Tag: italy

  • ಇಟಲಿಯಲ್ಲಿ ಕೊರೊನಾ ಅಟ್ಟಹಾಸ – ಶುಕ್ರವಾರ ಒಂದೇ ದಿನ 250 ಮಂದಿ ಬಲಿ

    ಇಟಲಿಯಲ್ಲಿ ಕೊರೊನಾ ಅಟ್ಟಹಾಸ – ಶುಕ್ರವಾರ ಒಂದೇ ದಿನ 250 ಮಂದಿ ಬಲಿ

    ರೋಮ್: ಇಟಲಿಯಲ್ಲಿ ಕೊರೊನಾ ಮರಣ ಮೃದಂಗ ಬಾರಿಸುತ್ತಿದ್ದು ಶುಕ್ರವಾರ ಒಂದೇ ದಿನ 250 ಮಂದಿ ಮೃತಪಟ್ಟಿದ್ದಾರೆ.

    ಯುರೋಪ್ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಕೊರೊನಾಗೆ ಇಟಲಿಯಲ್ಲಿ ಬಲಿಯಾಗುತ್ತಿದ್ದಾರೆ. ಸಾವಿನ ಸಂಖ್ಯೆ 1,266ಕ್ಕೆ ಏರಿಕೆಯಾಗಿದೆ. ಶುಕ್ರವಾರ ಒಂದೇ ದಿನ ಕೊರೊನಾ ಸೋಂಕಿತರ ಸಂಖ್ಯೆ ಶೇ.17 ಏರಿಕೆಯಾಗಿದ್ದು 15,113 ಇದ್ದ ಪೀಡಿತರ ಸಂಖ್ಯೆ ಈಗ 17,660ಕ್ಕೆ ತಲುಪಿದೆ.

    ಕೊರೊನಾ ಕೇಂದ್ರ ಸ್ಥಾನ ಈಗ ಯುರೋಪ್ ಆಗಿದೆ ಎಂದು ಶುಕ್ರವಾರ ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಇಟಲಿಯಲ್ಲಿ ಎಲ್ಲ ಆಸ್ಪತ್ರೆಗಳು ಭರ್ತಿಯಾಗಿದ್ದು ರೋಗಿಗಳು ಚಿಕಿತ್ಸೆ ನೀಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.

    ಆಹಾರ ಮತ್ತು ಫಾರ್ಮಸಿ ಅಂಗಡಿಗಳನ್ನು ಮಾತ್ರ ತೆರೆಯಲು ಅನುಮತಿ ನೀಡಿದ್ದು ಎಲ್ಲ ಹೋಟೆಲ್, ಬಾರ್ ಸೇರಿದಂತೆ ಎಲ್ಲ ಅಂಗಡಿಗಳು ಮಾರ್ಚ್ 25ರವರೆಗೆ ಮುಚ್ಚಬೇಕು ಎಂದು ಸರ್ಕಾರ ಆದೇಶಿಸಿದೆ. ಚೀನಾ ನಂತರ ಕೊರೊನಾಗೆ ಅತಿ ಹೆಚ್ಚು ಮಂದಿ ಇಟಲಿಯಲ್ಲಿ ಸಾವನ್ನಪ್ಪಿದ್ದಾರೆ.

    https://twitter.com/PrisonPlanet/status/1238233411808120833

  • 127 ರಾಷ್ಟ್ರ, ಪ್ರಾಂತ್ಯಗಳ ಮೇಲೆ ಕೊರೊನಾ ಕರಿ ನೆರಳು – ಸೋಂಕಿಗೆ ಬಲಿಯಾದವರೆಷ್ಟು? ಚೇತರಿಸಿಕೊಂಡವರೆಷ್ಟು?

    127 ರಾಷ್ಟ್ರ, ಪ್ರಾಂತ್ಯಗಳ ಮೇಲೆ ಕೊರೊನಾ ಕರಿ ನೆರಳು – ಸೋಂಕಿಗೆ ಬಲಿಯಾದವರೆಷ್ಟು? ಚೇತರಿಸಿಕೊಂಡವರೆಷ್ಟು?

    ನವದೆಹಲಿ: ವಿಶ್ವದಾದ್ಯಂತ ಹರಡುತ್ತಿರುವ ಮಹಾಮಾರಿ ಕೊರೊನಾ ವೈರಸ್‍ಗೆ 127 ರಾಷ್ಟ್ರ ಹಾಗೂ ಪ್ರಾಂತ್ಯಗಳು ತುತ್ತಾಗಿವೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಈಗ ವಿಶ್ವದೆಲ್ಲೆಡೆ ಹರುಡುತ್ತಿದ್ದು, ಈವರೆಗೆ 4,986 ಮಂದಿಯನ್ನು ಬಲಿಪಡೆದಿದೆ. ಹೀಗೆ ಎಲ್ಲೆಡೆ ತನ್ನ ಕರಿನೆರಳು ಬೀರುತ್ತಿರುವ ಕೊರೊನಾ ಜನರಲ್ಲಿ ಭಯ ಹುಟ್ಟಿಸಿದೆ.

    ಒಟ್ಟು 127 ರಾಷ್ಟ್ರ ಹಾಗೂ ಪ್ರಾಂತ್ಯಗಳಲ್ಲಿ ಕೊರೊನಾ ವೈರಸ್ ಹರಡಿದ್ದು, ಈವರೆಗೆ ಸುಮಾರು 1,34,769 ಮಂದಿಗೆ ಸೋಂಕು ತಗುಲಿದೆ ಎಂದು ವರದಿಯಾಗಿದೆ. ಅಲ್ಲದೇ ಚೀನಾದಲ್ಲಿ 3,117 ಮಂದಿ ಸೇರಿದಂತೆ ವಿಶ್ವದೆಲ್ಲೆಡೆ ಒಟ್ಟು 4,983 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸುಮಾರು 70,388 ಮಂದಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರಸ್ತುತ 59,398 ಮಂದಿ ಸೋಂಕಿನಿಂದ ಬಳಲುತ್ತಿದ್ದು, ಅವರಲ್ಲಿ 5,757 ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಇದನ್ನೂ ಓದಿ: ಬೀ ಕೇರ್ ಫುಲ್: ಕೊರೊನಾ ಲಕ್ಷಣ ಏನು? ಹೇಗೆ ಹರಡುತ್ತದೆ? ಮುಂಜಾಗೃತ ಕ್ರಮ ಏನು?

    ಎಷ್ಟು ಸಾವು? ಎಷ್ಟು ಚೇತರಿಕೆ?
    ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಅಮೆರಿಕದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಈ ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿಯನ್ನು ದಾಟಿದೆ.

    1. ಚೀನಾ – ಈವರೆಗೆ ಕೊರೊನಾ ಸೋಂಕಿಗೆ 80,814 ಮಂದಿ ತುತ್ತಾಗಿದ್ದಾರೆ. ಅವರಲ್ಲಿ 64,118 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, 3,117 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 13,519 ಮಂದಿ ಕೊರೊನಾದಿಂದ ಬಳಲುತ್ತಿದ್ದು, 4,020 ರೋಗಿಗಳ ಸ್ಥಿತಿ ಗಂಭಿರವಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೊನಾ ಎಫೆಕ್ಟ್ – 1 ರಿಂದ 6ನೇ ತರಗತಿವರೆಗಿನ ಪರೀಕ್ಷೆ ರದ್ದು

    2. ಇಟಲಿ – ಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 15,113 ಮಂದಿ ತುತ್ತಾಗಿದ್ದು, ಅವರಲ್ಲಿ 1,258 ಮಂದಿ ಚೇತರಿಸಿಕೊಂಡಿದ್ದಾರೆ. 1,016 ಮಂದಿ ಮೃತಪಟ್ಟಿದ್ದು, ಪ್ರಸ್ತುತ 12,839 ಮಂದಿ ಕೊರೊನಾದಿಂದ ಬಳಲುತ್ತಿದ್ದರೆ ಹಾಗೂ 1,153 ರೋಗಿಗಳ ಸ್ಥಿತಿ ಚಿಂತಾಜನಕವಾಗಿದೆ.

    3. ಇರಾನ್ – 10,075 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಅವರಲ್ಲಿ 3,276 ಮಂದಿ ಸೊಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 6,370 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದು, 429 ಸೋಂಕಿತರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಫಸ್ಟ್ ಟೈಂ, ಚೀನಾದ ಹುಬೆ ಪ್ರಾಂತ್ಯದಲ್ಲಿ ಸಿಂಗಲ್ ಡಿಜಿಟ್‍ಗೆ ಕೊರೊನಾ ಕೇಸ್ ಇಳಿಕೆ

    4. ದಕ್ಷಿಣ ಕೊರಿಯಾ – 7,979 ಮಂದಿಗೆ ಸೋಂಕು ತಗುಲಿತ್ತು. ಆದರೆ ಅವರಲ್ಲಿ 510 ರೋಗಿಗಳು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. 67 ಮಂದಿ ಕೊರೊನಾಗೆ ಬಲಿಯಾಗಿದ್ದರೆ, 93 ಮಂದಿ ಸೋಂಕಿತರ ಸ್ಥಿತಿ ಚಿಂತಾಜನಕವಾಗಿದೆ. ಪ್ರಸ್ತುತ 7,402 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.

    5. ಸ್ಪೇನ್ – 3,146 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರಲ್ಲಿ 189 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ 2,871 ರೋಗಿಗಳು ಕೊರೊನಾ ಸೋಂಕಿನಿಂದ ಬಳಲುತ್ತಿದ್ದು, 190 ಮಂದಿ ಸ್ಥಿತಿ ಗಂಭಿರವಾಗಿದೆ ಹಾಗೂ 86 ಮಂದಿ ಬಲಿಯಾಗಿದ್ದಾರೆ. ಇದನ್ನೂ ಓದಿ: ಡೆಡ್ಲಿ ಕೊರೊನಾಗೂ ‘ಎಣ್ಣೆ’ನೇ ಮದ್ದು- ಕೈಗೂ, ಹೊಟ್ಟೆಗೂ ಎಣ್ಣೆ ಬಿದ್ರೆ ಫುಲ್ ಸೇಫ್ ಅಂತೆ!

    6. ಫ್ರಾನ್ಸ್ – 2,876 ಮಂದಿ ಕೊರೊನಾಗೆ ತುತ್ತಾಗಿದ್ದರು. ಅವರಲ್ಲಿ 12 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, 129 ರೋಗಿಗಳ ಸ್ಥಿತಿ ಗಂಭಿರವಾಗಿದೆ. ಸದ್ಯ 2,803 ಮಂದಿ ಸೋಂಕಿನಿಂದ ಬಳಲುತ್ತಿದ್ದು, 61 ಮಂದಿ ಜೀವ ಕಳೆದುಕೊಂಡಿದ್ದಾರೆ.

    7. ಜರ್ಮನಿ – 2,745 ಮಂದಿಯಲ್ಲಿ ಕಾಣಿಕೊಂಡ ಕೊರೊನಾ ಸೋಂಕಿನಿಂದ 25 ರೋಗಿಗಳು ಚೇತರಿಸಿಕೊಂಡಿದ್ದಾರೆ. ಸದ್ಯ 6 ಮಂದಿ ಬಲಿಯಾಗಿದ್ದು, 9 ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಪ್ರಸ್ತುತ 2,714 ರೋಗಿಗಳು ಕೊರೊನಾದಿಂದ ಬಳಲುತ್ತಿದ್ದಾರೆ.

    8. ಅಮೆರಿಕ – ಯುಎಸ್‍ಎನಲ್ಲಿ ಕೊರೊನಾಗೆ 41 ಮಂದಿ ಬಲಿಯಾಗಿದ್ದಾರೆ. 1,762 ಮಂದಿಯಲ್ಲಿ ಕಾಣಿಸಿಕೊಂಡ ಸೋಂಕಿನಿಂದ 31 ಮಂದಿ ಗುಣಮುಖರಾಗಿದ್ದಾರೆ. ಸದ್ಯ 1,690 ರೋಗಿಗಳು ಸೋಂಕಿನಿಂದ ಬಳಲುತ್ತಿದ್ದರೆ, 10 ಮಂದಿ ಸ್ಥಿತಿ ಗಂಭಿರವಾಗಿದೆ.

    9. ಭಾರತ – ದೇಶಕ್ಕೆ ಕಾಲಿಟ್ಟಿರುವ ಕೊರೊನಾ ವೈರಸ್‍ಗೆ ಈವರೆಗೆ 75 ಮಂದಿ ತುತ್ತಾಗಿದ್ದು, 4 ಮಂದಿ ಗುಣಮುಖರಾಗಿದ್ದಾರೆ. ಈಗಾಗಲೇ ಕೊರೊನಾಗೆ ಕರ್ನಾಟಕದ ಕಲಬುರ್ಗಿಯ ವೃದ್ಧರೊಬ್ಬರು ಬಲಿಯಾಗಿದ್ದಾರೆ.

    10. ಪಾಕಿಸ್ತಾನ – ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿಯೂ ಕೊರೊನಾ ವೈರಸ್ ಹರಡಿದೆ. ಈವರೆಗೆ 21 ಮಂದಿ ಸೋಂಕಿಗೆ ತುತ್ತಾಗಿದ್ದು, ಇಬ್ಬರು ಚೇತರಿಸಿಕೊಂಡಿದ್ದಾರೆ.

    ಇತ್ತ ಕೊರೊನಾ ಪೀಡಿತ ದೇಶಗಳಲ್ಲಿ ಇರುವ ಭಾರತೀಯರನ್ನು ರಾಷ್ಟ್ರಕ್ಕೆ ವಾಪಸ್ ಕರೆತರುವ ಕಾರ್ಯ ಕೂಡ ಭರದಿಂದ ನಡೆಯುತ್ತಿದ್ದು, ಹೀಗೆ ಭಾರತಕ್ಕೆ ಬಂದವರ ಮೇಲೆ ನಿಗಾವಹಿಸಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಾಲೆಗಳಿಗೆ ರಜೆಯನ್ನು ಕೂಡ ಘೋಷಿಸಲಾಗಿದೆ. ಹಾಗೆಯೇ ಐಟಿ ಕಂಪನಿಗಳ ಸಾಕಷ್ಟು ಮಂದಿ ಉದ್ಯೋಗಿಗಳು ಕೊರೊನಾ ಭೀತಿಯಿಂದ ‘ವರ್ಕ್ ಫ್ರಮ್ ಹೋಮ್’ ವ್ಯವಸ್ಥೆ ಮೊರೆಹೋಗುತ್ತಿದ್ದು, ಕಂಪನಿ, ಆಫೀಸ್, ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

  • ಚಂದನ್-ನಿವೇದಿತಾರನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ – ಡಿಸಿಗೆ ಮನವಿ

    ಚಂದನ್-ನಿವೇದಿತಾರನ್ನು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ – ಡಿಸಿಗೆ ಮನವಿ

    ಮೈಸೂರು: ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್‍ಗೂ ಕೊರೊನಾ ಬಿಸಿ ತಟ್ಟುತ್ತಿದೆ. ಹನಿಮೂನ್ ಮುಗಿಸಿ ಮೈಸೂರಿಗೆ ಆಗಮಿಸುವ ನವದಂಪತಿಗಳಿಗೆ ಕಡ್ಡಾಯ ತಪಾಸಣೆಗೆ ಒಳಪಡಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ನ್ಯಾಷನಲ್ ಸ್ಟೂಡೆಂಟ್ಸ್ ಯುನಿಯನ್ ಆಫ್ ಇಂಡಿಯಾದ ಅಧ್ಯಕ್ಷ ರಫೀಕ್ ಅಲಿ ಮನವಿ ಸಲ್ಲಿಸಿದ್ದಾರೆ.

    ಮೈಸೂರಿನಲ್ಲಿ ಈವರೆಗೆ ಯಾವುದೇ ಕೊರೊನಾ ಪ್ರಕರಣ ಪತ್ತೆಯಾಗಿಲ್ಲ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ನಂತರ ಯೂರೋಪ್‍ಗೆ ಹನಿಮೂನ್ ಹೋಗಿದ್ದಾರೆ. ಹನಿಮೂನ್ ಮುಗಿಸಿ ಮೈಸೂರಿಗೆ ಆಗಮಿಸುವ ಸಂದರ್ಭದಲ್ಲಿ ಸೆಲೆಬ್ರಿಟಿಗಳು ಎಂಬ ಕಾರಣದಿಂದ ಅವರನ್ನು ತಪಾಸಣೆ ಮಾಡದೇ ನಿರ್ಲಕ್ಷ್ಯಿಸಬಾರದು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಎಂದು ಮನವಿ ಮಾಡಲಾಗಿದೆ.

    ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಅವರನ್ನು ತಪಾಸಣೆಗೆ ಒಳಪಡಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಚಂದನ್ ಶೆಟ್ಟಿ – ನಿವೇದಿತಾ ಗೌಡ ಮದುವೆ ನಂತರ ಯೂರೋಪ್‍ಗೆ ಪ್ರವಾಸ ಕೈಗೊಂಡಿದ್ದಾರೆ. ಯೂರೋಪ್‍ನ ಇಟಲಿಯಲ್ಲಿ ಈಗಾಗಲೇ ಶೇ.30 ರಷ್ಟು ಭಾಗ ಕೊರೊನಾ ಆವರಿಸಿದೆ. ಇದುವರೆಗೂ ಇಟಲಿಯಲ್ಲಿ 12,462 ಕೊರೊನಾ ಪಾಸಿಟಿವ್ ಕೇಸ್‍ಗಳು ಬೆಳಕಿಗೆ ಬಂದಿದ್ದು, 827 ಜನ ಮೃತಪಟ್ಟಿದ್ದಾರೆ.

  • ಇಟಲಿಯಿಂದ ಕನ್ನಡಿಗರನ್ನು ಕರೆತರಲು ಸ್ಪೆಷಲ್ ಫ್ಲೈಟ್ ವ್ಯವಸ್ಥೆ: ಅಶ್ವತ್ಥನಾರಾಯಣ

    ಇಟಲಿಯಿಂದ ಕನ್ನಡಿಗರನ್ನು ಕರೆತರಲು ಸ್ಪೆಷಲ್ ಫ್ಲೈಟ್ ವ್ಯವಸ್ಥೆ: ಅಶ್ವತ್ಥನಾರಾಯಣ

    ಬೆಂಗಳೂರು: ಇಟಲಿಯಲ್ಲಿ ರಾಜ್ಯಕ್ಕೆ ಮರಳಲಾಗದೇ ಸಿಕ್ಕಿಕೊಂಡಿರುವ ಕನ್ನಡಿಗರ ಕಷ್ಟಕ್ಕೆ ರಾಜ್ಯ ಸರ್ಕಾರ ಮಿಡಿದಿದೆ. ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ವಾಪಸ್ ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಡ ಹಾಕಿ ಕಾರ್ಯಸಾಧನೆ ಮಾಡಿಸುವಲ್ಲಿ ಯಶಸ್ವಿಯಾಗಿದೆ. ಇಟಲಿಗೆ ವಿಶೇಷ ವಿಮಾನ ಹೋಗುತ್ತಿದ್ದು ಶೀಘ್ರದಲ್ಲೇ ಕನ್ನಡಿಗರು ತವರಿಗೆ ಮರಳಲಿದ್ದಾರೆ.

    ಈ ಸಂಬಂಧ ವಿಧಾನಸೌಧದಲ್ಲಿ ಪಬ್ಲಿಕ್ ಟಿವಿ ಜೊತೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಮಾತನಾಡಿ, ಇಟಲಿಯಲ್ಲಿ ಕನ್ನಡಿಗರ ಸಮಸ್ಯೆ ಗೊತ್ತಾದ ತಕ್ಷಣ ಕೇಂದ್ರದ ಗಮನಕ್ಕೆ ನಾವು ತಂದಿದ್ದೆವು. ಕನ್ನಡಿಗರನ್ನು ಕರೆತರುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇವೆ. ಈಗಾಗಲೇ ವೈದ್ಯರು ಮತ್ತು ಅಧಿಕಾರಿಗಳ ತಂಡ ಇಟಲಿಗೆ ಹೋಗಿದೆ. ಇಟಲಿಯಲ್ಲಿರುವ ಕನ್ನಡಿಗರ ವೈದ್ಯಕೀಯ ತಪಾಸಣೆ ಕೂಡಾ ನಡೆಸಲಾಗುತ್ತಿದೆ ಎಂದರು. ಇದನ್ನು ಓದಿ: 154 ಮಂದಿ ಉದ್ಯೋಗಿಗಳಿರುವ ಕಚೇರಿಗೆ ಹಾಜರಾಗಿ ತೆರಳಿದ್ದ ಕೊರೊನಾ ಪೀಡಿತ

    ಇಟಲಿಯಿಂದ ಕನ್ನಡಿಗರನ್ನು ಕರೆತರಲು ವಿಶೇಷ ವಿಮಾನ ಹೋಗಿದೆ. ವಿಶೇಷ ವಿಮಾನದಲ್ಲಿ ಎಲ್ಲ ಕನ್ನಡಿಗರನ್ನು ಸುರಕ್ಷಿತವಾಗಿ ಕರೆ ತರಲಾಗುತ್ತದೆ. ಅವರ ಸಂಬಂಧಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದು ಇದೇ ವೇಳೆ ಅಶ್ವತ್ಥನಾರಾಯಣ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ಇದನ್ನು ಓದಿ: ‘ಪ್ಲೀಸ್ ನಮ್ಮನ್ನು ರಕ್ಷಿಸಿ’ – ಇಟಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ 50ಕ್ಕೂ ಹೆಚ್ಚು ಕನ್ನಡಿಗರು

    ಇತರೇ ಕರೊನಾ ಪೀಡಿತ ದೇಶಗಳಿಗೂ ನಮ್ಮ ವೈದ್ಯ ಮತ್ತು ಅಧಿಕಾರಿಗಳ ತಂಡ ಕಳುಹಿಸಿ ಮಾಹಿತಿ ಪಡೆಯುವ ಕೆಲಸವನ್ನೂ ಮಾಡುತ್ತೇವೆ. ಎಲ್ಲೆಲ್ಲಿ ಕನ್ನಡಿಗರು ಇದ್ದಾರೋ ಅವರ ವೈದ್ಯಕೀಯ ತಪಾಸಣೆಗೂ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

  • ‘ಪ್ಲೀಸ್ ನಮ್ಮನ್ನು ರಕ್ಷಿಸಿ’ – ಇಟಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ 50ಕ್ಕೂ ಹೆಚ್ಚು ಕನ್ನಡಿಗರು

    ‘ಪ್ಲೀಸ್ ನಮ್ಮನ್ನು ರಕ್ಷಿಸಿ’ – ಇಟಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ 50ಕ್ಕೂ ಹೆಚ್ಚು ಕನ್ನಡಿಗರು

    – ಪಬ್ಲಿಕ್ ಟಿವಿ ಜೊತೆ ನೋವು ತೋಡಿಕೊಂಡ ಪ್ರಯಾಣಿಕರು
    – ಕೊರೊನಾಗೆ ಇಟಲಿ ಬಂದ್
    – ಪ್ರತಿ ದಿನ ನಿಯಮ ಬದಲಾಗುತ್ತಿದೆ

    ರೋಮ್: ಕೊರೊನಾ ದಾಳಿಗೆ ಇಟಲಿ ಸಂಪೂರ್ಣ ಬಂದ್ ಆಗಿದ್ದು, ರೋಮ್ ಏರ್‌ಪೋರ್ಟ್‌ನಲ್ಲಿ 50ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು ಪಬ್ಲಿಕ್ ಟಿವಿ ಜೊತೆ ಮಾತನಾಡುವ ಮೂಲಕ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

    ನಿರುಪಮಾ ಗೌಡ ಎಂಬವರು ಮಾತನಾಡಿ, “ನಾವೆಲ್ಲಾ ಇಲ್ಲಿ ಸಿಲುಚಿನಿ ಏರ್‌ಪೋರ್ಟ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದೇವೆ. ಭಾರತದಿಂದ ಫ್ಲೈಟ್ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದೇವೆ. ಯಾವಾಗ ಬರುತ್ತೆ ಎನ್ನುವ ಮಾಹಿತಿಯೇ ಇನ್ನು ಸಿಕ್ಕಿಲ್ಲ. ಬುಧವಾರ ಸಂಜೆಯಿಂದ ನಾವು ಕಾಯುತ್ತಿದ್ದೇವೆ. ನಾವು ಏರ್‍ ಇಂಡಿಯಾ ಫ್ಲೈಟ್ ಬುಕ್ ಮಾಡಿದ್ದೇವೆ. ಆದರೆ ಇದುವರೆಗೆ ಯಾವುದೇ ಅಪ್ಡೇಟ್ ಬಂದಿಲ್ಲ. ಚಿಕ್ಕಪುಟ್ಟ ದೇಶವಾದ ಶ್ರೀಲಂಕಾದವರನ್ನು ಹಾಗೂ ಬೇರೆ ದೇಶದವರನ್ನು ಕರೆಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ದೇಶದಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ. ನಾವು ಈವರೆಗೆ ಆರೋಗ್ಯವಾಗಿದ್ದೇವೆ. ಇನ್ನು 2 ದಿನ ಇಲ್ಲೇ ಇದ್ದರೆ ಆರೋಗ್ಯ ಸಮಸ್ಯೆ ಎದುರಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಮದನ್ ಗೌಡ ಎಂಬವರು,”ನಾನು ಸೋಮವಾರ ಫ್ಲೈಟ್ ಬುಕ್ ಮಾಡಿದ್ದೆ. ಏರ್ ಇಂಡಿಯಾ ವೆಬ್‍ಸೈಟ್‍ನಲ್ಲಿ ಯಾವುದೇ ದಾಖಲೆ ಕಡ್ಡಾಯ, ನೀವು ಕೊಡಲೇಬೇಕು ಎಂದು ಕೊಟ್ಟಿರಲಿಲ್ಲ. ನಾವು ರಾಯಭಾರ ಜೊತೆ ಮಾತನಾಡಿದ್ದೇವೆ. ಇಟಲಿಯಲ್ಲಿ ಹೊರಗಡೆ ಬರುವುದಕ್ಕೆ ಜನರು ಹೆದರುತ್ತಿದ್ದಾರೆ. ಇಟಲಿ ಸರ್ಕಾರ ತುಂಬಾ ಕಠಿಣವಾದ ರೂಲ್ಸ್ ತರುತ್ತಿದೆ. ಪ್ರತಿದಿನ ರೂಲ್ಸ್ ಚೇಂಜ್ ಆಗುತ್ತಿದೆ. ವಿಮಾನ ನಿಲ್ದಾಣದಲ್ಲಿ ತುಂಬಾ ರಿಸ್ಕ್ ಇದೆ. ಇಲ್ಲಿ ಫ್ಲೈಟ್ ಟೈಮ್ಮಿಂಗ್ ಚೇಂಜ್ ಮಾಡುತ್ತಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸೋಂಕು ಹರಡುವ ಸಾಧ್ಯತೆ ಜಾಸ್ತಿ ಇದೆ. ಹೊರಗಡನೇ ಹೋಗಬಾರದು ಎನ್ನುವ ಈ ಟೈಮಲ್ಲಿ ಏನೂ ಮಾಹಿತಿ ಕೊಡದೇ ಏರ್‌ಪೋರ್ಟ್‌ನಲ್ಲಿ ಕೂಡಿ ಹಾಕಿದ್ರೆ ಎಷ್ಟು ಜನರಿಗೆ ಸೋಂಕು ಹರಡಬಹುದು. ನೀವೇ ನಿಮ್ಮ ಪ್ರಜೆಗಳನ್ನು ರಿಸ್ಕ್ ಗೆ ಸಿಲುಕಿಸುತ್ತಿದ್ದೀರ. ಯಾರಿಗಾದರೂ ಸೋಂಕು ತಗುಲಿದರೆ ಇದಕ್ಕೆಲ್ಲಾ ನೇರ ಕಾರಣ ಭಾರತ ಸರ್ಕಾರ ಹಾಗೂ ಏರ್ ಇಂಡಿಯಾನೇ ಎಂದು ಆಕ್ರೋಶ ಹೊರಹಾಕಿದರು.

    ಇದೇ ವೇಳೆ ಮತ್ತೊಬ್ಬ ವ್ಯಕ್ತಿ,”ಏರ್ ಇಂಡಿಯಾ ವಿಮಾನದಲ್ಲಿ ನಮ್ಮನ್ನು ಕರೆದೊಯ್ದಿಲ್ಲ. ನಾವು ವಾರದ ಮುಂಚೆಯೇ ಟಿಕೆಟ್ ಬುಕ್ ಮಾಡಿದ್ದೀವಿ. ಆದರೆ ಇಲ್ಲಿ ಈಗ ಮೆಡಿಕಲ್ ಸರ್ಟಿಫಿಕೇಟ್ ನೀಡಬೇಕೆಂದು ಹೇಳುತ್ತಿದ್ದಾರೆ. ಸರ್ಟಿಫಿಕೇಟ್ ನೀಡಿದ ಮೇಲೆ ಪರಿಶೀಲಿಸಿ ನಿಮ್ಮ ಪ್ರಯಾಣವನ್ನು ರೀಶೆಡ್ಯೂಲ್ ಮಾಡುತ್ತೇವೆ ಎನ್ನುತ್ತಿದ್ದಾರೆ. ನಮಗೆ ಮಾಹಿತಿ ನೀಡಲೂ ಸಹ ಇಲ್ಲಿ ಯಾರೂ ಇಲ್ಲ. ನಾವು ಇಲ್ಲಿ ಸಿಲುಕಿಕೊಂಡಿದ್ದೇವೆ. ದಯವಿಟ್ಟು ನಮ್ಮನ್ನು ಇಲ್ಲಿಂದ ರಕ್ಷಿಸಬೇಕೆಂದು ಮನವಿ ಮಾಡುತ್ತೇನೆ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

     

     

     

     

     

     

     

     

    ಡಿಸಿಎಂ ಅಶ್ವಥ್ ನಾರಾಯಣ ತನ್ನ ಟ್ವಿಟ್ಟರಿನಲ್ಲಿ, ಇಟಲಿ ಸೇರಿದಂತೆ ಕೊರೊನಾ ಪೀಡಿತ ಹೊರದೇಶಗಳಲ್ಲಿರುವ ಕನ್ನಡಿಗರನ್ನು ಕರೆತರಲು ನಮ್ಮ ಸರ್ಕಾರ ಕೇಂದ್ರದ ಪ್ರಧಾನಿ ಮೋದಿ ಸರ್ಕಾರದ ಜೊತೆಗೆ ಸಹಕರಿಸಿ ಕಾರ್ಯೋನ್ಮುಖವಾಗಿದೆ. ತಜ್ಞ ವೈದ್ಯರನ್ನು ಕರೆದುಕೊಂಡು ಹೋಗಿ ಅಲ್ಲಿಯೇ ತೀವ್ರ ತಪಾಸಣೆಗೆ ಒಳಪಡಿಸಿ ಸುರಕ್ಷತೆಯಿಂದ ಅವರನ್ನು ಇಲ್ಲಿಗೆ ವಾಪಸ್ ಕರೆತರಲಾಗುವುದು ಎಂದು ಟ್ವೀಟ್ ಮಾಡಿ ಭರವಸೆ ನೀಡಿದ್ದಾರೆ.

  • ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ – ಸೋಂಕು ಪೀಡಿತರ ಸಂಖ್ಯೆ 39 ಏರಿಕೆ

    ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ – ಸೋಂಕು ಪೀಡಿತರ ಸಂಖ್ಯೆ 39 ಏರಿಕೆ

    – ಆಸ್ಪತ್ರೆಗೆ ದಾಖಲಾಗಲು ಒಪ್ಪದ ಕುಟುಂಬ

    ತಿರುವಂತಪುರಂ: ಭಾರತದಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್ ಕಂಡು ಬಂದ ರಾಜ್ಯ ಕೇರಳದಲ್ಲಿ ಒಂದೇ ಕುಟುಂಬದ ಐವರಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.

    ಕೊರೊನಾ ವೈರಸ್ ಪತ್ತೆಯಾಗಿರುವ ಕುಟುಂಬದವರು, ಪಥನಮತ್ತಟ್ಟ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಎಲ್ಲರನ್ನು ಪಥನಮತ್ತಟ್ಟ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತದೆ. ಈ ಕುಟುಂಬದ ಮೂವರು ಇತ್ತೀಚೆಗೆ ಸಂಬಂಧಿಕರನ್ನು ಭೇಟಿ ಮಾಡಲು ಇಟಲಿಗೆ ಹೋಗಿ ಬಂದಿದ್ದು, ಅಲ್ಲಿಂದ ಇವರಿಗೆ ಸೋಂಕು ತಗಲುಲಿದೆ ಎಂದು ಹೇಳಲಾಗುತ್ತದೆ.

    ಇದರ ಬಗ್ಗೆ ಮಾಹಿತಿ ನೀಡಿರುವ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು, ಕೊರೊನಾ ವೈರಸ್‍ಗೆ ತುತ್ತಾಗಿರುವ ಕುಟುಂಬದವರು ತಮ್ಮ ಪ್ರಯಾಣದ ಇತಿಹಾಸದ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಹಾಗಾಗಿ ನಾವು ಅವರನ್ನು ಸ್ಕ್ರೀನಿಂಗ್ ಮಾಡಲು ಆಗಿಲ್ಲ. ಜೊತೆಗೆ ಅವರು ಮೊದಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಪ್ಪಿರಲಿಲ್ಲ. ನಂತರ ನಾವು ಅವರ ಮನವೊಲಿಸಿ ಆಸ್ಪತ್ರೆ ದಾಖಲು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: 1 ಲಕ್ಷ ದಾಟಿದ ಕೊರೊನಾ ಪ್ರಕರಣ – ಇದುವರೆಗೆ 3,412 ಸಾವು!

    ಈಗ ಸದ್ಯಕ್ಕೆ ಅವರನ್ನು ಪಥನಮತ್ತಟ್ಟ ಜೆನರಲ್ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುಟುಂಬದ ಮೂವರು ಇತ್ತೀಚೆಗೆ ಸಂಬಂಧಿಕರನ್ನು ಭೇಟಿ ಮಾಡಲು ಇಟಲಿಗೆ ಹೋಗಿ ಬಂದಿದ್ದರು. ಹೀಗಾಗಿ ಇವರಿಗೆ ಸೋಂಕು ತಗುಲಿದೆ. ಈಗ ನಾವು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕುಟುಂಬವನ್ನು ಪ್ರತ್ಯೇಕ ವಾರ್ಡಿನಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಶೈಲಜಾ ಅವರು ಹೇಳಿದ್ದಾರೆ. ಇದನ್ನು ಓದಿ: ಕೊರೊನಾ ಆಯ್ತು, ಈಗ ಹೆಚ್1 ಎನ್1 ಭಯ- ಹಕ್ಕಿ ಜ್ವರದ ಲಕ್ಷಣಗಳೇನು?

    ಭಾರತದ ಮೊದಲ ಮೂರು ಕೊರೊನ ವೈರಸ್ ಪ್ರಕರಣಗಳು ಕೇರಳದಿಂದಲೇ ವರದಿಯಾಗಿದ್ದವು. ಮೂವರೂ ರೋಗಿಗಳು ಚೀನಾದ ವುಹಾನ್‍ನ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರು. ಆದರೆ ಈಗ ಅವರು ಕಾಯಿಲೆಯಿಂದ ಚೇತರಿಸಿಕೊಂಡಿದ್ದಾರೆ.

    ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಸರ್ಕಾರ ಸೋಂಕು ತಡೆಗೆ ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಜೊತೆಗೆ ಸ್ವತಃ ಪ್ರಧಾನಿ ಮೋದಿ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ರೋಗವು ಮತ್ತುಷ್ಟು ಹರಡುವ ಲಕ್ಷಣಗಳು ಕಂಡು ಬಂದರೆ ಅದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ. ಜೊತೆಗೆ ವೈರಸ್ ಹರಡದ ರೀತಿಯಲ್ಲಿ ಕ್ರಮಕೈಗೊಳ್ಳಿ ಎಂದು ತಿಳಿಸಿದ್ದಾರೆ.

    ಇಟಲಿಯಲ್ಲಿ ಸುಮಾರು 6,000 ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದು, ಅವರಲ್ಲಿ 225 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ವೈರಸ್ ಕಂಡು ಬಂದಿರುವ ಇಟಲಿಯ ಉತ್ತರದ ಹೆಚ್ಚಿನ ಭಾಗಗಳನ್ನು ಇಟಾಲಿಯನ್ ಸರ್ಕಾರವು ಲಾಕ್ ಮಾಡಿದೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ನಗರದಿಂದ ಕಾಣಿಸಿಕೊಂಡ ಕೊರೊನಾ ವೈರಸ್, ಈಗ ಸುಮಾರು 95ಕ್ಕೂ ಹೆಚ್ಚು ರಾಷ್ಟ್ರಗಳು ಮತ್ತು ಪ್ರಾಂತ್ಯಗಳಿಗೆ ಹರಡಿದೆ. 3,500ಕ್ಕೂ ಹೆಚ್ಚು ಜನರು ಸತ್ತಿದ್ದಾರೆ ಮತ್ತು ಒಂದು ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ.

  • ಪೇಟಿಎಂ ಉದ್ಯೋಗಿಗೆ ಕೊರೊನಾ – ಇಟಲಿ ಪ್ರಯಾಣಿಕರನ್ನು ಕರೆದೊಯ್ದ ಚಾಲಕನಿಗೂ ಬಂತು

    ಪೇಟಿಎಂ ಉದ್ಯೋಗಿಗೆ ಕೊರೊನಾ – ಇಟಲಿ ಪ್ರಯಾಣಿಕರನ್ನು ಕರೆದೊಯ್ದ ಚಾಲಕನಿಗೂ ಬಂತು

    ನವದೆಹಲಿ: ಬುಧವಾರ ಒಂದೇ ದಿನ 22 ಕೊರೊನಾ ಕೇಸ್ ಪತ್ತೆಯಾಗಿದ್ದು, ಭಾರತದಲ್ಲಿ ಈಗ 29 ಮಂದಿಗೆ ಕೊರೊನಾ ಬಂದಿದೆ.

    ಹೊಸದಾಗಿ ಪೇಟಿಎಂ ಕಂಪನಿಯ ಉದ್ಯೋಗಿ ರಕ್ತದ ಮಾದರಿಯ ಪರೀಕ್ಷೆ ನಡೆಸಿದ್ದು ಪಾಸಿಟಿವ್ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಗುರುಗ್ರಾಮದ ಪೇಟಿಎಂ ಕಂಪನಿ ಮುಚ್ಚಲಾಗಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ.

    ಕೊರೊನಾ ಅತಿ ಹೆಚ್ಚು ವ್ಯಾಪಿಸುತ್ತಿರುವ ಇಟಲಿಯಿಂದ ಪೇಟಿಎಂ ಉದ್ಯೋಗಿ ಮರಳಿದ್ದರು. ಇಟಲಿಯ 16 ಮಂದಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ಚಾಲಕನಿಗೆ ಸಹ ಈಗ ಕೊರೊನಾ ಬಂದಿದೆ.

    ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಈಗ ವಿದೇಶದಿಂದ ಆಗಮಿಸಿದ ಎಲ್ಲ ಪ್ರಯಾಣಿಕರ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಗುವುದು ಎಂದು ಹೇಳಿದೆ. ಈ ಮೊದಲು ಕೇವಲ 10 ದೇಶಗಳಿಂದ ಆಗಮಿಸಿದ ಪ್ರಯಾಣಿಕರ ಸ್ಕ್ರೀನಿಂಗ್ ಪರೀಕ್ಷೆ ನಡೆಸಲಾಗುತ್ತಿತ್ತು.

    ಜರ್ಮನಿಯ ಪ್ರಸಿದ್ಧ ಲುಫ್ಥಾನ್ಸ ಏರ್‍ಲೈನ್ಸ್ ತನ್ನ 750 ವಿಮಾನಗಳ ಪೈಕಿ 125 ವಿಮಾನಗಳ ಹಾರಾಟವನ್ನು ನಿಲ್ಲಿಸಿದೆ. ಇಟಲಿಯಲ್ಲಿ 3,089 ಕೊರೊನಾ ಪ್ರಕರಣ ಪತ್ತೆಯಾಗಿದ್ದು 107 ಮಂದಿ ಮೃತಪಟ್ಟಿದ್ದಾರೆ.

  • ಕಾಡಿನಲ್ಲಿ ಹೂತಿಟ್ಟಿದ್ದ 15.7 ಲಕ್ಷ ಮೌಲ್ಯದ ಕೊಕೇನ್ ತಿಂದು ತೇಗಿದ ಹಂದಿಗಳು

    ಕಾಡಿನಲ್ಲಿ ಹೂತಿಟ್ಟಿದ್ದ 15.7 ಲಕ್ಷ ಮೌಲ್ಯದ ಕೊಕೇನ್ ತಿಂದು ತೇಗಿದ ಹಂದಿಗಳು

    – ಕಳ್ಳಸಾಗಾಣಿಕೆಗೆ ಹೂತಿಟ್ಟಿದ್ದ ಡ್ರಗ್ಸ್
    – ಖದೀಮರ ಗುಂಪು ಅರೆಸ್ಟ್

    ರೋಮ್: ಕಾಡಿನಲ್ಲಿ ಹೂತಿಟ್ಟಿದ್ದ 15.7 ಲಕ್ಷ ರೂ. ಮೌಲ್ಯದ ಕೊಕೇನ್ ಅನ್ನು ಕಾಡು ಹಂದಿಗಳು ತಿಂದು ತೇಗಿದ ಘಟನೆ ಇಟಲಿಯ ಟಸ್ಕನಿ ಅರಣ್ಯದಲ್ಲಿ ಬೆಳಕಿಗೆ ಬಂದಿದೆ.

    ಕಳ್ಳಸಾಗಾಣಿಕೆಗೆ ಅರಣ್ಯದಲ್ಲಿ ಖದೀಮರು ಪ್ಯಾಕೆಟ್‍ಗಳಲ್ಲಿ ಕೊಕೇನ್ ತುಂಬಿ ಪ್ಯಾಕ್ ಮಾಡಿ ಮಣ್ಣಿನಲ್ಲಿ ಹೂತಿಟ್ಟಿದ್ದರು. ಆದರೆ ಈ ಪ್ಯಾಕೆಟ್‍ಗಳನ್ನು ಹುಡುಕಿ ತೆಗೆದ ಕಾಡು ಹಂದಿಗಳು ಅದರೊಳಗೆ ಇದ್ದ ಕೊಕೇನ್ ಅನ್ನು ತಿಂದು ಪ್ಯಾಕೆಟ್‍ಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನಲ್ಲಿ ಓಡಾಡುತ್ತಿದ್ದಾಗ ಕೊಕೇನ್ ಪ್ಯಾಕೆಟ್‍ಗಳು ಪತ್ತೆಯಾಗಿತ್ತು. ಇದನ್ನೂ ಓದಿ:ಡ್ರಗ್ಸ್ ನಶೆಯಲ್ಲಿ ಕುಟುಂಬದವರನ್ನೇ ಕೊಂದು ಫೇಸ್‍ಬುಕ್ ಲೈವ್ ಹೋದ

    ಅರಣ್ಯದಲ್ಲಿ ಕೊಕೇನ್ ಹೇಗೆ ಬಂತು ಎಂದು ಅರಣ್ಯ ಇಲಾಖೆ ಜಾಡುಹಿಡಿದು ಹೊರಟಾಗ ಸತ್ಯಾಂಶ ಹೊರಬಿದ್ದಿದೆ. ಕಳ್ಳಸಾಗಾಣಿಕೆ ನಡೆಸಲು ಖದೀಮರು ಕಾಡಿನಲ್ಲಿ ಕೊಕೇನ್ ಅಡಗಿಸಿಟ್ಟಿದ್ದರು. ಅಧಿಕಾರಿಗಳ ಕಣ್ಣು ತಪ್ಪಿಸಲು ಅದನ್ನು ಮಣ್ಣಿನಲ್ಲಿ ಹೂತಿಟ್ಟಿದ್ದರು. ಆದರೆ ಕೊಕೇನ್ ವಾಸನೆಗೆ ಕಾಡು ಹಂದಿಗಳು ಹೂತಿಟ್ಟಿದ್ದ ಕೊಕೇನ್ ಅನ್ನು ಅಗೆದು, ಹೊರತೆಗೆದು ತಿಂದು ತೇಗಿವೆ. ಇದನ್ನೂ ಓದಿ:ಕೊರಿಯರ್ ಆಫೀಸ್‍ನಲ್ಲಿ ಸಿಕ್ತು 200 ಕೋಟಿ ಮೌಲ್ಯದ ಡ್ರಗ್ಸ್!

    ಸದ್ಯ ಈ ಕೊಕೇನ್ ಹೂತಿಟ್ಟಿದ್ದ ಖದೀಮರ ಗುಂಪನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೆ ಕಾಡಿನಲ್ಲಿ ಖದೀಮರು 15.7 ಲಕ್ಷ ರೂ. ಮೌಲ್ಯದ ಕೊಕೇನ್ ಹೂತಿಟ್ಟಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೆ ಈ ಗುಂಪು ಟಸ್ಕನಿ ಅರಣ್ಯದ ಸುತ್ತಮುತ್ತಲ ಪ್ರದೇಶಗಳಿಗೆ ಪ್ರತಿ ತಿಂಗಳು 2 ಕೆ.ಜಿವರೆಗೂ ಡ್ರಗ್ಸ್ ಮಾರಾಟ ಮಾಡುವುದನ್ನು ಬಾಯಿಬಿಟ್ಟಿದೆ.

  • ಕೊಹ್ಲಿ ದೇಶಭಕ್ತನಾಗಲು ಸಾಧ್ಯವಿಲ್ಲ: ಬಿಜೆಪಿ ಶಾಸಕ

    ಕೊಹ್ಲಿ ದೇಶಭಕ್ತನಾಗಲು ಸಾಧ್ಯವಿಲ್ಲ: ಬಿಜೆಪಿ ಶಾಸಕ

    ಝಾನ್ಸಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಟಲಿಯಲ್ಲಿ ಮದುವೆಯಾದ್ದಕ್ಕೆ ಮಧ್ಯಪ್ರದೇಶದ ಬಿಜೆಪಿ ಶಾಸಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ವಿರಾಟ್ ಕೊಹ್ಲಿ ದೇಶದಲ್ಲಿ ಹಣ ಮತ್ತು ಕೀರ್ತಿಯನ್ನು ಸಂಪಾದಿಸಿ ಇಟಲಿಗೆ ಹೋಗಿ ಮದುವೆಯಾಗಿದ್ದಾರೆ. ದೇವರಾಗಿರುವ ರಾಮ, ಕೃಷ್ಣನಂತವರೇ ಭಾರತದಲ್ಲಿ ಮದುವೆಯಾಗಿರುವಾಗ ವಿದೇಶದಲ್ಲಿ ಮದುವೆಯಾಗಿದ್ದು ಎಷ್ಟು ಸರಿ? ಇಟಲಿಗೆ ಹೋಗಿ ಮದುವೆಯಾದ ಕೊಹ್ಲಿ ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ಗುನದ ಬಿಜೆಪಿ ಶಾಸಕ ಪನ್ನಾಲಾಲ್ ಶಾಕ್ಯ ಹೇಳಿದ್ದಾರೆ. ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

    ಯಾರು ದೇಶಕ್ಕೆ ವಿಧೇಯರಾಗಿರುತ್ತಾರೋ ಅವರು ಜನರಿಗೆ ಪ್ರೇರಕ ಶಕ್ತಿ ಆಗುತ್ತಾರೆ. ಹೀಗಾಗಿ ಕೊಹ್ಲಿ ಭಾರತೀಯರಿಗೆ ಪ್ರೇರಣೆಯಾಗಲು ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಗುನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಕಿಲ್ ಇಂಡಿಯಾ ಕೇಂದ್ರವನ್ನು ಉದ್ಘಾಟಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಟಲಿಯ ಡ್ಯಾನ್ಸರ್ ಭಾರತದಲ್ಲಿ ಶತಕೋಟ್ಯಾಧಿಪತಿ ಆಗಿದ್ದರೆ, ಕೊಹ್ಲಿ ಭಾರತದ ಸಂಪತ್ತನ್ನು ಬೇರೆ ದೇಶಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಒಂದು ವೇಳೆ ಭಾರತದಲ್ಲೇ ವಿರುಷ್ಕಾ ಜೋಡಿ ಮದುವೆಯಾಗಿದ್ದರೆ ಪ್ರವಾಸೋದ್ಯಮಕ್ಕೆ ಸಹಾಯವಾಗುತಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ದ್ರಾಕ್ಷಿ ತೋಟದ ರೆಸಾರ್ಟ್ ಗೆ ಒಂದು ದಿನಕ್ಕೆ ಇಷ್ಟು ವ್ಯಯಿಸಿದ್ರಂತೆ ವಿರುಷ್ಕಾ!

    ಬಿಜೆಪಿ ಶಾಸಕರ ಹೇಳಿಕೆಗೆ ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ಪಂಕಜ್ ಚತುರ್ವೇದಿ ಪ್ರತಿಕ್ರಿಯಿಸಿ, ಗುಜರಾತ್ ನಲ್ಲಿ ಜಯಗಳಿಸಿದ ಬಳಿಕ ಬಿಜೆಪಿ ಇಲ್ಲೂ ರಾಷ್ಟ್ರೀಯತೆ ವಿಚಾರವನ್ನು ಬಿತ್ತಲು ಆರಂಭಿಸಿದೆ. ಅವರ ದೊಡ್ಡ ನಾಯಕ ನಿವೃತ್ತ ಸೇನಾ ಮುಖ್ಯಸ್ಥ, ಮಾಜಿ ಉಪರಾಷ್ಟ್ರಪತಿ, ಮಾಜಿ ಪ್ರಧಾನಿ ವಿಚಾರವನ್ನು ಪ್ರಸ್ತಾಪಿಸಿ ಗುಜರಾತಿನಲ್ಲಿ ಸಮಾಜವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಅದರ ಮುಂದುವರಿದ ಭಾಗವಾಗಿ ಈಗ ಅದೇ ತಂತ್ರವನ್ನು ಇಲ್ಲೂ ಪ್ರಯೋಗಿಸುತ್ತಿರುವುದು ಸ್ಪಷ್ಟವಾಗಿದೆ. ಆದರೆ ಮಧ್ಯಪ್ರದೇಶದಲ್ಲಿ ಬಿಜೆಪಿಯ ಈ ತಂತ್ರ ಫಲಕಾರಿಯಾಗುವುದಿಲ್ಲ ಎಂದು ಹೇಳಿದರು.

    2018ರ ಕೊನೆಯಲ್ಲಿ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಭಾರೀ ಟ್ವಿಸ್ಟ್, ಮಧ್ಯೆ ಬ್ರೇಕಪ್ ಸುದ್ದಿ, ಕೊನೆಗೆ ಮದ್ವೆ – ಇಲ್ಲಿದೆ ವಿರುಷ್ಕಾ ಲವ್ ಸ್ಟೋರಿ

    https://youtu.be/gHvF38xCsiY

  • ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಕೊಹ್ಲಿ, ಅನುಷ್ಕಾ ಮದುವೆ: ಫೋಟೋಗಳಲ್ಲಿ ನೋಡಿ

    ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ಕೊಹ್ಲಿ, ಅನುಷ್ಕಾ ಮದುವೆ: ಫೋಟೋಗಳಲ್ಲಿ ನೋಡಿ

    ಮಿಲನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಇಟಲಿಯಲ್ಲಿ ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದಾರೆ.

    ಇಂದಿನಿಂದ ನಾವು ಜೀವನ ಪರ್ಯಂತ ಒಂದಾಗಿ ಪ್ರೀತಿಯಿಂದ ಇರುತ್ತೇವೆ. ಹೀಗಾಗಿ ಈ ಸಂತೋಷದ ಸುದ್ದಿಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ. ಕುಟುಂಬದ ಸದಸ್ಯರು, ಅಭಿಮಾನಿಗಳ ಬೆಂಬಲಿದಿಂದ ಈ ದಿನ ನಮ್ಮ ಪಾಲಿಗೆ ವಿಶೇಷ ದಿನವಾಗಿದೆ. ನಮ್ಮ ಈ ಹೊಸ ಪಯಣಕ್ಕೆ ಶುಭ ಹಾರೈಸಿದ ನಿಮಗೆಲ್ಲ ಧನ್ಯವಾದಗಳು ಎಂದು ಬರೆದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಟ್ವೀಟ್ ಮಾಡಿದ್ದಾರೆ.

    ವಿಶೇಷ ಏನೆಂದರೆ ಕೊಹ್ಲಿ ಅನುಷ್ಕಾ ಶರ್ಮಾ ಹಾರ ಹಾಕುತ್ತಿರುವ ಫೋಟೋ ವನ್ನು ಟ್ವೀಟ್ ಮಾಡಿದ್ದರೆ, ಅನುಷ್ಕಾ ಶರ್ಮಾ ಇಬ್ಬರು ಜೊತೆಯಾಗಿ ಕುಳಿತಿರುವ ಫೋಟೋ ವನ್ನು ಟ್ವೀಟ್ ಮಾಡಿದ್ದಾರೆ.

    ಇದೇ 21ರಂದು ದೆಹಲಿಯಲ್ಲಿ ಸಂಬಂಧಿಕರಿಗೆ ಆರತಕ್ಷತೆಯನ್ನು ಆಯೋಜಿಸಲಾಗಿದ್ದರೆ, ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳಿಗೆ ಡಿ.26 ರಂದು ಮುಂಬೈಯಲ್ಲಿ ಆರತಕ್ಷತೆಯನ್ನು ಆಯೋಜಿಸಲಾಗಿದೆ ಎಂದು ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ.