Tag: Indian Railways Department

  • ಎಚ್‍ಡಿಡಿ ಶಂಕುಸ್ಥಾಪನೆಗೈದಿದ್ದ ದೇಶದ ಉದ್ದದ ರೈಲು, ಸೇತುವೆ ಮುಂದಿನ ವಾರ ಲೋಕಾರ್ಪಣೆ!

    ಎಚ್‍ಡಿಡಿ ಶಂಕುಸ್ಥಾಪನೆಗೈದಿದ್ದ ದೇಶದ ಉದ್ದದ ರೈಲು, ಸೇತುವೆ ಮುಂದಿನ ವಾರ ಲೋಕಾರ್ಪಣೆ!

    – 32 ಮೀಟರ್ ಎತ್ತರದಲ್ಲಿ ಬ್ರಹ್ಮಪುತ್ರಾ ನದಿಯಲ್ಲಿ ನಿರ್ಮಾಣ
    – 37 ಗಂಟೆಯ ದೂರ ಇನ್ನು 3 ಗಂಟೆಯಲ್ಲಿ ಕ್ರಮಿಸಬಹುದು
    – ಏಷ್ಯಾದ 2ನೇ ಉದ್ದದ ಸೇತುವೆ

    ದಿಸ್ಪುರ: ಭಾರತದ ಅತ್ಯಂತ ಉದ್ದದ ರೈಲು ಮತ್ತು ರಸ್ತೆ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 25 ರಂದು ಉದ್ಘಾಟಿಸಲಿದ್ದಾರೆ.

    ಅಸ್ಸಾಂನ ದಿಬ್ರೂಗಡದ ಬಳಿ ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಸೇತುವೆಯನ್ನು ಭಾರತೀಯ ರೈಲ್ವೇ ಇಲಾಖೆ ನಿರ್ಮಿಸಿದ್ದು, ಏಷ್ಯಾದ 2ನೇ ಅತ್ಯಂತ ಉದ್ದದ ಸೇತುವೆ ಎಂಬ ಹೆಗ್ಗಳಿಕೆಯನ್ನು ಪಡೆಯಲಿದೆ.

    ಅಸ್ಸಾಂನ ದಿಬ್ರೂಗಡದಿಂದ ಅರುಣಾಚಲ ಪ್ರದೇಶದ ಪಾಸಿಘಾಟ್ ನಡುವೆ ಈ ಸೇತುವೆ ನಿರ್ಮಾಣವಾಗಿದ್ದು, ಒಟ್ಟು 4.94 ಕಿಮೀ ಉದ್ದವಿದೆ. ಈ ಸೇತುವೆ ನಿರ್ಮಾಣದಿಂದ ಚೀನಾ ಗಡಿಯಲ್ಲಿ ರಕ್ಷಣಾ ವ್ಯವಸ್ಥೆ ಮತ್ತಷ್ಟು ಬಲ ಪಡಿಸಲು ಸಹಾಯಕವಾಗಲಿದೆ. ಅಲ್ಲದೇ ರೈಲ್ವೇ ಹಾಗೂ ರಸ್ತೆ ಸೇತುವೆ ಎರಡು ಹೊಂದಿರುವುದರಿಂದ ಪ್ರಯಾಣಿಕರ ಸಮಯವೂ ಉಳಿತಾಯವಾಗಲಿದೆ.

    ಬ್ರಹ್ಮಪುತ್ರಾ ನದಿಯ ನೀರಿನ ಮಟ್ಟದಿಂದ 32 ಮೀಟರ್ ಎತ್ತರದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದ್ದು, ಸೇತುವೆಯ ಮೇಲ್ಭಾಗದಲ್ಲಿ ಮೂರು ಪಥಗಳ ರಸ್ತೆ ಹಾಗೂ ಕೆಳಭಾಗದಲ್ಲಿ ಎರಡು ಹಳಿಗಳ ರೈಲು ಮಾರ್ಗ ನಿರ್ಮಿಸಲಾಗಿದೆ.

    ಯೋಜನೆ ಹಿನ್ನೆಲೆ:
    1997 ರಲ್ಲಿ ಆಗಿನ ಪ್ರಧಾನಿಯಾಗಿದ್ದ ಎಚ್.ಡಿ ದೇವೇಗೌಡ ಅವರು ಸೇತುವೆ ನಿರ್ಮಾಣಕ್ಕಾಗಿ ಶಿಲಾನ್ಯಾಸ ಮಾಡಿದ್ದರು. 2002 ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ 7 ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು. ಸದ್ಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರದ ಅವಧಿಯಲ್ಲಿ ಯೋಜನೆ ಪೂರ್ಣಗೊಂಡಿದೆ.

    ಯೋಜನೆಯ ನಿರ್ಮಾಣದ ವೇಗವನ್ನು ಹೆಚ್ಚಿಸಲು 2007 ರಲ್ಲಿ ಅಂದಿನ ಸರ್ಕಾರ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿತ್ತು. ಆದರೂ ಯುಪಿಎ ಸರ್ಕಾರದ ಅವಧಿಯಲ್ಲಿ ವಿವಿಧ ಕಾರಣಗಳಿಂದಾಗಿ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಅಂದು 2018 ಮಾರ್ಚ್ ಪೂರ್ಣಗೊಳಿಸುವ ಗಡುವು ಹಾಕಿಕೊಳ್ಳಲಾಗಿತ್ತು.

    ಅನುಕೂಲ ಹೇಗೆ?
    ಸೇತುವೆ ನಿರ್ಮಾಣದಿಂದ ಪ್ರಯಾಣದ ಈ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಸಮಯ ಉಳಿತಾಯ ಆಗಲಿದೆ. ಈ ಮೊದಲು ದಿಬ್ರೂಗಡದಿಂದ ಅರುಣಾಚಲ ಪ್ರದೇಶಕ್ಕೆ ಹೋಗಲು ಗುವಾಹಟಿ ಮೂಲಕ ಸಾಗಬೇಕಿತ್ತು. ಈ ಮಾರ್ಗದ 500 ಕಿಮೀ ಆಗಿತ್ತು. ಆದರೆ ಸೇತುವೆ ನಿರ್ಮಾಣದಿಂದ ಎರಡು ನಗರಗಳ ಪ್ರಯಾಣ ದೂರ 100 ಕಿಮೀ ಗಿಂತ ಕಡಿಮೆ ಆಗಲಿದೆ. ಅಲ್ಲದೇ ದಿಬ್ರೂಗಡದಿಂದ ದೆಹಲಿಗೆ ಪ್ರಯಾಣದ ಸಮಯ (ಗುವಾಹಟಿ ಮೂಲಕ) 37 ಗಂಟೆ. ಆದರೆ ಸೇತುವೆ ಮೂಲಕ ಕೇವಲ 3 ಗಂಟೆಯಲ್ಲಿ ಸಾಗಬಹುದಾಗಿದೆ.

    ರೈಲ್ವೇ ಇಲಾಖೆ ಸೇತುವೆ ಗುಣಮಟ್ಟ ಪರಿಶೀಲನೆ ನಡೆಸಿದ ಬಳಿಕ ಯೋಜನೆಗೆ ಅನುಮೋದನೆ ನೀಡಲಿದೆ. ಪ್ರಮುಖವಾಗಿ ಈ ಸೇತುವೆ ಈಶಾನ್ಯ ರಾಜ್ಯಗಳಲ್ಲಿ ದೇಶದ ಸೈನ್ಯಕ್ಕೆ ಹೆಚ್ಚಿನ ಬಲ ತುಂಬಲಿದೆ. ಈ ಮೊದಲು ನದಿಯನ್ನು ಬೋಟ್ ಮೂಲಕ ದಾಟಲು 1 ಗಂಟೆ ಸಮಯ ಬೇಕಾಗಿತ್ತು. ಆದರೆ ಆಗ ರಸ್ತೆ ಮಾರ್ಗದ ಮೂಲಕ ಕೇವಲ 5 ನಿಮಿಷದಲ್ಲಿ ದಾಟಬಹುದಾಗಿದೆ. ಉಳಿದಂತೆ ಆರಂಭದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ಆರಂಭದಲ್ಲಿ 1,767 ಕೋಟಿ ರೂ. ಅಂದಾಜು ಮಾಡಲಾಗಿತ್ತು. ಆದರೆ ಸದ್ಯ ಸೇತುವೆ ಅಂತಿಮ ಗೊಳ್ಳುವ ವೇಳೆಗೆ ಯೋಜನೆ ವೆಚ್ಚ ಸುಮಾರು 6 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶ್ರೀರಾಮನ ಚರಿತ್ರೆ ತಿಳಿಯಲು ಹಳಿಯಲ್ಲಿ ಓಡಲಿದೆ ಶ್ರೀರಾಮಾಯಣ ಎಕ್ಸ್‌ಪ್ರೆಸ್‌: ಈ ರೈಲಿನ ವಿಶೇಷತೆ ಏನು? ಪ್ಯಾಕೇಜ್ ಎಷ್ಟು?

    ಶ್ರೀರಾಮನ ಚರಿತ್ರೆ ತಿಳಿಯಲು ಹಳಿಯಲ್ಲಿ ಓಡಲಿದೆ ಶ್ರೀರಾಮಾಯಣ ಎಕ್ಸ್‌ಪ್ರೆಸ್‌: ಈ ರೈಲಿನ ವಿಶೇಷತೆ ಏನು? ಪ್ಯಾಕೇಜ್ ಎಷ್ಟು?

    ನವದೆಹಲಿ: ರಾಮನಿಂದಾಗಿ ಪ್ರಸಿದ್ಧಿ ಹೊಂದಿರುವ ಪ್ರಮುಖ ಸ್ಥಳಗಳ ಪ್ರವಾಸಕ್ಕಾಗಿಯೇ ಭಾರತೀಯ ರೈಲ್ವೇ ಇಲಾಖೆಯ ಪ್ರವಾಸೋದ್ಯಮ ನಿಗಮ ವಿಶೇಷ `ಶ್ರೀರಾಮಾಯಣ ಎಕ್ಸ್‌ಪ್ರೆಸ್‌’ ರೈಲು ಓಡಿಸಲು ಮುಂದಾಗಿದೆ.

    ಶ್ರೀರಾಮನ ಬಗ್ಗೆ ತಿಳಿಯುವುದಕ್ಕಾಗಿ ಭಾರತೀಯ ರೈಲ್ವೇ ಇಲಾಖೆ ತನ್ನ ಪ್ರವಾಸೋದ್ಯಮ ಯೋಜನೆಯಡಿ ಈ ಪ್ರವಾಸವನ್ನು ಆರಂಭಿಸಲಿದೆ. ಈ ರೈಲು ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡಿದ್ದು, 800 ಆಸನಗಳನ್ನು ಹೊಂದಿದೆ. ಈ ರೈಲಿನಲ್ಲಿ ಶ್ರೀರಾಮನ ಬದುಕಿನ ಅಧ್ಯಾಯಗಳೊಂದಿಗೆ ತಳುಕು ಹಾಕಿಕೊಂಡಿರುವ ಪ್ರಮುಖ ಸ್ಥಳಗಳ ಭೇಟಿಗೆ ಅವಕಾಶ ಕಲ್ಪಿಸಿದೆ. 16 ದಿನಗಳಲ್ಲಿ ದೇಶದ ಪ್ರಮುಖ ಪುಣ್ಯಕ್ಷೇತ್ರಗಳನ್ನು ಸಂಪರ್ಕಿಸುತ್ತದೆ. ಈ ವರ್ಷದ ನವೆಂಬರ್ ನಲ್ಲಿ ದೆಹಲಿಯ ಸಫರ್ ಜಂಗ್ ರೈಲ್ವೇ ನಿಲ್ದಾಣದಿಂದ ಮೊದಲ ಪ್ರಯಾಣ ಆರಂಭವಾಗಲಿದೆ. ಇದನ್ನು  ಓದಿ: ಸೀತೆಯ ಜನ್ಮ ಸ್ಥಳದಿಂದ ಅಯೋಧ್ಯೆಗೆ ಬಸ್: ನೇಪಾಳದಲ್ಲಿ ಮೋದಿ ಚಾಲನೆ

    ಈ ಪ್ರವಾಸದಲ್ಲಿ ಊಟ, ವಸತಿ, ಯಾತ್ರಾ ಸ್ಥಳಗಳ ಪ್ರಯಾಣ, ಸುತ್ತಲಿನ ಪ್ರವಾಸಿ ತಾಣಗಳ ಭೇಟಿಗೂ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಸಿಗರಿಗೆ ಅಗತ್ಯ ನೆರವು ಹಾಗೂ ವ್ಯವಸ್ಥೆ ಗಮನಿಸಲು ಟೂರ್ ಮ್ಯಾನೇಜರ್ ಗಳನ್ನು ಸಹ ಇದಕ್ಕಾಗಿ ನಿಯೋಜಿಸಲಾಗಿದೆ.

    ಎಲ್ಲಿಂದ, ಎಲ್ಲಿಗೆ ಸಾಗುತ್ತದೆ?
    ವಿಶೇಷ ರೈಲು ದೆಹಲಿಯಿಂದ ಹೊರಟು ಮೊದಲಿಗೆ ಅಯೋಧ್ಯೆಯಲ್ಲಿ ತಲುಪುತ್ತದೆ. ಅಲ್ಲಿನ ಹುಮಾನ್ ಗುಡಿ, ರಾಮಕೋಟ್ ಹಾಗೂ ಕನಕ್ ದೇವಾಲಯ ಹಾಗೂ ರಾಮಾಯಣದಲ್ಲಿ ಪ್ರಸ್ತಾಪವಾಗುವ ಇತರ ಪ್ರಮುಖ ಸ್ಥಳಗಳ ಸುತ್ತಾಟದಲ್ಲಿ ನಂತರ ನಂದಿಗ್ರಾಮ, ಸೀತಾಮಡಿ, ಜನಕಪುರ್, ವಾರಾಣಾಸಿ, ಪ್ರಯಾಗ್, ಶೃಂಗವೇರ್ ಪುರ , ಚಿತ್ರಕೂಟ, ನಾಸಿಕ್, ಹಂಪಿ ಹಾಗೂ ರಾಮೇಶ್ವರಕ್ಕೆ ಬಂದು ತಲುಪಲಿದೆ.

    ಶ್ರೀಲಂಕ್ಕೂ ಹೋಗಬಹುದು:
    ಭಾರತ ಅಲ್ಲದೇ ಶ್ರೀಲಂಕಾಕ್ಕೂ ಪ್ರವಾಸದ ಮೂಲಕವೇ ಹೋಗಬಹುದು. ರಾಮೇಶ್ವರದಿಂದ ಪ್ರಯಾಣ ಮುಂದುವರಿಸುವ ಪ್ರಯಾಣಿಕರು ವಿಮಾನದ ಮೂಲಕ ಶ್ರೀಲಂಕಾಕ್ಕೆ ತೆರಳಬಹುದು. ಶ್ರೀಲಂಕಾದಲ್ಲಿ ಬರುವ ಕ್ಯಾಂಡಿ, ಕೊಲಂಬೋ ಹಾಗೂ ನಿಗೊಂಬೊ ಸ್ಥಳಗಳಿಗೆ ಭೇಟಿ ನೀಡಲಾಗುತ್ತದೆ.

    ಶ್ರೀರಾಮಾಯಣ ಎಕ್ಸ್‌ಪ್ರೆಸ್‌ನ ಪ್ಯಾಕೇಜ್ ಎಷ್ಟು?
    ಈ ವಿಶೇಷ ರೈಲಿನಲ್ಲಿ ಪ್ರವಾಸಕ್ಕೆ ಒಬ್ಬ ವ್ಯಕ್ತಿಗೆ ನವದೆಹಲಿಯಿಂದ ರಾಮೇಶ್ವರದವರೆಗೆ 15,120 ರೂ. ನಿಗದಿ ಮಾಡಲಾಗಿದ್ದು, ರಾಮೇಶ್ವರಂದಿಂದ ಶ್ರೀಲಂಕಾಕ್ಕೆ ತೆರಳುವ ಪ್ರವಾಸಿಗರು ಪ್ರತ್ಯೇಕವಾಗಿ 36,970 ಪಾವತಿಮಾಡಬೇಕಾಗುತ್ತದೆ. ಇದರಲ್ಲಿ ವಿಮಾನ ಪ್ರಯಾಣ ಶುಲ್ಕ ಸೇರಿದಂತೆ ಊಟ, ವಸತಿ ಹಾಗೂ ಪ್ರವಾಸಿ ತಾಣಗಳ ಭೇಟಿಯ ಪ್ಯಾಕೇಜನ್ನು ಭಾರತೀಯ ರೈಲ್ವೇ ಇಲಾಖೆಯೇ ಒದಗಿಸಲಿದೆ.

    `ಶ್ರೀರಾಮಾಯಣ ಎಕ್ಸ್‌ಪ್ರೆಸ್‌’ ಒಟ್ಟು 16 ದಿನಗಳಲ್ಲಿ ತನ್ನ ಯಾತ್ರೆಯನ್ನು ಪೊರೈಸಲಿದ್ದು, ಮೊದಲನೇ ಪ್ರಯಾಣವನ್ನು ನವೆಂಬರ್ 14 ರಿಂದ ಪ್ರಾರಂಭಗೊಳಿಸುತ್ತದೆ. ಶ್ರೀ ರಾಮಾಯಣ ಎಕ್ಸ್‌ಪ್ರೆಸ್‌ ಪ್ಯಾಕೇಜ್ ಪ್ರಯಾಣವನ್ನು ಭಾರತೀಯ ರೈಲ್ವೆ ಇಲಾಖೆ ತನ್ನ ವೆಬ್‍ಸೈಟ್‍ ನಲ್ಲಿ ಪ್ರಕಟಿಸಿದೆ. ಕೇಂದ್ರ ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ರವರು ನೂತನ ಶ್ರೀ ರಾಮಾಯಣ ಎಕ್ಸ್‍ಪ್ರೆಸ್ ಕುರಿತು ಕಿರು ಮಾಹಿತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

    ಏನಿದು ರಾಮಾಯಣ ಸರ್ಕ್ಯೂಟ್?
    ಧಾರ್ಮಿಕ ಪ್ರವಾಸಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಭಾರತ ಪ್ರವಾಸೋದ್ಯಮ ಇಲಾಖೆ ಧಾರ್ಮಿಕ ಕೇಂದ್ರಗಳ ನಡುವೆ ಸಂಪರ್ಕ ಸಾಧಿಸಲು ವಿಶೇಷ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿದೆ. ಇದರಲ್ಲಿ ರಾಮಾಯಣ ಸರ್ಕ್ಯೂಟ್ ಒಂದಾಗಿದ್ದು, ಇದರ ಅಡಿಯಲ್ಲಿ ರಾಮಾಯಣ ಕಥೆಗೆ ಸಂಬಂಧಿಸಿದ 15 ಪ್ರವಾಸಿ ಜಾಗಗಳನ್ನು ಸಂಪರ್ಕಿಸುವ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ.

    ಉತ್ತರಪ್ರದೇಶದ ಅಯೋಧ್ಯೆ, ನಂದಿ ಗ್ರಾಮ್, ಶೃಂಗವೇರ್ ಪುರ ಮತ್ತು ಚಿತ್ರಕೂಟ, ಬಿಹಾರದ ಸೀತಾಮಡಿ, ಬಕ್ಸರ್ ಮತ್ತು ದರ್ಭಂಗಾ, ಮಧ್ಯಪ್ರದೇಶದ ಚಿತ್ರಕೂಟ, ಒಡಿಶಾದ ಮಹೇಂದ್ರ ಗಿರಿ, ಛತ್ತೀಸ್‍ಗಢದ ಜಗದಾಲ್ ಪುರ, ಮಹಾರಾಷ್ಟ್ರದ ನಾಸಿಕ್ ಮತ್ತು ನಾಗ್ಪುರ, ತೆಲಂಗಾಣದ ಭದ್ರಾಚಲಮ್, ಹಾಗೂ ತಮಿಳುನಾಡಿನ ರಾಮೇಶ್ವರಂ, ಕರ್ನಾಟಕದ ಹಂಪಿ ರಾಮಾಯಣ ಸರ್ಕ್ಯೂಟ್ ನಲ್ಲಿದೆ.

    ವಿಶೇಷ ರೈಲಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ: www.irctctourism.com