ಹೈದರಾಬಾದ್: ತೆಲಂಗಾಣದಲ್ಲಿ ನಡೆದ ಪಶುವೈದ್ಯೆ ಹತ್ಯೆ ಪ್ರಕರಣ ಇಡೀ ದೇಶವನ್ನೇ ನಡುಗಿಸಿತ್ತು. ಪಶುವೈದ್ಯೆಯ ಹತ್ಯೆಯ ವಿರುದ್ಧ ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ದಕ್ಷಿಣ ಭಾರತದ ಕಲಾವಿದರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ನಟಿ ಅನುಷ್ಕಾ ಶೆಟ್ಟಿ ತಮ್ಮ ಇನ್ಸ್ಟಾದಲ್ಲಿ, ಅಮಾಯಕಿ ಪ್ರಿಯಾಂಕಾ ರೆಡ್ಡಿ ಮೇಲೆ ಅತ್ಯಾಚಾರ ನಡೆಸಿ ಕೊಲ್ಲಲಾಗಿದೆ. ಇದು ಇಡೀ ಮನುಕುಲವನ್ನೇ ಕದಲಿಸುವ ವಿಚಾರ. ಪೈಶಾಚಿಕ ಕೃತ್ಯವೆಸಗಿ ಪ್ರಿಯಾಂಕಾಳನ್ನು ಕೊಂದ ಪಾಪಿಗಳನ್ನು ಪ್ರಾಣಿಗಳಿಗೆ ಹೋಲಿಸಿದರೆ ಅವು ಕೂಡ ನಾಚಿಕೆ ಪಟ್ಟುಕೊಳ್ಳುತ್ತವೆ ಎಂದಿದ್ದಾರೆ. ಅಲ್ಲದೆ ಈ ಸಮಾಜದಲ್ಲಿ ಮಹಿಳೆಯಾಗಿ ಇರುವುದೇ ಅಪರಾಧನಾ ಎಂದು ಪ್ರಶ್ನಿಸಿದ್ದಾರೆ. ಶಿಕ್ಷೆ ಆಗೋವರೆಗೂ ಹೋರಾಟ ನಡೆಸೋಣ ಎಂದು ಪಶುವೈದ್ಯೆಯ ದಾರುಣ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಪಶುವೈದ್ಯೆಯನ್ನ ಗ್ಯಾಂಗ್ರೇಪ್ ಮಾಡಿ, ಕೊಲೆ – 25 ಕಿ.ಮೀ ದೂರ ಶವವೊಯ್ದು ಸುಟ್ಟರು
ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕೂಡ ತಮ್ಮ ಟ್ವಿಟ್ಟರಿನಲ್ಲಿ, ಸುರಕ್ಷತೆ ಎಲ್ಲಿದೆ? ಕೆಟ್ಟ ವಿಷಯಗಳು ಹಾಗೂ ಹಿಂಸಾಚಾರವನ್ನು ನಿರ್ಲಕ್ಷ್ಯಿಸುವುದರಿಂದ ಪರಿಹಾರ ಸಿಗುವುದಿಲ್ಲ. ನಿಮಗೆ ಅಸುರಕ್ಷತೆ ಎನಿಸಿದಾಗ ದಯವಿಟ್ಟು ಸಹಾಯಕ್ಕಾಗಿ ತಲುಪಿ. ಹಾಗೆಯೇ ನಿಮ್ಮ ಸಹಾಯದ ಅಗತ್ಯ ಇರುವವರ ಜೊತೆ ಇರಿ ಎಂದು ತೆಲಂಗಾಣ ರಾಜ್ಯದ ಪ್ರತಿ ಜಿಲ್ಲೆಯ ಪೊಲೀಸ್ ಠಾಣೆ ಫೋನ್ ನಂಬರ್ ಹಾಗೂ ಇಮೇಲ್ ಐಡಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪಶುವೈದ್ಯೆಯನ್ನ ಕೊಲೆಗೈದ ಜಾಗದ ಸಮೀಪದಲ್ಲೇ ಸಿಕ್ತು ಮತ್ತೋರ್ವ ಮಹಿಳೆ ಶವ
ನಟ ಅನಿರುದ್ಧ್ ಅವರು ಕೂಡ ತಮ್ಮ ಎಫ್ಬಿಯಲ್ಲಿ, ವಿಕೃತ ಮನಸ್ಸುಗಳು ಬದಲಾಗುವವರೆಗೂ ಇಂತಹ ಹೇಯ ಕೃತ್ಯ ನಿಲ್ಲದು. ಹೆಣ್ಣನ್ನು ನೋಡಿದಾಗ ಹೆತ್ತವಳು ನೆನಪಾಗಬೇಕೇ ಹೊರತು ಕೆಟ್ಟ ಆಲೋಚನೆಗಳಲ್ಲ. ಅಕ್ಕ- ತಂಗಿಯರ ಮನಸ್ಸು, ದೇಹ ಸುಟ್ಟು ಅದ್ಯಾವ ಸುಖವ ಪಡೆವರೋ. ಆ ದಿನ ರಾತ್ರಿ ಆ ಹೆಣ್ಣು ಮಗಳು ಇದ್ದ ಸ್ಥಿತಿಯ ಅರೆ ಕ್ಷಣ ಊಹಿಸಿಕೊಂಡರೂ ಮುಂದಿನ ಕ್ಷಣದ ಊಹೆ ಬೇಡವೆನಿಸುವುದು. ಹೆಣ್ಣೆಂದರೆ ಪೂಜಿಸುವ ಪವಿತ್ರವಾದ ದೇವರ ಸೃಷ್ಟಿಯೇ ಹೊರತು ತಿಂದು ಬಿಸಾಡುವ ಹಣ್ಣಲ್ಲ.

ಆ ಹೆಣ್ಣು ಮಗಳ ಮತ್ತೆ ಬದುಕಿಸಲು ಯಾರಿಂದಲೂ ಸಾಧ್ಯವಿಲ್ಲವೆಂಬುದು ತಿಳಿದಿದೆ. ಆದರೆ ಕನಿಷ್ಟ ಪಕ್ಷ ಕಠಿಣ ಶಿಕ್ಷೆಯಿಂದಾದರೂ ಬೇರೆ ಕ್ರೂರ ಮನಸ್ಸುಗಳ ಒಳಗೆ ಭಯ ಮೂಡಿ ಮುಂದೆಂದೂ ಇಂತಹ ಹೇಯ ಕೃತ್ಯ ನಡೆಯದಿರಲಿ. ಹೆತ್ತವಳು ಹೆಣ್ಣು. ಜೊತೆಯಲ್ಲಿ ಹುಟ್ಟುವವಳು ಹೆಣ್ಣು. ಜೊತೆಯಾಗುವವಳು ಹೆಣ್ಣು. ನಮ್ಮ ಪ್ರತಿರೂಪವ ಹಡೆವವಳು ಹೆಣ್ಣು. ರಸ್ತೆಯಲ್ಲಿ ಒಬ್ಬ ಹೆಣ್ಣನ್ನು ನೋಡಿದಾಗ ಪ್ರತಿಯೊಬ್ಬ ಗಂಡು ಅಣ್ಣನಾಗಿ ನಿಂತರೆ ಯಾವ ಹೆಣ್ಣಿಗೂ ಇಂತಹ ಸ್ಥಿತಿ ಬಾರದು. ಕೆಟ್ಟ ಮನಸ್ಸುಗಳು ಬದಲಾಗಲಿ. ಕೆಟ್ಟ ಆಲೋಚನೆಗಳು ಬದಲಾಗಲಿ. ಕಷ್ಟವಾದರೂ, ಆ ತಂದೆ ತಾಯಿಗೆ ನೋವ ತಡೆಯುವ ಶಕ್ತಿ ನೀಡಿ ಬಿಡಲಿ ಭಗವಂತ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಪಶುವೈದ್ಯೆಯ ಹತ್ಯೆಗೆ ಭಾರತೀಯ ಚಿತ್ರರಂಗದ ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.