Tag: IPL 2019

  • ರಾಹುಲ್‍ಗೆ ಮಹಿಳೆಯರೆಂದರೆ ಅಪಾರ ಗೌರವವಿದೆ: ಪ್ರೀತಿ ಜಿಂಟಾ

    ರಾಹುಲ್‍ಗೆ ಮಹಿಳೆಯರೆಂದರೆ ಅಪಾರ ಗೌರವವಿದೆ: ಪ್ರೀತಿ ಜಿಂಟಾ

    ನವದೆಹಲಿ: ಕೆಎಲ್ ರಾಹುಲ್ ಮಹಿಳೆಯರ ಬಗ್ಗೆ ಅಪಾರವಾದ ಗೌರವವನ್ನು ಹೊಂದಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ, ನಟಿ ಪ್ರೀತಿ ಜಿಂಟಾ ಹೇಳಿದ್ದಾರೆ.

    ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಕೆಎಲ್ ರಾಹುಲ್ ಹಾಗೂ ಪಾಂಡ್ಯ ಹಾಡಿದ ವಿವಾದಾತ್ಮಾಕ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಉತ್ತಮ ವ್ಯಕ್ತಿತ್ವವನ್ನು ಹೊಂದಿರುವ ಆಟಗಾರ. ಆದರೆ ಟಿವಿ ಶೋ ವಿವಾದ ಎಂಬುವುದು ಮುಗಿದ ಭಾಗವಾಗಿದೆ. ಆದರೆ ಇಂತಹ ಘಟನೆಗಳು ಜೀವನದಲ್ಲಿ ಸಾಕಷ್ಟು ಸಂಗತಿಗಳನ್ನು ಕಲಿಸುತ್ತವೆ ಎಂದಿದ್ದಾರೆ.

    ಇದೇ ವೇಳೆ ತಂಡದ ಒಡತಿಯಾಗಿ ಆರ್ಥಿಕತೆ ಕುರಿತು ಉತ್ತರಿಸಿದ ಜಿಂಟಾ, ಈಗಾಗಲೇ ನಾವು ಹೂಡಿಕೆ ಮಾಡಿರುವ ಹಣ ವಾಪಸ್ ಆಗಿದ್ದು, ಟೈಟಲ್ ಗೆಲುವು ಪಡೆಯುವುದು ಮಾತ್ರ ನಮ್ಮ ಗುರಿಯಾಗಿದೆ. ಟೂರ್ನಿಯಲ್ಲಿ ರಾಹುಲ್ ಫಾರ್ಮ್ ಗೆ ಮರಳಿರುವುದು ನಮಗೆ ಮತ್ತಷ್ಟು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

    ಟೂರ್ನಿಯಲ್ಲಿ ಆರ್ ಅಶ್ವಿನ್ ನಾಯಕತ್ವದಲ್ಲಿ ಕಣಕ್ಕೆ ಇಳಿದಿರುವ ಪಂಜಾಬ್ ಕ್ರಿಕೆಟ್ ತಂಡ ಇದುವರೆಗೂ ಆಡಿರುವ 4 ಪಂದ್ಯಗಳಲ್ಲಿ 3 ರಲ್ಲಿ ಗೆಲುವು ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ. ಇಷ್ಟೇ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಹೈದರಾಬಾದ್ ಹಾಗೂ ಕೆಕೆಆರ್ ತಂಡದ ಮೊದಲ ಎರಡು ಸ್ಥಾನಗಳಲ್ಲಿವೆ.

  • ಸಿಂಪಲ್ ಸುನಿ ಆರ್‌ಸಿಬಿ ಭವಿಷ್ಯ ಹೇಳಿದ್ರು

    ಸಿಂಪಲ್ ಸುನಿ ಆರ್‌ಸಿಬಿ ಭವಿಷ್ಯ ಹೇಳಿದ್ರು

    ಬೆಂಗಳೂರು: ಐಪಿಎಲ್ ಪ್ರಾರಂಭವಾದ ನಂತರದಿಂದ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ರಾರಾಜಿಸುವ  ಪೋಸ್ಟ್  ಅಂದ್ರೆ `ಈ ಬಾರಿ ಕಪ್ ನಮ್ದೇ’. ಕಳೆದ ಆವೃತ್ತಿಗಳಿಗೆ ಹೋಲಿಸಿದರೆ ಈ ಆವೃತ್ತಿಯಲ್ಲಿ ಆರ್.ಸಿ.ಬಿ ತಂಡದ ಅಭಿಮಾನಿಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರವನ್ನೇ ನೀಡಿದ್ರೂ ಸಹ ಆರ್.ಸಿ.ಬಿ ತಂಡವೂ ಇಲ್ಲಿಯವರೆಗೂ ಆಡಿದ ನಾಲ್ಕು ಪಂದ್ಯಗಳಲ್ಲೂ ಸೋಲಿನ ಲಡ್ಡುವನ್ನು ತಿನ್ನುತ್ತಲೇ ಇದೆ. ಅಲ್ಲದೇ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಚೆನ್ನೈ, ಮುಂಬೈ, ಹೈದ್ರಾಬಾದ್, ರಾಜಸ್ಥಾನ ತಂಡಗಳ ವಿರುದ್ಧ ಸೋತಿರುವ ಆರ್ ಸಿ ಬಿ ತಂಡದ ಬಗ್ಗೆ ಅಭಿಮಾನಿಗಳು ಈಗಾಗಲೇ ನಂಬಿಕೆ ವಿಶ್ವಾಸ ಎಲ್ಲವನ್ನು ಕಳೆದುಕೊಂಡಿದ್ದಾರೆ. ಎಷ್ಟೇ ಪಂದ್ಯ ಸೋತರೂ ನಮ್ಮ ಒಲವು ನಮ್ಮ ತಂಡಕ್ಕೆ ಮಾತ್ರ ಎಂಬ ವಿಶ್ವಾಸದಲ್ಲಿರುವ ಆರ್ ಸಿ ಬಿ ತಂಡದ ಅಪ್ಪಟ ಅಭಿಮಾನಿ ಸಿಂಪಲ್ ಸುನಿ ಭವಿಷ್ಯವಾಣಿಯೊಂದನ್ನು ನುಡಿದಿದ್ದಾರೆ.

    ಸುನಿ ಭವಿಷ್ಯವಾಣಿಯ ಪ್ರಕಾರ ಮುಂದಿನ ಪಂದ್ಯದಲ್ಲಿ ಆರ್ ಸಿ ಬಿ ಗೆಲ್ಲೋ ಲಕ್ಷಣಗಳಿವೆಯಂತೆ. ಸರಣಿಯಲ್ಲಿ ಸೋಲಿನ ರುಚಿ ಉಂಡಿರುವ ಆರ್ ಸಿ ಬಿ ಈ ಪಂದ್ಯದಲ್ಲಿ ಗೆಲ್ಲಲೇ ಬೇಕು. ಗೆದ್ದೇ ಗೆಲ್ಲುತ್ತದೆ. ಸೋತವರು ಗೆಲ್ಲಲೇ ಬೇಕಲ್ಲವೇ ಎಂದು ತಂಡದ ಬಗ್ಗೆ ಒಲುಮೆಯ ಮಾತುಗಳನ್ನಾಡಿದ್ದಾರೆ. ಸುನಿ ಅವರ ಮಾತಿಗೆ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಈ ಮಾತು ನಿಜವಾಗ್ಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಸತತ 4 ಪಂದ್ಯ ಸೋತು ನಿರಾಸೆಯಲ್ಲಿರುವ ಆರ್ ಸಿ ಬಿ ಇಂದಿನ ಪಂದ್ಯದಲ್ಲಿ ಫಾರ್ಮ್ ಗೆ ಮರಳಲಿದೆ ಎಂಬ ನಿರೀಕ್ಷೆ ಎಲ್ಲರಲ್ಲಿದೆ. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಸಿಂಪಲ್ ಸುನಿಯ ಭವಿಷ್ಯವಾಣಿ ನಿಜವಾಗುತ್ತಾ, ಇಲ್ಲ ಮತ್ತೆ ಅಭಿಮಾನಿಗಳು ಇವರು ಬಾಳು ಇಷ್ಟೇ ಅಂತ ಮೂಗು ಮುರಿಯೋ ಹಾಗಾಗುತ್ತಾ ಕಾದು ನೋಡೋಣ.

  • ಧೋನಿಗೆ ಮಂಕಡ್ ವರ್ನಿಂಗ್ ನೀಡಿದ ಕೃನಾಲ್ ಪಾಂಡ್ಯ – ನೆಟ್ಟಿಗರು ಗರಂ

    ಧೋನಿಗೆ ಮಂಕಡ್ ವರ್ನಿಂಗ್ ನೀಡಿದ ಕೃನಾಲ್ ಪಾಂಡ್ಯ – ನೆಟ್ಟಿಗರು ಗರಂ

    ಮುಂಬೈ: ಐಪಿಎಲ್ 12ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೊದಲ ಸೋಲಿನ ಅನುಭವ ಪಡೆದಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೃನಾಲ್ ಪಾಂಡ್ಯ ಧೋನಿ ಬ್ಯಾಟಿಂಗ್ ವೇಳೆ ಮಂಕಡ್ ಚಮಕ್ ಕೊಟ್ಟಿದ್ದಾರೆ.

    ಟೂರ್ನಿಯಲ್ಲಿ ಮೊದಲ ಬಾರಿಗೆ ಮಂಕಡ್ ರನೌಟ್ ಮಾಡಿ ಕಿಂಗ್ಸ್ ಇಲೆವೆನ್ ತಂಡದ ಆರ್ ಅಶ್ವಿನ್ ಭಾರೀ ಚರ್ಚೆಗೆ ಒಳಗಾಗಿದ್ದರು. ಆ ಬಳಿಕ ಇಂತಹದ್ದೇ ಪ್ರಯತ್ನವನ್ನು ಕೃನಾಲ್ ಮಾಡಿದ್ದಾರೆ. ಕ್ರಿಕೆಟ್ ವೃತ್ತಿಜೀವನದಲ್ಲಿ 15 ವರ್ಷಗಳನ್ನು ಪೂರ್ಣಗೊಳಿಸಿರುವ ಧೋನಿ ಯಾವುದೇ ಸಂದರ್ಭದಲ್ಲಿ ಫೀಲ್ಡ್ ನಲ್ಲಿ ಮೈಮರೆಯುವುದಿಲ್ಲ ಎಂಬುವುದು ಇದೇ ಸಂದರ್ಭದಲ್ಲಿ ಸಾಬೀತಾಗಿದೆ. ಪಂದ್ಯದಲ್ಲಿ ಬೌಲ್ ಮಾಡಲು ಯತ್ನಿಸಿದ ಅವರು ಕೊನೆ ಕ್ಷಣದಲ್ಲಿ ಚೆಂಡು ಎಸೆಯದೆ ಪೂರ್ಣಗೊಳಿಸಿದ್ದರು. ಆದರೆ ಈ ಸಮಯದಲ್ಲಿ ಧೋನಿ ಕ್ರಿಸಿನಲ್ಲೇ ಇದ್ದರು.

    ಮಂಕಡ್ ರನೌಟ್ ಬಗ್ಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆ ನಡೆದಿದ್ದು, ಸದ್ಯ ಧೋನಿ ಅಭಿಮಾನಿಗಳು ಕೂಡ ಕೃನಾಲ್ ಪಾಂಡ್ಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಧೋನಿ ಸ್ಮಾರ್ಟ್ ಆಟಗಾರರಾಗಿದ್ದಾರೆ ಎಂದು ತಿಳಿಸಿ ಟ್ರೋಲ್ ಮಾಡಿದ್ದಾರೆ.

    ಟೂರ್ನಿಯಲ್ಲಿ ಮೊದಲ ಸೋಲುಂಡ ಬಳಿಕ ಮಾತನಾಡಿದ ಧೋನಿ, ಪಂದ್ಯದ 10ರಿಂದ 12 ಓವರಿಗೆ ಎದುರಾಳಿ ತಂಡವನ್ನು ಸಮರ್ಥವಾಗಿ ಬೌಲಿಂಗ್ ಮಾಡಿ ನಿಯಂತ್ರಿಸಿದೆವು. ಆದರೆ ಅಂತಿಮ ಓವರ್ ಗಳಲ್ಲಿ ಹೆಚ್ಚು ರನ್ ನೀಡಲಾಯಿತು. ಕೆಲ ಕ್ಯಾಚ್‍ಗಳನ್ನು ಮಿಸ್ ಮಾಡಿದ್ದು ಕೂಡ ತಂಡದ ಸೋಲಿಗೆ ಕಾರಣವಾಯಿತು. ತಂಡದ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ಬ್ರಾವೋ ಕೂಡ ಲಭ್ಯರಾಗಿದ್ದಾರೆ. ಮುಂದಿನ ಪಂದ್ಯದಲ್ಲಿ ಸರಿಯಾದ ಕಂಬಿನೇಷನ್ ನೊಂದಿಗೆ ಕಣಕ್ಕೆ ಇಳಿಯುತ್ತೇವೆ ಎಂದು ತಿಳಿಸಿದ್ದಾರೆ.

  • ಐಪಿಎಲ್ ವೇಳಾಪಟ್ಟಿ ಘೋಷಣೆ ಬೆನ್ನಲ್ಲೇ ಶುರುವಾಯ್ತು ‘ಸಾಂಬಾರ್ ವಾರ್’

    ಐಪಿಎಲ್ ವೇಳಾಪಟ್ಟಿ ಘೋಷಣೆ ಬೆನ್ನಲ್ಲೇ ಶುರುವಾಯ್ತು ‘ಸಾಂಬಾರ್ ವಾರ್’

    ಬೆಂಗಳೂರು: 2019ರ ಐಪಿಎಲ್ ಆವೃತ್ತಿ ಆರಂಭದ ವೇಳಾಪಟ್ಟಿ ಘೋಷಣೆ ಬೆನ್ನಲ್ಲೇ ಪ್ರಥಮ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ಹಾಲಿ ಚಾಂಪಿಯನ್ ಚೆನ್ನೈ ಹಾಗೂ ಆರ್ ಸಿಬಿ ನಡುವೆ ಟ್ವಿಟ್ಟರ್ ವಾರ್ ಆರಂಭವಾಗಿದೆ.

    ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಹಾಲಿ ನಾಯಕ ಇತ್ತಂಡಗಳ ನಾಯಕತ್ವವನ್ನು ವಹಿಸಿದ್ದು, ಪಂದ್ಯ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇದರ ನಡುವೆಯೇ ಆರ್ ಸಿಬಿ ಟ್ವಿಟ್ಟರ್ ನಲ್ಲಿ ಮೊದಲ ಪಂದ್ಯದ ಬಗ್ಗೆ ಟ್ವೀಟ್ ಮಾಡಿ ಪಂದ್ಯಕ್ಕೆ ಸಿದ್ಧ ಎಂಬ ಸಂದೇಶ ರವಾನಿಸಿದೆ.

    ಆರ್ ಸಿಬಿ ಸ್ಪೈಸಿ ಸೌತ್ ಇಂಡಿಯನ್ ಸ್ಟಾರ್ಟರ್ಸ್ ಆದರೆ ನಾವು ಸ್ವೀಟ್ ಸಾಂಬಾರ್ ಇಷ್ಟಪಡುತ್ತೇವೆ ಎಂದು ಟ್ವೀಟ್ಟರ್ ನಲ್ಲಿ ಆರ್ ಸಿಬಿ ಬರೆದುಕೊಂಡಿದ್ದು, ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಚೆನ್ನೈ, ಸಾಂಬಾರ್ ಯಾವತ್ತಿದ್ದರೂ ಹಳದಿ ಬಣ್ಣವಲ್ಲವೇ ಎಂದು ಹೇಳಿ ಆರ್ ಸಿಬಿ ಕಾಲೆಳೆಯಲು ಪ್ರಯತ್ನಿಸಿದೆ. ಎರಡು ತಂಡಗಳ ಟ್ವೀಟ್ ಗಳಿಗೆ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಿನಲ್ಲಿ ಸಾಂಬಾರ್ ಯಾವಾಗಲೂ ಕೆಪ್ಪು ಬಣ್ಣದಲ್ಲಿ ಇರುತ್ತದೆ ಎಂದು ಟ್ವಿಟ್ವಿಗರೊಬ್ಬರು ಬರೆದುಕೊಂಡಿದ್ದಾರೆ.

    ಅಂದಹಾಗೇ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್ ಸಿಬಿ ನಡುವಿನ ಪಂದ್ಯ ಮಾರ್ಚ್ 23 ರಂದು ಚೆನ್ನೈನ ಪಿ ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಕಳೆದ ಟೂರ್ನಿಯಲ್ಲಿ 2 ವರ್ಷಗಳ ಬ್ಯಾನ್ ಬಳಿಕ ಕಮ್ ಬ್ಯಾಕ್ ಮಾಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ  3ನೇ ಬಾರಿ ಕಪ್ ಗೆದ್ದು ಸಂಭ್ರಮಿಸಿತ್ತು. ಇತ್ತ ಮೂರು ಬಾರಿ ರನ್ನರ್ ಆಪ್ ಆಡಿರುವ ಆರ್ ಸಿಬಿ ಮೊದಲ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈ ಬಾರಿಯ ಐಪಿಎಲ್‍ನಲ್ಲಿ ಕೊಹ್ಲಿ ಆಡೋದು ಡೌಟ್!

    ಈ ಬಾರಿಯ ಐಪಿಎಲ್‍ನಲ್ಲಿ ಕೊಹ್ಲಿ ಆಡೋದು ಡೌಟ್!

    ಮುಂಬೈ: ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‍ನಲ್ಲಿ ಆಡುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ಬಿಸಿಸಿಐ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಕೊಹ್ಲಿ ಆಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಪ್ರಶ್ನೆ ಈಗ ಎದ್ದಿದೆ.

    2019ರ ವಿಶ್ವಕಪ್ ದೃಷ್ಟಿಯಿಂದ ಟೀಂ ಇಂಡಿಯಾ ಪ್ರಮುಖ ವೇಗಿಗಳಾದ ಬುಮ್ರಾ, ಭುವನೇಶ್ವರ್ ಕುಮಾರ್ ಅವರಿಗೆ ವಿಶ್ರಾಂತಿ ನೀಡುವ ಕುರಿತು ಬಿಸಿಸಿಐ ಚಿಂತನೆ ನಡೆಸಿರುವ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿ ಅವರಿಗೂ ವಿಶ್ರಾಂತಿ ಅಗತ್ಯವಿದೆ ಎಂದು ಬಿಸಿಸಿಐ ಕಾರ್ಯನಿರ್ವಾಹಕ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಟೀಂ ಇಂಡಿಯಾ ಆಟಗಾರರು ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದು, ಆಟಗಾರರ ಮೇಲಿನ ಹೆಚ್ಚಿನ ಒತ್ತಡವನ್ನು ನಿಭಾಯಿಸುವ ಸಲುವಾಗಿ ಮೊದಲಿಗೆ ಬೌಲರ್ ಗಳಿಗೆ ವಿಶ್ರಾಂತಿ ಅಗತ್ಯವಿರುವ ಕುರಿತು ಚರ್ಚೆ ನಡೆದಿತ್ತು. ಇದರ ಬೆನ್ನಲ್ಲೇ ಕೊಹ್ಲಿ ಕೂಡ ನಿರಂತರ ಕ್ರಿಕೆಟ್ ಆಡುತ್ತಿದ್ದು, ಅವರಿಗೂ ವಿಶ್ರಾಂತಿ ನೀಡುವ ಪ್ರಸ್ತಾಪವನ್ನು ಬಿಸಿಸಿಐ ಮುಂದಿಡಲಾಗಿದೆ.

    ಒಂದೊಮ್ಮೆ ಬಿಸಿಸಿಐ ಈ ಕುರಿತು ನಿರ್ಧಾರ ಕೈಗೊಂಡಲ್ಲಿ 2019 ಐಪಿಎಲ್ ಟೂರ್ನಿಯಲ್ಲಿ ಆರ್‍ಸಿಬಿ ನಾಯಕತ್ವ ವಹಿಸಿರುವ ಕೊಹ್ಲಿ ಕೆಲ ಪಂದ್ಯಗಳಿಂದ ವಿಶ್ರಾಂತಿಯ ಮೊರೆ ಹೋಗಬೇಕಾಗುತ್ತದೆ. ಆದರೆ ಈ ಕುರಿತು ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಬಿಸಿಸಿಐ ಕಾರ್ಯದರ್ಶಿ ಮಾತ್ರ ಬೌಲರ್ ಗಳಿಗೆ ವಿಶ್ರಾಂತಿ ಅಗತ್ಯವಾದರೆ ತಂಡದ ನಾಯಕನಿಗೂ ಅಗತ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕೊಹ್ಲಿ ಕೂಡ ಈ ಹಿಂದೆ ಹಲವು ಸಂದರ್ಭಗಳಲ್ಲಿ ಭುಜದ ನೋವಿಗೆ ಒಳಗಾಗಿದ್ದರು. ಯಾವುದೇ ಒಬ್ಬ ಬೌಲರ್ ಗಿಂತ ತಂಡದ ನಾಯಕನೇ ಹೆಚ್ಚು ಸಮಯ ಮೈದಾನದಲ್ಲಿ ಇರಬೇಕಾಗುತ್ತದೆ. ಟಿ20ಯಲ್ಲಿ ಗರಿಷ್ಟ 4 ಓವರ್ ಬೌಲ್ ಮಾಡಲು ಅವಕಾಶವಿದ್ದು, ಬೌಲರ್ ಗಳಿಗೆ ಆಟದ ಮಧ್ಯೆ ವಿಶ್ರಾಂತಿ ಪಡೆಯಲು ಅವಕಾಶವಿದೆ. ಆದರೆ ತಂಡದ ನಾಯಕನಿಗೆ ಅದು ಸಾಧ್ಯವಾಗುವುದಿಲ್ಲ ಎಂಬುದು ಅವರ ವಾದವಾಗಿದೆ.

    ಬುಮ್ರಾ ಅವರಿಗೆ ತವರಿನ ಟೆಸ್ಟ್ ಪಂದ್ಯಗಳಲ್ಲಿ ವಿಶ್ರಾಂತಿ ನೀಡಲಾಗಿತ್ತು. ಅಲ್ಲದೇ ಇಂಗ್ಲೆಂಡ್ ವಿರುದ್ಧ ಸಿಮೀತ ಓವರ್ ಗಳ ಸರಣಿಗೂ ವಿಶ್ರಾಂತಿ ನೀಡಲಾಗಿತ್ತು. ಮಾರ್ಚ್ 29 ರಿಂದ ಮೇ 19ರವರೆಗೆ ಐಪಿಎಲ್ ಟೂರ್ನಿ ನಡೆದರೆ ಮೇ 31 ರಿಂದ ಇಂಗ್ಲೆಂಡ್ ನಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 2019 ಐಪಿಎಲ್ ಹರಾಜು: ಹೆಚ್ಚು ಮೊತ್ತಕ್ಕೆ ಹರಾಜದ ಟಾಪ್ 5 ಯುವ ಆಟಗಾರರು

    2019 ಐಪಿಎಲ್ ಹರಾಜು: ಹೆಚ್ಚು ಮೊತ್ತಕ್ಕೆ ಹರಾಜದ ಟಾಪ್ 5 ಯುವ ಆಟಗಾರರು

    ಜೈಪುರ: 2019ರ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಭಾರತೀಯ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಲಭಿಸಿದ್ದು, ಟೂರ್ನಿಯ 8 ತಂಡಗಳು ಹೊಸ ಮುಖಗಳನ್ನು ಖರೀದಿ ಮಾಡುವ ಮೂಲಕ ತಂಡದ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡಿವೆ.

    ಹರಾಜು ಪ್ರಕ್ರಿಯೆಯಲ್ಲಿ ಟೀಂ ಇಂಡಿಯಾ ಪರ ಇದುವರೆಗೂ ಆಡದ ಆಟಗಾರರು ಕೂಡ ಹೆಚ್ಚಿನ ಮೊತ್ತವನ್ನು ಪಡೆದಿದ್ದಾರೆ. ಇದರಲ್ಲಿ ತಮಿಳುನಾಡಿನ ವರುಣ್ ಚಕ್ರವರ್ತಿ ಮೊದಲ ಸ್ಥಾನದಲ್ಲಿದ್ದು, ಪಂಜಾಬ್ ತಂಡ 8.4 ಕೋಟಿ ರೂ. ನೀಡಿ ಖರೀದಿ ಮಾಡಿದೆ. ಉಳಿದಂತೆ ಟಾಪ್ 5 ಆಟಗಾರರ ಪಟ್ಟಿ ಇಂತಿದೆ.

    ವರುಣ್ ಚಕ್ರವರ್ತಿ – 8.4 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ತಮಿಳುನಾಡಿನ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಬಾರಿ ಹೆಚ್ಚು ಮೊತ್ತ ಗಳಿಸಿದ ಆಟಗಾರರಾಗಿದ್ದು, ಈ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಪಂಜಾಬ್, ಕೋಲ್ಕತ್ತಾ ಹಾಗೂ ಚೆನ್ನೈ ತಂಡಗಳ ನಡುವೆ ಉಂಟಾದ ಪೈಪೋಟಿಯಿಂದ ವರುಣ್ ಹೆಚ್ಚಿನ ಮೊತ್ತಕ್ಕೆ  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ  ಖರೀದಿ ಮಾಡಿದೆ.

    ಶಿವಂ ದುಬೆ – 5 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ಮಹಾರಾಷ್ಟ್ರ ತಂಡದ ಆಲ್‍ರೌಂಡರ್ ಆಗಿರುವ ಶಿವಂ ದುವೆ ಹರಾಜು ಪ್ರಕ್ರಿಯೆ ಮುನ್ನವೇ ಚರ್ಚೆಗೆ ಕಾರಣರಾಗಿದ್ದರು. ಏಕೆಂದರೆ ರಣಜಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ದುಬೆ, 489 ರನ್ ಗಳಿಸಿ 17 ವಿಕೆಟ್ ಕೂಡ ಪಡೆದಿದ್ದರು. ಅಲ್ಲದೇ ಎಲ್ಲಾ ಐಪಿಎಲ್ ತಂಡಗಳು ದುಬೆರನ್ನು ಖರೀದಿ ಮಾಡಲು ಉತ್ಸಾಹ ತೋರಿತ್ತು. ಅಂತಿಮವಾಗಿ ಆರ್‌ಸಿಬಿ ತಂಡ 5 ಕೋಟಿ ರೂ. ನೀಡಿ ಅವರನ್ನು ಖರೀದಿ ಮಾಡಿದೆ.

    ಪ್ರಭಾಸಿಮ್ರನ್ ಸಿಂಗ್ – 4.8 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ಪೂರ್ವ ನಿಗದಿ ಎಂಬಂತೆ ಹರಾಜು ಪ್ರಕ್ರಿಯೆ ವೇಳೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಪ್ರಭಾಸಿಮ್ರನ್ ಸಿಂಗ್‍ರನ್ನು ಖರೀದಿ ಮಾಡಿದೆ. 4.8 ಕೋಟಿ ರೂ. ಮೊತ್ತಕ್ಕೆ ಪಂಜಾಬ್ ತಂಡ ಪ್ರಭಾಸಿಮ್ರನ್‍ರನ್ನು ಖರೀದಿ ಮಾಡಿದ್ದು, ಈ ಮೂಲಕ ಎಲ್ಲ ಫ್ರಾಂಚೈಸಿಗಳಿಗೂ ಹೆಚ್ಚು ಪೈಪೋಟಿ ನೀಡಿತು. ವಿಕೆಟ್ ಕೀಪರ್ ಹಾಗು ಬ್ಯಾಟ್ಸ್ ಮನ್ ಆಗಿರುವ ಪ್ರಭಾಸಿಮ್ರನ್ ಅಂಡರ್ 23 ಟೂರ್ನಿಯ ಪಂದ್ಯದಲ್ಲಿ ಇತ್ತೀಚೆಗಷ್ಟೇ 298 ರನ್ ಸಿಡಿಸಿ ಮಿಂಚಿದ್ದರು. ಅಲ್ಲದೇ 2017-18ರ ಕೂಚ್ ಬಿಹಾರ್ ಟ್ರೋಫಿಯಲ್ಲಿ ಪಂಜಾಬ್ ಪರ 547 ರನ್ ಗಳಿಸಿದ್ದರು.

    ಅಕ್ಷದೀಪ್ ನಾಥ್ – 3.6 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ಉತ್ತರ ಪ್ರದೇಶದ ಆಲ್‍ರೌಂಡರ್ ಆಗಿರುವ ಅಕ್ಷದೀಪ್ ನಾಥ್ ಯುಪಿಯ ಅಂಡರ್ 19 ತಂಡದ ನಾಯಕರಾಗಿ 2011-12ರಲ್ಲಿ ವಿನೂ ಮಕಂಡ್ ಟ್ರೋಫಿಯಲ್ಲಿ ತಂಡದವನ್ನು ಚಾಂಪಿಯನ್ ಆಗಿಸಿದ್ದರು. 2016 ರಿಂದಲೂ ಐಪಿಎಲ್ ಭಾಗವಾಗಿದ್ದರೂ ಸರಿಯಾದ ಅವಕಾಶಗಳನ್ನು ಪಡೆದಿಲ್ಲ. ಆದರೆ ಈ ಬಾರಿ ಆರ್‌ಸಿಬಿ ತಂಡ ಈ ಬಾರಿ 3.6 ಕೋಟಿ ರೂ ನೀಡಿ ಅಕ್ಷದೀಪ್ ನಾಥ್ ರನ್ನು ಖರೀದಿ ಮಾಡಿದೆ. ಬಲಗೈ ಮಧ್ಯಮ ವೇಗಿಯಾಗಿರುವ ಅಕ್ಷದೀಪ್ ಆರ್‌ಸಿಬಿ ತಂಡದ ಮಧ್ಯಮ ಕ್ರಮಾಂಕ ಬ್ಯಾಟಿಂಗ್‍ಗೆ ಶಕ್ತಿ ತುಂಬವ ಸಾಮಥ್ರ್ಯ ಹೊಂದಿದ್ದಾರೆ. ಇತ್ತೀಚೆಗೆ ಅಂತ್ಯವಾದ ರಣಜಿ ಟ್ರೋಫಿಯಲ್ಲಿ ಅಕ್ಷದೀಪ್ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚಿದ್ದರು.

    ಪ್ರಯಾಸ್ ರೇ ಬರ್ಮನ್ – 1.5 ಕೋಟಿ ರೂ. (ಮೂಲ ಬೆಲೆ 20 ಲಕ್ಷ ರೂ.)
    ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ ಕೇವಲ 16 ವರ್ಷದ ವಯಸ್ಸಿನವರಾಗಿದ್ದು, ವಿಜಯ್ ಹಜಾರೆ ಟ್ರೋಪಿಯಲ್ಲಿ 11 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೇ ಜಮ್ಮು ಕಾಶ್ಮೀರದ ವಿರುದ್ಧ 4 ವಿಕೆಟ್ ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾರೆ. ಆದರೆ ಈ ಬಾರಿ ಅಚ್ಚರಿ ಎಂಬಂತೆ ಆರ್‌ಸಿಬಿ 1.5 ಕೋಟಿ ರೂ. ನೀಡಿ ಪ್ರಯಾಸ್‍ರನ್ನು ಖರೀದಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv