ಭೋಪಾಲ್: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತಾಗಿ ಪರವಿರೋಧ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಮಧ್ಯಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ.
ಪ್ರಸ್ತುತ ರಾಜ್ಯ ಲೋಕೋಪಯೋಗಿ ಇಲಾಖೆನಲ್ಲಿ ಉಪ ಕಾರ್ಯದರ್ಶಿಯಾಗಿರುವ ನಿಯಾಜ್ ಖಾನ್ ಕಳೆದ ವಾರ ಟ್ವೀಟ್ ಮಾಡಿದ್ದಾರೆ.
ಟ್ವೀಟ್ನಲ್ಲಿ ಏನಿದೆ?: ಕಾಶ್ಮೀರ್ ಫೈಲ್ಸ್ ಬ್ರಾಹ್ಮಣರ ನೋವನ್ನು ತೋರಿಸುತ್ತದೆ. ಕಾಶ್ಮೀರದಲ್ಲಿ ಎಲ್ಲ ಗೌರವಗಳೊಂದಿಗೆ ಸುರಕ್ಷಿತವಾಗಿ ಬದುಕಲು ಅವರಿಗೆ ಅವಕಾಶ ನೀಡಬೇಕು. ಹಲವಾರು ರಾಜ್ಯಗಳಾದ್ಯಂತ ಹೆಚ್ಚಿನ ಸಂಖ್ಯೆಯ ಮುಸ್ಲಿಮರ ಹತ್ಯೆಗಳನ್ನು ತೋರಿಸಲು ನಿರ್ಮಾಪಕರು ಸಿನಿಮಾವೊಂದನ್ನು ಮಾಡಬೇಕು. ಚಿತ್ರವು 150 ಕೋಟಿ ರೂಪಾಯಿಗಳ ಆದಾಯದ ಗಡಿಯನ್ನು ಮುಟ್ಟಿದ್ದಕ್ಕಾಗಿ ಚಿತ್ರದ ನಿರ್ಮಾಪಕರನ್ನು ಅಭಿನಂದಿಸಿದ್ದಾರೆ.
Income of Kashmir Files reached 150 crore. Great.People have given a lot of respect for Kashmiri Brahmins’ feelings.I would respect film producer to transfer all earnings to the Brahmin children’s education and construction of homes for them in Kashmir. It will be a great charity
ಜನರು ಕಾಶ್ಮೀರಿ ಬ್ರಾಹ್ಮಣರ ಭಾವನೆಗಳಿಗೆ ಹೆಚ್ಚಿನ ಗೌರವವನ್ನು ನೀಡಿರುವುದರಿಂದ ಚಲನಚಿತ್ರ ನಿರ್ಮಾಪಕರು ಎಲ್ಲಾಗಳಿಕೆಯನ್ನು ಬ್ರಾಹ್ಮಣ ಮಕ್ಕಳ ಶಿಕ್ಷಣಕ್ಕೆ ವರ್ಗಾಯಿಸಬೇಕು. ಕಾಶ್ಮೀರದಲ್ಲಿ ಅವರಿಗೆ ಮನೆಗಳನ್ನು ನಿರ್ಮಿಸಬೇಕು. ಪ್ರತಿಕ್ರಿಯೆಯಾಗಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಮಾರ್ಚ್ 25 ರಂದು ಭೋಪಾಲ್ನಲ್ಲಿ ಭೇಟಿಯಾಗುವಂತೆ ಖಾನ್ ಅವರಿಗೆ ಹೇಳಿದ್ದಾರೆ.
ಏಳು ಪುಸ್ತಕಗಳ ಲೇಖಕರಾಗಿರುವ ಖಾನ್ ಅವರು ವಿವಿಧ ಸಂದರ್ಭಗಳಲ್ಲಿ ಮುಸ್ಲಿಮರ ಹತ್ಯಾಕಾಂಡ ಕುರಿತು ಪುಸ್ತಕವನ್ನು ಬರೆಯುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ್ದಾರೆ. ಇದರಿಂದಾಗಿ ಅಲ್ಪಸಂಖ್ಯಾತರ ನೋವನ್ನು ಭಾರತೀಯರ ಮುಂದೆ ತರಬಹುದು ಎಂದಿದ್ದಾರೆ. ಈ ಹೇಳಿಕೆ ನೀಡುವ ಮೂಲಕ ಖಾನ್ ಅವರು ಐಎಎಸ್ ಸೇವಾ ನೀತಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುವ ಮೂಲಕವಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 2ನೇ ಬಾರಿಗೆ ಗೋವಾ ಸಿಎಂ ಆಗಿ ಪ್ರಮೋದ್ ಸಾವಂತ್ ಆಯ್ಕೆ
ಲಕ್ನೋ: ಹಿರಿಯ ಐಎಎಸ್ ಅಧಿಕಾರಿ ಶುಭ್ರಾ ಸಕ್ಸೇನಾ ಅವರು ತಮ್ಮ ಮಾಜಿ ಪತಿ ಶಶಾಂಕ್ ಗುಪ್ತಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಮಗೂ ಮತ್ತು ತಮ್ಮ ಒಂಬತ್ತು ವರ್ಷದ ಮಗಳಿಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೀಗ ಈ ಸಂಬಂಧ ಬೆದರಿಕೆ, ಮಾನನಷ್ಟ ಮತ್ತು ಐಪಿಸಿಯ ಇತರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಐಎಎಸ್ ಅಧಿಕಾರಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶಶಾಂಕ್ ಗುಪ್ತಾ ತಮ್ಮ ಎಂಟು ಬೌನ್ಸರ್ಗಳನ್ನು ನನ್ನನ್ನು ಹಿಂಬಾಲಿಸಿ ನಾವಿರುವ ಸ್ಥಳವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೇ ನಾನು ಅವರ ಜೊತೆ ಪ್ರತಿಕ್ರಿಯಿಸದೇ ಇದ್ದಿದ್ದರಿಂದ ಡಿಎಂ ನೇಹಾ ಶರ್ಮಾಗೆ ಅವರಿಗೆ ಶಶಾಂಕ್ ಕರೆ ಮಾಡಿ ನಿಂದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಿನ್ನದ ನಾಡಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರಾ ಸಿದ್ದರಾಮಯ್ಯ..?
2003ರಲ್ಲಿ ಶುಭ್ರಾ ಸಕ್ಸೇನಾ ಮತ್ತು ಶಶಾಂಕ್ ವಿವಾಹವಾದರು. ಈ ದಂಪತಿ 9 ವರ್ಷದ ಮಗಳನ್ನು ಹೊಂದಿದ್ದಾರೆ. ಶಶಾಂಕ್ ದೈಹಿಕವಾಗಿ ಮತ್ತು ಮಾನಸಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದರಿಂದ 2020ರಲ್ಲಿ ವಿಚ್ಛೇದನ ಪಡೆದಿರುವುದಾಗಿ ಶುಭ್ರಾ ಸಕ್ಸೇನಾ ತಿಳಿಸಿದ್ದಾರೆ. ವಿಚ್ಛೇದನದ ನಂತರ ಶಶಾಂಕ್ ಗುಪ್ತಾ ತನ್ನ ಮಗಳನ್ನು ಹಿಂಬಾಲಿಸಲು ಮತ್ತು ಬೆದರಿಕೆ ಹಾಕಲು ಪ್ರಾರಂಭಿಸಿದರು. ಮಗಳನ್ನು ಭೇಟಿಯಾಗುವ ಹಕ್ಕಿನ ಬಗ್ಗೆ ದಂಪತಿ ನಡುವೆ ಜಗಳವೂ ನಡೆಯುತ್ತಿದೆ.
ಸಕ್ಸೇನಾ ಅವರು ಸುಶಾಂತ್ ಗಾಲ್ಫ್ ಸಿಟಿಯ ಲಕ್ನೋದ ಗೋಮತಿ ನಗರದ ಸೆಲೆಬ್ರಿಟಿ ಗ್ರೀನ್ಸ್ನ ನಿವಾಸಿಯಾಗಿದ್ದಾರೆ. ಎರಡು ತಿಂಗಳ ಹಿಂದೆ ಶಶಾಂಕ್ ಗುಪ್ತಾ ಶುಭ್ರಾ ಸಕ್ಸೇನಾ ಅವರ ನಿವಾಸಕ್ಕೆ ಬಂದು ಆಕೆಯನ್ನು ಹೆದರಿಸಲು ಯತ್ನಿಸಿದ್ದಾರೆ. ಹೀಗಾಗಿ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ಐಎಎಸ್ ಅಧಿಕಾರಿಯೊಬ್ಬರು ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರೂ ಆಗಿರುವ ಐಎಎಸ್ ಅಧಿಕಾರಿ ಸ್ನೇಹಲ್ ಲೋಖಂಡೆ ಮದುವೆಯಾಗುವುದಾಗಿ ನಂಬಿಸಿ ಆಕೆಗೆ ವಂಚನೆ ಮಾಡಿರುವುದಾಗಿ ಯುವತಿ ಗಂಭೀರವಾಗಿ ಆರೋಪಿಸಿದ್ದಾಳೆ.
ಯುವತಿ ದೆಹಲಿ ಮೂಲದವಳಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಮುರುಗೇಶ್ ನಿರಾಣಿ ಅವರಿಗೆ ಟ್ವಿಟ್ಟರ್ ಮೂಲಕ ಪತ್ರ ಬರೆದು ಲಗತ್ತಿಸಿದ್ದಾಳೆ. ಆ ಪತ್ರದಲ್ಲಿ 2017ರ ಬ್ಯಾಚ್ನ ಐಎಎಸ್ ಅಧಿಕಾರಿ ಲೋಖಂಡೆಯು ತನ್ನ ಜೊತೆಗೆ ಹೋಟೆಲ್ಗಳಲ್ಲಿ ಕಾಲ ಕಳೆದ, ಹೊರಗಡೆ ಸುತ್ತಾಡಿದ, ವಾಟ್ಸಾಪ್ಗಳಲ್ಲಿ ಚಾಟ್ ಮಾಡಿದ್ದ ಬಗ್ಗೆ ದಿನಾಂಕ, ಸ್ಥಳ ಸಮೇತ ವಿವರಿಸಿದ್ದು, ವಾಟ್ಸಾಪ್ ಚಾಟ್ನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.
ಯುವತಿ ಬರೆದಿರುವ ಪತ್ರದಲ್ಲಿ ಏನಿದೆ:
`ಯುಪಿಎಸ್ಸಿ ಪರೀಕ್ಷೆ ಬರೆಯುತ್ತಿದ್ದಾಗ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಸ್ನೇಹಲ್ ಲೋಖಂಡೆ ನನ್ನ ಮೇಲೆ ಆಸಕ್ತಿ ತೋರಿಸಿದರು. ಮೇ 26, 2019ರಂದು ದೆಹಲಿಯಲ್ಲಿ ನನ್ನನ್ನು ಭೇಟಿ ಆಗಿದ್ದ ಸ್ನೇಹಲ್ ಮೂರು ದಿನ ನನ್ನ ಜೊತೆಗೆ ಇದ್ದರಲ್ಲದೇ ನನ್ನ ಮದ್ವೆ ಆಗುವುದಾಗಿ ಮಾತುಕೊಟ್ಟಿದ್ದರು. ನನ್ನ ಜೊತೆಗೆ ಇರುವ ಸಲುವಾಗಿಯೇ ಟ್ರೈನಿಂಗ್ಗಾಗಿ ದೆಹಲಿಗೆ ಬಂದಿದ್ದ ಸ್ನೇಹಲ್ ಬಸ್ ಮಿಸ್ ಮಾಡ್ಕೊಂಡು ದೆಹಲಿಯಲ್ಲೇ ನನ್ನ ಒಂದು ದಿನ ಇದ್ದರು. ನನ್ನ ಹುಟ್ಟುಹಬ್ಬ ಆಚರಿಸಲು ನನ್ನ ತಾಯಿಯ ಅನುಮತಿ ಪಡೆದು ಜುಲೈ 8ರಂದು ಹೌನ್ಜ್ ಖಾಸ್ಗೆ ಮಧ್ಯರಾತ್ರಿ ಹೋಗಿದ್ದೆವು. ಜುಲೈ 20, 2019ರಂದು ನನ್ನನ್ನು ಮದ್ವೆ ಆಗುವುದಾಗಿ ಹೇಳಿದ್ದ ಅವರು, ಕೆ ಜಿ ಮಾರ್ಗ್ನಲ್ಲಿರುವ ತನ್ನ ಹಾಸ್ಟೆಲ್ಗೆ ಬರುವಂತೆ ಹೇಳಿ ಅಲ್ಲಿ ನಾವಿಬ್ಬರೂ ಒಂದು ರಾತ್ರಿ ಜೊತೆಯಾಗಿ ಕಳೆದಿದ್ವಿ. ಮರು ದಿನ ನನ್ನನ್ನು ಭೇಟಿ ಆಗಿದ್ದ ಅವರು ಐ-ಪಿಲ್ ಮಾತ್ರೆ ತೆಗೆದುಕೊಳ್ಳುವಂತೆ ಹೇಳಿದ್ದರು.
ಆಗಸ್ಟ್ 4ರಂದು ರಾಯಲ್ ಪ್ಲಾಜಾದಲ್ಲಿ ಅವರು ರೂಂ ಬುಕ್ ಮಾಡಿದ್ದರು, ಅವತ್ತು ಅಲ್ಲಿ ಒಟ್ಟಿಗೆ ಉಳಿದುಕೊಂಡೆವು. ದೆಹಲಿಯಲ್ಲಿ ತರಬೇತಿಗೆ ಬಂದಿದ್ದ ವೇಳೆ ಅವರು ನನ್ನನ್ನು ಪ್ರತಿನಿತ್ಯ ಭೇಟಿ ಆಗುತ್ತಿದ್ದರು. ನಾನು ಎಲ್ಲವನ್ನೂ ನನ್ನ ತಾಯಿಗೆ ಹೇಳಿದ ಬಳಿಕ ನನ್ನ ತಾಯಿ ಅವರ ಹಾಸ್ಟೆಲ್ನಲ್ಲಿ ಭೇಟಿ ಆಗಿ ಮದ್ವೆ ಬಗ್ಗೆ ಮಾತಾಡಿದರು ಮತ್ತು ಆಗ ಮದುವೆಗೆ ನನಗೆ ಸ್ವಲ್ಪ ಟೈಂ ಬೇಕು ಎಂದು ಹೇಳಿದ್ದರು. ಕರ್ನಾಟಕದ ಇಂಡಿಯಲ್ಲಿ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಆದ ಬಳಿಕ ಅವರು ನನ್ನನ್ನು ದೂರವಿರಿಸಲು ಶುರು ಮಾಡಿದರು, ನಾನು ಕರೆ ಮಾಡಿದಾಗಲೆಲ್ಲ ಬ್ಯುಸಿ ಇರುವುದಾಗಿ ಹೇಳುತ್ತಿದ್ದರು. 2020ರ ಜನವರಿ 26ರಂದು ನನ್ನ ಹೆತ್ತವರು ಇಂಡಿಗೆ ತೆರಳಿ ಅವರ ತಂದೆ ಸುಧಾಕರ್ ಲೋಖಂಡೆ ಜೊತೆಗೆ ಮಾತಾಡಿದರು ಮತ್ತು ಅವರು ನಾಗ್ಪುರದಲ್ಲಿರುವ ತಮ್ಮ ಸಹೋದರನ ಜೊತೆಗೆ ಆದಷ್ಟು ಬೇಗ ಮಾತಾಡುವುದಾಗಿಯೂ ಮತ್ತು ಶೀಘ್ರವೇ ದೆಹಲಿಗೆ ಬರುವುದಾಗಿಯೂ ಹೇಳಿದ್ದರು. 15 ದಿನಗಳ ಬಳಿಕ ನನ್ನ ತಂದೆ ಸುಧಾಕರ್ ಲೋಖಂಡೆಗೆ ಕರೆ ಮಾಡಿದಾಗ ಅವರು ಕೆಟ್ಟದಾಗಿ ಮಾತಾಡಿದರು ಮತ್ತು ನಿಮ್ಮ ಮಗಳು ನನ್ನ ಮಗನ ಎದುರು ನಿಲ್ಲಲು ಯೋಗ್ಯಳಲ್ಲ ಎಂದರು. ಆ ಬಳಿಕ ಸ್ನೇಹಲ್ ಲೋಖಂಡೆಯಾಗಲೀ ಅವರ ತಂದೆಯಾಗಲೀ ನಮಗೆ ಕರೆ ಮಾಡಿಲ್ಲ. ನನ್ನನ್ನು ಬಳಸಿಕೊಂಡು ನನ್ನ ಜೀವನ ಹಾಳು ಮಾಡಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಇದನ್ನೂ ಓದಿ: ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!
ಅವರಿಗೆ (ಸ್ನೇಹಲ್ಗೆ) ಈ ಮೊದಲು ಒಂದು ಸಂಬಂಧವಿತ್ತು ಮತ್ತು ಅವರ ಸ್ನೇಹಿತೆ ಆ ಸಂಬಂಧದ ಅವಧಿಯಲ್ಲಿ ಐ-ಪಿಲ್ ಮಾತ್ರೆಗಳನ್ನು ತೆಗೆದುಕೊಳ್ಳುತ್ತಲೇ ಇದ್ದರು. ಆಕೆ ಮದುವೆ ಆಗುವಂತೆ ಕೇಳಿದಾಗ ಆಕೆಯಿಂದ ದೂರ ಆಗಿದ್ದಾಗಿ ಅವರೇ ನನಗೆ ಆರಂಭದಲ್ಲಿ ಹೇಳಿದ್ದರು. ಹುದ್ದೆ ಮತ್ತು ಪ್ರತಿಷ್ಠೆ ಬಳಸಿಕೊಂಡು ಹುಡುಗಿಯರನ್ನು ಆಕರ್ಷಿಸಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ. ನನ್ನ ಜೊತೆಗೆ 2 ವರ್ಷ ಸಂಬಂಧದಲ್ಲಿದ್ದ ನನಗೂ ಹಾಗೇ ಮಾಡಿದ್ದಾರೆ. ಮದ್ವೆಯ ನೆಪದಲ್ಲಿ ನನ್ನನ್ನು ಬಳಸಿಕೊಂಡಿದ್ದಾರೆ. ಇತರ ವೈಯಕ್ತಿಕ, ದೈಹಿಕ ಮತ್ತು ಮಾನಸಿಕ ಜೀವನದಲ್ಲಿ ಆಟ ಆಡುವ ಈ ವ್ಯಕ್ತಿಯನ್ನು ಶಿಕ್ಷಿಸಬೇಕು. ಅವರು ಜೈಲಿನಲ್ಲಿರಬೇಕು, ಇಲ್ಲವಾದರೆ ಅವರು ಇಂತಹ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಇಂತಹ ಅಪರಾಧಕ್ಕಾಗಿ ಅವರು ಜೈಲಿನಲ್ಲಿರಬೇಕು.
ಈ ಹಿನ್ನೆಲೆಯಲ್ಲಿ ನಾನು ಗೌರವಾನ್ವಿತ ಪ್ರಾಧಿಕಾರದಿಂದ ನ್ಯಾಯವನ್ನು ನಿರೀಕ್ಷಿಸುತ್ತಿದ್ದೇನೆ ಮತ್ತು ಪ್ರಾಧಿಕಾರ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಯುವತಿ ಮನವಿ ಮಾಡಿದ್ದಾಳೆ.
ಲಕ್ನೋ: ಉತ್ತರ ಪ್ರದೇಶದ ಐಎಎಸ್ ಅಧಿಕಾರಿಯೊಬ್ಬರು ರಸ್ತೆಬದಿಯ ಸ್ಟಾಲ್ನಲ್ಲಿ ತರಕಾರಿ ಮಾರುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಫೋಟೋದಲ್ಲಿರುವ ಐಎಎಸ್ ಅಧಿಕಾರಿಯನ್ನು ಅಖಿಲೇಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಪ್ರಸ್ತುತ ಅವರು ಉತ್ತರ ಪ್ರದೇಶದ ಸಾರಿಗೆ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಇದೀಗ ಫೇಸ್ಬುಕ್ನಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಅಖಿಲೇಶ್ ಮಿಶ್ರಾರವರು ತರಕಾರಿ ಅಂಗಡಿ ಕೆಳಗೆ ಗೋಣಿಚೀಲದ ಮೇಲೆ ಕುಳಿತುಕೊಂಡು ತರಕಾರಿ ಮಾರುತ್ತಿದ್ದು, ಗ್ರಾಹಕರುಗಳು ಸಹ ಅಂಗಡಿ ಬಳಿ ಖರೀದಿ ಮಾಡಲು ನಿಂತಿರುವುದನ್ನು ಕಾಣಬಹುದಾಗಿದೆ. ಈ ಫೋಟೋ ನೋಡಿ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಸರ್ಕಾರವನ್ನು ಮುಜುಗರಕ್ಕಿಡು ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಬೈಕ್, ಡಬಲ್ ಬ್ಯಾರಲ್ ಕೋವಿ ಕದ್ದಿದ್ದ ಆರೋಪಿ ಅಂದರ್
ಈ ಬಗ್ಗೆ ಮಾತನಾಡಿದ ಅಖಿಲೇಶ್ ಮಿಶ್ರಾರವರು, ನಾನು ಕೆಲವು ಅಧಿಕೃತ ಕೆಲಸದ ಮೇಲೆ ಪ್ರಯಾಗರಾಜ್ಗೆ ಭೇಟಿ ನೀಡಿದ್ದೆ. ನಂತರ ಅಲ್ಲಿಂದ ಹಿಂತಿರುವಾಗ ತರಕಾರಿ ಖರೀದಿಸಲೆಂದು ಬಂದೆ. ಆಗ ತರಕಾರಿ ಮಾರಾಟಗಾರ ಮತ್ತು ವೃದ್ಧೆಯೊಬ್ಬರು ತಮ್ಮ ಮಗು ಇಲ್ಲಿ ಎಲ್ಲೋ ಹೋಗಿದೆ. ಮಗುವನ್ನು ಹುಡುಕಿ ಬರುವವರೆಗೂ ಸ್ವಲ್ಪ ಅಂಗಡಿಯನ್ನು ನೋಡಿಕೊಳ್ಳುವಂತೆ ಮನವಿ ಮಾಡಿದರು. ಹಾಗಾಗಿ ನಾನು ಅವರ ಅಂಗಡಿಯಲ್ಲಿ ಕುಳಿತುಕೊಂಡಿದ್ದೆ. ಈ ವೇಳೆ ಗ್ರಾಹಕರೊಬ್ಬರು ಬಂದರು. ಆಗ ನನ್ನ ಸ್ನೇಹಿತ ಫೋಟೋ ಕ್ಲಿಕ್ಕಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಅರ್ಧ ಗಂಟೆ ಥರ್ಮಾಕೋಲ್ ಸಹಾಯದಿಂದ ಈಜು – ಬದುಕುಳಿದ ಮೀನುಗಾರ
ಬೆಂಗಳೂರು: ಬಜೆಟ್ ಸನಿಹದಲ್ಲಿ ರಾಜ್ಯ ಸರ್ಕಾರ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದೆ. 42 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು ನಗರ, ಗ್ರಾಮಾಂತರ, ಮಂಡ್ಯ, ಕೋಲಾರ, ಮಂಡ್ಯ, ಉತ್ತರ ಕನ್ನಡ, ಚಿಕ್ಕಮಗಳೂರು, ರಾಯಚೂರು, ತುಮಕೂರು ಜಿಲ್ಲೆಗಳ ಡಿಸಿಗಳನ್ನು ಬದಲಾಯಿಸಲಾಗಿದೆ. ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆಯನ್ನು ವರ್ಗಾವಣೆ ಮಾಡಿ, ತ್ರಿಲೋಕ್ ಚಂದ್ರರನ್ನು ನೇಮಿಸಲಾಗಿದೆ. ಕನ್ನಡ ಸಂಸ್ಕೃತಿ ಇಲಾಖೆಯಲ್ಲಿದ್ದ ರಶ್ಮಿ ಮಹೇಶ್ ಅವರನ್ನು ಹಿಂದುಳಿದ ವರ್ಗಗಳ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ವರ್ಗಾವಣೆಗೊಳಿಸಲಾಗಿದ್ದು, ಸ್ಥಳ ತೋರಿಸಿಲ್ಲ. ಡಾ. ತ್ರಿಲೋಕ್ ಚಂದ್ರ ಅವರನ್ನ ನೂತನ ಆರೋಗ್ಯ ಇಲಾಖೆ ಆಯುಕ್ತರನ್ನಾಗಿ ಮಾಡಲಾಗಿದೆ
ಬಳ್ಳಾರಿ: ಮಹಾನಗರ ಪಾಲಿಕೆಯ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರನ್ನು ಬಂದ ಹತ್ತು ದಿನದಲ್ಲೇ ವರ್ಗಾವಣೆ ಮಾಡಲಾಗಿತ್ತು. ಆದರೆ ಅವಧಿ ಪೂರ್ವ ವರ್ಗಾವಣೆ ಮಾಡಿದ್ದರಿಂದ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯದಿಂದ ತಮ್ಮ ವರ್ಗಾವಣೆಗೆ ತಡೆಯಾಜ್ಞೆ ತಂದು ಮುಂದುವರೆದಿದ್ದಾರೆ.
ಐಎಎಸ್ ಅಧಿಕಾರಿಯಾಗಿರುವ ಗೆಹ್ಲೋಟ್ ಅವರ ಬಿಗಿ ಆಡಳಿತದಿಂದ ಪಾಲಿಕೆಯಲ್ಲಿ ತಮ್ಮ ಕೈ ಚಳಕ ನಡೆಯದ ವ್ಯಕ್ತಿಗಳು ಇವರ ವರ್ಗಾವಣೆಗೆ ಪ್ರಯತ್ನ ಮಾಡಿರಬಹುದು. ಜೊತೆಗೆ ಈ ಹುದ್ದೆಗೆ ಬರಲು ಪ್ರಯತ್ನಿಸಿದವರು ಲಂಚ ನೀಡಿ ಗೆಹ್ಲೋಟ್ ಅವರನ್ನು ವರ್ಗಾವಣೆ ಮಾಡಿಸಲು ಮುಂದಾಗಿರಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಹಿಂದೆ ಇದ್ದಂತಹ ಪಾಲಿಕೆ ಆಯುಕ್ತೆ ತುಷಾರಮಣಿ ಅವರು ಸಹ ಆರಂಭದಲ್ಲಿ ತುಂಬಾ ಕಟ್ಟುನಿಟ್ಟಾದ ಕಾರಣ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಅವರೂ ಸಹ ಆಡಳಿತಾತ್ಮಕ ನ್ಯಾಯಾಲಯದ ಮೊರೆ ಹೋಗಿ ತಮ್ಮ ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರು. ಆದರೆ ಅವರು ನಂತರದ ದಿನಗಳಲ್ಲಿ ತಮ್ಮ ಕಾರ್ಯಶೈಲಿಯಲ್ಲಿ ಬದಲಾಣವಣೆ ಮಾಡಿಕೊಂಡು ಕೆಲ ದುಷ್ಟ ಶಕ್ತಿಗಳ ಜೊತೆ ಕೈಜೋಡಿಸಿ ಭ್ರಷ್ಟಾಚಾರದ ಕೂಪಕ್ಕೆ ಬಿದ್ದರು ಎಂದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಾಗಿತ್ತು.
ಲಕ್ನೋ: 14 ದಿನದ ಕಂದಮ್ಮನ ಜೊತೆ ಐಎಎಸ್ ಅಧಿಕಾರಿ ಸೇವೆಗೆ ಹಾಜರಾಗಿದ್ದಾರೆ. ಮಗುವಿನ ಜೊತೆ ಕೆಲಸ ನಿರ್ವಹಿಸುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಗಾಜಿಯಾಬಾದ್ನ ಮೋದಿನಗರದ ಎಸ್ಡಿಎಂ ಐಎಎಸ್ ಅಧಿಕಾರಿ ಸೌಮ್ಯಾ ಪಾಂಡೆ ಕೇವಲ 14 ದಿನ ಹೆರಿಗೆ ರಜೆ ತೆಗೆದುಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಕೆಲಸದ ಜೊತೆ ತಾಯಿಯ ಜವಾಬ್ದಾರಿಯನ್ನು ಸೌಮ್ಯಾ ಪಾಂಡೆ ನಿರ್ವಹಿಸುತ್ತಿದ್ದಾರೆ.
Modinagar SDM, Covid nodal officer rejoins work 14 days after giving birth
ನಾನು ಐಎಎಸ್ ಅಧಿಕಾರಿಯಾಗಿದ್ದರಿಂದ ಕೋವಿಡ್-19 ಸೇರಿದಂತೆ ಹಲವು ಜವಾಬ್ದಾರಿಗಳಿವೆ. ದೇವರು ಮಹಿಳೆಗೆ ಮಗುವಿಗೆ ಜನ್ಮ ನೀಡುವ ಶಕ್ತಿ ನೀಡುವದರ ಜೊತೆಗೆ ಅದರ ಲಾಲನೆ ಪಾಲನೆ ಮಾಡುವ ಸಾಮಥ್ರ್ಯವನ್ನು ನೀಡಿದ್ದಾನೆ. ಗ್ರಾಮೀಣ ಭಾಗದ ಮಹಿಳೆಯರು ಮಗುವಿಗೆ ಜನ್ಮ ನೀಡುವ ಕೊನೆಯ ದಿನದವರೆಗೂ ಕೆಲಸ ಮಾಡುತ್ತಿರುತ್ತಾರೆ. ಹಾಗೆ ಮಗುವಿಗೆ ಜನ್ಮ ನೀಡಿದ ಕೆಲವೇ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಕೃಷಿ ಜೊತೆಗೆ ಮನೆಯ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಅದೇ ರೀತಿ ನಾನು ಸಹ ವಾರದ ಕಂದಮ್ಮನ ಜೊತೆ ಕೆಲಸ ಮಾಡುತ್ತಿದ್ದೇನೆ ಎಂದು ಸೌಮ್ಯಾ ಪಾಂಡೆ ಹೇಳುತ್ತಾರೆ.
ಕೊರೊನಾ ನಿಯಂತ್ರಣಕ್ಕಾಗಿ ಬಹುತೇಕ ಅಧಿಕಾರಿಗಳು ಹಗಲಿರುಳು ಎನ್ನದೇ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ನೀಡುವ ಹೆರಿಗೆ ರಜೆಯನ್ನ ಕೇವಲ 22 ದಿನಕ್ಕೆ ಸೌಮ್ಯಾ ಪಾಂಡೆ ಮೊಟಕುಗೊಳಿಸಿಕೊಂಡಿದ್ದಾರೆ. ಕೋವಿಡ್ ಹಿನ್ನೆಲೆ ಮಗುವಿನ ಆರೋಗ್ಯದ ಬಗ್ಗೆಯೂ ಗಮನ ನೀಡಬೇಕು. ಹಾಗಾಗಿ ಸೌಮ್ಯಾ ಅವರ ಬಳಿ ಹೋಗುವ ಎಲ್ಲ ಫೈಲ್ ಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ.
Ghaziabad: Saumya Pandey, Modinagar sub-divisional magistrate who gave birth to a baby girl recently, rejoined office 14 days after her delivery. She says, "District Magistrate & administration's supported me throughout my pregnancy period as well as after my delivery." (12.10) pic.twitter.com/x93SIQXvyW
ಬೆಂಗಳೂರು: ಕೊರೊನಾ ಹೆಸರಲ್ಲಿ ದುಪ್ಪಟ್ಟು ಹಣ ಸೂಲಿಗೆ ಮಾಡಲು ಹೊರಟಿದ್ದ ಖಾಸಗಿ ಆಸ್ಪತ್ರೆಯ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಐಎಎಸ್ ಅಧಿಕಾರಿ ಹರ್ಷ ಗುಪ್ತ ಮತ್ತು ಡಿ.ರೂಪ ನೇತೃತ್ವದ ತಂಡ ಖಾಸಗಿ ಆಸ್ಪತ್ರೆಯ ಮೇಲೆ ದಾಳಿ ಮಾಡಿದೆ. ದಾಳಿಯ ನಂತರ ರೋಗಿಯ ಬಳಿ ದುಪ್ಪಟ್ಟು ಹಣ ಪಡೆದಿರುವುದಾಗಿ ಆಸ್ಪತ್ರೆ ಆಡಳಿತ ಮಂಡಳಿ ತಪ್ಪೊಪ್ಪಿಕೊಂಡಿದೆ.
ಆಸ್ಪತ್ರೆ ದುಪ್ಪಟ್ಟ ಹಣ ಪಡೆದಿರುವ ಬಗ್ಗೆ ಅಧಿಕಾರಿಗಳ ಜೊತೆ ರೋಗಿ ತನ್ನ ಅಳಲು ತೊಡಿಕೊಂಡಿದ್ದರು. ಆಗ ಐಎಎಸ್ ಅಧಿಕಾರಿ ಹರ್ಷ ಗುಪ್ತ ಮತ್ತು ಡಿ.ರೂಪ ಕೊರೊನಾ ರೋಗಿಯಿಂದ ಪಡೆದಿರುವ ಬಿಲ್ ಪಡೆದು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಸರ್ಕಾರ ನಿಗದಿ ಪಡಿಸಿದ ಹಣಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡಿರುವ ಬಗ್ಗೆ ಬೆಳಕಿಗೆ ಬಂದಿದೆ.
ತಕ್ಷಣ ಐಎಎಸ್ ಅಧಿಕಾರಿ ಹರ್ಷ ಗುಪ್ತ ಮತ್ತು ಡಿ.ರೂಪ ನೇತೃತ್ವದ ತಂಡ ಆಸ್ಪತ್ರೆಯ ಮೇಲೆ ದಾಳಿ ಮಾಡಿದೆ. ಆಗ ರೋಗಿಯ ಬಳಿ ದುಪ್ಪಟ್ಟು ಹಣ ಪಡೆದಿರುವುದಾಗಿ ಆಸ್ಪತ್ರೆ ಒಪ್ಪಿಕೊಂಡಿದೆ. ಕೊನೆಗೆ ಅಧಿಕಾರಿಗಳು ದಾಳಿಯ ವೇಳೆ ಆಸ್ಪತ್ರೆ ಆಡಳಿತ ಮಂಡಳಿಗೆ ಖಡಕ್ ಎಚ್ಚರಿಕೆ ನೀಡಿದೆ.
ಅಷ್ಟೇ ಅಲ್ಲದೇ ರೋಗಿಯಿಂದ ಪಡೆದ ದುಪ್ಪಟ್ಟು ಹಣವನ್ನು ಹಿಂದಿರುಗಿಸುವಂತೆ ಹೇಳಿದ್ದಾರೆ. ಅದಕ್ಕೆ ಆಸ್ಪತ್ರೆ ಆಡಳಿತ ಮಂಡಳಿ ಕೂಡ ಒಪ್ಪಿಕೊಂಡಿದೆ.
ಬೆಂಗಳೂರು: ಐಎಎಸ್ ಅಧಿಕಾರಿ ವಿಜಯ್ಶಂಕರ್ ಸಾವಿನ ಸುತ್ತ ಹಲವು ಅನುಮಾನಗಳು ಮೂಡುತ್ತಿವೆ. ಅಧಿಕಾರಿ ಆತ್ಮಹತ್ಯೆಗೂ ಮುನ್ನ ಕುತ್ತಿಗೆಗೆ ನೋವಿನ ಪ್ಯಾಡ್ ಧರಿಸಿದ್ದರು. ಗಟ್ಟಿಯಾಗಿದ್ದ ಪ್ಲಾಸ್ಟಿಕ್ ಪ್ಯಾಡ್ ಮೇಲೆ ಕುತ್ತಿಗೆ ಬಿಗಿದಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೆ ಸಾವಿಗೂ ಮುನ್ನ ಡೆತ್ ನೋಟ್ ಬರೆದಿದ್ದಾರೆಯೇ ಎಂದು ರಾತ್ರಿ ಪೊಲೀಸರು ಸುದೀರ್ಘವಾಗಿ ಮೃತದೇಹದ ಪಂಚನಾಮೆ ನಡೆಸಿದ್ದಾರೆ.
ಐಎಎಸ್ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆಗೆ ಕಾರಣವೇನು?, ಐಎಂಎ ಹಗರಣದ ವಿಚಾರಣೆಗೆ ಹೆದರಿ ಸಾವಿಗೆ ಶರಣಾದ್ರಾ..? ಸಿಬಿಐ ತನಿಖೆಯಿಂದ ಬಂಧನದ ಭೀತಿ ಎದುರಾಗಿತ್ತಾ..?, ಬಂಧನ ಭೀತಿಯಲ್ಲಿ ವಿಜಯ್ ಶಂಕರ್ ಆತ್ಮಹತ್ಯೆಗೆ ಶರಣಾದ್ರಾ?, ಕೌಟುಂಬಿಕ ಕಲಹ, ವೈಯಕ್ತಿಕ ವಿಚಾರದಲ್ಲಿ ಖಿನ್ನತೆ ಒಳಗಾಗಿದ್ರಾ ಹೀಗೆ ವಿವಿಧ ಆಯಾಮಗಳಿಂದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಮಧ್ಯರಾತ್ರಿ ವಿಕ್ಟೋರಿಯಾ ಶವಾಗಾರಕ್ಕೆ ಮೃತ ದೇಹ ರವಾನಿಸಲಾಗಿದ್ದು, ಇಂದು ಕೊರೊನಾ ಸ್ವಾಬ್ ಟೆಸ್ಟ್ ನಂತರ ಪೋಸ್ಟ್ ಮಾರ್ಟಮ್ ಮಾಡಲಾಗುತ್ತೆ. ಪೋಸ್ಟ್ ಮಾರ್ಟಮ್ ನಂತರ ಮೃತ ದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತೆ. ಬಹುಕೋಟಿ ಐಎಂಎ ಹಗರಣದಲ್ಲಿ ಜೈಲು ವಾಸ ಅನುಭವಿಸಿದ್ದ ಐಎಎಸ್ ಅಧಿಕಾರಿ ವಿಜಯ್ಶಂಕರ್ ಮಂಗಳವಾರ ರಾತ್ರಿ ಆತ್ಮಹತ್ಯೆಗೆ ಶರಣಾಗಿದ್ದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿಜಯ್ ಶಂಕರ್, 20 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಮರಳಿದ್ದರು. ಬೆಳಗ್ಗೆ ಕಚೇರಿಯಲ್ಲಿ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೂ ಸಭೆ ನಡೆಸಿದ್ದು, ಲವಲವಿಕೆಯಿಂದಲೇ ಕೆಲಸ ಮಾಡಿದ್ದರು. ಮಧ್ಯಾಹ್ನ ಕಚೇರಿಯಿಂದ ತೆರಳಿದ್ದ ವಿಜಯ್ ಶಂಕರ್ ಸಂಜೆ ಖಿನ್ನತೆಗೆ ಒಳಗಾಗಿ ನೇಣಿಗೆ ಶರಣಾಗಿದ್ದಾರೆ.
ಐಎಂಎ ಕೇಸ್ನಲ್ಲಿ ಮನ್ಸೂರ್ ಖಾನ್ನಿಂದ 1.5 ಕೋಟಿ ರೂ.ಪಡೆದ ಆರೋಪ ವಿಜಯ್ ಶಂಕರ್ ಮೇಲಿತ್ತು. ಈ ಬಗ್ಗೆ 3 ದಿನದ ಹಿಂದೆ ವಿಚಾರಣೆಗೆ ಹಾಜರಾಗಲು ಸಿಬಿಐ ನೋಟಿಸ್ ಕೂಡ ಕೊಟ್ಟಿತ್ತು. ಒಟ್ಟನಲ್ಲಿ ಬಂಧನ ಭೀತಿಯಿಂದ ವಿಜಯ್ ಶಂಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು: ಬಹುಕೋಟಿ ಐಎಂಎ ಹಗರಣದಲ್ಲಿ ಜೈಲು ವಾಸ ಅನುಭವಿಸಿದ್ದ ಐಎಎಸ್ ಅಧಿಕಾರಿ ವಿಜಯ್ ಶಂಕರ್ ಇಂದು ಬೆಂಗಳೂರಿನ ಜಯನಗರದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಮಾನತುಗೊಂಡಿದ್ದ ವಿಜಯ್ ಶಂಕರ್ 20 ದಿನಗಳ ಹಿಂದೆ ಕೆಲಸಕ್ಕೆ ಮರಳಿದ್ದರು. ಇಂದು ಬೆಳಗ್ಗೆ ಕಚೇರಿಯಲ್ಲಿ ಸಾಲು ಸಾಲು ಸಭೆ ನಡೆಸಿದ್ದು, ಲವಲವಿಕೆಯಿಂದಲೇ ಕೆಲಸ ಮಾಡಿದ್ದರು ಎಂದು ತಿಳಿದು ಬಂದಿದೆ.
1.5 ಕೋಟಿ ಲಂಚದ ಆರೋಪ: ಐಎಂಎ ಪ್ರಕರಣದಲ್ಲಿ 1.5 ಕೋಟಿ ರೂ. ಲಂಚ ಪಡೆದ ಆರೋಪ ವಿಜಯ್ ಶಂಕರ್ ಮೇಲಿತ್ತು. ಪ್ರಕರಣ ಸಂಬಂಧ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜ್ ಹೇಳಿಕೆ ಆಧಾರದ ಮೇಲೆ ಎಸ್ಐಟಿ ತಂಡವು ವಿಜಯ್ ಶಂಕರ್ ಅವರನ್ನು ಬಂಧಿಸಿದೆ. ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸುವ ವೇಳೆ ಪ್ರಕರಣ ಎಸ್ಐಟಿಯಿಂದ ಸಿಬಿಐಗೆ ವರ್ಗಾವಣೆಯಾಗಿತ್ತು. ಸಿಬಿಐ ಸಹ ವಿಜಯ್ ಶಂಕರ್ ಅವರನ್ನ ಬಂಧಿಸಿತ್ತು.
ಬಂಧನದ ಭೀತಿ: ಎಸ್.ಐ.ಟಿ ಕೇಸ್ ನಲ್ಲಿ 16 ಆರೋಪಿಯಾಗಿದ್ದ ವಿಜಯ್ ಶಂಕರ್, ಕೇಸ್ ಸಿಬಿಐಗೆ ವರ್ಗಾವಣೆಯಾದ ನಂತರ 4ನೇ ಆರೋಪಿಯಾಗಿದ್ದರು. ಕೆಲ ದಿನಗಳ ಹಿಂದೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ಪ್ರಾಷಿಕ್ಯೂಷನ್ ಗೆ ಸರ್ಕಾರ ಅನುಮತಿ ನೀಡಿದೆ ಎಂಬ ಭಯದಲ್ಲಿದ್ದ ವಿಜಯ್ ಶಂಕರ್, ಇದರಿಂದ ತಪ್ಪಿಸಿಕೊಳ್ಳಲು ಪದೇ ಪದೇ ವಿಧಾನಸೌಧಕ್ಕೂ ಭೇಟಿ ನೀಡಿದ್ದರು ಎಂದು ತಿಳಿದ ಬಂದಿದೆ. ಈಗ ಬಂಧನದ ಭೀತಿಯಿಂದ ಆತ್ಮಹತ್ಯೆಗೆ ಶರಣಾಗಿರುವ ಶಂಕೆಗಳು ವ್ಯಕ್ತವಾಗಿವೆ.
ಇಂದು ಬೆಳಗ್ಗೆ 10:30 ರಿಂದ 12 ಗಂಟೆಯವರೆಗೂ ಸಭೆ ನಡೆಸಿದ್ದ ವಿಜಯ್ ಶಂಕರ್ ಮಧ್ಯಾಹ್ನ 12:30ಕ್ಕೆ ಕಚೇರಿಯಿಂದ ಹೊರ ಬಂದಿದ್ದರು. ಮನೆಗೆ ಬಂದಿದ್ದ ವಿಜಯ್ ಶಂಕರ್, ಸಂಜೆ ಸುಮಾರು 7 ಗಂಟೆಗೆ ತಮ್ಮ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ವೇಳೆ ಮನೆಯಲ್ಲಿ ವಿಜಯ್ ಶಂಕರ್ ಪತ್ನಿ ಹಾಗೂ ಪುತ್ರಿ ಇದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ತಿಲಕ ನಗರ ಠಾಣೆಯ ಪೊಲೀಸರು ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.