Tag: India A

  • Duleep Trophy | ಕನ್ನಡಿಗ ರಾಹುಲ್‌ ಹೋರಾಟ ವ್ಯರ್ಥ – ಭಾರತ-ಬಿ ತಂಡಕ್ಕೆ 76 ರನ್‌ಗಳ ಭರ್ಜರಿ ಜಯ

    Duleep Trophy | ಕನ್ನಡಿಗ ರಾಹುಲ್‌ ಹೋರಾಟ ವ್ಯರ್ಥ – ಭಾರತ-ಬಿ ತಂಡಕ್ಕೆ 76 ರನ್‌ಗಳ ಭರ್ಜರಿ ಜಯ

    – ಶುಭಮನ್‌ ಗಿಲ್‌ ಪಡೆಗೆ ಹೀನಾಯ ಸೋಲು

    ಬೆಂಗಳೂರು: ಸಂಘಟಿತ ಬೌಲಿಂಗ್‌, ಬ್ಯಾಟಿಂಗ್‌ ಪ್ರದರ್ಶನದೊಂದಿಗೆ ಭಾರತ-ಬಿ ತಂಡವು (India B), ಭಾರತ-ಎ ತಂಡದ ವಿರುದ್ಧ 76 ರನ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ ದುಲೀಪ್‌ ಟ್ರೋಫಿಯಲ್ಲಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.

    ಬೆಂಗಳೂರಿನ (Bengaluru) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುಲೀಪ್‌ ಟ್ರೋಫಿ (Duleep Trophy) ಮೊದಲ ಪಂದ್ಯದಲ್ಲಿ ಅಭಿಮನ್ಯು ಈಶ್ವರನ್ ನಾಯಕತ್ವದ ʻಬಿʼ ತಂಡ ಅಮೋಘ ಜಯ ಸಾಧಿಸಿದೆ. ಆದ್ರೆ ಎರಡೂ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಶುಭಮನ್‌ ಗಿಲ್‌ ಪಡೆ ಆರಂಭಿಕ ಪಂದ್ಯದಲ್ಲಿ ಹೀನಾಯ ಸೋಲಿಗೆ ತುತ್ತಾಗಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್‌ ಆಲ್‌ರೌಂಡರ್‌ ಮೊಯಿಲ್‌ ಅಲಿ ಗುಡ್‌ಬೈ

    90 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಬಿ ತಂಡ, ರಿಷಭ್‌ ಪಂತ್‌ ಅವರ ಅಮೋಘ ಅರ್ಧಶತಕ ಹಾಗೂ ಸರ್ಫರಾಜ್‌ ಖಾನ್‌ ಬ್ಯಾಟಿಂಗ್‌ ನೆರವಿನೊಂದಿಗೆ 42 ಓವರ್‌ಗಳಲ್ಲಿ 184 ರನ್‌ ಗಳಿಸಿತ್ತು. ಈ ಮೂಲಕ ಒಟ್ಟು 274 ರನ್‌ ಗಳಿಸಿ, ಎದುರಾಳಿ ತಂಡಕ್ಕೆ 275 ರನ್‌ ಗುರಿ ನೀಡಿತ್ತು. ಸ್ಪರ್ಧಾತ್ಮಕ ರನ್‌ಗಳ ಗುರಿ ಬೆನ್ನಟ್ಟಿದ ಎ ತಂಡ 2ನೇ ಇನ್ನಿಂಗ್ಸ್‌ನಲ್ಲಿ 198 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲು ಕಂಡಿತು.

    ಸ್ಪರ್ಧಾತ್ಮಕ ಗುರಿ ಪಡೆದಿದ್ದ ಎ ತಂಡ ಆರಂಭದಲ್ಲೇ ವಿಕೆಟ್‌ ಕಳೆದುಕೊಳ್ಳಲು ಶುರು ಮಾಡಿತು. ಆರಂಭಿಕ ಮಯಾಂಕ್‌ ಅಗರ್ವಾಲ್‌ 3 ರನ್‌ಗಳಿಗೆ ಪೆವಿಲಿಯನ್‌ಗೆ ಮರಳಿದರು. ಬಳಿಕ ಉತ್ತಮ ಪ್ರದರ್ಶನದ ಭರವಸೆ ಮೂಡಿಸಿದ್ದ ಶುಭಮನ್‌ ಗಿಲ್‌ ಕೇವಲ 21 ರನ್‌ಗಳಿಗೆ ಔಟಾದರು. ಈ ಬೆನ್ನಲೇ ಟಿ20 ಕ್ರಿಕೆಟ್‌ನಂತೆ ಸ್ಫೋಟಕ ಪ್ರದರ್ಶನಕ್ಕೆ ಮುಂದಾದ ರಿಯಾನ್‌ ಪರಾಗ್‌ 18 ಎಸೆತಗಳಲ್ಲಿ 31 ರನ್‌ ಬಾರಿಸಿ ಔಟಾದರು. ನಂತರದಲ್ಲಿ ಕೆ.ಎಲ್‌ ರಾಹುಲ್‌, ಆಕಾಶ್‌ ದೀಪ್‌ ಹೊರತುಪಡಿಸಿದ್ರೆ ಉಳಿದ ಆಟಗಾರರು ಅಲ್ಪಮೊತ್ತಕ್ಕೆ ನಿರ್ಗಮಿಸಿದ ಕಾರಣ ಭಾರತ ಎ ತಂಡ ಸೋಲಬೇಕಾಯಿತು.

    ಭಾರತ-ಎ ತಂಡದ ಪರ ಕೆ.ಎಲ್‌ ರಾಹುಲ್‌ 57 ರನ್‌ (121 ಎಸೆತ, 7 ಬೌಂಡರಿ), ಆಕಾಶ್‌ ದೀಪ್‌ 43 ರಮ್‌, ಶಿವಂ ದುಬೆ, ಕುಲ್ದೀಪ್‌ ಯಾದವ್‌ ತಲಾ 14 ರನ್‌ಗಳ ಕೊಡುಗೆ ನೀಡಿದರು. ಇದನ್ನೂ ಓದಿ: U-20 World Wrestling Championships – ಭಾರತಕ್ಕೆ 2 ಪದಕ; ನಿಕಿತಾಗೆ ಬೆಳ್ಳಿ, ನೇಹಾಗೆ ಕಂಚು!

    ಇದಕ್ಕೂ ಮುನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ – ಬಿ ತಂಡದ ಪರ ರಿಷಭ್‌ ಪಂತ್‌ ಹಾಗೂ ಸರ್ಫರಾಜ್‌ ಖಾನ್‌ ಅವರ ಅಮೋಘ ಪ್ರದರ್ಶನ ತಂಡಕ್ಕೆ ನೆರವಾಯಿತು. ಪಂತ್‌ 47 ಎಸೆತಗಳಲ್ಲಿ 61 ರನ್‌ (9 ಬೌಂಡರಿ, 2 ಸಿಕ್ಸರ್)‌, ಸರ್ಫರಾಜ್‌ 46 ರನ್‌ (36 ಎಸೆತ, 7 ಬೌಂಡರಿ, 1 ಸಿಕ್ಸರ್)‌ ಗಳಿಸಿದ್ರೆ, ನಿತಿಶ್‌ ಕುಮಾರ್‌ ರೆಡ್ಡಿ 19 ರನ್‌, ನವದೀಪ್‌ ಸೈನಿ 13 ರನ್‌, ಯಶ್‌ ದಯಾಳ್‌ 16 ರನ್‌ಗಳ ಕೊಡುಗೆ ನೀಡಿದರು.

    ಸಂಕ್ಷಿಪ್ತ ಸ್ಕೋರ್‌
    ಮೊದಲ ಇನ್ನಿಂಗ್ಸ್‌
    ಭಾರತ ಬಿ ತಂಡ – 321/10
    ಭಾರತ ಎ ತಂಡ – 231/10

    ದ್ವಿತೀಯ ಇನ್ನಿಂಗ್ಸ್‌
    ಭಾರತ ಬಿ ತಂಡ – 184/10
    ಭಾರತ ಎ ತಂಡ – 198/10

    ಇನ್ನೂ ಭಾರತ ಸಿ ಮತ್ತು ಭಾರತ ಡಿ ತಂಡಗಳ ನಡುವಿನ ಹಣಾಹಣಿಯಲ್ಲಿ ರುತುರಾಜ್‌ ಗಾಯಕ್ವಾಡ್‌ ನಾಯಕತ್ವದ ʻಸಿʼ ತಂಡ ಶ್ರೇಯಸ್‌ ಅಯ್ಯರ್‌ ನಾಯಕತ್ವದ ʻಡಿʼ ತಂಡದ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸಿದೆ. ಇದನ್ನೂ ಓದಿ: Duleep Trophy | ಮುಶೀರ್ ಕೈತಪ್ಪಿದ ದ್ವಿಶತಕ – ಕೊನೇ 3 ವಿಕೆಟ್‌ಗೆ 227 ರನ್‌ ಪೇರಿಸಿದ ಭಾರತ-ಬಿ ತಂಡ!

  • Duleep Trophy | ಮುಶೀರ್ ಕೈತಪ್ಪಿದ ದ್ವಿಶತಕ – ಕೊನೇ 3 ವಿಕೆಟ್‌ಗೆ 227 ರನ್‌ ಪೇರಿಸಿದ ಭಾರತ-ಬಿ ತಂಡ!

    Duleep Trophy | ಮುಶೀರ್ ಕೈತಪ್ಪಿದ ದ್ವಿಶತಕ – ಕೊನೇ 3 ವಿಕೆಟ್‌ಗೆ 227 ರನ್‌ ಪೇರಿಸಿದ ಭಾರತ-ಬಿ ತಂಡ!

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ (Duleep Trophy) ಟೂರ್ನಿಯ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ `ಬಿ’ ತಂಡ 321 ರನ್ ಕಲೆಹಾಕಿದೆ. ಆರಂಭಿಕ ಹಿನ್ನಡೆಯ ಹೊರತಾಗಿಯೂ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ.

    ಕೇವಲ 94 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಭಾರತ-ಬಿ ತಂಡ (India B Team) ಕೊನೇ 3 ವಿಕೆಟ್‌ಗಳಲ್ಲಿ 227 ರನ್‌ ಪೇರಿಸಿದೆ. ಮುಶೀರ್ ಖಾನ್ (Musheer Khan) ಅಮೋಘ ಶತಕದ ಆಸರೆಯೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 116 ಓವರ್‌ಗಳಲ್ಲಿ 321 ರನ್ ಕಲೆಹಾಕಿದೆ. ಭಾರತ `ಎ’ ತಂಡ 2ನೇ ದಿನವಾದ ಶುಕ್ರವಾರ ತನ್ನ ಸರದಿಯ ಮೊದಲ ಇನ್ನಿಂಗ್ಸ್ ಆರಂಭಿಸಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ-ಬಿ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು `ಎ’ ತಂಡದ ಬೌಲರ್‌ಗಳ ದಾಳಿಗೆ ಮಕಾಡೆ ಮಲಗಿದರು. ಯಶಸ್ವಿ ಜೈಸ್ವಾಲ್ 30 ರನ್ ಗಳಿಸಿದ್ದು ಬಿಟ್ಟರೆ, ನಾಯಕ ಅಭಿಮನ್ಯು ಈಶ್ವರನ್, ಸರ್ಫರಾಜ್ ಖಾನ್, ರಿಷಬ್ ಪಂತ್ ಒಂದಂಕಿ ಮೊತ್ತಕ್ಕೆ ನೆಲ ಕಚ್ಚಿದರು. ಐಪಿಎಲ್‌ನಲ್ಲಿ ಅಬ್ಬರಿಸಿದ್ದ ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಶೂನ್ಯ ಸುತ್ತಿದರೆ, ಸಾಯಿ ಕಿಶೋರ್ 1 ರನ್‌ಗಳಿಗೆ ಔಟಾದರು.

    ಇದರಿಂದ ಭಾರತ `ಬಿ’ ತಂಡ 94 ರನ್‌ಗಳಿಗೆ ಪ್ರಮುಖ 7 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. 150 ರನ್ ಕಲೆಹಾಕುವುದೂ ಕಷ್ಟವಾಗಿತ್ತು. ಈ ವೇಳೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಮುಶೀರ್ ಖಾನ್ ಹಾಗೂ ನವದೀಪ್ ಸೈನಿ ಪಂದ್ಯದ ದಿಕ್ಕನ್ನೇ ಬದಲಿಸಿದರು. 2ನೇ ದಿನವೂ ಉತ್ತಮ ಇನ್ನಿಂಗ್ಸ್ ಕಟ್ಟಿದ ಮುಶೀರ್ – ಸೈನಿ ಜೋಡಿ ಬರೋಬ್ಬರಿ 205 ರನ್‌ಗಳ ಜೊತೆಯಾಟ ನೀಡಿದರು. ಆದ್ರೆ ದ್ವಿಶತಕದ ಅಂಚಿನಲ್ಲಿದ್ದ ಮುಶೀರ್ ಖಾನ್, ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಲು ಯತ್ನಿಸಿ ಬೌಂಡರಿಲೈನ್ ಬಳಿ ಕ್ಯಾಚ್‌ಗೆ ತುತ್ತಾದರು. ಈ ವೇಳೆ ನವದೀಪ್ ಸೈನಿ ಸಹ ಅರ್ಧಶತಕ ದಾಖಲಿಸಿ ಮಿಂಚಿದರು.

    ಭಾರತ-ಬಿ ತಂಡದ ಪರ ಮುಶೀರ್ ಖಾನ್ 373 ಎಸೆತಗಳಲ್ಲಿ 181 ರನ್ (16 ಬೌಂಡರಿ, 5 ಸಿಕ್ಸರ್) ಸಿಡಿಸಿದ್ರೆ, ನವದೀಪ್ ಸೈನಿ 56 ರನ್ (144 ಎಸೆತ, 1 ಸಿಕ್ಸರ್, 8 ಬೌಂಡರಿ), ಯಶಸ್ವಿ ಜೈಸ್ವಾಲ್ 30 ರನ್, ಅಭಿಮನ್ಯು 13 ರನ್, ಯಶ್ ದಯಾಳ್ 10 ರನ್ ಗಳಿಸಿದ್ರೆ, ಉಳಿದ ಬ್ಯಾಟರ್‌ಗಳು ಒಂದಂಕಿಗೆ ಕೈಸುಟ್ಟುಕೊಂಡರು.

    ಭಾರತ-ಎ ತಂಡದ ಪರ ವೇಗಿ ಆಕಾಶ್ ದೀಪ್ 4 ವಿಕೆಟ್ ಕಿತ್ತರೆ, ಖಲೀಲ್ ಅಹ್ಮದ್, ಅವೇಶ್ ಖಾನ್ ತಲಾ 2 ವಿಕೆಟ್ ಹಾಗೂ ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಕಿತ್ತರು.

  • ರಹಾನೆ ಶತಕ ಸಂಭ್ರಮವನ್ನ ತಡೆದ ರೈನಾ, ಕಾರಣವೇನು ಗೊತ್ತಾ?- ವಿಡಿಯೋ ನೋಡಿ

    ರಹಾನೆ ಶತಕ ಸಂಭ್ರಮವನ್ನ ತಡೆದ ರೈನಾ, ಕಾರಣವೇನು ಗೊತ್ತಾ?- ವಿಡಿಯೋ ನೋಡಿ

    ದೆಹಲಿ: ಇಂಡಿಯಾ ಸಿ ತಂಡದ ನಾಯಕ ಅಜಿಂಕ್ಯ ರಹಾನೆ ಶತಕ ಸಿಡಿಸಲು 3 ರನ್ ಬಾಕಿ ಇರುವಂತೆ ಸಂಭ್ರಮಿಸಿದ್ದು, ಈ ವೇಳೆ ರೈನಾ ಸೂಚನೆ ನೀಡಿ ಸಂಭ್ರಮಾಚರಣೆಯನ್ನು ತಡೆದ ಘಟನೆ ದೇವಧರ್ ಕ್ರಿಕೆಟ್ ಟೂರ್ನಿಯ ಇಂಡಿಯಾ ಬಿ ವಿರುದ್ಧದ ಪಂದ್ಯದ ವೇಳೆ ನಡೆದಿದೆ.

    ಪಂದ್ಯದಲ್ಲಿ ರಹಾನೆ 156 ಎಸೆತಗಳಲ್ಲಿ 144 ರನ್ ಸಿಡಿಸಿ ಮಿಂಚಿದರು. ಆದರೆ ಇದಕ್ಕೂ ಮುನ್ನ ಪಂದ್ಯದ 37ನೇ ಓವರ್ ನಲ್ಲಿ 97 ರನ್ ಗಳಿಸಿದ್ದ ರಹಾನೆ ಶತಕ ಪೂರ್ಣಗೊಂಡಿದೆ ಎಂದು ಸಂಭ್ರಮಿಸಿದ್ದರು. ಶತಕ ಗಳಿಸಲು 3 ರನ್ ಅಗತ್ಯವಿದ್ದರು ಪಂದ್ಯದ ಸ್ಕೋರರ್ಸ್ 100 ರನ್ ಪೂರ್ಣಗೊಂಡಿದೆ ಎಂದು ಬೋರ್ಡ್ ನಲ್ಲಿ ಪ್ರದರ್ಶಿಸಿ ಎಡವಟ್ಟು ಮಾಡಿದ್ದರು.

    ಪಂದ್ಯದಲ್ಲಿ ಇಂಡಿಯಾ ಸಿ ತಂಡ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿದ್ದರೆ. ಸಿ ತಂಡದ ಗುರಿ ಬೆನ್ನತ್ತಿದ ಬಿ ತಂಡ 46.1 ಓವರ್ ಗಳಲ್ಲಿ 323 ರನ್ ಗಳಿಗೆ ಅಲೌಟ್ ಆಗುವ ಮೂಲಕ ಸೋಲುಂಡಿತು. ಇದೇ ಪಂದ್ಯದಲ್ಲಿ ಯುವ ಆಟಗಾರ ಇಶಾನ್ ಕಿಶನ್ 87 ಎಸೆತಗಳಲ್ಲಿ 144 ರನ್ ಸಿಡಿಸಿದರು. ಇಂಡಿಯಾ ಬಿ ತಂಡವನ್ನು ಶ್ರೇಯರ್ ಐಯ್ಯರ್ ಮುನ್ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv