Tag: Israel

  • ಲೆಬನಾನ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌- ಹಿಜ್ಬುಲ್ಲಾ ಟಾಪ್‌ ಕಮಾಂಡರ್‌ ಹತ್ಯೆ

    ಲೆಬನಾನ್‌ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌- ಹಿಜ್ಬುಲ್ಲಾ ಟಾಪ್‌ ಕಮಾಂಡರ್‌ ಹತ್ಯೆ

    ಟೆಲ್‌ ಅವೀವ್‌: ಲೆಬನಾನ್‌ನ (Lebanon) ರಾಜಧಾನಿ ಬೈರುತ್‌ನಲ್ಲಿರುವ (Beirut) ಕಟ್ಟಡದ ಮೇಲೆ ಶುಕ್ರವಾರ ಇಸ್ರೇಲ್‌ ಏರ್‌ಸ್ಟ್ರೈಕ್‌ (Air Strike) ಮಾಡಿ ಹಿಜ್ಬುಲ್ಲಾದ (Hezbollah) ಟಾಪ್‌ ಮಿಲಿಟರಿ ನಾಯಕನನ್ನು ಹತ್ಯೆ ಮಾಡಿದೆ. ಈ ದಾಳಿಯಲ್ಲಿ 8 ಮಂದಿ ಸಾವನ್ನಪ್ಪಿ 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

    ಹಿಜ್ಬುಲ್ಲಾ ಉಗ್ರ ಸಂಘಟನೆಯ ಆಪರೇಷನ್‌ ಯೂನಿಟ್‌ ನೋಡಿಕೊಳ್ಳುತ್ತಿದ್ದ ಇಬ್ರಾಹಿಂ ಅಖಿಲ್‌ನನ್ನು (Ibrahim Aqil) ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ (Israel) ಅಧಿಕೃತವಾಗಿ ತಿಳಿಸಿದೆ.

    ಕಳೆದ ಅಕ್ಟೋಬರ್‌ 7 ರಂದು ಇಸ್ರೇಲ್‌ ಒಳಗೆ ನುಗ್ಗಿ ಅಪಹರಣ ಮಾಡಿ ಅಮಾಯಕ ಜನರನ್ನು ಹತ್ಯೆ ಮಾಡಲಾಗಿತ್ತೋ ಅದೇ ರೀತಿ ದಾಳಿಯನ್ನು ಇಬ್ರಾಹಿಂ ಅಖಿಲ್‌ ಯೋಜಿಸುತ್ತಿದ್ದ. ಹಿಜ್ಬುಲ್ಲಾದ ಮೇಲೆ ನಮ್ಮ ದಾಳಿ ಮುಂದುವರಿಯಲಿದೆ. ಇಸ್ರೇಲ್‌ ಜನರನ್ನು ರಕ್ಷಿಸಲು ನಾವು ಬದ್ಧವಾಗಿದ್ದೇವೆ ಎಂದು ಇಸ್ರೇಲ್‌ ತಿಳಿಸಿದೆ.

    1983ರಲ್ಲಿ ಬೈರುತ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿಯ ಮೇಲೆ ಬಾಂಬ್‌ ದಾಳಿ ಮಾಡಿ 63 ಜನರನ್ನು ಹತ್ಯೆ ಮಾಡಲಾಗಿತ್ತು. ಈ ಕೃತ್ಯ ಮಾಡಿದ ಸಂಘಟನೆಯ ಪ್ರಧಾನ ಸದಸ್ಯನಾಗಿದ್ದ ಈತನ ಬಗ್ಗೆ ಮಾಹಿತಿ ನೀಡಿದವರಿಗೆ ಅಮೆರಿಕ 7 ದಶಲಕ್ಷ ಡಾಲರ್‌ ಬಹುಮಾನ ನೀಡುವುದಾಗಿ ಪ್ರಕಟಿಸಿತ್ತು. ಇದನ್ನೂ ಓದಿ: ಹಿಜ್ಬುಲ್ಲಾದ 100 ರಾಕೆಟ್ ಲಾಂಚರ್‌ ಉಡೀಸ್‌ – ಪ್ರತೀಕಾರದ ದಾಳಿಗೂ ಮುನ್ನವೇ ಪೆಟ್ಟುಕೊಟ್ಟ ಇಸ್ರೇಲ್‌

    ಇಸ್ರೇಲ್‌ಗೆ ಗೊತ್ತಾಗಿದ್ದು ಹೇಗೆ?
    ಬುಧವಾರ ನಡೆದ ಪೇಜರ್‌ ಸ್ಫೋಟದಿಂದ ಇಬ್ರಾಹಿಂ ಅಖಿಲ್‌ ಗಾಯಗೊಂಡಿದ್ದ. ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿದ್ದ ಅಖಿಲ್‌ ಡಿಸ್ಚಾರ್ಜ್‌ ಆಗಿದ್ದ. ಈತನ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಇಸ್ರೇಲ್‌ ಅಖಿಲ್‌ ನೆಲೆಸಿದ್ದ ಕಟ್ಟಡದ ಮೇಲೆ ಏರ್‌ಸ್ಟ್ರೈಕ್‌ ಮಾಡಿ ಹತ್ಯೆ ಮಾಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

     

  • ಹಿಜ್ಬುಲ್ಲಾದ 100 ರಾಕೆಟ್ ಲಾಂಚರ್‌ ಉಡೀಸ್‌ – ಪ್ರತೀಕಾರದ ದಾಳಿಗೂ ಮುನ್ನವೇ ಪೆಟ್ಟುಕೊಟ್ಟ ಇಸ್ರೇಲ್‌

    ಹಿಜ್ಬುಲ್ಲಾದ 100 ರಾಕೆಟ್ ಲಾಂಚರ್‌ ಉಡೀಸ್‌ – ಪ್ರತೀಕಾರದ ದಾಳಿಗೂ ಮುನ್ನವೇ ಪೆಟ್ಟುಕೊಟ್ಟ ಇಸ್ರೇಲ್‌

    ಬೈರುತ್‌: ಲೆಬನಾನ್‌ನಲ್ಲಿ ಪೇಜರ್‌, ವಾಕಿಟಾಕಿ ಸ್ಫೋಟಗೊಂಡ ಬೆನ್ನಲ್ಲೇ ಹಿಜ್ಜುಲ್ಲಾ ಸಂಘಟನೆ ಇಸ್ರೇಲ್ ಮೇಲೆ ಪ್ರತಿ ದಾಳಿಗೆ ಸಿದ್ಧತೆ ನಡೆಸಿತ್ತು. ಆದ್ರೆ ಹಿಜ್ಜುಲ್ಲಾದ (Hezbollah) ಸಿದ್ಧತೆಗೆ ಆರಂಭದಲ್ಲೇ ಇಸ್ರೇಲ್ (Israel) ಪೆಟ್ಟು ಕೊಟ್ಟಿದೆ.

    ಇಸ್ರೇಲ್‌ ರಕ್ಷಣಾ ಪಡೆ (IDF) ಯುದ್ಧವಿಮಾನಗಳು ಸುಮಾರು 1000 ಬ್ಯಾರೆಲ್‌ಗಳನ್ನು ಒಳಗೊಂಡಿರುವ ಸುಮಾರು 100 ರಾಕೆಟ್ ಲಾಂಚರ್‌ಗಳನ್ನು (Hezbollah Rocket launcher) ಹೊಡೆದುರುಳಿಸಿವೆ. ಅಲ್ಲದೇ ಹಿಜ್ಬುಲ್ಲಾದ ರಕ್ಷಣಾ ಘಟಕವನ್ನೂ ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಈ ಕ್ಷಿಪಣಿ ಲಾಂಚರ್‌ಗಳು ಇಸ್ರೇಲ್‌-ಲೆಬನಾನ್‌ ಗಡಿಯಲ್ಲಿ ಸಿದ್ಧವಾಗಿದ್ದವು ಎಂದು ಇಸ್ರೇಲಿ ಮಿಲಿಟರಿ ಪಡೆ ಹೇಳಿಕೊಂಡಿದೆ.

    ಇಸ್ರೇಲ್ ರಕ್ಷಣಾ ಪಡೆ ತನ್ನ ಎಕ್ಸ್ ಖಾತೆಯಲ್ಲೂ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಹಿಜ್ಬುಲ್ಲಾದವರು ಸುಮ್ಮನಿರದಿದ್ದರೇ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸಹ ಎಚ್ಚರಿಸಿದೆ. ಇದೇ ವೇಳೆ ಗಾಜಾ ಯುದ್ಧ ಮುಗಿಯುವವರೆಗೂ ಇಸ್ರೇಲ್ ಉತ್ತರದ ಕಡೆ (ಲೆಬನಾನ್ ಗಡಿಯತ್ತ) ಬರುವುದಿಲ್ಲ ದಾಳಿ ನಡೆಸಿ ಎಂದು ಹಿಜ್ಜುಲ್ಲಾ ಮುಖಂಡರು ತಮ್ಮ ಸಂಘಟನೆಯನ್ನು ಪ್ರಚೋದಿಸಿದ್ದಾರೆ. ಇನ್ನೊಂದೆಡೆ ತಕ್ಷಣವೇ ಕದನ ವಿರಾಮ ಘೋಷಿಸಿ ಎಂದು ಬ್ರಿಟನ್ ಇಸ್ರೇಲ್ ಹಾಗೂ ಲೆಬನಾನ್‌ಗೆ ಕರೆ ನೀಡಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಮಿಡಲ್ ಈಸ್ಟ್‌ನಲ್ಲಿ ಅಮೆರಿಕದ ಸೇನಾಪಡೆಗಳು ಅಲರ್ಟ್ ಸ್ಥಿತಿಯಲ್ಲಿವೆ ಎಂದು ಪೆಂಟಗಾನ್ ವಕ್ತಾರೆ ಸರ್ಬಿನಾ ಸಿಂಗ್ ಹೇಳಿದ್ದಾರೆ

    ಇತ್ತೀಚೆಗೆ ಉತ್ತರ ಗಡಿ ಭಾಗದಲ್ಲಿ ಇಸ್ರೇಲ್ ಹೆಚ್ಚಿನ ಪಡೆಗಳನ್ನು ನಿಯೋಜಿಸುತ್ತಿದೆ. ಗಾಜಾ ಗಡಿಯಿಂದ ಸೇನಾ ಪಡೆಗಳನ್ನು ಉತ್ತರದ ಗಡಿ ಭಾಗಕ್ಕೆ ಸ್ಥಳಾಂತರಿಸುವುದರಲ್ಲಿ ತೊಡಗಿದೆ. ಇದರ ನಡುವೆ ಅಧಿಕಾರಿಗಳು ವಾಗ್ದಾಳಿಯನ್ನೂ ಹೆಚ್ಚಿಸಿದ್ದಾರೆ. ಈ ಹಿಂದೆಯೂ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಹೋರಾಟವು ಹಲವು ಭಾರಿ ಉಲ್ಬಣಗೊಂಡಿದ್ದಿದೆ.

    ಲೆಬನಾನ್‌ನಲ್ಲಿ ಮಂಗಳವಾರ ಮತ್ತು ಬುಧವಾರ ಪೇಜರ್‌ಗಳು, ವಾಕಿ-ಟಾಕಿಗಳು ಮತ್ತು ಇತರ ಸಾಧನಗಳು ಸ್ಫೋಟಗೊಂಡು ಕನಿಷ್ಠ 20 ಮಂದಿ ಮೃತಪಟ್ಟದ್ದಾರೆ. ಸಹಸ್ರಾರು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈ ಸ್ಫೋಟಗಳಿಗೆ ಇಸ್ರೇಲ್ ಕಾರಣ ಎಂಬುದು ಹಿಜ್ಜುಲ್ಲಾದ ಆರೋಪವಾಗಿದೆ. ಅಲ್ಲದೆ ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಜುಲ್ಲಾ ಶಪಥ ಕೂಡ ಮಾಡಿದೆ.

  • ಇನ್ಮುಂದೆ ಹಿಜ್ಬುಲ್ಲಾ ಹೋರಾಟಗಾರರು ಟಾಯ್ಲೆಟ್‌, ಆಹಾರ ಸೇವನೆಗೆ ಹೆದರಬೇಕು – ಮತ್ತೆ ಶಾಕ್‌ ಕೊಟ್ಟ ಇಸ್ರೇಲ್‌

    ಇನ್ಮುಂದೆ ಹಿಜ್ಬುಲ್ಲಾ ಹೋರಾಟಗಾರರು ಟಾಯ್ಲೆಟ್‌, ಆಹಾರ ಸೇವನೆಗೆ ಹೆದರಬೇಕು – ಮತ್ತೆ ಶಾಕ್‌ ಕೊಟ್ಟ ಇಸ್ರೇಲ್‌

    – ಇನ್ನೂ ಪ್ರಯೋಗ ಮಾಡದ ಅನೇಕ ಸಾಮರ್ಥ್ಯಗಳು ನಮ್ಮ ಬಳಿಯಿದೆ

    ಟೆಲ್ ಅವೀವ್: ಹಿಜ್ಬುಲ್ಲಾ ಹೋರಾಟಗಾರರು (Hezbollah fighters) ಇನ್ನು ಮುಂದೆ ಶೌಚಾಲಯಕ್ಕೆ (Toilet) ಹೋಗಲು ಅಥವಾ ಆಹಾರ ಸೇವನೆ ಮಾಡಲು ಹೆದರಬೇಕು ಎಂದು ಇಸ್ರೇಲ್‌ (Israel) ಚೀಫ್‌ ಆಫ್‌ ದಿ ಜನರಲ್‌ ಸ್ಟಾಫ್‌ ಹರ್ಜಿ ಹಲೇವಿ ಹೇಳಿದ್ದಾರೆ.

    ಲೆಬನಾನ್‌ ಮತ್ತು ಸಿರಿಯಾದಲ್ಲಿ (Lebanon and Syria) ಸಾವಿರಾರು ಪೇಜರ್‌ಗಳು ಸ್ಫೋಟಗೊಂಡ (Pager Explosion) ಬಳಿಕ ಇಸ್ರೇಲ್‌ ಕಡೆಯಿಂದ ಈ ಹೇಳಿಕೆ ಬಂದಿದೆ.

    ನಮ್ಮಲ್ಲಿ ಇನ್ನೂ ಅನೇಕ ಸಾಮರ್ಥ್ಯಗಳಿವೆ. ನಾವು ಪ್ರತಿ ಹಂತದಲ್ಲೂ ಕಾರ್ಯನಿರ್ವಹಿಸುತ್ತೇವೆ ಮತ್ತು ಪ್ರತಿಯೊಂದರಲ್ಲೂ ಹಿಜ್ಬುಲ್ಲಾ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಹರ್ಜಿ ಹಲೇವಿ ತಿಳಿಸಿದ್ದಾರೆ. ಇದನ್ನೂ ಓದಿ: ಪೇಜರ್‌ ಆಯ್ತು ಈಗ ಹಿಜ್ಬುಲ್ಲಾ ಘಟಕಗಳಲ್ಲಿ ವಾಕಿಟಾಕಿಗಳ ಸ್ಫೋಟ – 32 ಸಾವು, 3250 ಕ್ಕೂ ಹೆಚ್ಚು ಮಂದಿಗೆ ಗಾಯ

    ನಾವು ಇಲ್ಲಿಯವರೆಗೆ ಪ್ರಯೋಗ ಮಾಡದೇ ಇರುವ ಹಲವಾರು ಸಾಮರ್ಥ್ಯಗಳು ನಮ್ಮ ಬಳಿಯಿದೆ. ಅವುಗಳಲ್ಲಿ ಕೆಲವು ನಾವು ಈಗಾಗಲೇ ಪ್ರದರ್ಶಿಸಿದ್ದೇವೆ. ಭವಿಷ್ಯದ ಕಾರ್ಯಾಚರಣೆಗಳಿಗಾಗಿ ನಾವು ಸಕ್ರಿಯವಾಗಿ ತಯಾರಿ ನಡೆಸುತ್ತಿದ್ದೇವೆ. ಪ್ರತಿ ಹಂತದಲ್ಲಿ ಯಾವ ಕಾರ್ಯಾಚರಣೆ ನಡೆಸಬೇಕು ಎನ್ನುವುದನ್ನು ಈಗಾಗಲೇ ಯೋಜಿಸಲಾಗಿದೆ ಮತ್ತು ಸಿದ್ಧವಾಗಿವೆ ಎಂದಿದ್ದಾರೆ.

    ಲೆಬನಾನ್‌ ಮತ್ತು ಸಿರಿಯಾದಲ್ಲಿ ಹಿಜ್ಬುಲ್ಲಾ ಸದಸ್ಯರು ಸಂವಹನಕ್ಕೆ ಬಳಸುತ್ತಿದ್ದ ಪೇಜರ್‌ಗಳು ಬುಧವಾರ ಏಕಾಏಕಿ ಸ್ಫೋಟಗೊಂಡಿದ್ದವು. ಗುರುವಾರ ಸಂವಹನಕ್ಕಾಗಿ ಬಳಕೆ ಮಾಡುತ್ತಿದ್ದ ವಾಕಿಟಾಕಿಗಳು ಸ್ಫೋಟಗೊಂಡಿದ್ದವು.

    ಈ ಎರಡು ಕೃತ್ಯದ ಹಿಂದೆ ಇಸ್ರೇಲ್‌ ಭಾಗಿಯಾಗಿದೆ ಎಂದು ಹಿಜ್ಬುಲ್ಲಾ ಹೇಳಿದರೂ ಇಲ್ಲಿಯವರೆಗೆ ಇಸ್ರೇಲ್‌ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

    ಹಮಾಸ್‌ ಉಗ್ರರು ಅಕ್ಟೋಬರ್‌ 7 ರಂದು ಇಸ್ರೇಲ್‌ ಪ್ರವೇಶಿಸಿ ದಾಳಿ ಮಾಡಿದ್ದರು. ಈ ದಾಳಿಗೆ ಪ್ರತೀಕಾರ ತೆಗೆದುಕೊಂಡ ಇಸ್ರೇಲ್‌ ಹಮಾಸ್‌ ಸಂಘಟನೆಯನ್ನೇ ಸಂಪೂರ್ಣ ನಾಶ ಮಾಡುವುದಾಗಿ ಘೋಷಿಸಿದೆ. ವಿದೇಶದಲ್ಲಿರುವ ಹಮಾಸ್‌ ನಾಯಕರು ಮತ್ತು ಹಮಾಸ್‌ಗೆ ಬೆಂಬಲ ನೀಡುವ ಎಲ್ಲಾ ಸಂಘಟನೆಗಳನ್ನು ಹೊಡೆದು ಹಾಕುತ್ತೇವೆ ಎಂದು ಇಸ್ರೇಲ್‌ ತಿಳಿಸಿದೆ.

  • ಆತ್ಮರಕ್ಷಣೆಗಾಗಿ ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ – ಪ್ರತ್ಯುತ್ತರವಾಗಿ 300 ರಾಕೆಟ್‌ ಹಾರಿಸಿದ ಹಿಜ್ಬುಲ್ಲಾ

    ಆತ್ಮರಕ್ಷಣೆಗಾಗಿ ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ – ಪ್ರತ್ಯುತ್ತರವಾಗಿ 300 ರಾಕೆಟ್‌ ಹಾರಿಸಿದ ಹಿಜ್ಬುಲ್ಲಾ

    ಜೆರುಸಲೇಂ: ಲೆಬನಾನ್‌ (Lebanon) ಮೂಲದ ಬಂಡುಕೋರರ ಗುಂಪು ಹಿಜ್ಬುಲ್ಲಾ ಮತ್ತು ಇಸ್ರೇಲ್‌ (Israel) ಪರಸ್ಪರ ಮೇಲೆ ಮಿಲಿಟರಿ ಕಾರ್ಯಾಚರಣೆಗೆ ಇಳಿದಿವೆ. ಇರಾನ್ ಬೆಂಬಲಿತ ಗುಂಪು ಹಿಜ್ಬುಲ್ಲಾ, ಪ್ರಮುಖ ಇಸ್ರೇಲಿ ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು 320 ಕ್ಕೂ ಹೆಚ್ಚು ಕತ್ಯುಶಾ ರಾಕೆಟ್‌ ದಾಳಿ ನಡೆಸಿರುವುದಾಗಿ ಘೋಷಿಸಿದೆ.

    ದಾಳಿ ತಟಸ್ಥಗೊಳಿಸಲು ಇಸ್ರೇಲಿ ವಾಯುಪಡೆಯ ಫೈಟರ್ ಜೆಟ್‌ಗಳನ್ನು ನಿಯೋಜಿಸಲಾಗಿದೆ. ಇಸ್ರೇಲಿ ನಾಗರಿಕರಿಗೆ ತಕ್ಷಣದ ಅಪಾಯವನ್ನುಂಟುಮಾಡುವ ಹಿಜ್ಬುಲ್ಲಾ ಸ್ಥಾನಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.‌ ಇದನ್ನೂ ಓದಿ: ಪಾಕ್ ಕ್ರಿಕೆಟಿಗ ಶಾಹೀನ್ ಶಾ ಅಫ್ರಿದಿಗೆ ಗಂಡು ಮಗು ಜನನ – `ತಾತ’ನಾದ ಪಾಕ್‌ನ ಹೊಡಿ ಬಡಿ ದಾಂಡಿಗ ಶಾಹಿದ್ ಅಫ್ರಿದಿ!

    ಉತ್ತರ ಮತ್ತು ಮಧ್ಯ ಇಸ್ರೇಲ್ ಟಾರ್ಗೆಟ್‌ ಮಾಡಿರುವ ಸಾವಿರಾರು ಹಿಜ್ಬುಲ್ಲಾ (Hezbollah) ರಾಕೆಟ್ ಲಾಂಚರ್‌ಗಳ ಮೇಲೆ ತನ್ನ ಫೈಟರ್ ಜೆಟ್‌ಗಳು ದಾಳಿ ಮಾಡಿದವು ಎಂದು ಇಸ್ರೇಲ್ ಹೇಳಿದೆ.

    ಅಂದಾಜು 100 IAF ಫೈಟರ್ ಜೆಟ್‌ಗಳು, ದಕ್ಷಿಣ ಲೆಬನಾನ್‌ನಲ್ಲಿ ಹುದುಗಿದ್ದ ಸಾವಿರಾರು ಹಿಜ್ಬುಲ್ಲಾ ರಾಕೆಟ್ ಲಾಂಚರ್ ಬ್ಯಾರೆಲ್‌ಗಳನ್ನು ಹೊಡೆದು ನಾಶಪಡಿಸಿವೆ ಎಂದು ಇಸ್ರೇಲಿ ಮಿಲಿಟರಿ ತಿಳಿಸಿದೆ. ಈ ಲಾಂಚರ್‌ಗಳಲ್ಲಿ ಹೆಚ್ಚಿನವು ಉತ್ತರ ಇಸ್ರೇಲ್‌ನ ಕಡೆಗೆ ಗುರಿಯಿಟ್ಟುಕೊಂಡಿದ್ದವು. ಕೆಲವು ಕೇಂದ್ರ ಇಸ್ರೇಲ್‌ನತ್ತ ಗುರಿಯಿರಿಸಲಾಗಿತ್ತು. ಇದನ್ನೂ ಓದಿ: ಉಕ್ರೇನ್‌ಗೆ ಮೋದಿ ಭೇಟಿ – ಝೆಲೆನ್ಸ್ಕಿ ಜೊತೆ ಮಾತುಕತೆ; ಯುದ್ಧದಲ್ಲಿ ಮಡಿದ ಮಕ್ಕಳ ಸ್ಮಾರಕ ವೀಕ್ಷಿಸಿದ ಪ್ರಧಾನಿ!

    ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇಂದು ಭದ್ರತಾ ಕ್ಯಾಬಿನೆಟ್ ಸಭೆಯನ್ನು ಕರೆದಿದ್ದಾರೆ. ನೆತನ್ಯಾಹು ಅವರ ಕಚೇರಿಯ ಹೇಳಿಕೆಯ ಪ್ರಕಾರ, ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ಮುಂದಿನ 48 ಗಂಟೆಗಳ ಕಾಲ ದೇಶದಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ.

    ಮುಂಜಾಗ್ರತಾ ಕ್ರಮವಾಗಿ, ಇಸ್ರೇಲ್‌ನ ಬೆನ್ ಗುರಿಯನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ವಿಮಾನ ಕಾರ್ಯಾಚರಣೆಯಲ್ಲಿ ವಿಳಂಬವಾಗಲಿದೆ ಎಂದು ತಿಳಿಸಿದೆ. ತುರ್ತು ಸೇವೆಗಳು ಲಭ್ಯವಿದ್ದು, ಹಿಜ್ಬುಲ್ಲಾದಿಂದ ದೊಡ್ಡ ಪ್ರಮಾಣದ ದಾಳಿ ನಡೆಸುವ ಸಾಧ್ಯತೆ ಇದೆ.

  • ಇಸ್ರೇಲ್‌ v/s ಹಿಜ್ಬುಲ್ಲಾ; ಇಬ್ಬರ ನಡುವೆ ಕಿತ್ತಾಟ ಯಾಕೆ? – ಭಾರತೀಯರಿಗೆ ಎಚ್ಚರಿಕೆ!

    ಇಸ್ರೇಲ್‌ v/s ಹಿಜ್ಬುಲ್ಲಾ; ಇಬ್ಬರ ನಡುವೆ ಕಿತ್ತಾಟ ಯಾಕೆ? – ಭಾರತೀಯರಿಗೆ ಎಚ್ಚರಿಕೆ!

    ವಿಶ್ವದಲ್ಲಿ ಎತ್ತ ನೋಡಿದರೂ ಯುದ್ಧಗಳದ್ದೇ ಸುದ್ದಿ. ಅತ್ತ ರಷ್ಯಾ-ಉಕ್ರೇನ್ ವಾರ್, ಇತ್ತ ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ. ಮೇಲ್ನೋಟಕ್ಕೆ ಇದು ಎರಡು ದೇಶಗಳ ನಡುವಿನ ಸಂಘರ್ಷವಾದರೂ ಜಗತ್ತಿನ ಇತರೆ ರಾಷ್ಟ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧಕ್ಕೆ ಹಮಾಸ್ ಬಂಡುಕೋರರ ಗುಂಪು ಕಾರಣ. ಸಂದಿಗ್ಧ ಸನ್ನಿವೇಶದ ಹೊತ್ತಿನಲ್ಲೇ ಮತ್ತೊಂದು ಯುದ್ಧದ ಭೀತಿ ಎದುರಾಗಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಸಂಘರ್ಷ ಶುರುವಾಗಿದೆ. ಈ ಸಂಘರ್ಷ ಮತ್ತಷ್ಟು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆ ಇದೆ.

    ಅಷ್ಟಕ್ಕೂ ಏನಿದು ಇಸ್ರೇಲ್-ಹಿಜ್ಬುಲ್ಲಾ (Israel vs Hezbollah Conflict) ಸಂಘರ್ಷ? ಇಬ್ಬರ ನಡುವೆ ತಿಕ್ಕಾಟ ಯಾಕೆ? ಇದರಿಂದ ಆಗಬಹುದಾದ ಪರಿಣಾಮ ಏನು? ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಸೊಮಾಲಿಯಾದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ – 32 ಮಂದಿ ಸಾವು

    ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್‌ನಲ್ಲಿ ವಾರದ ಹಿಂದೆ ಫೌದ್ ಶೂಕೂರ್ ರಾಕೆಟ್ ದಾಳಿ ನಡೆಸಿ, 12 ಯುವಕರ ಹತ್ಯೆ ಮಾಡಿದ್ದ. ಇದು ಇಸ್ರೇಲ್ ಮತ್ತು ಇರಾನ್ ಬೆಂಬಲಿತ ಲೆಬನಾನಿನ ಗುಂಪು ಹಿಜ್ಬುಲ್ಲಾ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಹಿಜ್ಬುಲ್ಲಾ ಮೇಲೆ ತೀವ್ರವಾಗಿ ದಾಳಿ ನಡೆಸುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿದೆ. ಕಳೆದ ವರ್ಷ ಹಮಾಸ್‌ನ ದಾಳಿಯು ಗಾಜಾದಲ್ಲಿ ಯುದ್ಧವನ್ನು ಹುಟ್ಟುಹಾಕಿತ್ತು. ಈಗ ಮತ್ತೊಂದು ಸಂಘರ್ಷದ ಸೂಚನೆ ಗೋಚರಿಸಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಹಗೆತನ ಇಂದು ನಿನ್ನೆಯದ್ದಲ್ಲ.

    ಸಂಘರ್ಷ ಯಾಕೆ?
    ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ದಕ್ಷಿಣ ಇಸ್ರೇಲ್‌ನಲ್ಲಿ ದಾಳಿ ಮಾಡಿ ಗಾಜಾ ಯುದ್ಧಕ್ಕೆ ಕಾರಣವಾಯಿತು. ಅದಾದ ಒಂದು ದಿನದ ನಂತರ (ಅ.8) ಇಸ್ರೇಲ್-ಹಿಜ್ಬುಲ್ಲಾ ಗಡಿಯಲ್ಲಿ ಹಿಂಸಾಚಾರ ನಡೆಯಿತು. ಗಾಜಾದಲ್ಲಿ ಇಸ್ರೇಲಿ ಬಾಂಬ್ ದಾಳಿಗೆ ಒಳಗಾಗಿರುವ ಪ್ಯಾಲೆಸ್ತೀನಿಯನ್ನರನ್ನು ಬೆಂಬಲಿಸುತ್ತೇವೆ ಎಂದು ಆಗ ಹಮಾಸ್‌ನ ಮಿತ್ರ ಹಿಜ್ಬುಲ್ಲಾ ಹೇಳಿಕೊಂಡಿತ್ತು. ಇದನ್ನೂ ಓದಿ: ಇಸ್ರೇಲ್‌ ಮೇಲಿನ ದಾಳಿಯ ಮಾಸ್ಟರ್‌ಮೈಂಡ್‌ ಮೊಹಮ್ಮದ್‌ ಡೀಫ್‌ ಹತ್ಯೆ

    ಹಿಜ್ಬುಲ್ಲಾವನ್ನು ಇರಾನ್ ಬೆಂಬಲಿತ ಅತ್ಯಂತ ಶಕ್ತಿಶಾಲಿ ಸದಸ್ಯ ಎಂದು ಪರಿಗಣಿಸಲಾಗಿದೆ. ಇದನ್ನು ಆಕ್ಸಿಸ್ ಆಫ್ ರೆಸಿಸ್ಟೆನ್ಸ್ ಎಂದು ಕರೆಯಲಾಗುತ್ತದೆ. ಗಾಜಾದಲ್ಲಿ ಕದನ ವಿರಾಮ ಜಾರಿಗೆ ಬರದ ಹೊರತು ಇಸ್ರೇಲ್ ಮೇಲಿನ ತನ್ನ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಹಿಜ್ಬುಲ್ಲಾ ತಿಳಿಸಿತ್ತು. ಅಷ್ಟೇ ಅಲ್ಲ, ಇಸ್ರೇಲ್ ಮತ್ತು ಹಿಜ್ಬುಲ್ಲಾ ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿವೆ. 2006ರಲ್ಲಿ ಕೊನೆ ಸಂಘರ್ಷ ಎದುರಿಸಿದ್ದವು.

    ಹಿಜ್ಬುಲ್ಲಾ ಹುಟ್ಟಿದ್ದು ಹೇಗೆ?
    ತನ್ನ ಗಡಿಗೆ ಹಿಜ್ಬುಲ್ಲಾ ಯಾವಾಗಲೂ ದೊಡ್ಡ ಬೆದರಿಕೆ ಎಂದೇ ಇಸ್ರೇಲ್ ಪರಿಗಣಿಸಿದೆ. ಲೆಬನಾನ್ ಆಕ್ರಮಿಸಿದ ಇಸ್ರೇಲಿ ಪಡೆಗಳ ವಿರುದ್ಧ ಹೋರಾಡಲು 1982 ರಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್ಗಳು ಇದನ್ನು ಸ್ಥಾಪಿಸಿದರು. 2000 ರಲ್ಲಿ ಇಸ್ರೇಲ್ ದಕ್ಷಿಣ ಲೆಬನಾನ್‌ನಿಂದ ಹಿಂದೆ ಸರಿಯುವಂತೆ ಮಾಡಲು ಗೆರಿಲ್ಲಾ ಯುದ್ಧವನ್ನು ನಡೆಸಿದ್ದರು. ಪ್ಯಾಲೆಸ್ತೀನಿಯನ್ ಭೂಮಿಯಲ್ಲಿ ಸ್ಥಾಪಿಸಿದ ನ್ಯಾಯಸಮ್ಮತವಲ್ಲದ ರಾಜ್ಯ ಇಸ್ರೇಲ್ ಎಂದು ಹಿಜ್ಬುಲ್ಲಾ ಪರಿಗಣಿಸಿದೆ. ಪ್ಯಾಲೆಸ್ತೀನ್ ಭೂಮಿಯಿಂದ ಇಸ್ರೇಲ್ ಹೊರಹೋಗಬೇಕು ಎಂದು ಈ ಗುಂಪು ಕೂಡ ಬಯಸುತ್ತದೆ.

    ಕಿತ್ತಾಟದ ಪರಿಣಾಮ ಏನು?
    ಇಸ್ರೇಲ್-ಹಿಜ್ಬುಲ್ಲಾ ಕಿತ್ತಾಟದಿಂದ ಗಡಿಯ ಎರಡೂ ಬದಿಗಳಲ್ಲಿ ನೂರಾರು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಇಸ್ರೇಲಿ ವೈಮಾನಿಕ ದಾಳಿಗಳು ದಕ್ಷಿಣ ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಚಟುವಟಿಕೆ ಇರುವ ಪ್ರದೇಶಗಳನ್ನು ಹೊಡೆದಿವೆ. ಸಿರಿಯನ್ ಗಡಿಯ ಸಮೀಪವಿರುವ ಬೆಕಾ ಕಣಿವೆ ಮೇಲೂ ದಾಳಿ ನಡೆದಿದೆ.

    ದಕ್ಷಿಣ ಬೈರೂತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾದ ಉನ್ನತ ಮಿಲಿಟರಿ ಕಮಾಂಡರ್ ಫೌದ್ ಶೂಕೂರ್ ಹತನಾಗಿದ್ದಾನೆಂದು ಇಸ್ರೇಲ್ ದೃಢಪಡಿಸಿದೆ. ಇಸ್ರೇಲಿ ದಾಳಿಗಳು ಲೆಬನಾನ್‌ನಲ್ಲಿ ಸುಮಾರು 300ಕ್ಕೂ ಹೆಚ್ಚು ಹಿಜ್ಬುಲ್ಲಾ ಹೋರಾಟಗಾರರು ಹಾಗೂ ವೈದ್ಯಾಧಿಕಾರಿಗಳು, ಮಕ್ಕಳು, ಪತ್ರಕರ್ತರು ಸೇರಿದಂತೆ 100 ಕ್ಕೂ ಹೆಚ್ಚು ನಾಗರಿಕರನ್ನು ಕೊಂದಿವೆ.

    ಕಳೆದ ಶನಿವಾರದಂದು ಹಿಜ್ಬುಲ್ಲಾ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನ 17 ಸೈನಿಕರು ಸೇರಿ 23 ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ಹೇಳಿತ್ತು. ಆದರೆ ಈ ದಾಳಿ ಹೊಣೆ ಹೊತ್ತುಕೊಳ್ಳಲು ಹಿಜ್ಬುಲ್ಲಾ ನಿರಾಕರಿಸಿದೆ.

    2006ರಲ್ಲಿ ಇಸ್ರೇಲ್ ನಡೆಸಿತ್ತು ದಾಳಿ?
    ಇವರಿಬ್ಬರ ನಡುವಿನ ಈ ಹಿಂದೆ ನಡೆದ ಯುದ್ಧಗಳಿಂದ ಭಾರೀ ಹಾನಿಯುಂಟಾಗಿದೆ. 2006ರಲ್ಲಿ ಇಸ್ರೇಲಿ ದಾಳಿಗಳು ಬೈರುತ್‌ನ ಹಿಜ್ಬುಲ್ಲಾ ನಿಯಂತ್ರಿತ ದಕ್ಷಿಣದ ಉಪನಗರಗಳ ದೊಡ್ಡ ಪ್ರದೇಶಗಳನ್ನು ನೆಲಸಮಗೊಳಿಸಿದ್ದವು. ಬೈರುತ್ ವಿಮಾನ ನಿಲ್ದಾಣವನ್ನು ಹೊಡೆದುರುಳಿಸಲಾಗಿತ್ತು. ರಸ್ತೆಗಳು, ಸೇತುವೆಗಳು ಮತ್ತು ಇತರೆ ಮೂಲಸೌಕರ್ಯಗಳಿಗೆ ಹಾನಿಯಾಗಿತ್ತು. ಲೆಬನಾನ್‌ನಲ್ಲಿ ಸುಮಾರು 10 ಲಕ್ಷ ಜನರು ಮನೆಗಳನ್ನು ತೊರೆದಿದ್ದರು. ಇಸ್ರೇಲಿ ಪಡೆಗಳು ಈ ಹಿಂದೆ ಹಲವಾರು ಬಾರಿ ಲೆಬನಾನ್ ಮೇಲೆ ದಾಳಿ ಮಾಡಿದೆ. ಲೆಬನಾನ್ ಮೂಲದ ಪ್ಯಾಲೆಸ್ತೀನಿಯನ್ ಗೆರಿಲ್ಲಾಗಳನ್ನು ಹತ್ತಿಕ್ಕುವ ಗುರಿ ಹೊಂದಿದೆ. 1982ರಲ್ಲಿ ಬೈರುತ್ ವರೆಗೆ ದಾಳಿ ನಡೆಸಿತ್ತು. ಇದನ್ನೂ ಓದಿ: ಬರಿದಾಗ್ತಿದೆ ಆಮ್ಲಜನಕ.. ಜೀವಸಂಕುಲಕ್ಕೆ ಕಂಟಕ – ಭೂಮಿಯಲ್ಲಿ ಏನಾಗ್ತಿದೆ?

    ಹಿಜ್ಬುಲ್ಲಾ ಕೂಡ ಇಸ್ರೇಲ್‌ಗೆ ಸೆಡ್ಡು ಹೊಡೆಯಲು ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಕಳೆದ ಅಕ್ಟೋಬರ್‌ನಿಂದ ಶಸ್ತ್ರಾಸ್ತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದೆ. ಇಸ್ರೇಲಿ ಡ್ರೋನ್‌ಗಳನ್ನು ಹಿಜ್ಬುಲ್ಲಾ ಹೊಡೆದುರುಳಿಸಿದೆ. ಸ್ಫೋಟಕ ಡ್ರೋನ್‌ಗಳನ್ನು ಉಡಾಯಿಸಿ ಇಸ್ರೇಲ್ ಮೇಲೆ ದಾಳಿ ನಡೆಸಿದೆ. ಹೆಚ್ಚು ಅತ್ಯಾಧುನಿಕ ಮಾರ್ಗದರ್ಶಿ ಕ್ಷಿಪಣಿಗಳನ್ನು ಹಾರಿಸಿದೆ.

    ಸಂಘರ್ಷಕ್ಕೆ ಕೊನೆ ಇಲ್ಲವೇ?
    ಗಾಜಾದಲ್ಲಿ ಏನಾಗುತ್ತದೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಗಾಜಾದಲ್ಲಿ ಕದನ ವಿರಾಮದ ಪ್ರಯತ್ನ ಹಾಗೂ ಇಸ್ರೇಲಿ ಒತ್ತೆಯಾಳುಗಳ ವಾಪಸಾತಿಯು ವಿಫಲವಾಗಿದೆ. ಕದನ ವಿರಾಮವು ದಕ್ಷಿಣ ಲೆಬನಾನ್‌ನಲ್ಲಿ ತಲೆದೋರಿರುವ ಉದ್ವಿಗ್ನತೆಯನ್ನು ತ್ವರಿತವಾಗಿ ತಗ್ಗಿಸಲು ಸಹಾಯ ಮಾಡುತ್ತದೆ. ಹಿಜ್ಬುಲ್ಲಾವನ್ನು ಭಯೋತ್ಪಾದಕ ಗುಂಪು ಎಂದು ಯುನೈಟೆಡ್ ಸ್ಟೇಟ್ಸ್ ಪರಿಗಣಿಸಿದೆ. ಇಸ್ರೇಲ್-ಹಿಜ್ಬುಲ್ಲಾ ಸಂಘರ್ಷ ಕೊನೆಗಾಣಿಸಲು ರಾಜತಾಂತ್ರಿಕ ಪ್ರಯತ್ನ ಮಾಡುತ್ತಿದೆ. ಆದರೆ ಇಸ್ರೇಲ್, ಗಾಜಾದಲ್ಲಿ ಆಕ್ರಮಣ ನಿಲ್ಲಿಸುವವರೆಗೆ ಯಾವುದೇ ಮಾತುಕತೆಗೆ ಸಿದ್ಧವಿಲ್ಲ ಎಂದು ಹಿಜ್ಬುಲ್ಲಾ ಸ್ಪಷ್ಟಪಡಿಸಿದೆ.

    ಭಾರತೀಯರಿಗೆ ಎಚ್ಚರಿಕೆ!
    ಇಸ್ರೇಲ್-ಹಿಜ್ಬುಲ್‌ ನಡುವೆ ಉದ್ವಿಗ್ನತೆ ಪರಿಸ್ಥಿತಿ ಉಂಟಾಗಿರುವ ಕಾರಣ ಲೆಬನಾನ್‌ ತೊರೆಯುವಂತೆ ಭಾರತೀಯರಿಗೆ ರಾಯಭಾರಿ ಕಚೇರಿ ಸೂಚನೆ ನೀಡಿದೆ. ಮುಂದಿನ ಸೂಚನೆ ನೀಡುವವರೆಗೆ ಭಾರತೀಯರು ಲೆಬನಾನ್‌ಗೆ ಹೋಗಬಾರದು ಎಂದು ತಿಳಿಸಿದೆ.

  • ಇಸ್ರೇಲ್‌ ಮೇಲಿನ ದಾಳಿಯ ಮಾಸ್ಟರ್‌ಮೈಂಡ್‌ ಮೊಹಮ್ಮದ್‌ ಡೀಫ್‌ ಹತ್ಯೆ

    ಇಸ್ರೇಲ್‌ ಮೇಲಿನ ದಾಳಿಯ ಮಾಸ್ಟರ್‌ಮೈಂಡ್‌ ಮೊಹಮ್ಮದ್‌ ಡೀಫ್‌ ಹತ್ಯೆ

    ಜೆರುಸಲೇಂ: ಗಾಜಾದ ದಕ್ಷಿಣ ಪ್ರದೇಶವಾದ ಖಾನ್ ಯೂನಿಸ್‌ನಲ್ಲಿ ಕಳೆದ ತಿಂಗಳು ನಡೆಸಿದ ದಾಳಿಯಲ್ಲಿ ಹಮಾಸ್ ಮಿಲಿಟರಿ ಮುಖ್ಯಸ್ಥ ಮೊಹಮ್ಮದ್ ಡೀಫ್ (Mohammed Deif) ಹತ್ಯೆಯಾಗಿದ್ದಾರೆ ಎಂದು ಇಸ್ರೇಲಿ (Israel) ಮಿಲಿಟರಿ ಗುರುವಾರ ಘೋಷಿಸಿದೆ.

    ಟೆಹ್ರಾನ್‌ನಲ್ಲಿ ಹಮಾಸ್ (Hamas) ಮುಖ್ಯಸ್ಥ ಇಸ್ಮಾಯಿಲ್ ಹನಿಯೆ ಹತ್ಯೆಯಾದ ಒಂದು ದಿನದ ನಂತರ ಡೀಫ್‌ ಹತ್ಯೆಯಾಗಿದೆ ಎಂದು ಹಮಾಸ್ ದೃಢೀಕರಿಸಿದೆ.‌ ಇದನ್ನೂ ಓದಿ: ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹತ್ಯೆ – ಪ್ರತೀಕಾರ ತೀರಿಸಿಕೊಂಡ ಇಸ್ರೇಲ್‌

    ಜುಲೈ 13 ರಂದು ಐಡಿಎಫ್‌ ಫೈಟರ್‌ ಜೆಟ್‌ಗಳು (ಇಸ್ರೇಲಿ ಸೇನೆ) ಖಾನ್‌ ಯೂನಿಸ್‌ ಪ್ರದೇಶದ ಮೇಲೆ ದಾಳಿ ನಡೆಸಿದ್ದವು. ದಾಳಿಯಲ್ಲಿ ಮೊಹಮ್ಮದ್‌ ಡೀಫ್‌ ಹತ್ಯೆಯಾಗಿದೆ ಎಂದು ಮಿಲಿಟರಿ ದೃಢೀಕರಿಸಿದೆ.

    1,197 ಜನರ ಸಾವಿಗೆ ಕಾರಣವಾದ ದಕ್ಷಿಣ ಇಸ್ರೇಲ್‌ ಮೇಲಿನ ಹಮಾಸ್ ದಾಳಿಯ ಹಿಂದಿನ ರೂವಾರಿ ಡೀಫ್‌. ಈತನಿಂದಲೇ ಹತ್ಯಾಕಂಡ ನಡೆದಿದೆ. ಈತ ಇಸ್ರೇಲ್‌ ವಿರುದ್ಧ ಹಲವಾರು ದಾಳಿಗಳನ್ನು ನಡೆಸಿದ್ದಾನೆ ಎಂದು ಮಿಲಿಟರಿ ತಿಳಿಸಿದೆ.

    ಈತ ಗಾಜಾದಲ್ಲಿ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್‌ನೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದ. ಯುದ್ಧದ ಸಮಯದಲ್ಲಿ ಹಮಾಸ್‌ನ ಮಿಲಿಟರಿ ವಿಭಾಗದ ಹಿರಿಯ ಸದಸ್ಯರಿಗೆ ಆಜ್ಞೆ ಮತ್ತು ಸೂಚನೆಗಳನ್ನು ನೀಡುವ ಮೂಲಕ ಗಾಜಾ ಪಟ್ಟಿಯಲ್ಲಿ ಹಮಾಸ್‌ನ ಭಯೋತ್ಪಾದಕ ಚಟುವಟಿಕೆ ನಿಯಂತ್ರಿಸುತ್ತಿದ್ದ ಎಂದು ಆರೋಪಿಸಿದೆ. ಇದನ್ನೂ ಓದಿ: ಬಾಂಗ್ಲಾದ ಮೊಂಗ್ಲಾ ಬಂದರು ನಿರ್ವಹಣೆಯ ಹಕ್ಕು ಪಡೆದ ಭಾರತ – ಏನಿದರ ಮಹತ್ವ?

  • ಗಾಜಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ – 210 ಜನರ ದುರ್ಮರಣ

    ಗಾಜಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ – 210 ಜನರ ದುರ್ಮರಣ

    ಟೆಲ್ ಅವಿವ್: ಗಾಜಾ (Gaza) ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ (Israel) ನಡೆಸಿದ ದಾಳಿಯಲ್ಲಿ ಕನಿಷ್ಠ 210 ಜನ ಸಾವನ್ನಪ್ಪಿದ್ದು, 400ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಹಮಾಸ್‍ನ (Hamas) ಸರ್ಕಾರಿ ಮಾಧ್ಯಮ ಕಚೇರಿ ತಿಳಿಸಿದೆ.

    ನುಸಿರಾತ್‍ನಲ್ಲಿ ನಾಲ್ವರು ಇಸ್ರೇಲಿ ಒತ್ತೆಯಾಳುಗಳನ್ನು ರಕ್ಷಿಸಿರುವುದಾಗಿ ಇಸ್ರೇಲ್‍ನ ಸೇನೆ ಘೋಷಿಸಿದ ನಂತರ ದೊಡ್ಡ ಪ್ರಮಾಣದ ದಾಳಿ ನಡೆದಿದೆ. ರಕ್ಷಿಸಲ್ಪಟ್ಟ ಒತ್ತೆಯಾಳುಗಳನ್ನು ನೋವಾ ಅರ್ಗಾಮಣಿ (26) ಅಲ್ಮೊಗ್ ಮೀರ್ ಜಾನ್ (22) ಆಂಡ್ರೆ ಕೊಜ್ಲೋವ್ (27) ಮತ್ತು ಶ್ಲೋಮಿ ಝಿವ್ (41) ಇಸ್ರೇಲ್ ಸೇನೆ ಹೇಳಿಕೊಂಡಿದೆ.

    ಇಸ್ರೇಲ್ ದಾಳಿಗೆ ಪ್ರತಿಕ್ರಿಯಿಸಿರುವ ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್, ನಾವು ಹೋರಾಟವನ್ನು ಮುಂದುವರೆಸುತ್ತೇವೆ. ನಮ್ಮ ಜನ ಶರಣಾಗುವುದಿಲ್ಲ ಮತ್ತು ಶತ್ರುಗಳಿಂದ ನಮ್ಮ ಹಕ್ಕುಗಳನ್ನು ರಕ್ಷಿಸಲು ಪ್ರತಿರೋಧ ಮುಂದುವರಿಯುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

    ನಿರಂತರ ಯುದ್ಧದಿಂದಾಗಿ ಸಾವು ನೋವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಹಾಯಕ್ಕಾಗಿ ಅಂತರರಾಷ್ಟ್ರೀಯ ಸಹಾಯ ಸಂಸ್ಥೆಗಳಿಗೆ ಹಮಾಸ್ ಮನವಿ ಮಾಡಿದೆ.

  • ನಿರಾಶ್ರಿತರಿದ್ದ ಡೇರೆಗಳ ಮೇಲೆ ಇಸ್ರೇಲ್‌ ವಾಯುದಾಳಿ; 45 ಮಂದಿ ಸಾವು

    ನಿರಾಶ್ರಿತರಿದ್ದ ಡೇರೆಗಳ ಮೇಲೆ ಇಸ್ರೇಲ್‌ ವಾಯುದಾಳಿ; 45 ಮಂದಿ ಸಾವು

    ಟೆಲ್‌ ಅವಿವ್‌: ದಕ್ಷಿಣ ಗಾಜಾದ (Gaza) ರಫಾದಲ್ಲಿನ (Rafah) ನಿರಾಶ್ರಿತರ ಡೇರೆಗಳ ಮೇಲೆ ಇಸ್ರೇಲ್‌ (Israel) ನಡೆಸಿದ ವಾಯುದಾಳಿಗೆ ಕನಿಷ್ಠ 45 ಮೃತಪಟ್ಟಿದ್ದಾರೆ.

    ದಕ್ಷಿಣ ನಗರವಾದ ರಫಾದಿಂದ ಸ್ಥಳಾಂತರಗೊಂಡವರ ಶಿಬಿರದ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಕನಿಷ್ಠ 23 ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಕನಿಷ್ಠ 45 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮಿಜೋರಾಂನಲ್ಲಿ ಭಾರೀ ಮಳೆ- ಕಲ್ಲುಕ್ವಾರಿ ಕುಸಿದು 10 ಮಂದಿ ದುರ್ಮರಣ, ಹಲವರು ನಾಪತ್ತೆ

    ಸಚಿವಾಲಯವು ಇಸ್ರೇಲ್‌ನ ಮಿಲಿಟರಿ ದಾಳಿಯಿಂದ ಸತ್ತವರ ಸಂಖ್ಯೆ 36,050 ಕ್ಕೆ ಏರಿಕೆಯಾಗಿದ್ದು, 81,026 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

    ಹಮಾಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದು ಇಸ್ರೇಲ್‌ ಸೇನೆಯು ತಿಳಿಸಿದೆ. ಕಳೆದ ರಾತ್ರಿ ಗಾಜಾ ಪಟ್ಟಿಯಲ್ಲಿನ ಪ್ಯಾಲೇಸ್ಟಿನಿಯನ್ ನಾಗರಿಕರ ಮೇಲಿನ ಭೀಕರ ದಾಳಿ ಪರಿಣಾಮವನ್ನು ಪರಿಶೀಲಿಸುತ್ತಿದೆ ಎಂದು ಇಸ್ರೇಲ್ ಹೇಳಿದೆ. ಇದನ್ನೂ ಓದಿ: ರಸ್ತೆ ದಾಟುವಾಗ ಕಾರು ಡಿಕ್ಕಿ – ಅಮೆರಿಕದಲ್ಲಿ ತೆಲಂಗಾಣ ಮೂಲದ ಯುವತಿ ಸಾವು

    ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿಗಳನ್ನು ಗುರಿಯಾಗಿಸಿ ನಡೆಸಲಾಗಿದ್ದ ಹಲವು ದಾಳಿಗಳಿಗೆ ಜವಾಬ್ದಾರರಾಗಿರುವ ಇಬ್ಬರು ಹಮಾಸ್ ಉಗ್ರಗಾಮಿಗಳನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಸ್ಪಷ್ಟಪಡಿಸಿದೆ.

  • ಇರಾನ್ ಅಧ್ಯಕ್ಷರ ಸಾವಿನಲ್ಲಿ ನಮ್ಮ ಕೈವಾಡವಿಲ್ಲ: ಇಸ್ರೇಲ್‌ ಸ್ಪಷ್ಟನೆ

    ಇರಾನ್ ಅಧ್ಯಕ್ಷರ ಸಾವಿನಲ್ಲಿ ನಮ್ಮ ಕೈವಾಡವಿಲ್ಲ: ಇಸ್ರೇಲ್‌ ಸ್ಪಷ್ಟನೆ

    ಟೆಲ್‌ ಅವಿವ್‌: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಸಾವಿನಲ್ಲಿ ನಮ್ಮ ದೇಶವು ಭಾಗಿಯಾಗಿಲ್ಲ ಎಂದು ಇಸ್ರೇಲ್‌ನ (Israel) ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಭಾನುವಾರ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Iran President Ebrahim Risi), ವಿದೇಶಾಂಗ ಸಚಿವ ಹುಸೇನ್ ಅಮಿರಾಬ್ದೊಲ್ಲಾಹಿಯಾನ್ ಮತ್ತು ಇತರ ಆರು ಮಂದಿ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟಿದ್ದರು. ಆದರೆ ಈ ಅವಘಡದಲ್ಲಿ ದೇಶ ಭಾಗಿಯಾಗಿರುವ ಕುರಿತು ಬರುತ್ತಿರುವ ಆರೋಪಗಳನ್ನು ಇಸ್ರೇಲಿ ಅಧಿಕಾರಿ ನಿರಾಕರಿಸಿದ್ದಾರೆ. ತಮ್ಮ ಮೇಲೆ ಆರೋಪ ಕೇಳಿಬರುತ್ತಿದ್ದಂತೆಯೇ ಇಸ್ರೇಲ್‌ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದು, ಘಟನೆಯಲ್ಲಿ ನಮ್ಮ ಕೈವಾಡ ಇಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

    ಆರೋಪ ಏಕೆ..?: ಅಕ್ಟೋಬರ್ 7 ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಕಳೆದ ಕೆಲವು ತಿಂಗಳುಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅದರ ಪ್ರಾಕ್ಸಿ ಗುಂಪುಗಳನ್ನು ಒಳಗೊಂಡ ದಾಳಿಗಳು ಮತ್ತು ಸಂಘರ್ಷಗಳು ಹುಟ್ಟಿಕೊಂಡವು. ಇದು ಗಾಜಾದಲ್ಲಿ ರಕ್ತಪಾತಕ್ಕೆ ಕಾರಣವಾಯಿತು. ಇದನ್ನೂ ಓದಿ: ಜೂನ್ 28 ರಂದು ಇರಾನ್‌ನಲ್ಲಿ ಅಧ್ಯಕ್ಷೀಯ ಚುನಾವಣೆ

    ಒಟ್ಟಿನಲ್ಲಿ ಇಸ್ರೇಲ್ ವಿರುದ್ಧ ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೊಮ್ಮೆ ಸೇಡಿನ ಕಿಡಿ ಹೊತ್ತಿಕೊಂಡಿದೆ. ಈ ಮೂಲಕ 3ನೇ ಮಹಾಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಾವ ಕ್ಷಣದಲ್ಲಿ ಬೇಕಾದರೂ, ಇರಾನ್ ನೇರವಾಗಿ ಇಸ್ರೇಲ್ ವಿರುದ್ಧ ಯುದ್ಧ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣ ಮಾಡುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದೆ. ಹೀಗಾಗಿ ಇಬ್ರಾಹಿಂ ರೈಸಿ ಸೇರಿದಂತೆ ಇರಾನ್ ವಿದೇಶಾಂಗ ಸಚಿವರು ಹಾಗೂ ಅಧಿಕಾರಿಗಳ ಸಾವಿಗೆ ಇಸ್ರೇಲ್ ಕಾರಣ ಎಂಬ ಆರೋಪ ಕೇಳಿಬಂದಿತ್ತು.

  • ಉಗ್ರ ಕೃತ್ಯಕ್ಕೆ ಸಹಕಾರ – ನಾಪತ್ತೆಯಾಗಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್‌

    ಉಗ್ರ ಕೃತ್ಯಕ್ಕೆ ಸಹಕಾರ – ನಾಪತ್ತೆಯಾಗಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್‌

    ಮೈಸೂರು: ಭಯೋತ್ಪಾಕ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಆರೋಪದ ಅಡಿ ಮೈಸೂರಿನಲ್ಲಿ (Mysuru) ವ್ಯಕ್ತಿಯೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ.

    ಮೈಸೂರಿನ‌ ರಾಜೀವ್ ನಗರದಲ್ಲಿ ನೆಲೆಸಿದ್ದ ನೂರುದ್ದೀನ್ ಅಲಿಯಾಸ್ ರಫಿ ಬಂಧಿತ ಆರೋಪಿ. ದಾಳಿ ವೇಳೆ ಮನೆಯಲ್ಲಿದ್ದ ಆತನ ಮೊಬೈಲ್ ಫೋನ್, ಪೆನ್‌ಡ್ರೈವ್ ಸೇರಿದಂತೆ ಮೊದಲಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    2014ರಲ್ಲಿ ಬೆಂಗಳೂರಿನ ಇಸ್ರೇಲ್ (Israel) ಹಾಗೂ ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿಗಳ ಮೇಲೆ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪ ಈತನ ಮೇಲಿದೆ. ಇದನ್ನೂ ಓದಿ: ಕೇಜ್ರಿವಾಲ್‌ಗೆ ʼವಿಶೇಷ ಸೌಲಭ್ಯʼನೀಡಲಾಗಿದೆ ಅಂತ ಜನ ಮಾತನಾಡ್ತಿದ್ದಾರೆ: ಜಾಮೀನು ಬಗ್ಗೆ ಅಮಿತ್‌ ಶಾ ಮಾತು

     

    ಶ್ರೀಲಂಕಾ ಪ್ರಜೆ ಮೊಹಮ್ಮದ್ ಸಕೀರ್ ಹುಸೇನ್ ಹಾಗೂ ಕೊಲಂಬೋದಲ್ಲಿರುವ ಪಾಕಿಸ್ತಾನದ ರಾಜತಾಂತ್ರಿಕ ಕಚೇರಿ ನೌಕರ ಪಾಕಿಸ್ತಾನದ ಪ್ರಜೆ ಅಮೀರ್ ಜುಬೇರ್ ಸಿದ್ದಿಕಿಯನ್ನು ಎನ್ಐಎ ಅಧಿಕಾರಿಗಳು 2014ರಲ್ಲಿ ಬಂಧಿಸಿದ್ದರು. ಇವರಿಗೆ ಭಾರತದ ನಕಲಿ ನೋಟು ಪೂರೈಸುವ ಮೂಲಕ ಭಯೋತ್ಪಾದಕ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ನೂರುದ್ದೀನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

    2023ರ ಆಗಸ್ಟ್‌ನಲ್ಲಿ ಜಾಮೀನಿನ (Bail) ಮೇಲೆ ಹೊರಬಂದಿದ್ದ ನೂರುದ್ದೀನ್ ಚೆನ್ನೈನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಕಾರಣಕ್ಕೆ ನೂರುದ್ದೀನ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಅಷ್ಟೇ ಅಲ್ಲದೇ ಆತನ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿತ್ತು. ಖಚಿತ ಮಾಹಿತಿ ಆಧಾರಿಸಿ ಬುಧವಾರ  ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಎನ್‌ಐಎ ಯಶಸ್ವಿಯಾಗಿದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಕಣ್ಣಾಮುಚ್ಚಾಲೆ ಆಟ – ವಿಮಾನ ನಿಲ್ದಾಣದಿಂದ ಬರಿಗೈಯಲ್ಲಿ ಪೊಲೀಸರು ವಾಪಸ್‌