Tag: hescom

  • ವಿದ್ಯುತ್ ಕಂಬದಲ್ಲೇ ಜೀವಬಿಟ್ಟ ಲೈನ್‍ಮ್ಯಾನ್- ಗುತ್ತಿಗೆದಾರನಿಗೆ ಸ್ಥಳೀಯರಿಂದ ಥಳಿತ

    ವಿದ್ಯುತ್ ಕಂಬದಲ್ಲೇ ಜೀವಬಿಟ್ಟ ಲೈನ್‍ಮ್ಯಾನ್- ಗುತ್ತಿಗೆದಾರನಿಗೆ ಸ್ಥಳೀಯರಿಂದ ಥಳಿತ

    ಹುಬ್ಬಳ್ಳಿ: ವಿದ್ಯುತ್ ತಂತಿ ತಗುಲಿ ಲೈನ್ ಮ್ಯಾನ್ ಕಂಬದಲ್ಲಿಯೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿನ ಭಾಷಲ್ ಮಿಶನ್ ಶಾಲೆಯ ಬಳಿ ನಡೆದಿದೆ.

    ಮೃತ ವ್ಯಕ್ತಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ಮೂಲದ ಶಂಕರಗೌಡ ಎಂದು ತಿಳಿದುಬಂದಿದೆ. ಕಳೆದ ಒಂದು ವರ್ಷದಿಂದ ಶಂಕರಗೌಡ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಇಂದು ಮಧ್ಯಾಹ್ನ ವಿದ್ಯುತ್ ಸಮಸ್ಯೆ ಆಗಿದ್ದ ಕಾರಣ ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಹರಿದು ಕಂಬದಲ್ಲೇ ಸಾವನಪ್ಪಿದ್ದಾರೆ.

    ನಂತರ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸರಬರಾಜು ನಿಲ್ಲಿಸಿ ಮೃತದೇಹವನ್ನು ಕೆಳಗಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಪನಗರ ಪೊಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    ಶಂಕರ್ ಕಳೆದ ಹಲವು ವರ್ಷಗಳಿಂದ ಕಾಂಟ್ರಾಕ್ಟರ್ ಬಳಿ ಕೆಲಸ ಮಾಡಿಕೊಂಡಿದ್ದರು. ಮುಂಜಾಗ್ರತಾ ಕ್ರಮವಿಲ್ಲದೇ ಕಾಂಟ್ರಾಕ್ಟರ್ ತಾಜುದ್ದೀನ್ ಯುವಕನನ್ನ ಕಂಬ ಏರಿಸಿದ್ದಾರೆಂದು ಆಕ್ರೋಶಗೊಂಡ ಸ್ಥಳೀಯರು ತಾಜುದ್ದೀನ್‍ಗೆ ಥಳಿಸಿದ್ರು. ಪೊಲೀಸರ ನಡುವೆಯೇ ಎಳೆದಾಡಿಕೊಂಡು ಕಾಂಟ್ರಾಕ್ಟರ್ ಮೇಲೆ ಹಲ್ಲೆ ಮಾಡಿದ್ರು. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ರು.

  • ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಮೃತಪಟ್ಟ ಲೈನ್ ಮನ್

    ಕೆಲಸ ಮಾಡುವಾಗ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಮೃತಪಟ್ಟ ಲೈನ್ ಮನ್

    ಹುಬ್ಬಳ್ಳಿ: ವಿದ್ಯುತ್ ಕಂಬ ಏರಿ ಕೆಲಸ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಲೈನ್ ಮನ್ ಮೃತಪಟ್ಟ ಘಟನೆ ಧಾರವಾಡ ಜಿಲ್ಲೆಯ ಕುಂದುಗೋಳ ತಾಲೂಕಿನ ರಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ.

    21 ವರ್ಷದ ಅಲ್ತಾಫ್ ಅಂಗಡಿ ಮೃತ ಲೈನ್ ಮೆನ್. ಅಲ್ತಾಫ್ ಕಳೆದ ಮೂರು ತಿಂಗಳಿನಿಂದ ಹೆಸ್ಕಾಂನಲ್ಲಿ ಗುಡುಗೇರಿ ವಿಭಾಗದ ಲೈನ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ರಟ್ಟಿಗೇರಿ ಗ್ರಾಮದಲ್ಲಿನ ವಿದ್ಯುತ್ ಸಂಪರ್ಕ ಕೈಕೊಟ್ಟಿದ್ದರಿಂದ ವಿದ್ಯುತ್ ಸಂಪರ್ಕ ದುರಸ್ಥಿ ಮಾಡಲು ಅಲ್ತಾಫ್ ಬಂದಿದ್ದರು.

    ಈ ವೇಳೆ ಕಂಬವನ್ನ ಏರಿ ರಿಪೇರಿ ಮಾಡುವಾಗ ಏಕಾಏಕಿ ವಿದ್ಯುತ್ ಪ್ರವಹಿಸಿದ್ದರಿಂದ ಅಲ್ತಾಫ್ ಸಾವನ್ನಪ್ಪಿದ್ದಾರೆ. 4 ಗಂಟೆಗಳ ಕಾಲ ಅಲ್ತಾಫ್ ಮೃತ ದೇಹ ಕಂಬದಲ್ಲಿಯೇ ನೇತಾಡುತ್ತಿತ್ತು. ವಿಷಯ ತಿಳಿಸಿದ್ರೂ ತಡವಾಗಿ ಬಂದ ಹೆಸ್ಕಾಂ ಅಧಿಕಾರಿಗಳು ಮತ್ತು ಪೊಲೀಸರು ಶವವನ್ನು ತೆರವುಗೊಳಿಸಿದರು. ಈ ಸಂಬಂಧ ಗುಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಜೋತುಬಿದ್ದಿವೆ ಹೈಟೆನ್ಶನ್ ತಂತಿಗಳು, ಕರೆಂಟ್ ವಯರ್‍ಗೆ ಕಟ್ಟಿಗೆಗಳೇ ಆಧಾರ

    ಜೋತುಬಿದ್ದಿವೆ ಹೈಟೆನ್ಶನ್ ತಂತಿಗಳು, ಕರೆಂಟ್ ವಯರ್‍ಗೆ ಕಟ್ಟಿಗೆಗಳೇ ಆಧಾರ

    ಚಿಕ್ಕೋಡಿ: ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮರದ ತುಂಡಿನ ಮೇಲೆ ಹೈ ಟೆನ್ಶನ್ ಕೇಬಲ್ ಅಳವಡಿಕೆ ಮಾಡಿದ್ದು ಗ್ರಾಮಸ್ಥರು ಆತಂಕದಿಂದ ಜೀವನ ನಡೆಸುವಂತಾಗಿದೆ.

    ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿಯ ಅಧಿಕಾರಿಗಳ ನಿರ್ಲಕ್ಷ್ಯ ಎಷ್ಟರ ಮಟ್ಟಿಗೆ ಇದೆ ಎಂದರೆ ಮಳೆಗಾಲದಲ್ಲಿ ಕಟ್ಟಿಗೆಗೆ ಆಧಾರವಾಗಿ ಅಳವಡಿಸಿರುವ ವಿದ್ಯುತ್ ತಂತಿಗಳು ಗಾಳಿಗೆ ಯಾರ ಮೇಲಾದರೂ ಬಿದ್ದರೆ ಪ್ರಾಣ ಪಕ್ಷಿಯೇ ಹಾರಿ ಹೋಗುತ್ತೆ ಎಂಬ ಅರಿವು ಇಲ್ಲದಂತಾಗಿದೆ. ಕಳೆದ ಹಲವು ತಿಂಗಳಿನಿಂದ ಕರೋಶಿ ಗ್ರಾಮದ ಅನೇಕ ಕಡೆಗಳಲ್ಲಿ ಹೀಗೆ ವಿದ್ಯುತ್ ತಂತಿಗಳನ್ನು ಕಟ್ಟಿಗೆಗೆ ಆಧಾರವಾಗಿ ನಿಲ್ಲಿಸಿದ್ದಾರೆ. ಅದರಲ್ಲೂ ರಸ್ತೆ ಬದಿಯಲ್ಲಿಯೂ ವಿದ್ಯುತ್ ಕಂಬಗಳನ್ನು ಅಳವಡಿಸದೇ ಮರದ ತುಂಡುಗಳ ಮೇಲೆ ತಂತಿಗಳನ್ನು ಹರಿಸಲಾಗಿದೆ. ಒಂದು ವೇಳೆ ಈ ತಂತಿಗಳು ಮಳೆಗಾಳಿಗೆ ಹರಿದು ಬಿದ್ದು ಪ್ರಾಣ ಹಾನಿ ಸಂಭವಿಸಿದರೆ ಅಧಿಕಾರಿಗಳದ್ದೇ ನೇರ ಹೊಣೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಹೆಸ್ಕಾಂ ವ್ಯಾಪ್ತಿಯಲ್ಲಿ ಬರುವ ಬಹುತೇಕ ಹಳ್ಳಿಗಳಲ್ಲಿ ಇಂಥ ಪರಿಸ್ಥಿತಿ ತುಂಬಾ ಇದೆ. ಹೈ ಟೆನ್ಶನ್ ತಂತಿಗಳನ್ನ ಅಳವಡಿಸಲು ವಿದ್ಯುತ್ ಕಂಬಗಳನ್ನು ಬಳಸದೇ ಹೀಗೆ ಕಟ್ಟಿಗೆ ಮೇಲೆಯೇ ವಿದ್ಯುತ್ ತಂತಿಗಳನ್ನು ಜೋತು ಬಿಟ್ಟಿದ್ದಾರೆ. ಇನ್ನೂ ಕೆಲವು ಕಡೆಗಳಂತೂ ವಿದ್ಯುತ್ ತಂತಿಗಳ ಮೇಲೆ ಕಲ್ಲುಗಳನ್ನು ಹಗ್ಗಗಳಿಗೆ ಕಟ್ಟಿ ತಂತಿಗಳು ಒಂದಕ್ಕೊಂದು ಕೂಡದಂತೆ ಅವೈಜ್ಞಾನಿಕ ರೀತಿಯನ್ನು ಹೆಸ್ಕಾಂ ಅಧಿಕಾರಿಗಳು ಅನುಸರಿಸಿದ್ದಾರೆ. ಕರೋಶಿ ಗ್ರಾಮದಲ್ಲಿರುವ ವಿದ್ಯುತ್ ಕಂಬಗಳ ಪರಿಸ್ಥಿತಿಯಂತೂ ಹೇಳತಿರದಂತಿದೆ. ಇಂದು ಬೀಳುತ್ತವೆ, ನಾಳೆ ಬೀಳುತ್ತವೆ ಎಂಬ ಭಯದಲ್ಲಿ ಜನರು ಕಾಲ ಕಳೆಯುವಂತ ಪರಿಸ್ಥಿತಿ ಇದೆ.

    ಕೆಲ ದಿನಗಳ ಹಿಂದೆಯಷ್ಟೇ ಮಂಡ್ಯದಲ್ಲಿ ವಿದ್ಯುತ್ ತಂತಿಗಳು ಹರಿದು ಬಿದ್ದು ಮೂವರು ಪ್ರಾಣ ಕಳೆದುಕೊಂಡಿರುವ ಉದಾಹರಣೆ ಕಣ್ಣು ಮುಂದೆ ಇದ್ದರೂ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಂಡಿಲ್ಲ. ಈ ಬಗ್ಗೆ ಇಂದು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಹೆಸ್ಕಾಂ ಎಂಜಿನಿಯರ್ ಶ್ರೀಕಾಂತ್, ಈಗಾಗಲೇ ಸೆಕ್ಷನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಇನ್ನೊಂದು ವಾರದೊಳಗೆ ಸರಿ ಮಾಡಿಸುತ್ತೇವೆಂದು ಭರವಸೆ ನೀಡಿದ್ದಾರೆ.

     

  • ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಲಘಟಗಿಯಲ್ಲಿ ರೈತರಿಬ್ಬರು ಬಲಿ

    ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಲಘಟಗಿಯಲ್ಲಿ ರೈತರಿಬ್ಬರು ಬಲಿ

    ಧಾರವಾಡ: ವಿದ್ಯುತ್ ತಂತಿ ತಗುಲಿ ರೈತರಿಬ್ಬರು ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಕಬ್ಬು ಬೆಳೆಯುವ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಸವರಾಜ್ ಕ್ಯಾರಕೊಪ್ಪ (52) ಹಾಗೂ ಚನ್ನಬಸಪ್ಪ ಧೂಳಿಕೊಪ್ಪ (45) ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ದುರ್ದೈವಿಗಳು.

    ಗಾಳಿಯಿಂದ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಬಗ್ಗೆ ರೈತರು ಹೆಸ್ಕಾಂಗೆ ದೂರನ್ನ ನೀಡಿದ್ದರು. ದೂರು ನೀಡಿದ್ದರೂ ಸಿಬ್ಬಂದಿ ದುರಸ್ತಿ ಮಾಡಿರಲಿಲ್ಲ.

    ಘಟನೆ ನಡೆದ ನಂತರ ಆಕ್ರೋಶಿತ ರೈತರು ಕಲಘಟಗಿಯ ಹೆಸ್ಕಾಂ ಕಚೇರಿಗೆ ನುಗ್ಗಿ ಕಿಟಕಿ ಹಾಗೂ ಕುರ್ಚಿಗಳನ್ನ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಕೂಡಾ ನಡೆಸಲಾಗಿದೆ.

    ಇದೇ ವೇಳೆ ಸಾವನ್ನಪ್ಪಿದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದರು. ಕಲಘಟಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.