Tag: homes

  • ಕುಮಾರಸ್ವಾಮಿ ಪರ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಬ್ಯಾಟಿಂಗ್

    ಕುಮಾರಸ್ವಾಮಿ ಪರ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಬ್ಯಾಟಿಂಗ್

    ಮಡಿಕೇರಿ: ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ನಾನು ದೂರುವುದಿಲ್ಲ. 2018ರಲ್ಲಿ ಮಳೆ ಬಂದು ಮನೆಗಳು ಬಿದ್ದು ಹೋದಾಗ ಅವರು ಹತ್ತು ಲಕ್ಷ ರೂಪಾಯಿಯನ್ನು ಮನೆ ನಿರ್ಮಾಣಕ್ಕೆ ಘೋಷಣೆ ಮಾಡಿದ್ದರು. ಅದರಂತೆ ಕಾಮಗಾರಿಯೂ ನಡೆಯುತ್ತಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕುಮಾರಸ್ವಾಮಿ ಪರ ಬ್ಯಾಟಿಂಗ್ ಬೀಸಿದರು.

    ಕೊಡಗಿನ ಕುಶಾಲನಗರದಲ್ಲಿ ಮಾತನಾಡಿ ಅವರು, ನಿಮ್ಮ ಸರ್ಕಾರದಲ್ಲಿ ಕೊಡಗಿಗೆ ಯಾವುದೇ ಅನುದಾನ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ. ತಕ್ಷಣ ಕುಮಾರಸ್ವಾಮಿ ಅವರ ವಿರುದ್ಧವೇ ತಿರುಗಿ ಬಿದ್ದರು. ಕುಮಾರಸ್ವಾಮಿ ಅವರು ಕೊಡಗಿಗೆ ವಿಶೇಷವಾಗಿ ಏನೂ ಕೊಡಲಿಲ್ಲ. ಆದರೆ ಯಡಿಯೂರಪ್ಪನವರು ಕೊಡಗಿಗೆ 536 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ. ಅದು ಬಹಳ ದೊಡ್ಡ ಘೋಷಣೆ ಎಂದರು.

    ಕೊರೊನಾ ಎಫೆಕ್ಟ್ ನಿಂದ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ದು, ಇದು ರಾಜ್ಯದ ಬಜೆಟ್ ಮೇಲೂ ಪರಿಣಾಮ ಬೀರಿದೆ. ಹೀಗಾಗಿ ಕೊಡಗಿಗೆ ಪ್ರತ್ಯೇಕವಾಗಿ ಏನನ್ನೂ ಘೋಷಣೆ ಮಾಡಿಲ್ಲ ಎಂದು ಯಡಿಯೂರಪ್ಪ ಅವರು ಬಜೆಟ್‍ನಲ್ಲಿ ಕೊಡಗಿಗೆ ಏನನ್ನೂ ಘೋಷಿಸದಿರುವುದನ್ನು ಸಮರ್ಥಿಸಿಕೊಂಡರು. ಕೊರೊನಾ ವೈರಸ್ ನಿಂದ ಪ್ರಪಂಚದಲ್ಲೇ ಆರ್ಥಿಕ ಬಿಕ್ಕಟ್ಟು ಶುರುವಾಗಿದೆ ಎಂದು ಹೇಳಿದರು.

  • ದೆಹಲಿ ಹಿಂಸಾಚಾರದಲ್ಲಿ ಎರಡು ಕೋಮುಗಳ ಶಾಲೆಗೆ ಪರಸ್ಪರ ಬೆಂಕಿ

    ದೆಹಲಿ ಹಿಂಸಾಚಾರದಲ್ಲಿ ಎರಡು ಕೋಮುಗಳ ಶಾಲೆಗೆ ಪರಸ್ಪರ ಬೆಂಕಿ

    – ಉಜ್ವಲ ಭವಿಷ್ಯ ರೂಪಿಸಬೇಕಿದ್ದ ಶಾಲೆಗಳು ಅಗ್ನಿಗೆ ಆಹುತಿ

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಕೋಮು ಘರ್ಷಣೆಗೆ ಇಳಿದ ಎರಡು ಗುಂಪುಗಳು ಅಕ್ಕಪಕ್ಕದಲ್ಲಿದ್ದ ಎರಡು ಖಾಸಗಿ ಶಾಲೆಗಳಿಗೆ ಬೆಂಕಿ ಹೊತ್ತಿಸಿದ್ದಾರೆ. ಪರಿಣಾಮ ಪರಸ್ಪರ ಅವರವರ ಮಕ್ಕಳ ಭವಿಷ್ಯಕ್ಕೆ ಅವರವರೇ ಕೊಳ್ಳಿ ಇಟ್ಟಿದ್ದಾರೆ.

    ಶಿವ ವಿಹಾರ್ ನಲ್ಲಿರುವ ಫಾರುಕ್ ಒಡೆತನದ ರಾಜಧಾನಿ ಪಬ್ಲಿಕ್ ಸ್ಕೂಲ್ ಮತ್ತು ಹಿಂದೂ ಶರ್ಮಾ ಒಡೆತನದ ಡಿ.ಆರ್.ಪಿ ಶಾಲೆಗೆ ಉದ್ರಿಕ್ತ ಎರಡು ಕೋಮುಗಳು ಪರಸ್ಪರ ಬೆಂಕಿ ಹೊತ್ತಿಸಿದ್ದರು. ಘಟನೆಯಲ್ಲಿ ಡಿ.ಆರ್.ಪಿ ಶಾಲೆ ಸಂಪೂರ್ಣವಾಗಿ ಸುಟ್ಟರೇ, ರಾಜಧಾನಿ ಪಬ್ಲಿಕ್ ಸ್ಕೂಲ್ ಭಾಗಶಃ ಹಾನಿಯಾಗಿದ್ದು ಕಿಟಕಿ ಗಾಜುಗಳು ಪುಡಿ ಪುಡಿಯಾಗಿದೆ.

    ಪೂರ್ವ ನಿಯೋಜಿತ?
    ಶಿವ ವಿವಾರ್ ನಲ್ಲಿ ನಡೆದ ಘಟನೆ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ದಾಳಿ ಮಾಡಲು ಸಂಪೂರ್ಣವಾಗಿ ಸಿದ್ಧತೆ ಮಾಡಿಕೊಂಡತೆ ಕಂಡು ಬಂದಿದೆ. ಹಾನಿಗೊಳಗಾದ ರಾಜಧಾನಿ ಪಬ್ಲಿಕ್ ಶಾಲೆಯ ಮಹಡಿ ಮೇಲೆ ಪೆಟ್ರೋಲ್ ಬಾಂಬ್, ಬುಲೆಟ್ ಹಾಗೂ ಕಲ್ಲು ಇಟ್ಟಿಗೆ ತುಂಬಿದ ಮೂಟೆಗಳ ರಾಶಿ ಕಂಡು ಬಂದಿದೆ. ಗಲಭೆ ಸೃಷ್ಟಿಸುವ ಉದ್ದೇಶದಿಂದಲೇ ಈ ಎಲ್ಲ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡು ದಾಳಿ ಮಾಡಿದಂತೆ ಗೋಚರಿಸಿದೆ.

    ನಾಲ್ಕು ಅಂತಸ್ತಿನ ಈ ಶಾಲೆಯ ಛಾವಣಿಯಿಂದ ಸುತ್ತಲಿನ ಪ್ರದೇಶ ಮೇಲೆ ದಾಳಿ ನಡೆದಿದ್ದು ಎಲ್ಲ ಮನೆಗಳಿಗೂ ಪೆಟ್ರೋಲ್ ಬಾಂಬ್‍ಗಳ ಮೂಲಕ ಬೆಂಕಿ ಹಾಕಿದ್ದಾರೆ. ರಾಜಧಾನಿ ಪಬ್ಲಿಕ್ ಸ್ಕೂಲ್ ಪಕ್ಕದಲ್ಲೇ ಡಿ.ಆರ್.ಪಿ ಶಾಲೆ ಇದ್ದು ರಾಜಧಾನಿ ಶಾಲೆಯಿಂದ ಹಗ್ಗದ ಮೂಲಕ ಇಳಿಯಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ರಾಜಧಾನಿ ಶಾಲೆಯಿಂದ ಹಗ್ಗದ ಸಹಾಯದಿಂದ ಡಿ.ಆರ್.ಪಿ ಶಾಲೆಯೊಳಗೆ ಇಳಿದು ಬೆಂಕಿ ಹಚ್ಚಲಾಗಿದೆ ಎಂದು ಸ್ಥಳೀಯರು ಪಬ್ಲಿಕ್ ಟಿವಿಗೆ ಹೇಳಿದ್ದಾರೆ. ಡಿಆರ್‍ಪಿ ಶಾಲೆಗೆ ಬೆಂಕಿ ಹಚ್ಚಿಕೊಳ್ಳುತ್ತಿದ್ದಂತೆ ಇತ್ತ ರಾಜಧಾನಿ ಪಬ್ಲಿಕ್ ಸ್ಕೂಲ್ ಮೇಲೆ ಮತ್ತೊಂದು ಕೋಮು ದಾಳಿ ಮಾಡಿದೆ.

    ಈ ಎರಡು ಕೋಮುಗಳ ನಡುವಿನ ಸಂಘರ್ಷ ಸುತ್ತಿಲಿನ ಮನೆಗಳು ಹಾಗೂ ವಾಹನಗಳ ಸಂಪೂರ್ಣ ಅಗ್ನಿಗೆ ಆಹುತಿಯಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಆ ಎರಡು ಕೋಮುಗಳ ಮಕ್ಕಳ ಉಜ್ವಲ ಭವಿಷ್ಯ ರೂಪಿಸಬೇಕಿದ್ದ ಎರಡು ಶಾಲೆಗಳು ಸುಟ್ಟು ಹೋಗಿದೆ.

  • ಬಡವರಿಗಾಗಿ ಈ ವರ್ಷದಲ್ಲಿ 50 ಸಾವಿರ ಮನೆಗಳ ನಿರ್ಮಾಣ – ಸೋಮಣ್ಣ ಭರವಸೆ

    ಬಡವರಿಗಾಗಿ ಈ ವರ್ಷದಲ್ಲಿ 50 ಸಾವಿರ ಮನೆಗಳ ನಿರ್ಮಾಣ – ಸೋಮಣ್ಣ ಭರವಸೆ

    ಬೆಂಗಳೂರು: ಬಡವರಿಗೆ ಸೂರು ಕಲ್ಪಿಸುವ ಸಲುವಾಗಿ ವರ್ಷಾಂತ್ಯದ ವೇಳೆಗೆ 50 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

    ನೆಲಮಂಗಲ ಸಮೀಪದ ದಾಸನಪುರ ಹೋಬಳಿಯ ಅಗ್ರಹಾರಪಾಳ್ಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸೋಮಣ್ಣ ಅವರು ಈ ಬಗ್ಗೆ ಭರವಸೆ ನೀಡಿದರು. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಜಿ+3 ಮಾದರಿಯಲ್ಲಿ ನಿರ್ಮಿಸುತ್ತಿರುವ ವಸತಿ ಸಮುಚ್ಚಯ ಕಾಮಗಾರಿಗೆ ಸೋಮಣ್ಣ ಅವರು ಶಂಕುಸ್ಥಾಪನೆ ನೆರವೇರಿಸಿದರು.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರದಿಂದ 600 ಕೋಟಿ ರೂ. ಅನುದಾನ ನೀಡಿದ್ದರೂ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರಗಳ ಅವಧಿಯಲ್ಲಿ ಚಾಲನೆ ಸಿಗದೆ, ಈ ಯೋಜನೆಯು ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ವಸತಿ ಯೋಜನೆಯ ಭಾಗವಾಗಿ ಇಂದು 843 ಬಹುಮಹಡಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಒಂದು ವರ್ಷದ ಅವಧಿಯಲ್ಲಿ ಕನಿಷ್ಟ 50 ಸಾವಿರ ಮನೆ ನಿರ್ಮಾಣ ಮಾಡಿ ಬಡವರಿಗೆ ಹಸ್ತಾಂತರ ಮಾಡಲಾಗುವುದು. ಯಲಹಂಕ ಕ್ಷೇತ್ರದಲ್ಲಿ 3 ಸಾವಿರ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

    ಸರ್ಕಾರದಿಂದ ಕಟ್ಟುತ್ತಿರುವ ಆಸ್ಪತ್ರೆ, ಆಟದ ಮೈದಾನ, ಕೊಳಚೆ ನೀರು ಸಂಸ್ಕರಣಾ ಘಟಕ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಸಮುಚ್ಚಯಗಳಲ್ಲಿ ಒದಗಿಸುವ ಮೂಲಕ ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರ ಮಹತ್ವಾಕಾಂಕ್ಷಿ ವಸತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳಲ್ಲಿ ಲಭ್ಯವಿರುವ ಸುಮಾರು 4 ಲಕ್ಷ ರೂ. ಅನುದಾನ ಹಾಗೂ ಬ್ಯಾಂಕ್‍ಗಳಲ್ಲಿ 2 ಲಕ್ಷ ರೂ. ಸಾಲ ಸೌಲಭ್ಯ ಒದಗಿಸುವ ಮೂಲಕ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಬಡವರ ಕನಸನ್ನು ನನಸು ಮಾಡಲು ಬದ್ಧವಿರುವುದಾಗಿ ತಿಳಿಸಿದರು.

    ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಮಾತನಾಡಿ, ಯಲಹಂಕವನ್ನು ಗುಡಿಸಲು ರಹಿತ ಮಾದರಿ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹಿಂದಿನ ಸರ್ಕಾರಗಳ ಆಡಳಿತದ ಅವಧಿಯಲ್ಲಿ ಕಾರಣಾಂತರಗಳಿಂದ ಮನೆ ಬಡವರಿಗೆ ನೀಡಲು ಸಾಧ್ಯವಾಗಿರಲಿಲ್ಲ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಕ್ಷೇತ್ರದ, ಕುಕ್ಕನಹಳ್ಳಿ, ತೋಟಗೆರೆ, ಪಿಳ್ಳಹಳ್ಳಿ, ಲಕ್ಷ್ಮಿಪುರ, ಬಿಳಿಜಾಜಿ, ದಾಸನಪುರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮನೆ ನಿರ್ಮಾಣ ಮಾಡಲಾಗುವುದು. ಕ್ಷೇತ್ರದಲ್ಲಿ 10 ಸಾವಿರ ಮನೆ ನಿರ್ಮಾಣ ಮಾಡುವ ಗುರಿ ಇದೆ. ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳನ್ನು ಕ್ಷೇತ್ರಕ್ಕೆ ತರುವುದಾಗಿ ಭರವಸೆ ನೀಡಿದರು.

    ಜಿಲ್ಲಾಧಿಕಾರಿ ಶಿವಮೂರ್ತಿ, ರಾಜೀವ್ ಗಾಂಧಿ ವಸತಿ ನಿಗಮ ನಿ. ಎಂಡಿ ಡಾ.ರಾಮ ಪ್ರಸಾದ್ ಮನೋಹರ್, ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜಿ.ಮರಿಸ್ವಾಮಿ, ಜಿ.ಪಂ ಸದಸ್ಯ ರವಿಕುಮಾರ್, ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಶಿವರಾಜ್, ಗೋಪಾಲಪುರ ಗ್ರಾ.ಪಂ ಅಧ್ಯಕ್ಷ ಟಿ.ಎಂ ಬಸವೇಗೌಡ ಸೇರಿ ಯಲಹಂಕ ಕ್ಷೇತ್ರ ಬಿಜೆಪಿ ಅಧ್ಯಕ್ಷ ಹನುಮಯ್ಯ ಇನ್ನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಮನೆಗಳು ಹೇಗಿರಲಿವೆ?
    ಸುಮಾರು 5 ಎಕ್ರೆ ಜಮೀನಿನಲ್ಲಿ ಜಿ+3 ಮಾದರಿಯಲ್ಲಿ ನಿರ್ಮಿಸುತ್ತಿರುವ ವಸತಿ ಸಮುಚ್ಚಯದಲ್ಲಿ 836 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಮನೆಯನ್ನು 30 ಚ.ಮೀ ವಿಸ್ತೀರ್ಣದಲ್ಲಿ ಒಂದು ಹಾಲ್, ಬೆಡ್ ರೂಂ, ಅಡುಗೆಮನೆ ಸೇರಿದಂತೆ ಪ್ರತ್ಯೇಕ ಸ್ಥಾನದ ಮನೆ, ಶೌಚಾಲಯ, ಕಾಂಕ್ರೀಟ್ ಗೋಡೆಗಳು, ನೆಲಹಾಸಿಗೆಗೆ ವೆಟ್ರಿಫೈಡ್ ಟೈಲ್ಸ್, ಗ್ರಾನೈಟ್ ಬಳಸಿ ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. ಜೊತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು, ಪಂಪ್ ರೂಂ, ಮಳೆ ನೀರು ಕೊಯ್ಲು ಮುಂತಾದ ವ್ಯವಸ್ಥೆಯನ್ನು ಕೂಡ ಒದಗಿಸಲಾಗುತ್ತಿದೆ.

  • ರಾತ್ರಿ ಸುರಿದ ಮಳೆಗೆ 10ಕ್ಕೂ ಹೆಚ್ಚು ಮನೆಗಳು ಜಲಾವೃತ

    ರಾತ್ರಿ ಸುರಿದ ಮಳೆಗೆ 10ಕ್ಕೂ ಹೆಚ್ಚು ಮನೆಗಳು ಜಲಾವೃತ

    ಕೊಪ್ಪಳ: ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ನಿರಂತರ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು, 10ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ.

    ಕೊಪ್ಪಳದ ಕುವೆಂಪು ನಗರದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕಳೆದ ರಾತ್ರಿ ಜಿಲ್ಲೆಯಲ್ಲಿ ಭಾರೀ ಮಳೆಯಾದ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿದ್ದ ದವಸ ಧಾನ್ಯಗಳು ನೀರಿಗಾಹುತಿಯಾಗಿದೆ. ರಾತ್ರಿ ಇಡೀ ನೀರಿನಲ್ಲೇ ಇದ್ದ ಜನರು, ಮನೆಗಳಿಂದ ನೀರು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ. ಮಳೆ ಬಂದರೆ ಪ್ರದೇಶದಲ್ಲಿ ನೀರು ತುಂಬುತ್ತದೆ ಎಂದು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೊಜನವಾಗಿಲ್ಲ ಎಂದು ಸ್ಥಳೀಯರು ಕಿಡಿಕಾರುತ್ತಿದ್ದಾರೆ.

    ಕಳೆದ ಎರಡು ದಿನದಿಂದ ಸುರಿಯುತ್ತಿರುವ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಹಳ್ಳ ತುಂಬಿ ಹರಿಯುತ್ತಿದ್ದು, ಗುಂಡೂರು-ಲಕ್ಷ್ಮೀ ಕ್ಯಾಂಪ್ ಸೇತುವೆ ಮೇಲೆ ನೀರು ಹರಿದು ಬಂದಿದೆ. ಇದೇ ಮೊದಲ ಬಾರಿಗೆ ಸೇತುವೆ ಮೇಲೆ ನೀರು ಬಂದಿದ್ದು, ಲಕ್ಷ್ಮೀ ಕ್ಯಾಂಪ್- ಗುಂಡೂರು ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಮಳೆಗೆ ಹಳ್ಳ ತುಂಬಿ ಹರಿಯುತ್ತಿದ್ದರು ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಗುಂಡೂರು ಗ್ರಾಮಸ್ಥರು ನಿರಾಳರಾಗಿದ್ದಾರೆ. ಯಾಕೆಂದರೆ ಈ ಮೊದಲು ಗ್ರಾಮದ ಹಳ್ಳ ತುಂಬಿದರೆ ಗ್ರಾಮಕ್ಕೆ ನೀರು ನುಗ್ಗುತ್ತಿತ್ತು. ಆದರೆ ಸೇತುವೆ ನಿರ್ಮಾಣದಿಂದ ಹಳ್ಳ ನೀರು ಗ್ರಾಮಕ್ಕೆ ನುಗ್ಗದೆ ಸರಾಗವಾಗಿ ಹರಿಯುತ್ತಿದೆ. ಆದ್ದರಿಂದ ತುಂಬಿದ ಹಳ್ಳ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ.

  • ಕೊಡಗಿನಲ್ಲಿ ಕೊಂಚ ಕಡಿಮೆಯಾದ ವರುಣನ ಅರ್ಭಟ- ನಿಲ್ಲದ ಭೂಕುಸಿತ

    ಕೊಡಗಿನಲ್ಲಿ ಕೊಂಚ ಕಡಿಮೆಯಾದ ವರುಣನ ಅರ್ಭಟ- ನಿಲ್ಲದ ಭೂಕುಸಿತ

    – ನೆರವಿನ ನಿರೀಕ್ಷೆಯಲ್ಲಿ ಜನ

    ಕೊಡಗು: ಜಿಲ್ಲೆಯನಲ್ಲಿ ಮಳೆ ಕೊಂಚ ತಗ್ಗಿದ್ದರೂ ಮಳೆಯ ಅವಾಂತರ ಮಾತ್ರ ನಿಂತಿಲ್ಲ. ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತ, ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿದೆ. ಪರಿಣಾಮ ಜಿಲ್ಲೆಯ ಜನತೆ ಮಾತ್ರ ಆತಂಕದಲ್ಲಿಯೇ ದಿನದೂಡುತ್ತಿದ್ದಾರೆ.

    ನಿನ್ನೆಯವರೆಗೆ ಸುರಿದ ಮಳೆಯಿಂದಾಗಿ ಅಪಾರ ಪ್ರಮಾಣದ ನಷ್ಟವಾಗಿದ್ದು, ಬೆಳೆ, ಆಸ್ತಿ-ಪಾಸ್ತಿ ಹಾನಿಯಿಂದ ಕಂಗಾಲಾಗಿರುವ ಜನತೆ ಮುಂದೇನೂ ತಿಳಿಯದ ಸ್ಥಿತಿಗೆ ಬಂದು ತಲುಪಿಸಿದ್ದಾರೆ. ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ದಿನಬಳಕೆ ವಸ್ತುಗಳೆಲ್ಲ ನೀರು ಪಾಲಾಗಿದೆ. ಮರುಬಳಕೆಗೂ ಉಪಯೋಗವಿಲ್ಲದ ಸ್ಥಿತಿಯಲ್ಲಿರುವ ಸಾಮಾಗ್ರಿಗಳು ನೀರಲ್ಲಿ ತೇಲಾಡುತ್ತಿದೆ. ಭೂಕುಸಿತ, ಪ್ರವಾಹದಿಂದ ತತ್ತರಿಸಿದ ಬೆಳೆಗಾರರು ನೆರವಿನ ನಿರೀಕ್ಷೆಯಲ್ಲಿದ್ದಾರೆ.

    ಕಳೆದ ಬಾರಿಯ ವಿಕೋಪದಿಂದಲೇ ಚೇತರಿಸಿಕೊಳ್ಳದ ಜಿಲ್ಲೆಯ ಜನತೆಗೆ ಈ ಬಾರಿ ವರುಣ ಗಾಯದ ಮೇಲೆ ಮತ್ತೆ ಬರೆ ಎಳೆದಿದ್ದಾನೆ. ನಾಟಿ ಕಾರ್ಯಕ್ಕೆ ತಯಾರಿಯಲ್ಲಿದ್ದವರಿಗೆ ಪ್ರವಾಹದ ಆಘಾತ ಉಂಟಾಗಿದ್ದು, ಗದ್ದೆಗಳಲ್ಲಿ ಸಂಗ್ರಹಗೊಂಡಿರುವ ಭೂಕುಸಿತದ ಮಣ್ಣು ಜನತೆಯನ್ನು ಕಂಗೆಡಿಸಿದೆ. ನದಿಪಾತ್ರದ ಸ್ಥಳಗಳಲ್ಲಿ ಭತ್ತದ ಗದ್ದೆ ಮೇಲೆ ನೀರು ನಿಂತು ಮೂರಕ್ಕೂ ಹೆಚ್ಚು ದಿನಗಳಾಗಿದೆ. ಇದರ ನಡುವೆ ಮೂಕ ಪ್ರಾಣಿಗಳು ರೋಧಿಸುವ ದೃಶ್ಯ ಮನಕಲಕುತ್ತಿದ್ದು, ಹಲವು ಜಾನುವಾರುಗಳು ಪ್ರವಾಹಕ್ಕೆ ಬಲಿಯಾಗಿದೆ.

    ಸದ್ಯ ಮೂರು ತಾಲೂಕಿನಲ್ಲಿಯೂ ಜಾನುವಾರು ರಕ್ಷಣೆಗೆ ಕ್ರಮ ವಹಿಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕಾಗಮಿಸಲು ಮನವಿ ಮಾಡುತ್ತಿರುವ ಸಂತ್ರಸ್ತರು, ಸರ್ಕಾರದ ಮೇಲೆ ಮಹಾ ನಿರೀಕ್ಷೆ ಇಟ್ಟು ಪರಿಹಾರಕ್ಕೆ ಕಾಯುತ್ತಿದ್ದಾರೆ. ಮುಂಜಾನೆಯಿಂದ ಕೊಂಚ ಬಿಡುವು ನೀಡುತ್ತಾ, ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದ್ದು, ಮಡಿಕೇರಿ ನಗರ ಸೇರಿದಂತೆ ಗಾಳಿಬೀಡು, ವಣಚಲು, ಭಾಗಮಂಡಲ, ನಾಪೋಕ್ಲು, ಚೇರಂಬಾಣೆ, ಜೋಡುಪಾಲ, ಸಂಪಾಜೆ, ಕಾಟಕೇರಿ, ತಾಳತ್ತ್‍ಮನೆ, ಮದೆನಾಡು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ.

    ಕಳೆದ ವರ್ಷ ಪ್ರಕೃತಿ ವಿಕೋಪಕ್ಕೆ ತುತ್ತಾಗಿದ್ದ ಮೇಘಾತ್ತಾಳು ಗ್ರಾಮದ ರಸ್ತೆ ಪ್ರವಾಹ ಹಿನ್ನೆಲೆಯಲ್ಲಿ ಬರೆ ಕುಸಿದು ಸಂಪರ್ಕ ಕಡಿತಗೊಂಡಿದೆ. ಮರದ ನಾಟಗಳು ರಸ್ತೆಯಲ್ಲಿ ಆವರಿಸಿಕೊಂಡು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇತ್ತ ವಿರಾಜಪೇಟೆ ಗೋಣಿಕೊಪ್ಪ ಭಾಗದಲ್ಲಿ ರಕ್ಷಣಾ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಮಳೆ ಕೊಂಚ ಕಡಿಯಾಗುತ್ತಿರುವುದರಿಂದ ಗೋಣಿಕೊಪ್ಪ ನಗರ ಸಹಜ ಸ್ಥಿತಿಯತ್ತ ಮರಳುತ್ತಿದೆ.