Tag: IPL

  • ಕೊಹ್ಲಿಯ ರನ್ ಮೆಷಿನ್ ಬಿರುದು ಕಿತ್ತುಕೊಂಡ ಸಿರಾಜ್

    ಕೊಹ್ಲಿಯ ರನ್ ಮೆಷಿನ್ ಬಿರುದು ಕಿತ್ತುಕೊಂಡ ಸಿರಾಜ್

    ಅಹಮದಾಬಾದ್: ಆರ್‌ಸಿಬಿ ತಂಡದ ರನ್ ಮೆಷಿನ್ ಎಂದು ಬಿರುದು ಪಡೆದುಕೊಂಡಿದ್ದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಈ ಬಾರಿ ಬೌಲರ್ ಮೊಹಮ್ಮದ್ ಸಿರಾಜ್ ಆರ್‌ಸಿಬಿ ತಂಡದ ರನ್ ಮೆಷಿನ್ ಎಂದು ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ.

    15ನೇ ಆವೃತ್ತಿ ಐಪಿಎಲ್‍ನಲ್ಲಿ ಸಿರಾಜ್ 15 ಪಂದ್ಯಗಳನ್ನು ಆಡಿ 10.7 ಎಕಾನಮಿಯಲ್ಲಿ 514 ರನ್ ಬಿಟ್ಟುಕೊಟ್ಟು ಕೇವಲ 9 ವಿಕೆಟ್ ಪಡೆದು ದುಬಾರಿ ಬೌಲರ್ ಎನಿಸಿಕೊಂಡಿದ್ದಾರೆ. ಈ ಬಾರಿ ಪ್ಲೇ ಆಫ್ ಪ್ರವೇಶ ಪಡೆದಿದ್ದ ಆರ್‌ಸಿಬಿ ತಂಡ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಆರ್‌ಸಿಬಿ ಪ್ಲೇ ಆಫ್ ಪ್ರವೇಶ ಪಡೆದಿದ್ದು ಅದೃಷ್ಟದಾಟದ ಮೂಲಕ ಸಿರಾಜ್ ಕಳಪೆ ಬೌಲಿಂಗ್ ಪ್ಲೇ ಆಫ್‌ನಲ್ಲೂ ಮುಂದುವರಿಸಿ ತಂಡದ ಸೋಲಿಗೆ ಕಾರಣರಾಗಿದ್ದಾರೆ ಎಂದು ನೆಟ್ಟಿಗರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಈ ಸಲ ಕಪ್ ನಮ್ದೇ ಮುಂದಿನ ವರ್ಷಕ್ಕೆ – ಆರ್‌ಸಿಬಿಗೆ ಹೀನಾಯ ಸೋಲು – ರಾಯಲ್ ಆಗಿ ಫೈನಲ್‍ಗೆ ಎಂಟ್ರಿಕೊಟ್ಟ ಆರ್‌ಆರ್

    ಈ ಬಾರಿಯ ಐಪಿಎಲ್‍ನಲ್ಲಿ ಬ್ಯಾಟಿಂಗ್‍ನಲ್ಲಿ ಸದ್ದು ಮಾಡದೇ ಸೈಲೆಂಟ್ ಆಗಿದ್ದ ವಿರಾಟ್ ಕೊಹ್ಲಿ ಬದಲು ಸಿರಾಜ್ ಬೌಲಿಂಗ್‍ನಲ್ಲಿ 500ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟು ರನ್ ಮೆಷಿನ್ ಆಗಿದ್ದಾರೆ ಎಂಬ ಹಲವು ಕಾಮೆಂಟ್‍ಗಳು ಸಾಮಾಜಿಕ ಜಾಲತಾಣದಲ್ಲಿ ಸಿರಾಜ್ ವಿರುದ್ಧವಾಗಿ ಹರಿದಾಡುತ್ತಿದೆ. ಇದನ್ನೂ ಓದಿ: ಒಂದೇ ಐಪಿಎಲ್‌ನಲ್ಲಿ 4 ಶತಕ ಸಿಡಿಸಿದ ಬಟ್ಲರ್- ಕೊಹ್ಲಿ ದಾಖಲೆಗೆ ಸಮ

    ಅಲ್ಲದೇ ಸಿರಾಜ್ 15ನೇ ಆವೃತ್ತಿ ಐಪಿಎಲ್‍ನಲ್ಲಿ ಒಟ್ಟು 31 ಸಿಕ್ಸ್ ಹೊಡೆಸಿಕೊಂಡು ಒಂದೇ ಸೀಸನ್‍ನಲ್ಲಿ ಅತಿ ಹೆಚ್ಚು ಸಿಕ್ಸ್ ಹೊಡೆಸಿಕೊಂಡ ಬೌಲರ್ ಎಂಬ ಅಪಕೀರ್ತಿಗೆ ಒಳಗಾಗಿದ್ದಾರೆ. ಈ ಹಿಂದೆ ಚೆನ್ನೈ ತಂಡದ ಬ್ರಾವೋ 2018ರ ಒಂದೇ ಸೀಸನ್‍ನಲ್ಲಿ 16 ಪಂದ್ಯಗಳಿಂದ 29 ಸಿಕ್ಸ್ ಹೊಡೆಸಿಕೊಂಡಿದ್ದರು.

  • ಒಂದೇ ಐಪಿಎಲ್‌ನಲ್ಲಿ 4 ಶತಕ ಸಿಡಿಸಿದ ಬಟ್ಲರ್- ಕೊಹ್ಲಿ ದಾಖಲೆಗೆ ಸಮ

    ಒಂದೇ ಐಪಿಎಲ್‌ನಲ್ಲಿ 4 ಶತಕ ಸಿಡಿಸಿದ ಬಟ್ಲರ್- ಕೊಹ್ಲಿ ದಾಖಲೆಗೆ ಸಮ

    ಅಹಮದಾಬಾದ್: ಫೈನಲ್‍ಗೆ ಲಗ್ಗೆ ಇಡಲು ಗಲ್ಲಲೇಬೇಕಾದ ಪಂದ್ಯದಲ್ಲಿ ರಾಜಸ್ಥಾನ ಪರ ಜೋಸ್ ಬಟ್ಲರ್ ಬ್ಯಾಟಿಂಗ್ ಜೋಶ್‍ಗೆ ಆರ್‌ಸಿಬಿ ಕಂಗೆಟ್ಟು ಮನೆ ದಾರಿ ಹಿಡಿದಿದೆ.ಈ ಮೂಲಕ ಬಟ್ಲರ್ 2006ರಲ್ಲಿ ಕೊಹ್ಲಿ ಮಾಡಿದ್ದ ದಾಖಲೆಗೆ ಸಮನಾಗಿದ್ದಾರೆ.

    ಈ ಬಾರಿಯ ಕ್ವಾಲಿಫೈಯರ್ 2ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್‍ಗಳಿಂದ ಸೋಲಿಸಿದ ರಾಜಸ್ಥಾನ್ ರಾಯಲ್ಸ್ ಐಪಿಎಲ್ ಫೈನಲ್‍ಗೆ ಪ್ರವೇಶಿಸಿದೆ. ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದ ಬಟ್ಲರ್ ಕೊಹ್ಲಿ ದಾಖಲೆಗೆ ಸರಿಸಮರಾಗಿದ್ದಾರೆ. ಈ ಬಾರಿಯ ಐಪಿಎಲ್‍ನಲ್ಲಿ ಜೋಸ್ ಬಟ್ಲರ್ 4ನೇ ಬಾರಿ ಶತಕವನ್ನು ಸಿಡಿಸುವ ಮೂಲಕ 2006ರಲ್ಲಿ ಈ ಸಾಧನೆ ಮಾಡಿದ್ದ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟುವ ಎಲ್ಲಾ ಲಕ್ಷಣಗಳು ಇವೆ.

    ನಿನ್ನೆ ನಡೆದ ಪಂದ್ಯದಲ್ಲಿ ಬಟ್ಲರ್ ಕೇವಲ 59 ಎಸೆತಗಳಲ್ಲಿ ಭರ್ಜರಿ ಶತಕವನ್ನು ಸಿಡಿಸಿ ಜಯಕ್ಕೆ ಕಾರಣರಾಗಿದ್ದರು. ಪ್ರಸಿದ್ಧ್ ಕೃಷ್ಣ ಮತ್ತು ಓಬೇದ್ ಮೆಕಾಯ್ ಅವರ ಬೌಲಿಂಗ್‍ಗೆ ಭರ್ಜರಿ ಪ್ರದರ್ಶನ ತೋರಿದ ಬಟ್ಲರ್ 60 ಎಸೆತಗಳಿಗೆ 106(ಔಟಾಗದೆ) ರನ್ ಸಿಡಿಸಿದ್ದರು. ಈ ಬಾರಿಯ ಐಪಿಎಲ್‍ನಲ್ಲಿ ಬಟ್ಲರ್ ಈಗಾಗಲೇ 824 ರನ್ ಗಳಿಸಿದ್ದಾರೆ.

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್ 2ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಏಳು ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ರಾಜಸ್ಥಾನ್ ರಾಯಲ್ಸ್ ಐಪಿಎಲ್ 2022 ರ ಫೈನಲ್‍ಗೆ ಪ್ರವೇಶಿಸಿದೆ. ಇದನ್ನೂ ಓದಿ: ಈ ಸಲ ಕಪ್ ನಮ್ದೇ ಮುಂದಿನ ವರ್ಷಕ್ಕೆ – ಆರ್‌ಸಿಬಿಗೆ ಹೀನಾಯ ಸೋಲು – ರಾಯಲ್ ಆಗಿ ಫೈನಲ್‍ಗೆ ಎಂಟ್ರಿಕೊಟ್ಟ ಆರ್‌ಆರ್

    ವಿರಾಟ್ ಕೊಹ್ಲಿ ಹಾಗೂ ಡೇವಿಡ್ ವಾರ್ನರ್ ನಂತರ ಬಟ್ಲರ್ ಐಪಿಎಲ್‍ನ ಒಂದೇ ಋತುವಿನಲ್ಲಿ 800ರನ್ ಗಡಿ ದಾಟಿದ ಮೂರನೇ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಕೊಹ್ಲಿ 2016ರ ಐಪಿಎಲ್‍ನಲ್ಲಿ ದಾಖಲೆಯ 973ರನ್ ಗಳಿಸಿದರು. ಸನ್‍ರೈಸರ್ಸ್ ಹೈದರಾಬಾದ್‍ಗೆ ತಮ್ಮ ಚೊಚ್ಚಲ ಪ್ರಶಸ್ತಿಯನ್ನು ಮುದ್ರೆಯೊತ್ತಲು ಸಹಾಯ ಮಾಡಲು ಡೇವಿಡ್ ವಾರ್ನರ್ ಅವರು 848 ರನ್‍ಗಳನ್ನು ದಾಖಲಿಸಿದ್ದರು. ಇದನ್ನೂ ಓದಿ: ಕೊಹ್ಲಿ ಬ್ಯಾಟ್‍ನಿಂದ ಶತಕ ನಿರೀಕ್ಷೆ – ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದ RR Vs RCB Qualifier 2

  • ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್ ಅರೆಸ್ಟ್

    ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್ ಅರೆಸ್ಟ್

    ಕೋಲಾರ: ಐಪಿಎಲ್ ಬೆಟ್ಟಿಂಗ್ ಕೋಲಾರದಲ್ಲಿ ಆಡಿಸುತ್ತಾ ತುಮಕೂರು ಬಳಿ ತಲೆ ಮರೆಸಿಕೊಂಡಿದ್ದ ಇಬ್ಬರು ಕ್ರಿಕೆಟ್ ಬೆಟ್ಟಿಂಗ್ ಕಿಂಗ್‍ಪಿನ್‍ಗಳನ್ನು ಕೋಲಾರ ನಗರ ಪೊಲೀಸರು ಬಂಧಿಸಿದ್ದಾರೆ.

    POLICE JEEP

    ಮುರುಗೇಶ್ ನಾಯಕ್, ರಾಹುಲ್ ಇಬ್ಬರನ್ನು ತುಮಕೂರಿನ ಕುಣಿಗಲ್ ಬಳಿ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ಆರೋಪಿಗಳನ್ನು ಕೋಲಾರ ನಗರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಾರ್ ಒಂದರಲ್ಲಿ ಸಪ್ಲೇಯರ್ ಆಗಿರುವ ಕಿಂಗ್‍ಪಿನ್ ಮುರುಗೇಶ್ ಕೋಲಾರ ನಗರ ವ್ಯಾಪ್ತಿಯಲ್ಲಿ ಲಕ್ಷಾಂತರ ರೂ. ಐಪಿಎಲ್ ಬೆಟ್ಟಿಂಗ್ ಆಡಿಸುತ್ತಿದ್ದ ಎನ್ನಲಾಗಿದೆ. ಇದನ್ನೂ ಓದಿ:  ಬಿಜೆಪಿ ಬಳಿ ಯಾವುದೇ ಅಸ್ತ್ರ ಇಲ್ಲದೆ ಮತ್ತೆ ಹಿಜಬ್ ಸಂಘರ್ಷ ಹುಟ್ಟು ಹಾಕಿದೆ: ಧ್ರುವನಾರಾಯಣ್ 

    ಮುರುಗೇಶ್ ಜೊತೆ ಮತ್ತೊಬ್ಬ ಕಿಂಗ್‍ಪಿನ್ ರಾಹುಲ್‍ನನ್ನು ಕೂಡ ಬಂಧಿಸಲಾಗಿದ್ದು, ಎಸ್‍ಪಿಡಿ ದೇವರಾಜ್ ಅವರ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಿದ ನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • ಸೋಲಿನ ಬಳಿಕ ನಾಯಕ ರಾಹುಲ್‌ನನ್ನು ದಿಟ್ಟಿಸಿದ ಗಂಭೀರ್ – ನೆಟ್ಟಿಗರಿಂದ ಟ್ರೋಲ್

    ಸೋಲಿನ ಬಳಿಕ ನಾಯಕ ರಾಹುಲ್‌ನನ್ನು ದಿಟ್ಟಿಸಿದ ಗಂಭೀರ್ – ನೆಟ್ಟಿಗರಿಂದ ಟ್ರೋಲ್

    ಮುಂಬೈ: ಬುಧವಾರ ನಡೆದ ಆರ್‌ಸಿಬಿ ತಂಡದ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್(ಎಲ್‌ಎಸ್‌ಜಿ) ತಂಡ ಸೋಲುಂಡಿದೆ. ಲಕ್ನೋ ತಂಡ ಹಲವು ಕ್ಯಾಚ್‌ಗಳನ್ನು ಕೈ ಬಿಟ್ಟಿದ್ದರಿಂದಲೇ ಸೋಲಿಗೆ ಕಾರಣವಾಯಿತು ಎಂದು ತಂಡದ ನಾಯಕ ಕೆಎಲ್ ರಾಹುಲ್ ಬೇಸರ ವ್ಯಕ್ತಪಡಿಸಿದ್ದಾರೆ.

    ಲಕ್ನೋ ತಂಡ ಸೋಲಿನ ಬೇಸರದಲ್ಲಿದ್ದರೂ ನೆಟ್ಟಿಗರು ಮಾತ್ರ ಟ್ರೋಲ್ ಮಾಡುವುದನ್ನು ಮುಂದುವರಿಸಿದ್ದಾರೆ. ತಂಡದ ಮಾರ್ಗದರ್ಶಕ ಗೌತಮ್ ಗಂಭೀರ್ ಸೋಲಿನ ಬಳಿಕ ಹತಾಶ ಭಾವದಲ್ಲಿ ನಾಯಕ ರಾಹುಲ್ ಕಡೆ ನೋಡುವ ಫೋಟೋವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ನಾವು ಸೋಲಲು ಇದೇ ಕಾರಣ – ಬೇಸರ ವ್ಯಕ್ತಪಡಿಸಿದ ಕೆ.ಎಲ್ ರಾಹುಲ್

    ಕ್ರಿಕೆಟ್ ಪ್ರಿಯರು ಗಂಭೀರ್ ರಾಹುಲ್ ಕಡೆ ದಿಟ್ಟಿಸಿ ನೋಡುವ ಫೋಟೋವನ್ನು ಬಳಸಿ ಮೀಮ್‌ಗಳನ್ನು ರಚಿಸುತ್ತಿದ್ದಾರೆ ಹಾಗೂ ತಮಾಷೆಯ ಪ್ರತಿಕ್ರಿಯೆಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

    ಗೌತಮ್ ಗಂಭೀರ್ ಒಬ್ಬ ಭಾವನಾತ್ಮಕ ನಾಯಕ ಎಂದೇ ಹೆಸರುವಾಸಿ. ಅವರು ಮೈದಾನದ ಒಳಗೆ, ಹೊರಗೆ ಮಾತ್ರವಲ್ಲದೇ ಡ್ರೆಸ್ಸಿಂಗ್ ರೂಮ್‌ನಲ್ಲಿ ಭಾವನಾತ್ಮಕ ಹೇಳಿಕೆಗಳನ್ನು ಆಗಾಗ ನೀಡುತ್ತಲೇ ಇರುತ್ತಾರೆ. ಇದನ್ನೂ ಓದಿ: ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ಬುಧವಾರ ಲಕ್ನೋ ವಿರುದ್ಧ ಆರ್‌ಸಿಬಿ 14 ರನ್‌ಗಳ ಜಯ ಸಾಧಿಸಿದೆ. ಆರ್‌ಸಿಬಿಯೊಂದಿಗಿನ ಪಂದ್ಯದಲ್ಲಿ ಸುಲಭವಾಗಿ ಲಕ್ನೋಗೆ ಗೆಲ್ಲಲು ಅವಕಾಶವಿದ್ದರೂ ಹಲವು ಕ್ಯಾಚ್‌ಗಳನ್ನು ಬಿಟ್ಟು, ಸೋಲನ್ನೊಪ್ಪಿಕೊಂಡಿದೆ. ಇದೀಗ ಆರ್‌ಸಿಬಿ 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಕಾಲಿಟ್ಟಿದ್ದು, ಲಕ್ನೋ ಸೋಲಿನೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ.

  • ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

    ಕೋಲ್ಕತ್ತಾ: ಬ್ಯಾಟ್ಸ್‌ಮ್ಯಾನ್‌ಗಳ ಮೇಲಾಟಕ್ಕೆ ಸಾಕ್ಷಿಯಾದ ಮೊದಲನೇ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಆರ್‌ಸಿಬಿ 14 ರನ್‍ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ 2ನೇ ಎಲಿಮಿನೇಟರ್ ಪಂದ್ಯಕ್ಕೆ ಲಗ್ಗೆ ಇಟ್ಟರೆ, ಲಕ್ನೋ ಈ ಸೋಲಿನೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

    ಕೋಲ್ಕತ್ತಾದಲ್ಲಿ ಪಂದ್ಯ ಆರಂಭಕ್ಕೂ ಮುನ್ನ ಮಳೆ ಸುರಿದರೆ, ಪಂದ್ಯ ಆರಂಭದ ಬಳಿಕ ರನ್ ಮಳೆ ಸುರಿಯಿತು.ಆರ್‌ಸಿಬಿ ನೀಡಿದ 208 ರನ್‍ಗಳ ಬೃಹತ್ ಮೊತ್ತ ಗುರಿ ಬೆನ್ನಟ್ಟಿದ ಲಕ್ನೋ ತಂಡಕ್ಕೆ ನಾಯಕ ಕೆ.ಎಲ್ ರಾಹುಲ್ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಆರಂಭದಿಂದಲೂ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದ ರಾಹುಲ್ ಕೊನೆಯಲ್ಲಿ ತಾಳ್ಮೆ ಕಳೆದುಕೊಂಡು 79 ರನ್ (58 ಎಸೆತ, 3 ಬೌಂಡರಿ, 5 ಸಿಕ್ಸ್) ಬಾರಿಸಿ ಔಟ್ ಆದರು. ಇತ್ತ ಕೊನೆಯ ಎರಡು ಓವರ್‌ಗಳಲ್ಲಿ ಕಂಬ್ಯಾಕ್ ಮಾಡಿದ ಆರ್‌ಸಿಬಿ ಬೌಲರ್‌ಗಳು ಅನಿರೀಕ್ಷಿತ ಜಯ ತಂದುಕೊಟ್ಟು ಈ ಸಲ ಕಪ್ ನಮ್ದೇ ಆಸೆಗೆ ಜೀವ ತುಂಬಿದ್ದಾರೆ. ಈ ಗೆಲುವಿನೊಂದಿಗೆ 2ನೇ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿ ತಂಡ ರಾಜಸ್ಥಾನವನ್ನು ಎದುರಿಸಲಿದೆ.

    ಬೃಹತ್ ಮೊತ್ತದ ಗುರಿಯೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಡಿಕಾಕ್, ರಾಹುಲ್ ಜೋಡಿ ಆರಂಭದಲ್ಲೇ ಎಡವಿತು. 1 ಸಿಕ್ಸ್ ಸಹಿತ ಅಬ್ಬರಿಸುವ ಸೂಚನೆ ಹೊರಡಿಸಿದ ಡಿಕಾಕ್ ಆಟ ಡುಪ್ಲೆಸಿಸ್ ಹಿಡಿದ ಉತ್ತಮ ಕ್ಯಾಚ್‍ನೊಂದಿಗೆ ಅಂತ್ಯವಾಯಿತು. ಬಳಿಕ ಬಂದ ಮನನ್ ವೋಹ್ರಾ, ರಾಹುಲ್ ಜೊತೆಗೂಡಿ ಪವರ್ ಪ್ಲೇನಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಆರ್‌ಸಿಬಿ ಬೌಲರ್‌ಗಳಿಗೆ ನಡುಕ ಹುಟ್ಟಿಸಿದರು. ಆದರೆ ವೋಹ್ರಾ ಆಟ 19 ರನ್ (11 ಎಸೆತ, 1 ಬೌಂಡರಿ, 2 ಸಿಕ್ಸ್‌ಗೆ ಅಂತ್ಯಗೊಂಡಿತು. ಬಳಿಕ ದೀಪಕ್ ಹೂಡಾ ಆರ್‌ಸಿಬಿ ಬೌಲರ್‌ಗಳನ್ನು ಬೆಂಡೆತ್ತಿದರು. ಈ ಜೋಡಿ ಪಂದ್ಯವನ್ನು ಗೆಲುವಿಗೆ ಹತ್ತಿರ ಕೊಂಡೊಯ್ಯುತ್ತಿದ್ದಂತೆ ದಾಳಿಗಿಳಿದ ಹಸರಂಗ ಸೂಪರ್ ಸ್ಪೇಲ್‍ಗೆ ಹೂಡಾ ಕ್ಲೀನ್ ಬೌಲ್ಡ್ ಆದರು. ಆದರೆ ಈ ಮೊದಲು 45 ರನ್ (26 ಎಸೆತ, 1 ಬೌಂಡರಿ, 4 ಸಿಕ್ಸ್) ಬಾರಿಸಿ ರಾಹುಲ್ ಜೊತೆ 3ನೇ ವಿಕೆಟ್‍ಗೆ 96 ರನ್ (61 ಎಸೆತ) ಜೊತೆಯಾಟವಾಡಿ ತಂಡದ ಗೆಲುವಿಗೆ ಶ್ರಮಪಟ್ಟರು.

    ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಾಯಕ ಡುಪ್ಲೆಸಿಸ್ ಶೂನ್ಯ ಸುತ್ತಿ ಬಂದಷ್ಟೇ ವೇಗವಾಗಿ ಡಗೌಟ್ ಸೇರಿಕೊಂಡರು.

    ಆ ಬಳಿಕ ಒಂದಾದ ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ನಿಧಾನವಾಗಿ ಇನ್ನಿಂಗ್ಸ್ ಕಟ್ಟ ತೊಡಗಿದರು. ಇತ್ತ ಪಾಟಿದಾರ್ ಮಾತ್ರ ಪವರ್ ಫುಲ್ ಹಿಟ್‍ಗಳ ಮೂಲಕ ಲಕ್ನೋಗೆ ಆರಂಭದಲ್ಲೇ ಎಚ್ಚರಿಕೆ ನೀಡಿದರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 25 ರನ್ (24 ಎಸೆತ, 2 ಬೌಂಡರಿ) ಸಿಡಿಸಿದ್ದ ವೇಳೆ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕಳೆದುಕೊಂಡರು. ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ ಈ ಜೋಡಿ 66 ರನ್ (46 ಎಸೆತ) ಜೊತೆಯಾಟವಾಡಿ ಮಿಂಚಿತು.

    ಪಾಟಿದಾರ್ ಚೊಚ್ಚಲ ಶತಕ:
    ಕೊಹ್ಲಿ ಬಳಿಕ ಬಂದ ಮಾಕ್ಸ್‌ವೆಲ್ ಆಟ 1 ಸಿಕ್ಸ್ ಸಹಿತ 9 ರನ್‍ಗಳಿಗೆ ಅಂತ್ಯವಾಯಿತು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೆ ಇನ್ನೊಂದು ಕಡೆ ಪಾಟಿದರ್ ಲಕ್ನೋ ಬೌಲರ್‌ಗಳ ಪ್ರತಿ ಎಸೆತಗಳನ್ನು ಬೌಂಡರಿ, ಸಿಕ್ಸ್ ಸಿಡಿಸುವ ಮೂಲಕ ಘರ್ಜಿಸಲಾರಂಭಿಸಿದರು. ಇನ್ನೊಂದೆಡೆ ಲಕ್ನೋ ಫೀಲ್ಡರ್‌ಗಳು ಸಾಕಷ್ಟು ಕ್ಯಾಚ್‌ಗಳನ್ನು ಕೈಚೆಲ್ಲಿ ಕೈ ಸುಟ್ಟುಕೊಂಡರು. ಡೆತ್ ಓವರ್‌ಗಳಂತೂ ದಿನೇಶ್ ಕಾರ್ತಿಕ್ ಮತ್ತು ಪಾಟಿದರ್ ಅಬ್ಬರಿಸಿ ಬೊಬ್ಬಿರಿದರು. ಅದರಲ್ಲೂ ಲಕ್ನೋ ಬೌಲರ್ ರವಿ ಬಿಷ್ಣೋಯ್ ಎಸೆದ 16ನೇ ಓವರ್‌ನಲ್ಲಿ 2 ಬೌಂಡರಿ, 3 ಸಿಕ್ಸ್ ಸಹಿತ ಬರೋಬ್ಬರಿ 26 ಕಸಿದ ಪಾಟಿದರ್ ಟೂರ್ನಿಯಲ್ಲಿ ಆರ್‌ಸಿಬಿ ಪರ ಚೊಚ್ಚಲ ಶತಕ ಬಾರಿಸಿ ಆರ್‌ಸಿಬಿ ಪಾಳಯದಲ್ಲಿ ಹರುಷ ತಂದರು.

    ಅಂತಿಮವಾಗಿ ಪಾಟಿದರ್ ಅಜೇಯ 112 ರನ್ (54 ಎಸೆತ, 12 ಬೌಂಡರಿ, 7 ಸಿಕ್ಸ್) ಮತ್ತು ದಿನೇಶ್ ಕಾರ್ತಿಕ್ 37 ರನ್ (23 ಎಸೆತ, 5 ಬೌಂಡರಿ, 1 ಸಿಕ್ಸ್) ಸಹಿತ 5ನೇ ವಿಕೆಟ್‍ಗೆ ಅಜೇಯ 92 ರನ್ (41 ಎಸೆತ) ಜೊತೆಯಾಟವಾಡಿ ರನ್ ಮಳೆ ಸುರಿಸಿತು. ಅಂತಿಮವಾಗಿ ಆರ್‌ಸಿಬಿ ತಂಡ 20 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 207 ರನ್‍ಗಳ ಬೃಹತ್ ಮೊತ್ತ ಪೇರಿಸಿತು.

    ರನ್ ಏರಿದ್ದು ಹೇಗೆ?
    50 ರನ್ 35 ಎಸೆತ
    100 ರನ್ 72 ಎಸೆತ
    150 ರನ್ 97 ಎಸೆತ
    200 ರನ್ 117 ಎಸೆತ
    207 ರನ್ 120 ಎಸೆತ

  • ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

    ಕೊನೆಯ ಓವರ್‌ನಲ್ಲಿ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ – ಫೈನಲ್‌ಗೆ ಗುಜರಾತ್‌ ಎಂಟ್ರಿ

    ಕೋಲ್ಕತ್ತಾ: ಕೊನೆಯ ಓವರ್‌ನಲ್ಲಿ ಡೇವಿಡ್‌ ಮಿಲ್ಲರ್‌ ಹ್ಯಾಟ್ರಿಕ್‌ ಸಿಕ್ಸ್‌ ಸಿಡಿಸಿದ ಪರಿಣಾಮ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಗುಜರಾತ್‌ ಟೈಟಾನ್ಸ್‌ ರೋಚಕ 7 ವಿಕೆಟ್‌ಗಳ ಜಯ ಸಾಧಿಸಿ ಫೈನಲ್‌ ಪ್ರವೇಶಿಸಿದೆ.

    ಗೆಲ್ಲಲು 189 ರನ್‌ಗಳ ಗುರಿಯನ್ನು ಪಡೆದ ಗುಜರಾತ್‌ ಡೇವಿಡ್‌ ಮಿಲ್ಲರ್‌ ಅವರ ಸ್ಫೋಟಕ ಅರ್ಧಶತಕ ಮತ್ತು ನಾಯಕ ಹಾರ್ದಿಕ್‌ ಪಾಂಡ್ಯ ಸಾಹಸದಿಂದ 19.3 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 191 ರನ್‌ ಹೊಡೆದು ಫೈನಲ್‌ ಪ್ರವೇಶಿಸಿತು. ಟೂರ್ನಿಯ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದ ಗುಜರಾತ್‌ ಈಗ ಮೊದಲ ಐಪಿಎಲ್‌ ಸರಣಿಯಲ್ಲೇ ಫೈನಲ್‌ ಪ್ರವೇಶಿಸಿ ವಿಶಿಷ್ಟ ಸಾಧನೆ ಮಾಡಿದೆ.

    ಕೊನೆಯ ಓವರ್‌ನಲ್ಲಿ ಗುಜರಾತ್‌ ಗೆಲುವಿಗೆ 16 ರನ್‌ಗಳ ಅಗತ್ಯವಿತ್ತು. ಪ್ರಸಿದ್ಧ ಕೃಷ್ಣ ಬೌಲಿಂಗ್‌ನ ಸತತ ಮೂರು ಎಸೆತಗಳನ್ನು ಮಿಲ್ಲರ್‌ ಸಿಕ್ಸರ್‌ಗೆ ಅಟ್ಟಿ ಗುಜರಾತಿಗೆ ರೋಚಕ ಗೆಲುವು ತಂದುಕೊಟ್ಟರು. ಇದನ್ನೂ ಓದಿ: ಐಪಿಎಲ್ ಪಂದ್ಯ ರದ್ದು ತಡೆಗೆ `ಸೂಪರ್’ ನಿಯಮ – ಯಾವ ತಂಡದ ಲಕ್ ಹೇಗಿದೆ?

    ಆರಂಭದಲ್ಲೇ ವಿಕಟ್‌ ಪತನ:
    ಮೊದಲ ಓವರಿನ ಎರಡನೇ ಎಸೆತದಲ್ಲಿ ವೃದ್ಧಿಮಾನ್‌ ಸಹಾ ಅವರ ವಿಕೆಟ್‌ ಕಳೆದುಕೊಂಡರೂ ಶುಭಮನ್‌ ಗಿಲ್‌ ಮತ್ತು ಮ್ಯಾಥ್ಯು ವೇಡ್‌ ಎರಡನೇ ವಿಕೆಟ್‌ಗೆ 72 ರನ್‌ ಜೊತೆಯಾಟವಾಡಿ ಚೇತರಿಕೆ ನೀಡಿದರು. ಶುಭಮನ್‌ ಗಿಲ್‌ 35 ರನ್‌(21 ಎಸೆತ, 6 ಬೌಂಡರಿ, 1 ಸಿಕ್ಸರ್‌) ಮ್ಯಾಥ್ಯು ವೇಡ್‌ 35 ರನ್‌(30 ಎಸೆತ, 6 ಬೌಂಡರಿ) ಹೊಡೆದು ಔಟಾದರು.

    ನಂತರ ಜೊತೆಯಾದ ಹಾರ್ದಿಕ್‌ ಪಾಂಡ್ಯ ಮತ್ತು ಡೇವಿಡ್‌ ಮಿಲ್ಲರ್‌ ಮುರಿಯದ 4ನೇ ವಿಕೆಟ್‌ಗೆ 61 ಎಸೆತಗಳಿಗೆ 106 ರನ್‌ ಚಚ್ಚಿ ತಂಡಕ್ಕೆ ಗೆಲುವನ್ನು ತಂದುಕೊಟ್ಟರು. ಡೇವಿಡ್‌ ಮಿಲ್ಲರ್‌ 68 ರನ್‌(38 ಎಸೆತ, 3 ಬೌಂಡರಿ, 5 ಸಿಕ್ಸರ್)‌ ಹಾರ್ದಿಕ್‌ ಪಾಂಡ್ಯ 40 ರನ್‌(27 ಎಸೆತ, 5 ಬೌಂಡರಿ) ಹೊಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.

    ರನ್‌ ಏರಿದ್ದು ಹೇಗೆ?
    50 ರನ್‌ 31 ಎಸೆತ
    100 ರನ್‌ 65 ಎಸೆತ
    150 ರನ್‌ 98 ಎಸೆತ
    191 ರನ್‌ 117 ಎಸೆತ

    ಸವಾಲಿನ ಮೊತ್ತ:
    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ರಾಯಲ್ಸ್ ತಂಡವು ಜೋಸ್ ಬಟ್ಲರ್ ಅವರ ಅಮೋಘ ಅರ್ಧಶತಕದ ನೆರವಿನಿಂದ 6 ವಿಕೆಟ್‌ ನಷ್ಟಕ್ಕೆ 88 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

    ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಜೋಸ್ ಬಟ್ಲರ್ ಹಾಗೂ ಯಶಸ್ವಿ ಜೈಸ್ವಾಲ್ ಪವರ್ ಪ್ಲೇ ಓವರ್‌ಗಳಲ್ಲಿ ಅಬ್ಬರಿಸಿದರು. ಮೊದಲ 5 ಓವರ್‌ಗಳಲ್ಲೇ 50 ರನ್ ಕಲೆಹಾಕಿದ್ದರು. ಇದೇ ವೇಳೆ ಯಶಸ್ವಿ ಜೈಸ್ವಾಲ್ 3 ರನ್ ಗಳಿಸಿ ಯಶ್ ದಯಾಳ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.

    2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಸಂಜು ಸಾಮ್ಸನ್ 26 ಎಸೆತಗಳಲ್ಲಿ 47 ರನ್ (5 ಬೌಂಡರಿ, 3 ಸಿಕ್ಸರ್) ಸಿಡಿಸುವ ಮೂಲಕ ಟೈಟಾನ್ಸ್ ಬೌಲರ್‌ಗಳನ್ನು ಬೆಂಡೆತ್ತಿದರು. ಇನ್ನೇನು ಅರ್ಧ ಶತಕ ಪೂರೈಸಬೇಕು ಎನ್ನುವಷ್ಟರಲ್ಲೇ ಸಾಯಿ ಕಿಶೋರ್ ಬೌಲಿಂಗ್‌ಗೆ ಬೌಂಡರಿಲೈನ್ ಕ್ಯಾಚ್ ನೀಡಿ ನಿರ್ಗಮಿಸಿದರು.

    ಜೋಸ್ ಬಟ್ಲರ್ ಜೊತೆಗೂಡಿದ ಕನ್ನಡಿಗ ದೇವದತ್ ಪಡಿಕ್ಕಲ್ 20 ಎಸೆತಗಳಲ್ಲಿ 28 ರನ್ ಗಳಿಸಿ ಹಾರ್ದಿಕ್ ಪಾಂಡ್ಯ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಶಿಮ್ರೋನ್ ಹೆಟ್ಮೆಯರ್ 4 ರನ್ ಗಳಿಸಿ ಔಟಾದರು.

    ಶತಕ ವಂಚಿತ ಬಟ್ಲರ್:
    ಆರಂಭಿಕನಾಗಿ ಕಣಕ್ಕಿಳಿದ ಜೋಸ್ ಬಟ್ಲರ್ ಕೊನೆಯವರೆಗೂ ಗುಜರಾತ್ ಟೈಟಾನ್ಸ್ ವಿರುದ್ಧ ಅಬ್ಬರಿಸಿದರು. ನಿಧಾನಗತಿಯಲ್ಲೇ ಬ್ಯಾಟಿಂಗ್ ಮಾಡಿದ ಬಟ್ಲರ್ 42 ಎಸೆತಗಳಲ್ಲಿ ಅರ್ಧಶತಕ ಕಲೆಹಾಕಿದ್ದರು. ಬಳಿಕ ಬಿರುಸಿನ ದಾಳಿ ನಡೆಸಿ, 56 ಎಸೆತಗಳಲ್ಲಿ 89 ರನ್ (12 ಬೌಂಡರಿ, 2 ಸಿಕ್ಸರ್) ಚಚ್ಚಿದರು. ಕೊನೆಯ ಒಂದು ಎಸೆತ ಬಾಕಿ ಇರುವಾಗಲೇ ರನೌಟ್ ಆದರು. ಬಟ್ಲರ್ ಅಬ್ಬರ ಬ್ಯಾಟಿಂಗ್‌ನಿಂದ ಆರ್‌ಆರ್ ತಂಡವು 180ರನ್‌ಗಳ ಗಡಿ ದಾಟಲು ಸಾಧ್ಯವಾಯಿತು.

    ಟೈಟಾನ್ಸ್ ಸ್ಪಿನ್ನರ್ ರಶೀದ್ ಖಾನ್ 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿದರು. ಇನ್ನುಳಿದ ಮೊಹಮ್ಮದ್ ಶಮಿ 4 ಓವರ್‌ಗಳಲ್ಲಿ 43, ಸಾಯಿ ಕಿಶೋರ್ 4 ಓವರ್‌ಗಳಲ್ಲಿ 43, ಯಶ್ ದಯಾಳ್ 4 ಓವರ್‌ನಲ್ಲಿ 46 ರನ್, ಹಾರ್ದಿಕ್ ಪಾಂಡ್ಯ 2 ಓವರ್‌ಗಳಲ್ಲಿ 14 ರನ್ ನೀಡಿ ತಲಾ ಒಂದೊಂದು ವಿಕೆಟ್ ಪಡೆದರು.

    ಆರ್‌ ಆರ್‌ ರನ್ ಏರಿದ್ದು ಹೇಗೆ?
    34 ಎಸೆತ 50 ರನ್
    79 ಎಸೆತ 100 ರನ್
    104 ಎಸೆತ 450 ರನ್
    120 ಎಸೆತ 188 ರನ್

  • ಗೆಲುವಿನೊಂದಿಗೆ ಹೊರನಡೆದ ಪಂಜಾಬ್ – ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದ ಹೈದರಾಬಾದ್

    ಗೆಲುವಿನೊಂದಿಗೆ ಹೊರನಡೆದ ಪಂಜಾಬ್ – ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದ ಹೈದರಾಬಾದ್

    ಮುಂಬೈ: ಔಪಚಾರಿಕ ಪಂದ್ಯದಲ್ಲಿ ಪಂಜಾಬ್ ಪರ ಕೊನೆಯ ಲೀಗ್ ಪಂದ್ಯದಲ್ಲಿ ಲಿಯಾಮ್ ಲಿವಿಂಗ್‍ಸ್ಟೋನ್ ಮತ್ತೆ ಬ್ಯಾಟಿಂಗ್‍ನಲ್ಲಿ ಮಿಂಚಿ ತಂಡಕ್ಕೆ 5 ವಿಕೆಟ್‍ಗಳ ಗೆಲುವು ತಂದುಕೊಟ್ಟಿದ್ದಾರೆ. ಈ ಮೂಲಕ ಗೆಲುವಿನೊಂದಿಗೆ ಪಂಜಾಬ್ ತಂಡ ಟೂರ್ನಿಗೆ ಅಂತ್ಯವಾಡಿದೆ.

    ಟೂರ್ನಿಯುದ್ದಕ್ಕೂ ಪಂಜಾಬ್ ಪರ ಬ್ಯಾಟಿಂಗ್‍ನಲ್ಲಿ ಶೈನ್ ಆದ ಲಿವಿಂಗ್‍ಸ್ಟೋನ್ ಕೊನೆಯ ಲೀಗ್ ಪಂದ್ಯದಲ್ಲಿ ಅಜೇಯ 49 ರನ್ (22 ಎಸೆತ, 2 ಬೌಂಡರಿ, 5 ಸಿಕ್ಸ್) ಚಚ್ಚಿ ಅಬ್ಬರಿಸಿದ ಪರಿಣಾಮ ಹೈದರಾಬಾದ್ ನೀಡಿದ 158 ರನ್‍ಗಳ ಟಾರ್ಗೆಟ್ ಉಡೀಸ್ ಆಯಿತು. ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಪಂಜಾಬ್ ತಂಡ 15.1 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 160 ರನ್ ಬಾರಿಸಿ ಇನ್ನೂ 29 ಎಸೆತ ಬಾಕಿ ಇರುವಂತೆ 5 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿತು.

    ಈ ಜಯದೊಂದಿಗೆ ಪಂಜಾಬ್ ತಂಡ ಅಂಕಪಟ್ಟಿಯಲ್ಲಿ 6 ಸ್ಥಾನಕ್ಕೆ ತೃಪಿಪಟ್ಟರೆ, ಹೈದರಾಬಾದ್ ತಂಡವನ್ನು ಸೋಲಿಸಿ 8ನೇ ಸ್ಥಾನಕ್ಕೆ ಇಳಿಸಿ ಟೂರ್ನಿಯಿಂದ ಹೊರದಬ್ಬಿದೆ.

    ಈ ಮೊದಲು ಪಂದ್ಯದ ಟಾಸ್ ಗೆದ್ದ ಹೈದರಾಬಾದ್ ತಂಡದ ಹಂಗಾಮಿ ನಾಯಕ ಭುವನೇಶ್ವರ್ ಕುಮಾರ್ ಮೊದಲು ಬ್ಯಾಟಿಂಗ್ ಮಾಡುವ ಮನಸ್ಸು ಮಾಡಿದರು. ಇತ್ತ ಬ್ಯಾಟಿಂಗ್ ಆಗಮಿಸುತ್ತಿದ್ದಂತೆ ಹೈದರಾಬಾದ್ ಆರಂಭಿಕ ಆಟಗಾರ ಪ್ರಿಯಾಂ ಗಾರ್ಗ್ 4 ರನ್‍ಗಳಿಸಿ ಪೆವಿಲಿಯನ್ ಸೇರಿಕೊಂಡರು.

    ಆ ಬಳಿಕ ಒಂದಾದ ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿ ಕೆಲಕಾಲ ಪಂಜಾಬ್ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಿದರು. ಆದರೆ ತ್ರಿಪಾಠಿ ಆಟ 20 ರನ್ (18 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಅಂತ್ಯವಾಯಿತು. ಇತ್ತ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಅಭಿಷೇಕ್ ಶರ್ಮಾ 43 ರನ್ (32 ಎಸೆತ, 5 ಬೌಂಡರಿ, 2 ಸಿಕ್ಸ್) ಚಚ್ಚಿ ಹೊರನಡೆದರು. ಆ ಬಳಿಕ ಬಂದ ಮಾರ್ಕ್ರಾಮ್‌  ಕೂಡ 21 ರನ್ (17 ಎಸೆತ, 2 ಬೌಂಡರಿ) ಬಾರಿಸಿ ಔಟ್ ಆದರು.

    ನಾಥನ್ ಎಲ್ಲಿಸ್, ಹರ್‌ಪ್ರೀತ್‌ ಮಾರಕ ದಾಳಿ:
    ಸ್ಲಾಗ್‌ ಓವರ್‌ಗಳಲ್ಲಿ ವಾಷಿಂಗ್ಟನ್ ಸುಂದರ್ 25 ರನ್ (19 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ರೊಮಾರಿಯೋ ಶೆಫರ್ಡ್ ಅಜೇಯ 26 ರನ್ (15 ಎಸೆತ, 2 ಬೌಂಡರಿ, 2 ಸಿಕ್ಸ್) ಬಾರಿಸಿದ ನೆರವಿನಿಂದ ಒಟ್ಟು 8 ವಿಕೆಟ್ ಕಳೆದುಕೊಂಡು 157 ರನ್ ಪೇರಿಸಿತು. ಪಂಜಾಬ್ ಬೌಲರ್‌ಗಳಾದ ನಾಥನ್ ಎಲ್ಲಿಸ್ ಮತ್ತು ಹರ್‌ಪ್ರೀತ್‌ ಮಾರಕ ದಾಳಿ ಸಂಘಟಿಸಿ ತಲಾ 3 ವಿಕೆಟ್ ಪಡೆದು ಮಿಂಚಿದರು.

  • ಈಡೇರಿದ ಬೆಂಗ್ಳೂರು ಅಭಿಮಾನಿಗಳ ಬಯಕೆ – ಆರ್‌ಸಿಬಿ ಪ್ಲೇ ಆಫ್‍ಗೆ ಡೆಲ್ಲಿ ಮನೆಗೆ

    ಈಡೇರಿದ ಬೆಂಗ್ಳೂರು ಅಭಿಮಾನಿಗಳ ಬಯಕೆ – ಆರ್‌ಸಿಬಿ ಪ್ಲೇ ಆಫ್‍ಗೆ ಡೆಲ್ಲಿ ಮನೆಗೆ

    ಮುಂಬೈ: ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಉತ್ತಮ ಪ್ರದರ್ಶನ ತೋರಿದ ಮುಂಬೈ 5 ವಿಕೆಟ್‌ಗಳ ಗೆಲುವಿನೊಂದಿಗೆ ಕೂಟಕ್ಕೆ ವಿದಾಯ ಘೋಷಿಸಿದರೆ, ಇತ್ತ ಈ ಸೋಲಿನೊಂದಿಗೆ ಡೆಲ್ಲಿ ಪ್ಲೇ ಆಫ್ ಕನಸು ನುಚ್ಚುನೂರಾಗಿದೆ.

    160 ರನ್‍ಗಳ ಗುರಿ ಪಡೆದ ಮುಂಬೈ ಗೆಲುವಿಗಾಗಿ ತಿಲಕ್ ವರ್ಮಾ ಮತ್ತು ಟಿಮ್ ಡೇವಿಡ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಈ ವೇಳೆ ಸ್ಫೋಟಕ ಆಟವಾಡುತ್ತಿದ್ದ ಟಿಮ್ ಡೇವಿಡ್ 34 ರನ್ (15 ಎಸೆತ, 2 ಬೌಂಡರಿ, 4 ಸಿಕ್ಸ್) ವಿಕೆಟ್ ಕಳೆದುಕೊಂಡಿತು. ಈ ಮೊದಲು ಡೇವಿಡ್‌ ಅವರ ಸ್ಫೋಟಕ ಆಟ ಮುಂಬೈ ಗೆಲುವನ್ನು ಮತ್ತಷ್ಟು ಸನಿಹಕ್ಕೆ ತಂದು ನಿಲ್ಲಿಸಿತ್ತು. ಅಂತಿಮವಾಗಿ 19.1 ಓವರ್‌ಗಳ ಅಂತ್ಯಕ್ಕೆ 5 ವಿಕೆಟ್‌ ನಷ್ಟಕ್ಕೆ 160 ರನ್‌ ಸಿಡಿಸಿ ಮುಂಬೈ ಗೆಲುವಿನ ನಗೆ ಬೀರಿತು. ಈ ಗೆಲುವು ಆರ್‌ಸಿಬಿ ಪ್ಲೇ ಆಫ್‍ಗೇರಲು ನೆರವಾಯಿತು. ಇತ್ತ ಮಹತ್ವದ ಪಂದ್ಯ ಸೋತ ಡೆಲ್ಲಿ ತಂಡದ ಈವರೆಗಿನ ಹೋರಾಟ ವ್ಯರ್ಥವಾಯಿತು.

    ಸಾಧಾರಣ ಮೊತ್ತ ಬೆನ್ನಟ್ಟಿದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಬಂದಷ್ಟೇ ವೇಗವಾಗಿ 2 ರನ್ ಗಳಿಸಿ ಪೆವಿಲಿಯನ್‍ಗೆ ಹೆಜ್ಜೆ ಹಾಕಿದರು. ಆ ಬಳಿಕ ಒಂದಾದ ಇಶಾನ್ ಕಿಶನ್ ಮತ್ತು ಡೆವಾಲ್ಡ್ ಬ್ರೆವಿಸ್ ಉತ್ತಮ ಜೊತೆಯಾಟದ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದರು. ಬ್ರೆವಿಸ್ 37 ರನ್ (33 ಎಸೆತ, 1 ಬೌಂಡರಿ, 3 ಸಿಕ್ಸ್) ಮತ್ತು ಕಿಶನ್ 48 ರನ್ (35 ಎಸೆತ, 3 ಬೌಂಡರಿ, 4 ಸಿಕ್ಸ್) ಔಟ್ ಆಗುವ ಮುನ್ನ 2ನೇ ವಿಕೆಟ್‍ಗೆ 51 ರನ್ (37 ಎಸೆತ) ಜೊತೆಯಾಟವಾಡಿದರು.

    ಈ ಮೊದಲು ತೀವ್ರ ಕುತೂಹಲ ಮೂಡಿಸಿದ ಪಂದ್ಯದ ಟಾಸ್ ಗೆದ್ದ ಮುಂಬೈ ನಾಯಕ ರೋಹಿತ್ ಶರ್ಮಾ ಎದುರಾಳಿ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಆದರೆ ಈ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾದ ಡೆಲ್ಲಿ ತಂಡದ ಆರಂಭಿಕರು ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

    ಡೇವಿಡ್ ವಾರ್ನರ್ 5 ರನ್‍ಗೆ ಸುಸ್ತಾದರೆ, ಮಿಚೆಲ್ ಮಾರ್ಷ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು. ಇತ್ತ ಉತ್ತಮ ಹೊಡೆತಗಳ ಮೂಲಕ ಭರವಸೆ ಮೂಡಿಸಿದ ಪೃಥ್ವಿ ಶಾ 24 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು.

    ಪಂತ್, ಪೊವೆಲ್ ಜೊತೆಯಾಟ
    50 ರನ್‍ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ನಾಯಕ ರಿಷಭ್ ಪಂತ್ ಮತ್ತು ರೋವ್ಮನ್ ಪೊವೆಲ್ ಚೇತರಿಕೆ ನೀಡಲು ಮುಂದಾದರು. ಮುಂಬೈ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿ ಬೌಂಡರಿ, ಸಿಕ್ಸ್ ಸಿಡಿಸುತ್ತ ಮೊತ್ತ ಹೆಚ್ಚಿಸಿದ ಈ ಜೋಡಿ 5ನೇ ವಿಕೆಟ್‍ಗೆ 75 ರನ್ (44 ಎಸೆತ) ಜೊತೆಯಾಟವಾಡಿತು. ಈ ವೇಳೆ ಪಂತ್ 39 ರನ್ (33 ಎಸೆತ, 4 ಬೌಂಡರಿ, 1 ಸಿಕ್ಸ್) ಚಚ್ಚಿ ಔಟ್ ಆದರು. ಆ ಬಳಿಕ ಪೊವೆಲ್ 43 ರನ್ (34 ಎಸೆತ, 1 ಬೌಂಡರಿ, 4 ಸಿಕ್ಸ್) ಸಿಡಿಸಿ ಮುನ್ನುಗ್ಗುತ್ತಿದ್ದ ವೇಳೆ ಬುಮ್ರಾ ಎಸೆದ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಹೊರನಡೆದರು.

    ಕೊನೆಯಲ್ಲಿ ಅಕ್ಷರ್ ಪಟೇಲ್ ಬಿರುಸಿನ ಅಜೇಯ 19 ರನ್ (10 ಎಸೆತ, 2 ಸಿಕ್ಸ್) ನೆರವಿನಿಂದ ತಂಡದ ಮೊತ್ತ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159ಕ್ಕೆ ಏರಿತು.

    ಮುಂಬೈ ಪರ ಬೌಲಿಂಗ್‍ನಲ್ಲಿ ಮಿಂಚಿದ ಬುಮ್ರಾ 3 ವಿಕೆಟ್ ಕಿತ್ತು ಡೆಲ್ಲಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಉಳಿದಂತೆ ರಮಣದೀಪ್ ಸಿಂಗ್ 2, ಡೇನಿಯಲ್ ಸ್ಯಾಮ್ ಮತ್ತು ಮಯಾಂಕ್ ಮಾರ್ಕಂಡೆ ತಲಾ 1 ವಿಕೆಟ್ ಪಡೆದರು.

  • ಚೆನ್ನೈಗೆ ಸಿಂಹಸ್ವಪ್ನವಾದ ಅಶ್ವಿನ್ – ಸೋಲಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಹಾಲಿ ಚಾಂಪಿಯನ್

    ಚೆನ್ನೈಗೆ ಸಿಂಹಸ್ವಪ್ನವಾದ ಅಶ್ವಿನ್ – ಸೋಲಿನೊಂದಿಗೆ ಐಪಿಎಲ್ ಅಭಿಯಾನ ಮುಗಿಸಿದ ಹಾಲಿ ಚಾಂಪಿಯನ್

    ಮುಂಬೈ: ರಾಜಸ್ಥಾನ ಗೆಲುವಿಗಾಗಿ ಆರಂಭದಲ್ಲಿ ಜೈಸ್ವಾಲ್ ಹೋರಾಟ ನಡೆಸಿದರೆ, ಕೊನೆಗೆ ಅಶ್ವಿನ್ ಉಪಯುಕ್ತ ಬ್ಯಾಟಿಂಗ್ ಮೂಲಕ ರಾಜಸ್ಥಾನ ತಂಡಕ್ಕೆ ಇನ್ನೂ 2 ಎಸೆತ ಬಾಕಿ ಇರುವಂತೆ 5 ವಿಕೆಟ್‍ಗಳ ಭರ್ಜರಿ ಜಯ ತಂದುಕೊಟ್ಟರು. ಈ ಜಯದೊಂದಿಗೆ ರಾಜಸ್ಥಾನ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

    ಗೆದ್ದಿದ್ದು ಹೇಗೆ?
    ಗೆಲ್ಲಲು 151 ರನ್ ಗುರಿ ಪಡೆದ ರಾಜಸ್ಥಾನಕ್ಕೆ ಕೊನೆಯ 12 ಎಸೆತಗಳಲ್ಲಿ ಗೆಲುವಿಗೆ 19 ರನ್ ಬೇಕಾಗಿತ್ತು. 19ನೇ ಓವರ್‌ನಲ್ಲಿ 12 ರನ್ ಬಂತು ಕೊನೆಯ ಓವರ್‌ನ 6 ಎಸೆತಗಳಲ್ಲಿ ರಾಜಸ್ಥಾನ ಗೆಲುವಿಗೆ 7 ರನ್ ಬೇಕಾಗಿತ್ತು. ಈ 7 ರನ್‍ಗಳನ್ನು ಮೊದಲ 4 ಎಸೆತಗಳಲ್ಲಿ ಬಾರಿಸಿದ ರಾಜಸ್ಥಾನ ಬ್ಯಾಟ್ಸ್‌ಮ್ಯಾನ್‌ಗಳು 5 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಲು ನೆರವಾದರು. ಅಶ್ವಿನ್ ಅಜೇಯ 40 ರನ್ (23 ಎಸೆತ, 2 ಬೌಂಡರಿ, 3 ಸಿಕ್ಸ್) ಚಚ್ಚಿ ಗೆಲುವಿನ ರೂವಾರಿಯಾದರು.

    ಇತ್ತ ಗೆಲುವಿಗಾಗಿ ಕೊನೆಯ ವರೆಗೆ ಹೋರಾಡಿದ ಚೆನ್ನೈ ತಂಡ ಈ ಸೋಲಿನೊಂದಿಗೆ 15ನೇ ಆವೃತ್ತಿ ಐಪಿಎಲ್ ಅಭಿಯಾನ ಕೊನೆಗೊಳಿಸಿದೆ.

    ಜೈಸ್ವಾಲ್ ಏಕಾಂಗಿ ಹೋರಾಟ
    ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ನಿಧಾನವಾಗಿ ಚೆನ್ನೈ ಬೌಲರ್‌ಗಳಿ ಕಾಡಲು ಆರಂಭಿಸಿದರು. ಇತ್ತ ಸಂಜು ಸ್ಯಾಮ್ಸನ್ 15 ರನ್ (20 ಎಸೆತ, 2 ಬೌಂಡರಿ) ಸಿಡಿಸಿ 2ನೇ ವಿಕೆಟ್‍ಗೆ 51 ರನ್ (41 ಎಸೆತ) ಜೊತೆಯಾಟವಾಡಿ ವಿಕೆಟ್ ಒಪ್ಪಿಸಿದರು. ಇತ್ತ ಜೈಸ್ವಾಲ್ ತಮ್ಮ ಜವಾಬ್ದಾರಿಯುತ ಬ್ಯಾಟಿಂಗ್ ಮುಂದುವರಿಸಿದರು. ವಿಕೆಟ್‍ಗಳು ಉರುಳುತ್ತಿದ್ದರು ಅರ್ಧಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಜೈಸ್ವಾಲ್ 59 ರನ್ (44 ಎಸೆತ, 8 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕೈಚೆಲ್ಲಿಕೊಂಡರು.

    ಈ ಮೊದಲು ಟಾಸ್ ಗೆದ್ದ ಚೆನ್ನೈ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ 2 ರನ್‍ಗಳಿಗೆ ವಿಕೆಟ್ ನೀಡಿ ಪೆವಿಲಿಯನ್ ಸೇರಿದರು. ಆ ಬಳಿಕ ಬಂದ ಮೊಯಿನ್ ಅಲಿ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು.

    ಅಲಿ ಅಟ್ಟಹಾಸ:
    ಡೆವೊನ್ ಕಾನ್ವೇ ಜೊತೆಗೂಡಿದ ಮೊಯಿನ್ ಅಲಿ ರಾಜಸ್ಥಾನ ಬೌಲರ್‌ಗಳ ಪ್ರತಿ ಎಸೆತಗಳಿಗೂ ಲೀಲಾಜಾಲವಾಗಿ ರನ್ ಬಾರಿಸಲು ಮುಂದಾದರು. ಜೊತೆಗೆ ಬೌಂಡರಿ, ಸಿಕ್ಸರ್‌ಗಳ ಮೂಲಕ ಚೆನ್ನೈ ರನ್ ವೇಗವನ್ನು ಏರಿಸಿದರು. ಇತ್ತ ಕಾನ್ವೇ ಮಾತ್ರ ಪರದಾಟ ನಡೆಸಿ 16 ರನ್ (14 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಈ ಮೊದಲು ಅಲಿ ಜೊತೆಗೂಡಿ 2ನೇ ವಿಕೆಟ್‍ಗೆ 83 ರನ್ (39 ಎಸೆತ)ಗಳ ಜೊತೆಯಾಟದಲ್ಲಿ ಭಾಗಿಯಾದರು.

    ಆ ಬಳಿಕ ವಿಕೆಟ್ ಕಳೆದುಕೊಂಡು ಸಾಗಿದ ಚೆನ್ನೈ ತಂಡಕ್ಕೆ ನಾಯಕ ಧೋನಿ ಕೆಲ ಹೊತ್ತು ನಿಧಾನಗತಿಯ ಬ್ಯಾಟಿಂಗ್ ಮೂಲಕ ಚೇತರಿಕೆ ನೀಡಿದರು. ಇತ್ತ ಅಲಿ ಮಾತ್ರ ಉತ್ತಮ ಇನ್ನಿಂಗ್ಸ್ ಕಟ್ಟಿದ ಪರಿಣಾಮ ಚೆನ್ನೈ ತಂಡ ಸಾಧಾರಣ ಮೊತ್ತ ಪೇರಿಸಿತು.

    ಡೆತ್ ಓವರ್‌ಗಳಲ್ಲಿ ಧೋನಿ 26 ರನ್ (28 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ವಿಕೆಟ್ ಕಳೆದುಕೊಂಡರು. ಇವರ ಹಿಂದೆಯೇ ಅಲಿ 93 ರನ್ (57 ಎಸೆತ, 13 ಬೌಂಡರಿ, 3 ಸಿಕ್ಸ್) ಚಚ್ಚಿ ಔಟ್‌ ಆಗುವ ಮೂಲಕ 7 ರನ್‍ಗಳಿಂದ ಶತಕ ವಂಚಿತರಾದರು. ಅಂತಿಮವಾಗಿ ಚೆನ್ನೈ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಒಟ್ಟುಗೂಡಿಸಿತು.

  • ಧೋನಿಗೆ ಚೆನ್ನೈ ಪರ ಕೊನೆಯ ಪಂದ್ಯ? – #DefinitelyNot ಟ್ರೆಂಡಿಂಗ್

    ಧೋನಿಗೆ ಚೆನ್ನೈ ಪರ ಕೊನೆಯ ಪಂದ್ಯ? – #DefinitelyNot ಟ್ರೆಂಡಿಂಗ್

    ಮುಂಬೈ: 4 ಬಾರಿ ಐಪಿಎಲ್ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಇಂದು 2022ರ ಐಪಿಎಲ್‍ನ ಕೊನೆಯ ಲೀಗ್ ಪಂದ್ಯವನ್ನು ಆಡುತ್ತಿದೆ. ಈ ನಡುವೆ ಇದು ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೂ ಕೊನೆಯ ಪಂದ್ಯ ಎಂಬ ಮಾತು ಕೇಳಿ ಬರುತ್ತಿದೆ.

    ರಾಜಸ್ಥಾನ ವಿರುದ್ಧ ಕೊನೆಯ ಲೀಗ್ ಪಂದ್ಯವಾಡುತ್ತಿರುವ ಚೆನ್ನೈ ತಂಡದೊಂದಿಗೆ ನಾಯಕ ಧೋನಿಗೂ ಇದು ಕೊನೆಯ ಪಂದ್ಯ ಎಂಬ ಮಾತುಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ #DefinitelyNot ಎಂಬ ಪದ ಟ್ರೆಂಡಿಂಗ್ ಆಗಿದೆ. ಹೌದು ಧೋನಿ ಟೀಂ ಇಂಡಿಯಾಗೆ ಗುಡ್ ಬೈ ಹೇಳಿದ ಬಳಿಕ ಐಪಿಎಲ್‍ನಲ್ಲಿ ಚೆನ್ನೈ ಪರ ಆಡುತ್ತಿದ್ದಾರೆ. ಇದೀಗ ಧೋನಿಗೆ 41 ವರ್ಷ ಹಾಗಾಗಿ ಮುಂದಿನ ಐಪಿಎಲ್‍ನಲ್ಲಿ ಧೋನಿ ಚೆನ್ನೈ ಪರ ಆಟಗಾರನಾಗಿ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದಂತೆ ಧೋನಿ ಅಭಿಮಾನಿಗಳು #DefinitelyNot ಧೋನಿ ಮುಂದಿನ ವರ್ಷ ಚೆನ್ನೈ ಪರ ಆಡಲಿ ಎಂಬ ಕೋರಿಕೆ ಹೆಚ್ಚಾಗಿದೆ. ಇದನ್ನೂ ಓದಿ: Thailand Open – ನಂ.1 ಆಟಗಾರ್ತಿ ಯಮಗುಚಿಯನ್ನು ಸೋಲಿಸಿ ಸೆಮಿಗೆ ಸಿಂಧು ಎಂಟ್ರಿ

    MS DHONI (2)

    2021ರ ಐಪಿಎಲ್‍ನಲ್ಲಿ ಚಾಂಪಿಯನ್ ಆಗಿದ್ದ ಚೆನ್ನೈ ತಂಡ ಈ ಬಾರಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲವಾಗಿ ಅಂಕಪಟ್ಟಿಯಲ್ಲಿ ಪಾತಾಳಕ್ಕಿಳಿದಿದೆ. ಈ ನಡುವೆ ನಾಯಕತ್ವದ ಬದಲಾವಣೆ, ಗಾಯಳುಗಳ ಸಮಸ್ಯೆ ತಂಡಕ್ಕೆ ಹೊಡೆತ ನೀಡಿದೆ. ಇದೀಗ ಕೊನೆಯ ಲೀಗ್ ಪಂದ್ಯವಾಡುತ್ತಿರುವ ಚೆನ್ನೈ ತಂಡದೊಂದಿಗೆ ಧೋನಿಗೂ ಕೊನೆಯ ಪಂದ್ಯವೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿರುವುದು ಹೆಮ್ಮೆ ಎನಿಸಿತು: ನಿಖತ್ ಜರೀನ್

    ಈ ನಡುವೆ ಈ ಹಿಂದಿನ ಪಂದ್ಯದಲ್ಲಿ ವೀಕ್ಷಕ ವಿವರಣೆಗಾರ ಡ್ಯಾನಿ ಮಾರಿಸನ್, ಧೋನಿ ನೀವು ಮುಂದಿನ ಬಾರಿ ಐಪಿಎಲ್‍ನಲ್ಲಿ ಹಳದಿ ಜೆರ್ಸಿಯಲ್ಲಿ ಕಾಣಿಸುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಧೋನಿ ಖಂಡಿತ ನಾನು ಮುಂದಿನ ಬಾರಿಯೂ ಹಳದಿ ಜೆರ್ಸಿಯಲ್ಲಿ ಕಾಣಿಸ್ತೀನಿ ಖಂಡಿತವಾಗಿಯೂ ನನ್ನನ್ನು ಹಳದಿ ಜೆರ್ಸಿಯಲ್ಲಿ ನೋಡಲಿದ್ದೀರಿ. ಆದರೆ ಈ ಹಳದಿ ಜೆರ್ಸಿಯಲ್ಲೋ ಅಥವಾ ಬೇರೆ ಹಳದಿ ಜೆರ್ಸಿಯಲ್ಲೋ ಗೊತ್ತಿಲ್ಲ ಎಂದು ದ್ವಂದ್ವ ಹೇಳಿಕೆ ನೀಡಿದರು. ಈ ಹೇಳಿಕೆಯ ಬಳಿಕ ಇದೀಗ ಮುಂದಿನ ಐಪಿಎಲ್‍ನಲ್ಲಿ ಧೋನಿ ಹೊಸ ರೋಲ್‍ನಲ್ಲಿ ತಂಡದಲ್ಲಿ ಧೋನಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಮಾಜಿ ಆಟಗಾರರಿಂದ ವ್ಯಕ್ತವಾಗುತ್ತಿದೆ. ಆದರೆ ಇದಕ್ಕೆಲ್ಲ ಸ್ವತಃ ಧೋನಿ ಮುಂದಿನ ಬಾರಿ ಚೆನ್ನೈ ತಂಡದಲ್ಲಿ ನಾಯಕನಾಗಿ ಇರುತ್ತೇನೆ ಎಂದು ಟಾಸ್‌ ವೇಳೆ ತಿಳಿಸಿದ್ದಾರೆ. ಆದರೂ ಅಭಿಮಾನಿಗಳಲ್ಲಿ ಧೋನಿಯ ನಿರ್ಧಾರದ ಬಗ್ಗೆ ಅನುಮಾನಗಳಿವೆ. ಈ ಅನುಮಾನಗಳಿಗೆ ಮುಂದಿನ ದಿನಗಳಲ್ಲಿ ಧೋನಿ ಉತ್ತರಿಸುವ ಸಾಧ್ಯತೆ ಇದೆ.