Tag: Illegal alcohol Sales

  • ಲಾಕ್‍ಡೌನ್ ನಡುವೆ ಬೆಂಗ್ಳೂರಿನಲ್ಲಿ ಮದ್ಯ ಮಾರಾಟ- 90 ರೂ. ಎಣ್ಣೆ 600ಕ್ಕೆ ಮಾರಾಟ

    ಲಾಕ್‍ಡೌನ್ ನಡುವೆ ಬೆಂಗ್ಳೂರಿನಲ್ಲಿ ಮದ್ಯ ಮಾರಾಟ- 90 ರೂ. ಎಣ್ಣೆ 600ಕ್ಕೆ ಮಾರಾಟ

    -ಖಾಕಿ ಸರ್ಪಗಾವಲಿನ ನಡ್ವೆ  ಬಿಂದಾಸ್ ಮಾರಾಟ
    -ಹಸಿವು ತುಂಬಿಸುವರಿಂದಲೇ ಮದ್ಯ ಪೂರೈಕೆ

    ಬೆಂಗಳೂರು: ಕೊರೊನಾ ತಡೆಗಾಗಿ ವಿಧಿಸಿರುವ ಲಾಕ್‍ಡೌನ್ ನ್ನು ಕೆಲ ಖದೀಮರು ಬಂಡವಾಳವಾಗಿ ಮಾಡಿಕೊಂಡು ಅಕ್ರಮವಾಗಿ ಮದ್ಯ ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ಪಬ್ಲಿಕ್ ಟಿವಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಎಣ್ಣೆ ದಂಧೆ ಬಯಲಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕೆಲ ದಂಧೆಕೋರರು ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು 90 ರೂ. ಬೆಲೆಯ ಮದ್ಯವನ್ನು ಬರೋಬ್ಬರಿ 600 ರೂ.ಗೆ ಮಾರಾಟ ಮಾಡುತ್ತಿರೋದು ಪಬ್ಲಿಕ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ರಾಜ್ಯದ ಮೂಲೆ ಮೂಲೆಗಳಿಂದ ಮದ್ಯವನ್ನು ತರುತ್ತಿರುವ ದಂಧೆಕೋರರು ಖಾಕಿ ಸರ್ಪಗಾವಲಿನಲ್ಲೇ ರಾಜಾರೋಷವಾಗಿ ದಂಧೆ ನಡೆಸುತ್ತಿದ್ದಾರೆ. ಹೆದ್ದಾರಿಯಲ್ಲಿ ಖಾಕಿ ಬಂದೋಬಸ್ತ್ ಕಲ್ಪಿಸಲಾಗಿದ್ದರೂ, ಮದ್ಯ ಸಿಲಿಕಾನ್ ಸಿಟಿ ಪ್ರವೇಶಿಸುತ್ತಿರೋದು ಗಮನಿಸಿದ್ರೆ, ಮೇಲ್ನೋಟಕ್ಕೆ ಪೊಲೀಸರ ವೈಫಲ್ಯ ಎದ್ದು ಕಾಣಿಸುತ್ತಿದೆ.

    ಮಧ್ಯರಾತ್ರಿ ಎರಡು, ಮೂರು ಗಂಟೆಗೆ ರಾಮನಗರ, ಕುಣಿಗಲ್, ತುಮಕೂರಿನಿಂದ ಬೆಂಗಳೂರಿಗೆ ಮದ್ಯ ಪೂರೈಕೆ ಆಗುತ್ತಿದೆ. ಈ ಮದ್ಯವನ್ನು ಸ್ವಿಗ್ಗಿ, ಝೋಮ್ಯಾಟೊ ಬ್ಯಾಗ್ ಗಳಲ್ಲಿ ಖದೀಮರು ಹಾಕಿಕೊಂಡು ಸಿಲಿಕಾನ್ ಸಿಟಿಯಲ್ಲಿ ಮನೆ ಮನೆಗೆ ತೆರಳಿ ಸರಬರಾಜು ಮಾಡುತ್ತಿದ್ದಾರೆ. ಯಾರ ಭಯವಿಲ್ಲದೇ ಮದ್ಯ ಮಾರಾಟ ಮಾಡುತ್ತಿರೋದು ಸಿಲಿಕಾನ್ ಸಿಟಿ ಪೊಲೀಸರಿಗೆ ಗೊತ್ತೇ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರ ಸಿಗಬೇಕಿದೆ.

    ಅಕ್ರಮ ಮದ್ಯ ಮಾರಾಟದ ಸುದ್ದಿ ತಿಳಿಯುತ್ತಿದ್ದಂತೆ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ತಂಡದ ಕ್ಯಾಮೆರಾದಲ್ಲಿ ಎಣ್ಣೆ ದಂಧೆ ಸಂಪೂರ್ಣವಾಗಿ ಸೆರೆಯಾಗಿದೆ. ಪಬ್ಲಿಕ್ ಟಿವಿ ಪ್ರತಿನಿಧಿ ಮದ್ಯ ಖರೀದಿಸುವ ಗ್ರಾಹಕನಾಗಿ ಮಾರುವೇಷದಲ್ಲಿ ಹೋದಾಗ ದಂಧೆಕೋರ ದಂಧೆಯ ಸಂಪೂರ್ಣ ಮಾಹಿತಿಯನ್ನು ರಿವೀಲ್ ಮಾಡಿದ್ದಾನೆ.

    ಸ್ಥಳ- ಸುಂಕದಕಟ್ಟೆ
    ಪಬ್ಲಿಕ್ ಟಿವಿ: ಎಷ್ಟು ಹೇಳಿದ್ರು
    ಮದ್ಯ ವಿತರಕ : 600 ರೂಪಾಯಿ
    ಪಬ್ಲಿಕ್ ಟಿವಿ: ಹೇ..ನನ್ಗೆ 550 ಹೇಳಿದ್ರು
    ಮದ್ಯ ವಿತರಕ: ಇಲ್ಲ.. ಕೇಳ್ರಿ..ಸಿಗೊದೆ ನಮ್ಗೆ 250. ಊರು ಕಡೆಯಿಂದ ತರಿಸೋದು ನಾವು. ಇಲ್ಲೆಲ್ಲ ಸೀಲ್ ಹೊಡೆದಿದಾರೆ.
    ಪಬ್ಲಿಕ್ ಟಿವಿ: ನೈಂಟಿ ರೂಪಿಸ್ ಬ್ರೋ ಇದು
    ಮದ್ಯ ವಿತರಕ: ಗೊತ್ತು ಗುರು..ನಮ್ಗೂ ಗೊತ್ತು ನಿಮ್ಗೂ ಗೊತ್ತು. ನಾವು ಅಲ್ಲಿಂದ ತರಬೇಕಲ್ಲ
    ಪಬ್ಲಿಕ್ ಟಿವಿ: ಎಲ್ಲಿಂದ ತರೋದು
    ಮದ್ಯ ವಿತರಕ: ಬೇರೆ ಕಡೆಯಿಂದ.
    ಪಬ್ಲಿಕ್ ಟಿವಿ: ಒಂದು ರೇಟ್ ಮಾಡಿ ಕೊಡಿ. ಇವತ್ತಿಗಷ್ಟೆ ಅಲ್ಲ.
    ಮದ್ಯ ವಿತರಕ: ನೋಡಣ್ಣ. ನಮ್ದು ಆಗಿದ್ರೆ ಹೇಗಾದ್ರೂ ಆಗ್ತಿತ್ತು. ಅಲ್ಲೇ 550 ರೂಪಾಯಿ ಕೊಟ್ಟು ತರ್ತಿವಿ.
    ಮತ್ತೊಬ್ಬ ಮದ್ಯ ವಿತರಕ: ಅದ್ರಲ್ಲಿ ಏನು ಸಿಗಲ್ಲಣ್ಣ. ಸುಮ್ನೆ
    ಪಬ್ಲಿಕ್ ಟಿವಿ: ನೀವು ಎಲ್ಲಿಂದ ತರೋದು?
    ಮದ್ಯ ವಿತರಕ: ರಾಮನಗರ ಆಕಡೆ ಈಕಡೆಯಿಂದ ತರೋದು.ಕುಣಿಗಲ್ ಯಡಿಯೂರುಯಿಂದ ತರ್ತಾರೆ. ಇಲ್ಲಿ ಎಲ್ಲಿಯೂ ಸಿಗಲ್ಲಣ್ಣ
    ಪಬ್ಲಿಕ್ ಟಿವಿ: ಬೇರೆ ಕಡೆಯಿಂದ ತರ್ತಿರಲ್ಲ..ನಿಮ್ಗೆ ಭಯ ಆಗಲ್ವಾ..!
    ಮದ್ಯ ವಿತರಕ: ಆಗ್ತದೆ ಏನು ಮಾಡೋದು ಅಣ.
    ಪಬ್ಲಿಕ್ ಟಿವಿ: ಕವರ್ ಇಲ್ವಾ?
    ಮದ್ಯ ವಿತರಕ: ಹಂಗೆ ಎತ್ಕೊಂಡು ಬಿಡಿ
    ಪಬ್ಲಿಕ್ ಟಿವಿ: ಹೇಗೆ ಒಟ್ಟಿಗೆ ಕಾಟನ್ ತರ ತರಿಸ್ತೀರಾ..?
    ಮದ್ಯ ವಿತರಕ: ಒಂದು ಕೇಸ್ ತರಿಸ್ತೀವಿ
    ಪಬ್ಲಿಕ್ ಟಿವಿ : ಎಲ್ಲಿಂದ ಹೇಗೆ ತರಿಸ್ತಿರಿ?
    ಮದ್ಯ ವಿತರಕ: ಇದ್ರಲ್ಲಿ ಇಟ್ಕೊಳ್ಳೋದು
    ಪಬ್ಲಿಕ್ ಟಿವಿ: ಬೈಕಾ..? ಬೈಕ್ ಬಿಡಲ್ವಾಲ್ಲ?
    ಮದ್ಯ ವಿತರಕ: ಬರಬಹುದು
    ಪಬ್ಲಿಕ್ ಟಿವಿ: ಬೈಕ್ ಓಡಾಡಂಗಿಲ್ವಲ್ಲ. ಹಂಗೆ ಮಾಡ್ತಿರಿ?
    ಮದ್ಯ ವಿತರಕ: ಅದು ಇದು ಹುಷಾರಿಲ್ಲ ಅಂತ ಹೇಳ್ಕೊಂಡು ಹೋಗಬೇಕು.
    ಪಬ್ಲಿಕ್ ಟಿವಿ: ಕೇಸಲ್ಲಿ ಎಷ್ಟಿರುತ್ತೆ?
    ಮದ್ಯ ವಿತರಕ : 48
    ಪಬ್ಲಿಕ್ ಟಿವಿ : 48ನೂ ಗಾಡಿಯಲ್ಲೇ ಇಡುತ್ತಾ…?
    ಮದ್ಯ ವಿತರಕ: ಅಲ್ಲಿಲ್ಲಿ ಇಡ್ಕೊಂಡು ಬರ್ತಿವಿ
    ಪಬ್ಲಿಕ್ ಟಿವಿ: ಅಷ್ಟು ರಿಸ್ಕ್ ತೊಗೋತಿರಿ. ಯಾರದ್ರೂ ಏನಾದ್ರು ಮಾಡಿದ್ರೆ
    ಮದ್ಯ ವಿತರಕ: ಸಿಗೋದು 50 ರೂಪಾಯಿ ಅಷ್ಟೆ
    ಪಬ್ಲಿಕ್ ಟಿವಿ: ಮತ್ತೆ ಯಾಕೆ ಅಷ್ಟೊಂದು ರಿಸ್ಕ್ ತೊಗೊತಿರಿ. ಕಾಲೇಜಿಗೆ ಹೋಗಲ್ವಾ..?
    ಮದ್ಯ ವಿತರಕ: ಇನ್ನೊಂದು ಎಕ್ಸಾಂ ಇದೆ. ಇಂಗ್ಲೀಷ್.
    ಪಬ್ಲಿಕ್ ಟಿವಿ: ಸೆಕೆಂಡ್ ಪಿಯುಸಿನಾ
    ಮದ್ಯ ವಿತರಕ: ಹು.
    ಪಬ್ಲಿಕ್ ಟಿವಿ: ಈಗ ನಿಮ್ಗೆ ಪಾಸ್ ಇರಲ್ವಲ್ಲ. ಹೇಗೆ ಹೊರಗಡೆ ಬರ್ತಿರಿ
    ಮದ್ಯ ವಿತರಕ: ನೈಟ್ 2, 3 ಗಂಟೆಗೆ ಹೋಗ್ತಿವಿ

    ಸುಂಕದಕಟ್ಟೆ, ಕುರುಬರ ಹಳ್ಳಿ ಹೀಗೆ ಬೆಂಗಳೂರಿನ ಹಲವು ಕಡೆ ಮದ್ಯ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಧ್ಯರಾತ್ರಿ ತರಕಾರಿ, ದಿನಸಿ ತರುವ ವಾಹನಗಳ ಮೂಲಕವೂ ಮದ್ಯ ನಗರಕ್ಕೆ ಬರುತ್ತಿದೆ ಎನ್ನಲಾಗುತ್ತಿದೆ. ಟೋಲ್ ಗಳಲ್ಲಿ ಸಾಲು ಸಾಲು ಪೊಲೀಸರು ಇದ್ರೂ, ಅವರ ದಿಕ್ಕು ತಪ್ಪಿಸಿ ಎಣ್ಣೆ ರವಾನೆ ಮಾಡಲಾಗುತ್ತದೆ. ಈ ಸುದ್ದಿ ನೋಡಿಯಾದ್ರೂ ಅಬಕಾರಿ ಸಚಿವ ನಾಗೇಶ್ ಮತ್ತು ಪೊಲೀಸರು ಎಚ್ಚೆತ್ತುಕೊಂಡು ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಿದೆ.

  • ನಿದ್ದೆಗೆ ಜಾರಿದ ಕುಡುಕನನ್ನು ಕಚ್ಚಿ ಕಚ್ಚಿ ತಿಂದ ಕರಿ ಇರುವೆಗಳು!

    ನಿದ್ದೆಗೆ ಜಾರಿದ ಕುಡುಕನನ್ನು ಕಚ್ಚಿ ಕಚ್ಚಿ ತಿಂದ ಕರಿ ಇರುವೆಗಳು!

    ಚಿಕ್ಕಬಳ್ಳಾಪುರ: ಕಂಠಪೂರ್ತಿ ಮದ್ಯ ಕುಡಿದ ಅಮಲಿನಲ್ಲಿ ಗಡದ್ದಾಗಿ ನಿದ್ದೆಗೆ ಜಾರಿದ್ದ ವ್ಯಕ್ತಿಯೊಬ್ಬನನ್ನು ಕರಿ ಇರುವೆಗಳು ಕಚ್ಚಿ-ಕಚ್ಚಿ ತಿಂದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಅಂತರಹಳ್ಳಿ ಗ್ರಾಮದ ತಿಮ್ಮರಾಜು ಇರುವೆಗಳ ದಾಳಿಗೆ ಒಳಗಾದ ವ್ಯಕ್ತಿ. ಅದೃಷ್ಟವಶಾತ್ ಮಧ್ಯಾಹ್ನವೇ ಘಟನೆ ನಡೆದಿದ್ದರಿಂದ ತಿಮ್ಮರಾಜು ಬದುಕುಳಿದಿದ್ದಾನೆ.

    ತಿಮ್ಮರಾಜು ಕುಡಿದ ಅಮಲಿನಲ್ಲಿ ಅಂತರಹಳ್ಳಿ ಗ್ರಾಮದ ದೇವಾಲಯವೊಂದರ ಮುಂದೆ ನಿದ್ದೆಗೆ ಜಾರಿದ್ದನು. ಈ ವೇಳೆ ತಿಮ್ಮರಾಜು ಮೈ ಮೇಲೆ ಮುತ್ತಿಕೊಂಡು ಕರಿ ಇರುವೆಗಳು, ಕಾಲು, ಕೈ, ಹೊಟ್ಟೆ, ಮೂಗು ಬಾಯಿ, ತಲೆ ಇಡೀ ದೇಹದ ಮೇಲೆ ದಾಳಿ ನಡೆಸಿದ್ದರಿಂದ ಅನೇಕ ಕಡೆ ಗಾಯಗಳಾಗಿವೆ. ಇರುವೆಗಳು ಕಚ್ಚುತ್ತಿವೆ ಎನ್ನುವ ಅರಿವು ಇಲ್ಲದೇ ತಿಮ್ಮರಾಜು ಬಿದ್ದಿದ್ದನು.

     

    ಇರುವೆ ಕಚ್ಚುತ್ತಿದ್ದರೂ ಹಾಗೇ ಮಲಗಿದ್ದನ್ನು ನೋಡಿದ ಗ್ರಾಮಸ್ಥರೊಬ್ಬರು ಬೆಚ್ಚಿಬಿದ್ದಿದ್ದಾರೆ. ಕೂಡಲೇ ವಿಷಯ ತಿಳಿದು ಗುಂಪುಗೂಡಿದ ಗ್ರಾಮಸ್ಥರು, ತಿಮ್ಮರಾಜುನನ್ನು ಎಚ್ಚರಿಸಿದ್ದಾರೆ. ಮಧ್ಯಾಹ್ನವೇ ಘಟನೆ ನಡೆದಿದ್ದರಿಂದ ತಿಮ್ಮರಾಜು ಭಾರೀ ಅನಾಹುತದಿಂದ ಪಾರಾಗಿದ್ದಾನೆ. ರಾತ್ರಿ ವೇಳೆ ಜನ ಮಲಗಿರುವಾಗ ಘಟನೆ ನಡೆದಿದ್ದರೇ ತಿಮ್ಮರಾಜು ಬದುಕುಳಿಯುವುದು ಕಷ್ಟವಾಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಸದ್ಯ ಗಾಯಾಳು ತಿಮ್ಮರಾಜುನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಗ್ರಾಮಸ್ಥರು ಅಕ್ರಮ ಮದ್ಯ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಮದ ರೇಷನ್ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಇಂತಹ ಅನಾಹುತ ಸಂಭವಿಸಿದೆ. ಅಕ್ರಮ ಮದ್ಯ ಮಾರುವ ಅಂಗಡಿಗಳನ್ನು ಮುಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮನೆ ಮೇಲೆ ಮಹಿಳೆಯರ ದಾಳಿ

    ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಮನೆ ಮೇಲೆ ಮಹಿಳೆಯರ ದಾಳಿ

    ಬೆಳಗಾವಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಮಹಿಳೆಯರು ದಾಳಿ ನಡೆಸಿರುವ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಹೊಸ ಶಿರಹಟ್ಟಿ ಗ್ರಾಮದಲ್ಲಿ ಘಟನೆದಿದೆ.

    ಗ್ರಾಮದ ಗುರುಲಿಂಗ ಅಂಬಿ ಎಂಬ ವ್ಯಕ್ತಿಯ ಮನೆ ಮೇಲೆ ದಾಳಿ ನಡೆಸಿದ ಮಹಿಳೆಯರು, ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಮದ್ಯವನ್ನು ರಸ್ತೆ ಮಧ್ಯೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

    ಹಲವು ದಿನಗಳಿಂದ ಗುರುಲಿಂಗ ಅಂಬಿ ಎಂಬವರು ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದರು, ದಿನನಿತ್ಯ ಅಕ್ರಮ ಮದ್ಯ ಮಾರಾಟದಿಂದ ರೋಸಿ ಹೋಗಿದ್ದ ಗ್ರಾಮದ ಮಹಿಳೆಯರು ತಾವೇ ಮನೆ ಮೇಲೆ ದಾಳಿ ನಡೆಸಿ ಅಧಿಕಾರಿಗಳ ಕಣ್ತೆರೆಸುವ ಪ್ರಯತ್ನ ಮಾಡಿದ್ದಾರೆ.

    ಗ್ರಾಮದಲ್ಲಿ ಹಲವು ದಿನಗಳಿಂದ ಅಕ್ರಮವಾಗಿ ನಡೆಸಯುತ್ತಿರೋ ಮದ್ಯ ಮಾರಾಟದ ಕುರಿತು ಅಧಿಕಾರಿಗಳಿಗೆ ಮಾಹಿತಿ ಇದ್ದರೂ, ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದಾರೆ.

    ಅಕ್ರಮ ಮದ್ಯ ಮಾರಾಟ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇನ್ನು ಚಿಕ್ಕೋಡಿ ಉಪ ವಿಭಾಗದಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ನಡೆದಿದ್ದರೂ, ಅಬಕಾರಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸದ ಸಂಗತಿಯಾಗಿದೆ.