ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ದೋಡಾ ಜಿಲ್ಲೆಯ ಗಂಡೋ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ (Indian Army) ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗೀಡಾದ ಉಗ್ರರು ಇತ್ತೀಚೆಗೆ ಕಾಶ್ಮೀರದಲ್ಲಿ ಸೇನೆ ಮತ್ತು ಪೊಲೀಸರ ಮೇಲೆ ನಡೆದ ದಾಳಿಯಲ್ಲಿ ಉಗ್ರರು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಎನ್ಕೌಂಟರ್ (Encounter) ನಡೆದ ಜಾಗದಿಂದ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ಗನ್ ಸೇರಿದಂತೆ ಅಪಾರ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೂವರು ಭಯೋತ್ಪಾದಕರು ಅಡಗಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎನ್ಎಸ್ಜಿಯಿಂದ ಆ್ಯಂಟಿ- ಹೈಜಾಕ್ ಅಣುಕು ಪ್ರದರ್ಶನ
ಕಳೆದ ವಾರ ಭಯೋತ್ಪಾದಕರ ಸರಣಿ ದಾಳಿಯ ನಂತರ ದೋಡಾ ಮತ್ತು ರಾಜೌರಿ, ಪೂಂಚ್ ಪ್ರದೇಶಗಳಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಜೂ.11 ರಂದು, ಸೇನಾ ಶಿಬಿರದ ಮೇಲೆ ದಾಳಿ ನಡೆಸಲಾಗಿತ್ತು. ಇದರಲ್ಲಿ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ ಗಾಯಗೊಂಡಿದ್ದರು. ಇನ್ನೊಂದು ಘಟನೆಯಲ್ಲಿ, ಭಯೋತ್ಪಾದಕರು ಪೊಲೀಸ್ ಶಿಬಿರದ ಮೇಲೆ ದಾಳಿ ಮಾಡಿದ್ದರು. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.
ಭಾರತ ಸದಾ ಶಾಂತಿ ಪ್ರಿಯ ದೇಶವಾಗಿದ್ದು, ಅನಾವಶ್ಯಕವಾಗಿ ಬೇರೆ ದೇಶಗಳ ಜೊತೆ ಕಾಲು ಕೆರದು ಜಗಳ ತೆಗೆದ ಉದಾಹರಣೆ ಇಲ್ಲ. ಆದರೆ ನೆರೆಯ ಪಾಕಿಸ್ತಾನ ಹಾಗೂ ಚೀನಾ ಒಂದಲ್ಲ ಒಂದು ಕಾರಣಕ್ಕೆ ಭಾರತದ ವಿರುದ್ಧ ಕುತಂತ್ರ ಹೆಣೆಯುತ್ತಲೇ ಇವೆ. ಸದಾ ಗಡಿ ತಂಟೆಯನ್ನು ತೆಗೆದು ಅವಕಾಶ ಸಿಕ್ಕಾಗಲೆಲ್ಲಾ ಸಂಚು ರೂಪಿಸಿ ದಾಳಿ ನಡೆಸುತ್ತಿವೆ. ಇಷ್ಟೇ ಅಲ್ಲದೇ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿವೆ.
ಈಗಾಗಲೇ ಚೀನಾದಿಂದ ಎರಡು ಬಾರಿ ಸೋತು ಹಾಗೂ ಪಾಕ್ ಉಗ್ರರ ದಾಳಿಯಿಂದ ಬೇಸತ್ತ ಭಾರತ ತನ್ನ ಸೇನೆ ಹಾಗೂ ಸಶಸ್ತ್ರಗಳನ್ನು ಬಲಪಡಿಸಿಕೊಂಡಿದೆ. ಸೇನೆಯ ಬತ್ತಳಿಕೆಯಲ್ಲಿ ಅಣ್ವಸ್ತ್ರಗಳನ್ನು ಸಹ ಸೇರಿಸಿ ವೈರಿಯ ಎದೆಯಲ್ಲಿ ನಡುಕ ಹುಟ್ಟಿಸಿ ಭಾರತ ಸೈ ಎನಿಸಿಕೊಂಡಿದೆ. ಭಾರತದ ಪರಮಾಣು ಬಾಂಬ್ಗಳು (Indian Nuclear weapon) ಹಾಗೂ ಅಣುಬಾಂಬ್ ಪರೀಕ್ಷೆಗಳ ಬಗ್ಗೆ ಈ ಕೆಳಗೆ ವಿವರಿಸಲಾಗಿದೆ.
ಸ್ಮೈಲಿಂಗ್ ಬುದ್ಧ ಪ್ರಾಜೆಕ್ಟ್
1974 ರಲ್ಲೇ ರಾಜಸ್ಥಾನದ ಪೋಖ್ರಾನ್ನ ಭೂಗರ್ಭದಡಿ ಪರಮಾಣು ಬಾಂಬ್ ಪರೀಕ್ಷೆ ನಡೆಸುವ ಮೂಲಕ ಭಾರತ ಪರಮಾಣು ಸ್ವಾವಲಂಬನೆ ಕಂಡುಕೊಂಡಿತ್ತು. ಮೇ 18, 1974ರ ಶನಿವಾರ `ಸ್ಮೈಲಿಂಗ್ ಬುದ್ಧ’ ಹೆಸರಿನಲ್ಲಿ ಪರಮಾಣು ಪರೀಕ್ಷೆ ನಡೆಸಿ ಇದೀಗ ಅರ್ಧ ಶತಮಾನ ಕಳೆದಿದೆ.
ಭಾರತದ ಪರಮಾಣು ಬಾಂಬ್ ಪರೀಕ್ಷೆ ಎಷ್ಟು ಗೌಪ್ಯಾವಾಗಿತ್ತು ಗೊತ್ತಾ?
ಮೇ 18, 1974ರ ಬೆಳಗ್ಗೆ ಸುಮಾರು 08:05ರ ವೇಳೆಗೆ ಅಮೆರಿಕದ ಭೂ ಕಂಪನ ಮಾಪಕ ಭೂಮಿ ಕಂಪಿಸಿದ್ದನ್ನು ದಾಖಲಿಸಿತ್ತು. ಇದು ಭೂ ಕಂಪನ ಅಲ್ಲ ಎಂದು ಸಂಶೋಧಕರಿಗೂ ತಿಳಿದಿತ್ತು. ಈ ಕಂಪನದ ರಹಸ್ಯವನ್ನು ಭಾರತ ಬಹಿರಂಗ ಗೊಳಿಸಿದಾಗ ಜಗತ್ತು ಬೆರಗಾಗಿತ್ತು. ಈ ಪ್ರಯೋಗದ ವಿಚಾರವನ್ನು ನಮ್ಮದೇ ದೇಶದ ರಕ್ಷಣಾ ಸಚಿವರು, ವಿದೇಶಾಂಗ ವ್ಯವಹಾರಗಳ ಸಚಿವರಿಗೆ ಮಾಹಿತಿ ನೀಡಿದ್ದು ಕೇವಲ ಎರಡು ದಿನಗಳ ಮೊದಲು!
ಸುಮಾರು 75 ವಿಜ್ಞಾನಿಗಳನ್ನು ಹೊರತುಪಡಿಸಿದರೆ ಈ ಪ್ರಾಜೆಕ್ಟ್ ಮಾಹಿತಿ ಗೊತ್ತಿದ್ದಿದ್ದು ಪ್ರಧಾನಿ ಇಂದಿರಾಗಾಂಧಿ (Indira Gandhi), ಅವರ ಪ್ರಧಾನ ಕಾರ್ಯದರ್ಶಿ ಪರಮೇಶ್ವರ್ ಹಸ್ಕರ್ ಮತ್ತು ಸೋವಿಯತ್ ಒಕ್ಕೂಟದಲ್ಲಿ ಭಾರತದ ರಾಯಭಾರಿಯಾಗಿದ್ದ ದುರ್ಗಾ ಪ್ರಸಾದ್ ಧರ್ ಅಧಿವರಿಗೆ ಮಾತ್ರ. ಅಷ್ಟು ಅಚ್ಚುಕಟ್ಟಾಗಿ ಈ ಪ್ರಜೆಕ್ಟ್ನ ಗೌಪ್ಯತೆ ಕಾಪಾಡಲಾಗಿತ್ತು. ಈ ಸಾಧನೆಯಿಂದ ವಿಶ್ವದ ಶಕ್ತಿಶಾಲಿ ರಾಷ್ಟ್ರಗಳೆನಿಸಿದ್ದ ಅಮೆರಿಕ, ರಷ್ಯಾ, ಚೀನಾ ಸೇರಿದಂತೆ ಶತ್ರು ರಾಷ್ಟ್ರ ಪಾಕ್ಗೆ ಶಾಕ್ ಆಗಿತ್ತು. ಅಣ್ವಸ್ತ್ರ ಪರೀಕ್ಷೆ 1974ರ ಅಣ್ವಸ್ತ್ರ ಪರೀಕ್ಷೆ ಬಳಿಕ ಅದೇ ಪೋಖ್ರಾನ್ಲ್ಲಿ ಭಾರತ 5 ಬಾರಿ ಅಣ್ವಸ್ತ್ರ ಪರೀಕ್ಷೆ ನಡೆಸಿದೆ. 1974ರ ಪರಮಾಣು ಪರೀಕ್ಷೆ ಶಾಂತಿಯುತವಾದ ಪರಮಾಣು ಪರೀಕ್ಷೆ ಎಂದೇ ಕರೆಸಿಕೊಂಡಿತ್ತು. ಶಾಂತಿಯುತವಾಗಿಯೇ ತನ್ನಲ್ಲಿನ ಪರಮಾಣು ತಂತ್ರಜ್ಞಾನದ ಸಹಾಯದಿಂದ ಅಣ್ವಸ್ತ್ರ ಅಭಿವೃದ್ಧಿ ಪಡಿಸುವ ಸಾಮಥ್ರ್ಯ ತನಗಿದೆ ಎನ್ನುವ ಶಕ್ತಿಯನ್ನು ಜಗತ್ತಿಗೆ ತೋರಿಸಿತು.
ಭಾರತಕ್ಕೆ ಅಣುಬಾಂಬ್ ಅಗತ್ಯವೇನಿತ್ತು?
1971ರ ಇಂಡೋ- ಪಾಕ್ ಯುದ್ಧದ ಬಳಿಕ ಪಾಕಿಸ್ತಾನ ಮತ್ತೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದೇ ಬರುತ್ತದೆ ಎನ್ನುವ ವಿಚಾರ ಭಾರತಕ್ಕೆ ಕಾಡುತ್ತಿತ್ತು. ಇದರೊಂದಿಗೆ ಈಗಾಗಲೇ 2 ಬಾರಿ ಚೀನಾ ವಿರುದ್ಧದ ಯುದ್ಧದಲ್ಲಿ ಭಾರತ ಸೋತಿತ್ತು. ಪಾಕಿಸ್ತಾನ, ಚೀನಾ ಸೇರಿ ಮಣಿಸುವ ಸಾಧ್ಯತೆ ಭಾರತದ ಆತಂಕಕ್ಕೆ ಕಾರಣವಾಗಿತ್ತು. ಮಿತ್ರ ರಾಷ್ಟ್ರ ರಷ್ಯಾ ಅಮೆರಿಕದೊಂದಿಗೆ ಶೀತಲ ಸಮರದಲ್ಲಿ ನಿರತವಾಗಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಯಾರನ್ನೂ ನಂಬುವ ಹಾಗಿರಲಿಲ್ಲ. ಇವೆಲ್ಲದರಿಂದಾಗಿ 70ರ ದಶಕದಲ್ಲಿ ನ್ಯೂಕ್ಲಿಯರ್ ಬಾಂಬ್ ಪರೀಕ್ಷೆಗೆ ಭಾರತ ಮನಸ್ಸು ಮಾಡಿತು.
ಭಾರತದ ಪರಮಾಣು ಶಕ್ತಿಗೆ ಬೂಸ್ಟರ್ ಡೋಸ್!
1983ರಲ್ಲಿ, ಇಂದಿರಾ ಗಾಂಧಿಯವರ ಸರ್ಕಾರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗೆ (DRDO) ಹೆಚ್ಚಿನ ಹಣಕಾಸಿನ ನೆರವು ಒದಗಿಸಿದರು. ಭಾರತದ ಕ್ಷಿಪಣಿ ಅಭಿವೃದ್ಧಿ ಯೋಜನೆಗಳ ಮುಖ್ಯಸ್ಥರಾಗಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ನೇಮಿಸಲಾಯಿತು. ಇದೇ ವರ್ಷದಲ್ಲಿ, ಭಾರತ ಪ್ಲುಟೋನಿಯಂನ್ನು ಆಯುಧಗಳಲ್ಲಿ ಬಳಸುವಷ್ಟು ಶಕ್ತವಾಯಿತು. 1980ರ ದಶಕದಲ್ಲಿ, ಭಾರತ ತನ್ನ ಪ್ಲುಟೋನಿಯಂ ಸಂಗ್ರಹ ಸಹ ಹೆಚ್ಚಾಯಿತು.
1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದಲ್ಲಿ, ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ನಾಯಕತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ) ಸರ್ಕಾರ ರಚಿಸಿತ್ತು. ಅಧಿಕಾರಕ್ಕೆ ಬರುವ ಮುನ್ನ, ಎನ್ಡಿಎ ಭಾರತದ ಮಿಲಿಟರಿ ಸಾಮಥ್ರ್ಯಕ್ಕೆ ಅಣ್ವಸ್ತ್ರ ಸಾಮಥ್ರ್ಯವನ್ನೂ ಸೇರಿಸುವುದನ್ನು ತನ್ನ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶವಾಗಿಸಿತ್ತು.
1998ರಲ್ಲಿ, ಚೀನಾದ ಬೆಂಬಲದೊಡನೆ ಅಭಿವೃದ್ಧಿ ಪಡಿಸಿದ್ದ ಘೋರಿ ಕ್ಷಿಪಣಿಯನ್ನು ಪಾಕಿಸ್ತಾನ ಯಶಸ್ವಿಯಾಗಿ ಪರೀಕ್ಷಿಸಿತು. ಅದೇ ಪಾಕಿಸ್ತಾನದ ಸಾಮಥ್ರ್ಯಕ್ಕೆ ಭಾರತ ತನ್ನ ಆಪರೇಶನ್ ಶಕ್ತಿಯ ಮೂಲಕ ತಕ್ಕ ಪ್ರತ್ಯುತ್ತರ ನೀಡಿತು. 1974ರಲ್ಲಿ, ಭಾರತ ತನ್ನ ಪರಮಾಣು ಪರೀಕ್ಷೆಯನ್ನು ಶಾಂತಿಯುತ ಉದ್ದೇಶಗಳಿಗಾಗಿ ಎಂದಿತ್ತಾದರೂ, 1998ರ ಪರಮಾಣು ಪರೀಕ್ಷೆಗಳು ಭಾರತವನ್ನು ಅಣ್ವಸ್ತ್ರ ಸಜ್ಜಿತ ರಾಷ್ಟ್ರವಾಗಿ ರೂಪಿಸಿತ್ತು. ಪೋಖ್ರಾನ್ 2 ಎಂದು ಹೆಸರಾದ ಈ ಪರೀಕ್ಷೆಗಳ ಬಳಿಕ, ಭಾರತ ಸರ್ಕಾರ ತನ್ನ ಬಳಿ ಈಗ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಜಗತ್ತಿಗೆ ಘೋಷಿಸಿತು.
1998ರ ಭಾರತದ ಅಣ್ವಸ್ತ್ರ ಪರೀಕ್ಷೆಗಳ ಪರಿಣಾಮವಾಗಿ, ಅಮೆರಿಕ ಸೇರಿದಂತೆ ಹಲವು ದೇಶಗಳು ಭಾರತದ ಮೇಲೆ ನಿರ್ಬಂಧಗಳನ್ನು ಹೇರಿದವು. ಆದರೆ, ಈ ಬಾರಿಯ ಪ್ರತಿರೋಧಗಳು 1974ರಲ್ಲಿನ ಭಾರತದ ಮೊದಲ ಪರಮಾಣು ಪರೀಕ್ಷೆಗಳ ಸಂದರ್ಭದಲ್ಲಿದ್ದಷ್ಟು ತೀಕ್ಷ್ಣವಾಗಿರಲಿಲ್ಲ. ಕ್ಷಿಪ್ರವಾಗಿ ಬೆಳೆಯುತ್ತಿದ್ದ ಭಾರತದ ಆರ್ಥಿಕತೆ ಮತ್ತು ಭಾರತದ ಬೃಹತ್ ಮಾರುಕಟ್ಟೆಯನ್ನು ಬಳಸುವ ವಿದೇಶಗಳ ಹಂಬಲದ ಕಾರಣದಿಂದ ಭಾರತಕ್ಕೆ ಈ ಎಲ್ಲ ಟೀಕೆ, ಪ್ರತಿರೋಧಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಯಿತು. ಈ ಅಣ್ವಸ್ತ್ರ ಪರೀಕ್ಷೆಗಳು ಭಾರತಕ್ಕೆ ತನ್ನನ್ನು ತಾನು ಅತ್ಯಂತ ಪ್ರಬಲ ರಾಷ್ಟ್ರಗಳ ಸಾಲಿನಲ್ಲಿ ಸ್ಥಾಪಿಸಲೂ ಪೂರಕವಾಯಿತು.
ಅಣ್ವಸ್ತ್ರ ದಾಳಿಯಲ್ಲಿ ಮೊದಲಿಗರಾಗಲು ಬಯಸದ ಭಾರತ
ಅಣ್ವಸ್ತ್ರವನ್ನು ಮೊದಲು ಪ್ರಯೋಗಿಸುವುದಿಲ್ಲ ಎಂಬದು ಭಾರತದ ನೀತಿಯಾಗಿದೆ. 1998ರಲ್ಲಿ ನಡೆಸಿದ ಎರಡನೇ ಅಣ್ವಸ್ತ್ರ ಪರೀಕ್ಷೆಯ ಬಳಿಕ ವಾಜಪೇಯಿ ಅವರ ಸರ್ಕಾರ “ನಾವು ಎಂದೂ ಅಣ್ವಸ್ತ್ರ ದಾಳಿಯಲ್ಲಿ ಮೊದಲಿಗರಾಗಲು ಬಯಸುವುದಿಲ್ಲ; ಆದರೆ ದೇಶದ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಅದನ್ನು ಬಳಸಲು ಹಿಂಜರಿಯುವುದಿಲ್ಲ” ಎಂಬ ಹೇಳಿಕೆ ಬಿಡುಗಡೆ ಮಾಡಿತ್ತು. ಈ ಮೂಲಕ ಭಾರತ ಶಾಂತಿಯ ಸಂದೇಶವನ್ನು ರವಾನಿಸಿತ್ತು.
ಇತ್ತೀಚೆಗೆ ಭಾರತ ಅನುಭವಿಸಿದ ಭಯೋತ್ಪಾದಕರ ದಾಳಿ ಸೇರಿದಂತೆ ಉಗ್ರರ ಉಪಟಳ ನಿಯಂತ್ರಣಕ್ಕೆ ಎಚ್ಚರಿಕೆಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಅಣ್ವಸ್ತ್ರವನ್ನು ಮೊದಲು ಪ್ರಯೋಗಿಸುವುದಿಲ್ಲ ಎಂಬ ನೀತಿಯನ್ನು ಬದಲಿಸುವ ಬಗ್ಗೆ ಮಾತಾಡಿದ್ದರು.
ಯಾವ್ಯಾವ ದೇಶದ ಬಳಿ ಎಷ್ಟೆಷ್ಟು ಅಣುಬಾಂಬ್ಗಳಿವೆ?
ಈ ವರ್ಷದ ಜನವರಿಯಲ್ಲಿ ಭಾರತದ ಪರಮಾಣು ಸಿಡಿತಲೆಗಳು 172 ರಷ್ಟಿದ್ದು, ಪಾಕಿಸ್ತಾನದ 170ರಷ್ಟಿದೆ ಎಂದು ವರದಿಯಾಗಿದೆ. ಭಾರತದ ಪರಮಾಣು ಶಸ್ತ್ರಾಗಾರದಲ್ಲಿ 2023 ರಲ್ಲಿ ಸಣ್ಣ ಪ್ರಮಾಣದ ಏರಿಕೆ ಕಂಡಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಹೊಸ ರೀತಿಯ ಪರಮಾಣು ಬಾಂಬ್ಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರೆಸಿವೆ. ಇನ್ನೂ ಚೀನಾದ ಪರಮಾಣು ಸಿಡಿತಲೆಗಳ ಸಂಖ್ಯೆಯು ಜನವರಿ 2023 ರಲ್ಲಿ 410 ರಿಂದ 2024 ರ ಜನವರಿಯಲ್ಲಿ 500ಕ್ಕೆ ಏರಿದೆ ಎಂದು SIPRI ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜನವರಿ 2024ರಲ್ಲಿ 12,121 ಪರಮಾಣು ಸಿಡಿತಲೆಗಳನ್ನು ಒಟ್ಟು ಜಾಗತಿಕ ದಾಸ್ತಾನುಗಳಲ್ಲಿ ಇರಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಅಂದಾಜು 2,100 ಅನ್ನು ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೇಲೆ ಕಾರ್ಯಾಚರಣೆಯ ಎಚ್ಚರಿಕೆಯ ಸ್ಥಿತಿಯಲ್ಲಿ ಇರಿಸಲಾಗಿದೆ. ಇಲ್ಲಿ ಬಹುತೇಕ ಎಲ್ಲವೂ ರಷ್ಯಾ ಹಾಗೂ ಅಮೆರಿಕ ಸೇರಿವೆ ಎಂದು ವರದಿ ಹೇಳಿದೆ. ಚೀನಾ ತನ್ನ ಕೆಲವು ಸಿಡಿತಲೆಗಳನ್ನು ಹೆಚ್ಚಿನ ಕಾರ್ಯಾಚರಣೆಗೆ ಸಿದ್ಧಪಡಿಸಿ ಇಟ್ಟಿದೆ ಎನ್ನಲಾಗಿದೆ.
ಯುಎಸ್ ಮತ್ತು ರಷ್ಯಾ ಬಗ್ಗೆ ಏನು?
ರಷ್ಯಾ ಮತ್ತು ಯುಎಸ್ ಒಟ್ಟಾಗಿ ಎಲ್ಲಾ ಪರಮಾಣು ಶಸ್ತ್ರಾಸ್ತ್ರಗಳ ಸುಮಾರು 90% ಹೊಂದಿದೆ ಎಂದು SIPRI ವರದಿ ಹೇಳಿದೆ. ಆತಂಕಕಾರಿ ಬೆಳವಣಿಗೆ ಎಂದರೆ, ಫೆಬ್ರವರಿ 2022 ರಲ್ಲಿ ಉಕ್ರೇನ್ನ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ಎರಡೂ ದೇಶಗಳಲ್ಲಿ ಪರಮಾಣು ಶಕ್ತಿಗಳ ಬಗ್ಗೆ ಪಾರದರ್ಶಕತೆ ಕುಸಿದಿದೆ ಎಂದು ವರದಿ ಸೇರಿಸಲಾಗಿದೆ.
ಶ್ರೀನಗರ: ಜಮ್ಮುವಿನ ಇಂಡೋ-ಪಾಕ್ ಗಡಿ ನಿಯಂತ್ರಣ ರೇಖೆಯ (LOC) ಬಳಿ ಸೈನಿಕರೊಂದಿಗೆ, ಎರಡು ಶ್ವಾನಗಳು (Army Dogs) ಯೋಗಾಸನದಲ್ಲಿ ಪಾಲ್ಗೊಂಡಿರುವ ವೀಡಿಯೋವನ್ನು ಭದ್ರತಾ ಪಡೆ ಎಕ್ಸ್ನಲ್ಲಿ ಹಂಚಿಕೊಂಡಿದೆ.
ಭದ್ರತಾ ಪಡೆಗಳು (Indian Army) ಬಿಡುಗಡೆ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಸಶಸ್ತ್ರ ಪಡೆಗಳ ಭಾಗವಾಗಿರುವ ಶ್ವಾನಗಳು, ಸೈನಿಕರು ಯೋಗ ಮಾಡುವುದನ್ನು ಅವುಗಳು ಸಹ ಯೋಗ ಮ್ಯಾಟ್ ಮೇಲೆ ಅನುಸರಿಸಿವೆ. ಸಾಮಾನ್ಯವಾಗಿ ಗಸ್ತು, ಟ್ರ್ಯಾಕಿಂಗ್, ರಕ್ಷಣಾ ಕಾರ್ಯಾಚರಣೆ ಹಾಗೂ ಸ್ಫೋಟಕಗಳ ಪತ್ತೆಯಂತಹ ಕಾರ್ಯಗಳನ್ನು ನಿರ್ವಹಿಸುವ ಶ್ವಾನಗಳು ಇಂದು ಯೋಗ ಮ್ಯಾಟ್ನಲ್ಲಿ ತಮ್ಮ ಚಾಣಾಕ್ಷತೆಯನ್ನು ತೋರಿಸಿರುವುದು ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: Photos Gallery: ಯೋಗ ದಿನಾಚರಣೆ ವೇಳೆ ಕಾಶ್ಮೀರಿ ಮಹಿಳೆಯರೊಂದಿಗೆ ಮೋದಿ ಸೆಲ್ಫಿ!
ವೀಡಿಯೋದಲ್ಲಿ ಎರಡು ಲ್ಯಾಬ್ರಡಾರ್ ಶ್ವಾನಗಳು ಮುಂಭಾಗದ ಸೈನಿಕರ ಸಾಲಿನಲ್ಲಿ ತರಬೇತುದಾರರ ಸೂಚನೆಗಳನ್ನು ಅನುಸರಿಸಿವೆ. ಅಲ್ಲದೇ ಸೈನಿಕರು ಯೋಗ ಭಂಗಿಗಳನ್ನು ಬದಲಿಸಿದಂತೆ ಅವುಗಳು ಸಹ ಅನುಕರಿಸಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಬಿಡುಗಡೆ ಮಾಡಿದ ಮತ್ತೊಂದು ವೀಡಿಯೋದಲ್ಲಿ, ಶ್ವಾನವಾದ ಜಿಮ್ಮಿ, ಪಡೆಯ 13ನೇ ಬೆಟಾಲಿಯನ್ನೊಂದಿಗೆ ಯೋಗ ಪ್ರದರ್ಶಿದೆ. ಈ ವೇಳೆ ತನ್ನದೇ ಆದ ಯೋಗದ ಮ್ಯಾಟ್ ಮೇಲೆ ಕುಳಿತು, ತರಬೇತುದಾರರ ಸೂಚನೆಯಂತೆ ಜಿಮ್ಮಿ ಯೋಗ ಪ್ರದರ್ಶನ ಮಾಡಿದೆ. ಇದನ್ನೂ ಓದಿ: ಕಾಶ್ಮೀರದ ದಾಲ್ ಸರೋವರ ದಡದಲ್ಲಿ ‘ನಮೋ’ ಯೋಗ – PHOTOS ನೋಡಿ
ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿಯೊಂದಿಗೆ ಮುನ್ನುಗ್ಗುತ್ತಿರುವ ಭಾರತ ಶತ್ರು ಸೇನೆಗಳ ಹುಟ್ಟಡಗಿಸಲು ಸೂಕ್ತ ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ಭಾರತ ಸ್ವದೇಶಿ ನಿರ್ಮಿತ ಆಯುಧಗಳನ್ನೇ ಸೇನೆಗೆ ಸೇರ್ಪಡೆಗೊಳಿಸಲು ಸಿದ್ಧತೆ ನಡೆಸಿದೆ. ಕೆಲ ದಿನಗಳ ಹಿಂದೆಯಷ್ಟೇ ಭಾರತ ಅಗ್ನಿ-5 (AGNI – 5) ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ನಡೆಸಿತ್ತು. 5,000 ಕಿಮೀ ದೂರದಲ್ಲಿರುವ ಗುರಿಯನ್ನು ತಲುಪಿ ಶತ್ರುಗಳನ್ನು ಕೊಲ್ಲುವ ಸಾಮರ್ಥ್ಯದ ಈ ಕ್ಷಿಪಣಿಯನ್ನು ರಕ್ಷಣಾ ಸಚಿವಾಲಯ ಸೇನೆಗೆ ಸೇರಿಸುವ ಸಿದ್ಧತೆ ನಡೆಸಿದೆ. ಅಲ್ಲದೇ ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ವದೇಶಿ ನಿರ್ಮಿತ ಆಧುನಿಕ ತಂತ್ರಜ್ಞಾನ ಒಳಗೊಂಡಿರುವ ʻನಾಗಾಸ್ತ್ರʼವನ್ನು (ಆತ್ಮಹತ್ಯಾ ಡ್ರೋನ್) (Suicide Drone) ಭಾರತೀಯ ಸೇನೆಗೆ ಸೇರಿಸುವ ತಯಾರಿ ನಡೆದಿದೆ. ಇದಾದ ಒಂದೆರಡು ದಿನಗಳಲ್ಲೇ ಚೀನಾ ಮತ್ತು ಪಾಕ್ ಗಡಿಯಲ್ಲಿ ಭಾರತ ಗಸ್ತು ಹೆಚ್ಚಿಸಲು 156 ಲಘು ಯುದ್ಧ ಹೆಲಿಕಾಪ್ಟರ್ಗಳ ಖರೀದಿಗೆ ಮುಂದಾಗಿದೆ.
ಹಾಗಾದ್ರೆ ಭಾರತದ ರಕ್ಷಣಾ ವಲಯದಲ್ಲಿ (India’s Defense Sector) ಆಗುತ್ತಿರುವ ಬೆಳವಣಿಗೆಗಳು ಏನು? ಸೇನಾ ಸಾಮರ್ಥ್ಯ ಹೆಚ್ಚಿಸಲು ಯಾವೆಲ್ಲ ಕ್ರಮಗಳನ್ನು ಮತ್ತು ಏಕೆ ಕೈಗೊಳ್ಳಲಾಗುತ್ತಿದೆ? ಅನ್ನೋ ಬಗ್ಗೆ ತಿಳಿಯೋಣ…
ಚೀನಾ-ಪಾಕ್ಗೆ ಠಕ್ಕರ್ ಕೊಡಲು ಪ್ಲ್ಯಾನ್:
ಇತ್ತೀಚೆಗೆ ಚೀನಾ, ಭಾರತದ ಸಿಕ್ಕಿಂನಿಂದ ಸುಮಾರು 150 ಕಿಮೀ ಮೀಟರ್ಗಳಷ್ಟು ದೂರದ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಅತ್ಯಾಧುನಿಕ ಫೈಟರ್ ಜೆಟ್ಗಳನ್ನ ನಿಯೋಜಿಸಿದೆ. ಅಲ್ಲದೇ ಚೀನಾ ನೆರವಿನಿಂದಲೇ ಎದುರಾಳಿ ಪಾಕಿಸ್ತಾನ ಗಡಿ ಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳಿಗೆ ಠಕ್ಕರ್ ಕೊಡಲು ಭಾರತ ಸಹ ತನ್ನ ಸೇನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಭಾರತೀಯ ಸೇನೆಗೆ 90 ಮತ್ತು ಭಾರತೀಯ ವಾಯುಸೇನೆಗೆ 66 ಲಘು ಯುದ್ಧ ಹೆಲಿಕಾಪ್ಟರ್ಗಳ (ಪ್ರಚಂಡ್) ಖರೀದಿಗಾಗಿ ಪ್ರಸ್ತಾವನೆ ಸಲ್ಲಿಸಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಡೆಟ್ಗೆ (HAL) 45,000 ಕೋಟಿ ರೂ.ಗೆ ಟೆಂಡರ್ ನೀಡಿದೆ. `ಪ್ರಚಂಡ್ʼ ಹೇಲಿಕಾಪ್ಟರ್ (Prachand Helicopter) 5,000 ಮೀಟರ್ (16,400 ಅಡಿ) ಎತ್ತರದಲ್ಲಿ ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡುವ ಸಾಮರ್ಥ್ಯ ಹೊಂದಿದ್ದು, ಸಿಯಾಚಿನ್ ಹಿಮನದಿ ಮತ್ತು ಪೂರ್ವ ಲಡಾಖ್ ನಂತಹ ಎತ್ತರದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸೂಕ್ತವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಅಣ್ವಸ್ತ್ರಗಳ ಬಲ ಹೆಚ್ಚಿಸಿಕೊಂಡ ಭಾರತ:
ಹೌದು. ವಿಶ್ವದ 9 ರಾಷ್ಟ್ರಗಳು 2023ರಲ್ಲಿ ಅಣ್ವಸ್ತ್ರಗಳನ್ನು (Nuclear Weapons) ಆಧುನಿಕರಣಗೊಳಿಸುವುದರ ಜೊತೆಗೆ ಹೊಸ ಪರಮಾಣು ಸಾಮರ್ಥ್ಯದ ಶಸ್ತ್ರಾಸ್ತ್ರ ವ್ಯವಸ್ಥೆ ನಿಯೋಜಿಸಿವೆ. ಅಮೆರಿಕ, ರಷ್ಯಾ, ಫ್ರಾನ್ಸ್, ಚೀನಾ, ದಕ್ಷಿಣ ಕೊರಿಯಾ, ಇಸ್ರೇಲ್ ಅಲ್ಲದೇ ಭಾರತವೂ ಸಹ ಈ ರಾಷ್ಟ್ರಗಳ ಪಟ್ಟಿಯಲ್ಲಿದೆ. ಜಾಗತಿಕ ಮಟ್ಟದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಮುನ್ನುಗ್ಗುತ್ತಿರುವ ಭಾರತ ಅಣ್ವಸ್ತ್ರಗಳ ಸಾಮರ್ಥ್ಯವನ್ನೂ ಹೆಚ್ಚಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಸದ್ಯ ಅತಿಹೆಚ್ಚು ಅಣ್ವಸ್ತ್ರಗಳನ್ನು ಹೊಂದಿರುವ ವಿಶ್ವದ ಅಗ್ರ ರಾಷ್ಟ್ರಗಳ ಪೈಕಿ ಭಾರತ 4ನೇ ಸ್ಥಾನಕ್ಕೆ ಏರಿಕೆ. ಅಮೆರಿಕ 5,044, ರಷ್ಯಾ 5,580, ಚೀನಾ 476, ಭಾರತ 172, ಪಾಕಿಸ್ತಾನ 170, ಇಸ್ರೇಲ್ 90, ಉತ್ತರ ಕೊರಿಯಾ 50 ಪರಮಾಣು ಅಸ್ತ್ರಗಳನ್ನು ಒಳಗೊಂಡಿವೆ.
ಶತ್ರುಗಳಲ್ಲಿ ನಡುಕ ಹುಟ್ಟಿಸಿದ ನಾಗಾಸ್ತ್ರ:
ನಾಗಾಸ್ತ್ರ-1 ಡ್ರೋನ್ (Nagastra – 1) ಅನ್ನು ಅತ್ಯಂತ ನಿಖರವಾದ ದಾಳಿ ನಡೆಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದ್ದು, ಜಿಪಿಎಸ್ ನಿರ್ದೇಶನದ ನೆರವಿನಿಂದ ಗುರಿಯ ಕೇವಲ 2 ಮೀಟರ್ ವ್ಯಾಪ್ತಿಯಲ್ಲಿ ನಿಖರ ದಾಳಿ ನಡೆಸಬಲ್ಲದು. ಅಲ್ಲದೇ ಇದು ಸ್ಥಿರ ರೆಕ್ಕೆಗಳನ್ನು ಹೊಂದಿದ್ದು, ಓರ್ವ ವ್ಯಕ್ತಿಯೇ ಕೊಂಡೊಯ್ಯುವಷ್ಟು ಹಗುರವಾಗಿದೆ. ಕೇವಲ 9 ಕೆಜಿ ತೂಕ ಹೊಂದಿದ್ದು, ಗರಿಷ್ಠ 30 ನಿಮಿಷಗಳಷ್ಟು ಕಾಲ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಡ್ರೋನ್ ಹೊಂದಿರುವ ಎಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆಯ ಕಾರಣದಿಂದ, ಇದು ಅತ್ಯಂತ ಕನಿಷ್ಠ ಪ್ರಮಾಣದ ಸದ್ದನ್ನು ಹೊರಹೊಮ್ಮಿಸುತ್ತದೆ. ಡ್ರೋನ್ 200 ಮೀಟರ್ಗಳಿಗಿಂತ ಎತ್ತರದಲ್ಲಿ ಹಾರಾಟ ನಡೆಸುವಾಗ ಅದನ್ನು ಗುರುತಿಸುವುದು ಶತ್ರುಗಳಿಗೆ ಕಷ್ಟಕರವಾಗುತ್ತದೆ.
ನಾಗಾಸ್ತ್ರ ಆತ್ಮಹತ್ಯಾ ಡ್ರೋನ್:
ನಾಗಾಸ್ತ್ರವನ್ನು ಆತ್ಮಹತ್ಯಾ ಡ್ರೋನ್ಗಳೆಂದೂ (ಸುಸೈಡ್ ಡ್ರೋನ್) ಕರೆಯಲಾಗುತ್ತದೆ. ಇವುಗಳು ಒಂದು ಬಾರಿ ಮಾತ್ರವೇ ಪ್ರಯೋಗಿಸಬಲ್ಲ ಆಯುಧಗಳಾಗಿವೆ. ನೇರವಾಗಿ ತಮ್ಮ ಗುರಿಯೆಡೆಗೆ ಸಾಗಿ, ತಮ್ಮನ್ನು ತಾವು ಸ್ಫೋಟಿಸಿಕೊಳ್ಳುತ್ತವೆ. ಇದು ಸರಿಯಾದ ಗುರಿಯನ್ನು ಗುರುತಿಸುವ ತನಕ ಮೇಲ್ಭಾಗದಲ್ಲಿ ಹಾರಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಅವಕಾಶ ಸಿಕ್ಕ ತಕ್ಷಣವೇ ಗುರಿಯ ಮೇಲೆ ದಾಳಿ ನಡೆಸುತ್ತವೆ. ಒಂದು ವೇಳೆ ಗುರಿಯನ್ನು ಗುರುತಿಸಲು ಸಾಧ್ಯವಾಗದಿದ್ದರೆ, ದಾಳಿ ಯೋಜನೆ ರದ್ದುಗೊಳಿಸಿದರೆ, ಗಾಳಿಯಲ್ಲಿ ಅಡ್ಡಾಡುವ ಡ್ರೋನ್ ಅನ್ನು ಮರಳಿ ಹಿಂದಕ್ಕೆ ಕರೆಸಿಕೊಳ್ಳಬಹುದು. ಅದಕ್ಕಾಗಿ ಅನುಕೂಲಕರ ಲ್ಯಾಂಡಿಂಗ್ ಮಾಡಲು ಪ್ಯಾರಾಚುಟ್ ರಿಕವರಿ ವ್ಯವಸ್ಥೆಯನ್ನೂ ಹೊಂದಿದೆ. ಇದರಿಂದಾಗಿ ಡ್ರೋನ್ ಮರುಬಳಕೆಗೆ ಲಭ್ಯವಾಗುತ್ತದೆ.
ಇಷ್ಟೇ ಅಲ್ಲ, ಕಳೆದ ವರ್ಷವೂ ಸಹ ಭಾರತದ ರಕ್ಷಣಾ ಸಚಿವಾಲಯ ಸುಮಾರು 45,000 ಕೋಟಿ ರೂ. ಮೌಲ್ಯದ ವಿವಿಧ ಆಯುಧಗಳ ಖರೀದಿಗೆ ಒಪ್ಪಿಗೆ ಸೂಚಿಸಿತ್ತು. ಧ್ರುವಾಸ್ತ್ರ ಕ್ಷಿಪಣಿಗಳು, ಭಾರತ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಾಣದ 12 ಸುಖೋಯ್-30 MKI ಯುದ್ಧ ವಿಮಾನಗಳು, ಆರ್ಟಿಲರಿ ಗನ್ಗಳು ಮತ್ತು ರೇಡಾರ್ಗಳನ್ನ ಕ್ಷಿಪ್ರವಾಗಿ ಸಾಗಿಸಲು ಅತ್ಯವಶ್ಯಕವಾದ ಹೈ ಮೊಬಿಲಿಟಿ ವೆಹಿಕಲ್ ಹಾಗೂ ಗನ್ ಟೋವಿಂಗ್ ವೆಹಿಕಲ್ಸ್ಗಳನ್ನ ಖರೀದಿಸಲು ಅನುಮೋದನೆ ನೀಡಿತ್ತು.
ಗಾಳಿಯಿಂದ ಭೂಮಿಗೆ ದಾಳಿ ನಡೆಸುವ ʻಧ್ರುವಾಸ್ತ್ರʼ:
ಭಾರತದ ದೇಶೀಯ ನಿರ್ಮಾಣದ ಹೆಲಿಕಾಪ್ಟರ್ ಲಾಂಚ್ಡ್ ನಾಗ್ (ಹೆಲಿನಾ) ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ATGM) ಎಲ್ಲ ಪರೀಕ್ಷೆಗಳನ್ನೂ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಹೆಲಿನಾ ಭಾರತೀಯ ಭೂಸೇನೆಯ ಆವೃತ್ತಿಯಾದರೆ, ಭಾರತೀಯ ವಾಯುಪಡೆಯ ಆವೃತ್ತಿಯನ್ನ ಧ್ರುವಾಸ್ತ್ರ ಎಂದು ಕರೆಯಲಾಗುತ್ತದೆ. ಈ ಧ್ರುವಾಸ್ತ್ರವೂ ತನ್ನ ಆರಂಭಿಕ ಪ್ರಾಯೋಗಿಕ ಪರೀಕ್ಷೆಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಧ್ರುವಾಸ್ತ್ರ ಅವಳಿ ಲಾಂಚರ್ಗಳನ್ನ ಹೊಂದಿದ್ದು, ಒಟ್ಟು 8 ಕ್ಷಿಪಣಿಗಳನ್ನ ಒಯ್ಯುವ ಸಾಮರ್ಥ್ಯ ಹೊಂದಿದೆ. ಇದರ ಕ್ಷಿಪಣಿ ಗರಿಷ್ಠ 4 ಕಿಮೀ ಗಳಷ್ಟು ಎತ್ತರದಿಂದ ಉಡಾವಣೆಗೊಳಿಸಬಹುದಾಗಿದೆ. ಪ್ರತಿ ಗಂಟೆಗೆ 70 ಕಿಮೀ ಗಳಷ್ಟು ವೇಗದಲ್ಲಿ ನಿಖರವಾಗಿ ದಾಳಿ ನಡೆಸಬಲ್ಲದು. ಧ್ರುವಾಸ್ತ್ರ ಕ್ಷಿಪಣಿ 43 ಕೆಜಿ ತೂಕ ಹೊಂದಿರಲಿದೆ. ಇದು ಇದರ ಮೂಲ ವಿನ್ಯಾಸವಾದ ನಾಗ್ ಕ್ಷಿಪಣಿಯಷ್ಟೇ ತೂಕ ಹೊಂದಿದೆ. ಇದರ ಸಿಡಿತಲೆ 8 ಕೆಜಿಗಳಷ್ಟು ತೂಕವಿದೆ. ಇದು ಅಂದಾಜು 1.85 – 1.9 ಮೀಟರ್ (6 ಅಡಿ) ಉದ್ದವಿದ್ದು, 0.16-0.2 ಮೀಟರ್ (8 ಇಂಚ್) ಅಗಲ ಇರಲಿದೆ. ಧ್ರುವಾಸ್ತ್ರ ಸಹ ಈಗಾಗಲೇ ಪ್ರಾಯೋಗಿಕ ಪರೀಕ್ಷೆಗಳನ್ನ ಯಶಸ್ವಿಗೊಳಿಸಿದ್ದು, ಸೇನೆಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
– ಪೂಂಚ್, ರಜೌರಿಯಲ್ಲೂ ಉಗ್ರರ ದಾಳಿಗೆ ಪಾಕ್ ಸಂಚು – ಗುಪ್ತಚರ ಇಲಾಖೆ ಮಾಹಿತಿ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu And Kashmir) ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ (IB) ಬಳಿ ಹಳ್ಳಿಯೊಂದರಲ್ಲಿ ಇತ್ತೀಚೆಗೆ ನಡೆದ ಎನ್ಕೌಂಟರ್ನಲ್ಲಿ (Kathua Encounter) ಭದ್ರತಾಪಡೆಗಳು ಹತ್ಯೆಗೈದ ಇಬ್ಬರು ಭಯೋತ್ಪಾದಕರಲ್ಲಿ ಓರ್ವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ಎಂದು ಮೂಲಗಳಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ, ಹತ್ಯೆಗೀಡಾದ ಇಬ್ಬರಲ್ಲಿ ಓರ್ವ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರ್ ರಿಹಾನ್ ಎಂದು ಗುರುತಿಸಲಾಗಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಪಾಕ್ (Pakistan) ಕೈವಾಡವಿದೆ ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ದೆಹಲಿಯ ಯಮುನಾ ಬಳಿಯ ಪ್ರಾಚೀನ ಶಿವಮಂದಿರ ಕೆಡವಲು ನೀಡಿದ ಆದೇಶ ಎತ್ತಿಹಿಡಿದ ಸುಪ್ರೀಂ
ಹತ್ಯೆಗೀಡಾದ ರಿಹಾನ್, ಉಪಗ್ರಹ ಸಂವಹನ ಸಾಧನ (ಸ್ಯಾಟಲೈಟ್ ಫೋನ್) ಹಾಗೂ ಅತ್ಯಾಧುನಿಕ M4 ರೈಫಲ್ ಅನ್ನು ಹೊತ್ತೊಯ್ಯುತ್ತಿದ್ದ. ಪಾಕಿಸ್ತಾನ ಸೇನೆ, ನೌಕಾಪಡೆ ಹಾಗೂ ವಾಯುಸೇನೆಗಾಗಿ ಈ ಮೈಕ್ರೋ ಸ್ಯಾಟಲೈಟ್ ಫೋನ್ ಅನ್ನು ಖರೀದಿಸಲಾಗಿತ್ತು ಎಂದು ಉನ್ನ ಮೂಲಗಳಿಂದ ತಿಳಿದುಬಂದಿದೆ.
ಈ ಉಗ್ರರ ಹತ್ಯೆ ನಡೆಯುವುದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ವೇಳೆ ಭಯೋತ್ಪಾದಕ ದಾಳಿ ನಡೆದಿತ್ತು. ಬಸ್ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಪರಿಣಾಮ ಬಸ್ ಕಮರಿಗೆ ಉರುಳಿ ಬಿದ್ದಿತ್ತು. ಈ ವೇಳೆ 9 ಪ್ರಯಾಣಿಕರು ಹತರಾಗಿದ್ದರು. ಇದಾದ ಬಳಿಕ ದೋಡಾ ಜಿಲ್ಲೆಯಲ್ಲಿ 4 ಭಯೋತ್ಪಾದಕ ದಾಳಿ ನಡೆದಿತ್ತು. ಉಗ್ರರು ಮತ್ತು ಸೇನೆ ನಡುವಿನ ಗುಂಡಿನ ಚಕಮಕಿಯಲ್ಲಿ ಸಿಆರ್ಪಿಎಫ್ ಯೋಧ ಮತ್ತು ಇಬ್ಬರು ಭಯೋತ್ಪಾದಕರು ಸೇರಿ 11 ಮಂದಿ ಹತರಾಗಿದ್ದರು.
ಉಗ್ರರ ಮಹತ್ವದ ಸಭೆ:
ಜೂನ್ 9ರಂದು ರಿಯಾಸಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಜೈಶ್ ಎ ಮೊಹಮ್ಮದ್ ಮತ್ತು ಹಿಜ್ಬ್-ಉಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದ ರಾವಲಕೋಟ್ನಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ್ದವು. ಈ ವೇಳೆ ಭಾರತದ ಮೇಲಿನ ದಾಳಿಗೆ ಯೋಜಿಸಿದ್ದವು ಎಂದು ತಿಳಿದುಬಂದಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ (Jammu Kashmir) ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪರಿಶೀಲನಾ ಸಭೆ ನಡೆಸಿದ ಕಲವೇ ಗಂಟೆಗಳಲ್ಲಿ ರಿಯಾಸಿ ಬಸ್ (Reasi Bus Attack) ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸರು 50 ಮಂದಿ ಸ್ಥಳೀಯರನ್ನು ವಶಕ್ಕೆ ಪಡೆದಿದ್ದಾರೆ.
1995 ಮತ್ತು 2005 ನಡುವೆ ರಿಯಾಸಿ ಜಿಲ್ಲೆಯ ಜಿಲ್ಲೆಯ ಅರ್ನಾಸ್ ಮತ್ತು ಮಹೋರ್ ಪ್ರದೇಶಗಳು ಉಗ್ರರಿಗೆ ಸುರಕ್ಷಿತ ತಾಣವಾಗಿತ್ತು. ಹೀಗಾಗಿ 50 ಮಂದಿಯನ್ನು ವಶ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ರಿಯಾಸಿ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಸುಳಿವು ಸಿಕ್ಕಿದೆ. ಅರ್ನಾಸ್ ಮತ್ತು ಮಹೋರ್ನ ದೂರದ ಪ್ರದೇಶ ಒಳಗೊಂಡಂತೆ ಶೋಧ ಕಾರ್ಯಾಚರಣೆಗಳನ್ನು ವಿಸ್ತರಿಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಭಯೋತ್ಪಾದನೆ ಮುಕ್ತ ಪ್ರದೇಶವೆಂದು ಗುರುತಿಸಲಾದ ಪ್ರದೇಶಗಳಲ್ಲಿ ಈಗ ದಾಳಿಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ರಿಯಾಸಿ ಹೊರತುಪಡಿಸಿ, ಮಂಗಳವಾರ ಕಥುವಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಮರುದಿನ, ದೋಡಾ ಜಿಲ್ಲೆಯಲ್ಲಿ ಪೊಲೀಸ್ ಚೆಕ್ ಪೋಸ್ಟ್ ಮೇಲೆ ದಾಳಿ ನಡೆಸಿದ್ದರು
ರಿಯಾಸಿಯಲ್ಲಿ ಬಸ್ ಮೇಲೆ ದಾಳಿ ನಡೆಸಿದ ನಾಲ್ವರು ಶಂಕಿತ ಭಯೋತ್ಪಾದಕರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ಅವರ ಬಗ್ಗೆ ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ದೋಡಾದಲ್ಲಿ ಸೇನೆಯ ಚೆಕ್ಪೋಸ್ಟ್ ಮೇಲೆ ನಡೆದ ದಾಳಿಯಲ್ಲಿ (Doda terrorist attack) ಭಾಗಿಯಾಗಿದ್ದ ನಾಲ್ವರು ಉಗ್ರರ ರೇಖಾಚಿತ್ರವನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಭಯೋತ್ಪಾದಕರ ಬಂಧನಕ್ಕೆ ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಕಾಶ್ಮೀರ ಪೊಲೀಸರು (Jammu and Kashmir Police) ಘೋಷಿಸಿದ್ದಾರೆ.
ಮಂಗಳವಾರ (ಜೂ.11) ಭದೇರ್ವಾಹ್ನ ಚಟರ್ಗಲ್ಲದಲ್ಲಿ 4 ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸರ ಜಂಟಿ ಚೆಕ್ಪೋಸ್ಟ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಅಲ್ಲದೇ ಜಿಲ್ಲೆಯ ಗಂಡೋ ಪ್ರದೇಶದಲ್ಲಿ ಬುಧವಾರ ಶೋಧ ಕಾರ್ಯದ ವೇಳೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಸೇರಿ ಆರು ಭದ್ರತಾ ಸಿಬ್ಬಂದಿ (Indian Army) ಗಾಯಗೊಂಡಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಎನ್ಕೌಂಟರ್; ಸೇನಾ ದಾಳಿಗೆ ಇಬ್ಬರು ಉಗ್ರರು ಬಲಿ
ಉಗ್ರರು ಭದರ್ವಾ, ಥಾತ್ರಿ, ಗಂಡೋಹ್ನ ಮೇಲ್ಭಾಗದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪ್ರತಿ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ನಗದು ಬಹುಮಾನವನ್ನೂ ಘೋಷಿಸಲಾಗಿದೆ. ಈ ಭಯೋತ್ಪಾದಕರ ಉಪಸ್ಥಿತಿ ಮತ್ತು ಚಲನವಲನದ ಬಗ್ಗೆ ಮಾಹಿತಿ ನೀಡುವಂತೆ ಜನರಿಗೆ ಮಾಹಿತಿ ನೀಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ರಿಯಾಸಿ ಜಿಲ್ಲೆಯಲ್ಲಿ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ತೆರಳುತ್ತಿದ್ದ ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಬಸ್ ಆಳವಾದ ಕಮರಿಗೆ ಉರುಳಿ 9 ಜನ ಸಾವನ್ನಪ್ಪಿ, 41 ಮಂದಿ ಗಾಯಗೊಂಡಿದ್ದರು. ಈ ಬಗ್ಗೆಯೂ ಪೊಲೀಸರು ಹಾಗೂ ಸೇನೆ ಉಗ್ರರ ಮಾಹಿತಿ ಕಲೆ ಹಾಕುತ್ತಿದೆ. ಈ ಸಂಬಂಧ ಉಗ್ರರ ಮಾಹಿತಿ ನೀಡಿದವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ದೋಡಾದ ಸೇನಾ ಪೋಸ್ಟ್ ಮೇಲೆ ಉಗ್ರರ ದಾಳಿ
ಶ್ರೀನಗರ: ಜಮ್ಮು ಕಾಶ್ಮೀರದ (Jammu Kashmir) ದೋಡಾದಲ್ಲಿ (Doda) ಮಂಗಳವಾರ ರಾತ್ರಿ ಸೇನಾ ಪೋಸ್ಟ್ ಮೇಲೆ ದಾಳಿ (Terrorists Attack ) ನಡೆಸಿದ ನಂತರ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ ನಡೆಯುತ್ತಿದೆ ಎಂದು ವರದಿಯಾಗಿದೆ.
ರಿಯಾಸಿಯಲ್ಲಿ (Reasi Attack) ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ದಾಳಿ, ಕಥುವಾದಲ್ಲಿ (Kathua) ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಒಬ್ಬ ನಾಗರಿಕ ಗಾಯಗೊಂಡ ನಂತರ ನಡೆದ ಮೂರನೇ ಘಟನೆ ಇದಾಗಿದೆ.
#WATCH | Doda, J&K: Injured being brought to the Sub District Hospital Bhaderwah as an encounter is underway between security forces and terrorists in the Chattargala area of Doda. pic.twitter.com/BxXaus49Qd
ರಾತ್ರಿ ಕಥುವಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ ಎಂದು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಹೇಳಿದ್ದಾರೆ. ಇದನ್ನೂ ಓದಿ: 30 ಲಕ್ಷಕ್ಕೆ ಡೀಲ್ – ಕೊಲೆ ಮಾಡಿ ದರ್ಶನ್ ಟೀಂ ಸಿಕ್ಕಿಬಿದ್ದಿದ್ದೇ ರೋಚಕ!
ದೋಡಾ ಘಟನೆಯ ಬಗ್ಗೆ ಮಾತನಾಡಿದ ಅವರು, ತಡರಾತ್ರಿ ಚಟರ್ಗಾಲಾ ಪ್ರದೇಶದ ಸೇನಾ ನೆಲೆಯಲ್ಲಿ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದರು.
ಭದ್ರತಾ ಪಡೆಗಳು ಈಗ ಕಥುವಾದ ಹೀರಾನಗರ ಪ್ರದೇಶದಲ್ಲಿ ಡ್ರೋನ್ ಬಳಸಿಕೊಂಡು ಉಳಿದಿರುವ ಭಯೋತ್ಪಾದಕನನ್ನು ಹುಡುಕುತ್ತಿವೆ.
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪುಲ್ವಾಮಾ (Pulwama) ಜಿಲ್ಲೆಯಲ್ಲಿ ಭದ್ರತಾ ಪಡೆಗಳು (Indian Army) ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
— Kashmir Zone Police (@KashmirPolice) June 3, 2024
ದಕ್ಷಿಣ ಕಾಶ್ಮೀರ ಜಿಲ್ಲೆಯ ನಿಹಾಮಾ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸೇನೆ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ.
ಹತ್ಯೆಗೀಡಾದ ಭಯೋತ್ಪಾದಕರ ಗುರುತು ಮತ್ತು ಸಂಘಟನೆಯನ್ನು ಪತ್ತೆ ಮಾಡಲಾಗುತ್ತಿದೆ.
ಬೆಂಗಳೂರು: ಎಐಸಿಸಿ ರಾಷ್ಟ್ರೀಯ ಸಂಯೋಜಕಿ ಭವ್ಯ ನರಸಿಂಹ ಮೂರ್ತಿಯವರು (Bhavya Narasimhamurthy) ಭಾರತೀಯ ಪ್ರಾದೇಶಿಕ ಸೇನೆಯಲ್ಲಿ (Indian Army) ಕಮಿಷನಡ್ ಆಫೀಸರ್ (Territorial army Commissioned Officer) ಆಗಿ ನಿಯೋಜನೆಗೊಂಡಿದ್ದಾರೆ. ಅವರು ಕಾಶ್ಮೀರದಲ್ಲಿ ಭಾರತ, ಪಾಕಿಸ್ಥಾನ ಗಡಿಯ ಬಳಿಯಿರುವ ಭಾರತೀಯ ಸೇನಾ ಘಟಕದಲ್ಲಿ ತರಬೇತಿ ಪಡೆದು ಲೆಫ್ಟಿನೆಂಟ್ ಆಗಿ ನಿಯೋಜನೆಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಭವ್ಯ ನರಸಿಂಹಮೂರ್ತಿ, ದಕ್ಷಿಣ ಭಾರತದಿಂದ ಆಯ್ಕೆಯಾಗಿರುವ ಮೊದಲ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿ ಹಾಗೂ 2022 ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದ ಏಕೈಕ ಮಹಿಳಾ ಪ್ರಾದೇಶಿಕ ಸೇನಾ ಅಧಿಕಾರಿಯಾಗಿದ್ದೇನೆ. ಇನ್ನು ಮುಂದೆ ನಾನು ದೇಶದ ಒಳಗೆ ರಾಜಕಾರಣಿಯಾಗಿ ನನ್ನ ಜನರ ಸೇವೆ ಮಾಡುವುದರ ಜೊತೆಗೆ ಭಾರತೀಯ ಸೇನಾಧಿಕಾರಿಯಾಗಿ ನನ್ನ ದೇಶ ಕರೆದಾಗ ಗಡಿಯಲ್ಲಿ ದೇಶದ ರಕ್ಷಣೆ ಮಾಡಲೂ ಸಿದ್ಧಳಿದ್ದೇನೆ ಎಂದಿದ್ದಾರೆ.
ಪ್ರಸ್ತುತ ಪ್ರಾದೇಶಿಕ ಸೇನೆಯಲ್ಲಿರುವ ಕೆಲವು ಪ್ರಮುಖ ವ್ಯಕ್ತಿಗಳಲ್ಲಿ ಕ್ರಿಕೆಟ್ ಆಟಗಾರ ಎಂ.ಎಸ್ ಧೋನಿ, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಮಂತ್ರಿ ಸಚಿನ್ ಪೈಲಟ್, ಮಾಜಿ ಕೇಂದ್ರ ಸಚಿವ ಅನುರಾಗ ಠಾಕುರ್ ಸೇರಿದ್ದಾರೆ.