ಕಾರವಾರ: ವೈದ್ಯರ ಎಡವಟ್ಟಿನಿಂದ ಚಿಕಿತ್ಸೆ ನಿರತ ರೋಗಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಶ್ರೀ ಮಾರಿಕಾಂಬಾ ಆಸ್ಪತ್ರೆಯಲ್ಲಿ ನಡೆದಿದೆ.
ಶಿರಸಿ ತಾಲೂಕಿನ ಉಂಚಳ್ಳಿ ಮೂಲದ ಸಂತೋಷ್ ನಾಯ್ಕ (28) ಸಾವು ಕಂಡ ಯುವಕನಾಗಿದ್ದು, ಬೈಕ್ ಅಪಘಾತವಾದ ಕಾರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ತಲೆಗೆ ಪೆಟ್ಟು ಬಿದ್ದ ಕಾರಣ ನಿನ್ನೆ ದಿನ ಶಸ್ತ್ರ ಚಿಕಿತ್ಸೆ ಮಾಡಿದ್ದ ವೈದ್ಯರು ಇಂದು ನೋವು ನಿವಾರಕ ಇಂಜೆಕ್ಷನ್ ನೀಡಿದ ಕೆಲವೇ ನಿಮಿಷದಲ್ಲಿ ಯುವಕ ಸಾವನ್ನಪ್ಪಿದ್ದಾನೆ.
ಇದರಿಂದಾಗಿ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆ ಎದುರು ಸಂಬಂಧಿಕರ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಶಿರಸಿ ನಗರ ಠಾಣೆ ಪೂಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ಕಾರವಾರಕ್ಕೆ ಸಾಗಿಸಲಾಗಿದೆ.
ಬೆಂಗಳೂರು: ತಾಯಿ ಮತ್ತು ತಂಗಿಗೆ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿ ವೈದ್ಯನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಸವೇಶ್ವರ ದೇವಸ್ಥಾನದ ಬಳಿ ನಡೆದಿದೆ.
ತಾಯಿ ಶ್ಯಾಮಲಾ ಮತ್ತು ತಂಗಿ ಮೂಕಾಂಬಿಕಾ ಸಾವನ್ನಪ್ಪಿದ ದುರ್ದೈವಿಗಳು. ತಾಯಿ ಮತ್ತು ತಂಗಿ ಓವರ್ ಡೋಸ್ ನಿಂದ ಸಾವನ್ನಪ್ಪಿದ್ದು, ವೈದ್ಯ ಗೋವಿಂದರಾಜು ಆಸ್ಪತ್ರೆಯಲ್ಲಿ ಜೀವನ್ಮರಣ ಮಧ್ಯೆ ಹೋರಾಟ ನಡೆಸುತ್ತಿದ್ದಾನೆ. ಸ್ಥಳದಲ್ಲಿ ಡೆತ್ ನೋಟ್ ಲಭ್ಯವಾಗಿದ್ದು, ವೈಯಕ್ತಿಕ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ.
ತಾಯಿ ಬಿಪಿ ಮತ್ತು ಶುಗರ್ ನಿಂದ ಬಳಲುತ್ತಿದ್ದರು. ಇತ್ತ ತಂಗಿಗೆ ಮದುವೆ ಆಗಿಲ್ಲ ಎನ್ನುವ ಚಿಂತೆ ಗೋವಿಂದರಾಜುವನ್ನು ಕಾಡುತ್ತಿತ್ತು. ತಾನೋರ್ವ ವೈದ್ಯನಾಗಿದ್ದರೂ, ತಂಗಿಗೆ ಮದುವೆ ಮಾಡಲಿಲ್ಲ ಎಂದು ಜಿಗುಪ್ಸೆಗೆ ಒಳಗಾಗಿದ್ದರಂತೆ. ಇತ್ತ ಪತ್ನಿಯನ್ನು ಕಳೆದುಕೊಂಡಿದ್ದ ಗೋವಿಂದರಾಜುವಿಗೆ ಮಕ್ಕಳಿರಲಿಲ್ಲ. ಆರ್.ಆರ್.ನಗರದಲ್ಲಿ ಆಸ್ಪತ್ರೆ ತೆರೆದು ಜೀವನ ನಡೆಸುತ್ತಿದ್ದರೂ, ನಿರೀಕ್ಷಿತ ಆದಾಯ ಬರುತ್ತಿರಲಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ.
ಈ ಎಲ್ಲ ತೊಂದರೆಗಳಿಂದ ಬೇಸತ್ತ ಗೋವಿಂದರಾಜು ತಾಯಿ ಮತ್ತು ತಂಗಿಗೆ ಓವರ್ ಡೋಸ್ ಇನ್ಸುಲಿನ್ ಇಂಜೆಕ್ಷನ್ ಚುಚ್ಚಿ, ತಾನು ಅದೇ ರೀತಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗೋವಿಂದರಾಜು ಸಂಬಂಧಿಕರು ಫೋನ್ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಗದೇ ಇದ್ದಾಗ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸಂಬಂಧಿಕರು ಬರುವಷ್ಟರಲ್ಲಿ ತಾಯಿ ಮತ್ತು ತಂಗಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ತೀವ್ರ ಅಸ್ವಸ್ಥನಾಗಿದ್ದ ಗೋವಿಂದರಾಜುನನ್ನು ಆಸ್ಪತ್ರೆಗೆ ದಾಖಲಿಸಿ, ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಎರಡು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ: ಬಟ್ಟೆನೂ ತೆಗೆಯದೇ, ಸ್ಪಿರಿಟ್ ಕೂಡ ಹಚ್ಚದೇ ವೈದ್ಯರೊಬ್ಬರು ಡೈರೆಕ್ಟಾಗಿ ಇಂಜೆಕ್ಷನ್ ನೀಡಿ ರೋಗಿಗಳ ಜೀವನದಲ್ಲಿ ಚೆಲ್ಲಾಟವಾಡಿದ ಘಟನೆ ವಿಜಯಪುರದ ಸ್ಟೇಷನ್ ರಸ್ತೆಯ ಬಳಿ ನಡೆದಿದೆ.
ಡಾ. ಸಚಿನ್ ವಿಚಿತ್ರ ವೈದ್ಯ. ಸಚಿನ್ ರೋಗಿಗಳ ಬಟ್ಟೆನೂ ತೆಗೆಯದೇ, ಸ್ಪಿರಿಟ್ ಕೂಡ ಹಚ್ಚದೇ ಡೈರೆಕ್ಟಾಗಿ ಬಟ್ಟೆ ಮೇಲಿಂದಾನೆ ನರ ಗುರುತಿಸಿ ಇಂಜೆಕ್ಷನ್ ನೀಡುತ್ತಿದ್ದಾನೆ. ವೈದ್ಯರು ಈ ರೀತಿ ಇಂಜೆಕ್ಷನ್ ನೀಡುತ್ತಿರುವುದನ್ನು ಗಮನಿಸಿದ ರೋಗಿಗಳು ಹೀಗೆ ಮಾಡಬೇಡಿ ಅಂತಾ ಹೇಳಿದ್ರು ಅವರ ಮಾತನ್ನು ಕೇಳುತ್ತಿಲ್ಲ.
ಈ ಆಸ್ಪತ್ರೆಗೆ ಬರಲು ರೋಗಿಗಳು ಹೆದರುತ್ತಾರೆ. ಆದರೆ ಅನಿವಾರ್ಯ ಕಾರಣಗಳಿಂದ ರೋಗಿಗಳು ಈ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ವರ್ಷಗಳಿಂದಲೂ ಡಾ. ಸಚಿನ್ ರೋಗಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಅಲ್ಲದೇ ಇನ್ಫೆಕ್ಷನ್ ಆಗುವುದಿಲ್ಲ ಎಂದು ರೋಗಿಗಳು ಕೇಳಿದ್ದರೆ ಇಲ್ಲ ಎಂದು ವೈದ್ಯ ಪ್ರತಿಕ್ರಿಯೆ ನೀಡುತ್ತಾರೆ.
ಈ ಪ್ರಕರಣದ ಬಗ್ಗೆ ಮೈಸೂರಿನ ಕೆ. ಆರ್ ಆಸ್ಪತ್ರೆಯ ಡಾ. ಯೋಗೇಶ್ ಮಾತನಾಡಿ, ಬಟ್ಟೆ ತೆಗೆಯದೇ ಇಂಜೆಕ್ಷನ್ ಹಾಗೇ ನೀಡುವುದರಿಂದ ಬಟ್ಟೆಯಲ್ಲಿರುವ ಧೂಳು, ಬ್ಯಾಕ್ಟೀರಿಯಾ, ಸೋಂಕು ಎಲ್ಲ ದೇಹದೊಳಗೆ ಹೋಗುತ್ತದೆ. ಇದರಿಂದ ಆ ಜಾಗದಲ್ಲಿ ಪ್ಯಾರಲಿಸೀಸ್, ಒಬ್ಸೆಸ್ ಆಗುವ ಸಾಧ್ಯತೆಗಳಿವೆ. ಅಲ್ಲದೇ ಡೆಡ್ಲಿ ಇನ್ಫೆಕ್ಷನ್ಗಳಾದ ಸ್ಟೇಟನಸ್, ಗ್ಯಾಸ್ ಗ್ಯಾಂಗ್ರಿನ್ ಆದರೆ ಬದುಕುವುದು ಕಷ್ಟ ಎಂದು ಹೇಳಿದ್ದಾರೆ.
ಇಂಜೆಕ್ಷನ್ ಅನ್ನು ಇದೇ ಜಾಗದಲ್ಲೇ ಕೊಡಬೇಕು ಎಂದು ಎಂಬಿಬಿಎಸ್ ನಲ್ಲಿ ಹೇಳಿಕೊಡುತ್ತಾರೆ. ಆ ನರಗಳಿಗೆ ಗಾಯಗಳಾಗಬಾರದು ಎಂದು ನರಗಳ ಮೇಲೆ ಇಂಜೆಕ್ಷನ್ ನೀಡಲಾಗುತ್ತದೆ. ಎಲ್ಲಿ ಆ ನರ ಓಡಾಡುತ್ತೆ ಆ ನರಗಳಿಗೆ ಇಂಜೆಕ್ಷನ್ ಕೊಡಿ ಎಂದು ಹೇಳಿಕೊಡಲಾಗುತ್ತದೆ ಎಂದು ಯೋಗೇಶ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿ ಇಂಪ್ಯಾಕ್ಟ್:
ವೈದ್ಯನ ಚೆಲ್ಲಾಟದ ವರದಿ ಪಬ್ಲಿಕ್ ಟಿವಿ ಪ್ರಸಾರ ಮಾಡುತ್ತಿದ್ದಂತೆಯೇ ವೈದ್ಯ ಸಚಿನ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಡಿಎಚ್ಒ ರಾಜ್ ಕುಮಾರ್ ಭರವಸೆ ನೀಡಿದ್ದು, ಇಂದೇ ಈ ಕುರಿತು ಪರಿಶೀಲನೆಗೆ ತಂಡ ಕಳುಹಿಸೋದಾಗಿ ಅವರು ತಿಳಿಸಿದ್ರು.
ಮೈಸೂರು: ಜ್ವರಕ್ಕೆ ಕೊಟ್ಟ ಇಂಜೆಕ್ಷನ್ ಅಡ್ಡಪರಿಣಾಮದಿಂದ ವ್ಯಕ್ತಿಯೊಬ್ಬನ ಚರ್ಮಕ್ಕೆ ಹಾನಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರು ಜಿಲ್ಲೆಯ ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸುರೇಶ್ ಎಂಬವರಿಗೆ ಇಂತಹ ಅನುಭವವಾಗಿದ್ದು, ಇದೀಗ ಅವರು ಆತಂಕಕ್ಕೆ ಒಳಗಾಗಿದ್ದಾರೆ.
ನಂಜನಗೂಡಿನ ಹೋಟೆಲೊಂದರಲ್ಲಿ ನೌಕರನಾಗಿರುವ ಸುರೇಶ್, ಕೆಲವು ದಿನಗಳ ಹಿಂದೆ ಜ್ವರಕ್ಕಾಗಿ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾರೆ.ಈ ವೇಳೆ ಅಲ್ಲಿನ ವೈದ್ಯರಾದ ಡಾ. ಚಿದಾನಂದ ಮೂರ್ತಿ, ಸುರೇಶ್ ಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ಇಂಜೆಕ್ಷನ್ ಕೊಟ್ಟ ಸ್ವಲ್ಪ ಸಮಯಕ್ಕೆ ಚರ್ಮದ ಮೇಲೆ ಕಪ್ಪು ಮಚ್ಚೆಗಳು ಕಾಣಿಸಿಕೊಂಡು ಬಳಿಕ ಇಡೀ ದೇಹ ಆವರಿಸಿದೆ. ಯಾವುದೋ ಕಾಯಿಲೆ ಬಂದಿರಬಹುದೆಂದು ತಿಳಿದುಕೊಂಡು ಮಾನಸಿಕವಾಗಿ ಸುರೇಶ್ ಕುಗ್ಗಿದ್ದಾರೆ.
ಸುರೇಶ್ ಪರಿಸ್ಥಿತಿ ಗಮನಿಸಿದ ಹೋಟೆಲ್ ಮಾಲೀಕ ಮಂಜು ಕೂಡಲೇ ವೈದ್ಯ ಚಿದಾನಂದಮೂರ್ತಿ ಅವರನ್ನ ಸಂಪರ್ಕಿಸಿದಾಗ ತಾವು ಕೊಟ್ಟ ಇಂಜೆಕ್ಷನ್ ನಿಂದ ಅಡ್ಡ ಪರಿಣಾಮ ಆಗಿದೆ. ನಾನೇ ಸೂಕ್ತ ಚಿಕಿತ್ಸೆ ನೀಡುವುದಾಗಿ ಭರವಸೆ ಕೊಟ್ಟು ಕಳುಹಿಸಿದ್ದಾರೆ. ವೈದ್ಯರ ಎಡವಟ್ಟಿನಿಂದ ಸುರೇಶ್ ಗೆ ಇಲ್ಲವಾಗಿದ್ದ ಕಾಯಿಲೆ ಬಂದಿದ್ದು, ಮಾಡದ ತಪ್ಪಿಗೆ ಅಮಾಯಕ ಶಿಕ್ಷೆ ಅನುಭವಿಸುವಂತಾಗಿದೆ.
ದಾವಣಗೆರೆ: ಗಂಡು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.
ದಾವಣಗೆರೆ ತಾಲೂಕಿನ ಕಕ್ಕರಗೊಳ್ಳ ನಿವಾಸಿ ಷರೀಪ್ ಬಾನು ಎಂಬವರು ಹೆರಿಗೆಗೆಂದು ಭಾನುವಾರ ದಾವಣಗೆರೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರದಂದು ಷರೀಪ್ ಬಾನು ಗಂಡು ಮಗುವಿಗೆ ಜನ್ಮ ನೀಡಿದ್ದರು.
ಇಂದು ಬೆಳಗಿನ ಜಾವ ಆಸ್ಪತ್ರೆಯ ಸಿಬ್ಬಂದಿ ಷರೀಪ್ ಬಾನು ರವರಿಗೆ ಚುಚ್ಚುಮದ್ದನ್ನು ನೀಡಿದ್ದು, ಅದರ ಪರಿಣಾಮದಿಂದ ಬಾಣಂತಿ ತೀವ್ರ ಅಸ್ವಸ್ಥರಾಗಿದ್ದರು. ಅಲ್ಲದೇ ಕೆಲ ಸಮಯದ ನಂತರ ಷರೀಪ್ ಬಾನು ಮೃತಪಟ್ಟಿದ್ದಾರೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.
ಬಾಣಂತಿ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಗಳು ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗಾಂಧಿನಗರ ಪೊಲೀಸರು ಬೇಟಿ ಆಸ್ಪತ್ರೆಗೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ನೆಲ್ಲೂರು: ಸರ್ಕಾರಿ ಆಸ್ಪತ್ರೆಯ ನರ್ಸ್ವೊಬ್ಬರು ಅಪಾಯಕಾರಿ ಕೆಮಿಕಲ್ ಇಂಜೆಕ್ಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ.
26 ವರ್ಷದ ಮಮತಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಇವರು ಮಲತಃ ಗುಂಟೂರು ಜಿಲ್ಲೆಯ ನರಸರಪೇಟ್ನ ಕೇಸನಪಲ್ಲಿ ಗ್ರಾಮದವರು. ಮಮತಾ ತಂದೆ ಯೇಸುರತ್ನಂ ಕೆಲವು ವರ್ಷಗಳ ಹಿಂದೆ ಹೆಂಡತಿಯಿಂದ ದೂರವಾಗಿದ್ದರು. ಮಮತಾ ಹಾಗೂ ಸಹೋದರ ಕೋಟೇಶ್ವರ್ ರಾವ್ನನ್ನು ತಾಯಿ ಮಾರ್ತಮ್ಮ ಸಾಕಿ ಬೆಳೆಸಿದ್ದರು. ಸಂಕಷ್ಟದ ನಡುವೆಯೂ ಮಗಳಿಗೆ ಒಳ್ಳೇ ವಿದ್ಯಾಭ್ಯಾಸ ಕೊಡಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮಮತಾ ನರ್ಸಿಂಗ್ ಪದವಿ ಮುಗಿಸಿದ ಬಳಿಕ ನೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ 11 ತಿಂಗಳ ಗುತ್ತಿಗೆ ಮೇಲೆ ಕೆಲಸಕ್ಕೆ ಸೇರಿಕೊಂಡಿದ್ದರು. ಮೊದಲಿಗೆ ಆಸ್ಪತ್ರೆಗೆ ಸೇರಿದ ವಸತಿ ನಿಲಯದಲಿ ವಾಸವಿದ್ದರು. ಬಳಿಕ ತನ್ನ ಸ್ನೇಹಿತೆಯರಾದ ಭವಾನಿ ಹಾಗೂ ಪದ್ಮಶ್ರೀಯೊಂದಿಗೆ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ದರು.
ಸೋಮವಾರದದು ಕೆಲಸ ಮುಗಿಸಿ ಮನೆಗೆ ಬಂದ ಮಮತಾ ಎಂದಿನಂತೆ ತನ್ನ ಸ್ನೇಹಿತೆಯರೊಂದಿಗೆ ಊಟ ಸೇವಿದ್ದರು. ಸ್ನೇಹಿತೆಯರು ಮಲಗಲು ಹೋದ ಬಳಿಕ ಮಮತಾ ತನ್ನ ಪ್ರಿಯಕರ ತೇಜಾನೊಂದಿಗೆ ಮಾತನಾಡಿದ್ದರು. ಬಳಿಕ ತಾನು ತಂದಿದ್ದ ಸಿರಿಂಜ್ ಹಾಗೂ ಕೆಮಿಕಲ್ ತೆಗೆದುಕೊಂಡು ದೇಹಕ್ಕೆ ಇಂಜೆಕ್ಟ್ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕಲವೇ ಕ್ಷಣಗಳಲ್ಲಿ ಮಮತಾ ಕುಸಿದು ಬಿದ್ದಿದ್ದಾರೆ. ನಂತರ ನಸುಕಿನ ಜಾವ ಸುಮಾರು 4 ಗಂಟೆ ವೇಳೆಗೆ ಮಮತಾ ಸ್ನೇಹಿತೆಯೊಬ್ಬರು ಹಾಸಿಗೆ ಮೇಲೆ ಬಿದ್ದಿದ್ದ ಮಮತಾರನ್ನು ನೋಡಿ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಮಮತಾರನ್ನ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗಾಗಲೇ ತಡವಾಗಿತ್ತು. ಮಮತಾ ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ವಿಷಯ ತಿಳಿದು ಮಮತಾ ತಾಯಿ ಹಾಗೂ ಸಹೋದರ ಕೂಡ ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಸದ್ಯ ಮಮತಾ ತಾಯಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರೇಮ ವೈಫಲ್ಯದಿಂದ ಮಮತಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮಮತಾ ತಾಯಿ ಫೋನ್ ಮಾಡಿ ಆಕೆಗೆ ಮದುವೆ ನಿಶ್ಚಯಿಸಿರುವುದಾಗಿ ಹೇಳಿದ್ದರು. ಆದ್ರೆ ಈಗಲೇ ಮದುವೆ ಬೇಡ ಎಂದು ಮಮತಾ ತನ್ನ ತಾಯಿಯೊಂದಿಗೆ ವಾದಿಸಿದ್ದರು ಎಂದು ವರದಿಯಾಗಿದೆ.
ಪಾಟ್ನಾ: ಕೆಲಸದ ಮಾಲೀಕನ ಹೆಂಡತಿ ಜೊತೆ ಓಡಿಹೋಗಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಥಳಿಸಿ ಆತನ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಷನ್ ನೀಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಇಲ್ಲಿನ ಪಿಪ್ರಾ ಚೌಕ್ನ ಉಪಹಾರಗೃಹವೊಂದರಲ್ಲಿ ಕಳೆದ ರಾತ್ರಿ ವ್ಯಕ್ತಿಯ ಮೇಲೆ ದಾಳಿ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿರೋ 30 ವರ್ಷದ ವ್ಯಕ್ತಿಯ ಕಣ್ಣುಗಳಿಗೆ ಆ್ಯಸಿಡ್ ಇಂಜೆಕ್ಷನ್ ನೀಡಿದ್ರಿಂದ ಈಗ ಆತ ತನ್ನ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಡಿಎಸ್ಪಿ ಬಿಕೆ ಸಿಂಗ್ ಹೇಳಿದ್ದಾರೆ.
ಸಂತ್ರಸ್ತ ವ್ಯಕ್ತಿ ಮೂಲತಃ ಸಮಷ್ಟಿಪುರದವನು ಎಂದು ವರದಿಯಾಗಿದೆ. ನಾನು ತೇಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರೌನಿ ಗ್ರಾಮದಲ್ಲಿ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡುತ್ತಿದೆ. ಅಲ್ಲಿ ಮಾಲೀಕನ ಹೆಂಡತಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಸಾಂದರ್ಭಿಕ ಚಿತ್ರ
ಫೆಬ್ರವರಿ 6ರಂದು ಚಾಲಕ ತನ್ನ ಪ್ರಿಯತಮೆಯೊಂದಿಗೆ ಮನೆ ಬಿಟ್ಟು ಓಡಿಹೋಗಿದ್ದ. ಬಳಿಕ ಮಹಿಳೆಯ ಗಂಡ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದರು ಎಂದು ಡಿಎಸ್ಪಿ ಹೇಳಿದ್ದಾರೆ.
ನಂತರ ಫೆಬ್ರವರಿ 16ರಂದು ಮಹಿಳೆ ತೇಗ್ರಾಗೆ ವಾಪಸ್ ಬಂದು ಸ್ಥಳೀಯ ಕೋರ್ಟ್ನಲ್ಲಿ ಆಕೆಯ ಹೇಳಿಕೆ ದಾಖಲಿಸಲಾಗಿತ್ತು. ಹೆಂಡತಿಯನ್ನ ಮನೆಗೆ ಕರೆದುಕೊಂಡು ಹೋಗುವಂತೆ ಕೋರ್ಟ್ ಮಹಿಳೆಯ ಗಂಡನಿಗೆ ಹೇಳಿತ್ತು. ಮಹಿಳೆ ಇದ್ದಕ್ಕಿದ್ದಂತೆ ವಾಪಸ್ ಬಂದಿದ್ದೇಕೆ ಹಾಗೂ ಆಕೆ ಕೋರ್ಟ್ನಲ್ಲಿ ನೀಡಿದ ಹೇಳಿಕೆ ಏನು ಎಂಬುದು ಸ್ಪಷ್ಟವಾಗಿಲ್ಲ.
ಕಳೆದ ಸಂಜೆ ಮಹಿಳೆಯ ಸಂಬಂಧಿ ಚಾಲಕನಿಗೆ ಕರೆ ಮಾಡಿದ್ದು, ಮಹಿಳೆ ನಿನ್ನೊಂದಿಗೆ ಜೀವನ ನಡೆಸಲು ಬಯಸಿದ್ದಾಳೆ. ತೇಗ್ರಾ ಪೊಲೀಸ್ ಠಾಣೆಗೆ ಬಂದು ಆಕೆಯನ್ನ ಕರೆದುಕೊಂಡು ಹೋಗು ಅಂತ ಹೇಳಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಠಾಣೆಗೆ ಸುಮಾರು 1 ಕಿ.ಮೀ ದೂರದಲ್ಲೇ 20 ಜನರ ತಂಡ ಚಲಕನನ್ನು ತಡೆದಿದ್ದು, ಉಪಹಾರಗೃಹಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಆತನ ಕಣ್ಣುಗಳಿಗೆ ಸಿರಿಂಜ್ನಿಂದ ಆ್ಯಸಿಡ್ ಇಂಜೆಕ್ಟ್ ಮಾಡಿದ್ದಾರೆ ಎಂದು ಡಿಎಸ್ಪಿ ತಿಳಿಸಿದ್ದಾರೆ.
ಬಳಿಕ ಚಾಲಕನನ್ನು ಭಗವಾನ್ಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಹನಮಾನ್ ಚೌಕ್ ಬಳಿ ಎಸೆದು ಹೋಗಿದ್ದಾರೆ. ದಾರಿಹೋಕರೊಬ್ಬರು ಚಾಲಕನನ್ನ ಬೇಗುಸಾರೈನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಮಂಡ್ಯ: ಅಂಗನವಾಡಿಯಲ್ಲಿ ಚುಚ್ಚುಮದ್ದು ಕೊಡಿಸಿದ ನಂತರ ಮಂಡ್ಯದಲ್ಲಿ ಎರಡು ತಿಂಗಳ ಹಸುಗೂಸು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ಸಂತೋಷ್ ಮತ್ತು ಹೇಮಾ ದಂಪತಿಯ ಎರಡು ತಿಂಗಳ ಮಗು ಮೃತಪಟ್ಟಿದೆ. ಸಂತೋಷ್ ಮತ್ತು ಹೇಮಾ ದಂಪತಿ ಹೇಳುವ ಪ್ರಕಾರ ಕಳೆದ ಗುರುವಾರ ಅಂಗನವಾಡಿಯಲ್ಲಿ ಮಗುವಿಗೆ ಇಂಜೆಕ್ಷನ್ ಕೊಡಿಸಲಾಗಿತ್ತು. ಇಂಜೆಕ್ಷನ್ ಕೊಟ್ಟ ನಂತರ ಮಗು ಅಸ್ವಸ್ಥಗೊಂಡಿತ್ತು. ಹೀಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಮಂಡ್ಯ ತಾಲೂಕಿನ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ಕಳೆದ ಗುರುವಾರ ಪೆಂಟಾವೇಲೆಂಟ್ ಚುಚ್ಚುಮದ್ದು ಹಾಕಿಸಿದ ನಂತರ ಎರಡು ಹಸುಗೂಸುಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೊಂದು ಮಗು ಮೃತಪಟ್ಟಿದ್ದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಿಮ್ಸ್ ವೈದ್ಯಕೀಯ ಅಧೀಕ್ಷಕ ಹನುಮಂತ ಪ್ರಸಾದ್, ಮಗುವಿಗೆ ಪೆಂಟಾವೇಲೆಂಟ್ ಚುಚ್ಚುಮದ್ದು ನೀಡಿರಲಿಲ್ಲ. ಮಗು ನ್ಯುಮೋನಿಯಾ ಖಾಯಿಲೆಯಿಂದ ಬಳಲುತ್ತಿತ್ತು. ಅಂಗನವಾಡಿಯ ಲಸಿಕೆಗೂ ಮಗುವಿನ ಸಾವಿಗೂ ಸಂಬಂಧವಿಲ್ಲ. ಈ ಬಗ್ಗೆ ಸಾರ್ವಜನಿಕರು ಆತಂಕ ಪಡಬಾರದು ಎಂದು ಹೇಳುತ್ತಿದ್ದಾರೆ.
ಮಂಡ್ಯ: ಸರ್ಕಾರದಿಂದ ನೀಡಲ್ಪಡುವ ಲಸಿಕೆ ಹಾಕಿಸಿದ ಬಳಿಕ ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಕ್ಕಳ ಕುಟುಂಬಗಳಿಗೆ ಒಟ್ಟು 3 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಸರ್ಕಾರದಿಂದ 1 ಲಕ್ಷ, ಜೆಡಿಎಸ್ ಪಕ್ಷದಿಂದ 1ಲಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪರಿಂದ ತಲಾ 50ಸಾವಿರ ಹಾಗೂ ಮೂಡ ಅಧ್ಯಕ್ಷ ಮುನಾವರ್ ಖಾನ್ರಿಂದ ತಲಾ 50 ಸಾವಿರ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದು, ಹೀಗಾಗಿ ಒಟ್ಟು 3 ಲಕ್ಷ ರೂ. ಮೃತ ಮಕ್ಕಳ ಕುಟುಂಬಕ್ಕೆ ನೀಡುವುದಾಗಿ ಘೋಷಿಸಲಾಗಿದೆ. ಇದನ್ನೂ ಓದಿ: ಸರ್ಕಾರದಿಂದ ಗ್ರಾಮದ 9 ಮಕ್ಕಳಿಗೆ ಪೆಂಟಾವೇಲೆಂಟ್ ಇಂಜೆಕ್ಷನ್- ಇಬ್ಬರ ಸಾವು, 7 ಮಕ್ಕಳು ಅಸ್ವಸ್ಥ
ಮಂಡ್ಯ ತಾಲೂಕಿನ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ಒಂದೂವರೆ ತಿಂಗಳ ಎರಡು ಮಕ್ಕಳು ಮೃತಪಟ್ಟಿದ್ದವು. ಸರ್ಕಾರದಿಂದ ನೀಡುವ ಲಸಿಕೆ ಹಾಕಿಸಿದ ನಂತರ ಮಕ್ಕಳು ಸಾವನ್ನಪ್ಪಿದ್ದು, ಅನುಮಾನಕ್ಕೆ ಕಾರಣವಾಗಿತ್ತು. ಆದ್ದರಿಂದ ಮಕ್ಕಳ ಸಾವಿನ ತನಿಖೆ ನಡೆಯುವಂತೆ ಮತ್ತು ಪರಿಹಾರ ನೀಡುವಂತೆ ತಡರಾತ್ರಿಯವರೆಗೂ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆ ಮಂಡ್ಯ ಮಿಮ್ಸ್ ಆಸ್ಪತ್ರೆ ಮುಂಭಾಗ ನಡೆದಿತ್ತು. ಇದೀಗ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣಹೊಂದಿರುವ ಮಕ್ಕಳ ಕುಟುಂಬದವರಿಗೆ ತಲಾ ಒಂದು ಲಕ್ಷ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ.
ಪ್ರಕರಣ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಸತ್ಯ ಬಹಿರಂಗಪಡಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಮಂಡ್ಯ: ಸರ್ಕಾರ ಕೊಟ್ಟ ಇಂಜೆಕ್ಷನ್ ಗೆ ಇಬ್ಬರು ಮಕ್ಕಳು ಸಾವನ್ನಪ್ಪಿರೋ ಘಟನೆ ಜಿಲ್ಲೆಯ ಚಿನ್ನಗಿರಿದೊಡ್ಡಿ ಗ್ರಾಮದಲ್ಲಿ ನಡೆದಿದ್ದು, ಇದರಿಂದ ಪೋಷಕರು ಆಕ್ರೋಶಗೊಂಡು ಆಸ್ಪತ್ರೆ ಎದುರು ತೀವ್ರ ಪ್ರತಿಭಟನೆ ನಡೆಸುತ್ತಿರುವ
ಸರ್ಕಾರದಿಂದ ನೀಡಿದ ಪೆಂಟಾವೇಲೆಂಟ್ ಇಂಜೆಕ್ಷನ್ ಪಡೆದು ಹಸುಗೂಸುಗಳು ಸಾಯುತ್ತಿವೆ. ಚಿನ್ನಗಿರಿದೊಡ್ಡಿ ಗ್ರಾಮದಲ್ಲಿ ಗುರುವಾರ ಅಂಗನವಾಡಿಯಲ್ಲಿ ಒಂಭತ್ತು ಮಕ್ಕಳಿಗೆ ಇಂಜೆಕ್ಷನ್ ಕೊಡಿಸಲಾಗಿತ್ತು. ಆದರೆ ಇಂಜೆಕ್ಷನ್ ಕೊಡಿಸಿದ ನಂತರ ಒಂದೂವರೆ ತಿಂಗಳ ಎರಡು ಮಕ್ಕಳು ಮೃತಪಟ್ಟಿವೆ. ಪೆಂಟಾವೇಲೆಂಟ್ ಚುಚ್ಚುಮದ್ದನ್ನು 5 ವರ್ಷಕ್ಕಿಂತ ಕೆಳಗಿನ ಹಸೂಗೂಸುಗಳಿಗೆ ಸರ್ಕಾರ ನೀಡುತ್ತದೆ.
ಇಂಜೆಕ್ಷನ್ ಪಡೆದ ಒಂಭತ್ತು ಮಕ್ಕಳಲ್ಲಿ ಇಬ್ಬರು ಸಾವನ್ನಪ್ಪಿದ್ದರೆ, ಉಳಿದ ಏಳು ಮಕ್ಕಳು ಅಸ್ವಸ್ಥರಾಗಿದ್ದಾರೆ. ಏಳು ಮಕ್ಕಳಲ್ಲಿ ಮೂರು ಮಕ್ಕಳ ಸ್ಥತಿ ಗಂಭೀರವಾಗಿದ್ದು, ಇದರಿಂದ ತಾಯಂದಿರು ಹಾಗೂ ಇಡೀ ಗ್ರಾಮವೇ ಆತಂಕ ಪಡುತ್ತಿದೆ. ಆದರೆ ಈ ಬಗ್ಗೆ ವೈದ್ಯರಿಗೆ ತಿಳಿಸಿದರೆ ಅವರು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ.
ಹೇಮಾವತಿ ಮತ್ತು ರವಿ ದಂಪತಿಯ ಒಂದು ಮಗು ಮತ್ತು ಪ್ರಿಯಾಂಕ ಮತ್ತು ರವಿ ದಂಪತಿಯ ಮಗು ಸಾವನ್ನಪ್ಪಿವೆ. ಮೊದಲನೇ ಡೋಸ್ ಪಡೆದ ಮಕ್ಕಳು ಮೃತಪಟ್ಟಿವೆ. ಸತ್ತಿರುವ ಎರಡು ಮಕ್ಕಳು ಗಂಡು ಮಕ್ಕಳಾಗಿದ್ದು, ವೈದ್ಯರ ಬಳಿ ಸಮಸ್ಯೆ ಹೇಳಿದಾಗಲೇ ಚಿಕಿತ್ಸೆ ನೀಡಿದ್ದರೆ ಮಕ್ಕಳ ಸಾವನ್ನು ತಪ್ಪಿಸಬಹುದಿತ್ತು ಎಂದು ಪೋಷಕರು ಆಸ್ಪತ್ರೆಯ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.