದಯಾಳ್‌ ವಿರುದ್ಧ ಮಹಿಳೆಯಿಂದ ಮತ್ತೊಂದು ಆರೋಪ

    Yash Dayal 2 1

    ಬಾಲಕಿಯೊಬ್ಬಳ ಮೇಲೆ 2 ವರ್ಷಗಳಿಂದ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಜೈಪುರದ ಸಂಗನೇರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಭಾವನಾತ್ಮಕವಾಗಿ ನನ್ನನ್ನ ಕಟ್ಟಿಹಾಕಿ, ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಉತ್ತಮ ಅವಕಾಶ ಕೊಡಿಸುವುದಾಗಿ ಆಮಿಷ ಒಡ್ಡಿದ್ದಾನೆ. ಆಮಿಷ ಒಡ್ಡಿ 2 ವರ್ಷಗಳ ಕಾಲ ಪದೇ ಪದೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ: ಆರ್‌ಸಿಬಿ ಆಟಗಾರ ಯಶ್ ದಯಾಳ್ ವಿರುದ್ಧ FIR – ಸಂತ್ರಸ್ತೆ ಹೇಳಿಕೆ ದಾಖಲಿಸಿಕೊಂಡ ಬಳಿಕ ಪೊಲೀಸರ ಕ್ರಮ

    ಹೋಟೆಲ್‌ನಲ್ಲಿ ಮೊದಲ ಬಾರಿಗೆ ಲೈಂಗಿಕ ದೌರ್ಜನ್ಯ
    ಕ್ರಿಕೆಟ್‌ ವೃತ್ತಿಜೀವನದ ಬಗ್ಗೆ ಸಲಹೆ ನೀಡುವುದಾಗಿ, ಉತ್ತಮ ಭವಿಷ್ಯ ಕಲ್ಪಿಸುವುದಾಗಿ ಹೇಳಿದ್ದ ದಯಾಳ್‌ ಜೈಪುರದ ಸೀತಾಪುರ ಹೋಟೆಲ್‌ಗೆ ಕರೆದಿದ್ದ. ಅಲ್ಲಿ ಮೊದಲ ಬಾರಿಗೆ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಪ್ರಕರಣ ನಡೆದಾಗ ನನಗೆ 17 ವರ್ಷ ವಯಸ್ಸಾಗಿತ್ತು. ಅಲ್ಲಿಂದ 2 ವರ್ಷಗಳ ಕಾಲ ಪದೇ ಪದೇ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಈ ಹಿನ್ನೆಲೆ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

    ಕೆಲ ದಿನಗಳ ಹಿಂದಷ್ಟೇ ಗಾಜಿಯಾಬಾದ್‌ನ ಯುವತಿಯೊಬ್ಬಳು ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪಿಸಿ, ದೂರು ದಾಖಲಿಸಿದ್ದರು. ಎಫ್‌ಐಆರ್‌ ಕೂಡ ದಾಖಲಾಗಿತ್ತು. ಈ ನಡುವೆ ಅಲಹಾಬಾದ್‌ ಹೈಕೋರ್ಟ್‌ ದಯಾಳ್‌ ಬಂಧನಕ್ಕೆ ತಡೆ ನೀಡಿತ್ತು. ಇದಾದ ಕೆಲ ದಿನಗಳಲ್ಲೇ ಪೋಕ್ಸೋ ಕೇಸ್‌ ದಾಖಲಾಗಿದೆ. ಇದನ್ನೂ ಓದಿ: ಆರ್‌ಸಿಬಿ ಸ್ಟಾರ್‌ ವೇಗಿ ಯಶ್‌ ದಯಾಳ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪ – FIR ದಾಖಲು

  • ಸ್ನಾನ ಮಾಡಲು ನದಿಗೆ ಇಳಿದಿದ್ದ 8 ಮಂದಿ ಸಾವು – ಮೂವರ ರಕ್ಷಣೆ

    ಸ್ನಾನ ಮಾಡಲು ನದಿಗೆ ಇಳಿದಿದ್ದ 8 ಮಂದಿ ಸಾವು – ಮೂವರ ರಕ್ಷಣೆ

    ಜೈಪುರ: ಸ್ನಾನ ಮಾಡಲು ನದಿಗೆ ಇಳಿದಿದ್ದ 11 ಯುವಕರಲ್ಲಿ 8 ಮಂದಿ ನೀರಿನಲ್ಲಿ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ (Rajasthan) ಟೋಂಕ್ ಜಿಲ್ಲೆಯ ಬನಾಸ್ ನದಿಯಲ್ಲಿ (Banas river) ನಡೆದಿದೆ.

    ಮೃತರೆಲ್ಲರೂ ಜೈಪುರದ ನಿವಾಸಿಗಳೆಂದು ತಿಳಿದುಬಂದಿದೆ. ಜೈಪುರದಿಂದ 11 ಮಂದಿ ಯುವಕರ ಗುಂಪೊಂದು ಪಿಕ್ನಿಕ್‌ಗಾಗಿ ಟೋಂಕ್ (Tonk) ಜಿಲ್ಲೆಗೆ ಬಂದಿದ್ದರು. ಇದನ್ನೂ ಓದಿ: ರಸ್ತೆಯಲ್ಲೇ ಮಹಿಳೆಯರನ್ನ ತಬ್ಬಿಕೊಂಡು ತುಟಿಗೆ ಚುಂಬಿಸ್ತಿದ್ದ – ಬೆಂಗಳೂರಿನ ಬೀದಿ ಕಾಮಣ್ಣ ಪೊಲೀಸ್‌ ವಶಕ್ಕೆ

    ಈ ವೇಳೆ ಯುವಕರೆಲ್ಲರು ಸ್ನಾನಕ್ಕೆಂದು ಬನಾಸ್ ನದಿಗೆ ಇಳಿದಿದ್ದರು. ಅವರು ನದಿಯಲ್ಲಿ ಈಜುತ್ತಾ ಆಳದ ಪ್ರದೇಶಕ್ಕೆ ತೆರಳಿದ್ದರು. ಈ ಸಂದರ್ಭ ನೀರಿನ ಸೆಳೆತಕ್ಕೆ ಒಳಗಾಗಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಯುವಕರನ್ನು ರಕ್ಷಿಸಲಾಗಿದೆ ಎಂದು ಟೋಂಕ್‌ನ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಾಂಗ್ವಾನ್ ತಿಳಿಸಿದ್ದಾರೆ.

  • ರನ್‌ ಮಳೆಯಲ್ಲಿ ಕೊಚ್ಚಿ ಹೋಯ್ತು ರಾಜಸ್ಥಾನ – ಮೊದಲ ಸ್ಥಾನಕ್ಕೆ ಜಿಗಿದ ಮುಂಬೈ

    ರನ್‌ ಮಳೆಯಲ್ಲಿ ಕೊಚ್ಚಿ ಹೋಯ್ತು ರಾಜಸ್ಥಾನ – ಮೊದಲ ಸ್ಥಾನಕ್ಕೆ ಜಿಗಿದ ಮುಂಬೈ

    – ಸತತ 6 ಜಯ ಸಾಧಿಸಿ 14 ಅಂಕದೊಂದಿಗೆ ಇಂಡಿಯನ್ಸ್‌ ಕಮಾಲ್‌

    ಜೈಪುರ: ರಯಾನ್ ರಿಕೆಲ್ಟನ್, ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ನಾಯಕ ಹಾರ್ದಿಕ್‌ ಪಾಂಡ್ಯ ಅವರ ರನ್‌ ಮಳೆಯ ಆಟದಿಂದ ರಾಜಸ್ಥಾನ ರಾಯಲ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ 100 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಮುಂಬೈ ಕೇವಲ 2 ವಿಕೆಟ್‌ ನಷ್ಟಕ್ಕೆ 217 ರನ್‌ ಹೊಡೆಯಿತು. ಕಠಿಣ ಸವಾಲನ್ನು ಪಡೆದ ರಾಜಸ್ಥಾನ 16.1 ಓವರ್‌ಗಳಲ್ಲಿ 117 ರನ್‌ ಗಳಿಸಿ ಆಲೌಟ್‌ ಆಗಿದೆ. ಸತತ 6 ಜಯದೊಂದಿಗೆ ಉತ್ತಮ ರನ್‌ ರೇಟ್‌ ಹೊಂದಿರುವ ಕಾರಣ ಮುಂಬೈ ಇಂಡಿಯನ್ಸ್‌ ಅಂಕಪಟ್ಟಿಯಲ್ಲಿ 14 ಅಂಕದೊಂದಿಗೆ ಮೊದಲ ಸ್ಥಾನಕ್ಕೆ ಏರಿದರೆ ಅಷ್ಟೇ ಅಂಕ ಪಡೆದಿರುವ ಆರ್‌ಸಿಬಿ ಎರಡನೇ ಸ್ಥಾನಕ್ಕೆ ಜಾರಿದೆ.

    ರಾಜಸ್ಥಾನ್‌ ತಂಡವು ಆರಂಭಿಕ ಹಂತದಲ್ಲೇ ಆಘಾತ ಅನುಭವಿಸಿತು. ಗುಜರಾತ್‌ ವಿರುದ್ಧ ಆಡಿದ ಕಳೆದ ಪಂದ್ಯದಲ್ಲಿ ಆರಂಭಿಕರಾದ ಯಶಸ್ವಿ ಜೆಸ್ವಾಲ್‌ ಹಾಗೂ ವೈಭವ್‌ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ಅದೇ ಆಟದ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಇಂದು ಈ ಜೋಡಿ ನಿರಾಸೆ ಮೂಡಿಸಿತು. ಮೊದಲೇ ಓವರ್‌ನಲ್ಲೇ ದೀಪಕ್‌ ಚಹಾರ್‌ ಬೌಲಿಂಗ್‌ ದಾಳಿಗೆ ವೈಭವ್‌ ಸೂರ್ಯವಂಶಿ ಓಟಾಗಿ, ಪೆವಿಯನ್‌ನತ್ತ ಮುಖ ಮಾಡಿದರು. ಯಶಸ್ವಿ ಜೈಸ್ವಾಲ್‌ ಕೂಡಾ ಹೆಚ್ಚು ಹೊತ್ತು ಪೆವಿಲಿಯನ್‌ನಲ್ಲಿರದೇ ಬೋಲ್ಟ್‌ಗೆ ಕ್ಲೀನ್‌ ಬೋಲ್ಡ್‌ ಆದರು. ಅದಾಗಲೇ ರಾಜಸ್ಥಾನ ತಂಡ 2 ಓವರ್‌ಗೆ 18 ರನ್‌ನಷ್ಟಕ್ಕೆ 2 ವಿಕೆಟ್‌ ಕಳೆದುಕೊಂಡಿತ್ತು.

    ಬಳಿಕ ಬಂದ ನಿತೀಶ್‌ ರಾಣಾ ಕೂಡ 11 ಎಸೆತಗಳಲ್ಲಿ 9 ರನ್‌ ಗಳಿಸಿ ಓಟಾದರು. ಮಧ್ಯಮ ಕ್ರಮಾಂಕದಲ್ಲಿ ಯಾರು ಸಹ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲಿಲ್ಲ. 8 ಎಸೆತಗಳಲ್ಲಿ 16 ರನ್‌ ಬಾರಿಸಿದ್ದ ತಂಡದ ನಾಯಕ ರಿಯಾನ್‌ ಪರಾಗ್‌ರನ್ನು ಜಸ್ಪ್ರೀತ್‌ ಬುಮ್ರಾ ವಿಕೆಟ್‌ ಕಿತ್ತು ಪೆವಿಲಿಯನ್‌ಗೆ ಕಳುಹಿಸಿದರು. ಬಳಿಕ ಬಂದ ಜುರೇಲ್‌ 11 ಎಸೆತಕ್ಕೆ 11ರನ್‌ ಕಲೆಹಾಕಿದರೆ, ಹೆಟ್ಮೆಯರ್‌ ಶೂನ್ಯಕ್ಕೆ ಓಟಾದರು.

    ಅಷ್ಟರಲ್ಲಾಗಲೇ 4 ಓವರ್‌ನಲ್ಲೇ ರಾಜಸ್ಥಾನ ತಂಡವು 5 ವಿಕೆಟ್‌ ಕಳೆದುಕೊಂಡಿತ್ತು. ಬಳಿಕ ಕ್ರೀಸ್‌ಗೆ ಬಂದ ಜೋಫ್ರಾ ಆರ್ಚರ್‌ 27 ಎಸೆತಗಳಲ್ಲಿ 30 ರನ್‌ ಬಾರಿಸಿ, ಮುಂಬೈ ಬೌಲರ್ಸ್‌ಗಳ ದಾಳಿಗೆ ಓಟಾದರು. ಬಳಿಕ ಬಂದ ಮಹೀಶ್‌ ತೀಕ್ಷಣ ಹಾಗೂ ಕುಮಾರ್‌ ಕಾರ್ತಿಕೇಯ ಒಂದಕ್ಕಿಗೆ ಮುಂಬೈ ಬೌಲರ್ಸ್‌ಗೆ ಶರಣಾದರು. ಮುಂಬೈ ಬೌಲರ್ಸ್‌ಗಳ ದಾಳಿಗೆ ಧೂಳಿಪಟವಾದ ರಾಜಸ್ಥಾನ ಬ್ಯಾಟರ್ಸ್‌ ರನ್‌ ಕದಿಯಲು ಪರದಾಡಿದರು

    ಮುಂಬೈ ಪರ ಬೋಲ್ಟ್‌ ಹಾಗೂ ಕರಣ್‌ ಶರ್ಮಾ ತಲಾ 3 ವಿಕೆಟ್‌ಕಿತ್ತರು. ಬುಮ್ರಾ 2 ವಿಕೆಟ್‌, ದೀಪಕ್‌ ಚಹಾರ್‌ ಹಾಗೂ ಹಾರ್ದಿಕ್‌ ಪಾಂಡ್ಯ ತಲಾ 1 ವಿಕೆಟ್‌ ಪಡೆದರು.

    ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ರೋಹಿತ್ ಶರ್ಮಾ, ರಯಾನ್‌ ರಿಕಲ್ಟನ್‌ ಭರ್ಜರಿ ಜೊತೆಯಾಟವಾಡಿದ್ದು, ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಆರ್‌ಆರ್‌ ತಂಡದ ಬೌಲರ್‌ಗಳು ವಿಫಲರಾದರು.

    ಪವರ್ ಪ್ಲೇನಲ್ಲಿ ಇವರಿಬ್ಬರ ಜೊತೆಯಾಟವು ಸ್ಟೇಡಿಯಂನಲ್ಲಿ ಫ್ಯಾನ್ಸ್‌ ಹುಚ್ಚೆದ್ದು ಕುಣಿಯುವಂತೆ ಮಾಡಿತು. ಮುಂಬೈ ಇಂಡಿಯನ್ಸ್‌ ಮೊದಲ 6 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 58 ರನ್‌ ಸಿಡಿಸಿತು. ಈ ಜೋಡಿಯನ್ನು ಕಟ್ಟಿಹಾಕಲು ರಾಜಸ್ಥಾನ್‌ ಬೌಲರ್ಸ್‌ ಪರದಾಡಿದರು.

    ರಯಾನ್‌ ರಿಕಲ್ಟನ್‌ ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿದ್ದು, 9ನೇ ಓವರ್‌ನಲ್ಲಿ ಕುಮಾರ್‌ ಕಾರ್ತಿಕೇಯ ಎಸೆದ ಐದನೇ ಎಸೆತಕ್ಕೆ ಸಿಕ್ಸರ್ ಬಾರಿಸುವ ಮೂಲಕ, 29 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. 71 ಎಸೆತಗಳಲ್ಲಿ 116 ರನ್‌ ಕಲೆ ಹಾಕಿದ ರೋಹಿತ್‌ ಹಾಗೂ ರಯಾನ್‌ ಜೊಡಿಯ ಓಟಕ್ಕೆ 11 ನೇ ಓವರ್‌ನಲ್ಲಿ ಮಹೀಶ್‌ ತೀಕ್ಷಣ್ ಬ್ರೇಕ್‌ ಹಾಕಿದರು. ರಯಾನ್‌ ರಿಕಲ್ಟನ್‌ 38 ಎಸೆತಗಳಲ್ಲಿ 61 ರನ್‌ (7 ಬೌಂಡರಿ, 3 ಸಿಕ್ಸರ್‌) ಸಿಡಿಸಿ ಓಟಾದರು.

    ಉತ್ತಮ ಫಾರ್ಮ್‌ನಲ್ಲಿದ್ದ ರೋಹಿತ್ ಶರ್ಮಾ ಮತ್ತೊಮ್ಮೆ ಅರ್ಧಶತಕ ಬಾರಿಸಿ ಮಿಂಚಿದರು. ಇವರು 36 ಎಸೆತಗಳಲ್ಲಿ 53 ರನ್‌ (9 ಬೌಂಡರಿ) ಬಾರಿಸಿ 12ನೇ ಓವರ್‌ನ 4ನೇ ಎಸೆತದಲ್ಲಿ ರಿಯಾನ್‌ ಪರಾಗ್‌ಗೆ ವಿಕಟ್‌ ಒಪ್ಪಿಸಿದರು. ಅದಾಗಲೇ ಮುಂಬೈ ತಂಡ 2 ವಿಕೆಟ್‌ ನಷ್ಟಕ್ಕೆ 123 ರನ್‌ ಕಲೆ ಹಾಕಿತ್ತು.

    ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಜೋಡಿ ಆಧಾರವಾಯಿತು. ಈ ಜೋಡಿ ತಮ್ಮ ಪವರ್‌ ಫುಲ್‌ ಹೊಡೆತಗಳಿಂದ ಎದುರಾಳಿ ಬೌಲರ್‌ಗಳನ್ನು ಬೆಂಡೆತ್ತಿತು. ಈ ಜೋಡಿ ಕಟ್ಟಿ ಹಾಕುವುದು ರಾಜಸ್ಥಾನ ತಂಡಕ್ಕೆ ದೊಡ್ಡ ಸವಾಲಾಗಿತ್ತು.

    ಫಜಲ್‌ ಫರೂಕಿ ಅವರ 18ನೇ ಓವರ್ ಒಂದರಲ್ಲೇ 21 ರನ್‌ಗಳು ಹರಿದು ಬಂದಿದೆ. ಸೂರ್ಯಕುಮಾರ್ ಯಾದವ್ 23 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 48 ರನ್‌ ಸಿಡಿಸಿದರು. ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ ಸೇರಿದಂತೆ ಅಜೇಯ 48 ರನ್‌ ಕಲೆ ಹಾಕಿದರು. ಮುಂಬೈ ಇಂಡಿಯನ್ಸ್ ತಂಡ 20 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 217 ರನ್‌ ಕಲೆಹಾಕಿತ್ತು. ರಾಜಸ್ಥಾನ್‌ ಬೌಲರ್ಸ್‌ಗಳಾದ ಮಹೀಶ್ ತೀಕ್ಷಣ್‌, ರಿಯಾನ್‌ ಪರಾಗ್‌ ತಲಾ ಒಂದು ವಿಕೆಟ್‌ ಕಬಳಿಸಿದರು.

    ಪಿಂಕ್‌ ಜೆರ್ಸಿ ಧರಿಸಿದ್ದ ರಾಜಸ್ಥಾನ್ ರಾಯಲ್ಸ್
    ವಿಶೇಷವಾಗಿ ಗ್ರಾಮೀಣ ಮಹಿಳೆಯರ ಉನ್ನತಿಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಈ ಕ್ರಮ ಕೈಗೊಂಡಿದೆ. ಮಹಿಳಾ ಸಬಲೀಕರಣದ ಕಡೆಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ಫ್ರಾಂಚೈಸಿ ಈ ಕ್ರಮ ತೆಗೆದುಕೊಂಡಿದೆ. ಮುಂಬೈ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ ತಂಡದ ಆಟಗಾರರು ಗುಲಾಬಿ ಬಣ್ಣದ ಜೆರ್ಸಿಗಳನ್ನು ಧರಿಸಿ ಮೈದಾನಕ್ಕೆ ಪ್ರವೇಶಿಸಿದರು.

  • ಮದ್ಯ ಖರೀದಿಗೆ ಹಣ ಕೊಡಲಿಲ್ಲ ಅಂತ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಮಗ

    ಮದ್ಯ ಖರೀದಿಗೆ ಹಣ ಕೊಡಲಿಲ್ಲ ಅಂತ ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಮಗ

    ಜೈಪುರ: ಮದ್ಯ ಖರೀದಿಗೆ ಹಣ ನೀಡಿಲ್ಲ ಎಂದು ತಂದೆಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ರಾಜಸ್ಥಾನದ (Rajastan) ಜೈಪುರ (Jaipur) ಮದ್ಯದಂಗಡಿ ಬಳಿ ನಡೆದಿದೆ.

    19 ವರ್ಷದ ಕಿಶನ್ ಮದ್ಯದಂಗಡಿಯಲ್ಲಿ (Liquor Shop) ಮದ್ಯ ಸೇವಿಸಿ ತಂದೆ ಜಗದೀಶ್ ಸೋನಿ ಬಳಿ ಹಣ ಕೇಳಿದ್ದ. ಜಗದೀಶ್ ಹಣ ನೀಡಲು ನಿರಾಕರಿಸಿದ್ದರು. ಈ ವೇಳೆ ತಂದೆ ಮಗನ ನಡುವೆ ವಾಗ್ವಾದ ನಡೆದಿದೆ. ಹಣ ನೀಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಕಿಶನ್, ತಂದೆಯ ತಲೆಗೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ಇದನ್ನೂ ಓದಿ: ವಿಜಯನಗರ | ಗುಡೆಕೋಟೆಯಲ್ಲಿ ಗುಡುಗು, ಬಿರುಗಾಳಿ ಸಹಿತ ಆಲಿಕಲ್ಲು ಮಳೆ – ರೈತರಲ್ಲಿ ಹರ್ಷ

    ಹಲ್ಲೆಗೊಳಗಾದ ಜಗದೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇದರಿಂದ ಭಯಭೀತನಾದ ಕಿಶನ್ ತಂದೆಯ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿದ್ದ. ಬಳಿಕ ಸಹೋದರ ಬಳಿ ತಂದೆ ಆಕಸ್ಮಿಕವಾಗಿ ಮೃತಪಟ್ಟರು ಎಂದು ಸುಳ್ಳು ಹೇಳಿ, ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ. ಆತನ ನಡವಳಿಕೆಯಿಂದ ಅನುಮಾನಗೊಂಡ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇದನ್ನೂ ಓದಿ:  ಬಂಗಾಳದಲ್ಲಿ ವಕ್ಫ್‌ ಕಾಯ್ದೆ ವಿರೋಧಿಸಿ ಪ್ರತಿಭಟನೆ – ಘರ್ಷಣೆಯಲ್ಲಿ ಮೂವರು ಸಾವು

    ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ಕಿಶನ್ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಬಳಿಕ ಆರೋಪಿ ಕಿಶನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

  • ಕುಡಿದ ಮತ್ತಿನಲ್ಲಿ ಕಾರು ಚಾಲನೆ, ಪಾದಚಾರಿಗಳಿಗೆ ಡಿಕ್ಕಿ – ಮೂವರ ಸಾವು, 6 ಮಂದಿ ಸ್ಥಿತಿ ಗಂಭೀರ

    ಕುಡಿದ ಮತ್ತಿನಲ್ಲಿ ಕಾರು ಚಾಲನೆ, ಪಾದಚಾರಿಗಳಿಗೆ ಡಿಕ್ಕಿ – ಮೂವರ ಸಾವು, 6 ಮಂದಿ ಸ್ಥಿತಿ ಗಂಭೀರ

    -7ಕಿ.ಮೀ. ವ್ಯಾಪ್ತಿಯಲ್ಲಿ ಪಾದಚಾರಿ ಹಾಗೂ ವಾಹನಗಳಿಗೆ ಡಿಕ್ಕಿ

    ಜೈಪುರ: ಎಸ್‌ಯುವಿ ಕಾರೊಂದು ವಾಹನ ಹಾಗೂ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಆರು ಜನರು ಗಾಯಗೊಂಡಿರುವ ಘಟನೆ ಜೈಪುರದ ನಹರ್‌ಗಢ (Nahargarh) ಪ್ರದೇಶದಲ್ಲಿ ನಡೆದಿದೆ.

    ಅಪಘಾತದಲ್ಲಿ ಅವದೇಶ್ ಪರೀಕ್ (37), ಮಮತಾ (50) ಹಾಗೂ ವೀರೇಂದ್ರ ಸಿಂಗ್ (48) ಮೃತಪಟ್ಟಿದ್ದು, ಅಪಘಾತದಲ್ಲಿ ಮೋನೇಶ್ ಸೋನಿ (28), ಮೊಹಮ್ಮದ್ ಜಲಾಲುದ್ದೀನ್ (44), ದೀಪಿಕಾ ಸೈನಿ (17), ವಿಜಯ್ ನಾರಾಯಣ (65), ಜೆಬುನ್ನಿಶಾ (50) ಅಂಶಿತಾ ಗಾಯಗೊಂಡಿದ್ದಾರೆ.ಇದನ್ನೂ ಓದಿ: ಅಮೆರಿಕ ಸುಂಕ ನೀತಿಯಿಂದಾಗುವ ತೊಂದರೆ ತಪ್ಪಿಸಲು ಭಾರತ-ಚೀನಾ ಒಟ್ಟಾಗಿ ನಿಲ್ಲಬೇಕು: ಚೀನಾ ವಕ್ತಾರೆ

    ಈ ಕುರಿತು ಹೆಚ್ಚುವರಿ ಡಿಸಿಪಿ ಬಜರಂಗ್ ಸಿಂಗ್ ಮಾತನಾಡಿ, ಕಾರು ಚಾಲಕನನ್ನು ಶಾಸ್ತ್ರಿ ನಗರದ ರಾಣಾ ಕಾಲೋನಿ ನಿವಾಸಿ ಉಸ್ಮಾನ್ ಖಾನ್ (62) ಎಂದು ಗುರುತಿಸಲಾಗಿದೆ. ಕಾರ್ಖಾನೆಯ ಮಾಲೀಕನಾಗಿದ್ದು, ಕುಡಿತ ಮತ್ತಿನಲ್ಲಿ ಕಾರು ಚಲಾಯಿಸುತ್ತಿರುವುದಾಗಿ ತನಿಖೆಯಲ್ಲಿ ದೃಢವಾಗಿದೆ. ಕುಡಿತ ಮತ್ತಿನಲ್ಲಿ ಗಾಡಿ ಓಡಿಸಿಕೊಂಡು ಬಂದು ಮೊದಲು ಸಂತೋಷ್ ಮಾತಾ ದೇವಸ್ಥಾನದ ಬಳಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ನಂತರ ಹಾಗೆಯೇ ಕಾರು ಚಲಾಯಿಸಿಕೊಂಡು ಹೋಗಿದ್ದು, ದಾರಿಯುದ್ದಕ್ಕೂ ಪಾದಚಾರಿಗಳ ಮೇಲೆ ಕಾರು ಹಾಯಿಸಿದ್ದಾನೆ. ಕೂಡಲೇ ಸ್ಥಳದಲ್ಲಿದ್ದವರು ಆತನನ್ನು ಹಿಡಿದುಕೊಂಡಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿಸಿದರು.

    ಗಾಯಾಳುಗಳನ್ನು ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಇನ್ನುಳಿದ ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ.

    ಮೃತ ಮಮತಾ ತಂದೆ ಕಾರು ಚಾಲಕನ ವಿರುದ್ಧ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ.ಇದನ್ನೂ ಓದಿ: ಟ್ರಂಪ್ ಟ್ಯಾರಿಫ್ ಎಫೆಕ್ಟ್ – ಹಾಲಿವುಡ್ ಸಿನಿಮಾ ಬ್ಯಾನ್ ಮಾಡುತ್ತಾ ಚೀನಾ?

  • 9 ತಿಂಗಳ ನಂತರ ವಿಮಾನ ಹತ್ತಿದ ದರ್ಶನ್‌

    9 ತಿಂಗಳ ನಂತರ ವಿಮಾನ ಹತ್ತಿದ ದರ್ಶನ್‌

    ಬೆಂಗಳೂರು: ಸುಮಾರು ಒಂಬತ್ತು ತಿಂಗಳ ನಂತರ ಶೂಟಿಂಗ್‌ಗಾಗಿ ದರ್ಶನ್‌ (Darshan) ವಿಮಾನ ಹತ್ತಿದ್ದಾರೆ.

    ಸೋಮವಾರ ಬೆಂಗಳೂರಿನಿಂದ (Bengaluru) ದರ್ಶನ್‌ ವಿಮಾನದ ಮೂಲಕ ರಾಜಸ್ಥಾನಕ್ಕೆ (Rajasthan) ತೆರಳಿದ್ದಾರೆ. ಮಂಗಳವಾರದಿಂದ ಜೈಪುರದಲ್ಲಿ ಡೆವಿಲ್ (Devil) ಸಿನಿಮಾದ ಶೂಟಿಂಗ್ ನಡೆಯಲಿದೆ. ಇದರಲ್ಲಿ ಭಾಗಿಯಾಗಲು ಇಂದು ವಿಮಾನ ಪ್ರಯಾಣ ಮಾಡಿದರು. ಇದನ್ನೂ ಓದಿ: ಕೇರಳದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ – ದಾಸನಿಗೆ ಸಾಥ್ ನೀಡಿದ ಕೊಲೆ ಆರೋಪಿ ಪ್ರಜ್ವಲ್ ರೈ

     

    ಈ ಮಧ್ಯೆ ಮಾರ್ಚ್ ‌27ರಂದು ತನ್ನ ಬೆನ್ನಿಗೆ ನಿಂತ ಧ್ವನೀರ್ (Dhanveer) ನಟನೆಯ ವಾಮನ ಸಿನಿಮಾ ಟ್ರೈಲರ್ ಅನ್ನು ಬಿಡುಗಡೆ ಮಾಡಲು ಬೆಂಗಳೂರಿಗೆ ಬರಲಿದ್ದಾರೆ.ಟ್ರೈಲರ್‌ ಬಿಡುಗಡೆ ಮಾಡಿದ ಬಳಿಕ ಮತ್ತೆ ದರ್ಶನ್‌ ಜೈಪುರಕ್ಕೆ ತೆರಳಲಿದ್ದಾರೆ. ಏಪ್ರಿಲ್‌ 3ರವರೆಗೂ ದರ್ಶನ್‌ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

    ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜಾಮೀನು ನೀಡಿದ ಕೋರ್ಟ್‌ ಬೆಂಗಳೂರು ಬಿಟ್ಟು ತೆರಳದಂತೆ ಆರಂಭದಲ್ಲಿ ಷರತ್ತು ವಿಧಿಸಿತ್ತು. ನಂತರ ದರ್ಶನ್‌ ಅವರ ಮನವಿ ಮೇರೆಗೆ ಶೂಟಿಂಗ್‌ಗೆ ತೆರಳಲು ಅನುಮತಿ ನೀಡಿತ್ತು. ಅನುಮತಿ ಸಿಕ್ಕಿದ ನಂತರ ಈಗ ದರ್ಶನ್‌ ಡೆವಿಲ್‌ ಶೂಟಿಂಗ್‌ಗೆ ರಾಜಸ್ಥಾನಕ್ಕೆ ತೆರಳಿದ್ದಾರೆ.