Tag: HD Revanna

  • ಜೆಡಿಎಸ್‍ನ 20 ಶಾಸಕರು ರಾಜೀನಾಮೆಗೆ ಸಿದ್ಧ

    ಜೆಡಿಎಸ್‍ನ 20 ಶಾಸಕರು ರಾಜೀನಾಮೆಗೆ ಸಿದ್ಧ

    – ಕಣ್ಣೀರಿಡುತ್ತಾ ಅನರ್ಹ ಶಾಸಕ ನಾರಾಯಣಗೌಡ ಗುಡುಗು
    – ಡಿಕೆಶಿ ಜೈಲಿಗೆ ಹೋಗಲು ಗೌಡರೇ ಕಾರಣ

    ಮಂಡ್ಯ: ಮೈತ್ರಿ ಸರ್ಕಾರ ಉರುಳಿದ ಬಳಿಕ ದೋಸ್ತಿ ಪಕ್ಷ ಜೆಡಿಎಸ್‍ನಲ್ಲಿ ಎಲ್ಲವೂ ಸರಿ ಇಲ್ಲವೇ ಎಂಬ ಅನುಮಾನ ವ್ಯಕ್ತವಾಗಿತ್ತು. ಅಲ್ಲದೇ ಜೆಡಿಎಸ್ ಕೆಲ ಶಾಸಕರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಎಲ್ಲದರ ನಡುವೆಯೇ ಜೆಡಿಎಸ್ ರೆಬೆಲ್ ಶಾಸಕ ನಾರಾಯಣಗೌಡ ಅವರು ಜೆಡಿಎಸ್‍ನ 20 ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ನ 20 ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಪಕ್ಷದಲ್ಲಿ ಇಷೆಲ್ಲಾ ನಡೆಯಲು ಮಾಜಿ ಸಚಿವ ರೇವಣ್ಣ ಅವರೇ ಕಾರಣ. ಈ ಸಂದರ್ಭದಲ್ಲಿ ರಾಜೀನಾಮೆ ನೀಡಲು ಮುಂದಾಗಿರುವ ಶಾಸಕರ ಹೆಸರು ಹೇಳಲು ಸಾಧ್ಯವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುವುದು ಇದರಿಂದಲೇ ಗೊತ್ತಾಗುತ್ತದೆ. ನನ್ನಂತೆ ಇನ್ನು 20 ಶಾಸಕರು ಇದ್ದು, ಈ ಬಗ್ಗೆ ಸೂಕ್ಷ್ಮವಾಗಿ ಗಮನಹರಿಸಲು ರೇವಣ್ಣ ಅವರಿಗೆ ಸಲಹೆ ನೀಡುತ್ತೇನೆ. ನಾನು ಶಾಸಕನಾಗಿದ್ದಾಗ ರೇವಣ್ಣ ಅವರ ಜೊತೆ ಕೆಲಸ ಮಾಡಿಸಿಕೊಳ್ಳಲು ಹೋಗಿದ್ದೆ. ಆಗ ನನಗೆ ದನಕ್ಕೆ ಬೈಯ್ಯುವ ಹಾಗೆ ಬೈದಿದ್ದಾರೆ. ಅಭಿವೃದ್ಧಿ ಕೆಲಸ ಮಾಡಿಸಿಕೊಳ್ಳಲು ಹೋದಾಗ ಹೀಗೆ ಮಾಡಿದ್ದರು. ಅಲ್ಲದೇ ವಿಧಾನಸೌಧದಲ್ಲಿ ನನ್ನ ಬೈದ ಬಾಗಿಲು ಹಾಕಿಕೊಂಡರು. ಇದರಿಂದ ನನಗೆ ನೋವಾಗಿತ್ತು. ಮೈತ್ರಿ ಸರ್ಕಾರ ಬೀಳಲು ಮೂಲ ಕಾರಣ ರೇವಣ್ಣ ಎಂದರು.

    ನಾನು ಆ ಪಕ್ಷದಿಂದಲೇ ಶಾಸಕನಾಗಿ ಆಯ್ಕೆಯಾಗಿದ್ದ ಕಾರಣ ನಾನು ಈ ಸಲಹೆ ನೀಡುತ್ತಿದ್ದೇನೆ. ಜಿಟಿ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದಂತೆ 20 ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ನನ್ನ ಬಗ್ಗೆ ಹೀನಾಮಾನವಾಗಿ ಮೊನ್ನೆ ಮಾತನಾಡಿದ್ದಾರೆ. ಆದರೆ ನನಗೆ ಕಳೆದ 5 ವರ್ಷಗಳಿಂದ ನೋವು ಕೊಟ್ಟಿದ್ದಾರೆ. ಕಳೆದ ಚುನಾವಣೆಯಲ್ಲಿಯೂ ಬಿ ಫಾರಂ ನೀಡಲು ಸಾಕಷ್ಟು ನೋವು ಕೊಟ್ಟಿದ್ದರು. ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಅವರು ಸೇರಿದಂತೆ ಎಚ್‍ಡಿಡಿ ಕುಟುಂಬದ ಹೆಣ್ಣು ಮಕ್ಕಳು ನನಗೆ ನೋವು ಕೊಟ್ಟಿದ್ದಾರೆ. ಈ ಎಲ್ಲಾ ನೋವು ನುಂಗಿಕೊಂಡು ಅವರೊಂದಿಗೆ ಇದ್ದೆ.

    ದೇವೇಗೌಡರು ನಾನು ಒಕ್ಕಲಿಗನ ಹೊಟ್ಟೆಯಲ್ಲಿ ಹುಟ್ಟಿದ್ದೆ ತಪ್ಪಾಯಿತು. ನಾನು ಮುಸ್ಲಿಮರ ಹೊಟ್ಟೆಯಲ್ಲಿ ಹುಟ್ಟಬೇಕಿತ್ತು ದೇವೇಗೌಡರು ಹೇಳುತ್ತಾರೆ. ಆದರೆ ಒಂದು ಮರಿಬೇಡಿ, ನಿಮ್ಮನ್ನ ದೆಹಲಿಯಲ್ಲಿ ಕೂರಿಸಿದ್ದೇ ಒಕ್ಕಲಿಗರು. ಇದ್ದನ್ನು ನೀವೂ ಮರೆಯಬಾರದು. ನೀವು ಈ ಹೇಳಿಕೆ ನೀಡಿದ ಪ್ರತಿ ಬಾರಿ ನಮ್ಮ ಹೊಟ್ಟೆಯಲ್ಲಿ ಬೆಂಕಿ ಬಿದ್ದ ರೀತಿ ಆಗಿದೆ ಎಂದರು.

    ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳುಹಿಸಿದ್ದು, ಸಿದ್ದರಾಮಯ್ಯ ಅಥವಾ ಬಿಜೆಪಿ ಅವರು ಅಲ್ಲ. ಕಬ್ಬಿಣವನ್ನು ಕಬ್ಬಿಣವೇ ಕತ್ತರಿಸಿದೆ. ಸಮುದಾಯ ಬೆಳೆಯಬಾರದು ಎಂದು ಡಿಕೆಶಿ ಅವರಿಗೆ ಈ ರೀತಿ ಮಾಡಿದ್ದಾರೆ. ಆರು ಏಳು ವರ್ಷದಿಂದ ಡಿ.ಕೆ.ಶಿವಕುಮಾರ್ ಹಾಗೂ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ್ ಅವರ ಮೇಲೆ ಹುನ್ನಾರ ನಡೆಯುತ್ತಿತ್ತು. ಇಬ್ಬರನ್ನೂ ಜೈಲಿಗೆ ಕಳಿಸಬೇಕು ಅಂದು ಕೊಂಡಿದ್ದರು. ಈ ಕುರಿತ ಎಲ್ಲಾ ಸತ್ಯಾಂಶಗಳು ಸಮಯ ಬಂದಾಗ ಇದು ಹೊರಗೆ ಬರುತ್ತೆ ಎಂದು ಮಾರ್ಮಿಕವಾಗಿ ನುಡಿದರು.

    ಸುದ್ದಿಗೋಷ್ಠಿ ನಡೆಸುವ ವೇಳೆ ಭಾವನಾತ್ಮಕವಾಗಿ ಮಾತನಾಡಿದ ನಾರಾಯಣಗೌಡರು, ಮೈತ್ರಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ 800 ಕೋಟಿ ರೂ. ನೀಡಲಾಗಿದೆ ಎಂದು ಬರಿ ಘೋಷಣೆ ಮಾತ್ರ ಮಾಡಿದರು. ಆದರೆ ಸಿಎಂ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ನಾವು ಸಮಸ್ಯೆ ಹೇಳಿಕೊಳ್ಳಲು ಸಿಎಂ ಬಳಿ ತೆರಳಿದರೆ ಕಣ್ಣು ಹೊಡೆದು ನಾಳೆ ಬರುವಂತೆ ಹೇಳುತ್ತಿದ್ದರೇ ವಿನಃ ಸಮಸ್ಯೆ ಬಗೆಹರಿಸುತ್ತಿರಲಿಲ್ಲ. ಎಚ್‍ಡಿಕೆ ಹಾಗೂ ರೇವಣ್ಣ ಇಬ್ಬರು ಕುಟುಂಬ ಪ್ರಿಯರಾಗಿ ಅಭಿವೃದ್ಧಿಯನ್ನು ಮರೆತರು ಎಂದು ಆರೋಪಿಸಿದರು.

    ಯಡಿಯೂರಪ್ಪ ಅವರು ಹೇಳಿದ ಮಾತಿಗೆ ನಡೆದುಕೊಳ್ಳುತ್ತಾರೆ. ಹೇಳಿದ ಕೆಲಸ ಮಾಡುತ್ತಾರೆ. ಇದ್ದಕ್ಕಾಗಿ ನಾನು ಯಡಿಯೂರಪ್ಪ ಅವರ ಮನೆಗೆ ಹೋಗುತ್ತಿದ್ದೇನೆ ಅಷ್ಟೇ. ಆದರೆ ನೀವು ಎಷ್ಟೇ ನೋವು ಕೊಟ್ಟರು ನಾನು ಕೆ.ಆರ್.ಪೇಟೆ ತಾಲೂಕು ಬಿಟ್ಟು ಹೋಗಲ್ಲ. ಇನ್ನೊಬ್ಬ ಮಗಳ ಮದುವೆ ಬಾಕಿ ಇದ್ದು, ಈ ಕಾರ್ಯವನ್ನು ಮಾಡಿ ಇಲ್ಲೇ ಪ್ರಾಣ ಬಿಡುತ್ತೇನೆ ಎಂದು ಭಾವುಕರಾದರು.

    ಹಣ ಪಡೆದಿಲ್ಲ: ನಾನು ಬಿಜೆಪಿ ಜೊತೆ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ ಈ ಹಿಂದೆ ಅವರು ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ಹಣ ತೆಗೆದುಕೊಂಡಿದ್ದಾರೆಯೇ ಎಂದು ಉತ್ತರಿಸಬೇಕು. ಅವರು ಆಗ ಹಣ ಪಡೆದಿದ್ದರೆ. ಈಗ ನಾನು ತಗೊಂಡ ರೀತಿಯಾಗುತ್ತದೆ. ನನಗೆ ಮಾತ್ರವಲ್ಲದೇ ಪುಟ್ಟರಾಜ ಅಣ್ಣನಿಗೂ ನೋವು ಉಂಟುಮಾಡಿದ್ದಾರೆ. ನಾನು ಹೇಳಿಕೊಳ್ಳುತ್ತಿದ್ದೇನೆ, ಅವರು ಹೇಳಿಕೊಳ್ಳುತ್ತಿಲ್ಲ. ಅವರು ಎಲ್ಲಾ ನೋವನ್ನು ನುಂಗಿಕೊಂಡು ಓಡಾಡುತ್ತಿದ್ದಾರೆ ಎಂದರು.

  • ಕೆಎಂಎಫ್ ಅಧ್ಯಕ್ಷ ಸ್ಥಾನ ಜಾರಕಿಹೊಳಿಗೆ ಬಿಟ್ಟುಕೊಟ್ಟಿದ್ದೇವೆ: ಎಚ್.ಡಿ.ರೇವಣ್ಣ

    ಕೆಎಂಎಫ್ ಅಧ್ಯಕ್ಷ ಸ್ಥಾನ ಜಾರಕಿಹೊಳಿಗೆ ಬಿಟ್ಟುಕೊಟ್ಟಿದ್ದೇವೆ: ಎಚ್.ಡಿ.ರೇವಣ್ಣ

    ಹಾಸನ: ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷ ಸ್ಥಾನಕ್ಕೆ ಮನವಿ ಮಾಡಿದ ಹಿನ್ನೆಲೆ, ಅವರು ನಮ್ಮ ಪಕ್ಷದಲ್ಲೇ ಇದ್ದವರು. ಹೀಗಾಗಿ ಬಾಲಚಂದ್ರ ಅವರಿಗೆ ಬೆಂಬಲ ಸೂಚಿಸಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷ ಸ್ಥಾನದ ಕುರಿತು ಮಾಜಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಚುನಾವಣೆ ದಿನಾಂಕದಂದು ನನ್ನ ಅರ್ಜಿ ಮಾತ್ರ ಇತ್ತು. ಬಿಜೆಪಿಯವರಿಗೆ ಟಾರ್ಗೆಟ್ ಇರೋದು ದೇವೇಗೌಡರ ಕುಟುಂಬ. ಹೀಗಾಗಿ ಮುಖ್ಯಮಂತ್ರಿಗಳು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಕೆಎಂಎಫ್ ಚುನಾವಣೆಯ ಕಡತವನ್ನು ಕೈಗೆತ್ತಿಕೊಂಡು, ಚುನಾವಣೆಯನ್ನು ಮುಂದೂಡಿದರು. ಕುರಿಯನ್ ಅವರ ಮೇಲೆಯೇ ವಿಚಾರಣೆ ನಡೆಸಿದ್ದರು. ಇನ್ನು ನಾವು ಯಾವ ಲೆಕ್ಕ ಎಂದು ಸಿಎಂ ವಿರುದ್ಧ ಹರಿಹಾಯ್ದರು.

    ರಾಜಕಾರಣದಲ್ಲಿ ಯಾವುದಕ್ಕೂ ಅಂಜುವುದಿಲ್ಲ. ಅವರೇ ಅಧಿಕಾರ ಮಾಡಲಿ ಪಾಪ ಎಂದು ನಾನು ಬಿಟ್ಟುಕೊಟ್ಟಿದ್ದೇನೆ. ನಮ್ಮ ಕುಟುಂಬದಿಂದ ಯಾಕೆ ಅವರಿಗೆ ತೊಂದರೆ. ಹೀಗಾಗಿ ಅಧ್ಯಕ್ಷ ಸ್ಥಾನದ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ಅಧಿಕಾರದಲ್ಲಿದ್ದಾಗ ಏನು ಮಾಡಿದ್ದೇನೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ನಾನು ಡೈರಿಯಿಂದ ಒಂದು ಕಾಫಿಯನ್ನೂü ಕುಡಿದಿಲ್ಲ. ಡೈರಿ ಬೆಳವಣಿಗೆಗೆ ಕುರಿಯನ್ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕೊಡುಗೆ ಅಪಾರ ಎಂದು ಇದೇ ವೇಳೆ ತಿಳಿಸಿದರು.

    ದೇವೇಗೌಡರ ಕುಟುಂಬದಿಂದ ಈ ರಾಜ್ಯದ ಹಾಲು ಉತ್ಪಾದಕರಿಗೆ ನೋವಾಗಬಾರದು, ಚೆನ್ನಾಗಿರಬೇಕು ಎನ್ನುವುದು ನಮ್ಮ ಉದ್ದೇಶ. ದೇಶದಲ್ಲಿ ಹೈನುಗಾರಿಕೆ ಬೆಳವಣಿಗೆಗೆ ಕುರಿಯನ್ ಕಾರಣ. ಅವರ ವಿರುದ್ಧವೇ ತನಿಖೆ ಮಾಡಿದ್ದರು. ಡೈರಿ ಬೆಳವಣಿಗೆ ನಮ್ಮ ಕೊಡುಗೆ ಅಪಾರ ಎಂದು ವಿವರಿಸಿದರು.

    ದಕ್ಷಿಣ ಭಾರತದಲ್ಲಿ ಐಸ್ ಕ್ರೀಂ ಪ್ಲಾಂಟ್ ಬಂದಿದ್ದು ದೇವೇಗೌಡರ ಕಾಲದಲ್ಲಿ. ಚನ್ನರಾಯಪಟ್ಟಣದ ಚಿಲ್ಲಿಂಗ್ ಸೆಂಟರ್‍ನ್ನು ಹಾಸನಕ್ಕೆ ಸೇರಿಸಬಹುದಿತ್ತು, ಇಲ್ಲವೆ ಹೊಳೆನರಸೀಪುರಕ್ಕೆ ಹಾಕಿಕೊಳ್ಳಬಹುದಿತ್ತು. ಆದರೆ ನಾನು ಆ ರೀತಿ ಮಾಡಿಲ್ಲ. ದೇವೇಗೌಡರ ಕುಟುಂಬದಿಂದ ಅಧ್ಯಕ್ಷರಾಗಿ ಏನೋ ಆಗಬಹುದು ಎಂದು ಕೊಳ್ಳಬೇಡಿ, ಬಾಲಚಂದ್ರ ಅವರೂ ಅಧ್ಯಕ್ಷರಾಗಿ ಆಡಳಿತ ನಡೆಸಲಿ ಎಂದು ತಿಳಿಸಿದರು.

    ಚುನಾವಣೆ ಮುಂದೂಡಿದ ದಿನದಂದು ಕಚೇರಿ ರಾತ್ರಿಯವರೆಗೂ ನಡೆಯಿತು. ಹಾಸನದ ಯೂನಿಯನ್‍ನಿಂದ ಸಾಕಷ್ಟು ಹಣ ಕೆಎಂಎಫ್‍ಗೆ ತೊಡಗಿಸಿದ್ದೇವೆ. ಬಾಲಚಂದ್ರ ಅವರಿಗೆ ನನ್ನ ಬೆಂಬಲವಿದೆ. ನಮ್ಮನ್ನು ರಾಜಕೀಯವಾಗಿ ಯಾರು ಮುಗಿಸಲು ಸಾಧ್ಯವಿಲ್ಲ. ಇಂತಹದ್ದನ್ನೆಲ್ಲ ನೋಡಿ ಬಿಟ್ಟಿದ್ದೇವೆ. ಏನು ಬೇಕಾದರೂ ಮಾಡಲಿ ಎಂದು ದ್ವೇಷದ ರಾಜಕಾರಣದ ಕುರಿತು ಪ್ರತಿಕ್ರಿಯಿಸಿದರು. ಇದನ್ನೆಲ್ಲ ಎದುರಿಸಿ ಅಸಹಕಾರದಲ್ಲಿ ಉಳಿದಿದ್ದೀವೆ. ಹಿಂದೆ ದೇವೇಗೌಡರ ಕಥೆ ಮುಗಿದೇ ಹೋಯಿತು ಅಂದುಕೊಂಡಿದ್ದರು. ನಂತರ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆಗಲಿಲ್ಲವೇ? ನಮ್ಮ ಮೇಲೆ ಸಿಓಡಿ, ಲೋಕಾಯುಕ್ತ ಎಲ್ಲ ತನಿಖೆ ಮಾಡಿಸಿದರು ಏನೂ ಮಾಡಲು ಸಾಧ್ಯವಾಗಲಿಲ್ಲ. ದ್ವೇಷದ ರಾಜಕಾರಣ ಮಾಡಲ್ಲ ಎಂದು ಹೇಳಿದ್ದರು. ಈಗ ಅದನ್ನೇ ಮಾಡುತ್ತಿದ್ದಾರೆ. ಏನು ಮಾಡಿದ್ದಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ ಎಂದರು.

    ಸಿದ್ದರಾಮಯ್ಯನವರಷ್ಟು ಅನುಭವ ಇಲ್ಲ:
    ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನ ವೇಶ್ಯೆಯರಿಗೆ ಹೋಲಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವುದಿಲ್ಲ. ಅವರಷ್ಟು ಅನುಭವ, ಬುದ್ಧಿ ನಮಗಿಲ್ಲ. ಸರ್ಕಾರ ಬಿದ್ದು ಹೋಗಿದೆ. ಈಗ ಯಾಕೆ ಪೋಸ್ಟ್ ಮಾರ್ಟಮ್. ಅಲ್ಲದೆ, ಸಿದ್ದರಾಮಯ್ಯನವರು ನೆರೆ ಹಾವಳಿ ಪ್ರದೇಶಗಳಿಗೆ ಭೇಟಿ ನೀಡುವುದಕ್ಕೂ ಮುನ್ನ ನಾನು ಹೋಗಿದ್ದೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದರು.

  • ಕೆಎಂಎಫ್ ಅಧ್ಯಕ್ಷ ಚುನಾವಣೆ- ಬಾಲಚಂದ್ರ ಜಾರಕಿಹೊಳಿ ಆಯ್ಕೆ ಬಹುತೇಕ ಖಚಿತ

    ಕೆಎಂಎಫ್ ಅಧ್ಯಕ್ಷ ಚುನಾವಣೆ- ಬಾಲಚಂದ್ರ ಜಾರಕಿಹೊಳಿ ಆಯ್ಕೆ ಬಹುತೇಕ ಖಚಿತ

    ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಚುನಾವಣೆಯ ಹಿನ್ನೆಲೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕವಾಗಿ ಖಚಿತವಾಗಿದೆ.

    ಸುಮಾರು 11 ನಿರ್ದೇಶಕರು ಬಾಲಚಂದ್ರ ಜಾರಕಿಹೊಳಿ ಬೆಂಬಲಕ್ಕೆ ನಿಂತಿದ್ದಾರೆ. ಕಾಂಗ್ರೆಸ್ ಬೆಂಬಲಿತ 6, ಜೆಡಿಎಸ್ 1, ಬಿಜೆಪಿಯ ಓರ್ವ ನಿರ್ದೇಶಕರು ಸೇರಿದಂತೆ ಮೂವರು ಅಧಿಕಾರಿಗಳ ಬೆಂಬಲ ಜಾರಕಿಹೊಳಿಗೆ ಇದೆ. ಈ ಮೂಲಕ ಒಟ್ಟು 12 ಮತಗಳು ಬಾಲಚಂದ್ರ ಬಳಿಯಿವೆ.

    ಜುಲೈ 29 ರಂದು ನಡೆಯಬೇಕಾದ ಚುನಾವಣೆ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ಬಾಲಚಂದ್ರ ಜಾರಕಿಹೊಳಿಗೆ ಈ ಅದೃಷ್ಟ ಒಲಿದು ಬಂದಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ರೇವಣ್ಣ ಅವರಿಗೆ ಬೆಂಬಲ ಇಲ್ಲದ ಪರಿಣಾಮ ನಾಮಪತ್ರ ವಾಪಸ್ ಪಡೆಯುವ ಸಾಧ್ಯತೆಯಿದೆ.

    ಈಗಾಗಲೇ ಕಳೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿರುವ ರೇವಣ್ಣ ಅವರ ನಾಮಪತ್ರವನ್ನು ಈ ಚುನಾವಣೆಯಲ್ಲಿ ಪರಿಗಣಿಸಲಾಗುವುದು. ಹೊಸದಾಗಿ ನಾಮಪತ್ರ ಸಲ್ಲಿಸಬೇಕು ಎಂದೇನಿಲ್ಲ. ರೇವಣ್ಣರವರು ನಾಮಪತ್ರ ಹಿಂಪಡೆದರೆ ಬಾಲಚಂದ್ರ ಜಾರಕಿಹೋಳಿಯವರು ಅವಿರೋಧ ಆಯ್ಕೆಯಾಗುತ್ತಾರೆ. ನಾಮಪತ್ರ ಹಿಂಪಡೆಯದೆ ಇದ್ದರೆ ಎಂದಿನಂತೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಸೀಕ್ರೆಟ್ ವೋಟಿಂಗ್ ಮಾಡಲಾಗುತ್ತದೆ. ಬ್ಯಾಲೆಟ್ ಮೂಲಕ ಮತದಾನ ಪ್ರಕ್ರಿಯೆ ಆಗುತ್ತದೆ ಎಂದು ಚುನಾವಣಾಧಿಕಾರಿ ರವಿ ಕುಮಾರ್ ಹೇಳಿದ್ದಾರೆ.

    ಇದೇ ವೇಳೆ ಬೆಂಗಳೂರು ಡೈರಿ ಅಧ್ಯಕ್ಷ ಆನಂದ್ ಕುಮಾರ್ ಪ್ರತಿಕ್ರಿಯಿಸಿ, ಡಿಕೆಶಿ ನಿರ್ದೇಶನದಂತೆ ನಾವೆಲ್ಲ ನಡೆಯುತ್ತಿದ್ದೇವೆ. ಸರ್ಕಾರ ಯಾವುದು ಇದೆಯಾ ಹಾಗೆಯೇ ಕೇಳಿ. ಸಂಸ್ಥೆಯ ಬೆಳವಣಿಗೆ ಮುಖ್ಯ ಎಂದು ಪಕ್ಷದಿಂದ ಸೂಚನೆ ಸಿಕ್ಕಿದೆ. ಹೀಗಾಗಿ ಸದ್ಯ ನಾವು ಸರ್ಕಾರ ಜಾರಕಿಹೊಳಿ ಅವರನ್ನ ಸೂಚಿಸಿದೆ. 13 ಜನ ನಿರ್ದೇಶಕರು ಜಾರಕಿಹೊಳಿ ಪರ ಇದ್ದೇವೆ. ಯಾವುದೇ ಅನುಮಾನ ಬೇಡ ಮತದಾನವಾದ್ರೂ ಗೆಲ್ಲಿಸುತ್ತೇವೆ. ಯಾವುದೇ ಆಮಿಷ ಬಿಜೆಪಿ ಒಡ್ಡಿಲ್ಲ. ಮಾರುತಿ ಕಾಶಂಪೂರ್, ಭೀಮಾನಾಯ್ಕ್, ರೇವಣ್ಣ ಮಾತ್ರ ಬೇರೆಯಾಗಿದ್ದಾರೆ. ಉಳಿದಂತೆ ಎಲ್ಲರೂ ಜಾರಕಿಹೊಳಿ ಪರ ಇದ್ದೇವೆ ಎಂದರು.

    ಬಿಜೆಪಿಯಿಂದ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ನಾನು ನಾಮಪತ್ರ ಸಲ್ಲಿಸುತ್ತೇನೆ. 13 ನಿರ್ದೇಶಕರು ನನ್ನ ಬಳಿಯಿದ್ದಾರೆ ನನ್ನನ್ನು ಬೆಂಬಲಿಸಿದ್ದಾರೆ. ಭೀಮಾನಾಯ್ಕ ಮತ್ತು ರೇವಣ್ಣನವರು ಸಹಕಾರ ಕೋರುತ್ತೇನೆ. ಮಧ್ಯಾಹ್ನ 1 ಗಂಟೆವರೆಗೆ ಚುನಾವಣೆ ನಡೆಯಲಿದೆ. ನಾನು ಅವಿರೋಧವಾಗಿ ಆಯ್ಕೆಯಾಗುತ್ತೇನೆ. ಎಚ್.ಡಿ.ರೇವಣ್ಣ ಹಿಂದೆ ನಾಮಪತ್ರ ಸಲ್ಲಿಸಿದ್ದಾರೆ. ಅವರ ಸಹಕಾರದಿಂದ ಅವಿರೋಧವಾಗಿ ಆಯ್ಕೆಯಾಗುವ ವಿಶ್ವಾಸವಿದೆ ಎಂದರು.

    ಇತ್ತ ಜಾರಕಿಹೊಳಿಗೆ ಬೆಂಬಲಿಸಿ ಶಾಸಕ ಭೀಮಾನಾಯ್ಕ್ ನಾಮಪತ್ರ ಸಲ್ಲಿಸದಿರಲು ತೀರ್ಮಾನ ಮಾಡಿದ್ದಾರೆ. ಈ ಮೂಲಕ ಭೀಮಾನಾಯಕ್ ಅಧ್ಯಕ್ಷರಾಗೋದನ್ನು ತಪ್ಪಿಸಿದ್ದ ಹೆಚ್ ಡಿ ರೇವಣ್ಣಗೆ ಟಾಂಗ್ ನೀಡಿದ್ದಾರೆ ಎನ್ನಲಾಗಿದೆ. ಕೆಎಂಎಫ್ ಚುನಾವಣೆಯಲ್ಲಿ 17 ಮತ ಚಲಾವಣೆಯಾಗಲಿದ್ದು, ಅದರಲ್ಲಿ 13 ಹಾಲು ಒಕ್ಕೂಟಗಳ ಅಧ್ಯಕ್ಷರು ಸಹಕಾರ ಸಂಘಗಳ ನಿಬಂಧಕರು, ಪಶು ಮತ್ತು ಮಿನುಗಾರಿಕಾ ಇಲಾಖೆ ಕಾರ್ಯದರ್ಶಿಗಳು ಮತ ಚಲಾಯಿಸಲಿದ್ದಾರೆ.

    ಜುಲೈ 29 ಕ್ಕೆ ಮುಂದೂಡಲಾಗಿದ್ದ ಚುನಾವಣೆಯನ್ನ ಅದೇ ಹಂತದಿಂದ ಮುಂದುವರಿಸುವಂತೆ ನ್ಯಾಯಾಲಯದ ಆದೇಶಿಸಿದೆ. ಮಧ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದೆ. 1 ಗಂಟೆಯಿಂದ 1:10 ನಿಮಿಷದವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. 1:10 ರಿಂದ 1:40 ರವರೆಗೆ ನಾಮಪತ್ರ ವಾಪಸ್ ಪಡೆಯಲು ಕಾಲವಕಾಶ ನೀಡಲಾಗಿದೆ. ನಂತರ ಅಗತ್ಯ ಬಿದ್ದರೆ ಚುನಾವಣೆ ನಡೆಯಲಿದ್ದು, ಇಲ್ಲದಿದ್ದರೆ ಅವಿರೋಧ ಆಯ್ಕೆ ನಡೆಯಲಿದೆ.

  • ಸರ್ಕಾರದಿಂದ ಹಾಸನ ಜಿಲ್ಲೆ ಸಂಪೂರ್ಣ ಕಡೆಗಣನೆ – ರೇವಣ್ಣ ಕಿಡಿ

    ಸರ್ಕಾರದಿಂದ ಹಾಸನ ಜಿಲ್ಲೆ ಸಂಪೂರ್ಣ ಕಡೆಗಣನೆ – ರೇವಣ್ಣ ಕಿಡಿ

    ಹಾಸನ: ನಾವು ಈ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಬೆಂಬಲ ನೀಡುತ್ತೇವೆ. ಆದರೆ ದ್ವೇಷದ ರಾಜಕಾರಣ ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡೋದು ನಮಗೂ ಗೊತ್ತಿದೆ ಎಂದು ಮಾಜಿ ಸಚಿವ ಜೆಡಿಎಸ್ ನಾಯಕ ಹೆಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಹದಿಂದ ಅಪಾರ ಬೆಳೆಹಾನಿಯಾಗಿದೆ. ಒಟ್ಟಾರೆಯಾಗಿ ನಮ್ಮ ಜಿಲ್ಲೆಯಲ್ಲಿ 590 ಕೋಟಿ ನಷ್ಟವಾಗಿದೆ. ಪ್ರವಾಹ ಬಂದು 20 ದಿನಗಳು ಕಳೆದರೂ ಪರಿಹಾರ ಸರಿಯಾಗಿ ಬಂದಿಲ್ಲ. ಈ ರಾಜ್ಯದಲ್ಲಿ ಈ ಹಾಸನ ಜಿಲ್ಲೆಯನ್ನ ಸಂಪೂರ್ಣ ಕಡೆಗಣಿಸಲಾಗಿದೆ ಎಂದು ರಾಜ್ಯ ಸರ್ಕಾರ ಮೇಲೆ ಗುಡುಗಿದರು.

    ನಾವು ಈ ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಬೆಂಬಲ ನೀಡುತ್ತೇವೆ. ಆದರೆ ದ್ವೇಷದ ರಾಜಕಾರಣ ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡುವುದು ನಮಗೂ ಗೊತ್ತಿದೆ. ಮುಖ್ಯ ಮಂತ್ರಿಗಳಿಗೆ ಸಮಯಾವಕಾಶ ಕೊಡೋಣ, ಅವರೂ ಪಾಪ ಕ್ಯಾಬಿನೆಟ್ ರಚನೆ ಮಾಡೋದರಲ್ಲಿ ಬ್ಯುಸಿ ಇದ್ದಾರೆ ಎಂದು ಸುಮ್ಮನಿದ್ದೆ. ಆದರೆ ಈಗ ಪ್ರವಾಹದಿಂದ ಬೀದಿ ಪಾಲಾದ ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲಿ. ಆಮೇಲೆ ಬೇಕಾದರೆ ಇತರೆ ಕೆಲಸಮಾಡಲಿ. ಸರ್ಕಾರ ಟೇಕ್ ಆಫ್ ಆಗಿದ್ಯಾ ಆಫ್ ಸೈಕಲ್ ಅಗಿದ್ಯಾ ಅದೆಲ್ಲ ನನಗೆ ಗೊತ್ತಿಲ್ಲ ಎಂದು ಹೇಳಿದರು.

    ನಮ್ಮ ಜಿಲ್ಲೆಯಲ್ಲಿ 590 ಕೋಟಿ ನಷ್ಟ ಆಗಿದೆ. ರಸ್ತೆಗಳು, ಕಟ್ಟಡಗಳು ಮತ್ತು ಕೃಷಿಕರ ಭೂಮಿ ಸೇರಿ ಅಪಾರ ನಷ್ಟವಾಗಿದೆ. 8000 ಎಕ್ರೆ ತೋಟಗಾರಿಕೆಯ ಪ್ರದೇಶ ಹಾಳಾಗಿ ಒಟ್ಟು 190 ಕೋಟಿ ನಷ್ಟವಾಗಿದೆ. ಆದರೆ ಎನ್‍ಡಿಆರ್‍ಎಫ್ ಪ್ರಕಾರ ಕೇವಲ ಒಂಬತ್ತು ಕೋಟಿ ಅಂತಾರೆ. ಒಟ್ಟಾರೆ ಜಿಲ್ಲೆಯ ಇಪ್ಪತ್ತೈದು ಸಾವಿರ ಎಕ್ರೆ ಪ್ರದೇಶದಲ್ಲಿ ನಷ್ಟವಾಗಿದೆ. ಅದನ್ನು ಪರಿಶೀಲಿಸಿ ರೈತರ ಹಿತದೃಷ್ಟಿಯಿಂದ ಕ್ರಮಕೈಗೊಳ್ಳಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.

    ಕೆಲವರು ಕುಮಾರಸ್ವಾಮಿ ಮತ್ತು ದೇವೇಗೌಡರು ಜಿಲ್ಲೆಗೆ ಏನೂ ಮಾಡಿದ್ದಾರೆ ಎಂದು ಕೇಳುತ್ತಾರೆ. ಅವರಿಗೆ ಗೊತ್ತಿಲ್ಲ ಈ ಹಿಂದೆ ನಮ್ಮ ಜಿಲ್ಲೆಯನ್ನು 10 ವರ್ಷಗಳ ಕಾಲ ಕಡೆಗಣಿಸಲಾಗಿತ್ತು ಕೇವಲ ತೋಟಗಾರಿಕೆಗೆ ಸಂಬಂಧ ಪಟ್ಟ ಹಣವನ್ನು ನಮ್ಮ ಜಿಲ್ಲೆಗೆ ನೀಡಿರಲಿಲ್ಲ. ಕುಮಾರಸ್ವಾಮಿ ಸಿಎಂ ಆದ ನಂತರ 22 ಲಕ್ಷ ನಾಶವಾದ ತೆಂಗಿನ ಬೆಳೆಗೆ 200 ಕೋಟಿ ಪರಿಹಾರ ಕೊಟ್ಟಿದ್ದರು. ಹತ್ತು ವರ್ಷ ನಮ್ಮ ಜಿಲ್ಲೆಯಲ್ಲಿ ಏನೇ ಆದರೂ ರೈತರ ಯಾವ ಸಮಸ್ಯೆಗಳಿಗೂ ಪರಿಹಾರ ನೀಡಲಿಲ್ಲ. ಪರಿಹಾರ ನೀಡಲು ಕುಮಾರಸ್ವಾಮಿ ಸರ್ಕಾರ ಬರಬೇಕಾಯಿತು. ನಮ್ಮ ಸರ್ಕಾರ ಇದ್ದಾಗ ಮಾಡಿದ್ದನ್ನು ಮುಂದಿನ ದಿನಗಳಲ್ಲಿ ಎಳೆ ಎಳೆಯಾಗಿ ವಿವರಿಸುತ್ತೇನೆ ಎಂದು ಹೇಳಿದರು.

  • ಸ್ವಕ್ಷೇತ್ರದ ಮೇಲಿನ ಪ್ರೀತಿಯಿಂದ ಸಚಿವ ಸಂಪುಟ ವಿಳಂಬ – ರೇವಣ್ಣ ಬಾಂಬ್

    ಸ್ವಕ್ಷೇತ್ರದ ಮೇಲಿನ ಪ್ರೀತಿಯಿಂದ ಸಚಿವ ಸಂಪುಟ ವಿಳಂಬ – ರೇವಣ್ಣ ಬಾಂಬ್

    ಹುಬ್ಬಳ್ಳಿ: ಆಪರೇಷನ್ ಕಮಲ ವಿಚಾರ ಕುರಿತಂತೆ ತನಿಖೆ ಮಾಡಬೇಡಿ ಎಂದು ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದರು. ಹೀಗಾಗಿ ನಾವು ಅದರ ತನಿಖೆ ಮಾಡಲಿಲ್ಲ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸೇರಿ ಮೂರ್ನಾಲ್ಕು ಜನ ಆಪರೇಷನ್ ಕಮಲದ ಕುರಿತು ತನಿಖೆ ಮಾಡಬೇಡಿ ಎಂದು ಮನವಿ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಶಿವಮೊಗ್ಗ ಹಾಗೂ ಶಿಕಾರಿಪುರಕ್ಕೆ ಎರಡು ಸಾವಿರ ಕೋಟಿ ರೂಪಾಯಿ ಅನುದಾನ ಕೊಡಬೇಕಾಗಿತ್ತು. ಹೀಗಾಗಿ ಸಚಿವ ಸಂಪುಟ ವಿಳಂಬ ಮಾಡಿದ್ದಾರೆ. ಶಿಕಾರಿಪುರ ಏತ ನೀರಾವರಿಯೊಂದಕ್ಕೆ 850 ಕೋಟಿ ರೂ. ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಎರಡು ಸಾವಿರ ಕೋಟಿ ರೂ ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಇಷ್ಟೊಂದು ನಷ್ಟವಾಗಿದ್ದರೂ ಅನುದಾನಕ್ಕೆ ದುಡ್ಡಿಲ್ಲ. ತಮ್ಮ ಕ್ಷೆತ್ರಕ್ಕೆ ಹಣ ನೀಡಲು ಮಾತ್ರ ಅವರ ಖಜಾನೆ ತುಂಬಿದೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

    ಸಮ್ಮಿಶ್ರ ಸರಕಾರದಲ್ಲಿ ರಾಮನಗರ, ಹಾಸನ, ಮಂಡ್ಯ ಭಾಗಗಳಿಗೆ ನೂರಾರು ಕೋಟಿ ರೂಪಾಯಿ ಕೊಟ್ಟಿದನ್ನೇ ದೊಡ್ಡ ದೊಡ್ಡ ರಾದ್ದಾಂತ ಮಾಡಿದರು. ಕೇವಲ 22 ದಿನದಲ್ಲಿ ಸುಮಾರು 2000 ಕೋಟಿ ರೂ. ಹಣ ನೀಡಿದ್ದಾರೆ. ನಮ್ಮ ಅವಧಿಯಲ್ಲಿ ನಮ್ಮ ಭಾಗಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಗೆ ನೀಡಿದ ಅನುದಾನ ಕುರಿತು ಚರ್ಚೆಗೆ ಸಿದ್ಧ ಎಂದು ತಿಳಿಸಿದರು.

    ಯಡಿಯೂರಪ್ಪ ಹಾಗೂ ಈಶ್ವರಪ್ಪ ಅಳಿಯರಿಂದ ಎಷ್ಟು ಹಣ ಪಡೆದಿದ್ದೇನೆ? ಅವರು ಕೇಳಿದವರನ್ನೇ ಅವರ ಜಿಲ್ಲೆಗೆ ಕೊಟ್ಟಿದ್ದೇನೆ. ಅವರು ಕೊಟ್ಟಿರುವ ಶಿಫಾರಸು ಪತ್ರಗಳ ಬಂಡಲ್ ನನ್ನ ಬಳಿಯಿದೆ. ಯಡಿಯೂರಪ್ಪ ಅವರ ಆಡಿಯೋ ಬಿಡುಗಡೆಯಾದಾಗ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರೆ ಬಿಜೆಪಿ ನಾಯಕರು ಬಂದು ದ್ವೇಷದ ರಾಜಕಾರಣ ಬೇಡ ಎಂದು ಮನವಿ ಮಾಡಿದರು. ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕ್ಷಣದಿಂದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಫೋನ್ ಕದ್ದಾಲಿಕೆ ಸಿಬಿಐ ಸೇರಿದಂತೆ ಇತರೆ ಯಾವುದೇ ತನಿಖೆ ನೀಡಲಿ. ಯಾವುದಕ್ಕೂ ಹೆದರುವ ಪ್ರಶ್ನೆಯಿಲ್ಲ ಎಂದು ಖಡಕ್ಕಾಗಿ ತಿಳಿಸಿದರು.

    ಬಿ ಎಸ್ ಯಡಿಯೂರಪ್ಪ ಅವರು ಏಕಾಂಗಿಯಾಗಿ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ. ಪಾಪ ಅವರೊಬ್ಬರೇ ಓಡಾಡಿದ್ದಾರೆ. ಈವಾಗ ಮಂತ್ರಿ ಮಂಡಳ ವಿಸ್ತರಣೆ ಮಾಡಿದ್ದಾರೆ. ಈಗಲಾದರೂ ಈ ಭಾಗದ ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರ ಕೈಯಲ್ಲಿ ಇವೆ. ಜೆಡಿಎಸ್ ಪಕ್ಷವನ್ನು ಮುಳುಗುತ್ತದೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ಅಂದುಕೊಂಡಿದ್ದವೆ. ಆದರೆ ನಾವು ಜನರ ನಡುವೆ ಕೆಲಸ ಮಾಡುತ್ತೇವೆ. ಮಂಡ್ಯ ಚುನಾವಣೆಯಲ್ಲಿ ನಮನ್ನು ಯಾರು ಸೋಲಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಾವು ಯಾವುದೇ ಚಕಾರ ಎತ್ತಿಲ್ಲ. ದೇವೇಗೌಡರು ಈ ರೀತಿಯ ರಾಜಕೀಯ ನೋಡಿದ್ದಾರೆ. ನಾವು ಯಾವುದೇ ತನಿಖೆಗೆ ತಲೆಕೆಡಿಸಿಕೊಂಡಿಲ್ಲ ಎಂದರು.

  • ಬಿಸ್ಕೆಟ್ ಎಸೆದಿದ್ದನ್ನೇ ವಿವಾದ ಮಾಡಿದವರು ಹೇಗೆ ಪ್ರವಾಹ ನಿಭಾಯಿಸುತ್ತಾರೋ ನೋಡಬೇಕಿದೆ – ರೇವಣ್ಣ

    ಬಿಸ್ಕೆಟ್ ಎಸೆದಿದ್ದನ್ನೇ ವಿವಾದ ಮಾಡಿದವರು ಹೇಗೆ ಪ್ರವಾಹ ನಿಭಾಯಿಸುತ್ತಾರೋ ನೋಡಬೇಕಿದೆ – ರೇವಣ್ಣ

    ನವದೆಹಲಿ: ದೂರದಲ್ಲಿದ್ದ ಜನರಿಗೆ ನಾನು ಬಿಸ್ಕೆಟ್ ಎಸೆದಿದ್ದನ್ನು ವಿವಾದ ಮಾಡಿದ್ದರು. ಇದೀಗ ಅವರು ಹೇಗೆ ಪ್ರವಾಹ ಪರಿಸ್ಥಿತಿ ನಿಭಾಯಿಸುತ್ತಾರೋ ಕಾದು ನೋಡೋಣ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಹರಿಹಾಯ್ದಿದ್ದಾರೆ.

    ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರವಾಹ ಪರಿಸ್ಥಿತಿ ಎದುರಿಸಲು ಕೂಡಲೇ ಸರ್ಕಾರ ಕಾರ್ಯ ಪ್ರವೃತ್ತವಾಗಬೇಕು. ಹಾನಿಗೊಳಗಾದ ರೈತರಿಗೆ ಕೂಡಲೇ ಪರಿಹಾರ ನೀಡಬೇಕು. ಇದನ್ನು ಹೊರತು ಪಡಿಸಿ ರಾಜ್ಯ ಸರ್ಕಾರದ ಕಾರ್ಯ ವೈಖರಿ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಆ ಭಾಗದ ಜನರೇ ಈ ಕುರಿತು ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

    ಕಳೆದ ಬಾರಿ ಮಡಿಕೇರಿ ಭಾಗದಲ್ಲಿ ಪ್ರವಾಹ ಉಂಟಾದಾಗ ದೂರದಲ್ಲಿ ಇದ್ದ ಜನರಿಗೆ ನಾನು ಬಿಸ್ಕೆಟ್ ಎಸೆದಿದ್ದನ್ನೇ ವಿವಾದ ಮಾಡಿದ್ದರು. ನಾನು ಇದೀಗ ಆ ರೀತಿಯ ವಿವಾದ ಮಾಡಲು ಹೋಗುವುದಿಲ್ಲ. ಸಂಪುಟ ರಚನೆ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ಸಂಪುಟ ರಚನೆ ಮಾಡುವುದು ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಹೇಳಿದ್ದಾರೆ.

    ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ಸಚಿವ ಸಂಪುಟದ ಕುರಿತು ನಿರ್ಧರಿಸಲಿದೆ. ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿ ಆಡಿದ ಮಾತಿಗೆ ತಕ್ಕಂತೆ ನಡೆದುಕೊಳ್ಳಲಿ. ಸರ್ಕಾರದಲ್ಲಿ ಕುಮಾರಸ್ವಾಮಿಯವರು ಉಳಿಸಿರುವ ಹಣದಲ್ಲೇ ಪ್ರವಾಹ ಪರಿಸ್ಥಿತಿ ನಿಭಾಯಿಸಲಿ ಎಂದು ಸಲಹೆ ನೀಡಿದರು.

  • 1 ಲೀಟರ್ ಹಾಲು ಹಾಕಿಲ್ಲ, ಭೀಮಾನಾಯ್ಕ್ ಅಧ್ಯಕ್ಷರಾಗ್ತಾರೆ ಅಂತಾ ನಾ ಹೇಳಿದ್ನಾ – ರೇವಣ್ಣ ಗುಡುಗು

    1 ಲೀಟರ್ ಹಾಲು ಹಾಕಿಲ್ಲ, ಭೀಮಾನಾಯ್ಕ್ ಅಧ್ಯಕ್ಷರಾಗ್ತಾರೆ ಅಂತಾ ನಾ ಹೇಳಿದ್ನಾ – ರೇವಣ್ಣ ಗುಡುಗು

    ಬೆಂಗಳೂರು: ಕೆಎಂಎಫ್‍ಗೂ ಮೈತ್ರಿ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಕುಮಾರಸ್ವಾಮಿ ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದು ಮಾಜಿ ಸಚಿವ ರೇವಣ್ಣ ಗುಡುಗಿದ್ದಾರೆ.

    ಕೆಎಂಎಫ್ ಚುನಾವಣೆಯನ್ನು ದಿಢೀರ್ ಮುಂದೂಡಿಕೆ ಮಾಡಿದ ಹಿನ್ನೆಲೆಯಲ್ಲಿ ರೇವಣ್ಣ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಭೀಮಾನಾಯ್ಕ್ ಅಧ್ಯಕ್ಷರಾಗುತ್ತಾರೆ ಎಂಬ ಮಾತು ಕೊಟ್ಟಿದ್ದಾರೆ ಎನ್ನುವ ಪ್ರಶ್ನೆಗೆ, ಆತ ಸೊಸೈಟಿಗೆ 1 ಲೀಟರ್ ಹಾಲನ್ನೇ ಹಾಕಿಲ್ಲ. ಆತನಿಗೆ ಯಾರು ಅಧ್ಯಕ್ಷರಾಗಿ ಮಾಡುತ್ತಾರೆ ಎಂದು ಮಾತುಕೊಟ್ಟಿದ್ದಾರೆ? ಭೀಮಾನಾಯ್ಕ್ ಯಾವ ಪಕ್ಷದವರು, ಆದ್ರೆ ಅವರು ಯಡಿಯೂರಪ್ಪ ಅವರ ಮನೆ ಮುಂದೇ ಹೋಗಿ ನಿಂತಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಆರ್ಥೈಸಿಕೊಳ್ಳಬೇಕಿದೆ ಎಂದರು.

    ಕಳೆದ 3 ತಿಂಗಳಿಂದ ಚುನಾವಣೆ ಪ್ರಕ್ರಿಯೆ ನಡೆಯುತಿತ್ತು, ಜು.15 ರಿಂದ 30ರ ಒಳಗೆ ಎಲ್ಲಾ ಒಕ್ಕೂಟದ ಚುನಾವಣೆ ಆಗಬೇಕು ಎಂದು ನೋಟಿಸ್ ನೀಡಲಾಗಿತ್ತು. ಇಂದು ನಡೆಯಬೇಕಾಗಿದ್ದ ಅಧ್ಯಕ್ಷರ ಚುನಾವಣೆಯನ್ನು ಮುಂದೂಡಲಾಗಿದೆ. ಆದರೆ ಯಾವ ಕಾರಣಕ್ಕೆ ಮುಂದೂಡಿದ್ದಾರೆ ಎನ್ನುವುದು ಗೊತ್ತಿಲ್ಲ. ನಾನು ಯಾವ ಸದಸ್ಯರನ್ನು ಹೈಜಾಕ್ ಮಾಡಿಲ್ಲ. ಎಲ್ಲ ಸದಸ್ಯರು ಇಲ್ಲೇ ಇದ್ದು, ಅವರನ್ನೇ ಕೇಳಿ ಎಂದರು.

    ಮೈತ್ರಿ ಸರ್ಕಾರ ಹಂತದಲ್ಲಿ ಈ ಸ್ಥಾನ ಕಾಂಗ್ರೆಸ್‍ಗೆ ಬಿಟ್ಟುಕೊಡಲಾಗಿತಂತೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಹಕಾರ ಕ್ಷೇತ್ರದಲ್ಲಿ ಯಾವ ಪಕ್ಷವೂ ಬರುವುದಿಲ್ಲ. ಇದರಲ್ಲಿ ಕುಮಾರಸ್ವಾಮಿ ಅವರಿಗೂ ಸಂಬಂಧವಿಲ್ಲ. ನಾನು ಯಾವತ್ತಾದ್ರೂ ಮಾತು ಕೊಟ್ಟಿದ್ದೀನಾ ಎಂದರು. ಅಲ್ಲದೇ ರಾಜ್ಯದಲ್ಲಿ ಒಟ್ಟು 14 ಒಕ್ಕೂಟಗಳು ಇದ್ದು, ಮಂಡ್ಯ ಒಕ್ಕೂಟ ಸೂಪರ್ ಸೀಡ್ ಆಗಿದೆ. 4 ಬಾರಿ ಬೋರ್ಡ್ ಮೀಟಿಂಗ್ ಆಗಿದ್ದು ಎಲ್ಲವೂ ಸರಿ ಆಗಿಲ್ಲ. ಇನ್ನೊಂದು ತುಮಕೂರು ಒಕ್ಕೂಟ ಎರಡು ನಾಮಿನೇಷನ್ ಅನರ್ಹ ಮಾಡಲಾಗಿದೆ. ಈಗಲೂ ನಮ್ಮ ಹತ್ತಿರ 8 ನಿರ್ದೇಶಕರ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.

    ಈ ನಡುವೆ ಆನಂದ್ ಕುಮಾರ್ ಎಂಬ ಡೈರಕ್ಟರ್ ಅವರನ್ನು ಅಮಾನತು ಮಾಡಿದ್ದಾರೆ. ಸಿಎಂ ದ್ವೇಷದ ರಾಜಕಾರಣ ಮಾಡಲ್ಲ ಎನ್ನುತ್ತಾರೆ. ಆದರೆ ಈಗ ಮಾಡಿರುವುದು ಏನು? ಇವತ್ತು ಎಲೆಕ್ಷನ್ ನಡೆದಿದ್ದರೆ ನಾವು ಗೆಲುವು ಸಿಗುತಿತ್ತು ಎನ್ನುವ ಒಂದೇ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ನಾನು ಅಧ್ಯಕ್ಷ ಎಂದು ಇಲ್ಲಿ ಬಂದು ಕುಳಿತಿಲ್ಲ. ಮಧ್ಯಾಹ್ನ ಒಂದು ಗಂಟೆಗೆ ಮೀಟಿಂಗ್ ಇತ್ತು ಆದ್ದರಿಂದ ಬಂದೆ ಅಷ್ಟೇ. ಆದರೆ ಇಲ್ಲಿ ಚುನಾವಣೆಯನ್ನೇ ಮುಂದೂಡಲಾಗಿದೆ ಎಂದರು.

    ಇದೇ ವೇಳೆ ಮಾತನಾಡಿದ ಧಾರವಾಡ ಹಾಲು ಉತ್ಪಾದಕ ಒಕ್ಕೂಟದ ನಿರ್ದೇಶಕ ಹೀರೇಗೌಡ ಅವರು, ರೇವಣ್ಣ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ ಎಂದು ಹೈಜಾಕ್ ಆರೋಪವನ್ನು ನಿರಾಕರಿಸಿದರು.

  • ಇಂದು ಕೆಎಂಎಫ್ ಅಧ್ಯಕ್ಷ ಪಟ್ಟಕ್ಕೆ ಚುನಾವಣೆ – ರೇವಣ್ಣಗೆ ಗದ್ದುಗೆ ಪಕ್ಕಾ

    ಇಂದು ಕೆಎಂಎಫ್ ಅಧ್ಯಕ್ಷ ಪಟ್ಟಕ್ಕೆ ಚುನಾವಣೆ – ರೇವಣ್ಣಗೆ ಗದ್ದುಗೆ ಪಕ್ಕಾ

    ಬೆಳಗಾವಿ: ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಇತ್ತ ದೋಸ್ತಿ ನಾಯಕರ ಮೈತ್ರಿಗೆ ಕೊನೆಯ ಮೊಳೆ ಬಿದ್ದಿದೆ. ಅಧಿಕಾರದಾಹಿ ಎಚ್.ಡಿ ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಲು ಮೈತ್ರಿಯನ್ನೇ ಮುರಿದು ಬಿಟ್ಟಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಾಲಾಗಬೇಕಿದ್ದ ಕೆಎಂಎಫ್ ಅಧ್ಯಕ್ಷ ಪಟ್ಟ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಕೈ ತಪ್ಪುವುದು ಬಹುತೇಕ ಖಚಿತವಾಗಿದೆ.

    ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದ್ದು, ಇದಕ್ಕಾಗಿಯೇ ಮಾಜಿ ಸಚಿವ ರೇವಣ್ಣ ಅವರು ನಾಲ್ವರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನ ಹೈಜಾಕ್ ಮಾಡಿ ತಮ್ಮತ್ತ ಸೆಳೆದುಕೊಂಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿವಕುಮಾರ್ ರೇವಣ್ಣರಿಗೆ ಎಷ್ಟೇ ಮನವೊಲಿಸಿದ್ರು ಪ್ರಯೋಜನವಾಗಿಲ್ಲ ಎಂದು ಹೇಳಲಾಗಿತ್ತು.

    ಕೆಎಂಎಫ್ ಅದ್ಯಕ್ಷ ಚುನಾವಣೆಯಲ್ಲಿ ಐವರು ಕಾಂಗ್ರೆಸ್ ಬೆಂಬಲಿತ, ಮೂವರು ಜೆಡಿಎಸ್, ಓರ್ವ ಬಿಜೆಪಿ ಹಾಗೂ ಮೂವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬೆಂಬಲಿತ ನಿರ್ದೇಶಕರಿದ್ದು ನಾಲ್ವರು ಸರ್ಕಾರದ ನಾಮನಿರ್ದೇಶಿತ ಸದಸ್ಯರಿದ್ದಾರೆ. ಸದ್ಯ ರೇವಣ್ಣ ಬಳಿ 7 ನಿರ್ದೇಶಕರಿದ್ದು, ಐವರು ಮಾತ್ರ ಶಾಸಕ ಭೀಮಾನಾಯ್ಕ್ ಬೆಂಬಲಕ್ಕೆ ನಿಂತಿದ್ದಾರೆ.

    ಇಂದು ನಡೆಯಲಿರುವ ಚುನಾವಣೆಯಲ್ಲಿ ಬಹುತೇಕ ರೇವಣ್ಣ ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಹೀಗಾಗಿ ಕೊನೆ ಪ್ರಯತ್ನವಾಗಿ ಸಿದ್ದರಾಮಯ್ಯ, ಇಂದು ಕುಮಾರಸ್ವಾಮಿ ಜೊತೆ ಮಾತುಕತೆ ನಡೆಸಲಿದ್ದಾರೆ. ಭಾನುವಾರ ರಾತ್ರಿ ಡಿಕೆ ಶಿವಕುಮಾರ್ ಭೇಟಿ ಬಳಿಕ ಮಾತಾನಾಡಿದ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್, ನಾಮಪತ್ರ ಸಲ್ಲಿಸಲು ನಮ್ ನಾಯಕರು ಹೇಳಿದ್ದಾರೆ. ಹೈಜಾಕ್ ಆದವರು ವಾಪಸ್ ಬರ್ತಾರೆ. ಚುನಾವಣೆಯಲ್ಲಿ ಖಂಡಿತಾ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  • ರೇವಣ್ಣ ಆರೋಗ್ಯ ಇಲಾಖೆಗೂ ಕೈ ಹಾಕಿದ್ರು – ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್

    ರೇವಣ್ಣ ಆರೋಗ್ಯ ಇಲಾಖೆಗೂ ಕೈ ಹಾಕಿದ್ರು – ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್

    ವಿಜಯಪುರ: ಹೆಚ್.ಡಿ. ರೇವಣ್ಣನಿಂದ ಮೈತ್ರಿ ಸರ್ಕಾರಕ್ಕೆ ಪತನ ಆಗಿದೆ ಎಂದು ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು ಹೆಚ್.ಡಿ ರೇವಣ್ಣ ಎಲ್ಲ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ಅವರು ಆರೋಗ್ಯ ಇಲಾಖೆಯಲ್ಲೂ ಕೈ ಹಾಕಿದ್ದರು. ಅವರ ವಿರುದ್ಧ ನಮಗೂ ಸಾಕಷ್ಟು ಅಸಮಾಧಾನವಿದೆ. ಅಸಮಾಧಾನ ಇದೆ ಎನ್ನುವ ಕಾರಣಕ್ಕೆ ಸರ್ಕಾರವನ್ನು ಬೀಳಿಸಬೇಕೇ ಎಂದು ಪ್ರಶ್ನೆ ಮಾಡಿದರು.

    ಈ ವೇಳೆ ಕೆಎಂಎಫ್ ಅಧ್ಯಕ್ಷರನ್ನು ರೇವಣ್ಣ ಕಿಡ್ನಾಪ್ ಮಾಡಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೆಚ್.ಡಿ. ರೇವಣ್ಣ ಈ ವಿಷಯದಲ್ಲಿ ಕೈ ಹಾಕಿದ್ದು ತಪ್ಪು. ಅ ಸ್ಥಾನವನ್ನು ಕಾಂಗ್ರೆಸ್ ಶಾಸಕ ಭೀಮಾನಾಯಕ್ ಅವರಿಗೆ ನೀಡಲು ಮೊದಲೇ ತೀರ್ಮಾನ ಆಗಿತ್ತು ಎಂದು ತಿಳಿಸಿದರು.

  • ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ- ವಿಜಯಪುರ ಕೆಎಂಎಫ್ ನಿರ್ದೇಶಕ ಸ್ಪಷ್ಟನೆ

    ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ- ವಿಜಯಪುರ ಕೆಎಂಎಫ್ ನಿರ್ದೇಶಕ ಸ್ಪಷ್ಟನೆ

    ವಿಜಯಪುರ: ಕೆಎಂಎಫ್ ಗಾದಿಗಾಗಿ ನಾಲ್ವರು ಕಾಂಗ್ರೆಸ್ ನಿರ್ದೇಶಕರ ಹೈಜಾಕ್ ಆರೋಪಕ್ಕೆ ಸಂಬಂಧಿಸಿದಂತೆ ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಎಂದು ವಿಜಯಪುರ ಕೆಎಂಎಫ್ ನಿರ್ದೇಶಕ ಶ್ರೀಶೈಲ್ ಪಾಟೀಲ್ ಸ್ಪಷ್ಟನೆ ನಿಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ನನ್ನ ವೈಯಕ್ತಿಕ ಕೆಲಸಗಳಿಗಾಗಿ ಓಡಾಡುತ್ತಿದ್ದೇನೆ. ನನ್ನ ಪತ್ನಿಯ ತವರು ಮನೆ ಕಲಬುರಗಿಯಲ್ಲಿದೆ. ಹೀಗಾಗಿ ನಾನು ಇಲ್ಲಿದ್ದೇನೆ ಎಂದು ಹೇಳುವ ಮೂಲಕ ಆರೋಪಕ್ಕೆ ತೆರೆ ಎಳೆದಿದ್ದಾರೆ.

    ಏನಿದು ಪ್ರಕರಣ?
    ಮೈತ್ರಿ ಧರ್ಮದ ಪ್ರಕಾರ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನ ಕಾಂಗ್ರೆಸ್‍ಗೆ ಬಿಟ್ಟು ಕೋಡೋದಾಗಿ ಭರವಸೆ ನೀಡಿದ್ದ ಜೆಡಿಎಸ್ ನಾಯಕರು ಇದೀಗ ಸರ್ಕಾರ ಬಿಳುತ್ತಿದ್ದಂತೆಯೇ ಉಲ್ಟಾ ಹೊಡೆದಿದ್ದಾರೆ. ಮಾಜಿ ಸಚಿವ ರೇವಣ್ಣ, ಮಂತ್ರಿಗಿರಿ ಹೋಯ್ತು, ಹೀಗಾಗಿ ಕೆಎಂಎಫ್ ಅಧ್ಯಕ್ಷ ಗಾದಿಯಾದ್ರೂ ಇರಲಿ ಎಂದು ಹಠಕ್ಕೆ ಬಿದಿದ್ದಾರೆ. ಹೀಗಾಗಿ ಕೆಎಂಎಫ್‍ನ ನಾಲ್ವರು ಕಾಂಗ್ರೆಸ್ ನಿರ್ದೇಶಕರನ್ನು ಹೈಜಾಕ್ ಮಾಡಿ ಹೈದಾರಾಬಾದ್‍ಗೆ ಶಿಫ್ಟ್ ಮಾಡಿದ್ದಾರೆಂದು ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಆರೋಪಿಸಿದ್ದರು.

    ಮಂಗಳೂರು ವಿಭಾಗದ ದಿವಾಕರ್ ಶೆಟ್ಟಿ, ಧಾರವಾಡದ ಹನುಮಂತ ಗೌಡ, ಹಿರೇಗೌಡ, ವಿಜಯಪುರ ಶ್ರೀಶೈಲಗೌಡ ಪಾಟೀಲ್, ಶಿವಮೊಗ್ಗದ ವೀರಭದ್ರ ಬಾಬುರನ್ನು ಹೈಜಾಕ್ ಮಾಡಿದ್ದಾರೆ. ಈ ವಿಚಾರ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೂ ಗುರಿಯಾಗಿದ್ದು, ಸಿದ್ದರಾಮಯ್ಯ ಎಂಟ್ರಿಯಾಗುವ ಸಾಧ್ಯತೆ ಇದೆ. ಕೆಎಂಎಫ್‍ನಲ್ಲಿ ಒಟ್ಟು 12 ಜನ ನಿರ್ದೇಶಕರಿದ್ದಾರೆ. ಅದರಲ್ಲಿ 3 ಜೆಡಿಎಸ್ ಮತ್ತು 9 ಕಾಂಗ್ರೆಸ್ ನಿರ್ದೇಶಕರು. ಹಾಗೆಯೇ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಅಮರನಾಥ ಜಾರಕಿಹೊಳಿ ಕೂಡ ಓರ್ವ ನಿರ್ದೇಶಕರಾಗಿದ್ದಾರೆ. ಇದೀಗ ಕಾಂಗ್ರೆಸ್‍ನ 4 ನಿರ್ದೇಶಕರನ್ನು ರೇವಣ್ಣ ತನ್ನೆಡೆಗೆ ಎಳೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು.