Tag: icj

  • ಕುಲಭೂಷನ್ ಜಾಧವ್ ಪ್ರಕರಣ- ಭಾರತದ ವಕೀಲರ ಶುಲ್ಕ 1 ರೂ., ಪಾಕ್ ವ್ಯಯ ಮಾಡಿದ್ದು 20 ಕೋಟಿಗೂ ಅಧಿಕ

    ಕುಲಭೂಷನ್ ಜಾಧವ್ ಪ್ರಕರಣ- ಭಾರತದ ವಕೀಲರ ಶುಲ್ಕ 1 ರೂ., ಪಾಕ್ ವ್ಯಯ ಮಾಡಿದ್ದು 20 ಕೋಟಿಗೂ ಅಧಿಕ

    ನವದೆಹಲಿ: ಹೇಗ್‍ನ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪ್ರಕರಣದ ಸಾರ್ವಜನಿಕ ವಿಚಾರಣೆ ನಡೆದು ತೀರ್ಪು ನೀಡಲಾಗಿದೆ. ಈ ಸಂಬಂಧ ಭಾರತದ ಪರವಿದ್ದ ಹಿರಿಯ ವಕೀಲ ಹರೀಶ್ ಸಾಲ್ವೆ ಶುಲ್ಕವಾಗಿ ಕೇವಲ 1 ರೂ. ಪಡೆದರೆ, ಪಾಕ್ ಪರ ವಕೀಲರು 20 ಕೋಟಿ ರೂ.ಗೂ ಅಧಿಕ ಶುಲ್ಕವನ್ನು ಪಡೆದಿದ್ದಾರೆ.

    ವಕೀಲ ಹರೀಶ್ ಸಾಲ್ವೆ ಅವರು ಐಸಿಜೆಯಲ್ಲಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತದ ಪರವಾಗಿ ವಾದ ಮಂಡಿಸಿ ಜಯಗಳಿಸಿದ್ದಾರೆ. ಆದರೆ ಅವರು ಶುಲ್ಕವಾಗಿ ಕೇವಲ 1 ರೂ. ಮಾತ್ರ ಪಡೆದಿದ್ದಾರೆ. ಪಾಕ್ ಈ ಪ್ರಕರಣವನ್ನು ಗೆಲ್ಲುವ ನಿಟ್ಟಿನಲ್ಲಿ ಅವರ ಪರ ವಕೀಲ ಖವಾರ್ ಖುರೇಷಿ ಅವರಿಗೆ ಬರೋಬ್ಬರಿ 20 ಕೋಟಿಗೂ ಅಧಿಕ ಹಣವನ್ನು ಶುಲ್ಕವಾಗಿ ನೀಡಿದೆ. ಇದನ್ನೂ ಓದಿ: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಐಸಿಜೆ ತೀರ್ಪನ್ನು ಶ್ಲಾಘಿಸಿದ ಪಾಕ್ ಪ್ರಧಾನಿ

    ಈ ಬಗ್ಗೆ ಕಳೆದ ವರ್ಷ ರಾಷ್ಟ್ರೀಯ ಸಂಸತ್ತಿನಲ್ಲಿ ಪಾಕಿಸ್ತಾನ ನೀಡಿರುವ ದೇಶದ ಬಜೆಟ್ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಯುಕೆ ಮೂಲದ ನ್ಯಾಯವಾದಿ ಖವಾರ್ ಖುರೇಷಿಗೆ ಪಾಕ್ 20 ಕೋಟಿಗೂ ಅಧಿಕ ಹಣವನ್ನು ಶುಲ್ಕದಲ್ಲಿ ನೀಡಿದೆ ಎಂದು ನಮೂದಿಸಿದೆ. ಖುರೇಷಿ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾನೂನು ಪದವೀಧರರಾಗಿದ್ದು, ಐಸಿಜೆಯಲ್ಲಿ ಪ್ರಕರಣ ಸಂಬಂಧ ಹೋರಾಡುತ್ತಿರುವ ಅತ್ಯಂತ ಕಿರಿಯ ವಕೀಲ ಎಂದು ಹೇಳಲಾಗಿದೆ.

    ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ವಕೀಲ ಹರೀಶ್ ಸಾಲ್ವೆ ಅವರು ಪಡೆದ ಶುಲ್ಕದ ಬಗ್ಗೆ ಮೇ 15, 2017 ರಂದು ಮಾಡಿದ ಟ್ವೀಟ್‍ನಲ್ಲಿ ತಿಳಿಸಿದ್ದರು. ಸಾಲ್ವೆ ಅವರು ಹೇಗ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಕೇವಲ 1 ರೂ.ಗಳನ್ನು ಪಡೆದಿದ್ದಾರೆ ಎಂದು ಹೇಳಿದ್ದರು. ಸಾಮಾನ್ಯವಾಗಿ ಹರೀಶ್ ಸಾಲ್ವೆ ಅವರು 30 ಲಕ್ಷ ರೂ. ಅನ್ನು ಒಂದು ದಿನದ ವಿಚಾರಣೆಗಾಗಿ ಪಡೆಯುತ್ತಾರೆ ಎಂದು ಮೂಲಗಳು ತಿಳಿಸಿವೆ.

    ಏನಿದು ಪ್ರಕರಣ?
    ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. 2017ರ ಏಪ್ರಿಲ್ ನಲ್ಲಿ ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿತ್ತು.

    ವಿಚಾರಣೆ ವೇಳೆ ರಾ ಪರ ನಾನು ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕುಲಭೂಷಣ್ ಜಾಧವ್ ತಪ್ಪೊಪ್ಪಿಕೊಂಡಿದ್ದರು ಎಂದು ಐಎಸ್‍ಪಿಆರ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ಕೂಲಭೂಷಣ್ ಜಾಧವ್ ನೌಕಾ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದರು. ಆದರೆ ಅವರು ರಾ ಪರವಾಗಿ ಗೂಢಚರ್ಯೆ ನಡೆಸುತ್ತಿರುವ ಆರೋಪವನ್ನು ಭಾರತ ಸರ್ಕಾರ ನಿರಾಕರಿಸಿತ್ತು. 2016ರ ಮಾರ್ಚ್ 3ರಂದು ಬಲೂಚಿಸ್ತಾನದ ಮಶೇಕಲ್ ಎಂಬಲ್ಲಿ ಕುಲಭೂಷಣ್ ಜಾಧವ್ ಅವರು ಅರೆಸ್ಟ್ ಅಗಿದ್ದರು. ಅಲ್ಲದೆ 2017ರಲ್ಲಿ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು.

    ವಿಯೆನ್ನಾ ಒಪ್ಪಂದದ ಪ್ರಕಾರ ಕುಲಭೂಷಣ್‍ಗೆ ಭಾರತ ರಾಜತಾಂತ್ರಿಕ ನೆರವು ನೀಡಲು ಅವಕಾಶ ಮಾಡಿಕೊಡಬೇಕಿತ್ತು. ಈ ಕುರಿತು 16 ಬಾರಿ ಭಾರತದ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು. ಹೀಗಾಗಿ ಭಾರತ ಮೇ 2017ರಂದು ಅಂತರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. ಪ್ರಕರಣವನ್ನು ಕೈಗೆತ್ತಿಕೊಂಡ 10 ಸದಸ್ಯರುಳ್ಳ ನ್ಯಾಯಪೀಠ 18 ಮೇ 2017ರಂದು ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಿತ್ತು.

    ಭಾರತ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದು, ನಿವೃತ್ತ ನೌಕಾ ಸೇನಾಧಿಕಾರಿ ಕುಲಭೂಷಣ್‍ರನ್ನು ಇರಾನ್‍ನಿಂದ ಪಾಕಿಸ್ತಾನ ಕಿಡ್ನಾಪ್ ಮಾಡಿತ್ತು ಎಂಬ ಅಂಶವನ್ನು ಕೋರ್ಟ್‍ನಲ್ಲಿ ಭಾರತ ಮಂಡಿಸಿತ್ತು.

  • ವಿಶ್ವಮಟ್ಟದಲ್ಲಿ ಭಾರತಕ್ಕೆ ದೊಡ್ಡ ಜಯ: ಐಸಿಜೆಗೆ ದಲ್ವೀರ್ ಭಂಡಾರಿ ಪುನರಾಯ್ಕೆ

    ವಿಶ್ವಮಟ್ಟದಲ್ಲಿ ಭಾರತಕ್ಕೆ ದೊಡ್ಡ ಜಯ: ಐಸಿಜೆಗೆ ದಲ್ವೀರ್ ಭಂಡಾರಿ ಪುನರಾಯ್ಕೆ

    ನ್ಯೂಯಾರ್ಕ್: ಹೇಗ್‍ನಲ್ಲಿರುವ ಅಂತರ ರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ನ್ಯಾಯಾಧೀಶರಾಗಿ ದಲ್ವೀರ್ ಭಂಡಾರಿ ಪುನರಾಯ್ಕೆ ಆಗುವ ಮೂಲಕ ಭಾರತಕ್ಕೆ ವಿಶ್ವ ಮಟ್ಟದಲ್ಲಿ ದೊಡ್ಡ ಜಯ ಸಿಕ್ಕಿದೆ. ಕೊನೆ ಕ್ಷಣದಲ್ಲಿ ಬ್ರಿಟನ್ ಅಭ್ಯರ್ಥಿ ಕ್ರಿಸ್ಟೋಫರ್ ಗ್ರೀನ್ ವುಡ್ ನಾಮಪತ್ರ ಹಿಂತೆಗೆದುಕೊಂಡ ಕಾರಣ ಭಂಡಾರಿ ಸುಲಭವಾಗಿ ಗೆದ್ದುಕೊಂಡಿದ್ದಾರೆ.

    ನ್ಯೂಯಾರ್ಕ್‍ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಭಂಡಾರಿ ಅವರಿಗೆ ಸಾಮಾನ್ಯ ಸಭೆಯಲ್ಲಿ 193 ಮತಗಳ ಪೈಕಿ 183 ಮತಗಳು ಬಿದ್ದಿದ್ದರೆ, ಭದ್ರತಾ ಮಂಡಳಿಯಲ್ಲಿ ಎಲ್ಲ 15 ಮತಗಳೂ ಭಂಡಾರಿ ಪರ ಚಲಾವಣೆಯಾಗಿವೆ.

    ಐಸಿಜೆಯಲ್ಲಿ ತೆರವಾಗಿದ್ದ 5 ಸ್ಥಾನಗಳಿಗೆ ಈ ಹಿಂದೆ 4 ನ್ಯಾಯಮೂರ್ತಿಗಳ ಆಯ್ಕೆ ನಡೆದಿದ್ದು, ಬಾಕಿ ಇದ್ದ ಒಂದು ಸ್ಥಾನಕ್ಕಾಗಿ ದಲ್ವೀರ್ ಭಂಡಾರಿ ಹಾಗೂ ಬ್ರಿಟನ್‍ನ ಕ್ರಿಸ್ಟೋಫರ್ ಗ್ರೀನ್‍ವುಡ್ ಕಣದಲ್ಲಿದ್ದರು. ಈಗ ದಲ್ವೀರ್ ಭಂಡಾರಿ ಆಯ್ಕೆಯಾಗುವ ಮೂಲಕ 1945ರಲ್ಲಿ ಅಸ್ತಿತ್ವಕ್ಕೆ ಬಂದ ಐಸಿಜೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ ನ್ಯಾಯಾಧೀಶರಿಗೆ ಸ್ಥಾನವಿಲ್ಲದಾಗಿದೆ.

    ಸಾಮಾನ್ಯ ಸಭೆ ಹಾಗೂ ಭದ್ರತಾ ಮಂಡಳಿಗಳೆರಡರಲ್ಲೂ ಬಹುಮತ ಗಿಟ್ಟಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎನ್ನುವ ನಿಯಮದ ಐಸಿಜೆಯಲ್ಲಿದೆ. ಹೀಗಾಗಿ ಸಾಮಾನ್ಯ ಸಭೆಯಲ್ಲಿ 97 ಹಾಗೂ ಭದ್ರತಾ ಮಂಡಳಿಯಲ್ಲಿ 8 ಮತ ಗಳಿಸಿದವರಷ್ಟೇ ಐಸಿಜೆಗೆ ಆಯ್ಕೆಯಾಗುತ್ತಾರೆ. ಆದರೆ ಈ ಹಿಂದೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಸಭೆಯಲ್ಲಿ ಭಂಡಾರಿ ಅವರಿಗೆ ಹೆಚ್ಚಿನ ಮತ ಬಿದ್ದಿದ್ದರೆ, ಭದ್ರತಾ ಮಂಡಳಿಯಲ್ಲಿ ಕ್ರಿಸ್ಟೋಫರ್ ಗ್ರೀನ್‍ವುಡ್ ಅವರಿಗೆ ಹೆಚ್ಚಿನ ಮತಗಳು ಬಿದ್ದ ಕಾರಣ ಆಯ್ಕೆ ಕಗ್ಗಂಟಾಗಿತ್ತು. ಭಂಡಾರಿ ಹಾಗೂ ಗ್ರೀನ್‍ವುಡ್ ತಲಾ ಒಂದರಲ್ಲಿ ಮಾತ್ರ ಬಹುಮತ ಪಡೆದಿರುವುದರಿಂದ 12ನೇ ಸುತ್ತಿನ ಮತದಾನಕ್ಕಾಗಿ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಸೋಮವಾರ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯ ಸಭೆ ಕರೆಯಲಾಗಿತ್ತು.

    ಐಸಿಜೆಯ 15 ಸದಸ್ಯರ ಪೀಠದ 5 ಮಂದಿ ಜಡ್ಜ್ ಗಳು 9 ವರ್ಷಗಳ ಕಾಲ ನ್ಯಾಯಾಧೀಶರಾಗಿ ಮುಂದುವರಿಯಲು ಅವಕಾಶವಿದೆ. ಈ ರೀತಿ ಜಡ್ಜ್ ಆಗಿ ಮುಂದುವರೆಯಬೇಕಾದರೆ ಚುನಾವಣೆ ಸ್ಪರ್ಧಿಸಿ ಆಯ್ಕೆಯಾಗಬೇಕಾಗುತ್ತದೆ. ಮೂರು ವರ್ಷಕ್ಕೊಮ್ಮೆ ವಿಶ್ವಸಂಸ್ಥೆ ಚುನಾವಣೆ ನಡೆಸಿ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತದೆ.

    ದಲ್ವೀರ್ ಭಂಡಾರಿ ಯಾರು?
    1947 ಅಕ್ಟೋಬರ್ 1 ರಂದು ರಾಜಸ್ಥಾನದಲ್ಲಿ ಜನಿಸಿದ್ದ ದಲ್ವೀರ್ ಭಂಡಾರಿ ಈ ಹಿಂದೆ ದೆಹಲಿ ಹೈಕೋರ್ಟ್, ಬಾಂಬೆ ಹೈಕೋರ್ಟ್ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದರು. 2005 ಅಕ್ಟೋಬರ್ 28 ರಿಂದ 2012 ಏಪ್ರಿಲ್ 27ರವರೆಗೆ ಸುಪ್ರೀಂ ಕೋರ್ಟ್ ಜಡ್ಜ್ ಆಗಿ ನಿವೃತ್ತರಾದ ಬಳಿಕ 2012 ಏಪ್ರಿಲ್ ನಲ್ಲಿ ಐಸಿಜೆಗೆ ಆಯ್ಕೆಯಾಗಿದ್ದರು.

    ಮೋದಿ ಅಭಿನಂದನೆ:
    ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ದಲ್ವೀರ್ ಭಂಡಾರಿ ಅವರನ್ನು ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ವಿಜಯಿ ಆಗಲು ಶ್ರಮಪಟ್ಟ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಎಲ್ಲ ರಾಜತಾಂತ್ರಿಕ ತಂಡವನ್ನು ಅಭಿನಂದಿಸಿದ್ದಾರೆ. ಜೊತೆಗೆ ಭಾರತದ ನ್ಯಾಯಾಧೀಶರಾಗಿ ಆಯ್ಕೆ ಆಗಲು ಸಹಕಾರ ನೀಡಿದ್ದಕ್ಕೆ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯಲ್ಲಿರುವ ಎಲ್ಲ ದೇಶಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಸುಷ್ಮಾ ಸ್ವರಾಜ್ ವಂದೇ ಮಾತರಂ ಎಂದು ಬರೆದು ತಮ್ಮ ಸಂತಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ನೀವು ನಮ್ಮ ಪ್ರಧಾನಿ ಆಗಿದ್ರೆ ಚೆನ್ನಾಗಿರ್ತಿತ್ತು: ಸುಷ್ಮಾ ಸ್ವರಾಜ್‍ಗೆ ಪಾಕ್ ಮಹಿಳೆ ಟ್ವೀಟ್

     

  • ಐಸಿಜೆಯಲ್ಲಿ ಭಾರತದ ಪರ ವಾದಕ್ಕೆ ಪಾಕ್ ವಕೀಲ ಖವರ್ ಖುರೇಷಿಗೆ ಮಣೆ ಹಾಕಿದ್ದ ಯುಪಿಎ

    ಐಸಿಜೆಯಲ್ಲಿ ಭಾರತದ ಪರ ವಾದಕ್ಕೆ ಪಾಕ್ ವಕೀಲ ಖವರ್ ಖುರೇಷಿಗೆ ಮಣೆ ಹಾಕಿದ್ದ ಯುಪಿಎ

    – ಕಾಂಗ್ರೆಸ್ಸಿಗೆ ಮೇಕ್ ಇನ್ ಇಂಡಿಯಾ ವಕೀಲರು ಬೇಡ, ಮೇಡ್ ಇನ್ ಪಾಕ್ ವಕೀಲರು ಬೇಕು
    – ವೃತ್ತಿರಪರರನ್ನು ನೇಮಿಸುವುದಕ್ಕೆ ಯಾವುದೇ ಗಡಿ ಇಲ್ಲ ಎಂದ ಕಾಂಗ್ರೆಸ್

    ನವದೆಹಲಿ: ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ಪ್ರಕರಣದಲ್ಲಿ ಪಾಕ್ ಪರ ವಾದಿಸಿದ ವಕೀಲ ಖವರ್ ಖುರೇಶಿ ಅವರು 17 ವರ್ಷಗಳ ಹಿಂದೆ ನೆದರ್‍ಲ್ಯಾಂಡಿನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ(ಐಸಿಜೆ) ಭಾರತವನ್ನು ಪ್ರತಿನಿಧಿಸಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    2004ರ ದಾಭೋಲ್ ಪವರ್ ಪ್ರಾಜೆಕ್ಟ್ ಕೇಸ್‍ನಲ್ಲಿ ಭಾರತದ ಪರ ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ಖವರ್ ಖುರೇಷಿ ವಾದಿಸಿದ್ದರು. ಇದೀಗ ಆ ವಿಚಾರವನ್ನು ಬಿಜೆಪಿ ಎತ್ತಿಕೊಂಡು ಕಾಂಗ್ರೆಸ್ ನಡೆಯನ್ನು ಪ್ರಶ್ನಿಸಿ ಟೀಕಿಸಿದ್ದು ವ್ಯಾಪಕ ಚರ್ಚೆಗೆ ಕಾರಣವಾಗುತ್ತಿದೆ.

    ಏನಿದು ಪ್ರಕರಣ?
    ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯಲ್ಲಿರುವ ಅಮೆರಿಕ ಮೂಲದ ಎನ್‍ರೋನ್ ಕಂಪೆನಿ ಒಡೆತನದ ದಾಭೋಲ್ ಪವರ್ ಪ್ರಾಜೆಕ್ಟ್ ನಲ್ಲಿ 2001ರಲ್ಲಿ ಲೆಕ್ಕಪತ್ರ ಹಗರಣ ಸದ್ದು ಮಾಡಿತ್ತು. ಕೊನೆಗೆ ಕಂಪೆನಿ ಮಾಲೀಕರು ಹಾಗೂ ಮಹಾರಾಷ್ಟ್ರ ಸರ್ಕಾರದ ಮಧ್ಯೆ ವಿವಾದ ಉಂಟಾಗಿತ್ತು. ಬಳಿಕ ಭಾರತ ಸರ್ಕಾರ ಮಧ್ಯಸ್ಥಿಕೆ ವಹಿಸಿತ್ತು. ಆಗ 6 ಬಿಲಿಯನ್ ಡಾಲರ್ ನೀಡುವಂತೆ ಎನ್‍ರೋನ್ ಕಂಪೆನಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿತ್ತು. 2004ರಲ್ಲಿ ಯುಪಿಎ ಸರ್ಕಾರ ಅಧಿಕಾರಕ್ಕೆ ಏರಿದ ಬಳಿಕ ದಾಭೋಲ್ ಕೇಸಿಗೆ ಸಂಬಂಧಿಸಿದ ಸಂಪೂರ್ಣ ಕಾನೂನು ತಂಡವನ್ನು ಬದಲಾಯಿಸಿತ್ತು. ದೇಶದ ವಕೀಲರನ್ನು ಕಡೆಗಣಿಸಿ ಖವರ್ ಖುರೇಷಿ ಅವರನ್ನು ಭಾರತ ಪರವಾಗಿ ಐಸಿಜೆಯಲ್ಲಿ ಪ್ರತಿನಿಧಿಸಿ, ವಾದಿಸುವುದಕ್ಕೆ ನೇಮಕ ಮಾಡಿತ್ತು.

    ಕೇಸ್ ಏನಾಯ್ತು?
    ಕೇಸ್‍ನಲ್ಲಿ ಭಾರತದ ಪರ ವಾದಿಸಿದ್ದ ಖುರೇಷಿ ಸೋತಿದ್ದರು. ಕೊನೆಗೆ ಆ ಕೇಸನ್ನು ಆರ್ಬಿಟ್ರೇಶನ್ (ರಾಜಿ ಪಂಚಾತಿಕೆ) ಮೂಲಕ ಇತ್ಯರ್ಥಪಡಿಸಲಾಗಿತ್ತು.

    ಮರು ಜೀವ ಬಂದಿದ್ದು ಹೇಗೆ?
    ಭಾರತದ ಪರವಾಗಿ ಐಸಿಜೆಯಲ್ಲಿ ವಾದಿಸಲು ವಕೀಲ ಖವರ್ ಖುರೇಷಿ ಅವರನ್ನು ಯುಪಿಎ ಸರ್ಕಾರಕ್ಕೆ ಫಾಕ್ಸ್ ಮ್ಯಾಂಡಲ್ ಎನ್ನುವ ಸಂಸ್ಥೆ ಎಂದು ವಯಾನ್ ನ್ಯೂಸ್ ಬಹಿರಂಗ ಪಡಿಸಿದ್ದು ಈ ಪ್ರಕರಣ ಈಗ ಮರು ಜೀವ ಪಡೆದುಕೊಂಡಿದೆ.

    ಬಿಜೆಪಿಯ ಪ್ರಶ್ನೆ ಏನು?
    ದಾಭೋಲ್ ಪ್ರಾಜೆಕ್ಟ್ ಕೇಸಲ್ಲಿ ಹರೀಶ್ ಸಾಳ್ವೆ ಬದಲಿಗೆ, ಖುರೇಷಿಯನ್ನು ನೇಮಕ ಮಾಡಿದ್ದು ಯಾಕೆ? ನಿಮಗೆ ಪಾಕ್‍ನ ವಕೀಲರ ಮೇಲೆ ಯಾಕಷ್ಟು ನಂಬಿಕೆ ಎಂದು ಪ್ರಶ್ನಿಸಿದೆ. ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಪ್ರತಿಕ್ರಿಯಿಸಿ, ಕಾಂಗ್ರೆಸ್ ಯಾವಾಗಲೂ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಾ ಬಂದಿದೆ. ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗಲೂ ಅವರು ಭಾರತೀಯ ಸೇನೆಯನ್ನು ಪ್ರಶ್ನಿಸಿದರು. ಈಗ ಮತ್ತೊಮ್ಮೆ ಅವರ ಪಾಕಿಸ್ತಾನದ ಪರ ನಿಲುವು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.

    ಯಾಕೆ ಭಾರತೀಯ ವಕೀಲರು ಅಂದು ಸಿಕ್ಕಿಲ್ಲವೇ ಎಂದು ಕೇಳಿದ್ದಕ್ಕೆ ಅವರು, ಮಾಜಿ ಸಚಿವರಾದ ಸಲ್ಮಾನ್ ಖುರ್ಷಿದ್ ಮತ್ತು ಮಣಿ ಶಂಕರ್ ಅಯ್ಯರ್ ಅವರು ಪಾಕ್ ವಕೀಲರ ನೇಮಕದಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ. ಕಾಂಗ್ರೆಸ್ಸಿಗೆ ಮೇಕ್ ಇನ್ ಇಂಡಿಯಾದ ಬಗ್ಗೆ ಒಲವು ಇಲ್ಲ. ಹೀಗಾಗಿ ‘ಮೇಕ್ ಇನ್ ಇಂಡಿಯಾ’ದ ವಕೀಲರನ್ನು ನಿರ್ಲಕ್ಷಿಸಿ ‘ಮೇಡ್ ಇನ್ ಪಾಕಿಸ್ತಾನ’ ವಕೀಲರನ್ನು ನೇಮಿಸಿದೆ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್ ಸ್ಪಷ್ಟನೆ ಏನು?
    ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ, ಪಾಕ್ ಮೂಲದ ಖವರ್ ಖುರೇಷಿ ಒಬ್ಬ ಸ್ವತಂತ್ರ ಬ್ಯಾರಿಸ್ಟರ್. ವೃತ್ತಿರಪರರನ್ನು ನೇಮಿಸೋದಕ್ಕೆ ಯಾವುದೇ ಗಡಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಪಾಕಿಸ್ತಾನದಲ್ಲೇ ವಿರೋಧ:
    ನೌಕಾಪಡೆಯ ಮಾಜಿ ಅಧಿಕಾರಿ, 46ರ ಹರೆಯದ ಕುಲಭೂಷಣ್ ವಿರುದ್ಧದ ಪ್ರಕರಣದಲ್ಲಿ ಐಸಿಜೆ ಭಾರತದ ಪರವಾಗಿ ತೀರ್ಪು ನೀಡಿತ್ತು. ಈ ಪ್ರಕರಣದಲ್ಲಿ ವಿಶ್ವ ಮಟ್ಟದಲ್ಲಿ ಪಾಕ್ ಮಾನ ಹರಾಜು ಆಗಲು ಖವರ್ ಖುರೇಷಿಯ ಅಸಮರ್ಥ ವಾದ ಮಂಡನೆಯೇ ಕಾರಣ. ಅವರು ಸರಿಯಾಗಿ ವಾದವನ್ನು ಮಂಡಿಸಲಿಲ್ಲ ಎಂದು ಪಾಕ್ ಮಾಧ್ಯಮಗಳು ಅವರನ್ನು ಟೀಕಿಸಿವೆ.

  • ಜಾಗತಿಕ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಕಪಾಳ ಮೋಕ್ಷವಾದ ಕಥೆಯನ್ನು ಓದಿ

    ಜಾಗತಿಕ ನ್ಯಾಯಾಲಯದಲ್ಲಿ ಪಾಕಿಸ್ತಾನಕ್ಕೆ ಕಪಾಳ ಮೋಕ್ಷವಾದ ಕಥೆಯನ್ನು ಓದಿ

    ಹೇಗ್: ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದ್ದು, ನೆದರ್‍ಲ್ಯಾಂಡಿನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯ ಭಾರತದ ಮನವಿಯನ್ನು ಪುರಸ್ಕರಿಸಿ ಕುಲಭೂಷಣ್ ಜಾಧವ್‍ಗೆ ನೀಡಲಾಗಿದ್ದ ಗಲ್ಲು ಶಿಕ್ಷಗೆ ತಾತ್ಕಾಲಿಕ ತಡೆಯನ್ನು ನೀಡಿದೆ.

    ಭಾರತದ ಕಾಲಮಾನ ಮಧ್ಯಾಹ್ನ 3.30ಕ್ಕೆ ಮುಖ್ಯ ನ್ಯಾಯಾಧೀಶ ರೋನಿ ಅಬ್ರಾಹಂ ತೀರ್ಪು ಓದಲು ಆರಂಭಿಸಿ ಗಲ್ಲು ಶಿಕ್ಷೆಗೆ ತಡೆ ನೀಡಿದರು. ಹೀಗಾಗಿ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿರುವ ಪ್ರಮುಖ ಅಂಶವನ್ನು ನೀಡಲಾಗಿದೆ

    ಆರಂಭದಲ್ಲೇ ಹಿನ್ನಡೆ: ಪಾಕಿಸ್ತಾನ ತನ್ನ ವಾದದಲ್ಲಿ ಮಿಲಿಟರಿ ಕೋರ್ಟ್ ಈ ಶಿಕ್ಷೆಯನ್ನು ನೀಡಿದೆ. ಮಿಲಿಟರಿ ಕೋರ್ಟ್ ವಿಧಿಸಿರುವ ಶಿಕ್ಷೆ ಅಂತಾರಾಷ್ಟ್ರೀಯ ಕೋರ್ಟ್ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಹೇಳಿತ್ತು. ಈ ವಿಚಾರವನ್ನು ತೀರ್ಪು ಓದುವ ಆರಂಭದಲ್ಲೇ ಉಲ್ಲೇಖಿಸಿದ್ದ ನ್ಯಾಯಾಧೀಶರು, ವಿಯೆನ್ನಾ ಒಪ್ಪಂದಕ್ಕೆ ನೀವು ಸಹಿ ಹಾಕಿದ್ದೀರಿ. ಸಹಿ ಹಾಕಿದ ಕಾರಣ ನೀವು ಆ ಒಪ್ಪಂದದಂತೆ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಈ ಪ್ರಕರಣ ಈ ಕೋರ್ಟ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ವಿಯೆನ್ನಾ ಒಪ್ಪಂದದ 1ನೇ ವಿಧಿ ಪ್ರಕಾರ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಅಧಿಕಾರವಿದೆ. ಜಾಧವ್ ಬಂಧನದ ಬಗ್ಗೆ ಭಾರತಕ್ಕೆ ಮಾಹಿತಿ ನೀಡದಿರುವುದು, ರಾಜತಾಂತ್ರಿಕ ನೆರವಿಗೆ ಅವಕಾಶ ನೀಡದೇ ಇರುವುದು ವಿಯೆನ್ನಾ ಒಪ್ಪಂದ ವ್ಯಾಪ್ತಿಗೆ ಒಳಪಡುತ್ತದೆ. ಅಷ್ಟೇ ಅಲ್ಲೇ ಈ ಪ್ರಕರಣವನ್ನು ಇತ್ಯರ್ಥ ಪಡಿಸಲು ಈ ನ್ಯಾಯಾಲಯಕ್ಕೆ ಅಧಿಕಾರ ಇದೆ ಎಂದು ಹೇಳಿದರು.

    ಭಾರತ ಪ್ರಜೆ: ಭಾರತ ಮತ್ತು ಪಾಕಿಸ್ತಾನಗಳು ಎರಡೂ ಬಂಧನಕ್ಕೊಳಗಾಗಿರುವ ಕುಲಭೂಷಣ್ ಜಾಧವ್ ಭಾರತ ಪ್ರಜೆ ಎನ್ನುವುದನ್ನು ಹೇಳಿಕೊಂಡಿದ್ದು ಈ ವಿಚಾರವನ್ನು ಕೋರ್ಟ್ ಒಪ್ಪಿಕೊಂಡಿದೆ.

    ರಾಜತಾಂತ್ರಿಕ ನೆರವು: ವಿಯೆನ್ನಾ ಒಪ್ಪಂದದ ಪ್ರಕಾರ ಕುಲಭೂಷಣ್‍ಗೆ ರಾಜತಾಂತ್ರಿಕ ನೆರವು ನೀಡಲು ಅವಕಾಶ ಮಾಡಿಕೊಡಬೇಕಿತ್ತು. ಈ ಕುರಿತು 16 ಬಾರಿ ನಾವು ಮನವಿ ಮಾಡಿದ್ದರೂ ಪಾಕ್ ತಿರಸ್ಕರಿಸಿದೆ ಎಂದು ಭಾರತ ವಾದಿಸಿತ್ತು. ಈ ಅಂಶಕ್ಕೆ ಸಂಬಂಧಿಸಿದಂತೆ ಕೋರ್ಟ್, ಒಬ್ಬ ವ್ಯಕ್ತಿ ಒಂದು ದೇಶದಲ್ಲಿ ಬಂಧಿತನಾದರೆ ಆತನ ಅಹವಾಲುಗಳನ್ನು ಕೇಳಿಕೊಳ್ಳಲು ಆ ದೇಶಕ್ಕೆ ಅಧಿಕಾರ ಇದೆ ಎಂದು ಹೇಳುವ ವಿಯೆನ್ನಾ ಒಪ್ಪಂದಕ್ಕೆ ನೀವು ಸಹಿ ಹಾಕಿದ್ದೀರಿ. ಈ ಒಪ್ಪಂದವನ್ನು ಉಲ್ಲಂಘಿಸಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ನೀವು ವಿಯೆನ್ನಾ ಒಪ್ಪಂದಂತೆ ರಾಜತಾಂತ್ರಿಕ ಸಹಾಯವನ್ನು ನೀಡಲು ಅನುಮತಿ ನೀಡಬೇಕು ಎಂದು ಕೋರ್ಟ್ ಪಾಕಿಸ್ತಾನಕ್ಕೆ ಸೂಚಿಸಿತು.

    ರಕ್ಷಣೆಯ ಮಾಹಿತಿ ನೀಡಿ: ಪಾಕಿಸ್ತಾನ ಜಾಧವ್ ಅವರ ಸಾವನ್ನು ಬಯಸುತ್ತಿದೆ ಎನ್ನುವ ವಿಚಾರವನ್ನು ತಿಳಿದ ಭಾರತ ಜಾಧವ್ ರಕ್ಷಣೆಯ ವಿಚಾರವನ್ನು ಪ್ರಸ್ತಾಪ ಮಾಡಿತ್ತು. ಯಾಕೆಂದರೆ ಗಲ್ಲು ಶಿಕ್ಷೆ ಅಲ್ಲದೇ ಹೋದರೂ ಬೇರೆ ಯಾರೋ ಒಬ್ಬ ವ್ಯಕ್ತಿ, ಖೈದಿಯ ಮೂಲಕ ಜಾಧವ್ ಅವರನ್ನು ಪಾಕ್ ಹತ್ಯೆ ಮಾಡಿದರೆ ಏನು ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ, ವಿಚಾರಣೆ ಪೂರ್ಣಗೊಳ್ಳುವವರೆಗೂ ಜಾಧವ್ ಅವರ ಪ್ರಾಣಕ್ಕೆ ಅಪಾಯ ಇರುವ ಸಾಧ್ಯತೆಯಿದೆ. ಹೀಗಾಗಿ ಅವರನ್ನು ರಕ್ಷಿಸಬೇಕು ಎಂದು ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಜಾಧವ್ ಅವರ ರಕ್ಷಣೆಗೆ ಸಂಬಂಧಿಸಿದಂತೆ ನೀವು ಏನು ಕ್ರಮವನ್ನು ತೆಗೆದುಕೊಂಡಿದ್ದೀರಿ ಎಂದು ಪಾಕಿಗೆ ಪ್ರಶ್ನಿಸಿ ಅದಕ್ಕೆ ಸಂಬಂಧಿಸಿ ವಿವರವನ್ನು ನೀಡಿ ಎಂದು ಸೂಚಿಸಿದೆ.

    ವಿವಾದಾತ್ಮಕವಾಗಿದೆ: ಜಾಧವ್ ಅವರು ಇರಾಕ್‍ನಲ್ಲಿ ಉದ್ಯಮ ನಡೆಸುತ್ತಿರುವ ಪಾಕಿಸ್ತಾನ ಕಿಡ್ನಾಪ್ ಮಾಡಿದೆ. ಅವರು ರಾ ಏಜೆಂಟ್ ಅಲ್ಲ ಎಂದು ಭಾರತ ಹೇಳುತ್ತಾ ಬಂದಿದ್ದರೂ ಪಾಕಿಸ್ತಾನ ತನ್ನ ಮೊಂಡು ವಾದವನ್ನು ಕೋರ್ಟ್ ನಲ್ಲೂ ಮುಂದುವರಿಸಿತ್ತು. ಈ ವಿಚಾರವನ್ನು ತೀರ್ಪಿನಲ್ಲಿ ಪ್ರಸ್ತಾಪಿಸಿದ ಕೋರ್ಟ್, ಜಾಧವ್ ಬಂಧನ ಎಲ್ಲಿ ಆಗಿದೆ ಎಂಬ ಬಗ್ಗೆಯೇ ವಿವಾದವಿದೆ ಎಂದು ಅಭಿಪ್ರಾಯಪಟ್ಟಿದೆ.

    ಗಲ್ಲು ಶಿಕ್ಷೆ ನೀಡುವಂತಿಲ್ಲ: ವಿಯೆನ್ನಾ ಒಪ್ಪಂದ ಉಲ್ಲಂಘನೆ, ಅಂತಾರಾಷ್ಟ್ರೀಯ ನ್ಯಾಯಾಲಯದ ವ್ಯಾಪ್ತಿಗೆ ಈ ಪ್ರಕರಣ ಬರುವುದಿಲ್ಲ ಎಂದು ನೀವು ವಾದ ಮಂಡಿಸಿರುವುದನ್ನು ನೋಡಿದಾಗ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲು ಮುಂದಾಗಿದ್ದೀರಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಹೀಗಾಗಿ ಈ ಪ್ರಕರಣದ ವಿಚಾರಣೆ ಮುಗಿದು ಅಂತಿಮ ತೀರ್ಪು ಬರುವವರೆಗೂ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸುವಂತಿಲ್ಲ ಎಂದು ಪಾಕಿಸ್ತಾನಕ್ಕೆ ಕೋರ್ಟ್ ಆದೇಶಿಸಿತು.

    ಭಾರತದ ವಾದ ಸಮ್ಮತವೇ? ವಿಯೆನ್ನಾ ಒಪ್ಪಂದ ವಿಧಿ 36ರ ಪ್ರಕಾರ ಅನ್ಯ ದೇಶದ ವ್ಯಕ್ತಿಯನ್ನು ಬಂಧಿಸಿದರೆ ಆ ಬಗ್ಗೆ ಯಾವುದೇ ವಿಳಂಬವಿಲ್ಲದೇ ಮಾಹಿತಿ ನೀಡಬೇಕು ಮತ್ತು ರಾಜತಾಂತ್ರಿಕ ನೆರವನ್ನು ಬಂಧಿತನ ಹಕ್ಕು ಎಂದು ಕೋರ್ಟ್ ಹೇಳಿತು.

    ತುರ್ತು ವಿಚಾರಣೆ ಅಗತ್ಯ ಯಾಕೆ? ಜಾಧವ್ ಮರಣ ದಂಡನೆ ಶಿಕ್ಷೆಗೆ ಒಳಪಟ್ಟಿದ್ದಾರೆ. ಹೀಗಾಗಿ ಯಾವಾಗ ಬೇಕಾದರೂ ಗಲ್ಲಿಗೇರಿಸಬಹುದು ಎಂಬ ಭಾರತದ ಆತಂಕದಿಂದಾಗಿ ಪ್ರಕರಣದ ತುರ್ತು ವಿಚಾರಣೆಗೆ ಅಗತ್ಯವಿದೆ. ಆಗಸ್ಟ್ 2017ರ ಬಳಿಕವಷ್ಟೇ ಗಲ್ಲಿಗೇರಿಸುವುದಾಗಿ ಪಾಕಿಸ್ತಾನ ಹೇಳಿದೆ. ಆದರೆ ಕೋರ್ಟ್ ಅಂತಿಮ ತೀರ್ಪು ನೀಡುವುದಕ್ಕೂ ಮೊದಲು ಗಲ್ಲಿಗೇರಿಸಲ್ಲ ಎಂಬ ಭರವಸೆಯನ್ನು ಪಾಕಿಸ್ತಾನ ಕೋರ್ಟ್‍ಗೆ ನೀಡಿಲ್ಲ. ಅಂದರೆ ಆಗಸ್ಟ್ ಬಳಿಕ ಪಾಕಿಸ್ತಾನ ಗಲ್ಲಿಗೇರಿಸುವ ಸಾಧ್ಯತೆ ಇದೆ. ಹೀಗಾಗಿ ಪ್ರಕರಣದ ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಕೋರ್ಟ್ ತೀರ್ಮಾನಿಸಿದೆ.

    ಈ ತೀರ್ಪಿಗೆ ಸಂಬಂಧಿಸಿದಂತೆ ಎಚ್.ರಂಗನಾಥ್ ವಿಮರ್ಶೆಯ ವಿಡಿಯೋ,  ತೀರ್ಪಿನ ಸಂಪೂರ್ಣ ಪ್ರತಿ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಟ್ವೀಟ್ ಗಳನ್ನು ನೀಡಲಾಗಿದೆ. 

    https://www.youtube.com/watch?v=EJ4z66WdyQo

  • ಪಾಕ್‍ಗೆ ಭಾರೀ ಮುಖಭಂಗ: ಕುಲಭೂಷಣ್ ಜಾಧವ್‍ಗೆ ತಾತ್ಕಾಲಿಕ ರಿಲೀಫ್

    ಪಾಕ್‍ಗೆ ಭಾರೀ ಮುಖಭಂಗ: ಕುಲಭೂಷಣ್ ಜಾಧವ್‍ಗೆ ತಾತ್ಕಾಲಿಕ ರಿಲೀಫ್

    ಹೇಗ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ನೆದರ್‍ಲೆಂಡ್‍ನ ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ  ನ್ಯಾಯಾಲಯ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿದೆ.

    ಭಾರತದ ಕಾಲಮಾನ ಮಧ್ಯಾಹ್ನ 3.30ಕ್ಕೆ ಮುಖ್ಯ ನ್ಯಾಯಾಧೀಶ ರೋನಿ ಅಬ್ರಾಹಂ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿದ್ದು, ಕುಲಭೂಷಣ್ ಜಾಧವ್ ಅವರಿಗೆ ಭಾರತ ರಾಜತಾಂತ್ರಿಕ ನೆರವನ್ನು ನೀಡಬೇಕು ಎಂದು ಸೂಚಿಸಿದ್ದಾರೆ.

    ಭಾರತದ ಪರ ಹಿರಿಯ ವಕೀಲ ದೀಪಕ್ ಮಿತ್ತಲ್ ಹಾಗೂ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು.

    ಮೂಲಭೂತ ಹಕ್ಕಿಗಾಗಿ ನಾವು ಹೋರಾಡುತ್ತಿದ್ದೇವೆ. ಜಾಧವ್ ಅವರನ್ನು ಬಿಡುಗಡೆ ಮಾಡಬೇಕು ಅಂತ ಭಾರತ ವಾದ ಮಂಡಿಸಿದ್ದರೆ, ಆದರೆ ಪಾಕಿಸ್ತಾನ ಭಾರತದ ವಾದವನ್ನು ಒಪ್ಪದೇ ಮೊಂಡಾಟ ಮಾಡ್ತು. ಭಾರತ ಅಂತಾರಾಷ್ಟ್ರೀಯ ಕೋರ್ಟನ್ನ ರಾಜಕೀಯ ಥಿಯೇಟರ್ ಥರ ಬಳಸ್ತಿದೆ ಅಂತಾ ವಾದ ಮಂಡಿಸಿತ್ತು.

    ಭಾರತದ ವಾದ ಹೀಗಿತ್ತು
    – ಜಾಧವ್ ವಿಚಾರಣೆ ವೇಳೆ ಪಕ್ಷಪಾತ ನಡೆದಿದ್ದು, ಪಾಕಿಸ್ತಾನ ಜಾಧವ್‍ಗೆ ರಾಜತಾಂತ್ರಿಕ ನೆರವು ನೀಡಲು ನಿರಾಕರಿಸಿದೆ.
    – ಅಕ್ರಮವಾಗಿ ಜಾಧವ್ ಬಂಧಿಸಿ ವಿಯೆನ್ನಾ ಒಪ್ಪಂದ ಮುರಿದಿದೆ.
    – ಪಾಕಿಸ್ತಾನದಿಂದ ಸತ್ಯದ ಸಮಾಧಿ ಮಾಡೋ ಪ್ರಯತ್ನ ಮಾಡುತ್ತಿದೆ.
    – ಕೋರ್ಟ್ ವಿಚಾರಣೆಗೆ ಮುನ್ನವೇ ಜಾಧವ್ ಗಲ್ಲಿಗೇರಿಸಲು ಪಾಕ್ ಪ್ರಯತ್ನಿಸ್ತಿದೆ
    – ಮೂಲಭೂತ ಹಕ್ಕಿಗಾಗಿ ನಾವು ಹೋರಾಡ್ತಿದ್ದೇವೆ, ಜಾಧವ್ ಬಿಡುಗಡೆ ಮಾಡಿ

    ಪಾಕಿಸ್ತಾನದ ವಾದ ಹೀಗಿತ್ತು
    – ಜಾಧವ್ ನಮ್ಮ ಬಳಿ ತಪ್ಪೊಪ್ಪಿಕೊಂಡಿದ್ದಾರೆ
    – ಜಾಧವ್ ಗಲ್ಲಿಗೇರಿಸಲು ನಮಗೆ ಆತುರ ಇಲ್ಲ
    – ಭಾರತದ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ
    – ಭಾರತ ನ್ಯಾಯಾಲಯವನ್ನು ರಾಜಕೀಯ ನ್ಯಾಯಾಲಯವನ್ನಾಗಿ ಬಳಕೆ ಮಾಡ್ತಿದೆ
    – ರಾಜತಾಂತ್ರಿಕ ನೆರವಿಗೆ ಜಾಧವ್ ಅರ್ಹನಲ್ಲ
    – ಪಾಸ್‍ಪೋರ್ಟ್‍ನಲ್ಲಿ ಜಾಧವ್ ಅಂತಾ ಹೆಸರಿಲ್ಲ, ಮುಸ್ಲಿಂ ವ್ಯಕ್ತಿಯ ಹೆಸರು ಇದೆ

    ಏನಿದು ಪ್ರಕರಣ?
    ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿತ್ತು.

    ವಿಚಾರಣೆ ವೇಳೆ ರಾ ಪರ ನಾನು ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕುಲಭೂಷಣ ಜಾಧವ್ ತಪ್ಪೊಪ್ಪಿಕೊಂಡಿದ್ದರು ಎಂದು ಐಎಸ್‍ಪಿಆರ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ಕೂಲಭೂಷಣ್ ಯಾದವ್ ನೌಕಾ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದರು. ಆದರೆ ಅವರು ರಾ ಪರವಾಗಿ ಗೂಢಚರ್ಯೆ ನಡೆಸುತ್ತಿರುವ ಆರೋಪವನ್ನು ಭಾರತ ಸರ್ಕಾರ ನಿರಾಕರಿಸಿತ್ತು. 2016ರ ಮಾರ್ಚ್ 3ರಂದು ಬಲೂಚಿಸ್ತಾನದ ಮಶೇಕಲ್ ಎಂಬಲ್ಲಿ ಕುಲಭೂಷಣ್ ಜಾಧವ್ ಅವರು ಅರೆಸ್ಟ್ ಅಗಿದ್ದರು.

    ವಿಯೆನ್ನಾ ಒಪ್ಪಂದದ ಪ್ರಕಾರ ಕುಲಭೂಷಣ್‍ಗೆ ಭಾರತ ರಾಜತಾಂತ್ರಿಕ ನೆರವು ನೀಡಲು ಅವಕಾಶ ಮಾಡಿಕೊಡಬೇಕಿತ್ತು. ಈ ಕುರಿತು 16 ಬಾರಿ ಭಾರತದ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು.ಆದರೆ ನಿವೃತ್ತ ನೌಕಾ ಸೇನಾಧಿಕಾರಿ ಕುಲಭೂಷಣ್‍ರನ್ನು ಇರಾನ್‍ನಿಂದ ಪಾಕಿಸ್ತಾನ ಕಿಡ್ನ್ಯಾಪ್ ಮಾಡಿತ್ತು ಎಂಬ ಅಂಶವನ್ನು ಕೋರ್ಟ್‍ನಲ್ಲಿ ಭಾರತ ಮಂಡಿಸಿತ್ತು.