ಬೆಂಗಳೂರು: ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ (Siddaramaiah) ಡಿ ಡೇ. ಕಾರಣ ಮುಡಾ ಪ್ರಕರಣದಲ್ಲಿ (MUDA Case) ತಮ್ಮ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಕ್ರಮ ಪ್ರಶ್ನಿಸಿ ವಿಚಾರಣೆ ನಡೆಸಿದ್ದ ಹೈಕೋರ್ಟ್ (High Court) ಮಂಗಳವಾರ ತೀರ್ಪು ಪ್ರಕಟಿಸಲಿದೆ.
ಈ ವಿಚಾರದಲ್ಲಿ ಕೋರ್ಟ್ ನೀಡುವ ತೀರ್ಪಿನತ್ತ ಎಲ್ಲರ ಚಿತ್ತ ನೆಟ್ಟಿದೆ. ಒಂದೊಮ್ಮೆ ತೀರ್ಪು ಸಿಎಂ ಸಿದ್ದರಾಮಯ್ಯ ಪರವಾಗಿ ಬಂದರೆ ಅವರ ಕುರ್ಚಿ ಸೇಫ್ ಆಗಲಿದೆ. ಇಲ್ಲದಿದ್ದರೆ ಸಿದ್ದರಾಮಯ್ಯ ರಾಜಕೀಯವಾಗಿ ಸಂಕಷ್ಟಕ್ಕೆ ಈಡಾಗಬಹುದು ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.
ಹೈಕೋರ್ಟ್ ತೀರ್ಪು ಬಳಿಕ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ನಿರೀಕ್ಷೆಯಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳಿವೆ. ಮುಂದಿನ ಲೆಕ್ಕಾಚಾರಗಳನ್ನು ಹಾಕಿಕೊಂಡೇ ದೋಸ್ತಿಗಳು ಮುಂದೇನು ಮಾಡಬೇಕೆಂದು ರಣತಂತ್ರ ರೂಪಿಸಿವೆ.
ಕೋರ್ಟ್ ತೀರ್ಪು ಸಿದ್ದರಾಮಯ್ಯಗೆ ವ್ಯತಿರಿಕ್ತವಾಗಿ ಬಂದರೆ ಮತ್ತೊಂದು ಹಂತದ ಹೋರಾಟ ಪ್ಲಾನ್ ಮಾಡಿಕೊಂಡಿವೆ. ನಿರಂತರ ಹೋರಾಟ ಮೂಲಕ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಡ ಸೃಷ್ಟಿಸುವ ಗುರಿಯನ್ನು ಹೊಂದಿದೆ. ತೀರ್ಪಿನ ಸ್ವರೂಪ, ಗಂಭೀರತೆ ನೋಡಿಕೊಂಡು ಮುಂದುವರೆಯಲು ದೋಸ್ತಿ ನಾಯಕರು ನಿರ್ಧರಿಸಿದ್ದಾರೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕೇಸಲ್ಲಿ (MUDA Case) ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಸಲ್ಲಿಸಿರುವ ರಿಟ್ ಅರ್ಜಿಯ ತೀರ್ಪನ್ನು ಹೈಕೋರ್ಟ್ (High Court) ಮಂಗಳವಾರ ಪ್ರಕಟಿಸಲಿದೆ.
ಈಗಾಗಲೇ ಎರಡು ಕಡೆಯ ವಾದವನ್ನು ಆಲಿಸಿ ವಿಚಾರಣೆ ಮುಕ್ತಾಯಗೊಳಿಸಿದ್ದ ನ್ಯಾ. ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಮಧ್ಯಾಹ್ನ 12 ಗಂಟೆಗೆ ತೀರ್ಪು ಪ್ರಕಟಿಸಲಿದೆ. ಸಿದ್ದರಾಮಯ್ಯ ಪರವಾಗಿ ಹಿರಿಯ ಸುಪ್ರೀಂ ಕೋರ್ಟ್ ವಕೀಲ ಅಭಿಷೇಕ್ ಮನು ಸಿಂಘ್ವಿ ಸೇರಿದಂತೆ ಹಲವು ಮಂದಿ ವಾದಿಸಿದ್ದರು.
ಏನಿದು ವಿವಾದ?
ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ನೀಡಿದ್ದು ಈಗ ವಿವಾದದ ಕೇಂದ್ರಬಿಂದು.
ಬದಲಿ ನಿವೇಶನಕ್ಕೆ ಪತ್ರ
ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿರುವ 3 ಎಕರೆ 16 ಗುಂಟೆ ಜಾಗವನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಸಹೋದರ, ಪಾರ್ವತಿಯವರಿಗೆ ದಾನವಾಗಿ ನೀಡಿದ್ದರು. ಈ ಜಾಗವನ್ನು ಅಭಿವೃದ್ಧಿಗಾಗಿ ಪ್ರಾಧಿಕಾರ ಕಾನೂನು ಪ್ರಕಾರವೇ ವಶಪಡಿಸಿಕೊಂಡಿತ್ತು. 1998 ರಲ್ಲಿ ನೋಟಿಫೈ ಮಾಡಿತ್ತು. ಇದೇ ಜಾಗದಲ್ಲಿ ದೇವನೂರು 3ನೇ ಹಂತದ ಬಡಾವಣೆಯನ್ನೂ ಅಭಿವೃದ್ಧಿ ಮಾಡಿದೆ. ವಿಷಯ ಏನೆಂದರೆ ವಶಪಡಿಸಿಕೊಂಡ ಜಾಗಕ್ಕೆ ಬದಲಿ ಭೂಮಿ ಕೊಡುವುದು ಪ್ರಾಧಿಕಾರದ ಕರ್ತವ್ಯ. ಹೀಗಾಗಿ ಬದಲಿ ಭೂಮಿ ನೀಡುವಂತೆ 2014ರಲ್ಲಿ ಸಿಎಂ ಪತ್ನಿ ಅರ್ಜಿ ಹಾಕಿದ್ದರು. 2017ರಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿಪಡಿಸದೇ ಇರುವ ಭೂಮಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ಒಪ್ಪದ ಸಿಎಂ ಪತ್ನಿ ಪಾರ್ವತಿ 2021ರಲ್ಲಿ ಮತ್ತೊಂದು ಪತ್ರ ಬರೆದು 50:50 ಅನುಪಾತದಲ್ಲಿ ಬದಲಿ ನಿವೇಶನ ಕೊಡಿ ಎಂದು ಮನವಿ ಸಲ್ಲಿಸಿದ್ದರು. ಸಿಎಂ ಪತ್ನಿ ಕೋರಿಕೆಯಂತೆ 2021ರಲ್ಲಿ 50:50 ಅನುಪಾತದಲ್ಲಿ ಭೂಮಿ ನೀಡಲಾಗಿದೆ. ಇದನ್ನೂ ಓದಿ: ಪೊಲೀಸ್ ಸ್ಟೇಷನ್, ತನಿಖಾ ಏಜೆನ್ಸಿಗಳೇ ಬೇಡ, ರಾಜ್ಯಪಾಲರಿಗೆ ದೂರು ನೀಡಿದರೆ ಸಾಕು: ಎಂಬಿ ಪಾಟೀಲ್
ಹಗರಣದ ವಾಸನೆ ಬಂದಿದ್ದು ಯಾಕೆ?
ಭೂಮಿ ವಶಪಡಿಸಿಕೊಂಡ ಜಾಗ ಬಿಟ್ಟು ಅಥವಾ ಸಮಾನಾಂತರವಾದ ಜಾಗ ಬಿಟ್ಟು ವಿಜಯನಗರದಲ್ಲಿ ಅಭಿವೃದ್ಧಿ ಆಗಿರುವ 38,284 ಚದರಡಿ ಭೂಮಿ ಹಂಚಿಕೆ ಮಾಡಲಾಗಿದೆ. ಅಲ್ಲದೇ 1998ರಲ್ಲಿ ಕಳೆದುಕೊಂಡ ಭೂಮಿಗೆ 2021ರಲ್ಲಿ ಪರಿಹಾರ ನೀಡಲಾಗಿದೆ ಎಂಬುದು ಆರ್ಟಿಐ ಕಾರ್ಯಕರ್ತರ ಆರೋಪ. ಭೂಮಿ ವಶಪಡಿಸಿಕೊಂಡ ಜಾಗದಲ್ಲಿ, ಅಥವಾ ಸಮಾನಾಂತರ ಜಾಗದಲ್ಲಿ ಬದಲಿ ಭೂಮಿ ನೀಡಬೇಕು ಎಂಬುದು ಕಾನೂನಿನಲ್ಲಿದೆ. ಆದರೆ ಸಿಎಂ ಪತ್ನಿಗೆ ಭೂಸ್ವಾಧೀನವಾದ ಜಾಗ ಬಿಟ್ಟು, ವಿಜಯನಗರದಲ್ಲಿ ಭೂಮಿ ಕೊಡಲಾಗಿದೆ. ಸಿಎಂ ಪತ್ನಿ ಅಲ್ಲದೇ ಹಲವು ಮಂದಿ ಭೂಮಿಯನ್ನು ಮುಡಾ ವಶಪಡಿಸಿಕೊಂಡಿದೆ. ಸಿಎಂ ಪತ್ನಿಗೆ ಹಂಚಿಕೆ ಮಾಡಿದಂತೆ ಇವರಿಗೂ ಜಾಗವನ್ನು ವಿಜಯನಗರ ಬಡಾವಣೆಯಲ್ಲಿ ಜಾಗ ಹಂಚಿಕೆ ಮಾಡಿಲ್ಲ. 50:50 ಅನುಪಾತ ನಿಯಮವನ್ನ ದುರುಪಯೋಗಪಡಿಸಿಕೊಂಡು 1998ರಲ್ಲಿ ವಶಪಡಿಸಿಕೊಂಡ ಜಾಗಕ್ಕೆ 2020ರಲ್ಲಿ ಜಾರಿಗೆ ಬಂದ 50-50 ಅನುಪಾತ ಬಳಸಿದ್ದೇಕೆ ಎನ್ನುವುದೇ ದೊಡ್ಡ ಪ್ರಶ್ನೆ.
ಕೆಸರೆಯಲ್ಲಿ ಕಡಿಮೆ ಮೌಲ್ಯದ ಜಾಗ ಸ್ವಾಧೀನ ಮಾಡಿ, ವಿಜಯನಗರದಲ್ಲಿ ಹೆಚ್ಚಿನ ಮೌಲ್ಯದ ಬದಲಿ ಭೂಮಿ ನೀಡಲಾಗಿದೆ. ಅಂದರೆ, ದೇವನೂರು ಬಡಾವಣೆಯಲ್ಲಿ ಚದರ ಅಡಿಗೆ 2,500 ರೂ. ನಿಂದ 3,000 ರೂ.ವರೆಗೆ ದರ ಇದೆ. ಆದರೆ ವಿಜಯನಗರದಲ್ಲಿ ಚದರ ಅಡಿಗೆ 7 ರಿಂದ 8 ಸಾವಿರ ರೂಪಾಯಿ ಇದೆ. ಹೀಗಾಗಿ ಸಿಎಂ ಮತ್ತು ಸಿಎಂ ಪತ್ನಿಗೆ ಆರ್ಥಿಕ ಲಾಭ ಮಾಡಿಕೊಡಲು ಮುಡಾ ಅಧಿಕಾರಿಗಳು ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿದ್ದಾರೆ. ಸಿಎಂ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರಿಂದ ಈ ಜಾಗ ಹಂಚಿಕೆ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಒಂದನೇಯದಾಗಿ ಸಿಎಂ ಪತ್ನಿಗೆ 1998ರ ಜಾಗಕ್ಕೆ 2021ರಲ್ಲಿ ಪರಿಹಾರ ಸಿಕ್ಕಿರುವುದು, ಎರಡನೇಯದ್ದು ಬೇರೆ ಕಡೆ ಭೂಮಿ ಕೊಟ್ಟಿರುವುದು, ಮೂರನೇಯದ್ದು 50-50 ಅನುಪಾತ ದುರ್ಬಳಕೆ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿ ಈಗ ಸಿಎಂ ಸಂಕಷ್ಟಕ್ಕೆ ಕಾರಣವಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ?
50:50 ಅನುಪಾತದ ಅಡಿ ನಿವೇಶನ ಹಂಚಿಕೆ ಬಗ್ಗೆ ಆರ್ಟಿಐ (RTI) ಕಾರ್ಯಕರ್ತರು ಧ್ವನಿ ಎತ್ತಿದ್ದರು. ಈ ವೇಳೆ ಸಿಎಂ ಪತ್ನಿಗೂ ನಿವೇಶನ ಹಂಚಿಕೆ ಆಗಿರುವ ದಾಖಲೆ ಬೆಳಕಿಗೆ ಬಂದವು. ಹೀಗಾಗಿ ಹಗರಣ ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು.
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಮೂವರು ಆರೋಪಿಗಳಿಗೆ ಜಾಮೀನು (Bail) ಮಂಜೂರು ಆಗಿದೆ. ಕೇಶವಮೂರ್ತಿಗೆ ಹೈಕೋರ್ಟ್ನಿಂದ ಕಾರ್ತಿಕ್, ನಿಖಿಲ್ ನಾಯಕ್ಗೆ 57ನೇ ಸಿಸಿಹೆಚ್ ಕೋರ್ಟ್ ನಿಂದ ಜಾಮೀನು ಸಿಕ್ಕಿದೆ.
ಈ ಪ್ರಕರಣದಲ್ಲಿ ಕಾರ್ತಿಕ್, ಕೇಶವ್ಮೂರ್ತಿ, ನಿಖಿಲ್ ನಾಯಕ್ ಕ್ರಮವಾಗಿ ಎ 15, ಎ16, ಎ17 ಆರೋಪಿಗಳಾಗಿದ್ದರು.
ಈ ಮೂವರು ರೇಣುಕಾಸ್ವಾಮಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ತನಿಖೆ ವೇಳೆ ಆರೋಪಿಗಳು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿಲ್ಲ. ಸಾಕ್ಷಿನಾಶ ಮಾಡಲು ಮುಂದಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಪೊಲೀಸರು ಸಾಕ್ಷ್ಯನಾಶ ಆಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೊಲೆಯಲ್ಲಿ ನೇರವಾಗಿ ಭಾಗಿಯಾಗದ ಕಾರಣ ಮೂವರಿಗೆ ಇಂದು ಜಾಮೀನು ಸಿಕ್ಕಿದೆ.
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ಮೊದಲ ಜಾಮೀನು (Bail) ಮಂಜೂರು ಆಗಿದೆ. ಎ16 ಆಗಿದ್ದ ಕೇಶವಮೂರ್ತಿಗೆ (KeshavMurthy) ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ರೇಣುಕಾಸ್ವಾಮಿ ಶವ ವಿಲೇವಾರಿಯಲ್ಲಿ ಭಾಗಿಯಾಗಿದ್ದ ಕೇಶವಮೂರ್ತಿಯನ್ನು ಸಾಕ್ಷ್ಯ ನಾಶ ಪ್ರಕರಣದಲ್ಲಿ ಬಂಧನ ಮಾಡಲಾಗಿತ್ತು. ಕೇಶವಮೂರ್ತಿ ಪರ ವಕೀಲ ರಂಗನಾಥ ರೆಡ್ಡಿ ವಾದಿಸಿದ್ದರು.
ಆರಂಭದಲ್ಲಿ ಕೇಶವಮೂರ್ತಿ ಕೊಲೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ತನಿಖೆ ವೇಳೆ ಕೊಲೆಯಲ್ಲಿ ಭಾಗಿಯಾಗಿಲ್ಲ. ಸಾಕ್ಷಿನಾಶ ಮಾಡಲು ಮುಂದಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು. ಹೀಗಾಗಿ ಪೊಲೀಸರು ಸಾಕ್ಷ್ಯನಾಶ ಆಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೊಲೆಯಲ್ಲಿ ನೇರವಾಗಿ ಭಾಗಿಯಾಗದ ಕಾರಣ ಕೇಶವಮೂರ್ತಿಗೆ ಇಂದು ಜಾಮೀನು ಸಿಕ್ಕಿದೆ.
ಯಾರು ಈ ಕೇಶವಮೂರ್ತಿ?
ಗಿರಿನಗರದ ಹೀರಣ್ಣನಗುಡ್ಡದ ಕೇಶವಮೂರ್ತಿ, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ನಟ ದರ್ಶನ್ ಅಭಿಮಾನಿಯಾಗಿದ್ದ ಆತ ಅದೇ ಅಭಿಮಾನದಲ್ಲೇ ಕೊಲೆ ಪ್ರಕರಣದ ಆರೋಪ ಹೊತ್ತು ಜೈಲಿಗೆ ಹೋಗಲು ಸಹ ಸಿದ್ದನಾಗಿದ್ದ.
ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಮೂಲಕ ಈ ಕೃತ್ಯದಲ್ಲಿ ಕೇಶವ ಸಿಲುಕಿದ್ದ. ಹಣದಾಸೆ ತೋರಿಸಿ ದರ್ಶನ್ ಹೆಸರು ಹೇಳದೆ ಪೊಲೀಸರಿಗೆ ಶರಣಾಗುವಂತೆ ದರ್ಶನ್ ಆಪ್ತರು ಸೂಚಿಸಿದ್ದರು. ಅದರಂತೆ ಕಾಮಾಕ್ಷಿಪಾಳ್ಯ ಠಾಣೆಗ ಬಂದು ಕೇಶವ ಮೂರ್ತಿ ಶರಣಾಗಿದ್ದ ಪೊಲೀಸರ ವಿಚಾರಣೆ ವೇಳೆ ಕೊಲೆ ರಹಸ್ಯವನ್ನು ಬಾಯ್ದಿಟ್ಟಿದ್ದ. ಈತನ ಹೇಳಿಕೆ ಆಧರಿಸಿಯೇ ತನಿಖೆ ದಿಕ್ಕು ಬದಲಾಗಿತ್ತು.
ಹೈದರಾಬಾದ್: ತಿರುಪತಿ ದೇವಸ್ಥಾನದ (Tirupati Temple) ಲಡ್ಡು (Laddu ) ಪ್ರಸಾದ ವಿವಾದ ಜೋರಾಗುತ್ತಿದ್ದಂತೆ ಮಾಜಿ ಸಿಎಂ ಜಗನ್ ರೆಡ್ಡಿ (YS Jagan Mohan Reddy) ಆಂಧ್ರ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬೆರೆಸಲಾಗಿದೆ ಸಿಎಂ ಚಂದ್ರಬಾಬು ನಾಯ್ಡು ಅವರು ಆರೋಪಿಸಿದ್ದಾರೆ. ಹೀಗಾಗಿ ಈ ಆರೋಪದ ಬಗ್ಗೆ ಹಾಲಿ ನ್ಯಾಯಾಧೀಶರು ಅಥವಾ ಹೈಕೋರ್ಟ್ (High Court) ನೇಮಿಸಿದ ಸಮಿತಿ ತನಿಖೆ ನಡೆಸಬೇಕು ಎಂದು ಜಗನ್ ಪರ ವಕೀಲರು ಮನವಿ ಮಾಡಿದರು.
ಸಿಎಂ ಹೇಳಿಕೆಯನ್ನು ಟಿಟಿಡಿ ಭಾಗಶಃ ಒಪ್ಪಿದೆ. ಒಂದು ಕಂಪನಿಯ ತುಪ್ಪದಲ್ಲಿ ವೆಜಿಟೆಬಲ್ ಫ್ಯಾಟ್ ಬೆರೆಸಿರುವುದು ಗೊತ್ತಾಗಿದೆ ಎಂದು ಟಿಟಿಡಿ ಇಓ ಶ್ಯಾಮಲರಾವ್ ಹೇಳಿದ್ದಾರೆ. ಟಿಟಿಡಿ ಮಾಜಿ ಸದಸ್ಯ ಓವಿ ರಮಣ ಅವರು ಚಂದ್ರಬಾಬು ನಾಯ್ಡು ಹೇಳಿದ್ದೆಲ್ಲಾ ಸತ್ಯ ಎಂದಿದ್ದಾರೆ.
ಜಗನ್ ಸಿಎಂ ಆಗಿದ್ದಾಗ ವಿದೇಶದಿಂದ ಆಮದು ಮಾಡಿಕೊಂಡ ಬೆಣ್ಣೆಯನ್ನು ಲಡ್ಡು ತಯಾರಿಗೆ ಬಳಸಲಾಗುತ್ತಿತ್ತು ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಗೆ ಬಿಜೆಪಿ ಆಗ್ರಹಿಸಿದೆ.
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ (Renukaswamy Murder Case) ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ (Pavithra Gowda) ತಮ್ಮ ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ.
ಇಂದು ಹೈಕೋರ್ಟ್ ನ್ಯಾ. ಎಸ್ ವಿಶ್ವಜಿತ್ ಶೆಟ್ಟಿ ಅವರ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ನ್ಯಾಯಮೂರ್ತಿಗಳು ಈಗಾಗಲೇ ಪ್ರಕರಣದ ಬಗ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ಚಾರ್ಜ್ಶೀಟ್ ಸಲ್ಲಿಕೆ ಮಾಡುವ ಮೊದಲು ನೀವು ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದೀರಿ. ಹೀಗಾಗಿ ನೀವು ವಾಪಸ್ ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿ (Bail Plea) ಸಲ್ಲಿಕೆ ಮಾಡಬಹುದು ಎಂದು ಸೂಚಿಸಿದರು.
ನ್ಯಾಯಾಧೀಶರಿಂದ ಸೂಚನೆ ಬಂದ ಹಿನ್ನಲೆಯಲ್ಲಿ ಪವಿತ್ರಾ ಗೌಡ ಪರ ವಕೀಲ ಟಾಮಿ ಸೆಬಾಸ್ಟಿಯನ್ ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದಿದ್ದಾರೆ.
– ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ ಪತ್ನಿ ಜೊತೆ 5 ನಿಮಿಷ ಮಾತನಾಡಿದ ಆರೋಪಿ
ಬಳ್ಳಾರಿ: ಇಲ್ಲಿನ ಸೆಂಟ್ರಲ್ ಜೈಲಿನಲ್ಲಿರೋ ಕೊಲೆ ಆರೋಪಿ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಜೊತೆ ಪ್ರಿಸನ್ ಕಾಲ್ ಸಿಸ್ಟಮ್ ಮೂಲಕ 5 ನಿಮಿಷಗಳ ಕಾಲ ಮಾತನಾಡಿದ್ದಾರೆ.
ಬುಧವಾರ (ಸೆ.11) ಜೈಲಿಗೆ ಬರುವಂತೆ ಪತ್ನಿಗೆ ಆರೋಪಿ ತಿಳಿಸಿದ್ದಾರೆ. ಈ ಬಗ್ಗೆ ಜೈಲಾಧಿಕಾರಿಗಳಿಗೂ ದರ್ಶನ್ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಹಾಗೂ ದರ್ಶನ್ ತಾಯಿ ಮೀನಾ ಬುಧವಾರ ಸಂಜೆ 4 ಗಂಟೆಯ ನಂತರ ಬಳ್ಳಾರಿ ಸೆಂಟ್ರಲ್ ಜೈಲಿಗೆ ಬರಲಿದ್ದಾರೆ ಎಂದು ಜೈಲಾಧಿಕಾರಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು: ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ (B.S Yediyurappa) ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ (Pocso Case) ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ನ (High court) ವಿಭಾಗೀಯ ಪೀಠ ಸೆ.19ಕ್ಕೆ ಮುಂದೂಡಿದೆ.
ವಿಚಾರಣೆಯನ್ನ ಮುಂದೂಡುವಂತೆ ಎಸ್ಪಿಪಿ ನಾಗೇಶ್ ನಾಯಕ್ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿತು.
ಏನಿದು ಪ್ರಕರಣ?
ಮಹಿಳೆಯೊಬ್ಬರು ತಮ್ಮ ಪುತ್ರಿಯ ಮೇಲೆ ಬಿಎಸ್ವೈ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಬಗ್ಗೆ ಅವರು ನೀಡಿದ ದೂರಿನ ಅಡಿ, ಮಾರ್ಚ್ 14ರಂದು ಸದಾಶಿವನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾದ ನಂತರ ಸರ್ಕಾರ ಇದನ್ನು ಸಿಐಡಿಗೆ ವರ್ಗಾಯಿಸಿತ್ತು. ಏಪ್ರಿಲ್ 12 ರಂದು ತನಿಖಾಧಿಕಾರಿಯ ಮುಂದೆ ಯಡಿಯೂರಪ್ಪ ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದರು.
ಈ ಪ್ರಕರಣ ದಾಖಲಾದ ನಂತರ ಸಂತ್ರಸ್ತೆ ಮೃತಪಟ್ಟಿದ್ದಾರೆ. ಈಗ ಸಂತ್ರಸ್ತೆಯ ಪುತ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಸಂಬಂಧ ಸಿಐಡಿ ಒಂದಷ್ಟು ಸಾಕ್ಷ್ಯ ಕಲೆ ಹಾಕಿದೆ. ದೂರುದಾರೆ ನೀಡಿದ್ದ ವಿಡಿಯೋ ಪಡೆದು ಪರಿಶೀಲನೆ ಜೊತೆಗೆ ಬಾಲಕಿ, ಬಿಎಸ್ವೈ ಧ್ವನಿ ಸಂಗ್ರಹ ಮಾಡಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದೆ.
ಈ ಎಲ್ಲಾ ಬೆಳವಣಿಗೆಯ ನಡುವೆ ತಮ್ಮ ಮೇಲಿನ ಆರೋಪ ನಿರಾಧಾರವಾದದ್ದು, ತಮ್ಮ ವಿರುದ್ಧ ದಾಖಲಾದ ಪೋಕ್ಸೋ ಪ್ರಕರಣ ರದ್ದುಗೊಳಿಸಬೇಕು ಎಂದು ಬಿಎಸ್ವೈ ನ್ಯಾಯಾಲಯದ ಮೊರೆ ಹೋಗಿದ್ದರು.
ಬೆಂಗಳೂರು: ಚಾರ್ಜ್ಶೀಟ್ನಲ್ಲಿ (Chargesheet) ಇರುವ ಗೌಪ್ಯ ಮಾಹಿತಿಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಕೋರಿ ಕಿಲ್ಲಿಂಗ್ ಸ್ಟಾರ್ ದರ್ಶನ್ (Darshan) ಹೈಕೋರ್ಟ್ (High Court) ಮೊರೆ ಹೋಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy Murder Case) ಸಂಬಂಧಿಸಿದಂತೆ ಪೊಲೀಸರು ನಾಲ್ಕು ಸಾವಿರ ಪುಟಗಳಿರುವ ದೋಷಾರೋಪ ಪಟ್ಟಿಯನ್ನು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ಗೆ ಸಲ್ಲಿಕೆ ಮಾಡಿದ್ದಾರೆ. ದೋಷಾರೋಪ ಪಟ್ಟಿಯಲ್ಲಿರುವ ಗೌಪ್ಯ ಮಾಹಿತಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ದರ್ಶನ್ ಪರ ವಕೀಲರು ರಿಟ್ ಅರ್ಜಿ ಸಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 17 ಆರೋಪಿಗಳು ಏನು ಮಾಡಿದ್ದಾರೆ ಎಂಬ ವಿವರ ಚಾರ್ಜ್ಶೀಟ್ನಲ್ಲಿದೆ. ದರ್ಶನ್ ಅವರು ರೇಣಕಾಸ್ವಾಮಿಗೆ ಯಾವ ರೀತಿ ಟಾರ್ಚರ್ ನೀಡಿದ್ದಾರೆ? ಪವಿತ್ರಾ ಗೌಡ ಹೇಳಿದ್ದೇನು? ರೇಣುಕಾಸ್ವಾಮಿ ಹತ್ಯೆಯಲ್ಲಿ ಯಾರ ಪಾತ್ರ ಏನಿದೆ ಎನ್ನುವುದರ ಸಂಪೂರ್ಣವಾದ ವಿವರ ಚಾರ್ಜ್ಶೀಟ್ನಲ್ಲಿದೆ.
ಕಳೆದ ವಾರ ದರ್ಶನ್ ಅವರು ಟಿವಿಗಾಗಿ ಬೇಡಿಕೆ ಇಟ್ಟಿದ್ದರು. ಜೈಲಿನ ನಿಯಮದ ಪ್ರಕಾರ ಅವರಿಗೆ ಟಿವಿ ನೀಡಲಾಗಿತ್ತು.
ತಮ್ಮ ವಿರುದ್ಧ ರಾಜ್ಯಪಾಲರು ತನಿಖೆಗೆ ಒಪ್ಪಿಗೆ ಸೂಚಿಸಿ ಆದೇಶ ಹೊರಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೈಕೋರ್ಟ್ನಲ್ಲಿ ಶನಿವಾರ ಎರಡು ದಿನಗಳ ಕಾಲ ತಾತ್ಕಾಲಿಕ ರಿಲೀಫ್ ಸಿಕ್ಕಿತ್ತು. ರಾಜ್ಯಪಾಲರ ಆದೇಶ ವಜಾಗೊಳಿಸಬೇಕು ಎಂದು ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು (ಸೆ.2) ಮಧ್ಯಾಹ್ನ 2:30ಕ್ಕೆ ನಡೆಯಲಿದೆ.
ಮಧ್ಯಾಹ್ನ ಹೈಕೋರ್ಟ್ನಲ್ಲಿ ವಿಚಾರಣೆ ಪ್ರಾರಂಭವಾಗಲಿರುವ ಹಿನ್ನೆಲೆ ವಕೀಲರ ಜೊತೆ ಚರ್ಚೆ ನಡೆಸಬೇಕು ಎಂಬ ಕಾರಣಕ್ಕೆ ಇಂದು ಸಂಜೆ 5 ಗಂಟೆಯವರೆಗೆ ಪೂರ್ವ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ಸಿಎಂ ಸಿದ್ದರಾಮಯ್ಯನವರು ಕಾಯ್ದಿರಿಸಿದ್ದಾರೆ.