Tag: HK Prakash

  • ಕಥಾಸಂಗಮ: ಟ್ರೇಲರ್ ಪ್ರಭೆಯಲ್ಲಿ ಮಹಾ ಗೆಲುವಿನ ಮುನ್ಸೂಚನೆ!

    ಕಥಾಸಂಗಮ: ಟ್ರೇಲರ್ ಪ್ರಭೆಯಲ್ಲಿ ಮಹಾ ಗೆಲುವಿನ ಮುನ್ಸೂಚನೆ!

    ನ್ನಡದ ಪ್ರೇಕ್ಷಕರು ವೈವಿಧ್ಯತೆ ಬಯಸುವ ಮನಸ್ಥಿತಿ ಹೊಂದಿರುವವರು. ಈ ಕಾರಣದಿಂದಲೇ ಇಲ್ಲಿ ಹೊಸ ಆಲೋಚನೆ, ಪ್ರಯೋಗಗಳ ಚಿತ್ರಗಳು ಸೋಲುವುದಿಲ್ಲ. ಅದೆಂಥಾ ಸವಾಲುಗಳೆದುರಾದ ಘಳಿಗೆಯಲ್ಲಿಯೂ ಪ್ರೇಕ್ಷಕರು ಅಂಥಾ ಸಿನಿಮಾಗಳನ್ನು ಕೈ ಬಿಡುವುದಿಲ್ಲ. ಬಹುಶಃ ಪ್ರೇಕ್ಷಕರ್ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ಮೂಡಿ ಬಂದು ತೆರೆಗಾಣಲು ಸಜ್ಜುಗೊಂಡಿರೋ ಕಥಾ ಸಂಗಮ ಚಿತ್ರ ರೂಪುಗೊಂಡಿದ್ದರ ಹಿಂದೆಯೂ ಪ್ರೇಕ್ಷಕರ ಔದಾರ್ಯವಿದೆ. ಇಂಥಾ ಸೂಕ್ಷ್ಮಗಳನ್ನು ಖಚಿತವಾಗಿಯೇ ಅರ್ಥ ಮಾಡಿಕೊಂಡಿರುವ ರಿಷಬ್ ಶೆಟ್ಟಿ ವರ್ಷಗಳ ಹಿಂದೆಯೇ ಕಥಾ ಸಂಗಮವೆಂಬ ಕನಸಿಗೆ ಕಾವು ಕೊಟ್ಟಿದ್ದರು. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಸಿನಿಮಾ ಟ್ರೇಲರ್‍ಗೆ ಸಿಕ್ಕಿರೋ ಅಭೂತಪೂರ್ವ ಬೆಂಬಲವೇ ಮಹಾ ಗೆಲುವೊಂದರ ಮುನ್ಸೂಚನೆಯಂತೆ ಕಾಣಿಸುತ್ತಿದೆ. ಇದರ ಬೆನ್ನಲ್ಲಿಯೇ ಹೊರ ಬಿದ್ದಿರುವ ಪೂರಕ ಮಾಹಿತಿಗಳು ಕಥಾ ಸಂಗಮದತ್ತ ಮತ್ತಷ್ಟು ಪ್ರೇಕ್ಷಕರು ಆಕರ್ಷಿತರಾಗುವಂತಿವೆ.

    ಈ ಟ್ರೇಲರ್‌ನಲ್ಲಿ ಏಳೂ ಕಥೆಗಳ ಝಲಕ್ಕುಗಳನ್ನು ಜಾಹೀರು ಮಾಡುತ್ತಲೇ ಪಾತ್ರಗಳ ಪರಿಚಯವನ್ನೂ ಮಾಡಿಸಲಾಗಿದೆ. ಅದರಲ್ಲಿ ಎಂಥವರೂ ಆಹ್ಲಾದಗೊಳ್ಳುವಂಥಾ ತಾಜಾ ತಾಜ ಸನ್ನಿವೇಶಗಳು, ನಿಗೂಢ ಕಥೆಗಳ ಮುನ್ಸೂಚನೆಗಳೆಲ್ಲ ಗೋಚರಿಸುತ್ತಾ ಲಕ್ಷ ಲಕ್ಷ ವೀಕ್ಷಣೆಯೊಂದಿಗೆ ಟ್ರೆಂಡಿಂಗ್‍ನಲ್ಲಿದೆ. ಶ್ರೀದೇವಿ ಎಂಟರ್‍ಪ್ರೈಸಸ್ ಬ್ಯಾನರಿನಡಿಯಲ್ಲಿ ಹೆಚ್.ಕೆ ಪ್ರಕಾಶ್, ಪ್ರದೀಪ್ ಎನ್ ಆರ್ ಮತ್ತು ರಿಷಬ್ ಶೆಟ್ಟಿ ನಿರ್ಮಾಣ ಮಾಡಿರುವ ಕಥಾ ಸಂಗಮ ಅಪರೂಪದ ಕಥೆಗಳ ಮಹಾ ಸಂಗಮವಾಗಿದೆ ಎಂಬ ಸ್ಪಷ್ಟ ಸೂಚನೆಯನ್ನು ಪ್ರತೀ ಪ್ರೇಕ್ಷಕರಿಗೂ ಮನವರಿಕೆ ಮಾಡಿ ಕೊಡುವಲ್ಲಿ ಈ ಟ್ರೇಲರ್ ಗೆದ್ದಿದ್ದಾರೆ. ಈ ಚಿತ್ರ ಡಿಸೆಂಬರ್ 6ರಂದು ಬಿಡುಗಡೆಗೊಳ್ಳಲಿದೆ.

    ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ಒಂದು ಕಥೆಯನ್ನು ಎಲ್ಲಿಯೂ ಸಿಕ್ಕಾಗದಂತೆ ನಿರೂಪಿಸೋದೇ ಕಷ್ಟದ ಸಂಗತಿ. ಅಂಥಾದ್ದರಲ್ಲಿ ಏಳು ಕಥೆಗಳ ಸೂತ್ರ ಹಿಡಿದು ಎಲ್ಲಿಯೂ ಗೊಂದಲ ಉಂಟಾಗದಂತೆ ರೂಪಿಸೋದೊಂದು ಸಾಹಸ. ನಿರ್ದೇಶಕ ರಿಷಬ್ ಶೆಟ್ಟಿ ಏಳು ಮಂದಿ ಪ್ರತಿಭಾನ್ವಿತ ಯುವ ನಿರ್ದೇಶಕರ ಬೆಂಬಲದೊಂದಿಗೆ ಅದನ್ನು ಸಾಧ್ಯವಾಗಿಸಿದ್ದಾರೆ. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿಯೇ ದಾಖಲೆ ಸೃಷ್ಟಿಸುವಂತಿದೆ ಎಂಬ ನಂಬಿಕೆಯಂತೂ ಎಲ್ಲೆಡೆ ವ್ಯಾಪಿಸಿಕೊಳ್ಳುತ್ತಿದೆ. ರಿಷಬ್ ಶೆಟ್ಟಿ ಯಾವ ಚಿತ್ರ ಮಾಡಿದರೂ ಅಲ್ಲೊಂದು ಹೊಸತನ ಇರುತ್ತದೆ. ಆದರೆ ಈ ಬಾರಿ ಹೊಸತನವೇ ಕಥಾ ಸಂಗಮವಾಗಿ ಮೈದಾಳಿದೆ. ಚೆಂದದ ಏಳು ಕಥೆ, ಚಿತ್ರವಿಚಿತ್ರವಾದ ಪಾತ್ರಗಳನ್ನು ಒಡಲಲ್ಲಿಟ್ಟುಕೊಂಡಿರೋ ಈ ಚಿತ್ರ ವಾರದೊಪ್ಪತ್ತಿನಲ್ಲಿಯೇ ತೆರೆಗಾಣಲಿದೆ.

  • ರಿಷಬ್ ಶೆಟ್ಟರ ಕಥಾ ಸಂಗಮದ ಸಂಗೀತ ಸಮಾಗಮ!

    ರಿಷಬ್ ಶೆಟ್ಟರ ಕಥಾ ಸಂಗಮದ ಸಂಗೀತ ಸಮಾಗಮ!

    ಬೆಂಗಳೂರು: ವರ್ಷಾಂತರಗಳ ಹಿಂದೆ ಪುಟ್ಟಣ್ಣ ಕಣಗಾಲರು ನಿರ್ದೇಶನ ಮಾಡಿದ್ದ ಕಥಾ ಸಂಗಮ ಚಿತ್ರವನ್ನು ಕನ್ನಡದ ಪ್ರೇಕ್ಷಕರು ಇಂದಿಗೂ ನೆನಪಿಟ್ಟುಕೊಂಡಿದ್ದಾರೆ. ಅದು ಆ ಕಾಲಕ್ಕೊಂದು ಹೊಸ ಪ್ರಯೋಗ. ಅದೊಂದು ಸಾಹಸ. ಈಗ ಕಾಲಘಟ್ಟ ಬದಲಾಗಿದೆ. ಕನ್ನಡ ಚಿತ್ರರಂಗದಲ್ಲಿಯೂ ಹೊಸ ಹರಿವು ಜೋರಾಗಿದೆ. ಈ ಅಲೆಯಲ್ಲಿ ಮುಂಚೂಣಿಯಲ್ಲಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಕಥಾ ಸಂಗಮವೆಂಬ ಶೀರ್ಷಿಕೆಯಲ್ಲಿಯೇ ಚಿತ್ರವೊಂದನ್ನು ಅಣಿಗೊಳಿಸಿದ್ದಾರೆ. ಏಳು ಮಂದಿ ನಿರ್ದೇಶಕರ ಏಳು ಕಥೆಗಳನ್ನೊಳಗೊಂಡಿರುವ ಈ ಸಿನಿಮಾದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೀಗ ಮುಹೂರ್ತ ನಿಗದಿಯಾಗಿದೆ. ಕಥಾಸಂಗಮ ಎಂಬುದು ಎಷ್ಟು ಹೊಸತನದ ಪ್ರಯೋಗವೋ ಅದಕ್ಕೆ ತಕ್ಕುದಾಗಿಯೇ ರಿಷಬ್ ಶೆಟ್ಟಿ ಮತ್ತವರ ಸಂಗಡಿಗರು ಧ್ವನಿಸುರುಳಿ ಕಾರ್ಯಕ್ರಮವನ್ನೂ ರೂಪಿಸಿದ್ದಾರೆ.

    ನವೆಂಬರ್ 21ರಂದು ಸಂಜೆ 5.30ಕ್ಕೆ ರವೀಂದ್ರ ಕಲಾ ಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಕಥಾಸಂಗಮದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ನೆರವೇರಲಿದೆ. ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಿಗೆ, ಧ್ವನಿ ಸುರುಳಿ ಬಿಡುಗಡೆಯಂಥಾದ್ದಕ್ಕೆ ಒಂದಷ್ಟು ಚೌಕಟ್ಟು, ಸಿದ್ಧ ಸೂತ್ರಗಳಿವೆ. ಆದರೆ ಕಥಾಸಂಗಮದ ಧ್ವನಿ ಸುರುಳಿ ಕಾರ್ಯಕ್ರಮವನ್ನು ರೂಪಿಸಿರೋ ರೀತಿಯೇ ನಿಜಕ್ಕೂ ಆಹ್ಲಾದಕರವಾಗಿದೆ. ನಾಟಕ, ಸಾಹಿತ್ಯ ಕಾರ್ಯಕ್ರಮಗಳ ಮೂಲಕ ರಂಗೇರಿಕೊಳ್ಳುವ ರವೀಂದ್ರ ಕಲಾಕ್ಷೇತ್ರದ ಪರಿಸರವನ್ನು ಸಿನಿಮಾ ಕಾರ್ಯಕ್ರಮದ ಮೂಲಕ ಕಳೆಗಟ್ಟಿಸುವಂತೆ ರಿಷಬ್ ಶೆಟ್ಟಿ ಮತ್ತು ತಂಡ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.

    ಇದರ ಆಹ್ವಾನ ಪತ್ರಿಕೆ ಗಮನಿಸಿದರೇನೇ ಈ ಧ್ವನಿ ಸುರುಳಿ ಬಿಡುಗಡೆ ಸಮಾರಂಭದ ವೈಶಿಷ್ಟ್ಯವೇನೆಂಬುದು ಅರ್ಥವಾಗುತ್ತದೆ. ಇದನ್ನೂ ಒಂದು ಸಾಹಿತ್ಯದ ಕಾರ್ಯಕ್ರಮದಂತೆ, ಸಂಗೀತದ ಹಬ್ಬದಂತೆ ನಡೆಸಲು ನೀಲನಕ್ಷೆ ರೆಡಿ ಮಾಡಿಕೊಳ್ಳಲಾಗಿದೆ. ಅಂದು ಸಂಸ ಬಯಲು ರಂಗಮಂದಿರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಥಾಸಂಗಮದ ಧ್ವನಿಸುರುಳಿಯನ್ನು ಸಂಜೆ ಆರು ಗಂಟೆಗೆ ಲೋಕಾರ್ಪಣೆಗೊಳಿಸಲಿದ್ದಾರೆ. ಆ ನಂತರ 6.15ರಿಂದ ಪ್ರದೀಪ್ ಬಿ.ವಿ ಮತ್ತು ಸಂಗಡಿಗರಿಂದ ಪುಟ್ಟಣ್ಣ ಕಣಗಾಲ್ ಚಿತ್ರಗಳಿಂದ ಆಯ್ದ ಗೀತೆಗಳ ಸಂಗೀತ ಸುಧೆ ಹರಿಯಲಿದೆ. 7.15ರಿಂದ ಕಥಾ ಸಂಗಮ ಚಿತ್ರದ ದೃಶ್ಯ ಗೀತೆ, ದೃಶ್ಯದ ತುಣುಕು ಮತ್ತು ತೆರೆಯ ಹಿಂದಿನ ಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಜರುಗಲಿದೆ. 7.30ರಿಂದ ಎಂಟು ಗಂಟೆಯವರೆಗೆ ಸಂಗೀತಾ ಕಟ್ಟಿ, ವಾಸು ದೀಕ್ಷಿತ್, ಡಾಸ್ ಮೋಡ್, ರಾಜ್ ಬಿ ಶೆಟ್ಟಿ ಮತ್ತು ಅದಿತಿ ಸಾಗರ್ ಮುಂತಾದವರಿಂದ ಕಥಾ ಸಂಗಮ ಚಿತ್ರದ ಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

    ಇದು ನಿಜಕ್ಕೂ ಹೊಸ ರೀತಿಯ ಬೆಳವಣಿಗೆ. ಸಿನಿಮಾ ಸಂಬಂಧಿ ಕಾರ್ಯಕ್ರಮಗಳೂ ಸಾಹಿತ್ಯಾತ್ಮಕ ಗಂಧ ಮೆತ್ತಿಕೊಂಡು ನಡೆಯುವುದು ಖುಷಿಯ ವಿಚಾರ. ಇದಕ್ಕೆ ಕಾರಣರಾದ ರಿಷಬ್ ಶೆಟ್ಟಿ ಮತ್ತು ತಂಡವನ್ನು ಅಭಿನಂದಿಸಲೇ ಬೇಕು. ಈ ಕಾರ್ಯಕ್ರಮ ಎಷ್ಟು ವಿಶಿಷ್ಟವಾಗಿ ನಡೆಯಲಿದೆಯೋ ಅದಕ್ಕೆ ತಕ್ಕುದಾದ ರೀತಿಯಲ್ಲಿಯೇ ಕಥಾ ಸಂಗಮ ಚಿತ್ರ ಮೂಡಿ ಬಂದಿದೆಯಂತೆ. ವಿಶೇಷವೆಂದರೆ ಇದರಲ್ಲಿ ಏಳು ಮಂದಿ ಬರೆದ ಏಳು ಕಥೆಗಳಿವೆ. ಅದನ್ನು ಒಟ್ಟುಗೂಡಿಸಿ ನಿರ್ದೇಶನ ಮಾಡುವ ಜವಾಬ್ದಾರಿಯನ್ನು ರಿಷಬ್ ಶೆಟ್ಟಿ ಹೊತ್ತುಕೊಂಡಿದ್ದಾರೆ. ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ, ಹರಿಪ್ರಿಯಾ, ಯಜ್ಞಾ ಶೆಟ್ಟಿ, ಕಿಶೋರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನಲವತ್ತು ಮಂದಿ ತಂತ್ರಜ್ಞರು ಸೇರಿ ರೂಪಿಸಿರೋ ಈ ಸಿನಿಮಾ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದ ಮೂಲಕ ಮತ್ತಷ್ಟು ಕಳೆಗಟ್ಟಿಕೊಳ್ಳಲಿದೆ.