Tag: italy

  • ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ; ಭಾರತದ ಉದ್ಯಮಿ, ಪತ್ನಿ ಸ್ಥಳದಲ್ಲೇ ಸಾವು

    ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ; ಭಾರತದ ಉದ್ಯಮಿ, ಪತ್ನಿ ಸ್ಥಳದಲ್ಲೇ ಸಾವು

    ರೋಮ್: ಇಟಲಿಯಲ್ಲಿ ಭೀಕರ ರಸ್ತೆ ಅಪಘಾತಕ್ಕೆ ಭಾರತೀಯ ಮೂಲದ ಉದ್ಯಮಿ ಮತ್ತು ಆತನ ಪತ್ನಿ ಬಲಿಯಾಗಿದ್ದಾರೆ. ದಂಪತಿಯ ಪುತ್ರಿ ಗಂಭೀರ ಗಾಯಗೊಂಡಿದ್ದಾರೆ.

    ನಾಗ್ಪುರ ಮೂಲದ ಹೋಟೆಲಿಯರ್ ಜಾವೇದ್ ಅಖ್ತರ್ (55) ಮತ್ತು ಅವರ ಪತ್ನಿ ನಾಡಿರಾ ಗುಲ್ಶನ್ (47) ಮೃತಪಟ್ಟಿದ್ದಾರೆ. ಇವರು ತಮ್ಮ ಮೂವರು ಮಕ್ಕಳೊಂದಿಗೆ (ಅರ್ಜೂ ಅಖ್ತರ್, ಶಿಫಾ ಅಖ್ತರ್ ಹಾಗೂ ಮಗ ಜಾಝೆಲ್‌ ಅಖ್ತರ್) ಪ್ರಯಾಣಿಸುತ್ತಿದ್ದರು. ಗ್ರೊಸೆಟೊ ಬಳಿಯ ಔರೆಲಿಯಾ ಹೆದ್ದಾರಿಯಲ್ಲಿ ಕುಟುಂಬವು ಅಪಘಾತಕ್ಕೀಡಾಯಿತು.

    ಕುಟುಂಬವು ನಾಗ್ಪುರದ ಸೀತಾಬುಲ್ಡಿ ಫ್ಲೈಓವರ್ ಬಳಿಯ ಗುಲ್ಶನ್ ಪ್ಲಾಜಾ ಹೋಟೆಲ್ ಅನ್ನು ಹೊಂದಿದೆ. ಇಟಲಿಯನ್ನು ತಲುಪುವ ಮೊದಲು ಅವರು ಸೆಪ್ಟೆಂಬರ್ 22 ರಂದು ಫ್ರಾನ್ಸ್‌ನಲ್ಲಿ ರಜಾ ದಿನಗಳನ್ನು ಕಳೆದಿದ್ದರು.

    ಏಷ್ಯನ್ ಮೂಲದ ಪ್ರವಾಸಿಗರನ್ನು ಹೊತ್ತ ವ್ಯಾನ್ ಮತ್ತು ಮಿನಿ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ಮೂವರು ಜನರಲ್ಲಿ ನಾಗ್ಪುರ ದಂಪತಿಗಳು ಸೇರಿದ್ದಾರೆ. ಮಿನಿಬಸ್ ಚಾಲಕ ಮತ್ತು ಭಾರತದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಈ ದಂಪತಿಯ ಮಗಳು ಅರ್ಜೂ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದು ಗಾಯಗೊಂಡಿದ್ದಾಳೆ. ಆಕೆಯನ್ನು ಸಿಯೆನಾದ ಲೀ ಸ್ಕಾಟ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್‌ ಇನ್ನಿಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

    ಇಟಲಿಯ ಭಾರತೀಯ ರಾಯಭಾರ ಕಚೇರಿ ನಾಗ್ಪುರ ದಂಪತಿ ಸಾವಿಗೆ ಸಂತಾಪ ಸೂಚಿಸಿದೆ. ಅವರ ಕುಟುಂಬಕ್ಕೆ ಅಗತ್ಯ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದೆ.

  • ಪ್ಯಾಲೆಸ್ಟೈನ್ ಪ್ರತ್ಯೇಕ ದೇಶಕ್ಕಾಗಿ ಇಟಲಿಯಲ್ಲಿ ತೀವ್ರ ಪ್ರತಿಭಟನೆ – ಬಂದರಿಗೆ ಬೆಂಕಿ, 60 ಪೊಲೀಸರಿಗೆ ಗಾಯ

    ಪ್ಯಾಲೆಸ್ಟೈನ್ ಪ್ರತ್ಯೇಕ ದೇಶಕ್ಕಾಗಿ ಇಟಲಿಯಲ್ಲಿ ತೀವ್ರ ಪ್ರತಿಭಟನೆ – ಬಂದರಿಗೆ ಬೆಂಕಿ, 60 ಪೊಲೀಸರಿಗೆ ಗಾಯ

    – ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧ ಆಕ್ರೋಶ

    ರೋಮ್‌: ಪ್ಯಾಲೆಸ್ಟೈನ್ (Palestine) ಪ್ರತ್ಯೇಕ ದೇಶವಾಗಬೇಕು ಎಂಬ ಬೇಡಿಕೆಗೆ ಇಟಲಿಯ (Italy) ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಬೆಂಬಲ ನೀಡಲು ನಿರಾಕರಿಸಿದ್ದಾರೆ. ಇದನ್ನು ವಿರೋಧಿಸಿ ಪ್ಯಾಲೆಸ್ಟೈನ್ ಪರ ಇಟಲಿಯ ಜನ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

    ಗಾಜಾದಲ್ಲಿ (Gaza) ಇಸ್ರೇಲ್ ದಾಳಿಯನ್ನು ಖಂಡಿಸದ ಮತ್ತು ಪ್ಯಾಲೆಸ್ಟೈನ್ ಪ್ರತ್ಯೇಕ ದೇಶಕ್ಕೆ ಬೆಂಬಲಿಸದ ಜಾರ್ಜಿಯಾ ಮೆಲೋನಿ ನೇತೃತ್ವದ ಬಲಪಂಥೀಯ ಸರ್ಕಾರದ ವಿರುದ್ಧ ಕಾರ್ಮಿಕ ಒಕ್ಕೂಟಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಇದರ ಭಾಗವಾಗಿ ಜನ ಇಟಲಿಯ ಹಲವು ಬೀದಿಗಳಲ್ಲಿ ಕಪ್ಪು ಬಟ್ಟೆ ಧರಿಸಿ ಪ್ಯಾಲೆಸ್ಟೀನಿಯನ್ ಧ್ವಜ ಹಿಡಿದು ಪ್ರತಿಭಟನಾ ಮೆರವಣಿಗೆಗಳು ನಡೆಯುತ್ತಿದ್ದಾರೆ. ಸಾವಿರಾರು ಪ್ರತಿಭಟನಾಕಾರರು ರಸ್ತೆಗಳನ್ನು ತಡೆದು, ಜಿನೋವಾ ಬಂದರಿನ ಮೇಲೆ ದಾಳಿ ಮಾಡಿ ಬೆಂಕಿಹಚ್ಚಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೇ ವೆನ್ನಿಸ್‌ ಬಂದರನ್ನೂ ಸಹ ಪ್ರತಿಭಟನಾಕಾರರು ಸುತ್ತುವರೆದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ

    ಪ್ರತಿಭಟನಾಕಾರರ ಉಗ್ರ ಸ್ವರೂಪಕ್ಕೆ ಹಲವೆಡೆ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಗೊಳಗಾಗಿವೆ. ಹಲವೆಡೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ. ಈ ಘರ್ಷಣೆಯಲ್ಲಿ ಸುಮಾರು 60 ಮಂದಿ ಪೊಲೀಸರು ಗಾಯಗೊಂಡಿದ್ದಾರೆ.

    ಪ್ರತಿಭಟನಾಕಾರರ ಗುಂಪು ಮಿಲನ್‌ನ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ಕಿಟಕಿಯನ್ನು ಒಡೆದು, ಪೊಲೀಸರ ಮೇಲೆ ಕುರ್ಚಿಯನ್ನು ಎಸೆದಿದೆ. ಈ ಘರ್ಷಣೆಯಲ್ಲಿ 60ಕ್ಕೂ ಹೆಚ್ಚು ಪೊಲೀಸರಿಗೆ ಗಾಯಗಳಾಗಿವೆ. ಬಳಿಕ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಬಳಸಿದ್ದಾರೆ. ಅಲ್ಲದೇ 10ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

    ಇಟಲಿಯ ಬಂದರುಗಳ ಮೂಲಕ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿರುವುದನ್ನು ಪ್ರತಿಭಟನಾಕಾರರು ಖಂಡಿಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಜಲ ಫಿರಂಗಿ ಬಳಸಿದ್ದಾರೆ. ಇನ್ನೂ ಪ್ರತಿಭಟನಾಕಾರರು ವೆನಿಸ್ ಬಂದರಿನ ಮೇಲೆ ದಾಳಿ ನಡೆಸಿರುವುದಕ್ಕೆ ಪ್ರಧಾನಿ ಜಾರ್ಜಿಯಾ ಮೆಲೋನಿ ಅಸಮಾಧಾನ ಹೊರಹಾಕಿದ್ದಾರೆ. ಹಿಂಸಾಚಾರ ನಾಚಿಕೆಗೇಡಿನ ಸಂಗತಿ ಎಂದು ಅವರು ಟೀಕಿಸಿದ್ದಾರೆ.

    ಬೊಲೊಗ್ನಾದಲ್ಲಿ, ಪ್ರತಿಭಟನಾಕಾರರು ಹೆದ್ದಾರಿಯನ್ನು ತಡೆದು, ವಾಹನಗಳನ್ನು ನಿಲ್ಲಿಸಿ, ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ. ರೋಮ್‌ನಲ್ಲಿ, ಪ್ರಮುಖ ರಸ್ತೆಗಳನ್ನು ತಡೆದಿದು ಫ್ರೀ ಪ್ಯಾಲೆಸ್ಟೈನ್ ಘೋಷಣೆ ಕೂಗಿದ್ದಾರೆ. ಪ್ರತಿಭಟನೆಯ ತೀವ್ರತೆಯಿಂದ ರಸ್ತೆ ಸಾರಿಗೆಗೆ ಸಮಸ್ಯೆಯಾಗಿದೆ. ಅಲ್ಲದೇ ಮೆಟ್ರೋ ಸಂಚಾರ ಸಹ ನಿಲ್ಲಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:ಗಾಜಾ ಮೇಲೆ ಇಸ್ರೇಲ್‌ ದಾಳಿ – ಒಂದೇ ದಿನ 91 ಮಂದಿ ಸಾವು

  • 30 ಕೋಟಿ ಮೌಲ್ಯದ ಇಟಲಿ ಮೇಡ್‌ ಅಗಸ್ಟ ಹೆಲಿಕಾಪ್ಟರ್‌ ಖರೀದಿಸಿದ ಸತೀಶ್‌ ಜಾರಕಿಹೊಳಿ

    30 ಕೋಟಿ ಮೌಲ್ಯದ ಇಟಲಿ ಮೇಡ್‌ ಅಗಸ್ಟ ಹೆಲಿಕಾಪ್ಟರ್‌ ಖರೀದಿಸಿದ ಸತೀಶ್‌ ಜಾರಕಿಹೊಳಿ

    ಬೆಂಗಳೂರು: ಇಟಲಿ ಮೇಡ್‌ ಅಗಸ್ಟ ಹೆಲಿಕಾಪ್ಟರ್‌ ಅನ್ನು ಸಚಿವ ಸತೀಶ್‌ ಜಾರಕಿಹೊಳಿ ಖರೀದಿಸಿದ್ದಾರೆ.

    ಈ ಹೆಲಿಕಾಪ್ಟರ್‌ನ ಬೆಲೆ 30 ಕೋಟಿ ರೂ.. ಅಗಸ್ಟ ಡಬಲ್ ಇಂಜಿನ್ ಹೆಲಿಕಾಪ್ಟರ್ ಆಗಿದೆ. ಸತೀಶ್‌ ಜಾರಕಿಹೊಳಿ ಅವರು ಈ ಹಿಂದೆ ಸಿಂಗಲ್ ಇಂಜಿನ್ ಹೆಲಿಕಾಪ್ಟರ್ ಹೊಂದಿದ್ದರು.

    ಹಳೆ ಹೆಲಿಕಾಪ್ಟರ್ ಮಾರಾಟ ಮಾಡಿ ಹೊಸ ಇಟಲಿ ಮೇಡ್ ಡಬಲ್ ಇಂಜಿನ್ ಅಗಸ್ಟ ಹೆಲಿಕಾಪ್ಟರ್ ಖರೀದಿ ಮಾಡಿದ್ದಾರೆ.

  • ʼYou Are The Bestʼ – ಜಿ-7 ಶೃಂಗಸಭೆಯಲ್ಲಿ ಮೆಲೋಡಿ ಮೊಮೆಂಟ್

    ʼYou Are The Bestʼ – ಜಿ-7 ಶೃಂಗಸಭೆಯಲ್ಲಿ ಮೆಲೋಡಿ ಮೊಮೆಂಟ್

    ಒಟ್ಟಾವಾ: ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯಲ್ಲಿ (G7 Summit ) ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಇಟಾಲಿಯನ್ (Italy) ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಭೇಟಿಯಾಗಿದ್ದಾರೆ.

    ಮೋದಿ ಅವರನ್ನು ಭೇಟಿ ಆಗುತ್ತಿದ್ದಂತೆ ಮೆಲೋನಿ ಅವರು, ನೀವು ಅತ್ಯುತ್ತಮರು. ನಾನು ನಿಮ್ಮಂತೆ ಇರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಮೆಲೋನಿ ಮೋದಿ ಅವರಿಗೆ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು ನೆಟ್ಟಿಗರು ʼಮೆಲೋಡಿ ಮೊಮೆಂಟ್ʼ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

    ಕಳೆದ ವರ್ಷ ಇಟಲಿಯಲ್ಲಿ ಜಿ-7 ಶೃಂಗಸಭೆ ಆಯೋಜನೆಗೊಂಡಿತ್ತು. ಭಾರತದ ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ ಪ್ರಧಾನಿ ಮೋದಿ ಅವರಿಗೆ ಏಪ್ರಿಲ್‌ ತಿಂಗಳಿನಲ್ಲಿ ಜಿ7 ಸಭೆಗೆ ವಿಶೇಷ ಆಹ್ವಾನಿತರಾಗಿ ಆಗಮಿಸುವಂತೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಆಹ್ವಾನ ನೀಡಿದ್ದರು. ಈ ಶೃಂಗಸಭೆ ಮುಗಿದ ಬಳಿಕ ಮೆಲೋನಿ ಅವರು ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿ ‘Hello From The Melody Team’ ಎಂದು ಬರೆದು ಪೋಸ್ಟ್‌ ಮಾಡಿದ್ದರು.

    ಭಾರತ ಜಿ7 ದೇಶಗಳ ಒಕ್ಕೂಟದಲ್ಲಿ ಇಲ್ಲ. ಆದರೆ ವಿಶೇಷ ಅತಿಥಿಯಾಗಿ ಈ ಸಭೆಯಲ್ಲಿ ಭಾಗವಹಿಸಲು ಜಿ7 ರಾಷ್ಟ್ರಗಳು ಪ್ರಧಾನಿ ಮೋದಿ ಅವರಿಗೆ ಆಹ್ವಾನ ನೀಡುತ್ತಿವೆ. ಇದನ್ನೂ ಓದಿ: ಭಾರತಕ್ಕೆ ಯಾವುದೇ ದೇಶದ ಮಧ್ಯಸ್ಥಿಕೆ ಅಗತ್ಯವಿಲ್ಲ: ಟ್ರಂಪ್‌ಗೆ ಮೋದಿ ಸ್ಪಷ್ಟನೆ

     

    ಏನಿದು ಮೆಲೋಡಿ?
    ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ನರೇಂದ್ರ ಮೋದಿ ಇಬ್ಬರು ಉತ್ತಮ ಸ್ನೇಹಿತರಾಗಿದ್ದಾರೆ. ಜಿ20 ಸಮ್ಮೇಳನಕ್ಕೆ ಮೆಲೋನಿ ಬಂದಾಗ #Melodi ಹ್ಯಾಶ್‌ ಟ್ಯಾಗ್‌ ಫೇಮಸ್‌ ಆಗಿತ್ತು. ಮೆಲೋನಿ ಮತ್ತು ಮೋದಿ ಹೆಸರನ್ನು ಸೇರಿಸಿ ಅಭಿಮಾನಿಗಳು Melodi ಟ್ಯಾಗ್‌ ಬಳಸಿ ಪೋಸ್ಟ್‌ ಮಾಡುತ್ತಿದ್ದಾರೆ.

  • ನಾನು, ಟ್ರಂಪ್, ಮೋದಿ ಒಂದಾದ್ರೆ ಪ್ರಜಾಸತ್ತೆಗೆ ಬೆದರಿಕೆ ಹೇಗಾಗುತ್ತೆ?: ಮೆಲೋನಿ ಪ್ರಶ್ನೆ

    ನಾನು, ಟ್ರಂಪ್, ಮೋದಿ ಒಂದಾದ್ರೆ ಪ್ರಜಾಸತ್ತೆಗೆ ಬೆದರಿಕೆ ಹೇಗಾಗುತ್ತೆ?: ಮೆಲೋನಿ ಪ್ರಶ್ನೆ

    ವಾಷಿಂಗ್ಟನ್: ನಾನು, ಟ್ರಂಪ್ (Donald Trump), ಮೋದಿ (Narendra Modi) ಒಂದಾದ್ರೆ ಪ್ರಜಾಸತ್ತೆಗೆ ಬೆದರಿಕೆ ಹೇಗಾಗುತ್ತೆ? ಎಂದು ಇಟಲಿ ಪ್ರಧಾನಿ  ಜಾರ್ಜಿಯಾ ಮೆಲೋನಿ (Giorgia Meloni) ಅವರು ಎಡಪಂಥೀಯ ನಾಯಕರ ವಿರುದ್ಧ ಚಾಟಿ ಬೀಸಿದ್ದಾರೆ.

    ವಾಷಿಂಗ್ಟನ್‌ನಲ್ಲಿ (Washington) ನಡೆದ ಕನ್ಸರ್ವೇಟಿವ್ ಪೊಲಿಟಿಕಲ್ ಆ್ಯಕ್ಷನ್ ಕಾನ್ಫರೆನ್ಸ್(ಸಿಪಿಎಸಿ)ನಲ್ಲಿ ವಿಡಿಯೋ ಮೂಲಕ ಮಾತನಾಡಿದ ಅವರು, `ನಾನು, ಡೊನಾಲ್ಡ್ ಟ್ರಂಪ್, ಮೋದಿಯಂಥ ಬಲಪಂಥೀಯ ನಾಯಕರು ಬಂದಾದರೆ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎಂದು ಕೂಗೆಬ್ಬಿಸುತ್ತಾರೆ. ಆದರೆ ಅದೇ ಎಡಪಂಥೀಯ ನಾಯಕರು ಇದೇ ರೀತಿ ಮೈತ್ರಿ ಮಾಡಿಕೊಂಡಾಗ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಎಡಪಂಥೀಯರು ಟ್ರಂಪ್ ಅವರ ಗೆಲುವಿನಿಂದ ಆತಂಕಕ್ಕೊಳಗಾಗಿದ್ದಾರೆ. ಕನ್ನರ್ವೇಟಿವ್‌ಗಳು ಗೆಲ್ಲುತ್ತಿರುವುದು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಒಂದಾಗುತ್ತಿರುವುದು ಎಡಪಂಥೀಯರಿಗೆ ವಿಪರೀತ ಹೊಟ್ಟಯುರಿ ಉಂಟು ಮಾಡುತ್ತಿದೆ’ ಎಂದರು. ಇದನ್ನೂ ಓದಿ: ಬಲ್ಡೋಟಾ ಫ್ಯಾಕ್ಟರಿ ಸ್ಥಾಪನೆ ವಿರೋಧಿಸಿ ಕೊಪ್ಪಳ ಬಂದ್ ಕರೆ – ಶಾಲೆಗಳಿಗೆ ರಜೆ

    `ಬಿಲ್‌ಕ್ಲಿಂಟನ್ ಮತ್ತು ಹಿಂದಿನ ಬ್ರಿಟನ್ ಒರಧಾನಿ ಟೋನಿ ಬ್ಲೇರ್ ಅವರು 90ರ ದಶಕದಲ್ಲಿ ಅಂತಾರಾಷ್ಟ್ರೀಯ ಎಡಪಂಥೀಯ ಉದಾರವಾದಿ ನೆಟ್‌ವರ್ಕ್ ರಚಿಸಿದಾಗ ಅವರನ್ನು `ಮುತ್ಸದ್ದಿಗಳು’ ಎಂದು ಕರೆಯಲಾಯಿತು. ಆದರೆ ಇದೀಗ ಟ್ರಂಪ್, ಮೆಲೋನಿ, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಅಥವಾ ಪ್ರಧಾನಿ ಮೋದಿ ಅವರು ಪರಸ್ಪರ ಮಾತುಕತೆ ನಡೆಸಿದರೆ `ಪ್ರಜಾಪ್ರಭುತ್ವಕ್ಕೆ ಬೆದರಿಕೆ’ ಎನ್ನುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮತದಾನಕ್ಕೆ ಅಮೆರಿಕ ದೇಣಿಗೆ ನೀಡಿಲ್ಲ, 7 ಯೋಜನೆಗಳಿಗಷ್ಟೇ ಧನಸಹಾಯ – ಹಣಕಾಸು ಸಚಿವಾಲಯ

    ಈ ಎಡಪಂಥೀಯರ ದ್ವಿಮುಖ ನೀತಿ ನಮಗೆ ಅಭ್ಯಾಸವಾಗಿ ಹೋಗಿದೆ. ಅವರು ನಮ್ಮ ಮೇಲೆ ಎಷ್ಟೇ ಕೆಸರೆರಚಿದರೂ ಎಡಪಂಥೀಯರ ಸುಳ್ಳುಗಳನ್ನು ಜನ ನಂಬುತ್ತಿಲ್ಲ. ಜನ ನಮಗೇ ಮತಹಾಕುತ್ತಿದ್ದಾರೆ’ ಎಂದು ಮೆಲೋನಿ ಹೇಳಿದರು. ನಾವು ಸ್ವಾತಂತ್ರ್ಯವನ್ನು ರಕ್ಷಿಸುತ್ತೇವೆ. ಹಸಿರು ಎಡಪಂಥೀಯರ ಹುಚ್ಚುತನದಿಂದ ಜನರನ್ನು ರಕ್ಷಿಸುತ್ತೇವೆ ಎಂದು ನುಡಿದರು. ಇದನ್ನೂ ಓದಿ: ಬ್ಯಾಂಕಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಟ್ಟರೆ ಸೇಫ್ ಆಗಿರುತ್ತಾ, ಇಲ್ವಾ? – ಏನಿದು ಠೇವಣಿ ವಿಮೆ?

  • 95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?

    95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಜನಿಸಿಲ್ಲ – ಇದರ ಹಿಂದಿನ ನಿಗೂಢ ಕಾರಣವೇನು?

    ಪ್ರಪಂಚದ ಅನೇಕ ದೇಶಗಳು ವಿವಿಧ ರೀತಿಯ ನಿಗೂಢ ವಿಷಯಗಳನ್ನು ಹೊಂದಿವೆ. ಅದರಲ್ಲಿ ಇಟಲಿಯ ರೋಮ್‌ನಲ್ಲಿರುವ ವ್ಯಾಟಿಕನ್ ಸಿಟಿಯೂ (Vatican City) ಒಂದು. ರೋಮನ್ ಕ್ಯಾಥೋಲಿಕ್ ಕ್ರಿಶ್ಚಿಯನ್ ಧರ್ಮದ ಎಲ್ಲಾ ಮಹಾನ್ ಧಾರ್ಮಿಕ ಮುಖಂಡರು ಇಲ್ಲಿ ವಾಸಿಸುತ್ತಿದ್ದಾರೆ. ಪೋಪ್ ಇಲ್ಲಿ ಆಳ್ವಿಕೆ ನಡೆಸುತ್ತಾರೆ. ವಿವಿಧ ದೇಶಗಳಿಗೆ ಹೋಲಿಸಿದಾಗ ಈ ದೇಶವು ಒಂದು ವಿಭಿನ್ನತೆಯನ್ನು ಹೊಂದಿದೆ.

    ಕಳೆದ 95 ವರ್ಷಗಳಿಂದ ಒಂದೇ ಒಂದು ಮಗುವೂ ಇಲ್ಲಿ ಜನಿಸಿಲ್ಲ. ಹೌದು. ಫೆಬ್ರವರಿ 11, 1929 ರಂದು ದೇಶವನ್ನು ರಚಿಸಲಾಯಿತು. 95 ವರ್ಷಗಳು ಕಳೆದರೂ ಇಲ್ಲಿ ಒಂದೇ ಒಂದು ಮಗು ಜನಿಸದಿರುವುದು ಆಶ್ಚರ್ಯಕರವಾಗಿದೆ. ಇದು ವಿಶ್ವದ ಅತ್ಯಂತ ಚಿಕ್ಕ ದೇಶವೂ ಆಗಿದೆ. ಈ ಚಿಕ್ಕ ರಾಷ್ಟ್ರದಲ್ಲಿ, ಸುಮಾರು 800 ಜನರು ವಾಸಿಸುತ್ತಿದ್ದು, ಅದರಲ್ಲಿ ಕೇವಲ 30 ಮಹಿಳೆಯರು ಇದ್ದಾರೆ ಎನ್ನಲಾಗುತ್ತಿದೆ.

    ಈ ದೇಶ ರಚನೆಯಾದ ನಂತರ ಇಲ್ಲಿ ಯಾವುದೇ ಆಸ್ಪತ್ರೆಗಳನ್ನು ಸ್ಥಾಪನೆ ಮಾಡಿಲ್ಲ. ಆಸ್ಪತ್ರೆಗೆ ನಿರ್ಮಿಸುವಂತೆ ಹಲವಾರು ಬಾರಿ ವಿನಂತಿಸಲಾಯಿತು ಆದರೂ ಕೂಡ ಪ್ರತಿ ಬಾರಿ ಈ ಮನವಿಯನ್ನು ತಿರಸ್ಕರಿಸಲಾಗಿದೆ. ಇಲ್ಲಿ ಯಾರಾದರೂ ತೀವ್ರವಾಗಿ ಅಸ್ವಸ್ಥರಾದರೆ ಅಥವಾ ಮಹಿಳೆ ಗರ್ಭಿಣಿಯಾದರೆ, ಆಕೆಯನ್ನು ರೋಮ್‌ನಲ್ಲಿರುವ ಆಸ್ಪತ್ರೆಗೆ ಕಳುಹಿಸಲಾಗುತ್ತದೆ.

    ವ್ಯಾಟಿಕನ್ ಸಿಟಿಯಲ್ಲಿ ಆಸ್ಪತ್ರೆಯನ್ನು ತೆರೆಯದಿರಲು ನಿರ್ಧರಿಸಲು ಅದರ ಸಣ್ಣ ಗಾತ್ರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳು ಕಾರಣ ಎಂದು ಹೇಳಲಾಗುತ್ತದೆ. ವ್ಯಾಟಿಕನ್ ಸಿಟಿಯ ವಿಸ್ತೀರ್ಣ ಕೇವಲ 118 ಎಕರೆ. ಎಲ್ಲಾ ರೋಗಿಗಳು ಚಿಕಿತ್ಸೆಗಾಗಿ ರೋಮ್‌ನಲ್ಲಿರುವ ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳಿಗೆ ಹೋಗಬೇಕು.

    ಇಲ್ಲಿ ಹೆರಿಗೆ ಆಸ್ಪತ್ರೆ ಇಲ್ಲದ ಕಾರಣ ಯಾರೂ ಹೆರಿಗೆ ಮಾಡುವಂತಿಲ್ಲ. ಹಾಗಾಗಿ ವೈದ್ಯಕೀಯ ಸೌಲಭ್ಯಗಳು ಬೇಕಿದ್ದರೆ ಹೊರಗೆ ಹೋಗಬೇಕಾಗುತ್ತದೆ. ಸಹಜ ಹೆರಿಗೆಯನ್ನು ಮಾಡುವುದಾಗಲಿ ಅಥವಾ ಅದಕ್ಕೆ ಅನುಮತಿಸುವ ಅವಕಾಶ ಇಲ್ಲ. ಇಲ್ಲಿರುವ ಮಹಿಳೆ ಗರ್ಭ ಧರಿಸಿ ಹೆರಿಗೆಯ ಸಮಯ ಸಮೀಪಿಸುತ್ತಿದ್ದಂತೆ.. ಇಲ್ಲಿನ ನಿಯಮಗಳ ಪ್ರಕಾರ ಆಕೆ ಮಗುವಿಗೆ ಜನ್ಮ ನೀಡುವವರೆಗೂ ಇಲ್ಲಿಂದ ಹೊರಡಬೇಕು.

    ಇನ್ನೂ ವ್ಯಾಟಿಕನ್ ನಗರದಲ್ಲಿ ಪಿತೃತ್ವವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ನಿಯಮವು ಪಾದ್ರಿಗಳ ಧಾರ್ಮಿಕ ನಂಬಿಕೆಗಳಲ್ಲಿ ಆಳವಾಗಿ ಬೇರೂರಿದೆ. ಅಲ್ಲಿನ ನಿವಾಸಿಗಳು ಪ್ರಧಾನವಾಗಿ ಪಾದ್ರಿಗಳನ್ನು ಮದುವೆಯಾಗುವುದನ್ನು ಅಥವಾ ಅವರೊಂದಿಗೆ ಮಕ್ಕಳು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಬ್ರಹ್ಮಚರ್ಯದ ಪ್ರತಿಜ್ಞೆಯನ್ನು ಸಾಮಾನ್ಯವಾಗಿ ಎತ್ತಿಹಿಡಿಯಲಾಗಿದ್ದರೂ, ಪಾದ್ರಿಗಳು ಈ ಪ್ರತಿಜ್ಞೆಯನ್ನು ಮುರಿದರೆ, ಮಕ್ಕಳ ಜನನಕ್ಕೆ ಅಪವಾದಗಳಿವೆ ಎಂದು ನಂಬಲಾಗಿದೆ.

    ಈ ನಿಯಮದಿಂದಾಗಿಯೇ ವ್ಯಾಟಿಕನ್ ಸಿಟಿಯಲ್ಲಿ 95 ವರ್ಷಗಳಿಂದ ಒಂದೇ ಒಂದು ಮಗು ಜನಿಸಿಲ್ಲ. ವ್ಯಾಟಿಕನ್ ನಗರದಲ್ಲಿ ಯಾರೂ ಶಾಶ್ವತ ಪೌರತ್ವವನ್ನು ಪಡೆಯುವುದಿಲ್ಲ, ಎಲ್ಲಾ ನಿವಾಸಿಗಳು ತಮ್ಮ ಅಧಿಕಾರಾವಧಿಯ ಅವಧಿಯವರೆಗೆ ಮಾತ್ರ ಇಲ್ಲಿಯೇ ಇರುತ್ತಾರೆ, ಅಲ್ಲಿಯವರೆಗೆ ಅವರಿಗೆ ತಾತ್ಕಾಲಿಕ ಪೌರತ್ವವನ್ನು ನೀಡಲಾಗುತ್ತದೆ.

  • ರೇಪ್‌ ಆರೋಪಿಗಳಿಗೆ ಪುರುಷತ್ವ ಹರಣ – ಇಟಲಿಯಲ್ಲಿ ಶೀಘ್ರವೇ ಬರಲಿದೆ ಹೊಸ ಕಾನೂನು

    ರೇಪ್‌ ಆರೋಪಿಗಳಿಗೆ ಪುರುಷತ್ವ ಹರಣ – ಇಟಲಿಯಲ್ಲಿ ಶೀಘ್ರವೇ ಬರಲಿದೆ ಹೊಸ ಕಾನೂನು

    ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಕ್ಕಳು ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ನೇತೃತ್ವದ ಇಟಲಿ ಸರ್ಕಾರ ಹೊಸ ಕಾನೂನುಗಳನ್ನು (New Law) ಜಾರಿಗೆ ತರಲು ಮುಂದಾಗಿದೆ. ಅತ್ಯಾಚಾರ ಎಸಗುವವರಿಗೆ ಘೋರ ಶಿಕ್ಷೆ ವಿಧಿಸಲಾಗುತ್ತದೆ.

    ಹೌದು. ಅತ್ಯಾಚಾರ ಎಸಗುವ ಆರೋಪಿಗಳಿಗೆ ರಾಸಾಯನಿಕ ವಸ್ತುಗಳನ್ನು ಇಂಜೆಕ್ಟ್ ಮಾಡುವ ಮೂಲಕ ಪುರುಷತ್ವಹರಣ ಮಾಡಲಾಗುತ್ತದೆ. ಇದನ್ನು ಕೆಮಿಕಲ್‌ ಕ್ಯಾಸ್ಟ್ರೇಶನ್‌ (Chemical Castration) ಎಂದೂ ಸಹ ಕರೆಯಲಾಗುತ್ತದೆ. ಇಂಜೆಕ್ಷನ್ ನೀಡುವ ಮೂಲಕ ಟೆಸ್ಟೋಸ್ಟಿರಾನ್ ಉತ್ಪತ್ತಿಯಾಗುವುದನ್ನು ತಡೆಯಲಾಗುತ್ತದೆ. ಈ ಮೂಲಕ ಲೈಂಗಿಕ ಬಯಕೆಯನ್ನು ಕಡಿಮೆ ಮಾಡಿ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕುವ ಪ್ರಯತ್ನಕ್ಕೆ ಮುಂದಾಗಿದೆ. ಆದ್ರೆ ಸರ್ಕಾರದ ಈ ಕ್ರಮವನ್ನು ವಿಪಕ್ಷಗಳು ವಿರೋಧಿಸಿದ್ದು, ಇದು ಮಾನವತೆ ಮತ್ತು ನ್ಯಾಯದ ಉಲ್ಲಂಘನೆ ಎಂದು ಹೇಳಿವೆ.

    ಅಷ್ಟಕ್ಕೂ ಕೆಮಿಕಲ್‌ ಕ್ಯಾಸ್ಟ್ರೇಶನ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ? ಬೇರಾವುದೇ ದೇಶದಲ್ಲಿ ಅತ್ಯಾಚಾರಿಗಳಿಗೆ ಇಂತಹ ಶಿಕ್ಷೆ ಇದೆಯೇ? ಇದರಿಂದ ನಿಜವಾಗಿಯೂ ಲೈಂಗಿಕ ಅಪರಾಧಗಳನ್ನು ತಡೆಯಬಹುದೇ? ಎಂಬ ಬಗ್ಗೆ ತಿಳಿಯಬೇಕೆ? ಹಾಗಿದ್ದರೆ ಮುಂದೆ ಓದಿ. ಇದನ್ನೂ ಓದಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ದರ ಏರಿಕೆ ಬಿಸಿ – ಇಂದಿನಿಂದಲೇ ಹೊಸ ದರ ಅನ್ವಯ

    ಕೆಮಿಕಲ್‌ ಕ್ಯಾಸ್ಟ್ರೇಷನ್‌ ಏನಿದು ಚಿಕಿತ್ಸೆ?

    ಕೆಮಿಕಲ್‌ ಕ್ಯಾಸ್ಟ್ರೇಷನ್‌ ವೈದ್ಯಕೀಯ ಪ್ರಕ್ರಿಯೆಯಾಗಿದೆ. ದೇಹದಲ್ಲಿ ಟೆಸ್ಟೋಸ್ಟೆರಾನ್‌ನಂತಹ (Testosterone) ಹಾರ್ಮೋನು ಮಟ್ಟವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಅಪರಾಧಿಗಳಲ್ಲಿ ಲೈಂಗಿಕ ಬಯಕೆಯ ಮಟ್ಟ ಕಡಿಮೆಯಾಗುತ್ತದೆ. ಆದ್ರೆ ಇದು ಶಾಶ್ವತ ಪರಿಹಾರವಲ್ಲ ಎಂದೂ ತಜ್ಞರು ಹೇಳಿದ್ದಾರೆ. ಕೆಮಿಕಲ್‌ ಕ್ಯಾಸ್ಟ್ರೇಷನ್‌ ಪರಿಣಾಮವು ಒಂದು ನಿರ್ದಿಷ್ಟ ಅವಧಿಯವರೆಗೆ ಕೆಲಸ ಮಾಡುತ್ತದೆ. ನಂತರ ಚಿಕಿತ್ಸೆಗೆ ಒಳಗಾದ ಪುರುಷರಲ್ಲಿ ಮತ್ತೆ ಲೈಂಗಿಕ ಬಯಕೆ ಉಂಟಾಗುತ್ತದೆ. ಹಾಗಾಗಿ ಅಪರಾಧಿಗಳಿಗೆ ನಿರ್ದಿಷ್ಟ ಅವಧಿ ಮುಗಿದ ಬಳಿಕ ಮತ್ತೆ ಔಷಧವನ್ನು ಇಂಜೆಕ್ಟ್‌ ಮಾಡಬೇಕಾಗುತ್ತದೆ ಎಂದು ಹೇಳಲಾಗಿದೆ.

    ವಿರೋಧ ಏಕೆ?

    ಏಕೆಂದರೆ ಕೆಮಿಕಲ್‌ ಇಂಜೆಕ್ಟ್‌ ಮಾಡುವುದರಿಂದ ಅಪರಾಧಿಗೆ ತಪ್ಪಿನ ಅರಿವಾಗುವುದಿಲ್ಲ. ಲೈಂಗಿಕ ಬಯಕೆಯನ್ನು ಒಂದು ಕಾಲಮಿತಿಯವರೆಗೆ ತಡೆಯಬಹುದೇ ಹೊರತು ಅವರ ಕೋಪವನ್ನು ಕಡಿಮೆ ಮಾಡಲಾಗುವುದಿಲ್ಲ. ಅಲ್ಲದೇ ಶಿಕ್ಷೆ ಅವಧಿ ಮುಗಿದ ಬಳಿಕ ಅವನು ಮತ್ತೆ ಅಪರಾಧ ಎಸಗಬಹುದು. ಅಲ್ಲದೇ ಲೈಂಗಿಕ ಬಯಕೆ ಕಡಿಮೆಯಾದ್ರೆ ಆಕ್ರಮಣಕಾರಿ ಸ್ವಭಾವದಿಂದ ಮಹಿಳೆಯರು, ಮಕ್ಕಳನ್ನ ಕೊಲ್ಲುವ ಪ್ರವೃತ್ತಿ ಬೆಳೆಸಿಕೊಳ್ಳಬಹುದು. ಹಾಗಾಗಿ ಈ ರೀತಿಯ ಕಾನೂನು ತರುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆ – ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ 67 FIR

    ಅಪರಾಧ ಕಡಿಮೆಯಾಗಿದೆಯೇ?

    ಈಗಾಗಲೇ ಕೆಲ ದೇಶಗಳಲ್ಲಿ ಲೈಂಗಿಕ ಅಪರಾಧಿಗಳಿಗೆ ಈ ಶಿಕ್ಷೆ ನೀಡಲಾಗುತ್ತಿದೆ. ಇದರಿಂದ ಅಪರಾಧ ಕಡಿಮೆಯಾಗಿದೆಯೇ ಎನ್ನುವ ಬಗ್ಗೆ ನೇರ ವರದಿಗಳಿಲ್ಲ. 2017ರಲ್ಲಿ ಇಂಡೋನೇಷ್ಯಾದಲ್ಲಿ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಈ ಶಿಕ್ಷೆ ನೀಡಲಾಗಿತ್ತು. ಇಂಡೋನೇಷಿಯನ್ ವಿಟ್ನೆಸ್ ಮತ್ತು ವಿಕ್ಟಿಮ್ ಪ್ರೊಟೆಕ್ಷನ್ ಏಜೆನ್ಸಿ ಪ್ರಕಾರ, 2017ರಲ್ಲಿ ಇಂಡೋನೇಷ್ಯಾದಲ್ಲಿ 70 ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿತ್ತು. 2018-2019ರಲ್ಲಿ ಈ ಪ್ರಕರಣಗಳ ಸಂಖ್ಯೆ 149ಕ್ಕೆ ಏರಿಕೆಯಾಗಿತ್ತು. 200-21ಕ್ಕೆ ಇದರ ಶೇಕಡಾವಾರು ಪ್ರಮಾಣ ಶೇ.50ಕ್ಕೆ ಏರಿಕೆಯಾಗಿತ್ತು. ಹಾಗಾಗಿ ಅಲ್ಲಿ ಈ ಚಿಕಿತ್ಸೆ ಕೊಡಲು ಜಾರಿಗೆ ತರಲಾಗಿತ್ತು. ಇದನ್ನೂ ಓದಿ: ರಸ್ತೆ, ರೈಲು ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು: ಸುಪ್ರೀಂ

    ಯಾವ್ಯಾವ ದೇಶಗಳಲ್ಲಿ ಚಿಕಿತ್ಸೆ?

    * ಕೆಮಿಕಲ್ ಕ್ಯಾಸ್ಟ್ರೇಶನ್ ಅನ್ನು ಮೊದಲ ಬಾರಿಗೆ ಅಮೇರಿಕಾದಲ್ಲಿ 1966 ರಲ್ಲಿ ಮಾಡಲಾಯಿತು. ಈಗ ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಜಾರ್ಜಿಯಾ ಮತ್ತು ಟೆಕ್ಸಾಸ್ ಸೇರಿದಂತೆ 9 ರಾಜ್ಯಗಳು ಶಿಶುಕಾಮಿಗಳಿಗೆ ಈ ಶಿಕ್ಷೆ ನೀಡುತ್ತಿವೆ.
    * 2009ರ ಸೆಪ್ಟೆಂಬರ್‌ನಲ್ಲಿ ಪೋಲೆಂಡ್ ಸಂಸತ್ತು ತನ್ನ ದಂಡ ಸಂಹಿತೆ ಬದಲಾಯಿಸಿದ ನಂತರ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವವರಿಗೆ ಈ ಶಿಕ್ಷೆ ನೀಡಲು ನಿರ್ಧರಿಸಿತು.
    * ರಷ್ಯಾದಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಲೈಂಗಿಕ ಅಪರಾಧಿಗಳಿಗೆ ಆಂಡ್ರೊಜೆನ್-ತಡೆಗಟ್ಟುವ ಔಷಧಿಗಳನ್ನು ನೀಡಲಾಗುತ್ತಿದೆ.
    * 2012ರಲ್ಲಿ ಯುರೋಪಿಯನ್ ದೇಶವಾದ ಎಸ್ಟೋನಿಯಾದಲ್ಲಿ ಈ ಶಿಕ್ಷೆ ಕೊಡಲು ಪ್ರಾರಂಭವಾಯಿತು. ಈ ಔಷಧಿಯನ್ನು ಕೆಲವು ತಿಂಗಳವರೆಗೆ ನೀಡದೇ ಮೂರು ವರ್ಷಗಳವರೆಗೆ ನಿರಂತರವಾಗಿ ನೀಡಬೇಕು ಎಂದು ನ್ಯಾಯಾಲಯ ಹೇಳಿತ್ತು.
    * ಜೊತೆಗೆ ಉಕ್ರೇನ್, ಕೆನಡಾ, ಡೆನ್ಮಾರ್ಕ್, ಜರ್ಮನಿ, ಇಸ್ರೇಲ್, ನಾರ್ವೆ ಮತ್ತು ಸ್ವೀಡನ್‌ನಂತಹ ಅನೇಕ ದೇಶಗಳಲ್ಲಿಯೂ ಶಿಶುಕಾಮಿಗಳಿಗೆ ರಾಸಾಯನಿಕ ಕ್ಯಾಸ್ಟ್ರೇಶನ್ ಶಿಕ್ಷೆಯನ್ನಾಗಿ ನೀಡಲಾಗುತ್ತಿದೆ.

    ಕೈದಿಗಳೇ ಈ ಶಿಕ್ಷೆಗೆ ಒಪ್ಪಿದ್ದು ಏಕೆ?

    ಅಮೆರಿಕದಂತಹ ದೇಶಗಳಲ್ಲಿ ಕೆಲ ಕೈದಿಗಳು ಕೆಮಿಕಲ್‌ ಕ್ಯಾಸ್ಟ್ರೇಷನ್‌ ಚಿಕಿತ್ಸೆಯನ್ನ ಖುದ್ದು ಆಯ್ಕೆ ಮಾಡಿಕೊಂಡಿದ್ದಾರೆ. ಕೈದಿಗಳು ಸ್ವತಃ ಈ ಚಿಕಿತ್ಸೆ ಒಪ್ಪಿದರೆ ಅವರು ತಮ್ಮ ಶಿಕ್ಷೆಯಿಂದ ಮುಕ್ತರಾಗುತ್ತಾರೆ. ಕೆಲವರಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಕೂಡ ಮಾಡಿಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

  • G7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ತಲುಪಿದ ಪ್ರಧಾನಿ ಮೋದಿ

    G7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಟಲಿ ತಲುಪಿದ ಪ್ರಧಾನಿ ಮೋದಿ

    – ಮೂರನೇ ಬಾರಿಗೆ ಪ್ರಧಾನಿಯಾದ ಬಳಿಕ ಮೊದಲ ಪ್ರವಾಸ

    ರೋಮ್:‌ G7 ಶೃಂಗಸಭೆಯಲ್ಲಿ (G7- Summit) ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಇಟಲಿಗೆ ತಲುಪಿದ್ದಾರೆ. ಮೋದಿಯವರನ್ನು ಸ್ವಾಗತಿಸಲು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಕೂಡ ಬ್ರಿಂಡಿಸಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

    ಇಟಲಿಯ ಬ್ರಿಂಡಿಸಿ ವಿಮಾನ ನಿಲ್ದಾಣ ತಲುಪಿದ ಬಳಿಕ ಎಕ್ಸ್ ಮಾಡಿರುವ ಮೋದಿ (Narendra Modi), ನಾನು G7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿ ತಲುಪಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಅರ್ಥಪೂರ್ಣ ಚರ್ಚೆಗಾಗಿ ವಿಶ್ವ ನಾಯಕರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

    ಜೊತೆಗೆ ಜಾಗತಿಕ ಸವಾಲುಗಳನ್ನು ಪರಿಹರಿಸುವುದು ಮತ್ತು ಉಜ್ವಲ ಭವಿಷ್ಯಕ್ಕಾಗಿ ಅಂತರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವುದು ನಮ್ಮ ಗುರಿ ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ರಿಯಾಸಿ ಬಸ್‌ ಮೇಲೆ ದಾಳಿ – 50 ಸ್ಥಳೀಯರನ್ನು ವಶಕ್ಕೆ ಪಡೆದ ಪೊಲೀಸರು

    ಜಿ7 ಶೃಂಗಸಭೆಯಲ್ಲಿ ಮೋದಿ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸೇರಿದಂತೆ ಹಲವು ವಿಶ್ವ ನಾಯಕರನ್ನು ಭೇಟಿಯಾಗಲಿದ್ದಾರೆ. ಮೂರನೇ ಬಾರಿಗೆ ಭಾರತದ ಪ್ರಧಾನಿಯಾದ ನಂತರ ಪ್ರಧಾನಿ ಮೋದಿಯವರ ಮೊದಲ ವಿದೇಶಿ ಪ್ರವಾಸ ಇದಾಗಿದೆ.

    G7 ಯುಎಸ್, ಬ್ರಿಟನ್, ಫ್ರಾನ್ಸ್, ಇಟಲಿ, ಜರ್ಮನಿ, ಕೆನಡಾ ಮತ್ತು ಜಪಾನ್ ಅನ್ನು ಒಳಗೊಂಡಿದೆ. ಪ್ರಸ್ತುತ ಇಟಲಿ G7 (ಗ್ರೂಪ್ ಆಫ್ ಸೆವೆನ್) ಶೃಂಗಸಭೆಯ ಅಧ್ಯಕ್ಷತೆ ಮತ್ತು ಆತಿಥ್ಯ ವಹಿಸುತ್ತಿದೆ.

  • ನಟಿ ಜಾಹ್ನವಿ ಬಾಯ್ ಫ್ರೆಂಡ್ ಜೊತೆ ಇಟಲಿಗೆ ಹಾರಿದ್ದೇಕೆ?

    ನಟಿ ಜಾಹ್ನವಿ ಬಾಯ್ ಫ್ರೆಂಡ್ ಜೊತೆ ಇಟಲಿಗೆ ಹಾರಿದ್ದೇಕೆ?

    ಬಾಲಿವುಡ್‌ನಲ್ಲಿ (Bollywood) ಆಗಾಗ ಗುಸು-ಗುಸು ಪಿಸು-ಪಿಸು ಮಾತುಗಳು ಕೇಳಿಬರೋದು ಸರ್ವೆಸಾಮಾನ್ಯ. ಅದರಲ್ಲೂ ನಟ, ನಟಿಯರ ವಿಷ್ಯದಲ್ಲಂತೂ ಈ ಸುದ್ದಿ ಬೇಗನೇ ಸ್ಪ್ರೆಡ್ ಆಗಿಬಿಡುತ್ತೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್ (Jahnavi Kapoor) ಹಾಗೂ ಶಿಖರ್ ಪಹಾರಿಯಾ  (Shikhar Pahariya)ವಿಷ್ಯದಲ್ಲೂ ಈ ಸುದ್ದಿ ಆಗಾಗ ಕೇಳಿ ಬರ್ತಾನೇ ಇರುತ್ತೆ. ಅದಕ್ಕೆ ಪುಷ್ಟಿ ಎಂಬಂತೆ ಮತ್ತೊಂದು ಸಾಕ್ಷಿ ನಿಮ್ಮ ಮುಂದಿದೆ.

    ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಪ್ರೀ-ವೆಡ್ಡಿಂಗ್ ಇತ್ತೀಚೆಗೆ ಇಟಲಿಯಲ್ಲಿ (Italy) ಅದ್ಧೂರಿಯಾಗಿ ನೆರವೇರಿದೆ. ಈ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಅನೇಕ ಬಾಲಿವುಡ್ ತಾರೆಯರು ಭಾಗಿಯಾಗಿದ್ದರು. ಅದರಂತೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸಹ ತಮ್ಮ ಬಾಯ್‌ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದು ವಿಶೇಷಗಳಲ್ಲಿ ವಿಶೇಷ.

    ಹೌದು, ತಮ್ಮ ಬಾಯ್‌ಫ್ರೆಂಡ್ ಶಿಖರ್ ಪಹಾರಿಯಾ ಕೈ ಹಿಡಿದು ನಡೆದಿದ್ದಾರೆ ಬಾಲಿವುಡ್ ಬ್ಯೂಟಿ ಜಾಹ್ನವಿ ಕಪೂರ್. ಬಾಲಿವುಡ್ ಅಂಗಳದಲ್ಲಿ ಜಾಹ್ನವಿ ಕಪೂರ್ ಹಾಗೂ ಶಿಖರ್ ಪಹಾರಿಯಾ ಸುದ್ದಿ ಆಗಾಗ ಮೇನ್ ಸ್ಟ್ರೀಮ್ ಗೆ  ಬರ್ತಾನೆ ಇತ್ತು. ಅದಕ್ಕೆಲ್ಲ ಕ್ಯೂಟ್ ನಟಿ ಜಾನು ಆನ್ಸರ್ ಮಾಡ್ತಾನೆ ಬಂದಿದ್ದಾರೆ. ಇದೀಗ ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್‌ನಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನ ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಜಾಹ್ನವಿ.

  • MBA ಓದಲು ಇಟಲಿಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ

    MBA ಓದಲು ಇಟಲಿಗೆ ತೆರಳಿದ್ದ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ

    ರೋಮ್:‌ ಭಾರತೀಯ ವಿದ್ಯಾರ್ಥಿಯೊಬ್ಬ (Indian Student) ಇಟಲಿಯಲ್ಲಿ (Italy) ನಿಗೂಢವಾಗಿ ಸಾವನ್ನಪ್ಪಿರುವ ಬಗ್ಗೆ ಬೆಳಕಿಗೆ ಬಂದಿದ್ದು, ಇದೀಗ ಆತನ ಕುಟುಂಬದವರು ಸರ್ಕಾರದ ನೆರವು ಬಯಸಿದ್ದಾರೆ.

    ಮೃತನನ್ನು ರಾಮ್‌ ರಾವತ್‌ ಎಂದು ಗುರುತಿಸಲಾಗಿದ್ದು, ಈತ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ನಿವಾಸಿ. ಪೊಲೀಸರ ಪ್ರಕಾರ, ರಾವುತ್ ಎಂಬಿಎ (MBA) ಓದಲು ಇಟಲಿಗೆ ಹೋಗಿದ್ದು, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹೊಸ ವರ್ಷದ ಶುಭಾಶಯಗಳನ್ನು ತಿಳಿಸಲು ರಾವುತ್ ಅವರ ಪೋಷಕರು ಕರೆ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ.

    ಪೋಷಕರು ಮಾಡಿದ ಕರೆಯನ್ನು ರಾವತ್‌ ಸ್ವೀಕರಿಸಲಿಲ್ಲ. ಹೀಗಾಗಿ ಸಂಶಯಗೊಂಡ ಅವರು ವಸತಿಗೃಹದ ಮಾಲೀಕರನ್ನು ಸಂಪರ್ಕಿಸಿದರು. ಈ ವೇಳೆ ಅವರು ಮತ್ತೊಂದು ಮನೆಯ ವಾಶ್ ರೂಂನಲ್ಲಿ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಪಾ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ- 44 ಯುವತಿಯರ ರಕ್ಷಣೆ

    ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಪೋಷಕರು ಕಂಗಾಲಾಗಿದ್ದಾರೆ. ಅಲ್ಲದೇ ಆತನ ಮೃತದೇಹವನ್ನು ಭಾರತಕ್ಕೆ (India) ಕರೆತರಲು ಜಾರ್ಖಂಡ್‌ನ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳನ್ನು ಸಂಪರ್ಕಿಸಿ ಮನವಿ ಮಾಡಿಕೊಂಡಿದ್ದಾರೆ.

    ಘಟನೆಯ ಕುರಿತು ಮಾತನಾಡಿದ ಪಶ್ಚಿಮ ಸಿಂಗ್‌ಭೂಮ್‌ನ ಡೆಪ್ಯೂಟಿ ಕಮಿಷನರ್ ಅನನ್ಯ ಮಿತ್ತಲ್, ರಾಮ್ ರಾವತ್ ಸಾವಿನ ಬಗ್ಗೆ ನನಗೆ ಮಾಹಿತಿ ಬಂದಿದೆ. ಅಗತ್ಯ ಕ್ರಮಕ್ಕಾಗಿ ಗೃಹ ಇಲಾಖೆ ಮತ್ತು ಜಾರ್ಖಂಡ್‌ನ ವಲಸೆ ಸೆಲ್‌ಗೆ ತಿಳಿಸಲಾಗಿದೆ ಎಂದು ಹೇಳಿದರು.

    ಪ್ರಕರಣದ ಎಲ್ಲಾ ಬೆಳವಣಿಗೆಗಳ ಮೇಲೆ ನಿಗಾ ಇಡುತ್ತಿದ್ದೇನೆ. ರಾಮ್‌ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಮಿತ್ತಲ್ ಹೇಳಿದ್ದಾರೆ.