Tag: India women’s cricket team

  • ಸಿಲಿಂಡರ್ ಹಿಡಿದು ಮಹಿಳಾ ಕ್ರಿಕೆಟರ್ ಪೂಜಾ ವರ್ಕೌಟ್

    ಸಿಲಿಂಡರ್ ಹಿಡಿದು ಮಹಿಳಾ ಕ್ರಿಕೆಟರ್ ಪೂಜಾ ವರ್ಕೌಟ್

    – ಏಕದಿನ ವಿಶ್ವಕಪ್‍ಗೆ ಭರ್ಜರಿ ಸಿದ್ಧತೆ

    ನವದೆಹಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡವು 2021 ಏಕದಿನ ವಿಶ್ವಕಪ್‍ಗೆ ಅರ್ಹತೆ ಪಡೆದಿದೆ. ಆದರೆ ಕೊರೊನಾ ವೈರಸ್‍ನಿಂದಾಗಿ ಆಟಗಾರರು ಮನೆಯಲ್ಲೇ ಉಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಟಗಾರರು ಮನೆಯಲ್ಲೇ ತಯಾರಿ ಪ್ರಾರಂಭಿಸಿದ್ದಾರೆ. ಲಾಕ್‍ಡೌನ್ ಮಧ್ಯೆ ತಂಡದ ವೇಗದ ಬೌಲರ್ ಪೂಜಾ ವಸ್ತ್ರಕರ್ ಅವರು ತಮ್ಮ ಮನೆಯ ಮೇಲ್ಛಾವಣಿಯನ್ನು ಕ್ರಿಕೆಟ್ ಪಿಚ್ ಆಗಿ ಮಾಡಿದ್ದಾರೆ.

    ಮಧ್ಯಪ್ರದೇಶದ ಪೂಜಾ ಅವರು ಗ್ಯಾಸ್ ಸಿಲಿಂಡರ್ ಹಿಡಿದು ವರ್ಕೌಟ್ ನಡೆಸಿದ್ದಾರೆ. ಜೊತೆಗೆ ರಾಜಸ್ಥಾನ್ ರಾಯಲ್ಸ್ ವೇಗದ ಬೌಲರ್ ಕೋಚ್ ಸ್ಟೀಫನ್ ಜೋನ್ಸ್ ಅವರಿಂದ ಆನ್‍ಲೈನ್ ಕೋಚಿಂಗ್ ತೆಗೆದುಕೊಳ್ಳುತ್ತಿದ್ದಾರೆ. ಈ ಮೂಲಕ ಬೆಳಗ್ಗೆ ಫಿಟ್ನೆಸ್ ತರಬೇತಿ ಮತ್ತು ಸಂಜೆ ಬೌಲಿಂಗ್ ಕೌಶಲ್ಯ ನಡೆಸಿದ್ದಾರೆ.

    https://www.instagram.com/p/B-2DjcapoZ7/

    ”ಫಿಟ್ನೆಸ್ ಸುಧಾರಿಸಿಕೊಳ್ಳಲು ಲಾಕ್‍ಡೌನ್ ಉತ್ತಮ ಅವಕಾಶ ನೀಡಿದೆ” ಎಂದು ಪೂಜಾ ಹೇಳಿದ್ದಾರೆ. ನಾನು ಬೆಳಗ್ಗೆ ಫಿಟ್ನೆಸ್ ಮತ್ತು ಸಂಜೆ ಬೌಲಿಂಗ್ ಕೌಶಲ್ಯದ ಅಭ್ಯಾಸ ನಡೆಸಿರುವೆ. ಫಿಟ್ನೆನಲ್ಲಿ ಸಾಮರ್ಥ್ಯ, ಸ್ಥಿರತೆ ತರಬೇತಿ ಪಡೆಯುತ್ತಿರುವೆ. ನಮ್ಮ ಕುಟುಂಬದಲ್ಲಿ 8ರಿಂದ 10 ಜನರಿದ್ದಾರೆ. ಹೀಗಾಗಿ ಫ್ರೀ ಟೈಮ್‍ನಲ್ಲಿ ಲುಡೋ ಮತ್ತು ಕ್ಯಾರಮ್ ಆಡುತ್ತೇನೆ. ಅಷ್ಟೇ ಅಲ್ಲದೆ ಕುಟುಂಬದೊಂದಿಗೆ ರಾಮಾಯಣ ಮತ್ತು ಮಹಾಭಾರತ ಸೀರಿಯಲ್ ನೋಡುತ್ತೇನೆ ಎಂದು ಪೂಜಾ ತಿಳಿಸಿದ್ದಾರೆ.

    ರಾಜಸ್ಥಾನ್ ರಾಯಲ್ಸ್ ವೇಗದ ಬೌಲಿಂಗ್ ಕೋಚ್ ಸ್ಟೀಫನ್ ಜಾನ್ಸ್ ಅವರ ಸಹಾಯವನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ. ವಾಟ್ಸಪ್‍ನಲ್ಲಿ ಸ್ಟೀಫನ್ ನನಗೆ ವರ್ಕೌಟ್ ಮತ್ತು ತರಬೇತಿ ವೇಳಾಪಟ್ಟಿಯನ್ನು ಕಳುಹಿಸಿದ್ದಾರೆ. ಅದನ್ನು ಅನುಸರಿಸುತ್ತಿರುವೆ. ಅವರು ವಿಡಿಯೋ ಕಾಲ್ ಮೂಲಕ ನನಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜೊತೆಗೆ ನನ್ನ ಅಭ್ಯಾಸದ ವಿಡಿಯೋಗಳನ್ನು ಅವರಿಗೆ ಕಳುಹಿಸುತ್ತಿದ್ದೇನೆ ಎಂದು ಪೂಜಾ ಹೇಳಿದ್ದಾರೆ.

    https://www.instagram.com/p/B-TPlrBJ0DA/

  • ಭಾರತೀಯ ಕ್ರಿಕೆಟ್ ಆಟಗಾರ್ತಿಯರಿಗೆ ಏರ್‌ಪೋರ್ಟಿನಲ್ಲಿ ಅವಮಾನ

    ಭಾರತೀಯ ಕ್ರಿಕೆಟ್ ಆಟಗಾರ್ತಿಯರಿಗೆ ಏರ್‌ಪೋರ್ಟಿನಲ್ಲಿ ಅವಮಾನ

    – ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

    ಮುಂಬೈ: ಭಾರತದಲ್ಲಿ ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳ ಸ್ವಾಗತದ ವಿಚಾರವಾಗಿ ಮತ್ತೊಮ್ಮೆ ಭಾರೀ ಚರ್ಚೆ ಆರಂಭವಾಗಿದೆ. ಕಳೆದ ಭಾನುವಾರ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್‍ನಲ್ಲಿ ಸೋಲಿನ ಬಳಿಕ ನಾಯಕಿ ಹರ್ಮನ್‍ಪ್ರೀತ್ ಕೌರ್ ಪಡೆ ಮಂಗಳವಾರ ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಿತು. ಆದರೆ ಈ ವೇಳೆ ಯಾರೊಬ್ಬರೂ ಅವರನ್ನು ಸ್ವಾಗತಿಸಲಿಲ್ಲ. ಇದು ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಮಾಡಿದ ಅವಮಾನ ಎಂಬ ಮಾತು ಕೇಳಿ ಬರುತ್ತಿದೆ.

    ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೇಂದ್ರ ಕಚೇರಿ ಇರುವ ನಗರದಲ್ಲೇ ಮಹಿಳಾ ಆಟಗಾರ್ತಿಯರಿಗೆ ಅವಮಾನ ಮಾಡಲಾಗಿದೆ. ಟೀಂ ಇಂಡಿಯಾ ಪುರುಷ ಕ್ರಿಕೆಟರ್ ಹಾಗೂ ಮಹಿಳಾ ಆಟಗಾರ್ತಿಯರ ಮಧ್ಯೆ ಬಿಸಿಸಿಐ ತಾರತಮ್ಯ ತೋರುತ್ತಿದೆ ಎಂದು ಕ್ರಿಕೆಟ್ ಅಭಿಮಾನಿಗಳು ದೂರಿದ್ದಾರೆ.

    ಆದರೆ ಕೆಲ ಅಭಿಮಾನಿಗಳು, ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಹೋಗದಿರಬಹುದು. ಒಂದು ವೇಳೆ ಕೊರೊನಾ ಆತಂಕ ಇಲ್ಲದೇ ಇದ್ದಲ್ಲಿ ಪ್ರಶ್ನಿಸುವುದು ಸರಿಯಾಗಿದೆ. ಆದರೆ ಈ ಪರಿಸ್ಥಿತಿಯಲ್ಲಿ ಅವಮಾನ ಎಂದು ಹೇಳುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    2009ರಿಂದ ಆರಂಭವಾದ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಇದೇ ಮೊದಲ ಬಾರಿ ಭಾರತ ಫೈನಲ್ ತಲುಪಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಚೊಚ್ಚಲ ಚಾಂಪಿಯನ್‍ಶಿಪ್ ಪಟ್ಟವನ್ನು ಕೈಚೆಲ್ಲಿಕೊಂಡಿತು. ಇತ್ತ ಆತಿಥೇಯ ಆಸ್ಟ್ರೇಲಿಯಾ ತಂಡವು ಏಳು ಆವೃತ್ತಿಗಳಲ್ಲಿ ಐದನೇ ಪ್ರಶಸ್ತಿಯನ್ನು ಎತ್ತಿ ಹಿಡಿಯಿತು.

    https://twitter.com/kpsinha7/status/1237366153111990273

    ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಫೈನಲ್ ತಲುಪಿದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಇದಕ್ಕೂ ಮುನ್ನ ಎ ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು 17 ರನ್‍ಗಳಿಂದ ಸೋಲಿಸಿತ್ತು. ಆದರೆ ಫೈನಲ್‍ನಲ್ಲಿ ಗೆಲುವು ದಾಖಲಿಸುವಲ್ಲಿ ವಿಫಲವಾಯಿತು.

    ದೇಶ, ವಿದೇಶಗಳಲ್ಲಿ ಹರಡಿರುವ ಕೊರೊನಾ ವೈರಸ್‍ನಿಂದಾಗಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ದೇಶಕ್ಕೆ ಮರಳಲು ಭಾರೀ ಸಂಕಷ್ಟ ಎದುರಿಸುವಂತಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ತಾಯ್ನಾಡಿಗೆ ಮರಳಿ ಮನೆಗೆ ಹಿಂದಿರುಗುವಾಗ ಸ್ವಾಗತ ಕೋರಲು ಯಾರೊಬ್ಬರೂ ಇಲ್ಲದೆ ಇರುವುದನ್ನು ನೋಡಿ ಆಟಗಾರ್ತಿಯರು ಇನ್ನಷ್ಟು ನಿರಾಶೆಗೊಂಡಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ನಾಯಕಿ ಹರ್ಮನ್‍ಪ್ರೀತ್ ಮತ್ತು ಆಲ್‍ರೌಂಡರ್ ವೇದ ಕೃಷ್ಣಮೂರ್ತಿ ಅವರು ಅಸಮಾಧಾನ ಹಾಗೂ ನಿರಾಶೆ ವ್ಯಕ್ತಪಡಿಸಿದ ಫೋಟೋಗಳು ಟ್ವಿಟರ್‌ನಲ್ಲಿ ವೈರಲ್ ಆಗಿವೆ.

    ಪ್ರಶಸ್ತಿ ಘೋಷಿಸಿಲ್ಲ:
    ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಆಟಗಾರ್ತಿಯರು ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಈವರೆಗೂ ಯಾವುದೇ ರಾಜ್ಯದ ಸರ್ಕಾರವೂ ಆಟಗಾರ್ತಿಯರಿಗೆ ಯಾವುದೇ ರೀತಿಯ ಬಹುಮಾನವನ್ನು ಘೋಷಿಸಿಲ್ಲ. ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ತೋರಿದ ಹರಿಯಾಣದ ಶಫಾಲಿ ವರ್ಮಾ ಅವರಿಗೆ ಅಲ್ಲಿನ ಸರ್ಕಾರವು ಯಾವುದೇ ಗೌರವವನ್ನು ಇನ್ನೂ ನೀಡಿಲ್ಲ ಎಂದು ವರದಿಯಾಗಿದೆ.