Tag: IT Rad

  • ಕಾಂಗ್ರೆಸ್ ಕಚೇರಿ ಮೇಲೆ ಐಟಿ ದಾಳಿ- 8.5 ಲಕ್ಷ ವಶಕ್ಕೆ

    ಕಾಂಗ್ರೆಸ್ ಕಚೇರಿ ಮೇಲೆ ಐಟಿ ದಾಳಿ- 8.5 ಲಕ್ಷ ವಶಕ್ಕೆ

    – ಕಚೇರಿಯ ಆವರಣದಲ್ಲಿ ನಿಲ್ಲಿಸಿದ ಕಾರಿನಲ್ಲಿ ಹಣ ಪತ್ತೆ
    – ಚುನಾವಣೆ ಹೊತ್ತಲ್ಲೇ ಐಟಿ ದಾಳಿ

    ಪಾಟ್ನಾ: ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಬಿಹಾರದ ಕಾಂಗ್ರೆಸ್ ಪ್ರಧಾನ ಕಚೇರಿ ಸದಾಕತ್ ಆಶ್ರಮದ ಮೇಲೆ ಆದಾಯ ತೆರಿಗೆ ಅಧಿಕಾರಿ(ಐಟಿ)ಗಳು ದಾಳಿ ನಡೆಸಿದ್ದು, ಕಚೇರಿಯ ಆವರಣದ ಪಾರ್ಕಿಂಗ್‍ನಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 8.5 ಲಕ್ಷ ರೂ.ಪತ್ತೆಯಾಗಿದೆ.

    ಪಾಟ್ನಾದಲ್ಲಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತ ಎಂದು ನಂಬಲಾದ ಅಶುತೋಷ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಕಾರಿನಲ್ಲಿದ್ದ 8.5 ಲಕ್ಷ ರೂ.ಹಣವನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಕಾಂಗ್ರೆಸ್ ಕಚೇರಿಯಲ್ಲಿ ಹಣ ಪತ್ತೆಯಾದ ಕುರಿತು ಬಿಹಾರ್ ಕಾಂಗ್ರೆಸ್ ಇನ್‍ಚಾರ್ಜ್ ಶಕ್ತಿ ಸಿಂಗ್ ಗೋಹಿಲ್ ಹಾಗೂ ರಾಷ್ಟ್ರೀಯ ಮಿಡಿಯಾ ಇನ್‍ಚಾರ್ಜ್ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

    ಸದಾಕತ್ ಆಶ್ರಮದ ಮೇಲೆ ನಡೆದ ಐಟಿ ದಾಳಿಯನ್ನು ಶಕ್ತಿ ಸಿಂಗ್ ಗೋಹಿಲ್ ಅವರು ಖಂಡಿಸಿದ್ದು, ಕಾಂಗ್ರೆಸ್ ತಪ್ಪು ಮಾಡುತ್ತಿದೆ ಎಂಬುದನ್ನು ಬಿಂಬಿಸಲು ಈ ರೀತಿ ಮಾಡಲಾಗುತ್ತಿದೆ. ಬಿಜೆಪಿ-ಜೆಡಿಯು ಸರ್ಕಾರದ ಸೂಚನೆ ಮೇರೆಗೆ ಐಟಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

    ಬಿಹಾರ ಚುನಾವಣೆಯಲ್ಲಿ ನಾವು ಸೋಲುತ್ತೇವೆ ಎಂಬುದು ಬಿಜೆಪಿ-ಜೆಡಿಯುಗೆ ತಿಳಿದಿದೆ. ಹೀಗಾಗಿ ಈ ರೀತಿಯ ಕೆಲಸ ಮಾಡುತ್ತಿದೆ. ಯಾರ ಕಾರಿನಿಂದ ಹಣ ವಶಪಡಿಸಿಕೊಳ್ಳಲಾಗಿದೆಯೋ ಅವರು ನಮಗೆ ಸಂಬಂಧವಿಲ್ಲ. ಹಣ ಹಾಗೂ ಕಾರು ಯಾರಿಗೆ ಸೇರಿದ್ದು ಎಂಬುದು ಸಹ ನಮಗೆ ತಿಳಿದಿಲ್ಲ ಎಂದು ಶಕ್ತಿ ಸಿಂಗ್ ಗೋಹಿಲ್ ಹೇಳಿದ್ದಾರೆ. ಅತ್ತ ಈ ದಾಳಿಯನ್ನು ಐಟಿ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.

  • 1 ಸೂಟ್‍ಕೇಸ್, 3 ಹ್ಯಾಂಡ್ ಬ್ಯಾಗ್, 1 ಬಾಕ್ಸ್ – ಮಂದಣ್ಣ ಮನೆಯಿಂದ ದಾಖಲೆ ಹೊತ್ತೊಯ್ದ ಐಟಿ

    1 ಸೂಟ್‍ಕೇಸ್, 3 ಹ್ಯಾಂಡ್ ಬ್ಯಾಗ್, 1 ಬಾಕ್ಸ್ – ಮಂದಣ್ಣ ಮನೆಯಿಂದ ದಾಖಲೆ ಹೊತ್ತೊಯ್ದ ಐಟಿ

    – 9 ಗಂಟೆಗಳ ಕಾಲ ಕಿರಿಕ್ ಬ್ಯೂಟಿಗೆ ಐಟಿ ಡ್ರಿಲ್

    ಮಡಿಕೇರಿ: ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣಗೆ ಐಟಿ ಗುನ್ನಾ ನೀಡಿದ್ದು, ಸತತ 29 ಗಂಟೆಗಳ ಬಳಿಕ ಐಟಿ ಅಧಿಕಾರಿಗಳ ತಲಾಶ್ ಮುಕ್ತಾಯವಾಗಿದೆ. 1 ಸೂಟ್‍ಕೇಸ್, 3 ಹ್ಯಾಂಡ್ ಬ್ಯಾಗ್, 1 ಬಾಕ್ಸ್ ನಲ್ಲಿ ಮಂದಣ್ಣ ಮನೆಯಲ್ಲಿ ಸಿಕ್ಕ ದಾಖಲೆಯನ್ನು ಐಟಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ.

    ಗುರುವಾರ ಮುಂಜಾನೆ 7:30ಕ್ಕೆ ರಶ್ಮಿಕಾ ಅಭಿಮಾನಿಗಳು ಎಂದು ಎಂಟ್ರಿ ಕೊಟ್ಟಿದ್ದ ಆಂಧ್ರಪ್ರದೇಶದ ಐಟಿ ಅಧಿಕಾರಿಗಳು ಮನೆಯನ್ನು ಜಾಲಾಡಿ ದಾಖಲೆಗಳನ್ನು ಕಲೆಹಾಕಿದ್ದಾರೆ. ರಶ್ಮಿಕಾ ಮಂದಣ್ಣ ತಂದೆ ಒಡೆತನದ ಬೃಹತ್ ಬಂಗಲೆ, ಸೆರೆನಿಟಿ ಕಲ್ಯಾಣ ಮಂಟಪ, ಕಾಫಿ ತೋಟ, ಹೊಸದಾಗಿ ಖರೀದಿ ಮಾಡಿ ಬಿಟ್ಟಂಗಾಲದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಇಂಟರ್ ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್, ಪೆಟ್ರೋಲ್ ಬಂಕ್ ಜಾಗದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

    ಇದರ ಮಧ್ಯೆ ನಿನ್ನೆ ಮಧ್ಯಾಹ್ನ ಐಟಿ ಅಧಿಕಾರಿಗಳ ತಂಡ ರಶ್ಮಿಕಾ ಮಂದಣ್ಣಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಹೈದರಾಬಾದ್ ನಲ್ಲಿ ಶೂಟಿಂಗ್‍ನಲ್ಲಿ ನಿರತರಾಗಿದ್ದ ನಟಿ ರಶ್ಮಿಕಾ ಮಂದಣ್ಣ ವಿಮಾನದಲ್ಲಿ ಮೈಸೂರಿಗೆ ಬಂದು ಬಳಿಕ ಕಾರಿನಲ್ಲಿ ಗುರುವಾರ ರಾತ್ರಿಯೇ ಮನೆಗೆ ಧಾವಿಸಿದ್ದರು. ಮನೆಗೆ ಬಂದ ರಶ್ಮಿಕಾ, ಮನೆಯಲ್ಲಿ ಐಟಿ ದಾಳಿಯಿಂದ ಶಾಕ್ ಆಗಿದ್ದ ತಂದೆ ಮದನ್ ಮಂದಣ್ಣ, ತಾಯಿ ಸುಮನ್ ನೋಡಿ ಆರಂಭದಲ್ಲಿ ವಿಚಲಿತರಾದರು. ಬಳಿಕ ಅಪ್ಪ ಅಮ್ಮನನ್ನು ಸಂತೈಸಿ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು.

    ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ನಟಿ ರಶ್ಮಿಕಾಗೆ ಐಟಿ ಅಧಿಕಾರಿಗಳು ಪ್ರಶ್ನೆ ಮೇಲೆ ಪ್ರಶ್ನೆ ಕೇಳಿದ್ದಾರೆ. ಎಲ್ಲದಕ್ಕೂ ಸಮಾಧಾನದಿಂದಲೇ ಉತ್ತರ ಕೊಟ್ಟಿದ್ದ ರಶ್ಮಿಕಾ ತನ್ನ ಬ್ಯಾಂಕ್ ಬ್ಯಾಲೆನ್ಸ್, ಅಕೌಂಟ್ ಇರುವ ಬ್ಯಾಂಕ್‍ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿವರೆಗೂ ನಡೆದ ವಿಚಾರಣೆಯಲ್ಲಿ ಕುಟುಂಬದ ಆಸ್ತಿ ಮೂಲ, ತಾನು ಸಿನಿಮಾ ಇಂಡಸ್ಟ್ರಿಯಲ್ಲಿ ಗಳಿಸಿದ ಹಣದ ಬಗ್ಗೆ ಐಟಿ ಅಧಿಕಾರಿಗಳ ಮುಂದೆ ಉತ್ತರ ನೀಡಿದ್ದಾರೆ. ನಂತರ ಮಹಿಳಾ ಅಧಿಕಾರಿಯನ್ನು ಮನೆಯಲ್ಲೇ ಬಿಟ್ಟು ರಶ್ಮಿಕಾ ಮಂದಣ್ಣ ಕುಟುಂಬದ ಒಡೆತನದ ಸೆರಿನಿಟಿ ರೆಸಾರ್ಟ್ ನಲ್ಲಿಯೇ ಐಟಿ ಅಧಿಕಾರಿಗಳು ವಾಸ್ತವ್ಯ ಹೂಡಿದ್ದರು.

    ತಡರಾತ್ರಿವರೆಗೂ ರಶ್ಮಿಕಾ ಮಂದಣ್ಣನನ್ನು ವಿಚಾರಣೆ ಒಳಪಡಿಸಿದ್ದ ಐಟಿ ತಂಡ, ಮುಂಜಾನೆ ಬಿಟ್ಟು ಕಳುಹಿಸಿತ್ತು. ಮುಂಜಾನೆ ಮನೆಯಿಂದ ಹೊರಬಂದ ರಶ್ಮಿಕಾ ಮಂದಣ್ಣ ತಂದೆಗೆ ನಮಸ್ಕಾರ ಮಾಡಿ, ಮಾಧ್ಯಮಗಳ ಕ್ಯಾಮೆರಾಗೆ ಹಾಯ್ ಮಾಡಿ ತೆರಳಿದ್ದರು. ರಶ್ಮಿಕಾ ಮನೆಯಿಂದ ತೆರಳುತ್ತಿದ್ದಂತೆ ಇತ್ತ ಐಟಿ ಅಧಿಕಾರಿಗಳ ಎರಡು ತಂಡ ಮತ್ತೆ ಮನೆ ಪ್ರವೇಶ ಮಾಡಿತ್ತು.

    ಎರಡನೇ ದಿನ ಐಟಿ ದಾಳಿ ಮುಂದುವರಿಸಿದ್ದ ಐಟಿ ತಂಡ ಸುಮಾರು 12.30 ರ ವೇಳೆಗೆ ದಾಖಲೆಗಳ ಪರಿಶೀಲನೆ ಮುಕ್ತಾಯ ಮಾಡಿತು. ಮನೆಯಿಂದ ಮಹತ್ವದ ದಾಖಲೆಗಳ ಪಡೆದ ಪತ್ರಕ್ಕೆ ರಶ್ಮಿಕಾ ಕುಟುಂಬದಿಂದ ಸಹಿ ಪಡೆದು ತೆರಳಿದರು. ಐಟಿ ತಂಡ ಹೋದ ಬಳಿಕ ಮನೆಯಿಂದ ತಾಯಿ ಜೊತೆ ಹೊರ ಬಂದ ರಶ್ಮಿಕಾ ಮಂದಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಐಟಿ ಅವರು ಅವರ ಕೆಲಸ ಮಾಡಿದ್ದಾರೆ. ಯಾವ ಕಾರಣಕ್ಕೆ ದಾಳಿ ಮಾಡಿದ್ದಾರೆ ನಮಗೆ ಗೊತ್ತಿಲ್ಲ. ನಾವು ಎಲ್ಲಾ ಮಾಹಿತಿಗಳನ್ನು ನೀಡಿದ್ದೇವೆ ಎಂದು ತಿಳಿಸಿದರು.