Tag: Hatras Case

  • ಹತ್ರಾಸ್ ಆರೋಪಿಗಳಿರೋ ಜೈಲಿಗೆ ಬಿಜೆಪಿ ಸಂಸದ ಭೇಟಿ

    ಹತ್ರಾಸ್ ಆರೋಪಿಗಳಿರೋ ಜೈಲಿಗೆ ಬಿಜೆಪಿ ಸಂಸದ ಭೇಟಿ

    ಲಕ್ನೋ: ಹತ್ರಾಸ್ ಗ್ಯಾಂಗ್‍ರೇಪ್ ಪ್ರಕರಣದ ಆರೋಪಿಗಳನ್ನು ಇರಿಸಲಾಗಿರುವ ಜೈಲಿಗೆ ಸ್ಥಳೀಯ ಬಿಜೆಪಿ ಸಂಸದ ರಾಜವೀರ್ ಸಿಂಗ್ ದಿಲೇರ್ ಭೇಟಿ ನೀಡಿರೋದು ಚರ್ಚೆಗೆ ಕಾರಣವಾಗಿದೆ.

    ಹತ್ರಾಸ್ ಆರೋಪಿಗಳನ್ನು ಭೇಟಿಯಾಗಲು ಸಂಸದರು ಜೈಲಿಗೆ ಹೋಗಿದ್ದರು. ಆದ್ರೆ ಜೈಲಿನ ಅಧಿಕಾರಿಗಳು ಅರೋಪಿಗಳ ಭೇಟಿಗೆ ಅವಕಾಶ ನೀಡಲಿಲ್ಲ. ಹಾಗಾಗಿ ಸಂಸದರು ವಾಪಸ್ ಆಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ರಾಜವೀರ್ ಸಿಂಗ್ ಜೈಲಿನಿಂದ ಹೊರ ಬರುವ ಫೋಟೋಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜವೀರ್ ಸಿಂಗ್, ನಾನು ಯಾವುದೇ ಖೈದಿಗಳನ್ನು ಭೇಟಿಯಾಗಲು ಜೈಲಿಗೆ ಹೋಗಿರಲಿಲ್ಲ. ಕ್ಷೇತ್ರದ ಕೆಲಸದ ನಿಮಿತ್ ಎಸ್‍ಎಸ್‍ಪಿ ಅವರನ್ನು ಭೇಟಿಯಾಗಲು ತೆರಳಿದ್ದೆ. ಆದ್ರೆ ಎಸ್‍ಎಸ್‍ಪಿ ಕೊರೊನಾ ಸೋಂಕಿಗೆ ಒಳಗಾಗಿರುವ ವಿಷಯ ತಿಳಿಯಿತು. ಹಿಂದಿರುಗಿ ಬರುವಾಗ ಜೈಲಿನ ಬಳಿ ನಿಂತಿದ್ದ ಕೆಲವರು ಜೊತೆ ಮಾತನಾಡುತ್ತಾ ನಿಂತಿದ್ದೆ ಎಂದರು.

    ಇದೇ ವೇಳೆ ನನ್ನ ಬಳಿ ಬಂದ ಜೈಲರ್ ಟೀ ಕುಡಿಯಲು ಆಹ್ವಾನಿಸಿದ್ದರಿಂದ ಜೈಲಿನ ಒಳಗೆ ಹೋದೆ. ಜೈಲಾಧಿಕಾರಿಗಳ ಜೊತೆ ಓರ್ವ ಬಂಧಿತನ ಬಗ್ಗೆ ಮಾತನಾಡಿದ್ದೆ. ಆತ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಶಿಫಾರಸ್ಸು ಬಗ್ಗೆ ಚರ್ಚಿಸಲಾಯ್ತು. ಅದರ ಹೊರತಾಗಿ ಹತ್ರಾಸ್ ಪ್ರಕರಣದ ಆರೋಪಿಗಳ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ನನ್ನ ಭೇಟಿಯನ್ನ ತಪ್ಪಾಗಿ ಅರ್ಥೈಸೋದು ಬೇಡ ಎಂದು ಹೇಳಿದರು.

    ದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಹತ್ರಾಸ್‌ ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು ಉದ್ದೇಶಪೂರ್ವಕವಾಗಿ  ಹೆಸರು ಕೆಡಿಸಲು ಮಾಡಿದ ಹುನ್ನಾರ ಎಂದು ಆರೋಪಿಸಿ ರಾಜ್ಯ ಸರ್ಕಾರ  ಅನಾಮಧೇಯ ವ್ಯಕ್ತಿಗಳ ವಿರುದ್ಧ ಕೇಸ್‌ ದಾಖಲಿಸಿದೆ.
    ಉತ್ತರ ಪ್ರದೇಶ ಪೊಲೀಸರು ಈಗ ಅನಾಮಧೇಯ ವ್ಯಕ್ತಿಗಳ ವಿರುದ್ಧ 120 ಬಿ(ಕ್ರಿಮಿನಲ್‌ ಪಿತೂರಿ),153 ಎ(ಎರಡು ಗುಂಪುಗಳ ಮೇಲೆ ವೈಷಮ್ಯಕ್ಕೆ ಪ್ರಚೋದನೆ),  153 ಬಿ(ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ), 195( ಸುಳ್ಳು ಸಾಕ್ಷ್ಯ ಸೃಷ್ಟಿ), 195 ಎ( ಸುಳ್ಳು ಸಾಕ್ಷ್ಯ ನೀಡುವಂತೆ ಬೆದರಿಕೆ), 465(ಸುಳ್ಳು ಸ್ಪಷ್ಟನೆ) 468( ವಂಚಿಸುವ ಉದ್ದೇಶಕ್ಕಾಗಿ ಸುಳ್ಳು ಸ್ಪಷ್ಟನೆ), 469(ಉದ್ದೇಶಪೂರ್ವಕಾಗಗಿ ಖ್ಯಾತಿಗೆ ಕುಂದು ತರಲು ಸುಳ್ಳು ಸ್ಪಷ್ಟನೆ), 501(ಮಾನಹಾನಿಕವೆಂದು ತಿಳಿದಿರುವ ವಿಷಯವನ್ನು ಮುದ್ರಿಸುವುದು) 505 (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆಗಳು) 505 ಬಿ(ವರ್ಗಗಳ ನಡುವೆ ವೈರ ದ್ವೇಷ ಅಥವಾ ವೈಮಸ್ಸು ಉಂಟುಮಾಡುವ ಹೇಳಿಕೆ) ಜೊತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 67ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಕೆಲವೇ ಕ್ಷಣಗಳಲ್ಲಿ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸಂಚಲನ ಸೃಷ್ಟಿಸಲು ಕಾರಣವಾಗಿದ್ದು  justiceforhathrasvictim.carrd.co ಹೆಸರಿನ ವೆಬ್‌ಸೈಟ್‌ ಎಂದು ಸರ್ಕಾರಿ ಮೂಲಗಳನ್ನು ಆಧಾರಿಸಿ ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ಈ ಪ್ರಕರಣದ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಕಟಿಸಿದ್ದು ಮಾತ್ರವಲ್ಲದೇ ದೇಶವ್ಯಾಪಿ ಪ್ರತಿಭಟನೆ ನಡೆಸಲು ಪ್ರೇರೇಪಣೆ ನೀಡಿತ್ತು ಎಂಬ ಗಂಭೀರ ಆರೋಪ ಈ ವೆಬ್‌ಸೈಟ್‌ ಮೇಲೆ ಬಂದಿದೆ.  ಈ ವೆಬ್‌ಸೈಟಿನ ಮೂಲವನ್ನು ಪತ್ತೆ ಹಚ್ಚಲು ಮುಂದಾಗುತ್ತಿದ್ದಂತೆ justiceforhathrasvictim.carrd.co ವೆಬ್‌ಸೈಟ್‌ ಕಾರ್ಯನಿರ್ವಹಿಸುವುದನ್ನು ಈಗ ನಿಲ್ಲಿಸಿದೆ.

  • ಕೊನೆ ಬಾರಿ ಮಗಳ ಮುಖ ತೋರಿಸಲಿಲ್ಲ: ಹತ್ರಾಸ್ ಸಂತ್ರಸ್ತೆ ತಾಯಿ

    ಕೊನೆ ಬಾರಿ ಮಗಳ ಮುಖ ತೋರಿಸಲಿಲ್ಲ: ಹತ್ರಾಸ್ ಸಂತ್ರಸ್ತೆ ತಾಯಿ

    -ಡಿಎಂ, ಎಸ್‍ಪಿ ಎಲ್ಲ ಸುಳ್ಳು ಹೇಳ್ತಿದ್ದಾರೆ

    ಲಕ್ನೋ: ಕಾಮುಕರ ಅಟ್ಟಹಾಸಕ್ಕೆ ಬಲಿಯಾಗಿದ್ದ ಸಂತ್ರಸ್ತೆಯ ಕುಟುಂಬಸ್ಥರು ಮಗಳ ಅಂತಿಮ ದರ್ಶನ ಸಿಗದ ಹಿನ್ನೆಲೆ ಕಣ್ಣೀರು ಹಾಕುತ್ತಿದ್ದಾರೆ. ಸಂತ್ರಸ್ತೆಯ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಸಂತ್ರಸ್ತೆ ತಾಯಿ, ಕೊನೆ ಬಾರಿ ಮಗಳ ಮುಖ ನೋಡಲು ಸಹ ಅನುಮತಿ ನೀಡಲಿಲ್ಲ. ಡಿಎಂ, ಎಸ್‍ಪಿ ಸೇರಿದಂತೆ ಎಲ್ಲರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಮಗಳ ಮೂಳೆಗಳು ಮುರಿದಿರಲಿಲ್ಲ ಮತ್ತು ಆಕೆಯ ದೇಹದ ಮೇಲೆ ಯಾವುದೇ ಗಾಯದ ಗುರತು ಇರಲಿಲ್ಲ ಎಂದು ಡಿಎಂ, ಎಸ್.ಪಿ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಿಮ್ಮ ಮನೆಯ ಮಗಳಿಗೆ ಈ ರೀತಿ ಆಗಿದ್ರೆ ನೀವು ಸುಮ್ಮನೆ ಇರ್ತಿದ್ದೀರಾ? ದಲಿತ ಬಡ ಕುಟುಂಬದ ಮಗಳ ಆಗಿದಕ್ಕೆ ಪ್ರಕರಣ ಮುಚ್ಚಿ ಹಾಕ್ತೀರಾ ಎಂದು ಸಂತ್ರಸ್ತೆ ತಾಯಿ ಆಕ್ರೋಶ ಹೊರ ಹಾಕುತ್ತಾರೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣ – ಸಂತ್ರಸ್ತೆ ಕುಟುಂಬ ಹೊರಗಿಟ್ಟು 2.30ಕ್ಕೆ ಪೊಲೀಸರಿಂದ್ಲೇ ಅಂತ್ಯಕ್ರಿಯೆ!

    ಗ್ರಾಮಕ್ಕೆ ಭೇಟಿ ನೀಡಿದ ಜನಪ್ರತಿನಿಧಿಗಳು ನಾವು ಕುಟುಂಬದ ಜೊತೆಯಲ್ಲಿದ್ದೇವೆ. ಕುಟುಂಬಕ್ಕೆ ಯಾವುದೇ ಅನ್ಯಾಯವಾಗದಂತೆ ಹೋರಾಟ ನಡೆಸುತ್ತೇವೆ. ಇದೊಂದು ಗಂಭೀರ ಪ್ರಕರಣವಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿ ನುಣಚಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಪೊಲೀಸರಿಂದ್ಲೇ ರೇಪ್ ಸಂತ್ರಸ್ತೆಯ ಅಂತ್ಯಕ್ರಿಯೆ – ಸಿದ್ದರಾಮಯ್ಯ, ದಿನೇಶ್ ಕಿಡಿ

    ಮಂಗಳವಾರ ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಸಂತ್ರಸ್ತೆಯ ಅಂತ್ಯಕ್ರಿಯೆಯನ್ನು ಪೊಲೀಸರು ತಡರಾತ್ರಿ ಮಾಡಿದ್ದರು. ಈ ವೇಳೆ ಕುಟುಂಬಸ್ಥರು ಮನೆಯಲ್ಲಿ ಕೂಡಿ ಹಾಕಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಮತ್ತೊಮ್ಮೆ ಭಾರತದ ಮಗಳು ಭೀಕರವಾಗಿ ಹಿಂಸೆಗೊಳಗಾಗಿದ್ದಾಳೆ: ಯುವರಾಜ್

    2012ರಲ್ಲಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಮಾದರಿಯಲ್ಲಿಯೇ ಉತ್ತರಪ್ರದೇಶದ ಹುತ್ರಾಸ್ ನಲ್ಲಿ ನಡೆದಿದೆ. ಇದೇ ತಿಂಗಳ 14ರಂದು ತನ್ನ ತಾಯಿಯೊಂದಿಗೆ ಹುಲ್ಲು ತರಲೆಂದು ಯುವತಿ ಜಮೀನಿಗೆ ತೆರಳಿದ್ದಳು. ಈ ವೇಳೆ ನಾಲ್ವರು ಕಾಮಪಿಶಾಚಿಗಳು ಆಕೆಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಆಕೆಯ ನಾಲಿಗೆಯನ್ನು ಕತ್ತರಿಸಿ, ಬೆನ್ನು ಮೂಳೆ, ಕತ್ತಿಗೆ ಗಂಭೀರವಾಗಿ ಹಾನಿ ಮಾಡಿದ್ದಾರೆ. ಕಾಮುಕರ ಅಟ್ಟಹಾಸಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಘಟನೆ ನಡೆದು ಎರಡು ವಾರಗಳ ನಂತರ ನಿನ್ನೆ ಮೃತಪಟ್ಟಿದ್ದರು. ಇದನ್ನೂ ಓದಿ: ಗ್ಯಾಂಗ್‍ರೇಪ್, ಸಾವು ಪ್ರಕರಣ – ಅಪರಾಧಿಗಳನ್ನ ಗಲ್ಲಿಗೇರಿಸಿಯೆಂದ ಅಕ್ಷಯ್‍ಗೆ ರಮ್ಯಾ ತಿರುಗೇಟು

    ಗ್ರಾಮದಲ್ಲಿ ಯುವತಿಯ ಸಂಬಂಧಿಕರು ವಾಹನಗಳನ್ನು ನಿರ್ಬಂಧಿಸಲು ಪ್ರಯತ್ನಿಸಿದರು. ಇನ್ನೂ ಒಂದು ಹೆಜ್ಜೆ ಹೋದ ಮಹಿಳೆಯೊಬ್ಬರು ನಡುರಸ್ತೆಯಲ್ಲಿಯೇ ಕುಳಿತುಕೊಂಡು ಎದೆಗೆ ಹೊಡೆದುಕೊಂಡು ತನ್ನ ಆಕ್ರೋಶ ಹೊರಹಾಕಿದರು. ಈ ಮಹಿಳೆಯನ್ನು ಮೃತ ಯುವತಿಯ ತಾಯಿಯೆಂದು ಅಂದಾಜಿಸಲಾಗಿದೆ.

    ನಸುಕಿನ ಜಾವ 2.30ರ ಸುಮಾರಿಗೆ ಯುವತಿಯ ಅಂತ್ಯಕ್ರಿಯೆ ನಡೆಸಲಾಗಿದೆ. ಈ ವೇಳೆ ಪೊಲೀಸರು ಮಾತ್ರ ಸ್ಥಳದಲ್ಲಿದ್ದರು. ಪತ್ರಕರ್ತರಿಗೂ ನಿರ್ಬಂಧ ಹೇರಿದ್ದರು. ಮೃತದೇಹ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿದರೂ ಪೊಲೀಸರು ಕ್ಯಾರೇ ಎನ್ನದೇ ತಾವೇ ಎಲ್ಲ ಕಾರ್ಯಗಳನ್ನು ಮುಗಿಸಿಬಿಟ್ಟರು ಎಂದು ಗದ್ಗದಿತರಾದರು. ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಜೈಲಿಗಟ್ಟಲಾಗಿದ್ದು, ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಘಟನೆಗೆ ಸಂಬಂಧಿಸಿದಂತೆ ಇಡೀ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ದೋಷಿಗಳನ್ನು ಗಲ್ಲಿಗೇರಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ವಿಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ರಸ್ತೆಗೆ ಇಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಸಿಎಂ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಆಗ್ರಹಿಸಿವೆ.