Tag: Indias development

  • ವಿಶ್ವದಲ್ಲಿ ನಮಗೆ ಯಾರೂ ಶತ್ರುಗಳಿಲ್ಲ, ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು – ಮೋದಿ

    ವಿಶ್ವದಲ್ಲಿ ನಮಗೆ ಯಾರೂ ಶತ್ರುಗಳಿಲ್ಲ, ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು – ಮೋದಿ

    – ಚಿಪ್ ಆಗಲೀ ಶಿಪ್ ಆಗಲಿ ಭಾರತದಲ್ಲೇ ನಿರ್ಮಾಣವಾಗಲಿದೆ
    – ಭಾರತ ವಿಶ್ವಬಂಧು ಭಾವನೆಯಲ್ಲಿ ಮುಂದೆ ಸಾಗುತ್ತಿದೆ ಎಂದ ಪ್ರಧಾನಿ

    ಗಾಂಧಿನಗರ: ಭಾರತ ವಿಶ್ವಬಂಧು ಭಾವನೆಯಲ್ಲಿ ಮುಂದೆ ಸಾಗುತ್ತಿದೆ. ನಮಗೆ ವಿಶ್ವದಲ್ಲಿ ಯಾರೂ ಶತ್ರುಗಳಿಲ್ಲ (No Enemy). ಆದ್ರೆ ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಎಚ್ಚರಿಸಿದರು.

    ಗುಜರಾತ್‌ನ (Gujarat) ಭಾವನನಗರದಲ್ಲಿ ನಡೆದ ‘ಸಮುದ್ರ ಸೆ ಸಮೃದ್ಧಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು 34,200 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು. ಬಳಿಕ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಟ್ರಂಪ್‌ 50% ಸುಂಕ ನೀತಿಗೆ ಗುದ್ದು ನೀಡಿದರು. ಆತ್ಮನಿರ್ಭರ ಭಾರತದ ಮಹತ್ವವನ್ನು ಪ್ರತಿಪಾದಿಸುತ್ತಾ, ಭಾರತದಲ್ಲೇ ತಯಾರಾದ ಉತ್ಪನ್ನ (Made In India) ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎಂದು ದೇಶದ ಜನತೆಗೆ ಕರೆ ನೀಡಿದರು.

    ಇಂದು ಭಾರತ ವಿಶ್ವಬಂಧು ಭಾವನೆಯಿಂದ ಮುಂದುವರಿಯುತ್ತಿದೆ. ಹಾಗಾಗಿ ಜಗತ್ತಿನಲ್ಲಿ ನಮಗೆ ಯಾವುದೇ ದೊಡ್ಡ ಶತ್ರು ಇಲ್ಲ. ಆದ್ರೆ ಇತರರ ಮೇಲಿನ ಅವಲಂಬನೆಯೇ ನಮಗೆ ದೊಡ್ಡ ಶತ್ರು. ಆದ್ದರಿಂದ ನಾವು ಒಟ್ಟಾಗಿ ಈ ಅವಲಂಬನೆಯ ಶತ್ರುವನ್ನು ಸೋಲಿಸಬೇಕು ಎಂದು ಕರೆ ನೀಡಿದರು.

    ಮುಂದುವರಿದು, ವಿದೇಶಿ ಅವಲಂಬನೆ ಹೆಚ್ಚಾದಷ್ಟು ದೇಶದ ವೈಫಲ್ಯ ಹೆಚ್ಚಾಗುತ್ತದೆ. ಹಾಗಾಗಿ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನ ಹೊಂದಿರುವ ನಾವು ದೇಶದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಆತ್ಮನಿರ್ಭರವಾಗಬೇಕು. ಇತರರ ಮೇಲೆ ಅವಲಂಬಿತರಾಗಿದ್ದರೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಭಾರತದ ಅಭಿವೃದ್ಧಿಯನ್ನು ಇತರ ದೇಶಗಳ ಮೇಲೆ ಬಿಡಬಾರದು. ಭವಿಷ್ಯದ ಪೀಳಿಗೆಯನ್ನು ಪಣಕ್ಕಿಡಬಾರದು. 140 ಕೋಟಿ ದೇಶವಾಸಿಗಳ ಭವಿಷ್ಯವನ್ನ ನಾವು ಇತರರಿಗೆ ಬಿಡಲು ಸಾಧ್ಯವಿಲ್ಲವೆಂದೂ ಪ್ರಧಾನಿ ಹೇಳಿದರು.

    ಒಂದು ರಾಷ್ಟ್ರ – ಒಂದು ದಾಖಲೆ
    ಇದೇ ವೇಳೆ ಭಾರತೀಯ ಪೋರ್ಟ್‌ (ಬಂದರು)ಗಳ ದಾಖಲಾತಿಗೆ ಸಂಬಂಧಿಸಿದ ಸುಧಾರಣೆಗಳನ್ನು ಪರಿಚಯಿಸುವುದಾಗಿ ಹೇಳಿದ ಅವರು, ಶೀಘ್ರದಲ್ಲೇ ಭಾರತೀಯ ಬಂಧರುಗಳಿಗೆ ʻಒಂದು ರಾಷ್ಟ್ರ – ಒಂದು ದಾಖಲಾತಿʼ ಎಂಬ ಹೊಸ ಸುಧಾರಣೆ ತರಲಿದ್ದೇವೆ. ಇದು ವ್ಯಾಪಾರವನ್ನು ಸುಲಭಗೊಳಿಸುತ್ತದೆ ಎಂದು ತಿಳಿಸಿದರು.

    ಚಿಪ್ ಆಗಲೀ ಶಿಪ್ ಆಗಲಿ ಭಾರತದಲ್ಲೇ ನಿರ್ಮಾಣ
    ಅಲ್ಲದೇ ಭಾರತದಲ್ಲಿ ತಯಾರಿಸಬೇಕಾದ ವೈವಿಧ್ಯಮಯ ಉತ್ಪನ್ನಗಳ ಕುರಿತು ಮಾತನಾಡಿ, ಚಿಪ್‌ ಆಗಲಿ ಶಿಪ್‌ ಆಗಲಿ ನಾವು ಎಲ್ಲವನ್ನೂ ಭಾರತದಲ್ಲೇ ತಯಾರಿಸಬೇಕು. ಅದಕ್ಕಾಗಿ ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಾವು ದೇಶದ ಸಂಪತನ್ನು ಕಾಪಾಡಿಕೊಳ್ಳಲು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.

    ಇದೇ ವೇಳೆ ಭಾರತದಲ್ಲಿ ಉಕ್ಕಿನಿಂದ ತಯಾರಿಸಿದ ಐಎನ್‌ಎಸ್ ವಿಕ್ರಾಂತ್‌ ಉಲ್ಲೇಖಿಸಿ ಮಾತನಾಡಿದ ಪ್ರಧಾನಿ ಮೋದಿ, ಸ್ವಾವಲಂಬನೆಯ ಅಗಾಧ ಸಾಮರ್ಥ್ಯಕ್ಕೆ ಉದಾಹರಣೆ ನೀಡಿದರು. ಭಾರತ 40ಕ್ಕೂ ಹೆಚ್ಚು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಪರಿಚಯಿಯಿಸಿದೆ ಎಂದು ವಿವರಿಸಿದರು.