Tag: housing board

  • ಕೊರೊನಾ ಲೆಕ್ಕಿಸದೆ ನಿವೇಶನ ಹರಾಜು ಪ್ರಕ್ರಿಯೆಯಲ್ಲಿ ಜನ ಜಾತ್ರೆ

    ಕೊರೊನಾ ಲೆಕ್ಕಿಸದೆ ನಿವೇಶನ ಹರಾಜು ಪ್ರಕ್ರಿಯೆಯಲ್ಲಿ ಜನ ಜಾತ್ರೆ

    – ಗೃಹ ಮಂಡಳಿ ಕಚೇರಿಯಲ್ಲಿ ಗಲಾಟೆ, ತಳ್ಳಾಟ, ನೂಕಾಟ

    ಗದಗ: ಒಂದೆಡೆ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಜಿಲ್ಲೆಯಲ್ಲಿ 174 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಷ್ಟಾದರೂ ಅಧಿಕಾರಿಗಳು ಮಾತ್ರ ಎಚ್ಚರಿಗೆ ವಹಿಸಿಲ್ಲ. ನೂರಾರು ಜರನ್ನು ಸೇರಿಸಿಕೊಂಡು ಹರಾಜು ಪ್ರಕ್ರಿಯೆ ಆರಂಭಿಸಿದ್ದಾರೆ. ಅದನ್ನೂ ಸಹ ಶಾಂತಿಯುತವಾಗಿ, ವ್ಯವಸ್ಥಿತವಾಗಿ ಮಾಡಿಲ್ಲ. ಗಲಾಟೆ, ಗದ್ದಲ, ತಳ್ಳಾಟ, ನೂಕಾಟದಿಂದ ಹರಾಜು ಪ್ರಕ್ರಿಯೆ ರದ್ದಾಗಿದೆ.

    ನಗರದ ಮುಳಗುಂದ ರಸ್ತೆಯಲ್ಲಿರುವ ಕರ್ನಾಟಕ ಗೃಹಮಂಡಳಿ ಕಚೇರಿಯಲ್ಲಿ ಇಂದು 40 ಸೈಟ್ ಗಳ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಜನ ಕಿಕ್ಕಿರಿದು ಸೇರಿದ್ದರು. ಕಚೇರಿಯ ತುಂಬೆಲ್ಲಾ ಜನಸ್ತೋಮ ನಿರ್ಮಾಣವಾಗಿತ್ತು. ಜಿಲ್ಲೆಯಲ್ಲಿ 174 ಸೋಂಕಿತರಿದ್ರೂ ಜನ ಮಾತ್ರ ಭಯಭೀತರಾಗಿಲ್ಲ. ಹರಾಜು ಪ್ರಕ್ರಿಯೆಯಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಜರ್, ಥರ್ಮಲ್ ಸ್ಕ್ರೀನಿಂಗ್ ಇದ್ಯಾವುದು ಇಲ್ಲದೆ ಜನ ಗುಂಪಾಗಿ ಸೇರಿದ್ದರು.

    ಪ್ರತಿ ಚದರ ಅಡಿಗೆ 560 ರೂ. ನಿಂದ ಹರಾಜು ಶುರುವಾಗಲಿದ್ದು, ಓರ್ವ ಫಲಾನುಭವಿ ಮೊದಲು 50 ಸಾವಿರ ರೂಪಾಯಿ ಹಣ ಪಾವತಿಸಿ ಹೆಸರು ನೋಂದಣಿ ಮಾಡಿ ಟೊಕನ್ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳು ಆದೇಶ ಮಾಡಿದ್ದರು. ಆದರೆ 40 ಸೈಟ್‍ಗೆ ಸುಮಾರು 400 ಜನ ಸೇರಿದ್ದರು.

    ಗೃಹ ಮಂಡಳಿ ನಿಯಮಗಳನ್ನು ಹೇಳುತ್ತಿದ್ದಂತೆ ಜನ ಸಿಟ್ಟಿಗೆದ್ದು, ಮಂಡಳಿ ನೀಡಿದ ನಿವೇಶನದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಅಧಿಕಾರಿಗಳು ಕಂಡು ಕಾಣದ ಹಾಗೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಮೊದಲು ನಿವೇಶನದಲ್ಲಿ ಮೂಲಭೂತ ಸೌಲಭ್ಯಗಳನ್ನು ಮಾಡಿಕೊಟ್ಟು, 40 ಸೈಟ್ ಹರಾಜು ಪ್ರಕ್ರಿಯೆ ಆರಂಭಿಸಿ ಎಂದು ಗದ್ದಲ, ಗಲಾಟೆ ಮಾಡಿದರು.

    ಈ ವೇಳೆ ಸಾರ್ವಜನಿಕರು ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ನಂತರ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಸ್ಥಿತಿ ತಿಳಿಗೊಳಿಸಿದರು. ಹರಾಜು ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಹೇಳಿದರು. ವ್ಯವಸ್ಥಿತವಾಗಿ ಹರಾಜು ಪ್ರಕ್ರಿಯೆ ನಡೆಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಜನ ದೂರಿದ್ದಾರೆ.

  • ಯಮ ಗುಂಡಿಯಾಯ್ತು, ರಾಜಕಾಲುವೆ ಆಯ್ತು, ಸಿಲಿಕಾನ್ ಸಿಟಿಯಲ್ಲಿವೆ ಡೆಡ್ಲಿ ಅಂಡರ್‍ಪಾಸ್‍ಗಳು!

    ಯಮ ಗುಂಡಿಯಾಯ್ತು, ರಾಜಕಾಲುವೆ ಆಯ್ತು, ಸಿಲಿಕಾನ್ ಸಿಟಿಯಲ್ಲಿವೆ ಡೆಡ್ಲಿ ಅಂಡರ್‍ಪಾಸ್‍ಗಳು!

    ಬೆಂಗಳೂರು: ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ವಾಹನ ಸವಾರರು ಎಚ್ಚರಕೆಯಿಂದ ಸಂಚರಿಸಬೇಕಾಗಿದೆ. ಯಾಕಂದ್ರೆ ಸರ್ಕಾರ ಕಟ್ಟಿರೋ ಹೈಟೆಕ್ ಅಂಡರ್ ಪಾಸ್‍ಗಳು ಮೈಮೇಲೆ ಬೀಳುವ ಸಂಭವಗಳಿವೆ.

    ಹೌದು. ಸಿಲಿಕಾನ್ ಸಿಟಿಯ ಟ್ರಾಫಿಕ್ ಕಡಿಮೆ ಮಾಡಲು ನಿರ್ಮಾಣಗೊಂಡಿರೋ ಅಂಡರ್‍ಪಾಸ್‍ಗಳು ಮೃತ್ಯುಕೂಪವಾಗಿ ಪರಿಣಮಿಸಿವೆ. ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ ಅನ್ನೋ ಜಾರ್ಜ್ ಸಾಹೇಬ್ರು ಸ್ವಲ್ಪ ಅಂಡರ್‍ಪಾಸ್‍ಗಳತ್ತ ಗಮನಹರಿಸಬೇಕಾಗಿದೆ. ಕಾವೇರಿ ಜಂಕ್ಷನ್ ಅಂಡರ್‍ಪಾಸ್, ಲೀ ಮೆರೆಡಿಯನ್ ಅಂಡರ್‍ಪಾಸ್, ಹೌಸಿಂಗ್ ಬೋಡ್ ಅಂಡರ್‍ಪಾಸ್, ನಾಯಂಡಹಳ್ಳಿ ಅಂಡರ್‍ಪಾಸ್ ಸೇರಿದಂತೆ ಇತರೆ ಅಂಡರ್‍ಪಾಸ್‍ಗಳು ಕಳಪೆ ಕಾಮಗಾರಿಯಿಂದಾಗಿ ಬೀಳುವ ಹಂತಕ್ಕೆ ತಲುಪಿದೆ. ಈ ಎಲ್ಲಾ ಅಂಡರ್‍ಪಾಸ್‍ಗಳ ಗೋಡೆ ಗೋಡೆಗಳಲ್ಲೂ ನೀರು ಸೋರುತ್ತಿದ್ದು ಯಾವುದೇ ಕ್ಷಣದಲ್ಲಾದ್ರು ಕುಸಿದು ಬೀಳುವ ಆತಂಕ ಕಾಡುತ್ತಿದೆ.

    ಕಾವೇರಿ ಜಂಕ್ಷನ್ ಅಂಡರ್‍ ಪಾಸ್: ಬೆಂಗಳೂರಲ್ಲಿ ಯಾವಾಗ ಮಳೆ ಬಂದ್ರೂ ಮೊದಲು ನೀರು ನಿಲ್ಲೋದು ಇದೇ ಅಂಡರ್‍ಪಾಸ್‍ನಲ್ಲಿ. ಹತ್ತಾರು ಅಲ್ಲ ನೂರಾರು ವಾಹನಗಳು ಈ ಅಂಡರ್‍ಪಾಸ್‍ನಲ್ಲಿ ಸಿಲುಕಿ ಪ್ರಾಣ ಉಳಿಸಿಕೊಳ್ಳೋಕೆ ಒದ್ದಾಡಿದ್ದಾರೆ. ಇದನ್ನ ಬರೀ 48 ಗಂಟೆಯಲ್ಲಿ ಕಟ್ಟಿ ಮೀಸೆ ತಿರುವಿದ್ದವರು ಈ ಕಡೆ ತಲೆ ಹಾಕಿಲ್ಲ. ಅಂಡರ್‍ಪಾಸ್ ಸೋರ್ತಿದ್ದು ಯಾವಾಗ ಬೀಳುತ್ತೋ ಗೊತ್ತಿಲ್ಲ. ಕಾವೇರಿ ಜಂಕ್ಷನ್ ಅಂಡರ್ ಪಾಸ್ ತಪ್ಪಿಸಿಕೊಂಡು ಸ್ಯಾಂಕಿ ಕೆರೆ ಹತ್ತಿರದಲ್ಲಿರೋ ಲೀ ಮೆರಿಡಿಯನ್ ಅಂಡರ್‍ಪಾಸ್ ಹತ್ರ ಅಪ್ಪಿತಪ್ಪಿನೂ ಹೋಗ್ಬೇಡಿ. ಈ ಅಂಡರ್‍ಪಾಸ್ ಕೂಡ ಸೋರುತ್ತಿದ್ದು ಈಗಾಗ್ಲೇ ಬಿರುಕು ಬಿಟ್ಟಿವೆ.

    ಹೌಸಿಂಗ್‍ ಬೋರ್ಡ್ ಅಂಡರ್‍ ಪಾಸ್: ಇದನ್ನ ಕಟ್ಟಿ 6 ತಿಂಗಳು ಕಳೆದಿಲ್ಲ. ಅದಾಗ್ಲೇ ಗೋಡೆಗಳೆಲ್ಲಾ ಬಿರುಕುಬಿಟ್ಟಿವೆ. ನೀರು ಸೋರುತ್ತಿದ್ದು ಅಂಡರ್‍ಪಾಸ್ ಕೆಳಗೆ ನಿಲ್ತಿದೆ. ಸಿದ್ದರಾಮಯ್ಯನವರೇ ಉದ್ಘಾಟಿಸಿದ್ದ ಈ ಅಂಡರ್‍ಪಾಸ್ ಈಗ ಡೆಡ್ಲಿ ಅಂಡರ್‍ಪಾಸ್ ಆಗಿದೆ.

    ನಾಯಂಡಹಳ್ಳಿ ಅಂಡರ್‍ ಪಾಸ್ ಜೊತೆ ಫ್ಲೈ ಓವರ್ ಕೆಳಗೆ ಹೋದ್ರೆ ನಿಮ್ಮ ಪ್ರಾಣ ಹಾರಿಹೋಗೋದು ನಿಶ್ಚಿತ. ಇಷ್ಟೆಲ್ಲಾ ತೂತುಗಳಿದ್ರೂ ಬಿಬಿಎಂಪಿಯವರು ತಲೆಕೆಡಿಸಿಕೊಳ್ಳುತ್ತಿಲ್ಲ. ಅಂಡರ್ ಪಾಸ್ ಬಿದ್ದು ಅದರೊಳಗೆ ಸಿಲುಕಿ ಮೃತಪಟ್ಟರೆ ಪರಿಹಾರ ಕೊಟ್ಟು ಕೈ ತೊಳೆದುಕೊಳ್ತಾರೆ. ಹೀಗಾಗಿ ವಾಹನ ಸವಾರರು ಎಚ್ಚರಿಕೆಯಂದ ಇರಬೇಕಾಗಿದೆ.

    ಈಗಾಗಲೇ ರಾಜಾಕಾಲುವೆಯ ಕಳಪೆ ಕಾಮಗಾರಿಯಿಂದ 5 ಜನರ ಬಲಿಯಾಗಿದೆ. ಈ ಅಂಡರ್‍ಪಾಸ್‍ಗಳಿಂದಾಗಿ ಇನ್ನಷ್ಟು ಬಲಿಯಾಗೋ ಪ್ರಸಂಗ ಬಂದಿದೆ. ವಿವಿಐಪಿಗಳು ಓಡಾಡೋ ಅಂಡರ್‍ಪಾಸ್‍ಗಳ ಕಥೆಯೇ ಹೀಗಾದ್ರೆ ಇನ್ನು ಜನಸಮಾನ್ಯರು ಓಡಾಡೋ ಅಂಡರ್‍ ಪಾಸ್‍ಗಳ ಸ್ಥಿತಿ ಏನು ಎಂಬುದು ಜನರ ಪ್ರಶ್ನೆ.