Tag: H3N2

  • H3N2 ಇನ್‌ಫ್ಲುಯೆಂಜಾ ಭೀತಿ ಮಧ್ಯೆ ಹೆಚ್ಚುತ್ತಿದೆ ಕೋವಿಡ್ ಸೋಂಕಿತರ ಸಂಖ್ಯೆ

    H3N2 ಇನ್‌ಫ್ಲುಯೆಂಜಾ ಭೀತಿ ಮಧ್ಯೆ ಹೆಚ್ಚುತ್ತಿದೆ ಕೋವಿಡ್ ಸೋಂಕಿತರ ಸಂಖ್ಯೆ

    ನವದೆಹಲಿ: ದೇಶದಲ್ಲಿ ಕೊರೊನಾ (Corona) ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಕಳೆದ 24 ಗಂಟೆಯಲ್ಲಿ 1,000 ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೇಂದ್ರ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ ಒಟ್ಟು 1,134 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿದೆ.

    ದೈನಂದಿನ ಧನಾತ್ಮಕತೆಯು ಶೇಕಡಾ 1.09 ರಷ್ಟಿದ್ದರೆ, ಸಾಪ್ತಾಹಿಕ ಸಕಾರಾತ್ಮಕತೆಯ ದರವು ಶೇಕಡಾ 0.98ರಷ್ಟಿದೆ. ಮಂಗಳವಾರ ದೆಹಲಿಯಲ್ಲಿ 83 ಕೋವಿಡ್ -19 (Covid 19) ಪ್ರಕರಣಗಳು ವರದಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಸದ್ಯ ದೆಹಲಿಯಲ್ಲಿ (Delhi) ಪಾಸಿಟಿವಿಟಿ ಶೇಕಡಾ 5.83ಕ್ಕೆ ಏರಿಕೆಯಾಗಿದೆ. ಸೋಮವಾರ 34 ಪ್ರಕರಣಗಳು ದಾಖಲಾಗಿದ್ದು, ಶೇಕಡಾ 6.98ರಷ್ಟು ಪಾಸಿಟಿವಿಟಿ ದರವಿತ್ತು.

    ದೇಶದಲ್ಲಿ H3N2 ಇನ್‌ಫ್ಲುಯೆಂಜಾ (H3N2 Influenza) ಪ್ರಕರಣಗಳಲ್ಲಿ ತೀವ್ರ ಏರಿಕೆಯ ಮಧ್ಯೆ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ದೆಹಲಿಯ ಆಸ್ಪತ್ರೆಗಳಲ್ಲಿ ಹೆಚ್ಚಿನ ಇನ್‌ಫ್ಲುಯೆಂಜಾ ಪ್ರಕರಣಗಳಿಲ್ಲ ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಇದನ್ನೂ ಓದಿ: ದೂರು ಕೊಡಲು ಹೋದ ಯುವತಿಯನ್ನೇ ಮಂಚಕ್ಕೆ ಕರೆದಿದ್ದ ಇನ್‌ಸ್ಪೆಕ್ಟರ್‌ ಅಮಾನತು

    ಇನ್‌ಫ್ಲುಯೆಂಜಾ ಎ ಸಬ್‌ಟೈಪ್ ಹೆಚ್3ಎನ್2 ವೈರಸ್‌ನಿಂದಾಗಿ ಇನ್‌ಫ್ಲುಯೆಂಜಾ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೇಳಿದೆ. H3N2 ವೈರಸ್ ಇತರ ಉಪವಿಭಾಗಗಳಿಗಿಂತ ಹೆಚ್ಚು ಆಸ್ಪತ್ರೆಗೆ ಕಾರಣವಾಗುತ್ತದೆ. ಮೂಗು ಸೋರುವುದು, ನಿರಂತರ ಕೆಮ್ಮು ಮತ್ತು ಜ್ವರ ರೋಗದ ಲಕ್ಷಣಗಳಾಗಿವೆ. ಇದನ್ನೂ ಓದಿ: ಜಿದ್ದಾಜಿದ್ದಿ ಹೋರಾಟ, ರಕ್ತಸಿಕ್ತ ರಾಜಕಾರಣಕ್ಕೆ ಫೇಮಸ್‌ ಶ್ರೀನಿವಾಸಪುರ

  • ರಾಜ್ಯದಲ್ಲಿ H3N2 ವೈರಸ್ ಸ್ಫೋಟ – 82 ದಿನದಲ್ಲಿ 115 ಪ್ರಕರಣ ದಾಖಲು

    ರಾಜ್ಯದಲ್ಲಿ H3N2 ವೈರಸ್ ಸ್ಫೋಟ – 82 ದಿನದಲ್ಲಿ 115 ಪ್ರಕರಣ ದಾಖಲು

    ಬೆಂಗಳೂರು: ರಾಜ್ಯದಲ್ಲಿ ಹೆಚ್3ಎನ್2 (H3N2) ವೈರಸ್ ಆತಂಕ ಹೆಚ್ಚಾಗಿದೆ. ಕಳೆದ 82 ದಿನಗಳಲ್ಲಿ ಬರೋಬ್ಬರಿ 115 ಪ್ರಕರಣಗಳು ದಾಖಲಾಗಿದ್ದು, ಮುಂದಿನ ದಿನಗಳಲ್ಲಿ ಸೈಲೆಂಟ್ ವೈರಸ್ ಡೆಡ್ಲಿ ಅಟ್ಯಾಕ್ ಮಾಡಲಿದೆ ಎನ್ನುವ ಭೀತಿ ಕಾಡುತ್ತಿದೆ.

    ಕೊರೊನಾ (Corona) ಬಳಿಕ ಮತ್ತೆ ಹೆಚ್3ಎನ್2 ಎಂಬ ಹೊಸ ವೈರಸ್ ಜನರನ್ನು ನಡುಗಿಸುತ್ತಿದೆ. ಅತಿಯಾದ ಜ್ವರ, ಶೀತ, ಕೆಮ್ಮು, ಉಸಿರಾಟದ ಸಮಸ್ಯೆಯ ಲಕ್ಷಣಗಳನ್ನು ಹೊಂದಿರುವ ಈ ವೈರಸ್ ರಾಜ್ಯದ 21 ಜಿಲ್ಲೆಗಳಲ್ಲಿ ಸದ್ದಿಲ್ಲದೆ ಹರಡಿದೆ. ಬೆಂಗಳೂರು (Bengaluru) ಸೇರಿ ರಾಜ್ಯದ 21 ಜಿಲ್ಲೆಗಳಲ್ಲಿ ಕೇವಲ 82 ದಿನಗಳಲ್ಲಿ ಬರೋಬ್ಬರಿ 115 ಪ್ರಕರಣಗಳು ದಾಖಲಾಗಿವೆ.

    ಈ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿದ್ದು, ಬೆಂಗಳೂರು ಒಂದರಲ್ಲೇ 30 ಪ್ರಕರಣಗಳು ದಾಖಲಾಗಿವೆ. ನಗರದ ಮೂಲೆ ಮೂಲೆಗೂ ಈ ವೈರಸ್ ಹರಡಬಹುದೆಂಬ ಆತಂಕವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಸೈಲೆಂಟ್ ಆಗಿಯೇ ಹರಡುತ್ತಿರುವ ಈ ವೈರಸ್ ಮುಂದಿನ ದಿನಗಳಲ್ಲಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಬಹುದು ಎನ್ನುತ್ತಿದ್ದಾರೆ.

    ಎಲ್ಲೆಲ್ಲಿ ಎಷ್ಟೆಷ್ಟು ಪ್ರಕರಣ?
    ಬೆಂಗಳೂರು/ ಬಿಬಿಎಂಪಿ ವ್ಯಾಪ್ತಿ – 30
    ಶಿವಮೊಗ್ಗ – 19
    ಧಾರವಾಡ – 14
    ಮೈಸೂರು – 09
    ವಿಜಯಪುರ – 08
    ಬೆಳಗಾವಿ – 05
    ಹಾಸನ – 05
    ತುಮಕೂರು – 03
    ದಾವಣಗೆರೆ – 03

    ಹಾವೇರಿ – 03
    ದ.ಕನ್ನಡ – 03
    ಬೆಂಗಳೂರು ಗ್ರಾಮಾಂತರ – 02
    ಗದಗ – 02
    ರಾಮನಗರ – 02
    ಚಾಮರಾಜನಗರ – 01
    ಬಾಗಲಕೋಟೆ – 01
    ಉತ್ತರ ಕನ್ನಡ – 01
    ಚಿತ್ರದುರ್ಗ – 01
    ಚಿಕ್ಕಮಗಳೂರು – 01
    ಕೊಡಗು – 01
    ಮಂಡ್ಯ – 01 ಇದನ್ನೂ ಓದಿ: 5, 8ನೇ ತರಗತಿ ಬೋರ್ಡ್‌ ಪರೀಕ್ಷೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌

    ಹಾಸನ ಜಿಲ್ಲೆಯಲ್ಲಿ ಮಾರ್ಚ್ 1 ರಂದು 87 ವರ್ಷದ ವೃದ್ಧರೊಬ್ಬರು ಹೆಚ್3ಎನ್2ಗೆ ಬಲಿಯಾಗಿದ್ದರು. ಇದು ದೇಶದಲ್ಲೇ ಮೊದಲ ಸಾವಾಗಿತ್ತು. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 5 ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳಲ್ಲಿ ಹಾಗೂ 60 ವರ್ಷ ಮೆಲ್ಪಟ್ಟ ವೃದ್ಧರಿಗೆ ಈ ವೈರಸ್ ತೀವ್ರವಾಗಿ ಕಾಡಲಿದ್ದು, ಆಕ್ಸಿಜನ್ ಲೆವೆಲ್‌ನಲ್ಲೂ ಏರುಪೇರಾಗಲಿದೆ. ಇಷ್ಟು ದಿನ ಕೊರೊನಾ ಕಂಟಕದಿಂದ ಬಚಾವ್ ಆಗಿ, ನೆಮ್ಮದಿಯಿಂದ ನಿಟ್ಟುಸಿರು ಬಿಡುವ ಸಂದರ್ಭ ಬಂತು ಎನ್ನುವಷ್ಟರಲ್ಲಿ ಮತ್ತೆ ಹೆಚ್3ಎನ್2 ಸೋಂಕು ಕಾಡುತ್ತಿದ್ದು, ಜನರಲ್ಲಿ ಆತಂಕ ಹೆಚ್ಚು ಮಾಡಿದೆ. ಇದನ್ನೂ ಓದಿ: PublicTV Explainer: ತೃತೀಯಲಿಂಗಿಗಳು, ಸಲಿಂಗಕಾಮಿಗಳು ರಕ್ತದಾನ ಮಾಡುವಂತಿಲ್ಲ – ಯಾಕೆ ಗೊತ್ತಾ?

  • PublicTV Explainer: ಆಧುನಿಕ ಭಾರತದ ಮೊದಲ ಸಾಂಕ್ರಾಮಿಕ ರೋಗ ಯಾವುದು ಗೊತ್ತಾ?

    PublicTV Explainer: ಆಧುನಿಕ ಭಾರತದ ಮೊದಲ ಸಾಂಕ್ರಾಮಿಕ ರೋಗ ಯಾವುದು ಗೊತ್ತಾ?

    -ಕೊರೊನಾ ಅಷ್ಟೇ ಅಲ್ಲ ಪ್ಲೇಗ್ ಕೂಡ ಚೀನಾದಿಂದ್ಲೆ ಹರಡಿತ್ತು

    ಕೋವಿಡ್-19 (Corona) ಇಡೀ ಜಗತ್ತನ್ನೇ ಹಿಂಡಿಹಿಪ್ಪೆ ಮಾಡಿದ ಸಾಂಕ್ರಾಮಿಕ. ವಿಶ್ವದಾದ್ಯಂತ ಕೋಟ್ಯಂತರ ಮಂದಿ ಬಲಿಯಾದರು. ಸೋಂಕು ತಗುಲುವ ಭೀತಿಯಿಂದ ಜನರು ಮನೆಯಲ್ಲೇ ಬಂಧಿಯಾಗಿ ಜೈಲುವಾಸ ಅನುಭವಿಸಿದರು. ಇಡೀ ಜಗತ್ತು ಲಾಕ್ ಡೌನ್ ಆಗಿ ಆರ್ಥಿಕ ಸಂಕಷ್ಟ ಎದುರಿಸಿತು. ಇಷ್ಟೆಲ್ಲ ಭೀಕರತೆಯ ನಡುವೆ ಕೊರೊನಾ ವೈರಸ್ ಅನ್ನು ಸಾಂಕ್ರಾಮಿಕ ರೋಗವೆಂದು 2020ರ ಮಾರ್ಚ್ ತಿಂಗಳಲ್ಲಿ WHO ಘೋಷಿಸಿತು. ಇಂತಹ ಅನೇಕ ಸಾಂಕ್ರಾಮಿಕಗಳು ಮನುಕುಲವನ್ನು ಕಾಡಿ ಹೋಗಿವೆ. ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿ ಚೀನಾ ಕುಖ್ಯಾತಿ ಪಡೆಯಿತು. ಕೋವಿಡ್ ಅಷ್ಟೇ ಅಲ್ಲ, ಮತ್ತೊಂದು ರಾಕ್ಷಸ ಸಾಂಕ್ರಾಮಿಕ ಪ್ಲೇಗ್ ಹುಟ್ಟಿಗೂ ಚೀನಾ ದೇಶವೇ ಕಾರಣ.

    ಪ್ಲೇಗ್ (Plague) ಸಾಂಕ್ರಾಮಿಕ ಇತರೆ ದೇಶಗಳಿಗಿಂತ ಭಾರತವನ್ನೇ (India) ಕಾಡಿದ್ದು ಹೆಚ್ಚು. ಅದಕ್ಕಾಗಿ ಇದನ್ನು ಆಧುನಿಕ ಭಾರತದ ಮೊದಲ ಸಾಂಕ್ರಾಮಿಕ ಎಂದೇ ಕರೆಯಲಾಗುತ್ತೆ. ಏನಿದು ಪ್ಲೇಗ್? ಇದು ಹುಟ್ಟಿದ್ದೆಲ್ಲಿ? ಭಾರತಕ್ಕೆ ಕಾಲಿಟ್ಟಿದ್ದು ಹೇಗೆ? ಪ್ಲೇಗ್‌ನಿಂದ ದೇಶದಲ್ಲಾದ ದುರಂತ ಕಥನಗಳ ಬಗ್ಗೆ ತಿಳಿಯೋಣ.

    ಪ್ಲೇಗ್ ಹುಟ್ಟಿದ್ದೆಲ್ಲಿ?: 1855ರಲ್ಲಿ ಚೀನಾದ (China) ಯುನಾನ್‍ನಲ್ಲಿ ಕಾಣಿಸಿಕೊಂಡ ಪ್ಲೇಗ್, ಸಾಂಕ್ರಾಮಿಕ ರೋಗವಾಗಿ 1959ರಲ್ಲಿ ವಿಶ್ವದಾದ್ಯಂತ ಹಬ್ಬಿತ್ತು. ಅಷ್ಟೇ ಅಲ್ಲದೇ ವಿಶ್ವಾದ್ಯಂತ ವರ್ಷಕ್ಕೆ 200ಕ್ಕಿಂತ ಹೆಚ್ಚು ಸಾವು ನೋವು ಸಂಭವಿಸಿತ್ತು. ಈ ಅವಧಿಯಲ್ಲಿ ಪ್ರಪಂಚದಾದ್ಯಂತ 12-25 ಮಿಲಿಯನ್ ಜನರು ಸಾವನ್ನಪ್ಪಿದ್ದರು. ಸ್ಯಾನ್ ಫ್ರಾನ್ಸಿಸ್ಕೋ, ಗ್ಲಾಸ್ಗೋ ಮತ್ತು ಪೋರ್ಟೊದಂತೆಯೇ ಹಾಂಗ್ ಕಾಂಗ್ ಮತ್ತು ಮುಂಬೈಯಂತಹ ನಗರಗಳ ಮೇಲೂ ಪ್ಲೇಗ್ ದುಷ್ಪರಿಣಾಮ ಬೀರಿತ್ತು.

    ಏನಿದು ಪ್ಲೇಗ್? ಬುಬೊನಿಕ್ ಪ್ಲೇಗ್ ಯೆರ್ಸಿನಿಯಾ ಪೆಸ್ಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಈ ಪ್ಲೇಗ್ ರೋಗ ಕಾಣಿಸಿಕೊಂಡಿದೆ. ಈ ರೋಗ ಒಬ್ಬರಿಂದ ಮತ್ತೊಬ್ಬರಿಗೆ ಹೆಚ್ಚು ಹರಡುತ್ತದೆ. ಪ್ಲೇಗ್ ಬಂದವರಿಗೆ ಮೊದಲಿಗೆ ಜ್ವರ, ಶೀತ ಹಾಗೂ ತಲೆನೋವು ಕಾಣಿಸಿಕೊಳ್ಳುತ್ತದೆ. ನಂತರ ಸೋಂಕು ಹೆಚ್ಚಾದಂತೆ ಆಯಾಸ, ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಅದಾದ ನಂತರ ಒಂದು ವಾರದೊಳಗೆ ಬಹು ಅಂಗಾಗ ವೈಫಲ್ಯದಿಂದಾಗಿ ಸೋಂಕಿತ ವ್ಯಕ್ತಿ ಮೃತಪಡಬಹುದು.

    ಜನವರಿ 1897ರಲ್ಲಿ ಮೊದಲ ಬಾರಿಗೆ ವಿಜ್ಞಾನಿಗಳು ಈ ರೋಗವು ಇಲಿಗಳಲ್ಲಿ ಕಂಡುಬಂದಿದೆ ಎಂದು ಪತ್ತೆಹಚ್ಚಿದರು. ಅದಾದ ಬಳಿಕ ಇದೊಂದು ಸಾಂಕ್ರಾಮಿಕ ರೋಗವೆಂದು ಎಚ್ಚರಿಕೆಯನ್ನು ನೀಡಿದರು.

    ಭಾರತಕ್ಕೆ ಹೇಗೆ ಬಂತು ಪ್ಲೇಗ್?: ಪ್ಲೇಗ್ ಚೀನಾದಲ್ಲಿ ಪ್ರಾರಂಭವಾಯಿತಾದರೂ ಸಮುದ್ರದ ಮೂಲಕ ಭಾರತಕ್ಕೆ ಬಂತು. ಆ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಗಳು ಹಾಂಗ್‍ಕಾಂಗ್‍ನಿಂದ ಬರುವ ಹಡಗುಗಳಿಗೆ ಏಕಾಏಕಿ ಕ್ವಾರಂಟೈನ್ ವಿಧಿಸಿದ್ದರು. ಆದರೆ ಕ್ವಾರಂಟೈನ್ ನಿಯಮವನ್ನು ಸಡಿಲಗೊಳಿಸುತ್ತಿದ್ದಂತೆ ಭಾರತದಲ್ಲಿ ಪ್ಲೇಗ್ ಹೆಚ್ಚಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿತು. ಅದರಲ್ಲೂ ಕೋಲ್ಕತ್ತಾ, ಮುಂಬೈ, ಕರಾಚಿ ಹಾಗೂ ಪುಣೆಯಲ್ಲಿ ಹೆಚ್ಚಾಗಿ ಕೇಸ್‍ಗಳು ದಾಖಲಾದವು. ತಜ್ಞರ ಪ್ರಕಾರ 19ನೇ ಶತಮಾನದ ಆರಂಭದಲ್ಲಿಯೇ ದೇಶದ ವಿವಿಧ ಭಾಗಗಳಲ್ಲಿ ಪ್ಲೇಗ್ ಏಕಾಏಕಿ ಕಾಣಿಸಿಕೊಂಡಿತು. ಆದರೆ ಆ ಸಮಯದಲ್ಲಿ ಕಾಲರಾ ನಿಯಂತ್ರಣದ ಮೇಲೆ ಹೆಚ್ಚು ಕಾಳಜಿಯನ್ನು ವಹಿಸಲಾಗಿತ್ತು.

    ಪ್ಲೇಗ್‍ನಿಂದಾಗೋ ತೊಂದರೆ ಏನು?: ಪ್ಲೇಗ್ ಭೀತಿಯು ಜಾಗತಿಕವಾಗಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಮುಂಬೈನಲ್ಲಿ ಪ್ಲೇಗ್ ಹೆಚ್ಚಾಗಿ ಕಾಣಿಸಿಕೊಂಡಿತು. ಇದರಿಂದಾಗಿ ಮುಂಬೈ ಅನ್ನು ಪ್ಲೇಗ್ ನಗರ ಎಂದು ಕರೆಯಲಾಯಿತು. 1897ರಲ್ಲಿ ಮುಂಬೈನಲ್ಲಿ ಸುಮಾರು 8,50,000 ಜನಸಂಖ್ಯೆಯಿತ್ತು. ಆದರೆ ಪ್ಲೇಗ್‍ನಿಂದಾಗಿ ಸುಮಾರು 3,80,000 ಜನರು ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋದರು. ಇದರಿಂದಾಗಿ ಗ್ರಾಮದ ಮೂಲೆ ಮೂಲೆಗಳಲ್ಲೂ ಪ್ಲೇಗ್ ಹರಡಿತು.

    ಅಷ್ಟೇ ಅಲ್ಲದೇ ಧಾನ್ಯದ ವ್ಯಾಪಾರದಿಂದಲೂ ಪ್ಲೇಗ್ ಹರಡಿತು. ಧಾನ್ಯದ ಅಂಗಡಿಗಳಿಗೆ ಇಲಿಗಳು ಮುತ್ತಿಗೆ ಹಾಕುತ್ತಿದ್ದವು. ಇದರಿಂದಾಗಿ 1897ರ ಅಂತ್ಯದ ವೇಳೆಗೆ ಪ್ಲೇಗ್ ಪಂಜಾಬ್‍ನವರೆಗೂ ಹಬ್ಬಿತ್ತು. ಅಷ್ಟೇ ಅಲ್ಲದೇ ಪಂಜಾಬ್‍ನಲ್ಲಿ ಹೆಚ್ಚಿನ ಸಾವು- ನೋವುಗಳು ಸಂಭವಿಸಿದವು.

    ಹೇಗಿತ್ತು ಬ್ರಿಟಿಷ್ ಅಧಿಕಾರಿಗಳ ಸ್ಪಂದನೆ: ಪ್ಲೇಗ್ ಮುಂಬೈನಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದಂತೆ ಸ್ವಚ್ಛತೆ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲು ಪ್ರಾರಂಭಿಸಿದರು. ನಂತರ ಸ್ಥಳೀಯರಿಗೆ ಬಲವಂತವಾಗಿ ತಪಾಸಣೆ ಮಾಡಿಸುವುದು, ಪ್ಲೇಗ್ ಕಂಡುಬಂದಲ್ಲಿ ಆಸ್ಪತ್ರೆಗೆ ಸೇರಿಸಲಾಯಿತು. ಈ ವಿಚಾರವಾಗಿ ಕೆಲವೊಮ್ಮೆ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಘರ್ಷಣೆಯೂ ನಡೆಯಿತು. ಅಲ್ಲದೇ ಅಧಿಕಾರಿಗಳು ಎಲ್ಲಾ ರೈಲು ನಿಲ್ದಾಣ ಹಾಗೂ ಬಂದರುಗಳಲ್ಲಿ ವೈದ್ಯಕೀಯ ತಪಾಸಣೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ದೇಶದಲ್ಲಿ ಅನೇಕ ಕಡೆಗಳಲ್ಲಿ ಗಲಭೆಗಳು ಉಂಟಾಯಿತು.

    ಆದರೆ 1900ರ ಹೊತ್ತಿಗೆ ಪರಿಸ್ಥಿತಿ ಬದಲಾಗತೊಡಗಿತು. ಈ ಸಂದರ್ಭದಲ್ಲಿ ಪ್ಲೇಗ್ ವಿರುದ್ಧ ಹೋರಾಡಲು ಅನೇಕ ಔಷಧಿ, ಚುಚ್ಚುಮದ್ದುಗಳನ್ನು ಕಂಡುಹಿಡಿಯಲಾಯಿತು. ಆದರೆ ಈ ಲಸಿಕೆಯನ್ನು ಸಾರ್ವಜನಿಕರಿಗೆ ನೀಡುವುದು ಅಷ್ಟು ಸುಲಭವಾಗಿರಲಿಲ್ಲ. ಲಸಿಕೆ ಬಗ್ಗೆ ಅನೇಕ ವದಂತಿಗಳು ಹರಡಿತ್ತು. ಲಸಿಕೆಯಿಂದಾಗಿ ಜನರ ಲೈಂಗಿಕ ಶಕ್ತಿಗಳು ನಾಶವಾಗುತ್ತದೆ ಎಂಬ ವದಂತಿ ಹೆಚ್ಚಾಗಿ ಹರಡಿತು. ಇದನ್ನೂ ಓದಿ: PublicTV Explainer: ಇರಾನ್‌ನಲ್ಲಿ ಹಿಜಬ್‌ ವಿರುದ್ಧದ ಹೋರಾಟದ ಹೊತ್ತಲ್ಲೇ ನೂರಾರು ಶಾಲಾ ವಿದ್ಯಾರ್ಥಿನಿಯರಿಗೆ ವಿಷವಿಕ್ಕಿದ ದುರುಳರು – ಏನಾಗ್ತಿದೆ ಅಲ್ಲಿ?

    ಪ್ಲೇಗ್ ಕ್ಷೀಣಿಸಿದ್ದು ಹೇಗೆ?: ಭಾರತದಲ್ಲಿ 20ನೇ ಶತಮಾನದ ಆರಂಭದಲ್ಲಿ ಅದು ಸಂಪೂರ್ಣವಾಗಿ ಕಣ್ಮರೆಯಾಯಿತು. 1990ರ ನಂತರ ರಷ್ಯನ್ ಫ್ರೆಂಚ್ ಬ್ಯಾಕ್ಟೀರಿಯಾಲಜಿಸ್ಟ್ ವಾಲ್ಡೆಮರ್ ಹಾಫ್ಕಿನ್ ಅಭಿವೃದ್ಧಿ ಪಡಿಸಿದ ಲಸಿಕೆಯೂ ಹೆಚ್ಚಾಗಿ ಪ್ರಚಲಿತಕ್ಕೆ ಬಂತು. ಮರಣ ಪ್ರಮಾಣವನ್ನು ಸುಮಾರು 80 ಪ್ರತಿಶತದಷ್ಟು ಕಡಿಮೆ ಮಾಡಿತು. ಇಲಿಗಳ ಹತ್ಯೆ ಮಾಡಿದಾಗ ಈ ರೊಗವು ಮತ್ತಷ್ಟು ಕಡಿಮೆಯಾಯಿತು.

    ಪ್ಲೇಗ್ ಆಯ್ತು, ಕೊರೊನಾ ಆಯ್ತು. ಈ ಕರಾಳತೆಯಿಂದ ಜನರು ಹೊರಬಂದು ನಿಟ್ಟುಸಿರು ಬಿಡುವ ಹೊತ್ತಿನಲ್ಲೇ ಹೆಚ್3ಎನ್2 ವೈರಸ್ ಭೀತಿ ಆವರಿಸಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾರ್ಗಸೂಚಿಯನ್ನು ಹೊರಡಿಸಿದ್ದು, ಜನತೆಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಇದನ್ನೂ ಓದಿ: PublicTV Explainer: ಕರಗುತ್ತಿವೆ ಹಿಮಸರೋವರಗಳು – ಭಾರತ, ಪಾಕಿಸ್ತಾನದ ಜನರಿಗೆ ಕಾದಿದೆ ಪ್ರವಾಹದ ಅಪಾಯ!

  • ಮಾರ್ಚ್‌ ಅಂತ್ಯದ ವೇಳೆಗೆ H3N2 ಸೋಂಕು ಪ್ರಕರಣ ಕಡಿಮೆಯಾಗುತ್ತೆ – ಆರೋಗ್ಯ ಸಚಿವಾಲಯ

    ಮಾರ್ಚ್‌ ಅಂತ್ಯದ ವೇಳೆಗೆ H3N2 ಸೋಂಕು ಪ್ರಕರಣ ಕಡಿಮೆಯಾಗುತ್ತೆ – ಆರೋಗ್ಯ ಸಚಿವಾಲಯ

    ನವದೆಹಲಿ: ಕೊರೊನಾ ವೈರಸ್‌ ನಂತರ ದೇಶದಲ್ಲಿ ಮತ್ತೆ ಭೀತಿ ಹುಟ್ಟಿಸಿರುವ ಹೆಚ್‌3ಎನ್‌2 (H3N2) ವೈರಸ್‌ ಮಾರ್ಚ್‌ ಅಂತ್ಯದ ವೇಳೆಗೆ ಇಳಿಕೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ತಿಳಿಸಿದೆ.

    ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (IDSP) ನೆಟ್‌ವರ್ಕ್‌ ಮೂಲಕ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್‌3ಎನ್‌2 ವೈರಸ್‌ ಪರಿಸ್ಥಿತಿಯನ್ನು ಅವಲೋಕಿಸಿ ಈ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಕೋವಿಡ್‌ ಬಳಿಕ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಬೆಲೆ ಭಾರೀ ಇಳಿಕೆ

    ದೇಶದಲ್ಲಿ ಹೆಚ್‌3ಎನ್‌2 ವೈರಸ್‌ಗೆ ಇಬ್ಬರು ಬಲಿಯಾಗಿದ್ದಾರೆ. ಅಲ್ಲದೇ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಹರಡುತ್ತಿರುವುದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿದೆ. 15 ವರ್ಷದ ಕೆಳಗಿನ ಮಕ್ಕಳು ಮತ್ತು 65 ವರ್ಷ ದಾಟಿದ ವೃದ್ಧರಿಗೆ ಈ ಸೋಂಕು ಸುಲಭವಾಗಿ ತಗುಲಬಹುದು. ಹೀಗಾಗಿ ಈ ವಯೋಮಾನದವರೆಲ್ಲ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

    ಕರ್ನಾಟಕದ ಹಾಸನದಲ್ಲಿ 82 ವರ್ಷದ ವ್ಯಕ್ತಿಯೊಬ್ಬರು ಹೆಚ್3ಎನ್2ನಿಂದ ಮೃತಪಟ್ಟಿದ್ದು, ದೇಶದಲ್ಲೇ ಈ ಸೋಂಕಿಗೆ ಬಲಿಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಹಿರೇಗೌಡ ಅವರನ್ನು ಫೆಬ್ರವರಿ 24 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ 1 ರಂದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಮಧುಮೇಹಿ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: H3N2ಗೆ ದೇಶದಲ್ಲಿ ಇಬ್ಬರು ಬಲಿ – ಕರ್ನಾಟಕ, ಹರಿಯಾಣದಲ್ಲಿ ಒಂದೊಂದು ಸಾವು

    ಹೆಚ್3ಎನ್2 ಸೋಂಕಿನ ರೋಗ ಲಕ್ಷಣಗಳು: ಮೈ ಕೈ ನೋವು, ತೀವ್ರಶೀತ, ಜ್ವರ ಮತ್ತು ಕೆಮ್ಮು, ಉಸಿರಾಟದ ಸಮಸ್ಯೆ ಕಾಡಬಹುದು, ಜ್ವರ, ಕೆಮ್ಮು ಕಾಣಿಸಿಕೊಂಡ ಎರಡು ಮೂರು ದಿನಗಳ ಬಳಿಕ ಕಡಿಮೆಯಾಗಲಿದೆ. ಕೆಮ್ಮು ಮತ್ತು ಕಫ ಎರಡು ವಾರಗಳವರೆಗೂ ಇರಲಿದೆ.

    ಈ ವೈರಾಣು ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅಗತ್ಯ ಎಂದು ತಜ್ಞರು ತಿಳಿಸಿದ್ದಾರೆ.

  • H3N2ಗೆ ದೇಶದಲ್ಲಿ ಇಬ್ಬರು ಬಲಿ – ಕರ್ನಾಟಕ, ಹರಿಯಾಣದಲ್ಲಿ ಒಂದೊಂದು ಸಾವು

    H3N2ಗೆ ದೇಶದಲ್ಲಿ ಇಬ್ಬರು ಬಲಿ – ಕರ್ನಾಟಕ, ಹರಿಯಾಣದಲ್ಲಿ ಒಂದೊಂದು ಸಾವು

    ನವದೆಹಲಿ: ಇತ್ತೀಚೆಗೆ ಜನರಲ್ಲಿ ಭಯ ಉಂಟುಮಾಡುತ್ತಿರುವ ಹೆಚ್3ಎನ್2 (H3N2) ಸೋಕಿಗೆ ದೇಶದಲ್ಲೇ ಮೊದಲ ಬಾರಿ 2 ಸಾವುಗಳು ವರದಿಯಾಗಿದೆ. ಮೊದಲ ಸಾವು ಕರ್ನಾಟಕದ (Karnataka) ಹಾಸನದಲ್ಲಿ (Hassan) ವರದಿಯಾಗಿದ್ದು, 2ನೇ ಸಾವು ಹರಿಯಾಣದಲ್ಲಿ (Haryana) ವರದಿಯಾಗಿದೆ.

    ಕಳೆದ ಕೆಲ ತಿಂಗಳುಗಳಿಂದ ದೇಶದಲ್ಲಿ ಹೆಚ್3ಎನ್2 ವೈರಸ್‌ನಿಂದಾಗಿ ಜ್ವರದ ಪ್ರಕರಣಗಳು ಹೆಚ್ಚುತ್ತಿದೆ. ದೇಶದಲ್ಲಿ ಸುಮಾರು 90 ಹೆಚ್3ಎನ್2 ಪ್ರಕರಣಗಳು ವರದಿಯಾಗಿವೆ. 8 ಹೆಚ್1ಎನ್1 (H1N1) ಪ್ರಕರಣಗಳೂ ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

    ಇದೀಗ ಭಾರತದಲ್ಲಿ ಪತ್ತೆಯಾಗುತ್ತಿರುವ ಹೆಚ್3ಎನ್2 ಹಾಗೂ ಹೆಚ್1ಎನ್1 ಸೋಂಕು ಎರಡೂ ಕೂಡಾ ಕೋವಿಡ್‌ನಂತೆಯೇ ಗುಣಲಕ್ಷಣಗಳನ್ನು ಹೊಂದಿವೆ. ಇದು ಪ್ರಪಂಚದಾದ್ಯಂತ ಲಕ್ಷಾಂತರ ಸಾವಿಗೆ ಕಾರಣವಾಗಿದೆ. ಇದೀಗ ಜನರು ಸಾಮಾನ್ಯ ಜ್ವರಕ್ಕೂ ಹೆಚ್ಚು ಆತಂಕಪಡುವಂತಾಗಿದೆ. ಇದನ್ನೂ ಓದಿ: ಆತಂಕ ಸೃಷ್ಟಿಸಿರುವ H3N2ಗೆ ರಾಜ್ಯದಲ್ಲಿ ಮೊದಲಿ ಬಲಿ

    ರೋಗಲಕ್ಷಣ:
    ಹೆಚ್3ಎನ್2 ಸೋಕು ತಗುಲಿದ ವ್ಯಕ್ತಿಯಲ್ಲಿ ನಿರಂತರ ಕೆಮ್ಮು, ಜ್ವರ, ಶೀತ, ಉಸಿರಾಟದ ತೊಂದರೆ ಹಾಗೂ ಉಬ್ಬಸದ ಲಕ್ಷಣಗಳು ಕಂಡುಬರುತ್ತದೆ. ಸೋಕಿತರಲ್ಲಿ ವಾಕರಿಕೆ, ಗಂಟಲು ನೋವು, ದೇಹದಲ್ಲಿ ನೋವು ಹಾಗೂ ಅತಿಸಾರವೂ ವರದಿಯಾಗಿದೆ. ಈ ರೋಗಲಕ್ಷಣಗಳು ಸುಮಾರು 1 ವಾರದವರೆಗೆ ಇರುತ್ತದೆ. ತಜ್ಞರ ಪ್ರಕಾರ ವೈರಸ್ ಕೆಮ್ಮು, ಸೀನು ಹಾಗೂ ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಲ್ಲಿ ಇರುವುದರಿಂದ ಹರಡುತ್ತದೆ. ಇದನ್ನೂ ಓದಿ: 3ನೇ ಅವಧಿಗೆ ಚೀನಾದ ಅಧ್ಯಕ್ಷನಾಗಿ ಕ್ಸಿ ಜಿನ್‌ಪಿಂಗ್ ಆಯ್ಕ

  • ಆತಂಕ ಸೃಷ್ಟಿಸಿರುವ H3N2ಗೆ ರಾಜ್ಯದಲ್ಲಿ ಮೊದಲಿ ಬಲಿ

    ಆತಂಕ ಸೃಷ್ಟಿಸಿರುವ H3N2ಗೆ ರಾಜ್ಯದಲ್ಲಿ ಮೊದಲಿ ಬಲಿ

    ಹಾಸನ: ಎಲ್ಲೆಡೆ ಆತಂಕ ಸೃಷ್ಟಿಸಿರುವ ಹೆಚ್3ಎನ್2 (H3N2) ಸೋಂಕಿಗೆ ರಾಜ್ಯದಲ್ಲಿ (Karnataka) ಮೊದಲ ಬಲಿಯಾಗಿದೆ.

    ಅನಾರೋಗ್ಯದಿಂದ ಮೃತಪಟ್ಟಿದ್ದ 83 ವರ್ಷದ ವೃದ್ಧನಿಗೆ ಹೆಚ್3ಎನ್2 ವೈರಸ್ ತಗುಲಿದ್ದುದು ದೃಢಪಟ್ಟಿದೆ. ಹಾಸನ (Hassan) ಜಿಲ್ಲೆ, ಆಲೂರು ತಾಲೂಕಿನ ವೃದ್ಧನಿಗೆ ಸೋಂಕು ತಗುಲಿದ್ದುದು ತಡವಾಗಿ ಬೆಳಕಿಗೆ ಬಂದಿದೆ.

    ವೃದ್ಧ ಜ್ವರ, ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದು, ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಾರ್ಚ್ 1 ರಂದು ಆಲೂರಿನಲ್ಲಿ ವೃದ್ಧ ಮೃತಪಟ್ಟಿದ್ದರು. ಮೃತ ವ್ಯಕ್ತಿಗೆ ಮಾರಣಾಂತಿಕ ಸೋಂಕು ಇದ್ದುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಡಿಎಚ್‌ಓ ಡಾ.ಶಿವಸ್ವಾಮಿ ತಿಳಿಸಿದ್ದಾರೆ. ಇದನ್ನೂ ಓದಿ: ಜೆ.ಪಿ ನಡ್ಡಾ ಭೇಟಿಯಾದ ಸುಮಲತಾ- ಬಹುತೇಕ ಬಿಜೆಪಿ ಸೇರ್ಪಡೆ ಖಚಿತ

    ಇದೀಗ ಮೃತ ವ್ಯಕ್ತಿಯ ಗ್ರಾಮದ ಸುತ್ತಮುತ್ತಲ ಹಳ್ಳಿಯಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತ ಜನರ ಹಾಗೂ ವೃದ್ಧರ ಆರೋಗ್ಯ ತಪಾಸಣೆ ನಡೆಸುತ್ತಿದೆ. ಗ್ರಾಮಸ್ಥರ ಗಂಟಲು ದ್ರವವನ್ನು ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಿರುವುದಾಗಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರತಿಸ್ಪರ್ಧಿಗಳ ಕಾಲಿಗೆ ಬಿದ್ದು ಗೃಹಪ್ರವೇಶಕ್ಕೆ ಆಮಂತ್ರಣ ನೀಡಿದ ರಘು ಆಚಾರ್