Tag: heat wave

  • ದೇಶದಲ್ಲಿಯೇ ಗರಿಷ್ಠ – ಪುತ್ತೂರು, ಬೆಳ್ತಂಗಡಿ, ಕಾರವಾರದಲ್ಲಿ ಉಷ್ಣಾಂಶ ಏರಿಕೆ

    ದೇಶದಲ್ಲಿಯೇ ಗರಿಷ್ಠ – ಪುತ್ತೂರು, ಬೆಳ್ತಂಗಡಿ, ಕಾರವಾರದಲ್ಲಿ ಉಷ್ಣಾಂಶ ಏರಿಕೆ

    ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಆರಂಭದಲ್ಲಿಯೇ ತಾಪಮಾನ (Temperature) ಹೆಚ್ಚಾಗುತ್ತಿದೆ. ಅದರಲ್ಲೂ ಕರಾವಳಿ ಭಾಗ ಕಾದ ಕಾವಲಿಯಂತಾಗಿದೆ. ಬುಧವಾರ ದೇಶದಲ್ಲಿಯೇ ಗರಿಷ್ಠ ತಾಪಮಾನ ದಕ್ಷಿಣ ಕನ್ನಡ (Dakshina Kannada) ಮತ್ತು ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ದಾಖಲಾಗಿದೆ.

    ದಕ್ಷಿಣ ಕನ್ನಡದ ಕಡಬ (Kadaba) ಮತ್ತು ಉಪ್ಪಿನಂಗಡಿಯಲ್ಲಿ (Uppinangady) ತಾಪಮಾನ 40.2 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಬುಧವಾರ, ಗುರುವಾರಕ್ಕೆ ಹೋಲಿಸಿದರೆ ಇಂದು ತಾಪಮಾನ ಸ್ವಲ್ಪ ಕಡಿಮೆ ಇತ್ತು. ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ತಾಪಮಾನ 38 ಡಿಗ್ರಿ ಸೆಲ್ಶಿಯಸ್‍ನಿಂದ 40 ಡಿಗ್ರಿ ಸೆಲ್ಶಿಯಸ್ ದಾಖಲಾಗುತ್ತಿದೆ.

    ದಕ್ಷಿಣ ಕನ್ನಡದ ಪುತ್ತೂರು, ಬೆಳ್ತಂಗಡಿ ಮತ್ತು ಕಾರವಾರದಲ್ಲಿ 39 ಡಿಗ್ರಿಗೂ ಹೆಚ್ಚು ಉಷ್ಣಾಂಶ ಕಂಡುಬಂದಿದೆ. ಕರಾವಳಿ ಕರ್ನಾಟಕದಲ್ಲಿ ಮಾರ್ಚ್ 15ರವರೆಗೂ ಸಾಮಾನ್ಯಕ್ಕಿಂತ ಅಧಿಕ ಉಷ್ಣಾಂಶ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    ಈ ಭಾಗದಲ್ಲಿ ತಾಪಮಾನ ವಾಡಿಕೆಗಿಂತ 4 ರಿಂದ 6 ಡಿಗ್ರಿ ಸೆಲ್ಶಿಯಸ್ ಹೆಚ್ಚು ಇರಲಿದೆ. ಸ್ವಲ್ಪ ನೆಮ್ಮದಿಯ ವಿಚಾರ ಅಂದರೆ ಮಾರ್ಚ್ 16 ರಿಂದ ಮಾರ್ಚ್ 22ರವರೆಗೂ ಕರಾವಳಿ ಕರ್ನಾಟಕದಲ್ಲಿ ವಾಡಿಕೆಗಿಂತ ಕಡಿಮೆ ತಾಪಮಾನ ದಾಖಲಾಗಲಿದೆ. ಆದರೆ ಇದು ತಾತ್ಕಾಲಿಕವಾಗಿದ್ದು ಏಪ್ರಿಲ್ ಹೊತ್ತಿಗೆ ಬಿಸಿ ಗಾಳಿಯ (Heat Wave) ಪ್ರಮಾಣ ಜಾಸ್ತಿಯಾಗಲಿದೆ. ಬೆಂಗಳೂರಿನ ತಾಪಮಾನ ಏಪ್ರಿಲ್‍ನಲ್ಲಿ 35 ಡಿಗ್ರಿ ದಾಟುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

    ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಜನ ಛತ್ರಿಗಳ ಮೊರೆ ಹೋಗಿದ್ದಾರೆ. ಕಲ್ಲಂಗಡಿ, ಕಬ್ಬಿನ ಹಾಲು, ಎಳನೀರು ಕುಡಿದು ದೇಹವನ್ನು ತಂಪಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಗಾಳಿಯಲ್ಲಿ ತೇವಾಂಶದ ಪ್ರಮಾಣ ಕಡಿಮೆಯಾಗಿ ಮೋಡದ ವಾತಾವರಣ ಇಲ್ಲದಿರುವ ಪರಿಣಾಮ ಕರಾವಳಿ ಜಿಲ್ಲೆಗಳಲ್ಲಿ ಸುಡು ಬಿಸಿಲಿನ ಅನುಭವವಾಗುತ್ತಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಾಗಿ ತೇವಾಂಶ ಕಡಿಮೆಯಾಗುತ್ತಿದೆ. ಇದರ ಜೊತೆ ಕರಾವಳಿಯಲ್ಲಿ ಸಮುದ್ರದ ನೀರು ಬಿಸಿಯಾಗಿ ವಾತವರಣದಲ್ಲಿ ಬಿಸಿ ಏರಿಕೆಯಾಗುತ್ತಿದೆ. ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಮದುವೆ ಬಗ್ಗೆ ಮಾತಾಡಿದ ಸುಮಲತಾ

    ಕರಾವಳಿಯಲ್ಲಿ ಗುರುವಾರ ಹಾಗೂ ಶುಕ್ರವಾರ ಉಷ್ಣ ಅಲೆಯ ಮುನ್ನೆಚ್ಚರಿಕೆ ನೋಡಿದ್ದೇವೆ. ಉಡುಪಿ,ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಈ ಮುನ್ನೆಚ್ಚರಿಕೆ ಇದೆ. ಗರಿಷ್ಠ ಉಷ್ಣಾಂಶ 4-5 ಡಿಗ್ರಿಯಷ್ಟು ಹೆಚ್ಚು ವರದಿಯಾಗಿತ್ತು. ಏಪ್ರಿಲ್‌ನಲ್ಲಿ ಇನ್ನೂ ಹೆಚ್ಚು ಉಷ್ಣಾಂಶ ದಾಖಲಾಗಲಿದೆ. ಮಾರ್ಚ್‌ನಲ್ಲಿ ಹೆಚ್ಚು ಉಷ್ಣಾಂಶ ಬಂದಿರುವುದು ಬಹಳ ಅಪರೂಪ. ಇದು ತಾತ್ಕಾಲಿಕವಾಗಿದ್ದು ಮುಂದಿನ ನಾಲ್ಕು ಹಾಗೂ ಐದನೇ ದಿನ ಕೆಲವೆಡೆ ಮಳೆಯಾಗಬಹುದು. ಮಾ.14, 15 ರಂದು  ಮೂರು ಜಿಲ್ಲೆಗಳು ಅಂದರೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಹಗಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವಿಜ್ಞಾನಿ ಪ್ರಸಾದ್‌ ತಿಳಿಸಿದ್ದಾರೆ.

  • ಸೂರ್ಯ ಶಿಕಾರಿಗೆ ಮಹಾರಾಷ್ಟ್ರದಲ್ಲಿ ಐವರು ಬಲಿ

    ಸೂರ್ಯ ಶಿಕಾರಿಗೆ ಮಹಾರಾಷ್ಟ್ರದಲ್ಲಿ ಐವರು ಬಲಿ

    ನವದೆಹಲಿ/ಬೆಂಗಳೂರು: ದೇಶಾದ್ಯಂತ ಸೂರ್ಯ ಶಿಕಾರಿ ಜೋರಾಗಿದೆ. ಬಿಸಿಲಿನ ತಾಪಕ್ಕೆ ಜನ ತತ್ತರಿಸಿ ಹೋಗಿದ್ದಾರೆ.

    ಮಾರ್ಚ್ ತಿಂಗಳಲ್ಲೇ ಮಹಾರಾಷ್ಟ್ರದಲ್ಲಿ 40 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದ್ದು, ಬಿಸಿ ತಾಳಲಾರದೆ ವಿವಿಧೆಡೆ ಐವರು ಸಾವನ್ನಪ್ಪಿದ್ದಾರೆ. ಅದ್ರಲ್ಲೂ, ರಾಯಘಡ ಜಿಲ್ಲೆಯ ಭೀರಾ ಗ್ರಾಮದಲ್ಲಿ 46.5 ಡಿಗ್ರಿ ಸೆಲ್ಸಿಯಸ್ ದಾಖಲೆಯ ಉಷ್ಣಾಂಶ ದಾಖಲಾಗಿದೆ. ಹೀಗಾಗಿ, ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಅಧ್ಯಯನ ನಡೆಸ್ತಿದೆ.

    ರಾಜಸ್ತಾನದ ಬಾರ್ಮೆರ್ ನಲ್ಲಿ 43.4 ಡಿಗ್ರಿ ಸೆಲ್ಸಿಯಸ್, ಹರ್ಯಾಣದ ನಾರ್ನೌಲ್ ನಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಪಂಜಾಬ್ ನ ಲೂಧಿಯಾನಾದಲ್ಲಿ ಕನಿಷ್ಠ ತಾಪಕ್ಕಿಂತ 7 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿರುವುದಾಗಿ ಹೇಳಿದೆ.

    ರಾಜ್ಯದಲ್ಲೂ ಬಿಸಿಲಿನ ಝಳ ಹೆಚ್ಚಾಗ್ತಿದೆ. ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದ್ದು, ಇನ್ನೆರಡು ದಿನಗಳಲ್ಲಿ 38 ಡಿಗ್ರಿಗೆ ಏರಲಿದೆ ಎನ್ನಲಾಗಿದೆ. ಬಿಸಿಲ ಬೇಗೆ ಹೆಚ್ಚಾದ ಕಾರಣ ಹೈದರಾಬಾದ್ ಕರ್ನಾಟಕದ 6 ಸೇರಿ ಉತ್ತರದ 8 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಯ ಕೆಲಸದ ಅವಧಿಯನ್ನ ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ಕ್ಕೆ ಬದಲಾಯಿಸಲಾಗಿದೆ.

    ಬೆಳೆದ ಬೆಳೆ ಒಣಗಿ ಹೋದ ಕಾರಣ ಸಾಲಬಾಧೆಗೆ ಹೆದರಿ ಬಾಗಲಕೋಟೆಯಲ್ಲಿ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಧ್ಯೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಗಳು ಕೆರೆಯಲ್ಲಿ ಈಜಾಡಿ ಖುಷಿ ಪಟ್ಟಿವೆ.

    ಕಾರವಾರದಲ್ಲಿ ಕಾಳಿಂಗ ಸರ್ಪಕ್ಕೆ ಬಾಟಲಿಯಲ್ಲಿ ನೀರು ಕುಡಿಸಿರುವ ದೃಶ್ಯ ಇಂದು ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗಿದ್ದು ವೈರಲ್ ಆಗಿದೆ.

    https://www.youtube.com/watch?v=7v6NjKWzbSU

    https://www.youtube.com/watch?v=5vi5ECBTGl4