Tag: IPL

  • ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಕನಸು ಭಗ್ನ – ರಾಜಸ್ಥಾನಕ್ಕೆ 4 ವಿಕೆಟ್‌ಗಳ ಜಯ

    ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಕನಸು ಭಗ್ನ – ರಾಜಸ್ಥಾನಕ್ಕೆ 4 ವಿಕೆಟ್‌ಗಳ ಜಯ

    – ಬ್ಯಾಟ್ಸ್‌ಮನ್‌ಗಳ ವೈಫಲ್ಯಕ್ಕೆ ಬೆಲೆ ತೆತ್ತ ಆರ್‌ಸಿಬಿ

    ಅಹಮದಾಬಾದ್‌: ಕೋಟ್ಯಂತರ ಆರ್‌ಸಿಬಿ (RCB) ಅಭಿಮಾನಿಗಳ ಕನಸು ಭಗ್ನಗೊಂಡಿದೆ. ಇಂದು ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರಾಜಸ್ಥಾನ ರಾಯಲ್ಸ್‌ (Rajasthan Royals) 4 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

    173 ರನ್‌ಗಳ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್‌ ಇನ್ನು 6 ಎಸೆತ ಇರುವಂತೆಯೇ 6 ವಿಕೆಟ್‌ ನಷ್ಟಕ್ಕೆ 174 ರನ್‌ ಹೊಡೆದು ಜಯ ಸಾಧಿಸಿತು. ಟಾಪ್‌ ಆರ್ಡರ್‌ ಬ್ಯಾಟರ್‌ಗಳ ವೈಫಲ್ಯ, ಕಳಪೆ ಬೌಲಿಂಗ್‌ ಮತ್ತು ಫೀಲ್ಡಿಂಗ್‌ಗೆ ಆರ್‌ಸಿಬಿ ಬೆಲೆ ತೆತ್ತಿದೆ.

     

     

    ಮೊದಲ ವಿಕೆಟಿಗೆ ಯಶಸ್ವಿ ಜೈಸ್ವಾಲ್‌ ಮತ್ತು ಟಾಮ್ ಕ್ಯಾಡ್ಮೋರ್ 33 ಎಸೆತಗಳಲ್ಲಿ 46 ರನ್‌ ಹೊಡೆದರು. ಟಾಮ್ ಕ್ಯಾಡ್ಮೋರ್ 20 ರನ್‌ ಗಳಿಸಿ ಔಟಾದರೆ ಯಶಸ್ವಿ ಜೈಸ್ವಾಲ್‌ 45 ರನ್‌(30 ಎಸೆತ, 8 ಬೌಂಡರಿ) ಹೊಡೆದು ವಿಕೆಟ್‌ ಒಪ್ಪಿಸಿದರು. ನಾಯಕ ಸಂಜು ಸ್ಯಾಮ್ಸನ್‌ 17 ರನ್‌ ಸಿಡಿಸಿ ಔಟಾದರು.  ಇದನ್ನೂ ಓದಿ: ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ – ದಾಖಲೆ ಬರೆದ ಕೊಹ್ಲಿ

    112 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ರಾಜಸ್ಥಾನ ವಿರಾಟ್‌ ಕೊಹ್ಲಿ (Virat Kohli) ಅವರ ಅತ್ಯುತ್ತಮ ಥ್ರೋನಿಂದಾಗಿ 4ನೇ ವಿಕೆಟ್‌ ಕಳೆದುಕೊಂಡಿತು. 8 ರನ್‌ ಗಳಿಸಿದ್ದ ಧ್ರುವ್ ಜುರೆಲ್ ಎರಡನೇ ರನ್‌ ಓಡುವಾಗ ರನೌಟ್‌ಗೆ ಬಲಿಯಾದರು. ಕೊನೆಯಲ್ಲಿ ಹೆಟ್ಮೇಯರ್‌ 26 ರನ್‌(14 ಎಸೆತ, 3 ಬೌಂಡರಿ, 1 ಸಿಕ್ಸರ್‌) ಮತ್ತು ಪೊವೆಲ್‌ ಔಟಾಗದೇ 16 ರನ್‌ ಹೊಡೆದ ಪರಿಣಾಮ ರಾಜಸ್ಥಾನ ಪಂದ್ಯವನ್ನು ಗೆದ್ದುಕೊಂಡಿತು.

     

    ಶುಕ್ರವಾರ ರಾಜಸ್ಥಾನ ಮತ್ತು ಹೈದರಾಬಾದ್‌ ಮಧ್ಯೆ  ಎರಡನೇ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆದ್ದವರು ಫೈನಲ್‌ನಲ್ಲಿ ಕೋಲ್ಕತ್ತಾವನ್ನು ಎದುರಿಸಲಿದ್ದಾರೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಆರಂಭಿಸಿದ ವಿರಾಟ್‌ ಕೊಹ್ಲಿ ಮತ್ತು ನಾಯಕ ಡುಪ್ಲೆಸಿಸ್‌ ಮೊದಲ ವಿಕೆಟಿಗೆ 37 ರನ್‌ ಕಲೆ ಹಾಕಿದರು. 17 ರನ್‌ ಗಳಿಸಿದ್ದಾಗ ಈ ವೇಳೆ ಸಿಕ್ಸ್‌ ಸಿಡಿಸಲು ಹೋಗಿ ಡುಪ್ಲೇಸಿಸ್‌ ಪೊವೆಲ್‌ ಹಿಡಿದ ಅತ್ಯುತ್ತಮ ಕ್ಯಾಚ್‌ಗೆ ಬಲಿಯಾದರು. ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ 33 ರನ್‌ (24 ಎಸೆತ, 3 ಬೌಂಡರಿ, 1 ಸಿಕ್ಸ್‌) ಸಿಕ್ಸ್‌ ಸಿಡಿಸಲು ಹೋಗಿ ವಿಕೆಟ್‌ ಒಪ್ಪಿಸಿದರು.

    ಮೂರನೇ ವಿಕೆಟಿಗೆ ರಜತ್‌ ಪಾಟೀದರ್‌ ಮತ್ತು ಕ್ಯಾಮರೂನ್‌ ಗ್ರೀನ್‌ 31 ಎಸೆತಗಳಲ್ಲಿ 41 ರನ್‌ ಜೊತೆಯಾಟವಾಡಿ ಸ್ವಲ್ಪ ಚೇತರಿಕೆ ನೀಡಿದರು. ಮ್ಯಾಕ್ಸ್‌ವೆಲ್‌ ಮತ್ತೆ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು.  ಕ್ಯಾಮರೂನ್‌ ಗ್ರೀನ್‌ 27 ರನ್‌ (21 ಎಸೆತ, 2 ಬೌಂಡರಿ, 1 ಸಿಕ್ಸ್‌), ರಜತ್‌ ಪಾಟೀದರ್‌ 34 ರನ್‌ (22 ಎಸೆತ, 2 ಬೌಂಡರಿ, 2 ಸಿಕ್ಸ್‌), ಮಹಿಪಾಲ್ ಲೋಮ್ರೋರ್ 32 ರನ್‌(17 ಎಸೆತ, 2 ಬೌಂಡರಿ, 2 ಸಿಕ್ಸ್‌) ಸಿಡಿಸಿ ಔಟಾದರು. ಅಂತಿಮವಾಗಿ 8 ವಿಕೆಟ್‌ ನಷ್ಟಕ್ಕೆ 172 ರನ್‌ಗಳಿಸಿತು.

  • ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ – ದಾಖಲೆ ಬರೆದ ಕೊಹ್ಲಿ

    ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿ – ದಾಖಲೆ ಬರೆದ ಕೊಹ್ಲಿ

    ಅಹಮದಾಬಾದ್‌: ವಿರಾಟ್‌ ಕೊಹ್ಲಿ (Virat Kohli) ಐಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲಿ 8000 ರನ್‌ ಹೊಡೆದ ಏಕೈಕ ಬ್ಯಾಟರ್‌ ಎಂಬ ದಾಖಲೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

    ಒಟ್ಟು 252 ಪಂದ್ಯಗಳಿಂದ ಈ ಸಾಧನೆ ನಿರ್ಮಾಣವಾಗಿದೆ. ಐಪಿಎಲ್‌ (IPL) ಒಟ್ಟು 8 ಶತಕ ಮತ್ತು 55 ಅರ್ಧಶತಕವನ್ನು ಕೊಹ್ಲಿ ಸಿಡಿಸಿದ್ದಾರೆ.

    ಈ ವರ್ಷದ ಐಪಿಎಲ್‌ಲ್ಲಿ 15 ಪಂದ್ಯಗಳ 15 ಇನ್ನಿಂಗ್ಸ್‌ನಿಂದ ಕೊಹ್ಲಿ 741 ರನ್‌ ಹೊಡೆದಿದ್ದಾರೆ. 1 ಶತಕ, 5 ಅರ್ಧ ಶತಕ ಸಿಡಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಆರೆಂಜ್‌ ಕ್ಯಾಪ್‌ ಧರಿಸಿದ್ದಾರೆ.


    ಪಂಜಾಬ್‌ ಕಿಂಗ್ಸ್‌ನ ನಾಯಕ ಶಿಖರ್‌ ಧವನ್‌ (Shikar Dhawan) ಅತಿ ಹೆಚ್ಚು ರನ್‌ ಹೊಡೆದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಶಿಖರ್‌ ಧವನ್‌ 222 ಪಂದ್ಯಗಳಿಂದ 6,769 ರನ್‌ ಹೊಡೆದಿದ್ದಾರೆ. ರೋಹಿತ್‌ ಶರ್ಮಾ (Rohit Sharma) 257 ಪಂದ್ಯಗಳಿಂದ 6,628 ರನ್‌ ಸಿಡಿಸಿದ್ದಾರೆ.

    ರಾಜಸ್ಥಾನ ವಿರುದ್ಧ ಇಂದು ನಡೆಯುತ್ತಿರುವ ಎಲಿಮಿನೇಟರ್‌ ಪಂದ್ಯದಲ್ಲಿ ಕೊಹ್ಲಿ 33 ರನ್‌(24 ಎಸೆತ, 3 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಸಿಕ್ಸ್‌ ಸಿಡಿಸಲು ಹೋಗಿ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು.

  • ನಾಲ್ವರು ಶಂಕಿತ ಉಗ್ರರು ಅರೆಸ್ಟ್‌ – ಆರ್‌ಸಿಬಿ ಅಭ್ಯಾಸ ರದ್ದು, ಕೊಹ್ಲಿಗೆ ಬೆದರಿಕೆ

    ನಾಲ್ವರು ಶಂಕಿತ ಉಗ್ರರು ಅರೆಸ್ಟ್‌ – ಆರ್‌ಸಿಬಿ ಅಭ್ಯಾಸ ರದ್ದು, ಕೊಹ್ಲಿಗೆ ಬೆದರಿಕೆ

    ಅಹಮದಾಬಾದ್‌: ಭದ್ರತಾ ಕಾರಣಗಳಿಂದಾಗಿ (Security Reasons) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ ತನ್ನ ಏಕೈಕ ಅಭ್ಯಾಸವನ್ನು ರದ್ದುಗೊಳಿಸಿದೆ ಎಂದು ವರದಿಯಾಗಿದೆ.

    ಇಂದು ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ನಡೆಯಲಿರುವ ಎಲಿಮಿನೇಟರ್‌ ಪಂದ್ಯಕ್ಕೆ ಮಂಗಳವಾರ ಆರ್‌ಸಿಬಿ (RCB) ಅಹಮಾದಾಬಾದ್‌ನಲ್ಲಿರುವ ಗುಜರಾತ್‌ ಕಾಲೇಜ್‌ ಅಂಗಳದಲ್ಲಿ ಅಭ್ಯಾಸ ನಡೆಸಬೇಕಿತ್ತು. ಆದರೆ ಯಾವುದೇ ಅಧಿಕೃತ ಕಾರಣ ನೀಡದೇ ಅಭ್ಯಾಸವನ್ನು ರದ್ದುಗೊಳಿಸಿತ್ತು. ಇನ್ನೊಂದು ಕಡೆ ರಾಜಸ್ಥಾನ್ ರಾಯಲ್ಸ್ ಅದೇ ಸ್ಥಳದಲ್ಲಿ ಅಭ್ಯಾಸ ನಡೆಸಿದೆ.

    ವಿರಾಟ್ ಕೊಹ್ಲಿಗೆ (Virat Kohli) ಬೆದರಿಕೆ ಇದ್ದ ಕಾರಣ ಆರ್‌ಸಿಬಿ ಅಭ್ಯಾಸವನ್ನು ಮಂಗಳವಾರ ನಡೆಸಿಲ್ಲ ಎಂದು ಪೊಲೀಸ್‌ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಭಯೋತ್ಪಾದನಾ ಚಟುವಟಿಕೆಗಳ ಶಂಕೆಯ ಮೇಲೆ ಗುಜರಾತ್ ಪೊಲೀಸರು (Gujarat Police) ಸೋಮವಾರ ರಾತ್ರಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ (Ahmedabad Airport) ನಾಲ್ವರನ್ನು ಬಂಧಿಸಿದ್ದರು.

    ನಾಲ್ವರು ಆರೋಪಿಗಳ ಅಡಗುತಾಣವನ್ನು ಶೋಧಿಸಿದ ನಂತರ ಪೊಲೀಸರು ಶಸ್ತ್ರಾಸ್ತ್ರಗಳ ವಶಪಪಡಿಸಿಕೊಂಡಿದ್ದಾರೆ. ಈ ವೇಳೆ ವೀಡಿಯೊಗಳು ಮತ್ತು ಪಠ್ಯ ಸಂದೇಶಗಳನ್ನು ವಶಪಡಿಸಿಕೊಂಡಿದ್ದಾರೆ.

    ಈ ವಿಚಾರವನ್ನು ರಾಜಸ್ಥಾನ ರಾಯಲ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ತಿಳಿಸಲಾಗಿತ್ತು. ಅಹಮದಾಬಾದ್‌ಗೆ ವಿರಾಟ್‌ ಕೊಹ್ಲಿ ಬಂದ ನಂತರ ಈ ವಿಚಾರವನ್ನು ತಿಳಿಸಲಾಗಿದೆ. ವಿರಾಟ್‌ ಕೊಹ್ಲಿ ದೇಶದ ಸಂಪತ್ತು ಮತ್ತು ಅವರ ಭದ್ರತೆ ನಮ್ಮ ಅತ್ಯಂತ ಆದ್ಯತೆಯಾಗಿದೆ ಎಂದು ಪೊಲೀಸ್ ಅಧಿಕಾರಿ ವಿಜಯ್ ಸಿಂಗ್ ಜ್ವಾಲಾ ಹೇಳಿದರು.

    ಆರ್‌ಸಿಬಿ ರಿಸ್ಕ್ ತೆಗೆದುಕೊಳ್ಳಲು ಬಯಸಲಿಲ್ಲ. ಯಾವುದೇ ಅಭ್ಯಾಸದ ಅವಧಿ ಇರುವುದಿಲ್ಲ ಎಂದು ಅವರು ನಮಗೆ ತಿಳಿಸಿದರು. ರಾಜಸ್ಥಾನ್ ರಾಯಲ್ಸ್‌ಗೆ ಈ ವಿಚಾರವನ್ನು ತಿಳಿಸಲಾಗಿತ್ತು. ಆದರೆ ಅವರು ಅಭ್ಯಾಸದಲ್ಲಿ ತೊಡಗಿಕೊಂಡರು ಎಂದು ಹೇಳಿದರು.

    ಆರ್‌ಸಿಬಿ ಆಟಗಾರರು ತಂಗಿದ್ದ ಹೋಟೆಲಿನಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆರ್‌ಸಿಬಿ ಆಟಗಾರರಿಗೆ ಹೋಟೆಲಿನಲ್ಲಿ ಪ್ರತ್ಯೇಕ ಪ್ರವೇಶ ದ್ವಾರವನ್ನು ಕಲ್ಪಿಸಲಾಗಿದೆ. ಐಪಿಎಲ್‌ (IPL) ಮಾಧ್ಯಮ ಪಾಸ್‌ ಹೊಂದಿರುವ ಪ್ರತಿನಿಧಿಗಳಿಗೂ ಹೋಟೆಲ್‌ ಆವರಣ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

    ರಾಜಸ್ಥಾನ ರಾಯಲ್ಸ್‌ ತಂಡ ಬಸ್‌ ಮೂಲಕ ಮೈದಾನ ಪ್ರವೇಶಿಸಿತ್ತು. ಅಭ್ಯಾಸಕ್ಕೆ ಬರುವಾಗ ಮತ್ತು ಅ‍ಭ್ಯಾಸದ ವೇಳೆ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಮೈದಾನದ ಉದ್ದಕ್ಕೂ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಗಸ್ತು ತಿರುಗುತ್ತಿದ್ದರು. ಭದ್ರತಾ ಕಾರಣಕ್ಕೆ ರಾಜಸ್ಥಾನ ಮತ್ತು ಬೆಂಗಳೂರು ತಂಡಗಳು ಪಂದ್ಯಕ್ಕೆ ಮುನ್ನ ನಿಗದಿಯಾಗಿದ್ದ ಸುದ್ದಿಗೋಷ್ಠಿಯನ್ನು ರದ್ದು ಮಾಡಿದೆ ಎಂದು ವರದಿಯಾಗಿದೆ.

    ನಾಲ್ವರು ಅರೆಸ್ಟ್‌:
    ಇಸ್ಲಾಮಿಕ್ ಸ್ಟೇಟ್‌ನ (ಐಸಿಸ್) ನಾಲ್ವರು ಉಗ್ರರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ಪೊಲೀಸರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಿದ್ದರು. ಈ ನಾಲ್ವರು ಶ್ರೀಲಂಕಾ ಪ್ರಜೆಗಳಾಗಿದ್ದು ಮೊದಲು ಚೆನ್ನೈಗೆ ಆಗಮಿಸಿ ನಂತರ ಅಹಮದಾಬಾದ್‌ನಲ್ಲಿ ಲ್ಯಾಂಡ್‌ ಆಗಿದ್ದರು.

    ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಂದ ಸಂದೇಶಕ್ಕಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಅರೆಸ್ಟ್‌ ಆಗಿದ್ದಾರೆ. ಬಂಧಿತರನ್ನು ಮೊಹಮದ್ ನುಸ್ರತ್, ಮೊಹಮದ್ ನಫ್ರಾನ್, ಮೊಹಮದ್ ಫಾರಿಸ್ ಮತ್ತು ಮೊಹಮದ್ ರಸ್ದೀನ್ ಎಂದು ಗುರುತಿಸಲಾಗಿದೆ.

  • 4ನೇ ಬಾರಿಗೆ ಫೈನಲ್‌ಗೆ – ಕೋಲ್ಕತ್ತಾ ಅಬ್ಬರಕ್ಕೆ ಮುಳುಗಿದ ಸನ್‌ ರೈಸರ್ಸ್‌

    4ನೇ ಬಾರಿಗೆ ಫೈನಲ್‌ಗೆ – ಕೋಲ್ಕತ್ತಾ ಅಬ್ಬರಕ್ಕೆ ಮುಳುಗಿದ ಸನ್‌ ರೈಸರ್ಸ್‌

    ಅಹಮದಾಬಾದ್‌: ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ಮೊದಲ ಕ್ವಾಲಿಫೈಯರ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ8  ವಿಕೆಟ್‌ಗಳ ಭರ್ಜರಿ ಜಯಗಳಿಸಿ ನಾಲ್ಕನೇ ಬಾರಿ ಐಪಿಎಲ್ ಫೈನಲ್‌ (IPL Final) ಪ್ರವೇಶಿಸಿದೆ.

    ಗೆಲ್ಲಲು 160 ರನ್‌ಗಳ ಗುರಿಯನ್ನು ಪಡೆದ ಕೋಲ್ಕತ್ತಾ ಇನ್ನೂ 38 ಎಸೆತ ಬಾಕಿ ಇರುವಂತೆಯೇ 2 ವಿಕೆಟ್‌ ನಷ್ಟಕ್ಕೆ 164 ರನ್‌ ಹೊಡೆಯುವ ಮೂಲಕ ಜಯಗಳಿಸಿತು.‌ ಇಲ್ಲಿಯವರೆಗೆ 2012, 2014, 2021ರಲ್ಲಿ ಕೋಲ್ಕತ್ತಾ ಫೈನಲ್‌ ಪ್ರವೇಶಿಸಿತ್ತು. 2012 ಮತ್ತು 2014ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.

    ಸುಲಭದ ಸವಾಲನ್ನು ಬೆನ್ನಟ್ಟಿದ ಕೋಲ್ಕತ್ತಾ ಆರಂಭಿಕ ಆಟಗಾರರು ಆರಂಭದಿಂದಲೇ ಆಕ್ರಮಣಕ್ಕೆ ಇಳಿದಿದ್ದರು. ಮೊದಲ ವಿಕೆಟಿಗೆ 20 ಎಸೆತಗಳಲ್ಲಿ 44 ರನ್‌ ಬಂದಿತ್ತು. ರಹಮಾನುಲ್ಲಾ ಗುರ್ಬಾಜ್ 23 ರನ್‌ (14 ಎಸೆತ, 2 ಬೌಂಡರಿ, 2 ಸಿಕ್ಸರ್)‌, ಸುನಿಲ್‌ ನರೈನ್‌ 21 ರನ್‌ (16 ಎಸೆತ, 4 ಬೌಂಡರಿ) ಹೊಡೆದು ಔಟಾದರು.

    ನಂತರ ಜೊತೆಯಾದ ನಾಯಕ ಶ್ರೇಯಸ್‌ ಅಯ್ಯರ್‌ ಮತ್ತು ವೆಂಕಟೇಶ್‌ ಅಯ್ಯರ್‌ ಮುರಿಯದ 3ನೇ ವಿಕೆಟಿಗೆ 44 ಎಸೆತಗಳಲ್ಲಿ 97 ರನ್‌ ಜೊತೆಯಾಟವಾಡುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಶ್ರೇಯಸ್‌ ಅಯ್ಯರ್‌ 58 ರನ್‌ (24 ಎಸೆತ, 5 ಬೌಂಡರಿ, 4 ಸಿಕ್ಸರ್‌), ವೆಂಕಟೇಶ್‌ ಅಯ್ಯರ್‌ 51 ರನ್‌(28 ಎಸೆತ, 5 ಬೌಂಡರಿ, 4 ಸಿಕ್ಸರ್‌) ಸಿಡಿಸಿದರು.

    ಹೈದರಾಬಾದ್‌ ಬೌಲಿಂಗ್‌ ಕಳಪೆಯಾಗಿತ್ತು. ಉತ್ತಮ ಬೌಲಿಂಗ್‌ ಮಾಡುತ್ತಿದ್ದ ನಾಯಕ ಪ್ಯಾಟ್‌ ಕಮ್ಮಿನ್ಸ್‌ 3 ಓವರ್‌ ಎಸೆದು 38 ರನ್‌ ನೀಡಿದ್ದರು. ಅಷ್ಟೇ ಅಲ್ಲದೇ ಹಲವು ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಹೈದರಾಬಾದ್‌ ಸೋಲನ್ನು ಅನುಭವಿಸಿತು.

    ಕಳಪೆ ಬ್ಯಾಟಿಂಗ್‌: ಟಾಸ್‌ ಗೆದ್ದ ಕೋಲ್ಕತ್ತಾ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಫೀಲ್ಡಿಂಗ್‌ ಆಯ್ಕೆ ಮಾಡಿದರು. ಈ ನಿರ್ಧಾರ ಮೊದಲ ಓವರ್‌ನಲ್ಲಿ ಫಲ ನೀಡಿತು. ಲೀಗ್‌ನಲ್ಲಿ ಅಬ್ಬರಿಸಿದ್ದ ಟ್ರಾವಿಸ್‌ ಹೆಡ್‌ ಅವರನ್ನು ಮಿಚೆಲ್‌ ಸ್ಟಾರ್ಕ್‌ ಶೂನ್ಯಕ್ಕೆ ಬೌಲ್ಡ್‌ ಮಾಡಿ ಆರಂಭಿಕ ಮುನ್ನಡೆ ತಂದುಕೊಟ್ಟರು. ಎರಡನೇ ಓವರ್‌ನಲ್ಲಿ ಸಿಕ್ಸರ್‌ ವೀರ ಅಭಿಷೇಕ್‌ ಶರ್ಮಾ 3 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. 39 ರನ್‌ಗಳಿಸುವಷ್ಟರಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಸಹ ಔಟಾದರು.

    ಈ ಹಂತದಲ್ಲಿ ಜೊತೆಯಾದ ರಾಹುಲ್‌ ತ್ರಿಪಾಠಿ ಮತ್ತು ಕ್ಲಾಸೆನ್‌ 37 ಎಸೆತಗಳಲ್ಲಿ 62 ರನ್‌ ಜೊತೆಯಾಟವಾಡಿ ತಂಡಕ್ಕೆ ಸ್ವಲ್ಪ ಚೇತರಿಕೆ ನೀಡಿದರು.

     

    ಸಿಕ್ಸ್‌ ಸಿಡಿಸಲು ಹೋಗಿ ಕ್ಲಾಸೆನ್‌ 32 ರನ್‌ (21 ಎಸೆತ, 3 ಬೌಂಡರಿ, 1 ಸಿಕ್ಸರ್‌), ರಾಹುಲ್‌ ತ್ರಿಪಾಠಿ 55 ರನ್‌ (35 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಸಿಡಿಸಿ ರನೌಟ್‌ಗೆ ಬಲಿಯಾರು.

    ನಾಯಕ ಪ್ಯಾಟ್‌ ಕಮ್ಮಿನ್ಸ್‌ 30 ರನ್‌ (24 ಎಸೆತ, 2 ಬೌಂಡರಿ, 2 ಸಿಕ್ಸರ್‌) ಸಿಡಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜೊತೆಯಾಟ ನಡೆಯದ ಕಾರಣ ಅಂತಿಮವಾಗಿ 19.3 ಓವರ್‌ಗಳಲ್ಲಿ 159 ರನ್‌ಗಳಿಗೆ ಹೈದರಾಬಾದ್‌ ಆಲೌಟ್‌ ಆಯ್ತು. ಹೈದರಾಬಾದ್‌ 8 ಆಟಗಾರರು ಎರಡಂಕಿಯನ್ನು ದಾಟಲಿಲ್ಲ.  4 ಆಟಗಾರರು ಶೂನ್ಯಕ್ಕೆ ಔಟಾಗಿದ್ದರು.

  • RCB vs CSK – ಸೈಬರ್‌ ಖದೀಮರಿಂದ ಭಾರೀ ವಂಚನೆ, ದೂರು ದಾಖಲು

    RCB vs CSK – ಸೈಬರ್‌ ಖದೀಮರಿಂದ ಭಾರೀ ವಂಚನೆ, ದೂರು ದಾಖಲು

    ಬೆಂಗಳೂರು: ಆರ್‌ಸಿಬಿ (RCB) ಕ್ರಿಕೆಟ್ ಅಭಿಮಾನಿಗಳಿಗೆ ಇಂದು ರಸದೌತಣ. ಫ್ಲೇಆಫ್ ಹಂತಕ್ಕೆ ಆರ್‌ಸಿಬಿ ಹೋಗಬೇಕಾದರೆ ಸಿಎಸ್‌ಕೆಯನ್ನು (CSK) ಟೂರ್ನಿಯಿಂದ ಹೊರಕ್ಕೆ ಹಾಕಲು ಇರುವ ಕೊನೆಯ ಅವಕಾಶ. ಚಿನ್ನಸ್ವಾಮಿಯಲ್ಲಿ (Chinnaswamy Stadium) ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ (Ticket) ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್‌ ನೀಡುತ್ತೇವೆ ಎಂದು ಹೇಳಿ ಸೈಬರ್ ಕಳ್ಳರು ಅಭಿಮಾನಿಗಳಿಗೆ ಮೋಸ ಮಾಡುತ್ತಿದ್ದಾರೆ.

    ಇವತ್ತಿನ ಪಂದ್ಯದ ಮೇಲೆ ಎಲ್ಲರ ಚಿತ್ತವಿದ್ದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಖದೀಮರು ಆನ್‌ಲೈನ್‌ನಲ್ಲಿ ಮ್ಯಾಚ್‌ ಟಿಕೆಟ್‌ ಬೇಕಾದರೆ ಲಿಂಕ್ ಓಪನ್ ಮಾಡಿ ಟಿಕೆಟ್ ಬುಕ್ ಮಾಡಿಕೊಳ್ಳಿ ಎಂಬ ಪೋಸ್ಟ್‌ ಕಳುಹಿಸುತ್ತಿದ್ದಾರೆ.  ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯಕೋಚ್‌ ಹುದ್ದೆಗೆ ಗೌತಮ್‌ ಗಂಭೀರ್‌ ಹೆಸರು ಪ್ರಸ್ತಾಪ!

     

    ನಕಲಿ ಲಿಂಕ್‌ನಿಂದ ಟಿಕೆಟ್ ಬುಕ್ ಮಾಡಿಕೊಂಡವರು ಹಣವನ್ನ ಕಳೆದುಕೊಂಡಿದ್ದು ಬಿಟ್ಟರೆ ಬೇರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗೆ ಬಂದ ಲಿಂಕ್‌ಮೇಲೆ ಕ್ಲಿಕ್ ಮಾಡಿ 3 ಟಿಕೆಟ್‌ಗೆ 3,600 ರೂ. ಪಾವತಿ ಮಾಡಿದ್ದ ಆಕಾಶ್ ಕುಮಾರ್‌ ಈಗ ಸೈಬರ್‌ ಠಾಣೆಗೆ ದೂರು ನೀಡಿದ ಬಳಿಕ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಚಿನ್ನ‌‌ಸ್ವಾಮಿ ಸ್ಟೇಡಿಯಂನಲ್ಲಿ ಫುಡ್ ಟೆಸ್ಟ್‌ಗೆ ಮುಂದಾದ ಸರ್ಕಾರ

    ಸೈಬರ್ ಖದೀಮರು ರಿಯಲ್ ವೆಬ್‌ಸೈಟ್‌ಗೆ ಹೇಗೆ ಇದೆಯೇ ಅದೇ ರೀತಿ ಸೈಟ್‌ ಸೃಷ್ಟಿ ಮಾಡಿ ಟಿಕೆಟ್ ಬುಕ್ ಮಾಡುವವರ ಬಳಿ ಹಣ ಪೀಕುತ್ತಿದ್ದಾರೆ. ಅದೆಷ್ಟೋ ಜನ ಮ್ಯಾಚ್ ನೋಡುವ ಆತುರದಲ್ಲಿ ಹಣ ಕಳೆದುಕೊಂಡಿದ್ದಾರೆ. ಹೀಗೆ ಯಾರು ವಂಚನೆಗೊಳಗಾಗಬೇಡಿ ಆಕಾಶ್ ಮನವಿ ಮಾಡಿದ್ದಾರೆ.

     

  • ಹೈವೋಲ್ಟೇಜ್ ಕದನ ವಾಷ್‌ಔಟ್‌ ಆಗುವ ಸಾಧ್ಯತೆ – ಆರ್‌ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ!

    ಹೈವೋಲ್ಟೇಜ್ ಕದನ ವಾಷ್‌ಔಟ್‌ ಆಗುವ ಸಾಧ್ಯತೆ – ಆರ್‌ಸಿಬಿ ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ!

    – ಬೆಂಗಳೂರಿನಲ್ಲಿ ಮಳೆಯ ವಾತಾವರಣ ಹೇಗಿದೆ?
    – ʻಸಬ್ ಏರ್ ಸಿಸ್ಟಂʼ ಒಂದೇ ಆಧಾರ

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 18) ನಡೆಯಲಿರುವ ಹೈವೋಲ್ಟೇಜ್‌ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಹೆಚ್ಚಾಗಿದೆ.

    ಕಳೆದ ಒಂದು ವಾರದಿಂದಲೂ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದೆ. ಶನಿವಾರವೂ ಗರಿಷ್ಠ 28°, ಕನಿಷ್ಠ 21° ಸೆಲ್ಸಿಯಸ್‌ ತಾಪಮಾನ ಇರಲಿದೆ. ಒಂದು ವೇಳೆ ಶನಿವಾರವೂ ನಗರದಲ್ಲಿ ಮಳೆಯಾದರೆ, ಪಂದ್ಯ ರದ್ದಾಗಲಿದ್ದು, ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಸಿಗಲಿದೆ. ಇದರಿಂದ ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಪ್ಲೇ ಆಫ್‌ ಪ್ರವೇಶಿಸಲಿದೆ. ಹಾಗಾಗಿ ಮೇ 18 ರಂದು ಯಾವುದೇ ಕಾರಣಕ್ಕೂ ಮಳೆಯಾಗದಿರಲಿ ಎಂದು ಆರ್‌ಸಿಬಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ- ಅರ್ಹತೆಗಳೇನು?

    ಆರ್‌ಸಿಬಿ ತಂಡ ಈವರೆಗೆ ಆಡಿದ 13 ಪಂದ್ಯಗಳಿಂದ 12 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಉತ್ತಮ ನೆಟ್‌ ರನ್‌ರೇಟ್‌ ಆರ್‌ಸಿಬಿ ಕೈ ಹಿಡಿದಿದ್ದು, ಪ್ಲೇ ಆಫ್ಸ್‌ ಪ್ರವೇಶಿಸಲು ಎದುರು ನೋಡುತ್ತಿದೆ. ಆದ್ರೆ ಆರ್‌ಸಿಬಿಗೆ ಮ್ಯಾಜಿಕ್‌ ನಂಬರ್‌ 14 ಅಂಕಗಳನ್ನು ಸಂಪಾದಿಸಲು ಡಿಫೆಂಡಿಂಗ್‌ ಚಾಂಪಿಯನ್ಸ್‌ ಸಿಎಸ್‌ಕೆ ಎದುರು ಜಯಗಳಿಸಲೇಬೇಕಿದೆ. ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ಪಾದ ಮುಟ್ಟಿ ನಮಸ್ಕರಿಸಿದ ಅಭಿಮಾನಿ; ಹೃದಯ ಶ್ರೀಮಂತಿಕೆ ಮೆರೆದ ಧೋನಿ – ವೀಡಿಯೋ ವೈರಲ್‌!

    ಒಂದು ವೇಳೆ ಆರ್‌ಸಿಬಿ ರನ್‌ ಚೇಸ್‌ ಮಾಡಿದರೆ 18.1 ಓವರ್‌ಗಳ ಒಳಗೆ ಗೆಲ್ಲಬೇಕು. ಮೊದಲು ಬ್ಯಾಟ್‌ ಮಾಡಿದರೆ ಕನಿಷ್ಠ 18 ರನ್‌ಗಳಿಂದ ಗೆಲ್ಲಬೇಕು. ಈ ಸುಲಭ ಲೆಕ್ಕಾಚಾರದ ಗೆಲುವು ಕೂಡ ಆರ್‌ಸಿಬಿಗೆ ಅಗತ್ಯವಿದೆ. ಆದರೆ, ಆರ್‌ಸಿಬಿ ತಂಡದ ಎಲ್ಲಾ ಲೆಕ್ಕಾಚಾರಗಳಿಗೆ ಮಳೆ ತಣ್ಣೀರೆರಚುವ ಸಾಧ್ಯತೆ ಇದೆ. ಹವಾಮಾನ ವರದಿ ಪ್ರಕಾರ ಶನಿವಾರ ಸಂಜೆ 5-11ರ ವರೆಗೆ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಪಂದ್ಯ ಮಳೆಗೆ ಬಲಿಯಾದ್ರೆ ಸಿಎಸ್‌ಕೆ 15 ಅಂಕಗಳೊಂದಿಗೆ ಪ್ಲೇ ಆಫ್‌ ಪ್ರವೇಶಿಸಲಿದೆ.

    ʻಸಬ್‌ ಏರ್‌ ಸಿಸ್ಟಮ್‌ʼ ಒಂದೇ ಆಧಾರ:
    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಪಂದ್ಯಗಳು ಆರಂಭಿಸಬಹುದಾಗಿದೆ. ಉದಾಹರಣೆಗೆ ಒಂದು ಗಂಟೆ ಭಾರೀ ಮಳೆ ಸುರಿದರೆ ಕೇವಲ 7 ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು. ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಕೆಯಾಗಿದ್ದು ಕೂಡಲೇ ನೀರನ್ನು ಹೊರ ಹಾಕಲಾಗುತ್ತದೆ. ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನ ಒಣಗಿಸುವ ವ್ಯವಸ್ಥೆಯಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆದ್ದರಿಂದ ಮಳೆಯು 9 ಗಂಟೆ ವೇಳೆಗೆ ಬಿಡುವು ಕೊಟ್ಟರು ಕನಿಷ್ಠ ಓವರ್‌ಗಳ ಮಿತಿಯಲ್ಲಿ 9:30 ರಿಂದ ಪಂದ್ಯ ಆರಂಭಿಸಬಹುದಾಗಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ವಿಚಿತ್ರ ಕಾರಣಕ್ಕೆ ಔಟಾದ ಜಡೇಜಾ – ಏನಿದು ರೂಲ್ಸ್ 37.1.4? 

  • ಮಳೆಗೆ ಪಂದ್ಯ ಬಲಿ – ಪ್ಲೇ ಆಫ್‌ ರೇಸ್‌ನಿಂದ ಗುಜರಾತ್‌ ಔಟ್‌

    ಮಳೆಗೆ ಪಂದ್ಯ ಬಲಿ – ಪ್ಲೇ ಆಫ್‌ ರೇಸ್‌ನಿಂದ ಗುಜರಾತ್‌ ಔಟ್‌

    ಅಹಮದಾಬಾದ್‌: ಗುಜರಾತ್‌ ಟೈಟಾನ್ಸ್‌ (Gujarat Titans) ಐಪಿಎಲ್‌ ಪ್ಲೇ ಆಫ್‌ ರೇಸ್‌ನಿಂದ ಹೊರ ಬಿದ್ದಿದೆ. ಗುಜರಾತ್‌ ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್‌ (Kolkata Knight Riders) ವಿರುದ್ಧದ ಪಂದ್ಯ ಭಾರೀ ಮಳೆಯಿಂದ ರದ್ದಾಗಿದೆ.

    ಪ್ಲೇ ಆಫ್‌ಗೆ ಹೋಗಲು ಇಂದಿನ ಪಂದ್ಯವನ್ನು ಗುಜರಾತ್‌ಗೆ ಗೆಲ್ಲಲೇ ಬೇಕಿತ್ತು. ಆದರೆ ಭಾರೀ ಮಳೆಯಿಂದ (Rain) ಒಂದು ಎಸೆತ ಕಾಣದೇ ಪಂದ್ಯ ರದ್ದಾದ ಪರಿಣಾಮ ಗುಜರಾತ್‌ ಕನಸು ಭಗ್ನಗೊಂಡಿದೆ.

    ಪಂದ್ಯ ರದ್ದಾದ ಪರಿಣಾಮ ಕೋಲ್ಕತ್ತಾ ಮತ್ತು ಗುಜರಾತ್‌ಗೆ ತಲಾ ಒಂದೊಂದು ಅಂಕವನ್ನು ಹಂಚಲಾಗಿದೆ. ಈಗಾಲೇ ಪ್ಲೇ ಆಫ್‌ ಪ್ರವೇಶಿಸಿರುವ ಕೋಲ್ಕತ್ತಾಗೆ ಒಟ್ಟು 19 ಅಂಕ ಸಂಪಾದಿಸಿದರೆ ಗುಜರಾತ್‌ 12 ಪಂದ್ಯಗಳಿಂದ ಒಟ್ಟು 11 ಅಂಕ ಸಂಪಾದಿಸಿದೆ.

     ಚೆನ್ನೈ ಮತ್ತು ಹೈದರಾಬಾದ್‌ ತಲಾ 14 ಅಂಕ ಗಳಿಸಿ ಪ್ಲೇ ಆಫ್‌ ರೇಸ್‌ನಲ್ಲಿದೆ. ಈ ಒಂದು ವೇಳೆ ಈ ಪಂದ್ಯವನ್ನು ಉತ್ತಮ ರನ್‌ ರೇಟ್‌ನೊಂದಿಗೆ ಗೆದ್ದಿದ್ದರೆ ಗುಜರಾತ್‌ಗೆ ಪ್ಲೇ ಆಫ್‌ ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ ಈ ಪಂದ್ಯದ ರದ್ದಾದ ಪರಿಣಾಮ 2022 ಚಾಂಪಿಯನ್‌, 2023ರ ದ್ವಿತೀಯ ಸ್ಥಾನಿ ಗುಜರಾತ್‌ ಐಪಿಎಲ್‌ ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರ ಬಿದ್ದಿದೆ.

  • ಕೊನೆಯಲ್ಲಿ ಕಮ್ಮಿನ್ಸ್‌, ಭುವನೇಶ್ವರ್‌ ಮ್ಯಾಜಿಕ್‌ – ಹೈದ್ರಾಬಾದ್‌ಗೆ 1 ರನ್‌ ರೋಚಕ ಜಯ

    ಕೊನೆಯಲ್ಲಿ ಕಮ್ಮಿನ್ಸ್‌, ಭುವನೇಶ್ವರ್‌ ಮ್ಯಾಜಿಕ್‌ – ಹೈದ್ರಾಬಾದ್‌ಗೆ 1 ರನ್‌ ರೋಚಕ ಜಯ

    ಹೈದರಾಬಾದ್‌: ಕೊನೆಯಲ್ಲಿ ನಾಯಕ ಪ್ಯಾಟ್‌ ಕಮ್ಮಿನ್ಸ್‌ (Pat Cummins) ಮತ್ತು ಭುವನೇಶ್ವರ್‌ ಕುಮಾರ್‌ (Bhuvneshwar Kumar) ಅವರ ಮ್ಯಾಜಿಕ್‌ ಬೌಲಿಂಗ್‌ನಿಂದಾಗಿ  ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) 1 ರನ್‌ಗಳ ರೋಚಕ ಜಯ ದಾಖಲಿಸಿದೆ.

    ಮೊದಲು ಬ್ಯಾಟ್‌ ಮಾಡಿದ ಹೈದರಾಬಾದ್‌ 3 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಕೊನೆಯವರೆಗೆ ಹೋರಾಡಿತ್ತು. ಅಂತಿಮವಾಗಿ 7 ವಿಕೆಟ್‌ ನಷ್ಟಕ್ಕೆ 200 ರನ್‌ ಗಳಿಸಿ ಸೋತಿತು.

    ಕೊನೆಯ 30 ಎಸೆತಗಳಲ್ಲಿ ಹೈದರಾಬಾದ್‌ ಗೆಲ್ಲಲು 45 ರನ್‌ ಬೇಕಿತ್ತು. 16ನೇ ಓವರ್‌ನಲ್ಲಿ 3 ರನ್‌, 17 ನೇ ಓವರ್‌ನಲ್ಲಿ 15 ರನ್‌, 18ನೇ ಓವರ್‌ನಲ್ಲಿ 7 ರನ್‌ ಬಂತು. 19ನೇ ಓವರ್‌ ಎಸೆದ ಕಮ್ಮಿನ್ಸ್‌ ಕೇವಲ 7 ರನ್‌ ನೀಡಿ ನಿಯಂತ್ರಿಸಿದರು.

    ಭುವನೇಶ್ವರ್‌ ಎಸೆದ ಕೊನೆಯ ಓವರ್‌ನಲ್ಲಿ ಒಂದು ಬೌಂಡರಿ ಸೇರಿದಂತೆ 11 ರನ್‌ ಬಂತು. ಕೊನೆಯ ಎಸೆತದಲ್ಲಿ ಎರಡು ರನ್‌ ಬೇಕಿತ್ತು. ಭುವನೇಶ್ವರ್‌ ಕುಮಾರ್‌ ಎಸೆದ ಬಾಲ್‌ ಬ್ಯಾಟ್‌ಗೆ ತಾಗದೇ ಪೊವೆಲ್‌ ಪ್ಯಾಡ್‌ಗೆ ತಾಗಿ ಎಲ್‌ಬಿ ಔಟಾದ ಪರಿಣಾಮ ರಾಜಸ್ಥಾನ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿತು.

    ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್‌ 67 ರನ್‌ (40 ಎಸೆತ, 7 ಬೌಂಡರಿ, 2 ಸಿಕ್ಸರ್‌) ರಿಯಾನ್‌ ಪರಾಗ್‌ 77 ರನ್‌ ( 49 ಎಸೆತ,8 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರು. ಭುವನೇಶ್ವರ್‌ ಕುಮಾರ್‌ 3 ವಿಕೆಟ್‌ ಪಡೆದರೆ, ಪ್ಯಾಟ್‌ ಕಮ್ಮಿನ್ಸ್‌ ಮತ್ತು ನಟರಾಜನ್‌ ತಲಾ 2 ವಿಕೆಟ್‌ ಪಡೆದರು.

    ಹೈದರಾಬಾದ್‌ ಪರ ಟ್ರಾವಿಸ್‌ ಹೆಡ್‌ 58 ರನ್‌ (44 ಎಸೆತ, 6 ಬೌಂಡರಿ, 3 ಸಿಕ್ಸರ್‌), ನಿತೀಶ್‌ ಕುಮಾರ್‌ ರೆಡ್ಡಿ ಔಟಾಗದೇ 76 ರನ್(42‌ ಎಸೆತ, 3 ಬೌಂಡರಿ, 8 ಸಿಕ್ಸರ್‌), ಕ್ಲಾಸನ್‌ ಔಟಾಗದೇ 42 ರನ್‌ (19 ಎಸೆತ, 3 ಬೌಂಡರಿ, 3 ಸಿಕ್ಸರ್‌) ಹೊಡೆದರು.

  • ಕೊನೆಯಲ್ಲಿ ಕ್ರೀಸ್‌ ಬಿಟ್ಟುಕೊಡದ ಮಹಿ – ಡೇರಿಲ್‌ ಮಿಚೆಲ್‌ಗೆ ದೊಡ್ಡ ಅವಮಾನ ಎಂದು ಫ್ಯಾನ್ಸ್‌ ಗರಂ!

    ಕೊನೆಯಲ್ಲಿ ಕ್ರೀಸ್‌ ಬಿಟ್ಟುಕೊಡದ ಮಹಿ – ಡೇರಿಲ್‌ ಮಿಚೆಲ್‌ಗೆ ದೊಡ್ಡ ಅವಮಾನ ಎಂದು ಫ್ಯಾನ್ಸ್‌ ಗರಂ!

    – ಅಂದು‌ ಮಹಿ ಯಡವಟ್ಟಿನಿಂದಲೇ ಇಂಗ್ಲೆಂಡ್‌ ವಿರುದ್ಧ ಸೋತಿದ್ದ ಭಾರತ

    ಚೆನ್ನೈ: ತವರಿನಲ್ಲಿ ಪಂಜಾಬ್‌ ಕಿಂಗ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ನಡುವಣ ಪಂದ್ಯದಲ್ಲಿ ಮಾಜಿ ನಾಯಕ ಮಹಿ (MS Dhoni) ನಡೆದುಕೊಂಡ ರೀತಿ ಅಭಿಮಾನಿಗಳಿಂದ ಭಾರೀ ಟೀಕೆಗೆ ಕಾರಣವಾಗಿದೆ.

    ಚೆನ್ನೈ ಸೂಪರ್‌ಕಿಂಗ್ಸ್‌ ತಂಡದ ನಾಡಿ, ಕ್ರಿಕೆಟ್‌ ಅಭಿಮಾನಿಗಳ ಆರಾಧ್ಯ ದೈವ ಎನಿಸಿಕೊಂಡಿರುವ ಲೆಜೆಂಡ್‌ ಎಂ.ಎಸ್‌ ಧೋನಿ ಬ್ಯಾಟಿಂಗ್‌ ಸರದಿಯ ಕೊನೇ ಓವರ್‌ನಲ್ಲಿ ತೋರಿದ ವರ್ತನೆ ಅಭಿಮಾನಿಗಳ ಅಸಮಾಧಾನ ಸ್ಫೋಟಕ್ಕೆ ಕಾರಣವಾಗಿದೆ.

    ಹೌದು. ಚೆನ್ನೈನ ಎಂ.ಎ ಚಿದಂಬರಂ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 162 ರನ್‌ಗಳನ್ನು ಕಲೆ ಹಾಕಿ ಪಂಜಾಬ್‌ ಕಿಂಗ್ಸ್‌ಗೆ 163 ರನ್‌ಗಳ ಗುರಿ ನೀಡಿತ್ತು.

    ಮಿಚೆಲ್‌ಗೆ ಅವಮಾನ ಮಾಡಿದ್ರಾ ಮಹಿ?
    ಚೆನ್ನೈ ಸೂಪರ್‌ ಕಿಂಗ್ಸ್ ಇನಿಂಗ್ಸ್‌ನ ಕೊನೇ ಓವರ್‌ನ ಮೊದಲ ಎಸೆತದಲ್ಲಿ ಎಂ.ಎಸ್‌ ಧೋನಿ, ಅರ್ಷದೀಪ್‌ ಸಿಂಗ್‌ಗೆ ಬೌಂಡರಿ ಬಾರಿಸಿದ್ದರು. ನಂತರ ಮುಂದಿನ 2 ಎಸೆತಗಳನ್ನು ಡಾಟ್‌ ಮಾಡಿದ್ದರು. 3ನೇ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ್ದ ಧೋನಿ, ಬೌಂಡರಿ ಅಥವಾ ಸಿಕ್ಸರ್‌ ಬಾರಿಸುವಲ್ಲಿ ವಿಫಲವಾಗಿದ್ದರು. ಆದ್ರೆ ಈ ವೇಳೆ ಸುಲಭವಾಗಿ ಒಂದು ರನ್‌ ಕದಿಯಬಹುದಿತ್ತು. ಆದರೆ, ಧೋನಿ ನಿರಾಕರಿಸಿದರು.

    ನಾನ್‌ಸ್ಟ್ರೈಕ್‌ ತುದಿಯಲ್ಲಿದ್ದ ಡೇರಿಲ್‌ ಮಿಚೆಲ್‌ (Daryl Mitchell) ರನ್‌ ಪಡೆಯಲು ಸ್ಟ್ರೈಕರ್‌ ತುದಿಗೆ ಓಡಿ ಬಂದರು. ಆದರೆ, ಧೋನಿ ನಿಂತಲ್ಲಿಯೇ ಡೇರಿಲ್‌ ಮಿಚೆಲ್‌ಗೆ ವಾಪಸ್‌ ಹೋಗುವಂತೆ ಹೇಳಿದರು. ಪುನಃ ಮಿಚೆಲ್‌ ನಾನ್‌ಸ್ಟ್ರೈಕ್‌ ತುದಿಗೆ ಓಡಿಬಂದರು ಈ ವೇಳೆ ಕೂದಲೆಳೆ ಅಂತರದಲ್ಲಿ ರನ್‌ಔಟ್‌ ಆಗುವುದನ್ನು ತಪ್ಪಿಸಿಕೊಂಡಿದ್ದರು. ನಂತರ 4ನೇ ಎಸತವನ್ನೂ ಡಾಟ್‌ ಮಾಡಿಕೊಂಡ ಧೋನಿ, 5ನೇ ಎಸೆತದಲ್ಲಿ ಸಿಕ್ಸರ್‌ ಬಾರಿಸಿದರು. ಕೊನೆಯ ಎಸೆತದಲ್ಲಿ 2ನೇ ರನ್‌ ಓಡುವ ವೇಳೆ ಧೋನಿ ತಾನೇ ರನ್‌ಔಟ್‌ ಆದರು.

    ಅಂದು ಇದೇ ತಪ್ಪಿನಿಂದ ಭಾರತಕ್ಕೆ ಸೋಲಾಗಿತ್ತು:
    2014ರ ಸೆಪ್ಟಂಬರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಮಹಿ ಇದೇ ತಪ್ಪು ಮಾಡಿದ್ದರು. ಅಂದು 181ರನ್‌ಗಳ ಗುರಿ ಬೆನ್ನತ್ತಿದ್ದ ಭಾರತ 177 ರನ್‌ಗಳಿಸಿ, ಕೇವಲ 3 ರನ್‌ಗಳ ಅಂತರದಲ್ಲಿ ಸೋಲು ಕಂಡಿತ್ತು. ಕೊನೇ ಓವರ್‌ನಲ್ಲಿ ಭಾರತದ ಗೆಲುವಿಗೆ 16 ರನ್‌ ಬೇಕಿತ್ತು. ಮೊದಲ 2 ಎಸೆತಗಳಲ್ಲೇ 8 ರನ್‌ ಬಾರಿಸಿದ ಮಹಿ, 3ನೇ ಎಸೆತವನ್ನು ಡಾಟ್‌ ಮಾಡಿಕೊಂಡಿದ್ದರು. 4ನೇ ಎಸೆತದಲ್ಲಿ ಬೌಂಡರಿ ಸಿಡಿಸಿದ್ದರು. ಇನ್ನೆರಡು ಎಸೆತಗಳಲ್ಲಿ 5 ರನ್‌ ಬೇಕಿತ್ತು. 4ನೇ ಎಸೆತದಲ್ಲಿ ಮಹಿ ಹೊಡೆದರು, ಆದ್ರೆ ಸಿಂಗಲ್‌ ತೆಗೆದುಕೊಳ್ಳಲು ನಿರಾಕರಿಸಿದ್ದರು. ಅಲ್ಲದೇ ಇದು ನಾನ್‌ಸ್ಟ್ರೈಕ್‌ನಲ್ಲಿದ್ದ ಅಂಬಟಿ ರಾಯುಡು ಅವರನ್ನೂ ಟೀಕೆಗೆ ಗುರಿಯಾಗುವಂತೆ ಮಾಡಿತ್ತು. ಆದ್ರೆ ಕೊನೆ ಎಸೆತದಲ್ಲಿ ಬೌಂಡರಿ ಸಿಡಿಸುವಲ್ಲಿ ವಿಫಲರಾದ ಮಹಿ ಒಂದು ರನ್‌ ಮಾತ್ರವೇ ಗಳಿಸಿದ್ದರು. ಇದರಿಂದ ಭಾರತ ತಂಡ ವಿರೋಚಿತ ಸೋಲಿಗೆ ತುತ್ತಾಗಿತ್ತು. ಇದೀಗ ಧೋನಿ ಮತ್ತೆ ಅಂತಹದ್ದೇ ತಪ್ಪು ಮಾಡಿದ್ದಾರೆ.

    ಧೋನಿ ವಿರುದ್ಧ ಫ್ಯಾನ್ಸ್ ಗರಂ:
    ಡ್ಯಾರಿಲ್ ಮಿಚೆಲ್‌ ಬಗ್ಗೆ ನನಗೆ ನೋವಾಗಿದೆ, ಅವರು ಬ್ಯಾಟಿಂಗ್‌ ಗೊತ್ತಿಲ್ಲದ ಆಟಗಾರನೇನು ಅಲ್ಲ. ಅವರಿಗೆ ಸಿಂಗಲ್‌ ರನ್‌ ನಿರಾಕರಿಸಿರುವುದನ್ನು ಸ್ವೀಕರಿಸಲು ಸಾಧ್ಯವಿಲ್ಲ. ಮಿಚೆಲ್‌ ಅವರೇ 2 ರನ್‌ ಓಡಿದ್ದಾರೆ. ಧೋನಿ ಜಾಗದಲ್ಲಿ ಬೇರೆ ಯಾವುದೇ ಆಟಗಾರನಿದ್ದಿದ್ದರೇ ಅವರ ಜನ್ಮವನ್ನು ಜಾಲಾಡಲಾಗುತ್ತಿತ್ತು ಎಂದು ಅಭಿಮಾನಿಯೊಬ್ಬರು ಟ್ವೀಟ್‌ ಮಾಡಿ ಎಂಎಸ್‌ ಧೋನಿ ವಿರುದ್ಧ ಕಿಡಿಕಾರಿದ್ದಾರೆ. ಇನ್ನೂ ಕೆಲವರು ಧೋನಿ ಅಂತಹ ಆಟಗಾರರಿಂದ ಇಂತಹ ವರ್ತನೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಇದು ಆಟಗಾರನೊಬ್ಬನಿಗೆ ಮಾಡಿದ ಅವಮಾನ ಎಂದು ಕಿಡಿ ಕಾರಿದ್ದಾರೆ.

  • ತವರಲ್ಲಿ ಚೆನ್ನೈಗೆ ಹೀನಾಯ ಸೋಲು – ಪಂಜಾಬ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ತವರಲ್ಲಿ ಚೆನ್ನೈಗೆ ಹೀನಾಯ ಸೋಲು – ಪಂಜಾಬ್‌ಗೆ 7 ವಿಕೆಟ್‌ಗಳ ಭರ್ಜರಿ ಜಯ

    ಚೆನ್ನೈ: ಬೌಲಿಂಗ್‌ ಮತ್ತು ಬ್ಯಾಟಿಂಗ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವನ್ನು ಕಟ್ಟಿ ಹಾಕಿದ ಪಂಜಾಬ್‌ ಕಿಂಗ್ಸ್‌ (Punjab Kings) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಚೆನ್ನೈ 7 ವಿಕೆಟ್‌ ನಷ್ಟಕ್ಕೆ 162 ರನ್‌ ಗಳಿಸಿತು. ಸುಲಭ ಸವಾಲನ್ನು ಬೆನ್ನಟ್ಟಿದ ಪಂಜಾಬ್‌ ಇನ್ನೂ 13 ಎಸೆತ ಬಾಕಿ ಇರುವಂತೆಯೇ 3 ವಿಕೆಟ್‌ ನಷ್ಟಕ್ಕೆ 163 ರನ್‌ ಹೊಡೆದು ಜಯಗಳಿಸಿತು.

    ಪಂಜಾಬ್‌ ಪರ ಜಾನಿ ಬೈರ್ಸ್ಟೋವ್ 46 ರನ್‌ (30 ಎಸೆತ, 7 ಬೌಂಡರಿ, 1 ಸಿಕ್ಸರ್‌) ಹೊಡೆದರೆ ರಿಲೀ ರೋಸೌವ್ 43 ರನ್(23‌ ಎಸೆತ, 5 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು. ಶಶಾಂಕ್‌ ಸಿಂಗ್‌ ಔಟಾಗದೇ 25 ರನ್‌(26 ಎಸೆತ, 1 ಬೌಂಡರಿ, 1 ಸಿಕ್ಸರ್‌), ನಾಯಕ ಸ್ಯಾಮ್‌ ಕರ್ರನ್‌ ಔಟಾಗದೇ 16 ರನ್‌ (20 ಎಸೆತ, 3 ಬೌಂಡರಿ) ಹೊಡೆದರು.

    ಮೊದಲು ಬ್ಯಾಟ್‌ ಮಾಡಿದ ಚೆನ್ನೈ ಆರಂಭ ಉತ್ತಮವಾಗಿತ್ತು. ಮೊದಲ ವಿಕೆಟಿಗೆ 50 ಎಸೆತಗಳಲ್ಲಿ64 ರನ್‌ ಬಂದಿತ್ತು. ಅಜಿಂಕ್ಯಾ ರಹಾನೆ 29 ರನ್‌(24 ಎಸೆತ, 5 ಬೌಂಡರಿ) ಋತುರಾಜ್‌ ಗಾಯಕ್‌ವಾಡ್‌ 62 ರನ್‌ (48 ಎಸೆತ, 5 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು.

    ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಂದ ಉತ್ತಮ ಪ್ರದರ್ಶನ ಬಾರದ ಕಾರಣ ಚೆನ್ನೈ ಸೋಲನ್ನು ಅನುಭವಿಸಿತು. ಇತರ ರೂಪದಲ್ಲಿ ಪಂಜಾಬ್‌ 18 ರನ್‌ ಬಿಟ್ಟುಕೊಟ್ಟಿದ್ದರಿಂದ ಚೆನ್ನಯ ತಂಡದ ಸ್ಕೋರ್‌ 160 ರನ್‌ಗಳ ಗಡಿ ದಾಟಿತ್ತು. ಹರ್‌ಪ್ರೀತ್‌ ಬ್ರಾರ್‌ ಮತ್ತು ರಾಹುಲ್‌ ಚಹರ್‌ ತಲಾ ಎರಡು ವಿಕೆಟ್‌ ಪಡೆದರು.