Tag: IPL

  • ಬೆಂಗಳೂರು ಕರಗ, ಐಪಿಎಲ್ ಮ್ಯಾಚ್‍ಗೂ ಕೊರೊನಾ ಕಂಟಕ

    ಬೆಂಗಳೂರು ಕರಗ, ಐಪಿಎಲ್ ಮ್ಯಾಚ್‍ಗೂ ಕೊರೊನಾ ಕಂಟಕ

    ಬೆಂಗಳೂರು: ಕೊರೊನಾ ಭೀತಿ ನಡುವೆಯೂ ನಿಗದಿಯಂತೆ ಇಂಡಿಯನ್ ಪ್ರಿಮಿಯರ್ ಲೀಗ್‍ನ 13ನೇ ಆವೃತ್ತಿ ಟೂರ್ನಿ ನಡೆಯುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿನ್ನೆಯಷ್ಟೇ ಸ್ಪಷ್ಟಪಡಿಸಿದ್ದರು. ಆದರೆ ಕೊರೊನಾ ದೇಶದಲ್ಲಿ ಹಬ್ಬುತ್ತಿರುವ ಪರಿ ನೋಡಿದರೆ ಐಪಿಎಲ್ ನಡೆಯುತ್ತಾ ಎಂಬ ಅನುಮಾನ ಶುರುವಾಗಿದೆ.

    ಉದ್ಯಾನಗರಿಯಲ್ಲಿ ನಾಲ್ಕು ಪಾಸಿಟೀವ್ ಕೇಸ್‍ಗಳು ಪತ್ತೆಯಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳ ಆಯೋಜನೆಗೆ ರಾಜ್ಯ ಸರ್ಕಾರ ಹಿಂದೇಟು ಹಾಕಿದೆ. ಐಪಿಎಲ್ ಪಂದ್ಯಗಳ ಆತಿಥ್ಯಕ್ಕೆ ಬೆಂಗಳೂರು ಸಿದ್ಧವಿಲ್ಲ. ಐಪಿಎಲ್ ಪಂದ್ಯಗಳನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಪತ್ರ ಬರೆದಿದ್ದಾರೆ.

    ಮಾರ್ಚ್ 29ರಿಂದ ಆರಂಭವಾಗಬೇಕಿರುವ ಐಪಿಎಲ್‍ನಲ್ಲಿ ಆರ್‌ಸಿಬಿಯ 7 ಲೀಗ್ ಪಂದ್ಯಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ ವಹಿಸಬೇಕಿದೆ. ಐಪಿಎಲ್ ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ನಡೆಯಬೇಕಿರುವ ಪ್ರಸಿದ್ಧ ಕರಗ ಮಹೋತ್ಸವವನ್ನು ಮುಂದೂಡಲು ಸಹ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

  • ಧೋನಿಗೆ ಖಡಕ್ ಸೂಚನೆ ಕೊಟ್ಟ ಬಿಸಿಸಿಐ ಆಯ್ಕೆ ಸಮಿತಿ!

    ಧೋನಿಗೆ ಖಡಕ್ ಸೂಚನೆ ಕೊಟ್ಟ ಬಿಸಿಸಿಐ ಆಯ್ಕೆ ಸಮಿತಿ!

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡಕ್ಕೆ ರೀ ಎಂಟ್ರಿ ನೀಡುವ ವಿಚಾರವಾಗಿ ಬಿಸಿಸಿಐ ಆಯ್ಕೆ ಸಮಿತಿ ಕ್ಲಾರಿಟಿ ನೀಡಿದೆ. ಕಳೆದ ವರ್ಷದ ಏಕದಿನ ವಿಶ್ವಕಪ್ ಟೂರ್ನಿಯ ಬಳಿಕ ಟೀ ಇಂಡಿಯಾದಿಂದ ದೂರವೇ ಉಳಿದಿರುವ ಧೋನಿ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ರೇಸ್‍ನಲ್ಲಿ ನಿಲ್ಲಬೇಕಾದರೆ ಐಪಿಎಲ್ 2020ರ ಸೀಸನ್‍ನಲ್ಲಿ ತಮ್ಮ ಫಾರ್ಮ್ ನಿರೂಪಿಸಬೇಕು ಎಂದು ಆಯ್ಕೆ ಸಮಿತಿ ಸ್ಪಷ್ಟಪಡಿಸಿದೆ.

    ಮಾರ್ಚ್ 29 ರಿಂದ ಐಪಿಎಲ್ 2020ರ ಟೂರ್ನಿ ಆರಂಭವಾಗಲಿದ್ದು, ಈಗಾಗಲೇ ಧೋನಿ ಸಿಎಸ್‍ಕೆ ತಂಡದ ತರಬೇತಿ ಶಿಬಿರಕ್ಕೆ ಹಾಜರಾಗಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‍ಕೆ ಪ್ರಸಾದ್ ಅವರ ಅಧಿಕಾರದ ಅವಧಿ ಈಗಾಗಲೇ ಮುಕ್ತಾಯವಾಗಿದ್ದು, ಕನ್ನಡಿಗ ಸುನಿಲ್ ಜೋಶಿ ಕಳೆದ ವಾರವೇ ಆಯ್ಕೆ ಸಮಿತಿಗೆ ಆಯ್ಕೆಯಾಗಿದ್ದಾರೆ.

    ದಕ್ಷಿಣ ಆಫ್ರಿಕಾ ವಿರುದ್ಧದ ಮಾರ್ಚ್ 12ರಿಂದ ಆರಂಭವಾಗುವ ಏಕದಿನ ಕ್ರಿಕೆಟ್ ಟೂರ್ನಿಗೆ ಆಯ್ಕೆ ಸಮಿತಿ ತಂಡವನ್ನು ಪ್ರಕಟಿಸಿದ್ದು, ಆ ವೇಳೆ ಧೋನಿ ಅವರ ಹೆಸರನ್ನು ಪ್ರಸ್ತಾಪ ಮಾಡಿರಲಿಲ್ಲ. ಆದರೆ ಸದ್ಯ ಆಯ್ಕೆ ಸಮಿತಿ ನಡುವೆ ಧೋನಿ ಅವರ ಕ್ರಿಕೆಟ್ ಭವಿಷ್ಯ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.

    ಈ ಕುರಿತು ಸ್ಪಷ್ಟನೆ ನೀಡಿರುವ ಆಯ್ಕೆ ಸಮಿತಿ, ದಕ್ಷಿಣ ಆಫ್ರಿಕಾ ಟೂರ್ನಿಗೆ ತಂಡವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಧೋನಿ ಹೆಸರು ಪ್ರಸ್ತಾಪವಾಗಿಲ್ಲ. ಅವರ ಕ್ರಿಕೆಟ್ ಭವಿಷ್ಯದ ಕುರಿತು ಸಭೆಯಲ್ಲಿ ಯಾವುದೇ ಚರ್ಚೆ ನಡೆಸಿಲ್ಲ. ಆದರೆ ಐಪಿಎಲ್ ಟೂರ್ನಿಯಲ್ಲಿ ಧೋನಿ ಉತ್ತಮ ಪ್ರದರ್ಶನ ನೀಡಿದರೆ ಅವರು ಮತ್ತೆ ತಂಡಕ್ಕೆ ಕಮ್‍ಬ್ಯಾಕ್ ಮಾಡಬಹುದು. ಏಕೆಂದರೆ ಧೋನಿ ಅವರೊಂದಿಗೆ ಹಲವರು ತಂಡದಲ್ಲಿ ಸ್ಥಾನ ಪಡೆಯಲು ನೋಡುತ್ತಿದ್ದಾರೆ. ಒಂದೊಮ್ಮೆ ಧೋನಿ ಅವರಿಗಿಂತ ಬೇರೆ ಆಟಗಾರರು ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡದರೆ ಅಚ್ಚರಿ ಆಯ್ಕೆಗಳನ್ನು ಮಾಡುತ್ತೇವೆ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ನೂತನವಾಗಿ ಆಯ್ಕೆ ಸಮಿತಿಯ ಜವಾಬ್ದಾರಿ ವಹಿಸಿಕೊಂಡಿರುವ ಸುನಿಲ್ ಜೋಶಿ ಹಾಗೂ ಆಯ್ಕೆ ಸಮಿತಿಯ ಸದಸ್ಯರಿಗೆ ಧೋನಿ ಕ್ರಿಕೆಟ್ ಭವಿಷ್ಯ ಬಹುದೊಡ್ಡ ಸವಾಲಾಗಿತ್ತು. ಇತ್ತ ಇದಕ್ಕೂ ಮುನ್ನವೇ ಪ್ರತಿಕ್ರಿಯೆ ನೀಡಿದ್ದ ಎಂಎಸ್‍ಕೆ ಪ್ರಸಾದ್, ಆಯ್ಕೆ ಸಮಿತಿ ಟೀಂ ಇಂಡಿಯಾ ವಿಚಾರದಲ್ಲಿ ಧೋನಿ ಅವರಿಗಿಂತಲೂ ಮುಂದಿನ ಆಯ್ಕೆಗಳ ಬಗ್ಗೆ ಹೆಚ್ಚು ಗಮನ ನೀಡುವುದಾಗಿ ತಿಳಿಸಿದ್ದರು.

    ಉಳಿದಂತೆ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯುವ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ತಂಡದ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇತ್ತ ಧೋನಿ ಅವರ ಸ್ಥಾನದಲ್ಲಿ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದ ರಿಷಬ್ ಪಂತ್ ಕಳಪೆ ಪ್ರದರ್ಶನ ನೀಡುತ್ತಿರುವುದರಿಂದ ಕೆಎಲ್ ರಾಹುಲ್ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಧೋನಿ ಅವರಿಗೆ ಕಮ್‍ಬ್ಯಾಕ್ ಮಾಡುವ ಅವಕಾಶ ಸಿಗುವ ಸಾಧ್ಯತೆ ಇದೆ.

  • ಹಳೆ ಹುಡ್ಗಿ ವಾಪಸ್ ಬರ್ಲಿ ಅಂತ ಕೇಳಿಲ್ಲ – ಆದ್ರೆ ಆರ್‌ಸಿಬಿ ಕಪ್ ಗೆಲ್ಲೋ ತರ ಮಾಡಮ್ಮ

    ಹಳೆ ಹುಡ್ಗಿ ವಾಪಸ್ ಬರ್ಲಿ ಅಂತ ಕೇಳಿಲ್ಲ – ಆದ್ರೆ ಆರ್‌ಸಿಬಿ ಕಪ್ ಗೆಲ್ಲೋ ತರ ಮಾಡಮ್ಮ

    – ಮೈಸೂರಿನ ಚಾಮುಂಡಿ ಸನ್ನಿಧಾನದ ಆವರಣದಲ್ಲಿ ಅಭಿಮಾನಿಗಳಿಂದ ಪೂಜೆ

    ಬೆಂಗಳೂರು: ಕ್ರಿಕೆಟ್ ಹಬ್ಬವೆಂದೇ ಕರೆಸಿಕೊಳ್ಳುವ ಇಂಡಿಯನ್ ಪ್ರೀಮಿಯರ್ ಲೀಗ್‍ನ 13ನೇ ಆವೃತ್ತಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಮ್ಮ ತಂಡ ಚಾಂಪಿಯನ್ ಆಗಲಿ ಎಂದು ದೇವರ ಮೊರೆ ಹೋಗುತ್ತಿದ್ದಾರೆ.

    ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಮೈಸೂರಿನ ಚಾಮುಂಡಿ ಸನ್ನಿಧಾನದಲ್ಲಿ ಆರ್‌ಸಿಬಿ ಬ್ಯಾನರ್ ಹಿಡಿದು ಯುವಕರು ಪೂಜೆ ಮಾಡಿದ್ದಾರೆ. ಇಬ್ಬರು ಯುವಕರು ಬ್ಯಾನರ್ ಹಿಡಿದುಕೊಂಡಿದ್ದರೆ, ಮತ್ತೊಬ್ಬ ಯುವಕ ಬ್ಯಾನರಿಗೆ ಪೂಜೆ ಮಾಡಿದ್ದಾನೆ. ಇದನ್ನೂ ಓದಿ:  ಹೊಸ ದಶಕ, ಹೊಸ ಆರ್‌ಸಿಬಿ- ಹೇಗಿದ್ದ ಲೋಗೋ ಹೇಗೆ ಬದಲಾಯಿತು?

    ವಿಡಿಯೋದಲ್ಲಿ, ನೋಡು ತಾಯಿ. ನಾನು ಕೆಲಸ ಕೊಡು ಎಂದು ಕೇಳಲಿಲ್ಲ, ಹಳೆ ಹುಡುಗಿ ವಾಪಸ್ ಬರಲಿ ಎಂದು ನಾನು ಕೇಳುತ್ತಿಲ್ಲ. ನಮ್ಮ ಆರ್‌ಸಿಬಿ ಐಪಿಎಲ್ ಕಪ್ ಗೆಲ್ಲೋ ತರ ಮಾಡು ತಾಯಿ. ನಾಯಿ ಕಣ್ಣು, ನರಿ ಕಣ್ಣು ಎಲ್ಲರ ಕಣ್ಣು, ದುಷ್ಮನ್ ಕಣ್ಣುಗಳೆಲ್ಲಾ ಹೋಗಲಿ ಎಂದು ದೃಷ್ಟಿ ತೆಗೆಯುತ್ತೇನೆ. ಮಾಡಿಲ್ಲ ತಪ್ಪು ಈ ಸಲ ಬರಬೇಕು ನಮಗೆ ಕಪ್ಪು. ತಾಯಿ ಈ ಸಲ ಕಪ್ ಗೆಲ್ಲುವ ರೀತಿ ಮಾಡು ಎಂದು ದೇಗುಲದ ಆವರಣದಲ್ಲಿ ಆರ್‌ಸಿಬಿ ಅಭಿಮಾನಿಗಳು ಈಡುಗಾಯಿ ಒಡೆದಿದ್ದಾರೆ. ಇದನ್ನೂ ಓದಿ: ನಮ್ಮ ಬೆಂಗಳೂರು ಕುಟುಂಬ ರೆಡಿನಾ- ಕನ್ನಡದಲ್ಲೇ ಚಹಲ್ ಟ್ವೀಟ್

    ಕಳೆದ ತಿಂಗಳು ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ರಥೋತ್ಸವ ಜರುಗಿತ್ತು. ಈ ವೇಳೆ ಆರ್‌ಸಿಬಿ ಅಭಿಮಾನಿ ಹನೂರಿನ ರಘು ಅವರು ಬಾಳೆ ಹಣ್ಣಿನ ಮೇಲೆ `ಈ ಸಲ ಕಪ್ ನಮ್ದೆ’ ಎಂದು ಬರೆದು ಮಾದಪ್ಪನ ರಥಕ್ಕೆ ಎಸೆದು ಬೇಡಿಕೊಂಡಿದ್ದರು. ರಘು ಬಾಳೆಹಣ್ಣು ಎಸೆದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಸದ್ಯ ಆರ್‌ಸಿಬಿ ತಂಡ ಐಪಿಎಲ್‍ನಲ್ಲಿ ಕಪ್ ಗೆಲ್ಲಬೇಕು ಎಂದು ಅಭಿಮಾನಿಗಳು ಪೂಜೆ, ಹರಕೆ ಕಟ್ಟುವ ಮೂಲಕ ದೇವರ ಮೊರೆ ಹೋಗುತ್ತಿದ್ದಾರೆ.

  • ಧೋನಿ ಭವಿಷ್ಯ ಈಗಾಗಲೇ ನಿರ್ಧರವಾಗಿದೆ- ಎಂಎಸ್‍ಕೆ ಪ್ರಸಾದ್

    ಧೋನಿ ಭವಿಷ್ಯ ಈಗಾಗಲೇ ನಿರ್ಧರವಾಗಿದೆ- ಎಂಎಸ್‍ಕೆ ಪ್ರಸಾದ್

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ, ಮಹೇಂದ್ರ ಸಿಂಗ್ ಧೋನಿ ಅವರ ಭವಿಷ್ಯ ಈಗಾಗಲೇ ನಿರ್ಧರವಾಗಿದೆ ಎಂದು ಟೀಂ ಇಂಡಿಯಾದ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್ ಹೇಳಿದ್ದಾರೆ.

    2019ರ ವಿಶ್ವಕಪ್ ಸೆಮಿಫೈನಲ್ ನಂತರ ಎಂ.ಎಸ್.ಧೋನಿ ಯಾವುದೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರ ನಿವೃತ್ತಿಯ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಂಎಸ್‍ಕೆ ಪ್ರಸಾದ್, ಧೋನಿ ಹಾಗೂ ನಾವೇಲ್ಲ ಸೇರಿ ನಿವೃತ್ತಿಯ ವಿಚಾರವಾಗಿ ಚೆರ್ಚೆ ಮಾಡಿದ್ದೇವೆ. ಈ ವೇಳೆ ಅವರ ಮುಂದಿನ ಭವಿಷ್ಯ ನಿರ್ಧಾರವಾಗಿದೆ ಎಂದು ಹೇಳಿದರು.

    ಮಾಧ್ಯಮಗಳ ಜೊತೆ ಇಂದು ಮಾತನಾಡಿರುವ ಎಂಎಸ್‍ಕೆ, ಎಂಎಸ್ ಧೋನಿ ಅವರು ನನಗೆ ಮತ್ತು ಆಡಳಿತ ಮಂಡಳಿಗೆ ತಿಳಿಸಿರುವ ಹಾಗೇ ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟವಾಗಿದ್ದಾರೆ. ಇದು ಗೌಪ್ಯವಾಗಿರು ವಿಷಯವಾದ ಕಾರಣ ನಾನು ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ನಮ್ಮ ನಡುವೆ ಧೋನಿ ಅವರು ಚರ್ಚಿಸಿದ ಮತ್ತು ಹಂಚಿಕೊಂಡ ಯಾವುದೇ ವಿಷಯಗಳು ಗೌಪ್ಯವಾಗಿರುವುದು ಉತ್ತಮ. ಅದು ಅಲಿಖಿತ ಕೋಡ್ ಎಂದು ತಿಳಿಸಿದರು.

    ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಐಪಿಎಲ್‍ಗೆ ಧೋನಿ ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈಗಾಗಲೇ ಭರ್ಜರಿ ಅಭ್ಯಾಸ ನಡೆಸಿದೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ಸ್ಫೋಟಕ ಬ್ಯಾಟಿಂಗ್ ಮಾಡಿ ಕಠಿಣ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ವೇಳೆ ಎಂ.ಎಸ್.ಧೋನಿ ಸತತ ಐದು ಸಿಕ್ಸರ್ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಸಿಎಸ್‍ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮಾರ್ಚ್ 3ರಂದು ಚೆನ್ನೈಗೆ ಆಗಮಿಸಿ, ಅಭ್ಯಾಸ ಆರಂಭಿಸಿದ್ದಾರೆ. ಜೊತೆಗೆ ತಂಡದ ಅನುಭವಿ ಆಟಗಾರ ಸುರೇಶ್ ರೈನಾ ಸೇರಿದಂತೆ ಕೆಲ ಆಟಗಾರರು ಈಗಾಗಲೇ ಚೆನ್ನೈನ ಚಿದಂಬರಂ ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ನಡೆಸಿದ್ದಾರೆ. ಈ ಹಿಂದೆ ರಾಂಚಿಯಲ್ಲೂ ಕೂಡ ಧೋನಿ ಅವರು ರಣಜಿ ಆಟಗಾರರ ಜೊತೆ ಅಭ್ಯಾಸ ಮಾಡಿದ್ದರು.

  • ಸತತ 5 ಸಿಕ್ಸರ್ ಚಚ್ಚಿದ ಧೋನಿ – ವೈರಲ್ ವಿಡಿಯೋ ನೋಡಿ

    ಸತತ 5 ಸಿಕ್ಸರ್ ಚಚ್ಚಿದ ಧೋನಿ – ವೈರಲ್ ವಿಡಿಯೋ ನೋಡಿ

    ಚೆನ್ನೈ: ಇಂಡಿಯನ್ ಪ್ರಿಮಿಯರ್ ಲೀಗ್ 13ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಅಭ್ಯಾಸ ನಡೆಸಿದೆ. ಅದರಲ್ಲೂ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ಫೋಟಕ ಬ್ಯಾಟಿಂಗ್‍ಗೆ ಕಠಿಣ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ವೇಳೆ ಎಂ.ಎಸ್.ಧೋನಿ ಸತತ ಐದು ಸಿಕ್ಸರ್ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಚೆನ್ನೈ ಸೂಪರ್ ಸಿಕ್ಸ್ ತಂಡದ ಅನುಭವಿ ಆಟಗಾರ ಸುರೇಶ್ ರೈನಾ, ಕ್ಯಾಪ್ಟನ್ ಎಂ.ಎಸ್.ಧೋನಿ ಸೇರಿದಂತೆ ಕೆಲ ಆಟಗಾರರು ಈಗಾಗಲೇ ಚೆನ್ನೈನಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದಾರೆ. ನೆಟ್ ಒಳಗೆ ಬ್ಯಾಟಿಂಗ್ ನಡೆಸಿದ್ದ ಎಂಎಸ್‍ಡಿ ಸತತ ಐದು ಎಸೆತಗಳನ್ನು ಸಿಕ್ಸರ್ ಸಿಡಿಸಿದರು. ಈ ವೇಳೆ ನೆಟ್ ಹಿಂದೆ ನಿಂತಿದ್ದ ಸುರೇಶ್ ರೈನಾ ಫುಲ್ ಖುಷ್ ಆಗಿ ಧೋನಿ ಅಬ್ಬರ ನೋಡುತ್ತಿದ್ದರು. ಇದನ್ನೂ ಓದಿ: 37 ಎಸೆತಗಳಲ್ಲಿ ಸ್ಫೋಟಕ ಶತಕ- ಹಾರ್ದಿಕ್ ಪಾಂಡ್ಯ ಕಮ್‍ಬ್ಯಾಕ್

    2019ರ ವಿಶ್ವಕಪ್‍ನಲ್ಲಿ ಸೆಮಿಫೈನಲ್‍ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತ ನಂತರ ಧೋನಿ ಅವರು ಕ್ರಿಕೆಟ್‍ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮಾರ್ಚ್ ನಲ್ಲಿ ಆರಂಭವಾಗುತ್ತಿರುವ ಐಪಿಲ್‍ನಲ್ಲಿ ಅವರನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

    ಮಾರ್ಚ್ ನಲ್ಲಿ ಆರಂಭವಾಗುವ ಐಪಿಎಲ್‍ನಲ್ಲಿ ಧೋನಿ ಅಬ್ಬರಿಸಲು ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಮಾರ್ಚ್ 3 ರಂದು ಚೆನ್ನೈಗೆ ಬಂದಿದ್ದು, ಚಿದಂಬರಂ ಮೈದಾನದಲ್ಲಿ ಸುರೇಶ್ ರೈನಾ ಅವರ ಜೊತೆಗೆ ಅಭ್ಯಾಸ ನಡೆಸಿದ್ದಾರೆ. ಇದನ್ನೂ ಓದಿ: ಪರಿವರ್ತನೆಯೊಂದೇ ಶಾಶ್ವತವಾದದ್ದು ಎಂದ ವಿರಾಟ್

    ಧೋನಿ ಇತ್ತೀಚೆಗಷ್ಟೇ ತಮ್ಮ ಹುಟ್ಟೂರು ರಾಂಚಿಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಿಚ್ ಅನ್ನು ಸಮತಟ್ಟಾಗಿಸಲು ಇರುವ ಪಿಚ್ ರೋಲರ್ ವಾಹನವನ್ನು ಓಡಿಸಿದ್ದರು. ಇದನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಧೋನಿ ಸರಳತೆಗೆ ಅವರ ಫ್ಯಾನ್ಸ್ ಫಿದಾ ಆಗಿದ್ದರು.

  • ಎಬಿ ಡಿವಿಲಿಯರ್ಸ್‌ಗೆ ಹೆಡ್ ಕೋಚ್ ಡೆಡ್‍ಲೈನ್!

    ಎಬಿ ಡಿವಿಲಿಯರ್ಸ್‌ಗೆ ಹೆಡ್ ಕೋಚ್ ಡೆಡ್‍ಲೈನ್!

    ಕೇಪ್ ಟೌನ್: ದಕ್ಷಿಣ ಆಫ್ರಿಕಾ ತಂಡಕ್ಕೆ ರೀ ಎಂಟ್ರಿ ಕೊಡಲು ಸಿದ್ಧವಾಗಿರುವ ಸ್ಫೋಟಕ ಆಟಗಾರ ಎಬಿ ಡಿವಿಲಿಯರ್ಸ್‍ಗೆ ತಂಡದ ಹೆಡ್ ಕೋಚ್ ಮಾರ್ಕ್ ಬೌಚರ್ ಅಧಿಕೃತವಾಗಿ ಡೆಡ್‍ಲೈನ್ ನೀಡಿದ್ದಾರೆ. ತಂಡಕ್ಕೆ ಮತ್ತೆ ಸೇರ್ಪಡೆಯಾಗ ಬೇಕಾದರೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಳಿಕ ಜೂನ್‍ನಲ್ಲಿ ತಂಡದ ಆಯ್ಕೆಗೆ ಲಭ್ಯವಿರಬೇಕು ಎಂದು ಬೌಚರ್ ಹೇಳಿದ್ದಾರೆ.

    ಮಾರ್ಚ್ 9ರಿಂದ ಆರಂಭವಾಗಲಿರುವ ಐಪಿಎಲ್ 13ನೇ ಆವೃತ್ತಿಯ ಫೈನಲ್ ಪಂದ್ಯ ಮೇ24 ರಂದು ನಡೆಯಲಿದೆ. ಆರ್ ಸಿಬಿ ಪರ ಟೂರ್ನಿಯಲ್ಲಿ ಎಬಿಡಿ ಆಡುತ್ತಿದ್ದಾರೆ. ಇತ್ತ ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೆ ಜೂನ್‍ನಿಂದ ಸಿದ್ಧತೆ ಆರಂಭಿಸಲು ದಕ್ಷಿಣ ಆಫ್ರಿಕಾ ತಂಡ ನಿರ್ಧರಿಸಿದೆ. ಐಪಿಎಲ್ ಬಳಿಕ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಭಾಗಿಯಾಗಲಿದೆ. ಈ ಸರಣಿಯಲ್ಲಿ ಆಡುವ ಬಹುತೇಕ ಆಟಗಾರರು ಮುಂದಿನ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗುತ್ತಾರೆ ಎಂದು ಪರೋಕ್ಷವಾಗಿ ಬೌಚರ್ ತಿಳಿಸಿದ್ದಾರೆ. ಆ ವೇಳೆ ತಂಡದ ಆಯ್ಕೆಗೆ ಲಭ್ಯವಾಗುವ ಆಟಗಾರರನ್ನು ಪರಿಗಣಿಸಲಾಗುವುದು ಎಂದಿದ್ದಾರೆ.

    2018ರ ಐಪಿಎಲ್ ಬಳಿಕ ಸ್ವದೇಶಕ್ಕೆ ತೆರಳಿದ್ದ ಎಬಿ ಡಿವಿಲಿಯರ್ಸ್ ಅಚ್ಚರಿ ಎಂಬಂತೆ ನಿವೃತ್ತಿ ಘೋಷಿಸಿ ಶಾಕ್ ನೀಡಿದ್ದರು. ಆದರೆ 2019ರ ಏಕದಿನ ವಿಶ್ವಕಪ್ ಬಳಿಕ ಮತ್ತೆ ತಾವು ರಾಷ್ಟ್ರೀಯ ತಂಡಕ್ಕೆ ಮರಳುವ ಬಗ್ಗೆ ತಮ್ಮ ಮನಸ್ಸಿನ ಮಾತನ್ನು ತಿಳಿಸಿದ್ದರು. ಅದರಂತೆ ಶ್ರೀಲಂಕಾ ವಿರುದ್ಧದ ಟೂರ್ನಿಗೆ ತಂಡವನ್ನು ಪ್ರಕಟಿಸುವ ಮುನ್ನ ನಿವೃತ್ತಿ ವಾಪಸ್ ಪಡೆದು ಆಯ್ಕೆ ಸಮಿತಿಗೆ ಲಭ್ಯವಾಗುವ ಯೋಚನೆಯಲ್ಲಿ ಎಬಿಡಿ ಇದ್ದರು ಎನ್ನಲಾಗಿದೆ.

    ಎಬಿ ಡಿವಿಲಿಯರ್ಸ್ ಕಳೆದ ವರ್ಷದ ಅಂತ್ಯದ ವೇಳೆಗೆ ಕ್ರಿಕೆಟ್‍ಗೆ ರೀ ಎಂಟ್ರಿ ನೀಡುವ ಕುರಿತು ಚರ್ಚೆ ನಡೆದಿತ್ತು. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಸ್ ಹಂತಕ್ಕೂ ತೆರಳದ ದಕ್ಷಿಣ ಆಫ್ರಿಕಾ ಟೂರ್ನಿಯಿಂದ ಬಹುಬೇಗ ನಿರ್ಗಮಿಸಿತ್ತು. ಟೂರ್ನಿಯ ಬಳಿಕ ತಂಡದ ಅನುಭವಿ ಆಟಗಾರರು ಕೂಡ ಎಬಿ ಡಿವಿಲಿಯರ್ಸ್ ರಂತಹ ಆಟಗಾರರ ಅಗತ್ಯ ತಂಡಕ್ಕಿದೆ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಕೆಲ ಕ್ರಿಕೆಟಿಗರು ಎಬಿಡಿ ಅವರ ನಡೆಯನ್ನು ಟೀಕೆ ಮಾಡಿದ್ದರು. ಟಿ20 ಲೀಗ್‍ಗಳಲ್ಲಿ ಆಡಲು ಎಬಿಡಿ ನಿವೃತ್ತಿ ಘೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇಂತಹ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಬಿಡಿ ರೀಎಂಟ್ರಿ ತಡವಾಯಿತು ಎನ್ನಲಾಗಿದೆ.

  • ಐಪಿಎಲ್ ನಗದು ಬಹುಮಾನದಲ್ಲಿ ಶೇ.50ರಷ್ಟು ಕಡಿತ- ಬಿಸಿಸಿಐ ಹೇಳಿದ್ದೇನು?

    ಐಪಿಎಲ್ ನಗದು ಬಹುಮಾನದಲ್ಲಿ ಶೇ.50ರಷ್ಟು ಕಡಿತ- ಬಿಸಿಸಿಐ ಹೇಳಿದ್ದೇನು?

    ಮುಂಬೈ: ಭಾರತದ ಆರ್ಥಿಕ ಹಿಂಜರಿತದ ಬಿಸಿ ಐಪಿಎಲ್‍ಗೂ ತಟ್ಟಿದೆ. ವಿಶ್ವದ ಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿಕೊಂಡಿರುವ ಬಿಸಿಸಿಐ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಬಹುಮಾನದ ಮೊತ್ತಕ್ಕೆ ಕತ್ತರಿ ಪ್ರಯೋಗ ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಮೂಲಗಳ ಮಾಹಿತಿಯ ಅನ್ವಯ 2020ರ ಐಪಿಎಲ್ ಟೂರ್ನಿಯ ಬಹುಮಾನದ ಮೊತ್ತ ಶೇ.50 ರಷ್ಟು ಕಡಿಮೆಯಾಗಿದ್ದು, ಐಪಿಎಲ್ ಪ್ರಶಸ್ತಿ ಗೆದ್ದ ತಂಡಕ್ಕೆ ನೀಡಲಾಗುತ್ತಿದ್ದ 20 ಕೋಟಿ ರೂ. ಬಹುಮಾನದ ಬದಲಾಗಿ 10 ಕೋಟಿ ರೂ. ನಿಗದಿ ಮಾಡಿದೆ. ಉಳಿದಂತೆ ರನ್ನರ್ ಅಪ್‍ಗೆ 6.25 ಕೋಟಿ ರೂ. ಹಾಗೂ 3 ಮತ್ತು 4ನೇ ಸ್ಥಾನ ಪಡೆದ ತಂಡಗಳಿಗೆ ತಲಾ 4.375 ಕೋಟಿ ರೂ. ನೀಡಲಾಗುತ್ತದೆ ಎನ್ನಲಾಗಿದೆ.

    ಮಾರ್ಚ್ 29 ರಿಂದ ಈ ಸಾಲಿನ ಐಪಿಎಲ್ ಆವೃತ್ತಿ ಆರಂಭವಾಗಲಿದ್ದು, ಈಗಾಗಲೇ ಟೂರ್ನಿಯ ವೇಳಾಪಟ್ಟಿಯೂ ಘೋಷಣೆಯಾಗಿದೆ. ಕಳೆದ ಬಾರಿ ಚಾಂಪಿಯನ್ ಆಗಿದ್ದ ಮುಂಬೈ ತಂಡ 20 ಕೋಟಿ ರೂ. ನಗದು ಬಹುಮಾನವನ್ನು ಪಡೆದಿತ್ತು. ಐಪಿಎಲ್ ಟೂರ್ನಿಯಿಂದ ಬಿಸಿಸಿಐ ಅಧಿಕ ಮೊತ್ತದ ಆದಾಯವನ್ನು ಪಡೆಯುತ್ತಿದೆ. ಆದರೆ ಟೂರ್ನಿಯಲ್ಲಿ ಭಾಗಿಯಾಗುವ ಫ್ರಾಂಚೈಸಿಗಳು ಕೂಡ ಆರ್ಥಿಕವಾಗಿ ಬಲಿಷ್ಠವಾಗಿರುವುದರಿಂದ ಭಾರೀ ಮೊತ್ತದ ನಗದು ಬಹುಮಾನ ನೀಡುವ ಅಗತ್ಯವಿಲ್ಲ ಎಂಬುವುದು ಬಿಸಿಸಿಐ ಚಿಂತನೆಯಾಗಿದೆ ಎನ್ನಲಾಗಿದೆ.

    ಈ ಹಿಂದಿನ ಟೂರ್ನಿಗಳಿಗೆ ಹೋಲಿಕೆ ಮಾಡಿದರೆ ಐಪಿಎಲ್ ಫ್ರಾಂಚೈಸಿಗಳು ಪ್ರಯೋಜಿತ ರೂಪದಲ್ಲಿ ಭಾರೀ ಮೊತ್ತದ ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದಲೇ ಬಿಸಿಸಿಐ ಈ ಚಿಂತನೆ ನಡೆಸಿದೆ. ಅಲ್ಲದೇ ಟೂರ್ನಿಯಲ್ಲಿ ಪಂದ್ಯಗಳನ್ನು ಆಯೋಜಿಸುವ ಕ್ರಿಕೆಟ್ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ 20 ಲಕ್ಷ ರೂ. ನೀಡಬೇಕೆಂದು ಬಿಸಿಸಿಐ ತಿಳಿಸಿದೆ. ಪರಿಣಾಮ ಪಂದ್ಯಗಳನ್ನು ಆಯೋಜಿಸುವ ಕ್ರಿಕೆಟ್ ಸಂಸ್ಥೆಗಳು ಪ್ರತಿ ಪಂದ್ಯಕ್ಕೆ 1 ಕೋಟಿ ರೂ. ಪಡೆದುಕೊಳ್ಳುತ್ತವೆ.

    ಬಿಸಿಸಿಐ ಈ ಹಿಂದೆ 50 ಲಕ್ಷ ರೂ. ಹಾಗೂ ಫ್ರಾಂಚೈಸಿಗಳು 30 ಲಕ್ಷ ರೂ.ಗಳನ್ನು ಕ್ರಿಕೆಟ್ ಸಂಸ್ಥೆಗಳಿಗೆ ನೀಡುತ್ತಿದ್ದವು. ಬಿಸಿಸಿಐ ಹೊಸ ನಿರ್ಧಾರದಿಂದ ಈಗ ತಲಾ 50 ಲಕ್ಷ ರೂ. ನೀಡಲಾಗುತ್ತದೆ. ಮತ್ತೊಂದೆಡೆ ಟೂರ್ನಿಯ ಪ್ಲೇ ಆಫ್ ಪಂದ್ಯಗಳವರೆಗಿನ ಲೀಗ್ ಪಂದ್ಯಗಳ ಬಹುತೇಕ ಆದಾಯ ಫ್ರಾಂಚೈಸಿಗಳಿಗೆ ಸಲ್ಲುತ್ತದೆ. ಆದ್ದರಿಂದ ಬಹುಮಾನ ಮೊತ್ತವನ್ನು ಕಡಿಮೆ ಮಾಡುವ ಮೂಲಕ ವೆಚ್ಚವನ್ನು ಕಡಿತಗೊಳಿಸುವ ಚಿಂತನೆಯನ್ನು ಬಿಸಿಸಿಐ ಸಮಿತಿ ಮಾಡಿದೆ ಎನ್ನಲಾಗಿದೆ. ಇತ್ತ ಬಿಸಿಸಿಐ ನಿರ್ಧಾರದ ಕುರಿತು ಫ್ರಾಂಚೈಸಿಗಳು ಅಸಮಾಧಾನ ವ್ಯಕ್ತಪಡಿಸಿ ಚರ್ಚೆಗೆ ಮುಂದಾಗಿವೆ. ಈ ಬಾರಿಯ ಐಪಿಎಲ್ ಟೂರ್ನಿಯ ಉದ್ಘಾಟನಾ ಸಮಾರಂಭವನ್ನು ಕೂಡ ಬಿಸಿಸಿಐ ಕೈಬಿಟ್ಟಿದನ್ನು ಇಲ್ಲಿ ನೆನೆಯಬಹುದಾಗಿದೆ.

  • ಕಳ್ಳತನ ಕೇಸಲ್ಲಿ ಜೈಲು ಸೇರಿದ ಆರ್‌ಸಿಬಿ ಮಾಜಿ ಆಟಗಾರ

    ಕಳ್ಳತನ ಕೇಸಲ್ಲಿ ಜೈಲು ಸೇರಿದ ಆರ್‌ಸಿಬಿ ಮಾಜಿ ಆಟಗಾರ

    ಸಿಡ್ನಿ: ಆರ್‌ಸಿಬಿ ತಂಡದಲ್ಲಿ ಮಿಂಚು ಹರಿಸಿದ್ದ ಅಂತರರಾಷ್ಟ್ರೀಯ ಕ್ರಿಕೆಟಿಗ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಲ್ಯೂಕ್ ಪೊಮರ್ಸ್‌ಬಾಚ್ ಈಗ ಕಳ್ಳನಾಗಿದ್ದಾನೆ.

    ಕಳ್ಳತನದ ಪ್ರಕರಣದಲ್ಲಿ ಸಿಡ್ನಿ ಪೊಲೀಸರು ಲ್ಯೂಕ್ ಪೊಮರ್ಸ್‌ಬಾಚ್ ಬಂಧಿಸಿದ್ದಾರೆ. ಈ ಹಿಂದೆ ಲ್ಯೂಕ್ ಪೊಮರ್ಸ್‌ಬಾಚ್ ಬೈಕ್ ಕಳ್ಳತನ, ಮದ್ಯದಂಗಡಿಯಲ್ಲಿ ಲಿಕ್ಕರ್ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದರು. ಈಗ ಮತ್ತೊಮ್ಮೆ ಕಳ್ಳತನ ಮಾಡಿ ಜೈಲು ಸೇರಿದ್ದಾರೆ. 2014ರಲ್ಲಿ ಕ್ರಿಕೆಟ್‍ಗೆ ವಿದಾಯ ಹೇಳಿದ್ದ ಕ್ರಿಕೆಟಿಗ ಕೆಟ್ಟ ಚಟಗಳ ದಾಸನಾಗಿದ್ದು, ಮನೆ ಕೂಡ ಇಲ್ಲವಾಗಿದೆ. ಕಾರಿನಲ್ಲಿಯೇ ವಾಸಮಾಡುತ್ತಿದ್ದರು. ಇದನ್ನೂ ಓದಿ: ಪಾಕ್ ಪೌರತ್ವಕ್ಕೆ ಮುಂದಾದ ಸನ್‍ರೈಸರ್ಸ್ ಮಾಜಿ ಆಲ್‍ರೌಂಡರ್ ಡ್ಯಾರೆಲ್ ಸ್ಯಾಮಿ

    ಪಶ್ಚಿಮ ಆಸ್ಟ್ರೇಲಿಯಾ ಕ್ರಿಕೆಟಿಗ ಲ್ಯೂಕ್ ಪೊಮರ್ಸ್‌ಬಾಚ್ ಟಿ20 ವಲಯಗಳಲ್ಲಿ ಚಿರಪರಿಚಿತ ಹೆಸರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಆಯ್ಕೆಯಾದ ಅವರು ತಮ್ಮ ತಾಯ್ನಾಡಿನಲ್ಲಿ ಬಿಗ್ ಬ್ಯಾಷ್ ಲೀಗ್ ವಿಜೇತ ತಂಡದ ಸದಸ್ಯರಾಗಿದ್ದರು. ಆದರೆ 35ರ ಹರೆಯದ ಅವರು ಅನೇಕ ಕಳ್ಳತನ ಪ್ರಕರಣಕ್ಕೆ ಗುರಿಯಾಗಿದ್ದಾರೆ.

  • ಪಾಕ್ ಪೌರತ್ವಕ್ಕೆ ಮುಂದಾದ ಸನ್‍ರೈಸರ್ಸ್ ಮಾಜಿ ಆಲ್‍ರೌಂಡರ್ ಡ್ಯಾರೆಲ್ ಸ್ಯಾಮಿ

    ಪಾಕ್ ಪೌರತ್ವಕ್ಕೆ ಮುಂದಾದ ಸನ್‍ರೈಸರ್ಸ್ ಮಾಜಿ ಆಲ್‍ರೌಂಡರ್ ಡ್ಯಾರೆಲ್ ಸ್ಯಾಮಿ

    – ಕಳಪೆ ಆಟದಿಂದ ಐಪಿಎಲ್‍ನಿಂದ ಹೊಬಿದ್ದಿದ್ದ ವಿಂಡೀಸ್ ಆಟಗಾರ
    – ಪಾಕಿಸ್ತಾನ ಸೂಪರ್ ಲೀಗ್‍ನಲ್ಲಿ ಮಿಂಚಿದ ಸ್ಯಾಮಿ

    ಇಸ್ಲಾಮಾಬಾದ್: ಸನ್‍ರೈಸರ್ಸ್ ಹೈದರಾಬಾದ್ ಮಾಜಿ ಆಟಗಾರ, ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ಯಾರೆನ್ ಸ್ಯಾಮಿ ಪಾಕಿಸ್ತಾನದ ಪ್ರಜೆಯಾಗಲು ಸಜ್ಜಾಗಿದ್ದು, ಅವರಿಗೆ ಗೌರವ ಪೌರತ್ವ ನೀಡುವ ಅರ್ಜಿಯನ್ನು ಪಾಕ್ ಅಧ್ಯಕ್ಷರಿಗೆ ರವಾನಿಸಲಾಗಿದೆ.

    ಇಂಡಿಯನ್ ಪ್ರಿಮಿಯರ್ ಲೀಗ್‍ನಲ್ಲಿ ಕಳಪೆ ಪದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದ ಡ್ಯಾರೆಲ್ ಸ್ಯಾಮಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್) ಸೇರಿ ಮಿಂಚಿದ್ದಾರೆ. ಉದ್ಯಮಿ ಪಿಎಸ್‍ಎಲ್‍ನ ಫ್ರ್ಯಾಂಚೈಸ್ ಜಾವೆದ್ ಅಫ್ರಿದಿ ಮಾಲೀಕತ್ವದ ಪೇಶ್ವರ್ ಜಲ್ಮಿ ತಂಡದಲ್ಲಿ ಡ್ಯಾರೆನ್ ನಾಯಕರಾಗಿದ್ದಾರೆ.

    ಡ್ಯಾರೆನ್‍ಗೆ ಗೌರವ ಪೌರತ್ವ ಕೊಡಿಸುವ ಇಡೀ ಪ್ರಕ್ರಿಯೆಯನ್ನು ಜಾವೆದ್ ಅಫ್ರಿದಿ ಆರಂಭಿಸಿದರು. ಜೊತೆಗೆ ವಿಂಡೀಸ್ ಕ್ರಿಕೆಟಿಗರ ಅರ್ಜಿಯನ್ನು ಸ್ವೀಕರಿಸುತ್ತಾರೆ ಎಂಬ ಭರವಸೆ ಕೂಡ ವ್ಯಕ್ತಪಡಿಸಿದ್ದಾರೆ.

    ‘ನಾವು ಡೇರೆನ್ ಸ್ಯಾಮಿ ಅವರಿಗೆ ಪಾಕಿಸ್ತಾನದ ಗೌರವ ಪೌರತ್ವಕ್ಕಾಗಿ ವಿನಂತಿಸಿದ್ದೇವೆ. ಈ ಸಂಬಂಧ ಅರ್ಜಿಯನ್ನು ಪಾಕಿಸ್ತಾನ ಅಧ್ಯಕ್ಷರಿಗೆ ನೀಡಿದ್ದೇವೆ. ಸ್ಯಾಮಿ ಪರ ಒಳ್ಳೆಯ ಮಾತುಗಳನ್ನು ಹೇಳಬೇಕೆಂದು ಪಿಸಿಬಿ ಅಧ್ಯಕ್ಷರಿಗೆ ವಿನಂತಿಸಿದ್ದೇನೆ. ಆದ್ದರಿಂದ ಗೌರವ ಪೌರತ್ವವನ್ನು ಅಧ್ಯಕ್ಷರು ಅನುಮೋದಿಸುತ್ತಾರೆ ಎಂಬ ಭರವಸೆ ಇದೆ. ಲಾಹೋರ್‍ನಲ್ಲಿ ಪಿಎಸ್‍ಎಲ್ ಸೀಸನ್ 2ರ ಅಂತಿಮ ಪಂದ್ಯವನ್ನು ನಡೆಸಲು ಪಿಸಿಬಿ ಪ್ರಯತ್ನಿಸುತ್ತಿದ್ದಾಗ ಸ್ಯಾಮಿ ಅವರ ಹೇಳಿಕೆಯಿಂದ ನಾವು ತುಂಬಾ ಭಾವುಕರಾಗಿದ್ದೇವು ಎಂದು ಜಾವೆದ್ ಅಫ್ರದಿ ಹೇಳಿದರು.

    ಡ್ಯಾರೆನ್ ಸ್ಯಾಮಿಗೆ ಪಾಕಿಸ್ತಾನದ ಪ್ರೀತಿ:
    ಸ್ಯಾಮಿ ಎಲ್ಲಾ ಐದು ಆವೃತ್ತಿಗಳಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್)ನ ಭಾಗವಾಗಿದ್ದಾರೆ. ಜೊತೆಗೆ ದೇಶ ಮತ್ತು ಅದರ ಜನರ ಮೇಲಿನ ಪ್ರೀತಿಯನ್ನು ಅನೇಕ ಸಂದರ್ಭಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ತವರಿನಲ್ಲಿ ಮತ್ತೆ ಟೂರ್ನಿ ಆರಂಭಿಸಿದಾಗ ಸಾಥ್ ನೀಡಿದ ವಿದೇಶಿ ಆಟಗಾರರಲ್ಲಿ ಡ್ಯಾರೆನ್ ಸ್ಯಾಮಿ ಕೂಡ ಒಬ್ಬರು.

    ‘ಪಾಕಿಸ್ತಾನ ಬಗ್ಗೆ ಅಪಾರ ಪ್ರೀತಿ ಇದೆ. ಇದು ನನ್ನ ಭಾವನೆ. ನನ್ನ ಬಳಿ ಪಾಸ್‌ಪೋರ್ಟ್ ಇದೆಯೋ ಇಲ್ಲವೋ, ಈ ದೇಶಕ್ಕೆ ನನ್ನ ಕೊಡುಗೆ ಎಲ್ಲವನ್ನೂ ಒದಗಿಸುತ್ತದೆ ಎಂದು ಭಾವಿಸುತ್ತೇನೆ. ಈ ದೇಶದೊಂದಿಗೆ ನನ್ನನ್ನು ಸೇರಿಸಿಕೊಳ್ಳಲು ಪಾಸ್‌ಪೋರ್ಟ್ ಅಗತ್ಯವಿಲ್ಲ’ ಎಂದು ಸ್ಯಾಮಿ ಹೇಳಿದ್ದಾರೆ.

    ಪಿಎಸ್‍ಎಲ್ ಟ್ರೋಲ್:
    ಪಿಎಸ್‍ಎಲ್ 5ನೇ ಆವೃತ್ತಿಯಲ್ಲಿ ಒಟ್ಟು 6 ತಂಡಗಳಿದ್ದು, ಫೆಬ್ರವರಿ 20ರಿಂದ ಆರಂಭಗೊಂಡಿದೆ. ಆದರೆ ಚಾಂಪಿಯನ್‍ಶಿಪ್ ತಂಡಕ್ಕೆ 3.5 ಕೋಟಿ ರೂ. ನೀಡಲಾಗುತ್ತಿದೆ. ಇದೇ ವಿಚಾರವನ್ನು ಎತ್ತಿಕೊಂಡ ನೆಟ್ಟಿಗರು ಪಾಕಿಸ್ತಾನದ ಕಾಲೆಳೆಯುತ್ತಿದ್ದಾರೆ.