Tag: Health problem

  • ಕೊಡಗಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ – ಸುತ್ತಮುತ್ತಲಿನ ಪ್ರದೇಶದ ಜನಕ್ಕೆ ಕಾಡ್ತಿದೆ ಶ್ವಾಸಕೋಶದ ಸಮಸ್ಯೆ!

    ಕೊಡಗಿನಲ್ಲಿ ನಡೆಯುತ್ತಿದೆ ಅಕ್ರಮ ಗಣಿಗಾರಿಕೆ – ಸುತ್ತಮುತ್ತಲಿನ ಪ್ರದೇಶದ ಜನಕ್ಕೆ ಕಾಡ್ತಿದೆ ಶ್ವಾಸಕೋಶದ ಸಮಸ್ಯೆ!

    ಮಡಿಕೇರಿ: ಅದು ಪ್ರಕೃತಿಯ ತವರು ಕೊಡಗು (Kodagu), ದೇಶ ವಿದೇಶಗಳ ಜನರು ನಿತ್ಯ ಈ ಊರಿಗೆ ಭೇಟಿ ನೀಡಿ ಪ್ರಕೃತಿಯ ಮಡಿಲಲ್ಲಿ ದಿನ ಕಳೆಯುತ್ತಾರೆ. ಬೆಟ್ಟಗುಡ್ಡಗಳ ಹಸಿರಿನ ವಾತಾವರಣ ಕಂಡು ಖುಷಿಯಿಂದ ತೆರಳುತ್ತಾರೆ. ಇದರಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸೋದ್ಯಮ (Tourism) ಚಟುವಟಿಕೆಗಳು ಹೆಚ್ಚಾಗುತ್ತಿದೆ. ಇಂತಹ ಕೊಡಗಿನಲ್ಲಿ ಕೆಲ ದುರುಳರು ಹಣದ ಆಸೆಗೆ ಬೃಹತ್ ಬೆಟ್ಟಗಳನ್ನೇ ನಾಶ ಮಾಡಲು ಹೊರಟಿದ್ದಾರೆ. ಇಡೀ ಬೆಟ್ಟ ಪ್ರದೇಶವನ್ನೇ ರಕ್ಕಸನ ಬಾಯಿಯಂತೆ ನುಂಗುತ್ತಿದ್ದಾರೆ. ಹೀಗಾಗಿ ಆ ಊರ ಸುತ್ತಮುತ್ತ ಪ್ರದೇಶಗಳಲ್ಲಿ ವಾಸ ಮಾಡುವ ಜನರು ದಿನ ಕಳೆದಂತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ನೇರುಗಳಲೆ ಪಂಚಾಯತಿ ವ್ಯಾಪ್ತಿಯ ಯಲಕನೂರು ಹಾಗೂ ಹೊಸಳ್ಳಿ ಗ್ರಾಮದಲ್ಲಿ ಕೆಲ ದುರುಳರು ಪ್ರಕೃತಿಯ ಒಡಲಿಗೆ ಕೈಹಾಕಿದ್ದಾರೆ. ಲಾರಿ, ಇಟಾಚಿಗಳನ್ನ ಬಳಸಿಕೊಂಡು ಹಗಲು ರಾತ್ರಿ ಎನ್ನದೇ ಬಾರಿ ಸ್ಫೋಟಕಗಳನ್ನು ಸಿಡಿಸಿ ಅಕ್ರಮವಾಗಿ ಗಣಿಗಾರಿಕೆ (Illegal Mining) ನಡೆಸುತ್ತಿದ್ದಾರೆ. ಇದರಿಂದ ಹಲವಾರು ಜನರು ಅನಾರೋಗ್ಯ ಸಮಸ್ಯೆ ಎದುರಿಸಬೇಕಾಗಿದೆ.

    ಊರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು 17ಕ್ಕೂ ಹೆಚ್ಚು ಕಲ್ಲು ಕೊರೆಗಳು ಇದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಇತ್ತಿಷ್ಟು ಜಾಗದಲ್ಲಿ ಗಣಿಗಾರಿಕೆ ನಡೆಸುತ್ತೇವೆ ಅಂತ ಅನುಮತಿ ಪಡೆದಿದ್ದಾರೆ. ಆದ್ರೆ ಕಲ್ಲುಗಣಿಗಾರಿಕೆ ನಡೆಸುತ್ತಿರುವರು ಇಲಾಖೆಯ ಕೆಲ ಮಾನದಂಡಗಳನ್ನ ಗಾಳಿಗೆ ತೂರಿ ಪ್ರಕೃತಿ ಮಾತೆಯ ಭೂಗರ್ಭವನ್ನೇ ಸೀಳುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ಭಾರೀ ಸ್ಫೋಟಕಗಳನ್ನ ಸಿಡಿಸಿ ಗಣಿ ಕೆಲಸ ನಡೆಸುತ್ತಿದ್ದಾರೆ. ಮೀಸಲು ಅರಣ್ಯ ಪ್ರದೇಶವನ್ನ ಬೀಡದೇ ಮನಸ್ಸೋ ಇಚ್ಚೆ ಗಣಿಗಾರಿಕೆ ನಡೆಸುತ್ತಿದ್ದಾರೆ. ಇದು ಸುತ್ತಮುತ್ತ ನೆಲೆಸಿರುವ ಪ್ರದೇಶದ ಜನರನ್ನೂ ಆತಂಕ್ಕೆ ದೂಡಿದೆ.

    ಇನ್ನೂ ಈ ಊರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಹಲವು ಕಲ್ಲುಗಣಿಗಾರಿಕೆ ಅಕ್ರಮವಾಗಿದೆ. ಅವೈಜ್ಞಾನಿಕ ನಿರ್ವಹಣೆಯಿಂದಾಗಿ ಊರಿನ ವಾತಾವರಣ ಕಲುಷಿತಗೊಂಡು ಗ್ರಾಮದ ಶೇ.90ರಷ್ಟು ಮಂದಿಗೆ ಶ್ವಾಸಕೋಶದ ತೊಂದರೆ ಎದುರಾಗಿದೆ. ಹೀಗಾಗಿ ಕಲ್ಲುಗಣಿಗಾರಿಕೆ ತಕ್ಷಣ ನಿಲ್ಲಿಸಬೇಕು, ಇಲ್ಲದಿದ್ದಲ್ಲಿ ದಯಾಮರಣ ನೀಡಿ ಎಂದು ಗ್ರಾಮಸ್ಥರು ವಿವಿಧ ಇಲಾಖಾ ಅಧಿಕಾರಿಗಳ ಎದುರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ಕಲ್ಲುಗಣಿಗಾರಿಕೆಯಿಂದ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದು, ಭಾರೀ ಸಮಸ್ಯೆ ಸೃಷ್ಟಿಯಾಗಿದೆ. ಅತೀ ಹೆಚ್ಚು ಭಾರದ ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟಿದ್ದು, ಜನರ ಬದುಕು ದುಸ್ತರವಾಗಿದೆ. ಸಂಜೆ ವೇಳೆ ಕೋರೆಗಳಲ್ಲಿ ಭಾರೀ ಸ್ಫೋಟಗಳನ್ನು ಬಳಸಲಾಗುತ್ತಿದೆ. ಇಲ್ಲಿನ ಮನೆಗಳೂ ಸಾಕಷ್ಟು ಬಿರುಕುಬಿಟ್ಟಿವೆ. ಜೀವನವೇ ನರಕವಾಗಿದೆ ಗ್ರಾಮಸ್ಥರು ಅಧಿಕಾರಿಗಳೆದುರು ಅಳಲು ತೋಡಿಕೊಂಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ಕಿವಿಗೊಡದೆ ಅಧಿಕಾರಿಗಳು ತಮ್ಮ ಪಾಡಿಗೆ ಇದ್ದಾರೆ. ಇನ್ನೂ ಕೆಲವರು ಗ್ರಾಮಸ್ಥರಿಗೆ ಹಣ ನೀಡಿ ಇಲ್ಲಿ ಯಾವ್ದೇ ಸಮಸ್ಯೆ ಇಲ್ಲವೆಂದು ಹೇಳುವಂತೆ ಹೇಳಿಕೊಟ್ಟಿದ್ದಾರೆ ಅಂತ ʻಪಬ್ಲಿಕ್‌ ಟಿವಿʼ ರಿಯಾಲಿಟಿ ಚೆಕ್‌ ವೇಳೆ ಯುವಕನೊಬ್ಬ ಹೇಳಿಕೊಂಡಿದ್ದಾನೆ.

  • ಏನಾಯಿತು ಕಮಲ್ ಹಾಸನ್ ಪುತ್ರಿಗೆ? ಆರೋಗ್ಯ ಸಮಸ್ಯೆ ಹಂಚಿಕೊಂಡ ಶ್ರುತಿ ಹಾಸನ್

    ಏನಾಯಿತು ಕಮಲ್ ಹಾಸನ್ ಪುತ್ರಿಗೆ? ಆರೋಗ್ಯ ಸಮಸ್ಯೆ ಹಂಚಿಕೊಂಡ ಶ್ರುತಿ ಹಾಸನ್

    ಮಿಳಿನ ಖ್ಯಾತ ನಟ ಕಮಲ್ ಹಾಸನ್ ಪುತ್ರಿ, ನಟಿ ಶ್ರುತಿ ಹಾಸನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಈ ಕುರಿತು ಅವರೇ ಸ್ವತಃ ಇನ್ಸ್ಟಾದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಹಲವು ತಿಂಗಳುಗಳಿಂದ ಆ ಸಮಸ್ಯೆಯಿಂದ ಅವರು ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ, ಅದಕ್ಕೆ ಟ್ರೀಟ್ ಮೆಂಟ್ ತಗೆದುಕೊಳ್ಳುವುದರ ಜೊತೆಗೆ ನಿತ್ಯ ವ್ಯಾಯಾಮ ಮಾಡುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

    ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರುತಿ ಹಾಸನ್, ಒಳ್ಳೆಯ ಗಾಯಕಿ ಕೂಡ. ಈಗ ‍ಪ್ರಭಾಸ್ ಜೊತೆ ಸಲಾರ್ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಈ ನಡುವೆಯೇ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಚಾರವನ್ನೂ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಾವು ಪಿಸಿಓಡಿಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಅದರಿಂದ ಆಚೆ ಬರುವುದಕ್ಕೆ ಸಾಕಷ್ಟು ಶ್ರಮ ಪಡುತ್ತಿರುವುದಾಗಿಯೂ ಹೇಳಿದ್ದಾರೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

    ನಾನು ಎಂಡೊಮೆಟ್ರಿಯೋಸಿಸ್ ನೊಂದಿಗೆ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಿರುವೆ. ಇದೊಂದು ನೈಸರ್ಗಿಕ ಕ್ರಿಯೆ ಎಂದು ನನಗೆ ಗೊತ್ತಿದ್ದರೂ, ಅದರೊಂದಿಗೆ ಹೋರಾಟ ಮಾಡಲೇಬೇಕಿದೆ. ಶೂಟಿಂಗ್ ನಡುವೆಯೂ ನಿತ್ಯ ವ್ಯಾಯಾಮ ಮಾಡುತ್ತೇನೆ. ಸರಿಯಾದ ಊಟ ಮತ್ತು ವೇಳೆಗೆ ಸರಿಯಾಗಿ ನಿದ್ದೆ ಮಾಡಬೇಕಿದೆ. ಸದಾ ಸಂತೋಷದಿಂದ ಇರುವುದೇ ಇದಕ್ಕೆ ಪರಿಹಾರ ಎಂದು ಹಲವರು ಸೂಚಿಸಿದ್ದಾರೆ. ಹಾಗಾಗಿ ನಾನು ಸದಾ ಲವಲವಿಕೆಯಿಂದ ಇರುವೆ ಎಂದು ಹೇಳಿಕೊಂಡಿದ್ದಾರೆ ಶ್ರುತಿ ಹಾಸನ್.

    Live Tv

  • ಏನಾಯ್ತು ಅಮಿತಾಭ್ ಬಚ್ಚನ್‌ಗೆ? – ಆತಂಕದಲ್ಲಿ ಅಭಿಮಾನಿಗಳು

    ಏನಾಯ್ತು ಅಮಿತಾಭ್ ಬಚ್ಚನ್‌ಗೆ? – ಆತಂಕದಲ್ಲಿ ಅಭಿಮಾನಿಗಳು

    ನೆನ್ನೆ ರಾತ್ರಿ 10.14ಕ್ಕೆ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಆತಂಕ ಹೆಚ್ಚಿಸಿದ್ದಾರೆ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್. ಅವರು ಆ ರೀತಿಯಲ್ಲಿ ಯಾಕೆ ಟ್ವೀಟ್ ಮಾಡಿದರು? ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿದೆಯಾ? ಅರ್ಥವೇ ಆಗದಂತೆ ಮಾಡಿರುವ ಟ್ವೀಟ್ ಹಿಂದಿರುವ ಉದ್ದೇಶವೇನು ಎನ್ನುವ ಪ್ರಶ್ನೆಯೊಂದಿಗೆ ಆತಂಕ ವ್ಯಕ್ತಪಡಿಸಿದ್ದಾರೆ ಅಮಿತಾಭ್ ಅಭಿಮಾನಿಗಳು. ಅಲ್ಲದೇ, ಏನಾಗಿದೆ ಅಂತ ಬೇಗ ಹೇಳಿ ದೇವರೆ? ಎಂದು ಮರುಟ್ವೀಟ್ ಮಾಡಿದ್ದಾರೆ ಸಾಕಷ್ಟು ಅಭಿಮಾನಿಗಳು. ಇದನ್ನೂ ಓದಿ : ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

    ಆರೋಗ್ಯದ ವಿಷಯದಲ್ಲಿ ಅಮಿತಾಭ್ ಬಚ್ಚನ್ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಒಂದೊಂದು ಬಾರಿ ಅವರೇ ತಮಗಾದ  ಆರೋಗ್ಯ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡರೆ, ಮತ್ತಷ್ಟು ಬಾರಿ ಸುಳ್ಳು ಸುದ್ದಿಗಳು ಹಬ್ಬಿವೆ. ಆದರೆ, ಈ ಬಾರಿ ಸ್ವತಃ ಅಮಿತಾಭ್ ಅವರೇ, “heart pumping .. concerned .. and the hope” ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾರೆ. ಇದನ್ನೂ ಓದಿ : ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು

    ಅವರು ಟ್ವೀಟ್ ಮಾಡುತ್ತಿದ್ದಂತೆಯೇ ಲಕ್ಷಾಂತರ ಅಭಿಮಾನಿಗಳು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮರು ಟ್ವೀಟ್ ಮಾಡಿದ್ದಾರೆ. ಆಗಿರುವ ಸಮಸ್ಯೆಯನ್ನು ಹೇಳಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಆದರೆ, ಅಮಿತಾಭ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಇನ್ನೂ ಅವರ ಅಭಿಮಾನಿಗಳು ಆತಂಕದಲ್ಲೇ ಇದ್ದಾರೆ.

  • ಹುಟ್ಟುತ್ತಾ ಆರೋಗ್ಯವಾಗಿ ಹುಟ್ಟುತ್ತಾರೆ, ಬೆಳೆಯುತ್ತಾ ಸಮಸ್ಯೆಗೊಳಗಾಗುತ್ತಾರೆ!

    ಹುಟ್ಟುತ್ತಾ ಆರೋಗ್ಯವಾಗಿ ಹುಟ್ಟುತ್ತಾರೆ, ಬೆಳೆಯುತ್ತಾ ಸಮಸ್ಯೆಗೊಳಗಾಗುತ್ತಾರೆ!

    ರಾಯಚೂರು: ತಾಲೂಕಿನ ಕಟಕನೂರು ಗ್ರಾಮ ಅದ್ಯಾವುದೋ ಶಾಪಕ್ಕೆ ಒಳಗಾದಂತೆ ಮಕ್ಕಳ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದೆ. ಹುಟ್ಟುವ ಮಕ್ಕಳು ಆರೋಗ್ಯವಾಗೇ ಹುಟ್ಟುತ್ತಾರೆ. ಆದರೆ ಬೆಳೆಯುತ್ತಾ ನಾನಾ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ಪೋಷಕರು ಆಸ್ಪತ್ರೆಗಳಿಗೆ ಅಲೆದಾಡಿ ಸುಸ್ತಾಗಿದ್ದಾರೆ. ಆದ್ರೆ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ.

    2009ರ ಪ್ರವಾಹದ ಬಳಿಕ ಗ್ರಾಮ 2011ರಲ್ಲಿ ಸಂಪೂರ್ಣ ಸ್ಥಳಾಂತರವಾದ ಮೇಲೆ 10 ತಾಯಂದಿರು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹುಟ್ಟುವ ಎರಡು ಮಕ್ಕಳಲ್ಲಿ ಒಂದು ಮಗು ಆರೋಗ್ಯ ಸಮಸ್ಯೆಯನ್ನ ಎದುರಿಸುತ್ತದೆ. ಬುದ್ದಿಮಾಂದ್ಯತೆ, ಅಂಗವಿಕಲತೆ, ಮಾತು ಬಾರದೇ ಇರುವುದು, ಕಿವಿ ಕೇಳಿಸದೆ ಇರುವ ಸಮಸ್ಯೆಯನ್ನ ಇಲ್ಲಿನ ಮಕ್ಕಳು ಎದುರಿಸುತ್ತಿದ್ದಾರೆ. ಸದ್ಯ ಗ್ರಾಮದಲ್ಲಿ 15ಕ್ಕೂ ಹೆಚ್ಚು ಮಕ್ಕಳು ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದನ್ನೂ ಓದಿ:  ನಮ್ಮಲ್ಲಿ ಪ್ರಾಣಿಗಳ ಕಾನೂನು ಕಠಿಣ ಇಲ್ಲ – ನಾಯಿ ‘ಲಾರಾ’ ಅಂತ್ಯಕ್ರಿಯೆಗೆ ಬಂದ ರಮ್ಯಾ

    ಕೀಲು ನೋವು, ಓಡಾಡಲು ಸಾಧ್ಯವಾಗದೇ ಇರುವುದು ಸೇರಿದಂತೆ ಇಲ್ಲಿನ ಮಕ್ಕಳು ಬೇರೆ ಬೇರೆ ಸಮಸ್ಯೆ ಎದುರಿಸುತ್ತಿರುವುದರಿಂದ ನೀರಿನ ಕುಡಿಯುವ ನೀರಿನಲ್ಲೇ ದೋಷ ಇರಬಹುದಾ ಎಂದು ಜನ ಅನುಮಾನಿಸಿದ್ದಾರೆ. ಬೋರ್‍ವೆಲ್ ನೀರನ್ನೇ ಜನ ಕುಡಿಯಲು ಬಳಸುತ್ತಿರುವುದರಿಂದ ಸಮಸ್ಯೆಗಳು ಎದುರಾಗತ್ತಿರಬಹುದು ಅಂತ ಭಾವಿಸಿದ್ದಾರೆ. ಆದರೆ ಇಂಥಹದ್ದೇ ಸಮಸ್ಯೆ ಅಂತ ಇದುವರೆಗೂ ತಿಳಿದು ಬಂದಿಲ್ಲ. ಇದನ್ನೂ ಓದಿ: Budget 2022: ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನಕ್ಕೆ 200 ಕೋಟಿ ನೆರವು

    ಮಕ್ಕಳು ದೈಹಿಕ ಊನತೆ ಅನುಭವಿಸುತ್ತಿರುವುದು ಆಯಾ ಕುಟುಂಬದವರಷ್ಟೆ ಅಲ್ಲದೆ ಇಡೀ ಗ್ರಾಮಸ್ಥರನ್ನ ಚಿಂತೆಗೀಡು ಮಾಡಿದೆ. ಕುಡಿಯುವ ನೀರಿನ ಸಮಸ್ಯೆ ಇರಬಹುದೆ ಎಂಬ ಶಂಕೆ ಕಾಡುತ್ತಿದೆ. ಆದ್ರೆ ಹಳೆಯ ಗ್ರಾಮದಲ್ಲಿ ಇಂತಹ ಘಟನೆ ನಡೆದಿರಲಿಲ್ಲ. ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗೆ ಕಾರಣ ತಿಳಿಯಬೇಕಿದೆ. ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಸಿಗಬೇಕಿದೆ.

  • ಬದುಕಿನಲ್ಲಿ ಭರವಸೆ ಇದ್ರೆ ಭವಿಷ್ಯ ರೂಪಿಸುವ ದಾರಿ ಕಾಣಿಸ್ತದೆ: ಬುಲೆಟ್ ಪ್ರಕಾಶ್

    ಬದುಕಿನಲ್ಲಿ ಭರವಸೆ ಇದ್ರೆ ಭವಿಷ್ಯ ರೂಪಿಸುವ ದಾರಿ ಕಾಣಿಸ್ತದೆ: ಬುಲೆಟ್ ಪ್ರಕಾಶ್

    ಬೆಂಗಳೂರು: “ಬದುಕಿನಲ್ಲಿ ಭರವಸೆ ಇದ್ದರೆ ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ ಕಾಣಿಸುತ್ತದೆ” ಇದು ಇಂದು ನಿಧನರಾದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಟ್ವಿಟ್ಟರ್ ಕವರ್ ಪೇಜ್‍ನಲ್ಲಿರುವ ಸಾಲುಗಳು.

    ಟ್ವಿಟ್ಟರ್ ನಲ್ಲಿ ಸಕ್ರಿಯವಾಗಿದ್ದ ಬುಲೆಟ್ ಪ್ರಕಾಶ್ ಕೊನೆಯದಾಗಿ ಮಾಚ್ 13 ರಂದು ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಯಡಿಯೂರಪ್ಪನವರ ಟ್ವೀಟ್ ಅನ್ನು ಲೈಕ್ ಮಾಡಿದ್ದರು. ಜ.29 ರಂದು ಟ್ವೀಟ್ ಮಾಡಿದ್ದ ಅವರು, ಸಿದ್ಲಿಂಗು, ನೀರು ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದ ಸಹೃದಯಿ ನಿರ್ಮಾಪಕ ಪ್ರಸನ್ನ ನಿರ್ಮಾಣದ ಪರಿಮಳಾ ಲಾಡ್ಜ್ ಚಿತ್ರದ ಚಿತ್ರೀಕರಣದಲ್ಲಿ ತೆಗೆದ ಫೋಟೋ ಎಂದು ಬರೆದು ಟ್ವೀಟ್ ಮಾಡಿದ್ದರು.

    ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದರು. ಗಾಳಿಪಟ-2 ಚಿತ್ರೀಕರಣದ ಸಂದರ್ಭದಲ್ಲಿ ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಫೋಟೋ ಕ್ಲಿಕ್ ಎಂದು ಬರೆದುಕೊಂಡಿದ್ದರು.

    ಸಿನಿಮಾದಲ್ಲಿ ನಟನೆಯ ಜೊತೆಗೆ ಬಿಜೆಪಿ ನಾಯಕರಾಗಿಯೂ ಗುರುತಿಸಿಕೊಂಡಿದ್ದ ಪ್ರಕಾಶ್ ಅವರು, ಇತ್ತೀಚೆಗೆ ದೆಹಲಿ ನಿರ್ಭಯಾ ಪ್ರಕರಣದ ಬಗ್ಗೆಯೂ ಟ್ವೀಟ್ ಮಾಡಿದ್ದರು, ನಿರ್ಭಯಾ ಆರೋಪಿಗಳ ಫೋಟೋ ಹಾಕಿ, ನಿರ್ಭಯಾ ಪ್ರಕರಣದಲ್ಲಿ 85 ತಿಂಗಳುಗಳ ನಂತರ ಗಲ್ಲು ಶಿಕ್ಷೆ ಪ್ರಕಟಿಸಿದ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ. ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚಾಗಿದೆ. ಈಗಲಾದರೂ ಆ ಹೆಣ್ಣು ಮಗುವಿನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದರು.

    ಸಿನಿಮಾದಲ್ಲಿ ಹಾಸ್ಯನಟನಾಗಿ ಖ್ಯಾತಿ ಪಡೆದಿದ್ದ ಬುಲೆಟ್, ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಅನಾರೋಗ್ಯಕ್ಕೆ ತುತ್ತಾದಾಗ ಅವರ ಫೋಟೋವನ್ನು ಟ್ವೀಟ್ ಮಾಡಿ, ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಆರೋಗ್ಯ ಸುಧಾರಿಸಿ, ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆನೆ ಎಂದು ಬರೆದುಕೊಂಡಿದ್ದರು.

    ಸ್ನೇಹಿಮುಖಿಯಾಗಿದ್ದ ಬುಲೆಟ್ ಪ್ರಕಾಶ್ ಅವರು ಅಷ್ಟೇ ನೇರನುಡಿ ಹೊಂದಿದ ವ್ಯಕ್ತಿಯಾಗಿದ್ದರು. ಸಮಾಜ ಬಗ್ಗೆ ಅತೀವ ಕಾಳಜಿ ಹೊಂದಿದ್ದ ಅವರು, ಹೈದರಾಬಾದ್‍ನ ಪಶುವೈದ್ಯೆ ದಿಶಾ ಅತ್ಯಾಚಾರ ಹಾಗೂ ಕೊಲೆ ಮಾಡಿದ್ದ ಪಾಪಿಗಳನ್ನು ಎನ್ ಕೌಂಟರ್ ಮಾಡಿದ ಸೈಬರಾಬಾದ್ ಪೋಲಿಸ್ ಕಮಿಷನರ್ ವಿಶ್ವನಾಥ್ ಸಜ್ಜನರ್ ತಂಡಕ್ಕೆ ಹ್ಯಾಟ್ಸ್ ಆಫ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

    44 ವರ್ಷದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಲಿವರ್, ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಮಾರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಬುಲೆಟ್ ಪ್ರಕಾಶ್, ಸ್ಯಾಂಡಲ್‍ವುಡ್ ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ಕಾಣಿಸಿಕೊಂಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಕಾಂಬಿನೇಷನ್ ಬಾರೀ ಕಚಗುಳಿ ಇಡ್ತಿತ್ತು. ನಾಳೆ ಮಧ್ಯಾಹ್ನ 12 ಗಂಟೆಗೆ ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

  • ಬೆಳಗಾವಿಯ ಯೋಧ ವಿಧಿವಶ

    ಬೆಳಗಾವಿಯ ಯೋಧ ವಿಧಿವಶ

    ಬೆಳಗಾವಿ: ಅನಾರೋಗ್ಯಕ್ಕೆ ತುತ್ತಾಗಿ ಬೆಳಗಾವಿಯ ಯೋಧ ವಿಧಿವಶರಾಗಿದ್ದಾರೆ.

    ಮಂಜುನಾಥ ಮುಸಲ್ಮಾರಿ(24) ವಿಧಿವಶರಾದ ಯೋಧ. ಮಂಜುನಾಥ ಮುಸಲ್ಮಾರಿ ಮೂಲತಃ ಮಾವನೂರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗ್ರಾಮದವರಾಗಿದ್ದು, ದೆಹಲಿಯ ಆರ್‍ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಮಂಜುನಾಥ್ ಅವರು ಉತ್ತರ ಪ್ರದೇಶದ ಮೀರತ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇಂದು ಸ್ವಗ್ರಾಮ ಮಾವನೂರಿಗೆ ಮಂಜುನಾಥ್ ಅವರ ಪಾರ್ಥಿವ ಶರೀರ ಆಗಮಿಸಲಿದೆ. ಸ್ವಗ್ರಾಮದಲ್ಲಿ ಯೋಧನ ಅಂತ್ಯ ಸಂಸ್ಕಾರ ನಡೆಯಲಿದೆ.

    ಹುತಾತ್ಮ ಯೋಧನ ಮನೆಯಲ್ಲಿ ಕುಟುಂಬಸ್ಥರು ಆಕ್ರಂದನ ಮುಗಿಲುಮುಟ್ಟಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv