Tag: Health Staff

  • ಕೋವಿಡ್ ಸೋಂಕಿತ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆಯಲ್ಲಿ ಭಾಗಿ – ಜನರಲ್ಲಿ ಆತಂಕ

    ಕೋವಿಡ್ ಸೋಂಕಿತ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆಯಲ್ಲಿ ಭಾಗಿ – ಜನರಲ್ಲಿ ಆತಂಕ

    ನೆಲಮಂಗಲ: ಕೋವಿಡ್ ಪಾಸಿಟಿವ್ ಇರುವ ಆರೋಗ್ಯ ಸಿಬ್ಬಂದಿಯೊಬ್ಬ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆಯಲ್ಲಿ ಭಾಗಿಯಾಗಿದ್ದು, ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

    ಬೆಂಗಳೂರು ಹೊರವಲಯದ ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ನಸಿರ್ಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನರಸಿಂಹಮೂರ್ತಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾ ಪಾಸಿಟಿವ್ ಬಂದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಸಮಸ್ಯೆ ಇಲ್ಲಾ ಅಂದರೆ ಮನೆಯಲ್ಲಿ ಹೋಮ್ ಐಸೋಲೇಶನ್ ಆಗಬೇಕು. ಅದನ್ನು ಬಿಟ್ಟು ಎನ್‍ಪಿಎಲ್ ಕ್ರಿಕೆಟ್ ಟೂರ್ನಮೆಂಟ್‍ನಲ್ಲಿ ಭಾಗವಹಿಸಿದ್ದಾನೆಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೋವಿಡ್ ಸ್ವಯಂ ಪರೀಕ್ಷೆ ಕಿಟ್ ಖರೀದಿಸಲು ಆಧಾರ್ ಕಡ್ಡಾಯ – ಮುಂಬೈ ಮೇಯರ್

    ನರಸಿಂಹಮೂರ್ತಿ, ಕೊರೊನಾ ಪಾಸಿಟಿವ್ ವರದಿಯಿದ್ದರೂ ಉದ್ದಟತನ ಮೇರೆದಿದ್ದು, ಗ್ರೌಂಡ್‍ನಲ್ಲಿ ಬಿಂದಾಸ್ ಆಗಿ ಓಡಾಡಿದ್ದಾರೆ. 3 ದಿನದ ಹಿಂದೆ ನಡೆದ ಎನ್‍ಪಿಎಲ್ ಕ್ರಿಕೆಟ್ ಟೂರ್ನಮೆಂಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾಸ್ಕ್ ಹಾಕದೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನ್ಮಾನ ಸ್ವೀಕರಿಸಿದ್ದಾರೆ. ಈ ಸಿಬ್ಬಂದಿಯಿಂದ ಕ್ರಿಕೆಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಆತಂಕ ಶುರುವಾಗಿದೆ. ಇದನ್ನೂ ಓದಿ: ವೀಕೆಂಡ್ ಕರ್ಫ್ಯೂ ನಡುವೆಯೂ ಕೋಳಿ ವ್ಯಾಪಾರ ಜೋರು – ಕೋವಿಡ್ ನಿಯಮ ಉಲ್ಲಂಘನೆ

     

  • ಗೌಪ್ಯವಾಗಿ ಬೂಸ್ಟರ್ ಡೋಸ್ ಪಡೆಯುತ್ತಿರುವ ಆರೋಗ್ಯ ಸಿಬ್ಬಂದಿ

    ಗೌಪ್ಯವಾಗಿ ಬೂಸ್ಟರ್ ಡೋಸ್ ಪಡೆಯುತ್ತಿರುವ ಆರೋಗ್ಯ ಸಿಬ್ಬಂದಿ

    ಹೈದರಾಬಾದ್: ವಿದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಭಾರತದಲ್ಲೂ ಮೂರನೇ ಅಲೆಯ ಭೀತಿ ಹೆಚ್ಚುತ್ತಿದೆ. ಈ ಹಿನ್ನೆಲೆ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಆರೋಗ್ಯ ಕಾರ್ಯಕರ್ತರು ಗೌಪ್ಯವಾಗಿ ಬೂಸ್ಟರ್ ಡೋಸ್ ಪಡೆಯಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ.

    CORONA-VIRUS.

    ಮೂರನೇ ಡೋಸ್ ನೀಡುವ ಬಗ್ಗೆ ಐಸಿಎಂಆರ್ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಆದರೂ ಆರೋಗ್ಯ ಕಾರ್ಯಕರ್ತರು ಮೂರನೇ ಡೋಸ್ ಲಸಿಕೆಯನ್ನು ಪಡೆಯುತ್ತಿದ್ದಾರೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನಮ್ಮನ್ನ ಎಂದೂ ಅವ್ರು ಕೆಲ್ಸದವರಂತೆ ನೋಡಿಲ್ಲ: ಕೇಶ ವಿನ್ಯಾಸಕಾರ ಕಾರ್ತಿಕ್ ಭಾವುಕ

    ಭಾರತದಲ್ಲಿ ಆರೋಗ್ಯ ಕಾರ್ಯಕರ್ತರು ಎರಡನೇ ಡೋಸ್ ಪಡೆದು ಈಗಾಗಲೇ ಎಂಟು ತಿಂಗಳು ಕಳೆಯುತ್ತಾ ಬಂದಿದೆ. ಹೀಗಾಗಿ ವ್ಯಾಕ್ಸಿನ್ ಪ್ರಭಾವ ಕುಸಿದಿರುವ ಅನುಮಾನ ಆರೋಗ್ಯ ಕಾರ್ಯಕರ್ತರಲ್ಲಿ ಮೂಡಿದ್ದು, ವಿದೇಶಗಳಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಮೂರನೇ ಡೋಸ್ ಪಡೆಯುತ್ತಿದ್ದಾರೆ. ಎರಡನೇ ಅಲೆಯಂತೆ ಮೂರನೇ ಅಲೆಯೂ ಪರಿಣಾಮಕಾರಿಯಾದರೆ ಮನೆಯಲ್ಲಿ ಮಕ್ಕಳು, ಪೋಷಕರು, ವೃದ್ಧರಿರುವ ಹಿನ್ನೆಲೆಯಲ್ಲಿ ಅವರಿಗೆ ತೊಂದರೆಯಾಗದಿರಲಿ ಎಂದು ಲಸಿಕೆ ಪಡೆಯುತ್ತಿದ್ದೇವೆ ಎಂದು ಕೆಲವು ಆರೋಗ್ಯ ಕಾರ್ಯಕರ್ತರು ಹೇಳಿಕೊಂಡಿದ್ದಾರೆ.

    ಆರೋಗ್ಯ ಕಾರ್ಯಕರ್ತರು ಮೂರನೇ ಡೋಸ್ ಪಡೆಯುತ್ತಿರುವ ಬಗ್ಗೆ ಮಾಹಿತಿ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಕುರಿತು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಮಾತನಾಡಿದ್ದು, ಸಿಬ್ಬಂದಿ ತಮ್ಮ ವೈಯಕ್ತಿಕ ಜವಾಬ್ದಾರಿ ಮೇಲೆ ಮೂರನೇ ಡೋಸ್ ಪಡೆಯುತ್ತಿದ್ದಾರೆ. ಮೂರನೇ ಡೋಸ್ ಪಡೆದ ಬಗ್ಗೆ ಯಾವುದೇ ಪ್ರಮಾಣ ಪತ್ರ ನೀಡಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಯಿಗೆ ಕಿರುಕುಳ ನೀಡಿದ ವ್ಯಕ್ತಿಯ ಮೇಲೆ ಹಸು ದಾಳಿ

  • ಮರದ ಕೆಳಗೆ, ನಡು ರಸ್ತೆಯಲ್ಲಿ, ಬೆಳೆಗಳ ಮಧ್ಯೆ, ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ

    ಮರದ ಕೆಳಗೆ, ನಡು ರಸ್ತೆಯಲ್ಲಿ, ಬೆಳೆಗಳ ಮಧ್ಯೆ, ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ

    – ಗ್ರಾಮೀಣ ಜನರಿಗೆ ಲಸಿಕೆ ಹಾಕಲು ಆರೋಗ್ಯ ಸಿಬ್ಬಂದಿ ಮಾಸ್ಟರ್ ಪ್ಲಾನ್

    ಯಾದಗಿರಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಲಸಿಕೆಗಾಗಿ ಬಡಿದಾಡಿಕೊಳ್ಳುತ್ತಿದ್ದರೆ, ಯಾದಗಿರಿಯಲ್ಲಿ ಮಾತ್ರ ಮನೆಗೆ ಹೋಗಿ ಲಸಿಕೆ ಕೊಟ್ಟರೂ ಜನ ಮಾತ್ರ ಲಸಿಕೆ ಪಡೆಯಿತ್ತಿಲ್ಲ. ಇನ್ನೂ ಗ್ರಾಮೀಣ ಭಾಗದ ಜನ ಬೆಳಗ್ಗೆ ಜಮೀನು ಕೆಲಸಕ್ಕೆ ಹೋದರೆ ಮತ್ತೆ ರಾತ್ರಿಯೇ ಮನೆಗೆ ಸೇರುತ್ತಾರೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಲಸಿಕೆ ವಿತರಣೆ ಕುಂಠಿತವಾಗಿದೆ.

    ಯಾದಗಿರಿ ಆರೋಗ್ಯ ಸಿಬ್ಬಂದಿ ಮಾತ್ರ ಜನರಿಗೆ ಶತಾಗತಾಯ ಲಸಿಕೆ ನೀಡಲು ಹರಸಹಾಸ ಪಡುತ್ತಿದ್ದಾರೆ. ಸೀದಾ ರೈತರ ಜಮೀನುಗಳಿಗೆ ತೆರಳಿ ಸಿಬ್ಬಂದಿ ಜಮೀನುಗಳಲ್ಲಿಯೇ ಲಸಿಕೆ ವಿತರಣೆ ಮಾಡುತ್ತಿದ್ದಾರೆ. ಮರದ ಕೆಳಗೆ, ರಸ್ತೆಯಲ್ಲಿ, ಬೆಳೆಗಳ ಮಧ್ಯೆ ಹೀಗೆ ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ ಹಾಕಲಾಗುತ್ತಿದೆ.

    ಡಾ.ಲಕ್ಷ್ಮಿಕಾಂತ್ ಮತ್ತು ಅವರ ತಂಡ ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದೆ. ಲಸಿಕೆ ಪಡೆಯಲು ಕುಂಟು ನೆಪ ಹೇಳಿ, ಜಮೀನಿಗೆ ಹೋಗತ್ತಿದ್ದ ಜನ ಆರೋಗ್ಯ ಸಿಬ್ಬಂದಿ ಪ್ಲಾನ್ ಗೆ ಥಂಡಾ ಹೊಡೆದಿದ್ದಾರೆ. ಇದನ್ನೂ ಓದಿ:ಕೊರೊನಾ ಸಂದರ್ಭದಲ್ಲಿ ಆಕ್ಸಿಜನ್ ಬೆಲೆ ನಮಗೆ ಗೊತ್ತಾಗಿದೆ: ಉಮೇಶ್ ಕತ್ತಿ

  • ಕೊರೊನಾ ಲಸಿಕೆ ಪಡೆಯಲು ಆರೋಗ್ಯ ಸಿಬ್ಬಂದಿ ಹಿಂದೇಟು

    ಕೊರೊನಾ ಲಸಿಕೆ ಪಡೆಯಲು ಆರೋಗ್ಯ ಸಿಬ್ಬಂದಿ ಹಿಂದೇಟು

    ದಾವಣಗೆರೆ: ಎಲ್ಲರೂ ಕೊರೊನಾ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಆದರೆ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹೆದರಿ ಆರೋಗ್ಯ ಸಿಬ್ಬಂದಿಗಳೇ ಹಿಂದೇಟು ಹಾಕಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಕೋವಿಡ್ ಲಸಿಕೆಯ ಹಾಕುವಲ್ಲಿ ಆರೋಗ್ಯ ಇಲಾಖೆ ತನ್ನ ಗುರಿ ಸಾಧಿಸಿದೆ. ಹೀಗಿದ್ದರೂ ದಾವಣಗೆರೆಯಲ್ಲಿ ಮಾತ್ರ ಈವರೆಗೂ ಕೇವಲ ಶೇ.39.19 ರಷ್ಟು ಆರೋಗ್ಯ ಸಿಬ್ಬಂದಿ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ಲಸಿಕೆಗಾಗಿ ಆನ್ ಲೈನ್ ಮೂಲಕ 21,369ರಷ್ಟು ಆರೋಗ್ಯ ಸಿಬ್ಬಂದಿ ನೋಂದಣಿ ಮಾಡಿಕೊಂಡಿದ್ದರು. ಆದರೆ ಪ್ರಾರಂಭದಿಂದ ಇದುವರೆಗೂ ಕೇವಲ 8,376 ಜನರು ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ.

    ಈಗಾಗಲೇ ಸರ್ಕಾರ ಎರಡನೇ ಹಂತದ ಲಸಿಕೆ ವಿತರಣೆಗೆ ಸಿದ್ಧತೆ ನಡೆಸಿದೆ. ಆದರೆ ಇದುವರೆಗೂ ಮೊದಲ ಹಂತದ ಲಸಿಕೆ ವಿತರಣೆಯೇ ಇನ್ನೂ ಯಶಸ್ವಿಯಾಗಿಲ್ಲ. ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯ ಸಿಬ್ಬಂದಿಗಳೇ ಹಿಂದೇಟು ಹಾಕುತ್ತಿದ್ದಾರೆ.

  • ರಾಜ್ಯದಲ್ಲಿ 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ: ಸಚಿವ ಸುಧಾಕರ್

    ರಾಜ್ಯದಲ್ಲಿ 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ: ಸಚಿವ ಸುಧಾಕರ್

    – ಲಸಿಕೆ ನೀಡಲು 9,807 ಅನುಭವಿ ವ್ಯಾಕ್ಸಿನೇಟರ್ ಸಿಬ್ಬಂದಿ
    – ರಾಜ್ಯಾದ್ಯಂತ 28,427 ಲಸಿಕಾ ಕೇಂದ್ರಗಳು

    ಬೆಂಗಳೂರು: ಇತ್ತೀಚೆಗಷ್ಟೇ ಕೊರೊನಾ ಲಸಿಕೆಗೆ ಅನುಮತಿ ಸಿಕ್ಕಿದೆ. ಅಲ್ಲದೆ ಜನವರಿ 13ರಿಂದ ಲಸಿಕೆ ವಿತರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸಹ ತಿಳಿಸಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಸಹ ಸಿದ್ಧತೆ ಮಾಡಲಾಗಿದ್ದು, ಒಟ್ಟು 6.30 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ತಿಳಿಸಿರುವ ಅವರು, ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ ಪ್ರಕ್ರಿಯೆ ಶೀಘ್ರವೇ ಆರಂಭವಾಗಲಿದ್ದು, ರಾಜ್ಯ ಸರ್ಕಾರ ಸುವ್ಯವಸ್ಥಿತ ಲಸಿಕೆ ವಿತರಣೆಗೆ ಸಕಲ ಸಿದ್ಧತೆ ನಡೆಸಿದೆ. ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಿದ್ದು, 2,73,211 ಸರ್ಕಾರಿ ಹಾಗೂ 3,57,313 ಖಾಸಗಿ ಸೇರಿ ಒಟ್ಟು 6,30,524 ಅರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ ಎಂದು ವಿವರಿಸಿದ್ದಾರೆ.

    ಲಸಿಕೆ ನೀಡಲು ತರಬೇತಿ ಪಡೆದ 9,807 ಅನುಭವಿ ವ್ಯಾಕ್ಸಿನೇಟರ್ ಸಿಬ್ಬಂದಿ ಮತ್ತು ರಾಜ್ಯಾದ್ಯಂತ 28,427 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ. ಇನ್ನೂ ಹೆಚ್ಚಿನ ಕೇಂದ್ರಗಳನ್ನು ಗುರುತಿಸಲಾಗುವುದು. ಈ ಎಲ್ಲ ದತ್ತಾಂಶವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ಕೊವಿನ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ ಎಂದು ತಿಳಿಸಿದ್ದಾರೆ.

    ರಾಜ್ಯಕ್ಕೆ ಅವಶ್ಯಕತೆ ಇರುವ ಹೆಚ್ಚಿನ ಮೂಲಭೂತ ಸೌಕರ್ಯವನ್ನು ಕೇಂದ್ರ ಸರ್ಕಾರ ಪೂರೈಸುತ್ತಿದ್ದು, ಈವರೆಗೂ 64 ಬೃಹತ್ ಐಸ್ ಲೈನ್ಡ್ ರೆಫ್ರಿಜರೇಟರ್ (ILR), 24 ಲಕ್ಷ ಸಿರಿಂಜುಗಳು ರಾಜ್ಯಕ್ಕೆ ಬಂದಿವೆ. ಎಲ್ಲವನ್ನೂ ಜಿಲ್ಲೆಗಳಿಗೆ ರವಾನಿಸಲಾಗಿದೆ. ಇನ್ನುಳಿದ 31 ಲಕ್ಷ ಸಿರಿಂಜುಗಳು ಸೇರಿದಂತೆ ಹೆಚ್ಚುವರಿ ಉಪಕರಣಗಳು ಶೀಘ್ರದಲ್ಲೇ ತಲುಪಲಿವೆ ಎಂದು ವಿವರಿಸಿದ್ದಾರೆ.

  • ಇದೇ ಮೊದಲ ಬಾರಿಗೆ ಕೋವಿಡ್ ವಾರ್ಡಿನಲ್ಲಿ ಗ್ರಂಥಾಲಯದ ಸೌಲಭ್ಯ

    ಇದೇ ಮೊದಲ ಬಾರಿಗೆ ಕೋವಿಡ್ ವಾರ್ಡಿನಲ್ಲಿ ಗ್ರಂಥಾಲಯದ ಸೌಲಭ್ಯ

    – ಸಾಗರದಲ್ಲಿ ವಿಶಿಷ್ಟ ಪ್ರಯೋಗ

    ಶಿವಮೊಗ್ಗ: ಕೊರೊನಾ ಸೋಂಕಿತರು ಮಾನಸಿಕ ಖಿನ್ನತೆ ಹಾಗೂ ಒಂಟಿತನದಿಂದ ಹೊರ ಬರುವ ಸಲುವಾಗಿ ಶಿವಮೊಗ್ಗ ಜಿಲ್ಲೆ ಸಾಗರದ ಕೋವಿಡ್ ವಾರ್ಡಿನಲ್ಲಿ ಆರೋಗ್ಯ ಸಿಬ್ಬಂದಿ ಸೋಂಕಿತರಿಗಾಗಿ ಗ್ರಂಥಾಲಯ ತೆರೆದಿದ್ದಾರೆ.

    ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹಲವು ಮಂದಿ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಕೊರೊನಾ ತುತ್ತಾಗಿ ಚಿಕಿತ್ಸೆ ಪಡೆಯಬೇಕಾದರೆ ತಮ್ಮವರಿಂದ ದೂರವಿದ್ದು ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದೆ. ಹೀಗಾಗಿ ಸೋಂಕಿತರಿಗೆ ಒಂಟಿತನ ಕಾಡುತ್ತಿದೆ.

    ಈ ಮಾನಸಿಕ ಖಿನ್ನತೆ ಹಾಗೂ ಒಂಟಿತನದಿಂದ ಸೋಂಕಿತರು ಹೊರ ಬರುವ ಸಲುವಾಗಿ ಗ್ರಂಥಾಲಯ ತೆರೆಯಲಾಗಿದೆ. ಈ ಗ್ರಂಥಾಲಯದಲ್ಲಿ ದಿನಪತ್ರಿಕೆಗಳು, ಮಾಸಿಕಗಳು ಜೊತೆಗೆ ದೊಡ್ಡ ದೊಡ್ಡ ಲೇಖಕರ ಜನಪ್ರಿಯ ಕಾದಂಬರಿಗಳನ್ನು ಸಹ ಇಡಲಾಗಿದೆ.

    ಸದ್ಯ 500 ಪುಸ್ತಕಗಳನ್ನು ಕೋವಿಡ್ ವಾರ್ಡ್ ನಲ್ಲಿ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕಗಳನ್ನು ಖರೀದಿಸಲಾಗುವುದು ಎಂದಿದ್ದಾರೆ. ಜೊತೆಗೆ ಸಾಹಿತಿಗಳು ಹಾಗೂ ಲೇಖಕರು ಯಾರಾದರೂ ಉಚಿತವಾಗಿ ತಾವು ಬರೆದಿರುವ ಪುಸ್ತಕವನ್ನು ನೀಡುವುದಾದರೆ ನೀಡಬಹುದು ಎಂಬ ಮನವಿಯನ್ನು ಸಹ ಮಾಡಿದ್ದಾರೆ.

    ಅಲ್ಲದೇ ರಾಜ್ಯದಲ್ಲಿಯೇ ಇದೇ ಪ್ರಥಮವಾದ ಕೋವಿಡ್ ವಾರ್ಡ್ ನಲ್ಲಿ ತೆರೆದಿರುವ ಗ್ರಂಥಾಲಯ ಇದಾಗಿದ್ದು, ಜಿಲ್ಲಾ ಕೇಂದ್ರದ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ಸಹ ಗ್ರಂಥಾಲಯ ತೆರೆಯಲು ಆರೋಗ್ಯ ಸಿಬ್ಬಂದಿ ಚಿಂತನೆ ನಡೆಸಿದ್ದಾರೆ.

  • ಸೋಂಕು ದೃಢವಾದ್ರೂ ಕೋವಿಡ್ ಆಸ್ಪತ್ರೆಗೆ ತೆರಳಲು ಜೆಡಿಎಸ್ ಮುಖಂಡನ ಕಿರಿಕ್

    ಸೋಂಕು ದೃಢವಾದ್ರೂ ಕೋವಿಡ್ ಆಸ್ಪತ್ರೆಗೆ ತೆರಳಲು ಜೆಡಿಎಸ್ ಮುಖಂಡನ ಕಿರಿಕ್

    ಮಂಡ್ಯ: ಕೊರೊನಾ ಸೋಂಕು ದೃಢವಾದರೂ ಜೆಡಿಎಸ್ ಮುಖಂಡರೊಬ್ಬರು ಮಂಡ್ಯದ ಕೋವಿಡ್ ಆಸ್ಪತ್ರೆಗೆ ಹೋಗಲು ಕಿರಿಕ್ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ನಾಗಮಂಗಲದ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಸೋಂಕಿತ ಮುಖಂಡ ಆಸ್ಪತ್ರೆಗೆ ಹೋಗಲು ರಂಪಾಟ ಮಾಡಿದ್ದಾರೆ. ನಾನು ಆಸ್ಪತ್ರೆಗೆ ಬರಲ್ಲ. ಮನೆಯಲ್ಲೇ ಐಸೋಲೇಷನ್ ಆಗುತ್ತೇನೆಂದು ಪಟ್ಟು ಹಿಡಿದ್ದರು. ಅಲ್ಲದೇ ಆರೋಗ್ಯ ಸಚಿವ ಶ್ರೀರಾಮುಲು ಅವರ ಜೊತೆ ನಾನು ಮಾತನಾಡಿದ್ದೇನೆ. ಹೀಗಾಗಿ ನಾನು ಮನೆಯಲ್ಲೇ ಇರುತ್ತೀನಿ ಎಂದು ಕಿರಿಕ್ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ಮನೆಯ ಮುಂದೆ ಸೋಂಕಿತ ಮುಖಂಡ ಹೈಡ್ರಾಮಾ ಮಾಡಿದ್ದಾರೆ. ಡಾ.ಧನಂಜಯ್ ಸೇರಿದಂತೆ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಎಷ್ಟೇ ಪ್ರಯತ್ನಿಸಿದರೂ ಆಸ್ಪತ್ರೆಗೆ ಹೋಗಲು ಜೆಡಿಎಸ್ ಮುಖಂಡ ಒಪ್ಪದೇ ಪಟ್ಟು ಹಿಡಿದಿದ್ದರು.

    ಕೆಲವು ರಾಜಕಾರಣಿಗಳಿಂದ ಅಧಿಕಾರಿಗಳಿಗೆ ಫೋನ್ ಮಾಡಿಸುವ ಮೂಲಕ ವಾಪಸ್ ಹೋಗುವಂತೆ ಒತ್ತಡ ಹಾಕಿದ್ದಾರೆ. ಸತತ ಒಂದು ಗಂಟೆ ಮನವೊಲಿಕೆ ಬಳಿಕ ಆಸ್ಪತ್ರೆಗೆ ಬರಲು ಜೆಡಿಎಸ್ ಮುಖಂಡ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸುಮಾರು ಒಂದು ಗಂಟೆಯ ಸಮಯ ಜೆಡಿಎಸ್ ಮುಖಂಡನ ಮನೆಯ ಮುಂದೆ ಅಂಬುಲೆನ್ಸ್ ನಿಲ್ಲಿಸಿಕೊಂಡು ಸಿಬ್ಬಂದಿ ನಿಂತಿದ್ದರು.

    ಎರಡು ದಿನಗಳ ಹಿಂದೆ ಜೆಡಿಎಸ್ ಮುಖಂಡನ ಪುತ್ರನಿಗೆ ಸೋಂಕು ದೃಢಪಟ್ಟಿತ್ತು. ಬಳಿಕ ಕುಟುಂಬದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಕುಟುಂಬದ ಐದರು ಮಂದಿಗೆ ಸೋಂಕಿರುವುದು ದೃಢವಾಗಿದೆ.

  • ಸೋಂಕಿತ ತಂದೆಯೊಂದಿಗೆ ಅಂಬ್ಯುಲೆನ್ಸ್ ಹತ್ತಿದ 5 ವರ್ಷದ ಬಾಲಕ!

    ಸೋಂಕಿತ ತಂದೆಯೊಂದಿಗೆ ಅಂಬ್ಯುಲೆನ್ಸ್ ಹತ್ತಿದ 5 ವರ್ಷದ ಬಾಲಕ!

    – ಬಳ್ಳಾರಿ ಆರೋಗ್ಯ ಇಲಾಖೆಯ ಮತ್ತೊಂದು ಎಡವಟ್ಟು
    – ಸ್ವಯಂ ಲಾಕ್‍ಡೌನ್‍ಗೆ ಮುಂದಾದ ಗಡಿ ಜಿಲ್ಲೆ

    ಬಳ್ಳಾರಿ: ಕೊರೊನಾ ಸುನಾಮಿ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಆರೋಗ್ಯ ಸಿಬ್ಬಂದಿಯ ನಿರ್ಲಕ್ಷ್ಯ ರಾಜ್ಯಕ್ಕೆ ದೊಡ್ಡ ತಲೆನೋವಾಗಿದೆ. ಬಳ್ಳಾರಿಯಲ್ಲಂತೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜಿಲ್ಲಾಡಳಿತ ಕೊರೊನಾ ವಿಚಾರದಲ್ಲಿ ಪದೇ ಪದೇ ಎಡವುತ್ತಿದೆ. ಇದರಿಂದ ಬೇಸತ್ತಿರುವ ಜನ ಸೆಲ್ಫ್ ಲಾಕ್‍ಡೌನ್ ಮೊರೆ ಹೋಗಿದ್ದಾರೆ.

    ಜಿಲ್ಲೆಯಲ್ಲಿ 14 ವರ್ಷದೊಳಗಿನ ಬರೋಬ್ಬರಿ 60 ಮಕ್ಕಳಿಗೆ ಸೋಂಕು ವಕ್ಕರಿಸಿದೆ. ಈ ಸಮಯದಲ್ಲಿ ಅಲರ್ಟ್ ಆಗಿರಬೇಕಿದ್ದ ಆರೋಗ್ಯ ಇಲಾಖೆಯೇ ಮತ್ತೊಂದು ಎಡವಟ್ಟು ಮಾಡಿದೆ. ಜಿಂದಾಲ್ ಸಮೀಪದ ಕುಡಿತಿನಿ ಗ್ರಾಮದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು.

    ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದಿದ್ದ ಅಂಬುಲೆನ್ಸ್‌ನಲ್ಲಿ ಆತನ 5 ವರ್ಷದ ಮಗನು ಸಹ ಪ್ರಯಾಣಿಸಿದ್ದಾನೆ. ಸೋಂಕಿತನ ಪತ್ನಿ ಸಹ ಪ್ರಯಾಣಿಸಲು ವೈದ್ಯಕೀಯ ಸಿಬ್ಬಂದಿ ಬಿಟ್ಟಿದ್ದಾರೆ. ಆ ಬಾಲಕನಿಗೆ ಪಿಪಿಇ ಕಿಟ್ ಸಹ ಹಾಕಿಲ್ಲ. ತಂದೆಯಿಂದ ಮಗುಗೆ ಸೋಂಕು ಹರಡಿದರೆ ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವಾಗಲಿದೆ.

    ಕ್ವಾರಂಟೈನ್ ವ್ಯವಸ್ಥೆ:
    ಬಳ್ಳಾರಿಯ ಕ್ವಾರಂಟೈನ್ ಕೇಂದ್ರಗಳಂತ ಅವ್ಯವಸ್ಥೆಗಳ ಆಗರವಾಗಿವೆ. ಚಿಕ್ಕಮಕ್ಕಳು ತಮ್ಮ ಪೋಷಕರೊಂದಿಗೆ ಕ್ವಾರಂಟೈನಿಗಳಾಗಿದ್ದಾರೆ. ಆದರೂ ಸಮಯಕ್ಕೆ ಸರಿಯಾಗಿ ಊಟ ಕೊಡುತ್ತಿಲ್ಲವಂತೆ ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕ್ವಾರಂಟೈನ್ ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

    ನಾವು ನಿನ್ನೆ ರಾತ್ರಿ ಇಲ್ಲಗೆ ಬಂದಿದ್ದೀವಿ. ಆದ್ರೆ ಇಲ್ಲಿ ಮಧ್ಯಾಹ್ನ 3.30 ಸಮಯವಾದರೂ ಊಟ ಕೊಡಲ್ಲ. ನಮ್ಮ ಜೊತೆ ಚಿಕ್ಕ ಚಿಕ್ಕ ಮಕ್ಕಳ ಇದ್ದಾವೆ. ಇಲ್ಲಿ ಒಬ್ಬ ನರ್ಸ್, ಪೊಲೀಸ್ ಯಾರೂ ಇಲ್ಲ. ನಮನ್ನು ಒಳಗಡೆ ಹಾಕಿ ಬೀಗ ಹಾಕಿ ಬಿಟ್ಟು ಹೋಗಿದ್ದಾರೆ. ನಮಗೆ 5 ವರ್ಷದ ಮಗು, 10 ವರ್ಷದ ಮಗು ಇದೆ. ಬೇರೆಯವರು ಇದ್ದಾರೆ. ಒಟ್ಟು 30 ಜನ ಇದೀವಿ. ಬೆಳಗ್ಗೆ 11 ಗಂಟೆಗೆ ಎರಡು ಇಡ್ಲಿ ಕೊಡುತ್ತಾರೆ. ಹ್ಯಾಂಡ್ ಸ್ಯಾನಿಟೈಜರ್ ಕೂಡ ಇಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

    ಸ್ವಯಂ ಲಾಕ್‍ಡೌನ್‍ಗೆ ಮುಂದಾದ ಗಡಿ ಜಿಲ್ಲೆ
    ಬಳ್ಳಾರಿಯ ಜನ ಕೊರೊನಾದಿಂದ ಬಚಾವ್ ಆಗಲು ಸ್ವಯಂ ಲಾಕ್‍ಡೌನ್ ಮೊರೆ ಹೋಗಿದ್ದಾರೆ. ಗುರುವಾರ ನಗರದ ವ್ಯಾಪಾರಸ್ಥರು ಸಭೆ ನಡೆಸಿದ್ದರು. ಇಂದಿನಿಂದ ಒಂದು ವಾರಗಳ ಕಾಲ ಮಧ್ಯಾಹ್ನ 3 ಗಂಟೆಯ ನಂತರ ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಲು ನಿರ್ಧರಿಸಿದ್ದಾರೆ. ಬೆಳಗ್ಗೆ 7 ರಿಂದ ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ವ್ಯಾಪಾರ ವಹಿವಾಟು ನಡೆಯಲಿದೆ. ಸಂಜೆಯಾಗುತ್ತಿದ್ದಂತೆ ಮಾರ್ಕೆಟ್‍ಗಳು ಸ್ತಬ್ಧಗೊಳ್ಳಲಿದೆ.

  • ಆರೋಗ್ಯ ಸಚಿವರ ಸೂಚನೆಗೂ ಬೆಲೆಯಿಲ್ಲ- ಪಿಪಿಇ ಕಿಟ್, ಮಾಸ್ಕ್ ಬೇಕಾಬಿಟ್ಟಿ ಎಸೆತ

    ಆರೋಗ್ಯ ಸಚಿವರ ಸೂಚನೆಗೂ ಬೆಲೆಯಿಲ್ಲ- ಪಿಪಿಇ ಕಿಟ್, ಮಾಸ್ಕ್ ಬೇಕಾಬಿಟ್ಟಿ ಎಸೆತ

    – ಸೋಂಕಿತರ ಅಂತ್ಯಕ್ರಿಯೆ ಬಳಿಕ ಬೇಜವಾಬ್ದಾರಿ

    ಬೀದರ್: ರಾಜ್ಯದಲ್ಲಿ ಕೊರೊನಾ ದಿನೇ ದಿನೇ ತನ್ನ ಅಟ್ಟಹಾಸವನ್ನು ಮುಂದುರಿಸಿದೆ. ಆದರೆ ಈ ಸಮಯದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯ ಬಳಿಕ ಸಿಬ್ಬಂದಿ ಧರಿಸಿದ ಪಿಪಿಇ ಕಿಟ್, ಮಾಸ್ಕ್‌ಗಳನ್ನು ಮುಖ್ಯ ರಸ್ತೆಯ ಪಕ್ಕದಲ್ಲೆ ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ.

    ನಗರದ ಮಧ್ಯ ಭಾಗದಲ್ಲಿರುವ ಬಸವನಗರ ರುದ್ರಭೂಮಿಯಲ್ಲಿ ಕೋವಿಡ್‍ಗೆ ಬಲಿಯಾಗಿರುವ ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗುತ್ತೆ. ಈ ಪ್ರದೇಶದಿಂದ 150 ಮೀಟರ್ ದೂರದಲ್ಲಿ ಹತ್ತಾರು ಕಾಲೋನಿಗಳು, ಪ್ರಮುಖ ಕಚೇರಿಗಳು ಇವೆ.

    ಶವ ಸಂಸ್ಕಾರಕ್ಕೆ ಬಳಸಿದ ಎಲ್ಲಾ ವಸ್ತುಗಳನ್ನು ಕೊರೊನಾ ನಿಯಮದಂತೆ ಡಿಸ್‌ಪೋಸ್ ಮಾಡಬೇಕು. ಆದರೆ ಇಲ್ಲಿನ ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್, ಮಾಸ್ಕ್‌ಗಳನ್ನು ರುದ್ರ ಭೂಮಿಯಿಂದ ಹೊರಗೆ ಬಂದು ಮುಖ್ಯರಸ್ತೆಯ ಪಕ್ಕದಲ್ಲೇ ಬಿಸಾಡಿ ಹೋಗುತ್ತಿದ್ದಾರೆ.

    ಸಿಬ್ಬಂದಿ ನಿರ್ಲಕ್ಷ್ಯ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ಮಾಡಿ ಸಂಬಂಧಪಟ್ಟ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಹೇಳುತ್ತಾರೆ.

    ಕೊರೊನಾ ನಿಯಮಗಳನ್ನು ಪಾಲನೆ ಮಾಡಿ ಎಂದು ಜನರಿಗೆ ಜಾಗೃತಿ ಮೂಡಿಸಬೇಕಾದ ಆರೋಗ್ಯ ಸಿಬ್ಬಂದಿಯೇ ಹೀಗೆ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಸೋಂಕು ಹರಡುವ ಆತಂಕ ಎದುರಾಗಿದೆ.

  • ಆರೋಗ್ಯ ಸಿಬ್ಬಂದಿ ಕರೆದರೂ ಸೋಂಕಿತರ ಶವ ಸಂಸ್ಕಾರಕ್ಕೆ ಬಾರದ ಸಂಬಂಧಿಕರು

    ಆರೋಗ್ಯ ಸಿಬ್ಬಂದಿ ಕರೆದರೂ ಸೋಂಕಿತರ ಶವ ಸಂಸ್ಕಾರಕ್ಕೆ ಬಾರದ ಸಂಬಂಧಿಕರು

    – ಇಬ್ಬರು ಮೃತರಿಗೆ ಆರೋಗ್ಯ ಸಿಬ್ಬಂದಿಯಿಂದಲೇ ಅಂತ್ಯ ಸಂಸ್ಕಾರ

    ಹಾವೇರಿ: ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಆಗಮಿಸುವಂತೆ ಪಿಪಿಇ ಕಿಟ್ ತಯಾರು ಮಾಡಿಕೊಂಡು ಆರೋಗ್ಯ ಇಲಾಖೆ ಸಿಬ್ಬಂದಿ ಕಾದು ಕುಳಿತರೂ ಯಾರು ಬಂದಿಲ್ಲ. ಹೀಗಾಗಿ ಆರೋಗ್ಯ ಇಲಾಖೆಯ ಸಿಬ್ಬದಿಯೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

    ಮಂಗಳವಾರ ಬೆಳಗ್ಗೆ 6-30ಕ್ಕೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ ಜಿಲ್ಲೆಯ ಶಿಗ್ಗಾವಿ ಪಟ್ಟಣದ ದೇಸಾಯಿ ಗಲ್ಲಿ ನಿವಾಸಿ 75 ವರ್ಷದ ವೃದ್ಧೆ ಮತ್ತು ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ನಿವಾಸಿ 60 ವರ್ಷದ ವೃದ್ಧೆಯರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಹೆತ್ತ ಮಕ್ಕಳು, ಸಂಬಂಧಿಕರನ್ನು ಕರೆದರೂ, ಬಾರದ ಹಿನ್ನೆಲೆ ಆರೋಗ್ಯ ಇಲಾಖೆಯ ಹಾಗೂ ಜಿಲ್ಲಾಡಳಿತ ಸಿಬ್ಬಂದಿಯೇ ಅಂತ್ಯಕ್ರಿಯೆ ನಡೆಸಿದರು.

    ಇಬ್ಬರು ಮೃತರ ಮಕ್ಕಳಿಗೆ ಹಾಗೂ ಸಂಬಂಧಿಕರಿಗೆ ಬೆಳಗ್ಗೆಯೇ ಜಿಲ್ಲಾಸ್ಪತ್ರೆ ವೈದ್ಯರು ಮಾಹಿತಿ ನೀಡಿ, ಮೃತರ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿಕೊಳ್ಳಿ, ಸಾಧ್ಯವಾಗದಿದ್ದರೆ ಶವ ಸಂಸ್ಕಾರದಲ್ಲಾದರೂ ಭಾಗವಹಿಸಿ ಎಂದು ತಿಳಿಸಿದ್ದರು. ಆದರೆ ಯಾವ ಸಂಬಂಧಿಕರೂ ಆಸ್ಪತ್ರೆ ಬಳಿ ಸುಳಿಯಲಿಲ್ಲ.

    ಮೃತರ ಸಂಬಂಧಿಕರ ಐದು ಜನರಿಗೆ ಪಿಪಿಇ ಕಿಟ್ ಸೇರಿದಂತೆ ರಕ್ಷಣಾ ಸಾಮಗ್ರಿ ಒದಗಿಸುವುದಾಗಿ ಜಿಲ್ಲಾಡಳಿತ ಹಾಗೂ ಆಸ್ಪತ್ರೆಯ ಸಿಬ್ಬಂದಿ ಭರವಸೆ ನೀಡಿದ್ದರು. ಆದರೂ ಯಾರೂ ಅಂತ್ಯ ಕ್ರಿಯೆಗೆ ಬಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇಬ್ಬರು ಮೃತರ ಅಂತ್ಯಕ್ರಿಯೆ ನಡೆಸಿದರು. ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗಿತ್ತಿವೆ. ಈ ವರೆಗೆ 118 ಪ್ರಕರಣಗಳು ಧೃಡಪಟ್ಟಿವೆ.