Tag: Hosapet

  • 1.5 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ವಶಕ್ಕೆ – 6 ಮಂದಿ ಅರೆಸ್ಟ್

    1.5 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ವಶಕ್ಕೆ – 6 ಮಂದಿ ಅರೆಸ್ಟ್

    ಬಳ್ಳಾರಿ/ವಿಜಯನಗರ: ಜಿಲ್ಲೆಯ ಹೊಸಪೇಟೆ ನಗರದ ಎಸ್.ವಿ.ಕೆ ಬಸ್ ನಿಲ್ದಾಣದ ಬಳಿ ಈ ಅಪರೂಪದ ತಿಮಿಂಗಿಲದ ವಾಂತಿಯನ್ನು ಮಾರಾಟ ಮಾಡುವುದಕ್ಕೆ ಯತ್ನಿಸುತ್ತಿದ್ದ ಆರು ಮಂದಿಯನ್ನು ಹೊಸಪೇಟೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ತಿಮಿಂಗಿಲದ ವಾಂತಿ ಮೌಲ್ಯದ ಅಂದಾಜು ಒಂದೂವರೆ ಕೋಟಿ ರೂಪಾಯಿಯಷ್ಟಾಗುತ್ತದೆ. ಇನ್ನು ಇವರಿಬ್ಬರನ್ನು ಪೊಲೀಸರು ವಿಚಾರಣೆ ನಡೆಸಿದಾಗ ಇನ್ನೂ ನಾಲ್ಕು ಜನರ ಮಾಹಿತಿ ದೊರೆತು ಅವರನ್ನು ಸಹ ಬಂಧಿಸಲಾಗಿದೆ. ಇದನ್ನೂ ಓದಿ: ದೇಶದಲ್ಲಿ 200ರ ಗಡಿದಾಟಿದ ಓಮಿಕ್ರಾನ್ ಸೋಂಕಿತರ ಸಂಖ್ಯೆ – ಮೋದಿ ಗುರುವಾರ ಮಹತ್ವದ ಸಭೆ

    ಕೊಪ್ಪಳ ಜಿಲ್ಲೆ ಬಂಡಿ ಹರ್ಲಾಪುರದ ಲಂಬಾಣಿ ವೆಂಕಟೇಶ್ ಹಾಗೂ ಅಬ್ದುಲ್ ವಹಾಬ್ ಈ ತಿಮಿಂಗಿಲದ ವಾಂತಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿ ಇವರಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ, ಭಟ್ಕಳದ ಹಿರಮನೆ ಗಣಪತಿ, ಹುಬ್ಬಳ್ಳಿಯ ಪುಂಡಲೀಕ್ ಹಾಗೂ ಮಹೇಶ್ ಮತ್ತು ವಿಜಯಪುರ ಜಿಲ್ಲೆಯ ಶ್ರೀಧರ್ ಸಹ ಈ ದಂಧೆಯಲ್ಲಿ ಪಾಲುದಾರರಾಗಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಈ ನಾಲ್ವರನ್ನೂ ಇದೀಗ ಬಂಧಿಸಿದ್ದಾರೆ. ಇದನ್ನೂ ಓದಿ: ಎಂಇಎಸ್ ಇರಬೇಕಾದದ್ದು ಮಹಾರಾಷ್ಟ್ರದಲ್ಲಿ ಕರ್ನಾಟಕದಲ್ಲಿ ಅಲ್ಲ: ಶೋಭಾ ಕರಂದ್ಲಾಜೆ

    ಬಹುತೇಕ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಈ ತಿಮಿಂಗಿಲದ ವಾಂತಿಯನ್ನು ಬಳಸಲಾಗುತ್ತದೆ. ಇನ್ನು ಕಾನೂನು ಪ್ರಕಾರ ಇದರ ಸಾಗಾಟ, ಶೇಖರಣೆ ಮತ್ತ ಮಾರಾಟ ಅಪರಾಧವಾಗಿದ್ದು, ಇನ್ನೂ ಹೆಚ್ಚಿನ ಪ್ರಮಾಣದ ತಿಮಿಂಗಿಲದ ವಾಂತಿಯ ಶೇಖರಣೆ ಕುರಿತು ಅನುಮಾನಗಳಿದ್ದು, ಅದರ ಕುರಿತು ತನಿಖೆ ನಡೆಸಲಾಗುತ್ತದೆ. ತಿಮಿಂಗಿಲದ ವಾಂತಿಗೂ ಸಹ ಇಷ್ಟೊಂದು ಬೇಡಿಕೆಯಿದೆ ಎಂದು ಇದೀಗ ಹೊಸಪೇಟೆಯ ಸಾರ್ವಜನಿಕರಿಗೆ ಗೊತ್ತಾಗಿದೆ. ಇನ್ನೂ ಸಹ ಹಲವು ಜನರು ಈ ದಂಧೆಯಲ್ಲಿ ಭಾಗಿಯಾಗಿರುವ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • ‘ಮೋದಿ ಚೋರ್ ಹೈ’ ಎಂದರಿಗೆ ಯಾರನ್ನು ಕೇಳಿ ಟಿಕೆಟ್ ಕೊಟ್ರಿ- ಹೊಸಪೇಟೆ ಬಿಜೆಪಿ ಸಭೆಯಲ್ಲಿ ಗದ್ದಲ

    ‘ಮೋದಿ ಚೋರ್ ಹೈ’ ಎಂದರಿಗೆ ಯಾರನ್ನು ಕೇಳಿ ಟಿಕೆಟ್ ಕೊಟ್ರಿ- ಹೊಸಪೇಟೆ ಬಿಜೆಪಿ ಸಭೆಯಲ್ಲಿ ಗದ್ದಲ

    ಬಳ್ಳಾರಿ: ಅನರ್ಹ ಶಾಸಕ ಆನಂದ್ ಸಿಂಗ್ ಅವರಿಗೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿರುವ ವಿಚಾರವಾಗಿ ಹೊಸಪೇಟೆ ಕಾರ್ಯಕರ್ತರು ಬಿಜೆಪಿ ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಮೋದಿ ಚೋರ್ ಹೈ ಎಂದವರಿಗೆ ಯಾರಿಗೆ ಕೇಳಿ ಟಿಕೆಟ್ ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಾರೆ.

    ಉಪಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಇಂದು ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಹಾಗೂ ಮುಖಂಡ ಸಭೆ ಕರೆಯಲಾಗಿತ್ತು. ಪರಿಷತ್ ಸದಸ್ಯ ರವಿ ಕುಮಾರ್ ಅವರ ನೇತೃತ್ವದಲ್ಲಿ ಆರಂಭವಾದ ಸಭೆಯಲ್ಲಿ ಕಾರ್ಯಕರ್ತರು ನಾಯಕರಿಗೆ ಪ್ರಶ್ನೆಗಳ ಸುರಿಮಳೆಯನ್ನು ಎಸೆದರು. ಅಲ್ಲದೇ ಸಭೆಯಲ್ಲಿ ಅಸಮಾಧಾನ ಹೊರಹಾಕಿದ ಪರಿಣಾಮ ಮುಖಂಡ ನಡುವೆ ವಾಗ್ವಾದವೂ ಏರ್ಪಟ್ಟಿತ್ತು.

    ಸಭೆ ಆರಂಭವಾಗುತ್ತಿದಂತೆ ಗಲಾಟೆ ಆರಂಭವಾದ ಕಾರಣ ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪರಿಷತ್ ಸದಸ್ಯ ರವಿ ಕುಮಾರ್ ಸಭೆಯಿಂದ ಹೊರ ನಡೆದರು. ಇದಕ್ಕೂ ಮುನ್ನ ಅಸಮಾಧಾನಿತ ಮುಖಂಡರನ್ನು ಸಮಾಧಾನ ಮಾಡಲು ರವಿ ಕುಮಾರ್ ಹೈರಾಣರಾದರು. ನೂರಾರು ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಮುಖಂಡರು ಮೌನ ವಹಿಸಿದ್ದು ಕಂಡು ಬಂತು. ಸದ್ಯ ಹೊಸಪೇಟೆಯಲ್ಲಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ ಪರಿಣಾಮ ಆನಂದ್ ಸಿಂಗ್ ಅವರಿಗೆ ಹೊಸ ಸಂಕಷ್ಟ ಎದುರಾಗಿದೆ.