Tag: india

  • ಭಾರತ -ಅಫ್ಘಾನಿಸ್ಥಾನ ಟೆಸ್ಟ್ ಕ್ರಿಕೆಟ್‍ಗೆ ಶುಭಕೋರಿದ ಪ್ರಧಾನಿ ಮೋದಿ

    ಭಾರತ -ಅಫ್ಘಾನಿಸ್ಥಾನ ಟೆಸ್ಟ್ ಕ್ರಿಕೆಟ್‍ಗೆ ಶುಭಕೋರಿದ ಪ್ರಧಾನಿ ಮೋದಿ

    ಬೆಂಗಳೂರು: ಇದೇ ಮೊದಲ ಬಾರಿಗೆ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯ ಆಡುತ್ತಿರುವ ಅಫ್ಘಾನಿಸ್ಥಾನ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.

    ಬುಧವಾರ ಟ್ವೀಟ್ ಮಾಡಿರುವ ನರೇಂದ್ರ ಮೋದಿ ಅವರು, ಅಫ್ಘಾನಿಸ್ಥಾನ ತಂಡವು ಮೊದಲ ಬಾರಿಗೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಆಡಲು ಭಾರತವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಅಭಿನಂದನೆ. ಇದೊಂದು ಐತಿಹಾಸಿಕ ಪಂದ್ಯವಾಗಿದ್ದು, ನಮ್ಮ ನೆಲವನ್ನು ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ಉಭಯ ತಂಡಗಳಿಗೆ ಶುಭವಾಗಲಿ. ಕ್ರೀಡೆ ಎರಡು ದೇಶಗಳ ಜನರನ್ನು ಮತ್ತಷ್ಟು ಹತ್ತಿರಗೊಳಿಸುತ್ತಿದೆ ಹಾಗೂ ಸಂಬಂಧ ಬಲಪಡಿಸುತ್ತದೆ ಎಂದು ಬರೆದಿದ್ದಾರೆ.

    ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ನಲ್ಲಿ ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಇತ್ತೀಚಿನ ವರದಿ ಬಂದಾಗ 45.1 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 248 ರನ್ ಗಳಿಸಿದೆ.

    ಶಿಖರ್ ಧವನ್ 107 ರನ್(96 ಎಸೆತ, 19 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟಾದರು. ಮುರಳಿ ವಿಜಯ್ ಔಟಾಗದೇ 94 ರನ್(128 ಎಸೆತ, 14 ಬೌಂಡರಿ, 1 ಸಿಕ್ಸ್), ಕೆಎಲ್ ರಾಹುಲ್ ರಾಹುಲ್ ಔಟಾಗದೇ 33 ರನ್(48 ಎಸೆತ, 4 ಬೌಂಡರಿ) ಹೊಡೆದಿದ್ದಾರೆ.

  • ಅಮೆರಿಕ, ಕೊರಿಯಾದಂತೆ ಪಾಕ್, ಭಾರತ ಯಾಕೆ ಮಾತುಕತೆ ನಡೆಸಬಾರದು: ಶರೀಫ್ ಸಹೋದರ ಟ್ವೀಟ್

    ಅಮೆರಿಕ, ಕೊರಿಯಾದಂತೆ ಪಾಕ್, ಭಾರತ ಯಾಕೆ ಮಾತುಕತೆ ನಡೆಸಬಾರದು: ಶರೀಫ್ ಸಹೋದರ ಟ್ವೀಟ್

    ನವದೆಹಲಿ: ಉತ್ತರ ಕೊರಿಯಾ ಹಾಗೂ ಅಮೆರಿಕ ಪರಸ್ಪರ ಮಾತುಕತೆ ನಡೆಸಿದಂತೆ ಭಾರತ ಮತ್ತು ಪಾಕಿಸ್ತಾನ ಮಾತುಕತೆ ನಡೆಸಲಿ ಎಂದು ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್ ರ ಸಹೋದರ ಶಹಬಾಜ್ ಶರೀಫ್ ಹೇಳಿದ್ದಾರೆ.

    ಏಳು ದಶಕಗಳ ವೈರತ್ವವನ್ನು ಬದಿಗೊತ್ತಿ ಅಮೆರಿಕ-ಉತ್ತರ ಕೊರಿಯಾ ಪರಸ್ಪರ ಮಾತುಕತೆಗೆ ಬಂದಿವೆ. ಹಲವು ವರ್ಷಗಳ ಕಾಲ ತಮ್ಮ ಶಕ್ತಿ ಪ್ರದರ್ಶನಗಳಲ್ಲಿಯೇ ನಿಂತರೂ ಸದ್ಯ ಎರಡು ರಾಷ್ಟ್ರಗಳು ಚರ್ಚೆ ನಡೆಸಿದ ಮಾದರಿಯಲ್ಲೇ ಭಾರತ ಹಾಗೂ ಪಾಕಿಸ್ತಾನ ಯಾಕೆ ಮಾತುಕತೆ ನಡೆಸಬಾರದು ಎಂದು ಅವರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಶಹಬಾಜ್ ಶರೀಫ್, ಮತ್ತೊಮ್ಮೆ ಭಾರತವನ್ನು ಗುರಿ ಮಾಡಿರುವ ಅವರು ಭಾರತ ಜಮ್ಮು ಕಾಶ್ಮೀರ ಪ್ರದೇಶ ಮೇಲೆ ಆಕ್ರಮಣ ಮಾಡಿದೆ. ಇದನ್ನ ಕಾಶ್ಮೀರದ ಜನರು ವಿರೋಧಿಸಿದ್ದಾರೆ ಎಂದು ತಮ್ಮ ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.

    ಕಾಶ್ಮೀರ ಭಾಗದಲ್ಲಿ ಶಾಂತಿ ಕಾಪಾಡುವುದು ಅಗತ್ಯವಾಗಿದ್ದು, ಜಗತ್ತಿನ ಸಮುದಾಯವು ಇನ್ನು ಗಮನಿಸಬೇಕಾಗಿದೆ. ಅಫ್ಘಾನಿಸ್ತಾನ, ಪಾಕಿಸ್ತಾನ ಒಳಪಟ್ಟಂತೇ ಹಲವು ವರ್ಷಗಳಿಂದ ಇರುವ ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ನಿಯಮಗಳಂತೆ ಬಗೆಹರಿಸಬೇಕಿದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಸಿಂಗಾಪುರದಲ್ಲೇ ಟ್ರಂಪ್-ಕಿಮ್ ಭೇಟಿಯಾಗಿದ್ದು ಯಾಕೆ?

  • ಮಾಜಿ ಪ್ರಧಾನಿ ವಾಜಪೇಯಿ ಏಮ್ಸ್ ಆಸ್ಪತ್ರೆಗೆ ದಾಖಲು

    ಮಾಜಿ ಪ್ರಧಾನಿ ವಾಜಪೇಯಿ ಏಮ್ಸ್ ಆಸ್ಪತ್ರೆಗೆ ದಾಖಲು

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    93 ವರ್ಷದ ವಾಜಪೇಯಿ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.

    ವಾಜಪೇಯಿ ಅವರು 1991, 1996, 1998, 1999 ಹಾಗೂ 2004ರಲ್ಲಿ ಲಕ್ನೋ ಲೋಕಸಭಾ ಕ್ಷೇತ್ರದಿಂದ ಆಯ್ಕೆ ಆಗಿದ್ದರು. 1924ರಲ್ಲಿ ಜನಿಸಿದ ವಾಜಪೇಯಿ ಅವರು 1942 `ಭಾರತ ಬಿಟ್ಟು ತೊಲಗಿ ಚಳುವಳಿ’ಯಲ್ಲಿ ರಾಜಕಾರಣಕ್ಕೆ ಪ್ರವೇಶಿಸಿದ್ದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಮೊದಲ ವಿದೇಶಾಂಗ ವ್ಯವಹಾರಗಳ ಸಚಿವ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

  • ಮಕ್ಕಳನ್ನು ಹುಟ್ಟಿಸೋದ್ರಲ್ಲಿ ಭಾರತ ನಂ.1, ಇದಕ್ಕೆ ಪ್ರಶಸ್ತಿ ಕೊಡಬೇಕು : ಆಂಜನೇಯ

    ಮಕ್ಕಳನ್ನು ಹುಟ್ಟಿಸೋದ್ರಲ್ಲಿ ಭಾರತ ನಂ.1, ಇದಕ್ಕೆ ಪ್ರಶಸ್ತಿ ಕೊಡಬೇಕು : ಆಂಜನೇಯ

    ಕೊಪ್ಪಳ: ಪ್ರಪಂಚದಲ್ಲಿ ಭಾರತಕ್ಕೆ ಬಹುಮಾನ ಸಿಗಬೇಕಾದರೆ ಅದು ಮಕ್ಕಳು ಹುಟ್ಟಿಸುವುದಲ್ಲಿ ಮಾತ್ರ. ಮಕ್ಕಳನ್ನು ಹುಟ್ಟಿಸುವುದರಲ್ಲಿ ಭಾರತವು ನಂಬರ್ ಒನ್ ಆಗಿದೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದ್ದಾರೆ.

    ಜಿಲ್ಲೆಯ ಕುಷ್ಟಗಿ ಪಟ್ಟಣದ ದೇವದಾಸಿ ತಾಯಂದಿರ ಮಕ್ಕಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಸಮಾನತೆ ಇಲ್ಲ, ಜಾತಿ ವ್ಯವಸ್ಥೆ ಹೋಗಿಲ್ಲ. ಬಡವ ಶ್ರೀಮಂತ ಎಂಬ ಬೇದ ಹೋಗಿಲ್ಲ. ಆದರೆ ನಾವು ಮಕ್ಕಳನ್ನು ಹುಟ್ಟಿಸುವುದರಲ್ಲಿ ಮಾತ್ರ ನಂಬರ್ ಎಂದು ಹೇಳಿದರು.

    ನಾನು ಸಹ ಇದಕ್ಕಾಗಿಯೇ ಎರಡು ಮಕ್ಕಳನ್ನು ಮಾತ್ರ ಪಡೆದಿದ್ದೇನೆ. ನೀವು ಕೂಡ ಮಕ್ಕಳನ್ನು ಹುಟ್ಟಿಸುವುದರಲ್ಲಿ ಬ್ರೇಕ್ ಹಾಕಿ ಎಂದು ನವ ವಧು-ವರರಿಗೆ ಕಿವಿ ಮಾತು ಹೇಳಿದರು.

    ದೇವರನ್ನು ಪೂಜಿಸ ಬೇಡಿ: ಇದೇ ವೇಳೆ ಸಮಾರಂಭದಲ್ಲಿದವರಿಗೆ ದೇವರಿಗೆ ಹೆಚ್ಚು ಪೂಜೆ ಮಾಡಬೇಡಿ. ಪೂಜೆ ಮಾಡಿಯೇ ನಾವು ಅರ್ಧ ಹಾಳಾಗಿದ್ದೇವೆ. ದೇವರು ಎಲ್ಲಾ ನಿಮಗೇ ಕೊಟ್ಟಿದ್ದಾರೆ. ನೀವು ಬಸವಣ್ಣ ನವರ ಕಾಯಕವೇ ಕೈಲಾಸ ಎಂಬ ಮಾತಿಗೆ ಕಟ್ಟು ಬಿದ್ದು ದುಡಿಯಿರಿ. ಕಾಯಕದಲ್ಲಿ ದೇವರನ್ನು ಕಾಣಿರಿ ಎಂದು ಹೇಳಿದರು.

    ಜಾತ್ರೆ ಮಾಡಿ ಹಾಳು: ನಮ್ಮ ಜನಾಂಗದವರು 8 ರಿಂದ 10 ದಿನ ಕೋಣ, ಕುರಿ ಬಲಿ ಕೊಟ್ಟು, ಸಾಲ ಮಾಡಿ ಹಲವು ದೇವರ ಹೆಸರುಗಳಲ್ಲಿ ಜಾತ್ರೆ ಮಾಡಿ ಹಾಳಾಗಿ ಹೋಗುತ್ತಿದ್ದೀರಾ. ಸದ್ಯ ಅದಕ್ಕೆಲ್ಲಾ ಬ್ರೇಕ್ ಹಾಕಿ ಎಂದರು.

  • ನಿಷೇಧಗೊಂಡ ನೋಟುಗಳನ್ನು ಖರೀದಿಸುತ್ತಿದೆ ಪಾಕಿಸ್ತಾನ!

    ನಿಷೇಧಗೊಂಡ ನೋಟುಗಳನ್ನು ಖರೀದಿಸುತ್ತಿದೆ ಪಾಕಿಸ್ತಾನ!

    ನವದೆಹಲಿ: ಭಾರತದಲ್ಲಿ ನಿಷೇಧಗೊಂಡ ನೋಟುಗಳನ್ನು ಪಾಕಿಸ್ತಾನ ಸಂಗ್ರಹಿಸುತ್ತಿದ್ದು, ಅವುಗಳನ್ನು ಪುನರ್ಬಳಕೆ ಮಾಡಿ ಹೊಸ ನಕಲಿ ನೋಟುಗಳನ್ನು ಮುದ್ರಿಸುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಪಾಕಿಸ್ತಾನದ ಗೂಢಾಚಾರ ಸಂಸ್ಥೆ ಐಎಸ್‍ಐ ಭಾರತದಲ್ಲಿ ಅಮಾನ್ಯೀಕರಣಗೊಂಡ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಭಾರೀ ಪ್ರಮಾಣದಲ್ಲಿ ಸಂಗ್ರಹಿಸುತ್ತಿದೆ. ತನ್ನ ಏಜೆಂಟರ್ ಮೂಲಕ ಭಾರತದ ವಿವಿಧ ರಾಜ್ಯಗಳಿಂದ ಲಕ್ಷಗಟ್ಟಲೆ ಹಳೆಯ ನೋಟುಗಳನ್ನು ಸಂಗ್ರಹ ಮಾಡುತ್ತಿದೆ ಎಂದು ಗುಪ್ತಚರ ಇಲಾಖೆಗ ಮೂಲಗಳನ್ನು ಆಧಾರಿಸಿ ವಾಹಿನಿಯೊಂದು ವರದಿ ಮಾಡಿದೆ.

    ಹಳೆಯ ನೋಟುಗಳನ್ನು ನೇಪಾಳ ಮೂಲಕ ಪಾಕಿಸ್ತಾನಕ್ಕೆ ಕಳ್ಳಸಾಗಾಣೆ ಮಾಡುತ್ತಿದೆ. ಬಳಿಕ ಅಲ್ಲಿಂದ ಈ ನೋಟುಗಳನ್ನು ಕರಾಚಿ ಮತ್ತು ಪೇಶಾವರದಲ್ಲಿರುವ ಪ್ರಿಂಟಿಂಗ್ ಪ್ರೆಸ್‍ಗಳಿಗೆ ರವಾನಿಸಿ, ನೋಟುಗಳಲ್ಲಿರುವ ಆರ್‍ಬಿಐನ ನೋಟಿನಲ್ಲಿ ಹಾಕಿರುವ ಭದ್ರತಾ ವಿಶೇಷತೆಗಳ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ ಎಂದು ಹೇಳಿದೆ.

    ಹಳೆಯ ನೋಟುಗಳ ಬಳಸಿಕೊಂಡು 500, 2000 ಹಾಗೂ 50 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ಮುದ್ರಿಸುತ್ತಿದೆ. ಭೂಗತಪಾತಕಿ ದಾವೂದ್ ಇಬ್ರಾಹಿಂನ ಸಹಾಯದಿಂದ ಈ ನಕಲಿ ನೋಟುಗಳನ್ನು ಬಾಂಗ್ಲಾ ಮತ್ತು ದುಬೈಗೆ ರಫ್ತು ಮಾಡುತ್ತಿವೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.

    ಭಾರತದಲ್ಲಿ ಲಕ್ಷಗಟ್ಟಲೆ ಅಮಾನ್ಯೀಕರಣಗೊಂಡ ನೋಟುಗಳು ದಾಳಿಯಲ್ಲಿ ಸಿಕ್ಕಿದ್ದವು. ಈ ಕುರಿತು ತನಿಖೆ ನಡೆಸಿದಾಗ ಪಾಕಿಸ್ತಾನದ ಐಎಸ್‍ಐ ತನ್ನ ಏಜೆಂಟರುಗಳು ಮೂಲಕ ಅಮಾನ್ಯೀಕರಗೊಂಡ ನೋಟುಗಳನ್ನು ಸಂಗ್ರಹಿಸುತ್ತಿರುವ ಮಾಹಿತಿ ಬಯಲಾಗಿದೆ. ಈ ನೋಟುಗಳು ಭಾರತದ ಗಡಿ ದಾಟಿ, ನೇಪಾಳ ತಲುಪುತ್ತಿದಂತೆಯೇ ಏಜೆಂಟರ ಮೂಲಕ ಹಣ ಪಾವತಿ ಮಾಡುತ್ತಿರುವ ವಿಚಾರ ತನಿಖೆ ವೇಳೆ ತಿಳಿದುಬಂದಿದೆ. ಈಗಾಗಲೇ ಭಾರೀ ಪ್ರಮಾಣದಲ್ಲಿ ನೋಟುಗಳು ಕಳ್ಳಸಾಗಾಣಿಕೆಯ ಮೂಲಕ ಪಾಕಿಸ್ತಾನಕ್ಕೆ ಸರಬರಾಜಾಗಿರುವುದು ತಿಳಿದು ಬಂದಿದೆ ಎಂದು ಗೂಢಾಚಾರ ಸಂಸ್ಥೆ ವರದಿ ಮಾಡಿದೆ.

    ಈ ನಕಲಿ ನೋಟುಗಳನ್ನು ಬಾಂಗ್ಲಾ ಮತ್ತು ದುಬೈ ದೇಶಗಳ ಮೂಲಕ ಭಾರತಕ್ಕೆ ಕಳ್ಳಸಾಗಣಿಕೆ ಮಾಡುತ್ತಿದೆ. ಈ ನೋಟುಗಳನ್ನು ಈಗಾಗಲೇ ಭಾರತದಲ್ಲಿ ಚಲಾವಣೆ ನಡೆಸುತ್ತಿರುವುದು ತಿಳಿದು ಬಂದಿದೆ. ಈ ನಕಲಿ ನೋಟಿನ ಜಾಲದ ಹಿಂದೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೈಜೋಡಿಸಿದ್ದಾನೆ ಎಂದು ಹೇಳಿದೆ.

    ಕೆಲವು ನಕಲಿ ನೋಟುಗಳನ್ನು ವಶಪಡಿಸಿಕೊಂಡು, ಪರೀಕ್ಷೆ ನಡೆಸಿದಾಗ ಮೂಲ ನೋಟಿನಲ್ಲಿರುವ ಎಲ್ಲಾ ಭದ್ರತಾ ಅಂಶಗಳನ್ನು ಇವು ಒಳಗೊಂಡಿವೆ. ಅಲ್ಲದೆ ಯಾವುದು ನಕಲಿ, ಯಾವುದು ಅಸಲಿ ಎಂದು ತಿಳಿಯುವುದು ಕಷ್ಟವಾಗಿದೆ. ಈ ನೋಟುಗಳನ್ನು ಸಾಮಾನ್ಯ ವ್ಯಕ್ತಿ ಪತ್ತೆ ಹಚ್ಚುವುದು ತುಂಬಾ ಕಷ್ಟದ ವಿಷಯವಾಗಿದೆ ಎಂದು ತಿಳಿಸಿದೆ.

  • ಧೋನಿಯ ಸರಳತೆಯನ್ನು ಹೊಗಳಿದ ಚಹಲ್

    ಧೋನಿಯ ಸರಳತೆಯನ್ನು ಹೊಗಳಿದ ಚಹಲ್

    ಮುಂಬೈ: ಸಂದರ್ಶನವೊಂದರಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್ ಧೋನಿಯವರ ಸರಳತೆಯನ್ನು ಕುರಿತು ಹಾಡಿ ಹೊಗಳಿದ್ದಾರೆ. ನಟ ಗೌರವ್ ಕಪೂರ್ ನಡೆಸಿಕೊಡುವ “ಬ್ರೇಕ್‍ಫಾಸ್ಟ್ ವಿತ್ ಚಾಂಪಿಯನ್ಸ್” ಸಂದರ್ಶನದಲ್ಲಿ ಮಾತನಾಡುವಾಗ ಧೋನಿಯವರ ಕುರಿತು ಕೆಲವು ನೆನಪುಗಳನ್ನು ಹಂಚಿಕೊಂಡಿದ್ದಾರೆ.

    ನನ್ನ ಜೀವನದ ಮರೆಯಲಾಗದ ಘಟನೆಯಂದರೆ ಕ್ರಿಕೆಟ್ ದಿಗ್ಗಜ ಧೋನಿಯವರಿಂದ ಏಕದಿನ ಪಂದ್ಯಕ್ಕೆ ಕ್ಯಾಪ್ ಪಡೆದಿದ್ದು, ನನ್ನ ಮೊದಲ ಏಕದಿನ ಪಂದ್ಯವನ್ನು ಇಂತಹ ದಿಗ್ಗಜ ಆಟಗಾರನೊಂದಿಗೆ ಆಟವಾಡಿದ್ದು ನನಗೆ ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು.

    ಅಂದು ನನಗೆ ಧೋನಿಯವರ ಎದುರು ನಿಂತು ಮಾತನಾಡುವ ಅರ್ಹತೆ ಇರಲಿಲ್ಲ, ಆದರೆ ಅವರು ನನ್ನ ಜೊತೆ ಆತ್ಮೀಯವಾಗಿ ಮಾತನಾಡಿದ್ದರು. ಪಂದ್ಯದಲ್ಲಿ ಮೊದಲು ಅವರನ್ನು ಕಂಡಾಗ ನಾನು `ಸರ್’ ಎಂದು ಕರೆಯುತ್ತಿದ್ದೆ. ಪಂದ್ಯದ 2ನೇ ಓವರ್ ಮುಗಿದ ಬಳಿಕ ಅವರು ನನ್ನನ್ನು ಕರೆದು, ನನಗೆ ಸರ್ ಅಂತ ಕರೆಯಬೇಡ ಎಂದರು. ಸರ್ ಬದಲು ಮಾಹಿ, ಧೋನಿ, ಮಹೇಂದ್ರ ಸಿಂಗ್ ಧೋನಿ ಅಥವಾ ಭಾಯಿ ಅಂತ ನಿನಗೆ ಇಷ್ಟ ಆಗುತ್ತದೋ ಹಾಗೆ ಕರೆದು ಬಿಡು ಎಂದು ಹೇಳಿದ್ದರು. ಇದು ನನಗೆ ಅವರ ಮೇಲಿನ ಗೌರವ ಹೆಚ್ಚಾಗುವಂತೆ ಮಾಡಿತ್ತು ಎಂದು ಚಹಲ್ ತಿಳಿಸಿದರು.

    ಧೋನಿಯವರ ಈ ಸರಳತೆಯು ನನಗೆ ಸ್ಫೂರ್ತಿ ನೀಡಿತು, ಯಾವುದೇ ಆಟಗಾರರನ್ನು ಸಮಾನವಾಗಿ ನೋಡುವುದು ಧೋನಿ ಮಾತ್ರವೇ ಆದ್ದರಿಂದಲೇ ನಾನು ಅವರನ್ನು ಭಾಯಿ ಎಂದೇ ಕರೆಯುತ್ತೇನೆ ಎಂದರು. ಅಷ್ಟೇ ಅಲ್ಲದೇ ತಮ್ಮ ಎಲ್ಲಾ ಸಾಧನೆಗಳನ್ನು ಧೋನಿಯವರಿಗೆ ಅರ್ಪಿಸುತ್ತೇನೆ ಎಂದು ಈ ವೇಳೆ ಹೇಳಿದರು.

    27 ವರ್ಷದ ಯಜುವೇಂದ್ರ ಚಹಲ್, ಇಂದು ಭಾರತ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಇವರು ಕಳೆದ 12 ತಿಂಗಳಿಂದ ತಂಡದಲ್ಲಿ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ನಡೆದ ಜಿಂಬಾಬೆ ವಿರುದ್ಧ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದರು. ಚಹಲ್ ಲೆಗ್-ಸ್ಪಿನ್ನರ್ ಆಗಿದ್ದು, ಕಳೆದ ಒಂದು ವರ್ಷದಲ್ಲಿ ಹಲವು ವಿಕೆಟ್‍ಗಳನ್ನು ಪಡೆದು ಸೈ ಎನಿಸಿಕೊಂಡಿದ್ದಾರೆ. ಇವರ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತಂಡ ತವರು ನೆಲದಲ್ಲಿಯೇ ತತ್ತರಿಸಿ ಹೋಗಿತ್ತು. ಶ್ರೀಲಂಕಾ ವಿರುದ್ದ ಉತ್ತಮ ಪ್ರದರ್ಶನ ನೀಡಿ, ಏಕದಿನ ಮತ್ತು ಟಿ-20ಗಳಲ್ಲಿ ಉತ್ತಮ ಸ್ಥಿರತೆ ಹೊಂದಿದ್ದರು.

    ಜಿಂಬಾಬ್ವೆ ಪ್ರವಾಸದ ಆಯ್ಕೆ ಸಂದರ್ಭದಲ್ಲಿ, ತಂಡದ ಪ್ರಮುಖ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್‍ರವರು ಸತತ ಟೆಸ್ಟ್ ಪಂದ್ಯಗಳನ್ನಾಡಿ ವಿಶ್ರಾಂತಿ ಪಡೆದಿದ್ದರು. ಇವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಭಾರೀ ನಷ್ಟವುಂಟಾಗಿತ್ತು. ಈ ಸಮಯದಲ್ಲಿ ಆಯ್ಕೆಗಾರರು ಎರಡನೇ ತಂಡದಲ್ಲಿದ್ದ ಹಲವು ಸದಸ್ಯರಲ್ಲಿ ಚಹಲ್‍ರನ್ನು ಆಯ್ಕೆಮಾಡಿದ್ದರು. ಚಹಲ್ ಆಯ್ಕೆಯಲ್ಲಿ ಮಹೇಂದ್ರ ಸಿಂಗ್ ಧೋನಿ ಪ್ರಮುಖ ಪಾತ್ರವಹಿಸಿದ್ದರು.

  • 60 ವರ್ಷದಲ್ಲಿ 13 ಕೋಟಿ ಎಲ್‍ಪಿಜಿ, ಕಳೆದ ನಾಲ್ಕು ವರ್ಷದಲ್ಲಿ 11 ಕೋಟಿ ಕನೆಕ್ಷನ್: ಮೋದಿ

    60 ವರ್ಷದಲ್ಲಿ 13 ಕೋಟಿ ಎಲ್‍ಪಿಜಿ, ಕಳೆದ ನಾಲ್ಕು ವರ್ಷದಲ್ಲಿ 11 ಕೋಟಿ ಕನೆಕ್ಷನ್: ಮೋದಿ

    ನವದೆಹಲಿ: ಉಜ್ವಲ ಯೋಜನೆಯ ಮುಖಾಂತರ ನಮ್ಮ ಸರ್ಕಾರವು ಕಳೆದ 4 ವರ್ಷಗಳಲ್ಲಿ 11 ಕೋಟಿ ಹೊಸ ಗ್ರಾಹಕರಿಗೆ ಎಲ್‍ಪಿಜಿ ಸಂಪರ್ಕವನ್ನು ಕಲ್ಪಿಸಿದೆ. ಆದರೆ ಹಿಂದಿನ ಸರ್ಕಾರ 60 ವರ್ಷಗಳಲ್ಲಿ ಕೇವಲ 13 ಕೋಟಿ ಗ್ರಾಹಕರಿಗೆ ಮಾತ್ರ ಎಲ್‍ಪಿಜಿ ಸಂಪರ್ಕ ನೀಡಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಸೋಮವಾರದಂದು ಉಜ್ವಲ ಯೋಜನೆಯ ಫಲಾನುಭವಿಗಳೊಂದಿಗೆ ಮಾತನಾಡಿದ ಮೋದಿಯವರು, ತಂತ್ರಜ್ಞಾನದ ಸಹಾಯದಿಂದ ದೇಶದ ಪ್ರತಿಯೊಬ್ಬರೊಂದಿಗೆ ಸಂಪರ್ಕ ಬೆಳೆಸಿ ಅವರಿಂದ ಮಾಹಿತಿ ಪಡೆದು ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಹಾಯಕವಾಗಿದೆ ಎಂದು ತಿಳಿಸಿದರು.

    ಈ ವೇಳೆ ಕಥೆ ಪ್ರೇಮ್‍ಚಂದ್‍ರವರು ರಚಿಸಿದ ಹಿಂದಿಯ ‘ಈದ್ಗಾ’ ಕಥೆಯಲ್ಲಿನ ಹಮೀದ್ ಎಂಬ ಬಾಲಕನ ಬಗ್ಗೆ ಮೋದಿ ಪ್ರಸ್ತಾಪಿಸಿದರು. ಹಮೀದ್ ತಾಯಿ ರೊಟ್ಟಿಯನ್ನು ಸುಡುವಾಗ ತನ್ನ ಕೈಯನ್ನು ಸುಟ್ಟುಕೊಳ್ಳುತ್ತಿದ್ದರು. ಅಜ್ಜಿಯ ನೋವನ್ನು ಕಂಡು ಬಾಲಕ ಹಮೀದ್ ಅಂಗಡಿಯಲ್ಲಿ ಮಿಠಾಯಿಯನ್ನು ಖರೀದಿಸದೇ ಇಕ್ಕುಳಗಳನ್ನು ತಂದು ಕೊಟ್ಟು ಕೈ ಸುಡದಂತೆ ಮಾಡಿದ್ದ ಎಂದರು. ಈ ವೇಳೆ ಚಿಕ್ಕವರಿದ್ದಾಗ ತಮ್ಮ ತಾಯಿಯವರು ಹೊಗೆ ತುಂಬಿದ್ದ ಅಡುಗೆ ಕೋಣೆಯಲ್ಲಿ ಕಷ್ಟ ಪಡುತ್ತಿರುವುದನ್ನು ನೆನಪಿಸಿಕೊಂಡು ಭಾವುಕರಾದ ಮೋದಿ ಅಂದು ಎಲ್‍ಪಿಜಿ ಸಂಪರ್ಕವು ಕೇವಲ ಶ್ರೀಮಂತರು ಹಾಗೂ ಪ್ರತಿಷ್ಠೆಯ ರೂಪದಲ್ಲಿ ಜಾರಿಯಲ್ಲಿತ್ತು ಎಂದು ಹೇಳಿದರು.

    ಈ ಹಿಂದೆ ಅಡುಗೆ ಮಾಡಲು ಸೀಮೆಎಣ್ಣೆ, ಕಟ್ಟಿಗೆ, ಬೆರಣಿ ಹಾಗೂ ಇನ್ನಿತರೆ ಕಚ್ಛಾವಸ್ತುಗಳನ್ನು ಬಳಸುತ್ತಿದ್ದರಿಂದ ಪರಿಸರ ಮಾಲಿನ್ಯ ಉಂಟಾಗುತಿತ್ತು. ಮಹಿಳೆಯರು ಕಟ್ಟಿಗೆಗಳನ್ನು ಸಂಗ್ರಹಿಸಲು ದಿನಗಟ್ಟಲೇ ಸಮಯ ಕಳೆಯುತ್ತಿದ್ದರು. ಈ ಯೋಜನೆಯಲ್ಲಿ ಮಹಿಳೆಯರು ಯಾವುದೇ ಮಾಲಿನ್ಯವಿಲ್ಲದೆ ಉತ್ತಮ ವಾತಾವರಣದಲ್ಲಿ ಕಡಿಮೆ ಅವಧಿಯಲ್ಲಿ ಅಡುಗೆ ಕೆಲಸವನ್ನು ಮುಗಿಸಿ, ಇತರೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹೆಚ್ಚಿನ ಆದಾಯ ಗಳಿಸುವ ಮೂಲಕ ಆರ್ಥಿಕವಾಗಿ ಸಧೃಢರನ್ನಾಗುವಂತೆ ಮಾಡಿದೆ ಎಂದು ವಿವರಿಸಿದರು.

    ತಮ್ಮ ಸರ್ಕಾರದ ಸಾಧನೆಗಳನ್ನು ಪಟ್ಟಿಮಾಡುವಾಗ ಹಿಂದಿನ ಯುಪಿಯ ಸರ್ಕಾರವು 445 ಪೆಟ್ರೋಲ್ ಪಂಪ್‍ಗಳನ್ನು ದಲಿತರಿಗೆ ನೀಡಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ 1200 ಪೆಟ್ರೋಲ್ ಪಂಪ್‍ಗಳನ್ನು ದಲಿತ ಕುಟುಂಬದ ಸದಸ್ಯರಿಗೆ ನೀಡಿದ್ದೇವೆ. ಈ ಯೋಜನೆಯಲ್ಲಿ ಶೇ.45 ರಷ್ಟು ದಲಿತ ಮತ್ತು ಬಡಕುಟುಂಬದ ಒಟ್ಟು 1300 ಕುಟುಂಬಗಳಿಗೆ ಎಲ್‍ಪಿಜಿ ಸಂಪರ್ಕವನ್ನು ನೀಡಿದ್ದೇವೆಂದು ತಿಳಿಸಿದರು.

    2014ರ ತನಕ ಒಟ್ಟು 13 ಕೋಟಿ ಕುಟುಂಬಗಳು ಎಲ್‍ಪಿಜಿ ಸಂಪರ್ಕವನ್ನು ಹೊಂದಿತ್ತು. ಅಂದರೆ ಒಟ್ಟು 60 ವರ್ಷಗಳಲ್ಲಿ ಕೇವಲ 13 ಕೋಟಿ ಕುಟುಂಬಗಳು ಮಾತ್ರವೇ ಸಂಪರ್ಕವನ್ನು ಪಡೆದುಕೊಂಡಿದೆ. ಕೇವಲ ಶ್ರೀಮಂತ ಕುಟುಂಬಗಳಿಗೆ ಮಾತ್ರವೇ ಎಲ್‍ಪಿಜಿ ಸಂಪರ್ಕ ನೀಡಲಾಗಿದೆ ಎಂದು ದೂರಿದರು.

     

     

  • ಭಾರತೀಯರಿಗೆ  ಧನ್ಯವಾದ ಸಲ್ಲಿಸಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

    ಭಾರತೀಯರಿಗೆ ಧನ್ಯವಾದ ಸಲ್ಲಿಸಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

    ನವದೆಹಲಿ: ಅಫ್ಘಾನಿಸ್ತಾನದ ಅಧ್ಯಕ್ಷರಾದ ಅಶ್ರಫ್ ಘನಿ ಟ್ವೀಟ್ ಮಾಡುವ ಮೂಲಕ ಭಾರತೀಯರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಶುಕ್ರವಾರ ಈಡನ್ ಗಾರ್ಡನ್ ನಲ್ಲಿ ನಡೆದ ಎಲಿಮಿನೇಟರ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಆಲ್‍ರೌಂಡರ್ ಪ್ರದರ್ಶನ ತೋರುವ ಮೂಲಕ ರಶೀದ್ ಖಾನ್ ಕ್ರೀಡಾಂಗಣದಲ್ಲಿ ಮಿಂಚಿದ್ರು.

    ತನ್ನ ಮಾತೃ ತಂಡ ಸನ್‍ರೈಸರ್ಸ್ ಹೈದರಾಬಾದ್ ಗೆಲುವುಗಾಗಿ ರಶೀದ್ ಖಾನ್‍ಗೆ ಆಲ್‍ರೌಂಡರ್ ಪ್ರರ್ದಶನ ತೋರಿದ್ದಾರೆ. ಮೂಲತಃ ರಶೀದ್ ಖಾನ್ ಅಫ್ಘಾನಿಸ್ತಾನದ ಆಟಗಾರ. ಹೀಗಾಗಿ ಅಲ್ಲಿನ ರಾಷ್ಟ್ರಾಧ್ಯಕ್ಷ ಅಶ್ರಫ್ ಘನಿ ಅವರು ತಮ್ಮ ದೇಶದ ಪ್ರತಿಭೆಗೆ ಅವಕಾಶ ನೀಡಿದ್ದಕ್ಕಾಗಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಹಂತದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಎದುರು 14 ರನ್ ಅಂತರದಲ್ಲಿ ಗೆಲವು ಸಾಧಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‍ರೈಸರ್ಸ್ ತಂಡದ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿತ್ತು. ರಶೀದ್ ಖಾನ್ ಅವರು ಔಟ್ ಆಗದೆ 10 ಎಸೆತದಲ್ಲಿ 4 ಸಿಕ್ಸ್, 2 ಬೌಂಡರಿ ಮೂಲಕ 34 ರನ್ ಕಲೆ ಹಾಕುವ ಮೂಲಕ ತಂಡದ ಬೃಹತ್ ಮೊತ್ತಗೆ ಸಹಾಯವಾದರು. ಅವರ ಅಮೋಘ ಬ್ಯಾಟಿಂಗ್ ಶೈಲಿ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

    ಬೃಹತ್ ಮೊತ್ತವನ್ನು ಬೆನ್ನಟ್ಟಿ ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತ ತಂಡವನ್ನು 20 ಓವರ್‍ಗಳಲ್ಲಿ 160 ರನ್‍ಗೆ ಕಟ್ಟಿ ಹಾಕಲು ಹೈದರಾಬಾದ್ ತಂಡದ ಬೌಲರ್‍ಗಳು ಯಶಸ್ವಿಯಾದರು. ರಶೀದ್ ಖಾನ್ ಬೌಲಿಂಗ್‍ನಲ್ಲಿಯೂ ಮಿಂಚಿದ್ದಾರೆ. ಒಟ್ಟು 4 ಓವರ್ ಬೌಲ್ ಮಾಡಿದ ಅವರು ಕೇವಲ 19 ರನ್ ನೀಡಿ 4 ವಿಕೆಟ್ ಪಡೆದಿದ್ರು ತಂಡದ ಗೆಲುವಿಗೆ ಕಾರಣರಾದ್ರು.

    ಅಫ್ಘಾನಿಸ್ತಾನ ಜಲಾಲಾಬಾದ್‍ನ 19 ವರ್ಷದ ಆಟಗಾಗರಾಗಿರುವ ರಶೀದ್ ಖಾನ್ ಬಗ್ಗೆ ಅಲ್ಲಿನ ರಾಷ್ಟ್ರಾಧ್ಯಕ್ಷರು ಆಶ್ರಫ್ ಘನಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನಮ್ಮ ಹೀರೋ ರಶೀದ್ ಖಾನ್ ಕುರಿತು ಅಫ್ಘಾನಿಸ್ತಾನ ಹೆಮ್ಮೆ ಪಡುತ್ತದೆ. ಅಲ್ಲದೇ ನಮ್ಮ ನೆಲದ ಪ್ರತಿಭೆಗೆ ವೇದಿಕೆ ಒದಗಿಸಿಕೊಟ್ಟ ನನ್ನ ಭಾರತೀಯ ಸಹೋದರರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.

  • ಹೌದು, ಕಾಂಗ್ರೆಸ್ಸಿಗೆ ಈಗ ಹಣದ ಕೊರತೆಯಿದೆ: ಶಶಿ ತರೂರ್

    ಹೌದು, ಕಾಂಗ್ರೆಸ್ಸಿಗೆ ಈಗ ಹಣದ ಕೊರತೆಯಿದೆ: ಶಶಿ ತರೂರ್

    ನವದೆಹಲಿ: ಕಾಂಗ್ರೆಸ್ ಈಗ ಹಣದ ಕೊರತೆಯನ್ನು ಎದುರಿಸುತ್ತಿದೆ ಎಂದು ಮಾಜಿ ಸಚಿವ, ಸಂಸದ ಶಶಿ ತರೂರ್ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷವೂ ಸೇರಿದಂತೆ ದೇಶದಲ್ಲಿ ಎಲ್ಲಾ ವಿರೋಧ ಪಕ್ಷಗಳು ಹಣದ ಕೊರತೆಯನ್ನು ಎದುರಿಸುತ್ತಿವೆ ಎಂದು ಅವರು ಹೇಳಿದ್ದಾರೆ.

    ಪಕ್ಷ ಹಣದ ಕೊರತೆಯನ್ನು ಎದುರಿಸುತ್ತಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಚಂದಾ ಹಣವನ್ನು ನೀಡಬೇಕು. ಪಕ್ಷಕ್ಕೆ ಹಣವನ್ನು ಕೊಡುವುದರ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.ಇದನ್ನೂ ಓದಿ:ಕಾಂಗ್ರೆಸ್ ಖಜಾನೆಯಲ್ಲಿ ಈಗ ದುಡ್ಡಿಲ್ಲ- ಲೋಕ ಚುನಾವಣೆಯ ವೇಳೆ ಸಂಕಷ್ಟ!

    ಇದಕ್ಕೆ ಪ್ರತಿಕ್ರಿಯಿಸಿರುವ ಶಶಿ ತರೂರ್ ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೋ ಅವರಿಗೆ ಸಾಕಷ್ಟು ನಿಧಿ ಹರಿದು ಬರುತ್ತದೆ. ಬಿಜೆಪಿ ಅಧಿಕಾರದಲ್ಲಿ ಇರುವುದರಿಂದ ಅದರ ಲಾಭ ಪಡೆಯುತ್ತಿದೆ. ವಿರೋಧ ಪಕ್ಷಗಳು ಹಣದ ಸಮಸ್ಯೆಯನ್ನು ಎದುರಿಸುತ್ತಿವೆ. ಅದರಲ್ಲೂ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಹೆಚ್ಚಿನ ಕೊರತೆಯನ್ನು ಅನುಭವಿಸುತ್ತಿದೆ ಎಂದು ಹೇಳಿ ಚಂದ ಎತ್ತಲು ಜನರ ಬಳಿ ಹೋಗುವ ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಮುಂಬರುವ ದಿನಗಳಲ್ಲಿ ಜನರಿಂದ ನಿಧಿಯನ್ನು ಸಂಗ್ರಹಿಸುವುದು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಉತ್ತಮ ನಡೆಯಾಗಲಿದೆ. ಕರ್ನಾಟಕದಲ್ಲಿ ಬಹಳಷ್ಟು ನಾಯಕರು ಚುನಾವಣಾ ಪ್ರಚಾರಕ್ಕೆ ತಮ್ಮ ಹಣವನ್ನೇ ಬಳಸಿದ್ದಾರೆ. ಒಂದು ಕ್ಷೇತ್ರದಲ್ಲಿ ಜನರಿಂದಲೇ ನಿಧಿ ಸಂಗ್ರಹಿಸುವ ಪ್ರಯತ್ನ ಮಾಡಿ ಯಶಸ್ವಿಯಾದೆವು. ಇದನ್ನು ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಮುಂದುವರಿಸಬಹುದಾಗಿದೆ ಎಂದು ಹೇಳಿದರು.

     

  • ಸದ್ಯದಲ್ಲೇ ತೈಲ ದರ ಮತ್ತಷ್ಟು ಏರಿಕೆ: ಬೆಲೆ ಏರುತ್ತಿರುವುದು ಯಾಕೆ? ರಾಜ್ಯ, ಕೇಂದ್ರದ ಪಾಲು ಎಷ್ಟು? ದರ ಇಳಿಕೆಯಾಗುತ್ತಾ?

    ಸದ್ಯದಲ್ಲೇ ತೈಲ ದರ ಮತ್ತಷ್ಟು ಏರಿಕೆ: ಬೆಲೆ ಏರುತ್ತಿರುವುದು ಯಾಕೆ? ರಾಜ್ಯ, ಕೇಂದ್ರದ ಪಾಲು ಎಷ್ಟು? ದರ ಇಳಿಕೆಯಾಗುತ್ತಾ?

    ನವದೆಹಲಿ: ಈಗಾಗಲೇ ಪೆಟ್ರೋಲ್, ಡೀಸೆಲ್ ರೇಟ್ ಜಾಸ್ತಿ ಆಗಿದೆ. ಈ ಮಧ್ಯೆ ಮತ್ತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚುತ್ತಲೇ ಇದ್ದು, ಕೆಲದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಗೆ 3ರಿಂದ 4 ರೂಪಾಯಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 24ರಿಂದ ಮೇ 14ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಆಗಿರಲಿಲ್ಲ. ಈಗ ಪ್ರತಿ ದಿನ ಹೆಚ್ಚಾಗುತ್ತಿದ್ದು, ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 78.12 ರೂ. ಇದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ 69.25 ರೂ. ಇದೆ.

    2 ವರ್ಷದ ಹಿಂದೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 40 ಡಾಲರ್(ಅಂದಾಜು 2,700 ರೂ.) ಇತ್ತು. ಆದರೆ ಈಗ ದುಪ್ಪಟ್ಟು ಆಗಿದ್ದು 79 ಡಾಲರ್(ಅಂದಾಜು 5,300 ರೂ.) ಆಗಿದೆ.

    ಬೆಲೆ ಏರಿಕೆ ಆಗುತ್ತಿರೋದು ಯಾಕೆ?
    ಈ ಹಿಂದೆ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ(ಒಪೆಕ್) ನಡುವೆ ಶೀತಲ ಸಮರವಿತ್ತು. ಹೀಗಾಗಿ ಈ ರಾಷ್ಟ್ರಗಳು ತೈಲ ಉತ್ಪಾದನೆಗೆ ಯಾವುದೇ ಮಿತಿ ಹಾಕಿರಲಿಲ್ಲ. ಆದರೆ 2017ರಲ್ಲಿ ಈ ರಾಷ್ಟ್ರಗಳು ಉತ್ಪಾದನೆಗೆ ಮಿತಿ ಹಾಕಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದಿನವೂ ಏರಿಕೆಯಾಗುತ್ತಿದೆ. ಎಸ್‍ಆಂಡ್‍ಪಿ ಗ್ಲೋಬಲ್ ಪ್ಯಾಂಟ್ ಅಧ್ಯಯನದ ಪ್ರಕಾರ ತೈಲ ಉತ್ಪಾದಿಸುವ 14 ದೇಶಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಈ ಹಿಂದೆ ಪ್ರತಿದಿನ 32 ದಶಲಕ್ಷ ಬ್ಯಾರೆಲ್ ಉತ್ಪಾದಿಸುತ್ತಿದ್ದರೆ ಏಪ್ರಿಲ್ ನಲ್ಲಿ 1.40 ದಶಲಕ್ಷ ಕಡಿಮೆಯಾಗಿದೆ. ವಿಶ್ವದೆಲ್ಲೆಡೆ ಭಾರೀ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಪೆಕ್ ರಾಷ್ಟ್ರಗಳು ಜೂನ್ 22 ರಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ವೇಳೆ ತೈಲ ಉತ್ಪಾನೆಯ ಪ್ರಮಾಣವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

    ಕರ್ನಾಟಕದಲ್ಲಿ ಯಾರ ಪಾಲು ಎಷ್ಟು?
    ದಿನಕ್ಕೆ 30 ಲಕ್ಷ ಲೀಟರ್ ಪೆಟ್ರೋಲ್ ಬಳಕೆಯಾಗುತ್ತಿದ್ದು, ಪೆಟ್ರೋಲ್‍ನಲ್ಲಿ 50% ಮತ್ತು ಡೀಸೆಲ್‍ನಲ್ಲಿ 40% ಹಣವನ್ನು ತೆರಿಗೆ, ಡೀಲರ್ ಕಮಿಷನ್ ರೂಪದಲ್ಲಿ ಗ್ರಾಹಕರು ಪಾವತಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮೇ 21 ರಂದು ಲೀಟರ್‍ಗೆ ಪೆಟ್ರೋಲ್ ದರ 77.70 ರೂ. ಇದ್ದರೆ ಇದರಲ್ಲಿ ಕೇಂದ್ರ ಸರ್ಕಾರದ ಅಬಕಾರಿ ತೆರಿಗೆ 19.48 ರೂ., ರಾಜ್ಯ ತೆರಿಗೆ 23.31 ರೂ. ಇದೆ. ಡೀಸೆಲ್ ದರ ಪ್ರತಿ ಲೀಟರ್ ಗೆ 68.99 ರೂ. ಇದ್ದರೆ, ಕೇಂದ್ರ ಸರ್ಕಾರದ ಅಬಕಾರಿ ತೆರಿಗೆ 15.33 ರೂ., ರಾಜ್ಯ ತೆರಿಗೆ 13.10 ರೂ. ಇದೆ.

    ಪೆಟ್ರೋಲ್ ಜಿಎಸ್‍ಟಿಯಲ್ಲಿ ಬರಲ್ಲ:
    ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.

    ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್ ಬರುತ್ತಾ?
    ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಇರುವ ಜಿಎಸ್‍ಟಿ ಮಂಡಳಿಯಲ್ಲಿ ಒಪ್ಪಿಗೆ ಸಿಕ್ಕಿದರೆ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು. ಈಗಾಗಲೇ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ದೇಶಾದ್ಯಂತ ಏಕರೂಪದ ದರ ವಿಧಿಸಬಹುದು ಎಂದು ಹೇಳಿದ್ದಾರೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವ ಕಾರಣ ಎಲ್ಲ ರಾಜ್ಯಗಳು ಒಪ್ಪಿಗೆ ನೀಡಿದರೆ ಬೆಲೆ ಕಡಿಮೆಯಾಗಬಹುದು.  ಇದನ್ನೂ ಓದಿ: ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!

    ಈ ಹಿಂದೆ ರಾಜ್ಯಸಭೆಯಲ್ಲಿ ಮಾಜಿ ಹಣಕಾಸು ಸಚಿವ ಪಿಚಿದಂಬರಂ ಮಾತನಾಡಿ, ಪ್ರಸ್ತುತ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿ ಅಡಿಯಲ್ಲಿ ತರಲು ಅಡ್ಡಿಯಾಗಿರುವುದು ಏನು? ಯಾವಾಗ ಜಿಎಸ್‍ಟಿ ಕೌನ್ಸಿಲ್ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಜಿಎಸ್‍ಟಿ ಕರಡು ನಿಯಮಗಳನ್ನು ರಚಿಸುವ ವೇಳೆ ಯುಪಿಎ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‍ಟಿ ವ್ಯಾಪ್ತಿಯ ಒಳಗಡೆ ಸೇರಿಸಲಿಲ್ಲ. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹಾಳಾಗಬಹುದು ಎನ್ನುವ ಕಾರಣಕ್ಕೆ ಯುಪಿಎ ಸೇರಿಸಿರಲಿಲ್ಲ. ಆದರೆ ಈಗ ರಾಜ್ಯಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗುವ ಬಗ್ಗೆ ರಾಜ್ಯಗಳು ಶೀಘ್ರ ಅಥವಾ ನಂತರವಾದರೂ ಒಪ್ಪಿಗೆ ನೀಡಬಹುದು ಎನ್ನುವ ಆಶಾವಾದವನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಸಲ್ಲ: ಸಿಎಂ ಸಿದ್ದರಾಮಯ್ಯ. ಯಾವ ರಾಜ್ಯದಲ್ಲಿ ಎಷ್ಟು ತೆರಿಗೆಯಿದೆ?

    ಬೆಲೆ ಯಾಕೆ ಜಾಸ್ತಿ? ಕಡಿಮೆಯಾಗುತ್ತಾ?
    ಪ್ರವೇಶ ತೆರಿಗೆ, ವ್ಯಾಟ್, ಅಬಕಾರಿ ಸುಂಕ, ಅಕ್ಟ್ರಾಯ್, ಪೆಟ್ರೋಲ್ ಪಂಪ್ ಮಾಲೀಕರ ಕಮಿಷನ್ ಸೇರಿ ಪೆಟ್ರೋಲ್, ಡೀಸೆಲ್ ದರ ನಿಗದಿಯಾಗುತ್ತದೆ. ನಿರಂತರ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ತೈಲ ದರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಶೀಘ್ರವೇ ಪರಿಹಾರವನ್ನು ಕಂಡುಕೊಳ್ಳಲಿದೆ ಎಂದು ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿಮೆ ಮಾಡಿದರೆ ರಾಜ್ಯದಲ್ಲಿ ಬರಲಿರುವ ಹೊಸ ಸರ್ಕಾರವೂ ವ್ಯಾಟ್ ತೆರಿಗೆಯನ್ನು ಇಳಿಸಿದರೆ ತೈಲ ಬೆಲೆ ಸ್ವಲ್ಪ ಇಳಿಕೆಯಾಗಬಹುದು. ಇದನ್ನೂ ಓದಿ: ಭಾರತಕ್ಕೆ ಅಮೆರಿಕದಿಂದ ಇದೇ ಮೊದಲ ಬಾರಿಗೆ ಕಚ್ಚಾತೈಲ ಬರುತ್ತಿರೋದು ಯಾಕೆ?