Tag: H.D.Deve Gowda

  • ದೊಡ್ಡಗೌಡ್ರ ಆರೋಗ್ಯ ವಿಚಾರಿಸಿದ ರಿಷಬ್‌ ಶೆಟ್ಟಿ

    ದೊಡ್ಡಗೌಡ್ರ ಆರೋಗ್ಯ ವಿಚಾರಿಸಿದ ರಿಷಬ್‌ ಶೆಟ್ಟಿ

    ಬೆಂಗಳೂರು: ನಟ ರಿಷಬ್ ಶೆಟ್ಟಿ (Rishab Shetty) ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರನ್ನು (H.D. Deve Gowda) ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಪದ್ಮನಾಭನಗರದ ನಿವಾಸದಲ್ಲಿ ಭೇಟಿಯಾಗಿ, ಕೆಲ ಕಾಲ ದೊಡ್ಡಗೌಡರ ಜೊತೆ ಮಾತುಕತೆ ನಡೆಸಿದರು.

    ಕಳೆದ ವಾರ ಜ್ವರ ಹಾಗೂ ಮೂತ್ರದ ಸೋಂಕಿನ ಸಮಸ್ಯೆಯಿಂದ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಒಂದು ವಾರ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದ ಹಿನ್ನೆಲೆ ಆಸ್ಪತ್ರೆಯಿಂದ ಅವರನ್ನು ಅ.13 ರಂದು ಡಿಸ್ಚಾರ್ಜ್ ಮಾಡಲಾಗಿತ್ತು. ಇದನ್ನೂ ಓದಿ: ದೊಡ್ಡಗೌಡ್ರ ಆರೋಗ್ಯದಲ್ಲಿ ಚೇತರಿಕೆ – ಆಸ್ಪತ್ರೆಯಿಂದ ಡಿಸ್ಚಾರ್ಜ್

    ದೇವೇಗೌಡರು ಕೆಲ ದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಬಿಸಿಲು, ಧೂಳಿರುವ ವಾತಾವರಣಕ್ಕೆ ಹೋಗದಂತೆ ಮತ್ತೆ ಸೋಂಕು ತಗುಲದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರು ಅವರಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: Bengaluru | ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಹ್ಲಾದ್ ಜೋಶಿ

  • ದೊಡ್ಡಗೌಡ್ರ ಆರೋಗ್ಯದಲ್ಲಿ ಚೇತರಿಕೆ – ಆಸ್ಪತ್ರೆಯಿಂದ ಡಿಸ್ಚಾರ್ಜ್

    ದೊಡ್ಡಗೌಡ್ರ ಆರೋಗ್ಯದಲ್ಲಿ ಚೇತರಿಕೆ – ಆಸ್ಪತ್ರೆಯಿಂದ ಡಿಸ್ಚಾರ್ಜ್

    ಬೆಂಗಳೂರು: ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರ (H.D Deve Gowda) ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದು, ಮಣಿಪಾಲ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಅವರು ಪದ್ಮನಾಭನಗರದ ನಿವಾಸಕ್ಕೆ ತೆರಳಿದ್ದಾರೆ.

    ಜ್ವರ ಹಾಗೂ ಮೂತ್ರದ ಸೋಂಕಿನ ಸಮಸ್ಯೆಯಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಒಂದು ವಾರದಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ ಸೂಚನೆ ಮೇರೆಗೆ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಇದನ್ನೂ ಓದಿ: Bengaluru | ದೇವೇಗೌಡರ ಆರೋಗ್ಯ ವಿಚಾರಿಸಿದ ಪ್ರಹ್ಲಾದ್ ಜೋಶಿ

    ಕೆಲ ದಿನಗಳ ಕಾಲ ಮನೆಯಲ್ಲೇ ಅವರು ವಿಶ್ರಾಂತಿ ಪಡೆಯಲಿದ್ದಾರೆ. ಬಿಸಿಲು, ಧೂಳಿರುವ ವಾತಾವರಣಕ್ಕೆ ಹೋಗದಂತೆ ಮತ್ತೆ ಸೋಂಕು ತಗಲದಂತೆ ಎಚ್ಚರ ವಹಿಸಬೇಕು ಎಂದು ವೈದ್ಯರು ಅವರಿಗೆ ಸಲಹೆ ನೀಡಿದ್ದಾರೆ.

    ದೇವೇಗೌಡರ ನಿವಾಸಕ್ಕೆ ಬಿಜೆಪಿ (BJP) ನಾಯಕರ ಭೇಟಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಇನ್ನಿತರ ಬಿಜೆಪಿ ನಾಯಕರು ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಹಾಸನ ಟ್ರಕ್ ದುರಂತಕ್ಕೆ 10 ಬಲಿ – ಗಾಯಾಳುಗಳ ಆರೋಗ್ಯ ವಿಚಾರಿಸಲು ವ್ಹೀಲ್‌ಚೇರ್‌ನಲ್ಲೇ ಆಸ್ಪತ್ರೆಗೆ ಬಂದ ಹೆಚ್‌ಡಿಡಿ

  • ಹಾಸನಾಂಬ ದರ್ಶನ ಪಡೆದ ಸೂರಜ್‌ ರೇವಣ್ಣ – ಜಿಲ್ಲಾಡಳಿತದ ವ್ಯವಸ್ಥೆಗೆ ಮೆಚ್ಚುಗೆ

    ಹಾಸನಾಂಬ ದರ್ಶನ ಪಡೆದ ಸೂರಜ್‌ ರೇವಣ್ಣ – ಜಿಲ್ಲಾಡಳಿತದ ವ್ಯವಸ್ಥೆಗೆ ಮೆಚ್ಚುಗೆ

    – ದೇವೇಗೌಡರು ಆರೋಗ್ಯವಾಗಿದ್ದಾರೆ

    ಹಾಸನ: ವಿಧಾನ ಪರಿಷತ್ ಸದಸ್ಯ ಸೂರಜ್‍ ರೇವಣ್ಣ (Suraj Revanna) ಜಿಲ್ಲಾಡಳಿತದ ಶಿಷ್ಟಾಚಾರದ ಪ್ರಕಾರವೇ ಜಿಲ್ಲಾಡಳಿತ ವ್ಯವಸ್ಥೆ ಮಾಡಿರುವ ವಾಹನದಲ್ಲಿ ಆಗಮಿಸಿ ಹಾಸನಾಂಬ ದೇವಿ (Hasanamba Temple) ದರ್ಶನ ಪಡೆದರು.

    ದೇವಿ ದರ್ಶನದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಹಾಸನಾಂಬ ದರ್ಶನ ಪಡೆಯಲು ಜಿಲ್ಲೆ, ರಾಜ್ಯದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. ಅವರೆಲ್ಲರಿಗೂ ತಾಯಿ ಒಳ್ಳೆಯದನ್ನು ಮಾಡಲಿ. ರೈತಾಪಿ, ಗ್ರಾಮೀಣ ಭಾಗದ ಜನಕ್ಕೆ ಕಾಲ ಕಾಲಕ್ಕೆ ಮಳೆಯಾಗಿ ಬೆಳೆ ಬೆಳೆಯಲು ಅನುಕೂಲವಾದ ವಾತಾವರಣವನ್ನು ಆ ತಾಯಿ ಅನುಗ್ರಹಿಸಲಿ. ಈ ಬಾರಿಯ ಜಾತ್ರಾ ಮಹೋತ್ಸವ ವ್ಯವಸ್ಥಿತವಾಗಿ, ಶಿಸ್ತಾಗಿ ನಡೆಯುತ್ತಿದೆ. ಇದೇ ರೀತಿ ಮುಂದುವರೆಯಲಿ ಎಂದರು. ಇದನ್ನೂ ಓದಿ: ಹಾಸನಾಂಬ ದೇವಿಯ ದರ್ಶನದ ಮೊದಲ ದಿನವೇ ಭಾರೀ ಮಳೆ

    ಹದಿಮೂರು ದಿನ ತಾಯಿ ದರ್ಶನವಿರುತ್ತದೆ. ಅದಕ್ಕೆ ಎಲ್ಲಾ ರೀತಿಯ ಅವಕಾಶ ಮಾಡಿಕೊಟ್ಟಿದ್ದಾರೆ. ಜನ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಯಾವುದೇ ಗೊಂದಲ, ಘರ್ಷಣೆ ಇಲ್ಲದೇ ದೇವಿ ದರ್ಶನ ಪಡೆಯಿರಿ ಎಂದರು. ವಿಶೇಷವಾಗಿ ನಮ್ಮ ಜಿಲ್ಲೆಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳಾಗಲಿ. ನಾನು ಶಿಷ್ಟಾಚಾರದ ವ್ಯವಸ್ಥೆಯಲ್ಲಿಯೇ ಬಂದೆ. ಸಾರ್ವಜನಿಕರಿಗೆ ತೊಂದರೆ ಆಗಬಾರದು. ಜಿಲ್ಲಾಡಳಿತ ಏನು ವ್ಯವಸ್ಥೆ ಮಾಡಿದೆ ನಾವು ಕೂಡ ಅದನ್ನು ಪಾಲಿಸಿದ್ದೇವೆ ಎಂದಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡರು (H.D Deve Gowda) ಚೆನ್ನಾಗಿ ಇದ್ದಾರೆ. ಇನ್ನೂ ಎರಡು, ಮೂರು ದಿನದಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾಸ್ತ್ರೋಕ್ತವಾಗಿ ತೆರೆದ ಹಾಸನಾಂಬೆ ಗರ್ಭಗುಡಿ ಬಾಗಿಲು – ಉರಿಯುತ್ತಿದ್ದ ದೀಪ, ಬಾಡದ ಹೂವು, ಹಳಸದ ನೈವೇದ್ಯ

  • ಹಾಸನ ಟ್ರಕ್ ದುರಂತಕ್ಕೆ 10 ಬಲಿ – ಗಾಯಾಳುಗಳ ಆರೋಗ್ಯ ವಿಚಾರಿಸಲು ವ್ಹೀಲ್‌ಚೇರ್‌ನಲ್ಲೇ ಆಸ್ಪತ್ರೆಗೆ ಬಂದ ಹೆಚ್‌ಡಿಡಿ

    ಹಾಸನ ಟ್ರಕ್ ದುರಂತಕ್ಕೆ 10 ಬಲಿ – ಗಾಯಾಳುಗಳ ಆರೋಗ್ಯ ವಿಚಾರಿಸಲು ವ್ಹೀಲ್‌ಚೇರ್‌ನಲ್ಲೇ ಆಸ್ಪತ್ರೆಗೆ ಬಂದ ಹೆಚ್‌ಡಿಡಿ

    – ಮೃತರ ಕುಟುಂಬಕ್ಕೆ ಜೆಡಿಎಸ್‌ನಿಂದ 1 ಲಕ್ಷ ಪರಿಹಾರ ಘೋಷಣೆ
    – ಸರ್ಕಾರದಿಂದ ಪರಿಹಾರ ಹೆಚ್ಚಳಕ್ಕೆ ದೇವೇಗೌಡರ ಆಗ್ರಹ

    ಹಾಸನ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್ ಹರಿದು 10 ಮಂದಿ ಸಾವಿಗೀಡಾಗಿದ್ದು, ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾನು ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಜನರ ಕಷ್ಟ ಕೇಳಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರು ದುರಂತ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ಮೊಸಳೆ ಹೊಸಳ್ಳಿಯಲ್ಲಿ ಭೀಕರ ಅಪಘಾತ ಸಂಭವಿಸಿ 10 ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಆರೋಗ್ಯ ವಿಚಾರಿಸಲು ಹಾಸನಕ್ಕೆ ದೇವೇಗೌಡರು ಆಗಮಿಸಿದರು. ಜಿಲ್ಲಾಸ್ಪತ್ರೆಯ ಹೊರಭಾಗದಿಂದ ವ್ಹೀಲ್‌ಚೇರ್‌ನಲ್ಲೇ ಆಗಮಿಸಿದರು. ಪ್ರತಿಯೊಬ್ಬರ ಯೋಗಕ್ಷೇಮ ವಿಚಾರಿಸಿದರು. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದನ್ನೂ ಓದಿ: ಹಾಸನದಲ್ಲಿ ಗಣೇಶ ಮೆರವಣಿಗೆ ವೇಳೆ ಘನಘೋರ ದುರಂತ – ಸಾವಿನ ಸಂಖ್ಯೆ 9ಕ್ಕೆ ಏರಿಕೆ

    ಭೇಟಿಗೂ ಮುನ್ನ ದುರಂತದ ಕುರಿತು ಹಾಸನದ ಪ್ರವಾಸಿ ಮಂದಿರದಲ್ಲಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿದ್ದರು. ಆ ಊರಿನ ಮಗ ನಾನು. ಅದಕ್ಕೆ 93 ನೇ ವಯಸ್ಸಿನಲ್ಲೂ ಬಂದಿದ್ದೇನೆ. ನಮ್ಮದು ಸಣ್ಣ ರಾಜಕೀಯ ಪಕ್ಷ. ವೈದ್ಯರ ಜೊತೆ ಚರ್ಚೆ ಮಾಡಿದ್ದೇನೆ, ಮೇಜರ್ ಎಲ್ಲಾ ನಾನೇ ಮಾಡ್ತೀವಿ. ಜಾಸ್ತಿ ಗಾಯ ಆದವರಿಗೆ ಪಕ್ಷದಿಂದ 25 ಸಾವಿರ, ಸಣ್ಣಪುಟ್ಟ ಗಾಯ ಆದವರಿಗೆ 20, ಸ್ವಲ್ಪ ಗಾಯ ಆದವರಿಗೆ 15 ಸಾವಿರ ಕೊಡ್ತೀವಿ. ಮೃತರ ಕುಟುಂಬಕ್ಕೆ ಪಕ್ಷದಿಂದ 1 ಲಕ್ಷ ಹಣ ಕೊಡುತ್ತೇವೆ ಎಂದು ತಿಳಿಸಿದ್ದರು.

    5 ಲಕ್ಷ ಸಾಲಲ್ಲ, ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ದುಡಿಯೋ ಮಕ್ಕಳು ಸಾವನ್ನಪ್ಪಿದ್ದಾರೆ. ನಿಮ್ಮ ಹಣ ಬ್ಯಾಂಕಿನಲ್ಲಿಟ್ಟರೂ ಬರುವ ಬಡ್ಡಿಯಲ್ಲಿ ಬದುಕಲು ಆಗಲ್ಲ. ನೆರೆ ರಾಜ್ಯಕ್ಕೆ ಹೇಗೆ ಪರಿಹಾರ ಕೊಡ್ತಿದ್ದಾರೆ. ವಯಸ್ಸಾದವರು ಇದ್ದಾರೆ, ದುಡಿಯೋರು ಸಾವನ್ನಪ್ಪಿದ್ದಾರೆ, ನಾನು ರಾಜಕೀಯ ಮಾಡಲ್ಲ ಇಲ್ಲ. ಪರಿಹಾರವಾಗಿ 10 ಲಕ್ಷ ನೀಡಬೇಕು. ಕುಟುಂಬದ ಸ್ಥಿತಿ ನೋಡಿ ಪರಿಹಾರ ಹೆಚ್ಚಿಸಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಹಾಸನ | ವಿಮಾನ ದುರಂತದಲ್ಲಾದ್ರೆ 1 ಕೋಟಿ ಕೊಡ್ತೀರಿ, ಬಡವರ ಜೀವಕ್ಕೆ ಬೆಲೆ ಇಲ್ವಾ? – ಸಚಿವರಿಗೆ ಜನರ ತರಾಟೆ

    ಇಲ್ಲಿ ನಾನು ಜಾತಿ ತರಲ್ಲ, ಮಾಡಲ್ಲ. ಲೋಕಲ್ ಪೊಲೀಸ್ ಸ್ವಲ್ಪ ಕೇರ್ ತೆಗೆದುಕೊಂಡಿದ್ದರೆ ಇದು ಆಗ್ತಿರಲಿಲ್ಲ. ನಾಳೆ ಜಿಲ್ಲೆಗಳಿಗೆ ಹೋಗಬಹುದು. ದೇವೇಗೌಡರೇ 93 ನಡೀತಿದೆ. ರಾಜಕೀಯದಲ್ಲಿ ನಿಮಗೆ ಭ್ರಮೆ ಇಲ್ಲ. ಕೆಲಸ ಮಾಡುವ ಮನಸ್ಸು-ಶಕ್ತಿ ಇದೆಯೋ ಹೋರಾಟ ಮಾಡ್ತೀನಿ. ಅದು ನನ್ನ ನೇಚರ್. ನಾಳೆ ಪ್ರೆಸ್‌ಮೀಟ್ ಮಾಡಿದ್ರೆ ಬೇರೆ ಚರ್ಚೆ ಮಾಡೋಣ. ಇಲ್ಲಿ ಮಿಕ್ಸ್ ಮಾಡೋದು ಬೇಡ. ರಾಜಕೀಯದಲ್ಲಿ ನನ್ನ ಕೆಲಸ ಮುಗಿದಿಲ್ಲ. ಇನ್ನೂ ಸ್ವಲ್ಪ ಕೆಲಸ ಇದೆ ಎಂದು ತಿಳಿಸಿದರು.

    ಟ್ರಕ್ ದುರಂತದಲ್ಲಿ ಮೃತಪಟ್ಟವರ ಪೈಕಿ 6 ಮಂದಿ ಹೊಳೆನರಸೀಪುರದವರು. ಸುಮಾರು 65 ವರ್ಷಗಳಿಂದ ಹೊಳೆನರಸೀಪುರ ಕ್ಷೇತ್ರದ ಜೊತೆ ದೇವೇಗೌಡರು ರಾಜಕೀಯ ನಂಟು ಹೊಂದಿದ್ದಾರೆ. ಮೊಸಳೆ ಹೊಸಳ್ಳಿ ಹೋಬಳಿಯಲ್ಲಿ ಹೆಚ್ಚು ಕೌಟುಂಬಿಕ ಸಂಬಂಧವನ್ನು ದೊಡ್ಡಗೌಡ ದಂಪತಿ ಹೊಂದಿದ್ದಾರೆ.

  • ಹಾಸನ ಹೊರವರ್ತುಲ ರಸ್ತೆ ಯೋಜನೆಗೆ ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಹೆಚ್.ಡಿ.ದೇವೇಗೌಡ ಮನವಿ

    ಹಾಸನ ಹೊರವರ್ತುಲ ರಸ್ತೆ ಯೋಜನೆಗೆ ಅನುಮೋದನೆ ನೀಡುವಂತೆ ಕೇಂದ್ರಕ್ಕೆ ಹೆಚ್.ಡಿ.ದೇವೇಗೌಡ ಮನವಿ

    – ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಮಾಜಿ ಪ್ರಧಾನಿ

    ನವದೆಹಲಿ: ಹಾಸನ (Hassan) ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಸನ ವರ್ತುಲ ರಸ್ತೆ ಯೋಜನೆಗೆ ಒಪ್ಪಿಗೆ ನೀಡಬೇಕು ಎಂದು ಮಾಜಿ ಪ್ರಧಾನಿಗಳು, ರಾಜ್ಯಸಭೆ ಸದಸ್ಯರಾದ ಹೆಚ್.ಡಿ.ದೇವೇಗೌಡ (H.D.Deve Gowda) ಅವರು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು.

    ಸಂಸತ್ ಭವನದಲ್ಲಿರುವ ಸಾರಿಗೆ ಸಚಿವರ ಕಚೇರಿಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರೊಂದಿಗೆ ಗಡ್ಕರಿ ಅವರನ್ನು ಭೇಟಿಯಾದ ಮಾಜಿ ಪ್ರಧಾನಿಗಳು, ಹಾಸನ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಕರಾವಳಿ ಮತ್ತು ಒಳನಾಡು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದೆ. ಹೀಗಾಗಿ, ಸಂಚಾರ ದಟ್ಟಣೆ ಕಡಿಮೆ ಮಾಡುವ ಅಗತ್ಯವಿದ್ದು, ವರ್ತುಲ ರಸ್ತೆ ನಿರ್ಮಾಣದ ಅಗತ್ಯ ಬಹಳಷ್ಟಿದೆ ಎಂದು ಹೇಳಿದರು. ಇದನ್ನೂ ಓದಿ: ಏ.1ರಿಂದ ಗೋಧಿ ದಾಸ್ತಾನು ಘೋಷಣೆ ಕಡ್ಡಾಯ – ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಚನೆ

    ಅಲ್ಲದೆ, ಕರ್ನಾಟಕದ ಮೂಲಸೌಕರ್ಯ ವ್ಯವಸ್ಥೆಯನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ತಾವು ಮುತುವರ್ಜಿ ವಹಿಸಿ ಕೆಲಸ ಮಾಡುತ್ತಿದ್ದು, ನಾನಾ ಭಾಗಗಳಲ್ಲಿ ಜಾರಿಯಲ್ಲಿರುವ ಯೋಜನೆಗಳನ್ನು ಕ್ಷಿಪ್ರಗತಿಯ ಪೂರ್ಣಗೊಳಿಸಬೇಕು ಎಂದು ಮಾಜಿ ಪ್ರಧಾನಿಗಳು ಸಚಿವರನ್ನು ಕೋರಿದರು.

    ಹಾಸನ ಹೊರವರ್ತುಲ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ಸಾರಿಗೆ ಸಚಿವರಿಗೆ ಮನವಿ ಪತ್ರ ನೀಡಿದ ದೇವೇಗೌಡರು, ಯೋಜನೆಗೆ ಅದಷ್ಟು ಬೇಗ ಅನುಮೋದನೆ ನೀಡಬೇಕು ಎಂದು ಕೋರಿದರು. ಹಾಸನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ, ಸಂಪರ್ಕವನ್ನು ಸುಧಾರಿಸುವಲ್ಲಿ ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುವಲ್ಲಿ ಪ್ರಸ್ತಾವಿತ ರಿಂಗ್ ರಸ್ತೆಯ ನಿರ್ಣಾಯಕ ಪಾತ್ರವನ್ನು ನಿಯೋಗ ಒತ್ತಿಹೇಳಿತು.

    ರಾಜ್ಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಎರಡನೇ ಹಂತದ ನಗರವಾದ ಹಾಸನ, ಆರ್ಥಿಕ ಬೆಳವಣಿಗೆ ಮತ್ತು ನಗರ ವಿಸ್ತರಣೆಯಿಂದಾಗಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಹೀಗಾಗಿ, ಹೊರವರ್ತುಲ ರಸ್ತೆ ಅಗತ್ಯವಾಗಿದೆ. ಈ ಯೋಜನೆಯು ಸಂಚಾರವನ್ನು ವಿಕೇಂದ್ರೀಕರಿಸಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಹಾಗೂ ಪ್ರಮುಖ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಸಂಪರ್ಕ ಒದಗಿಸುತ್ತದೆ ಎಂದು ಮಾಜಿ ಪ್ರಧಾನಿಗಳು ಗಡ್ಕರಿ ಅವರಿಗೆ ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಏ.1ರಿಂದ ಟೋಲ್ ದರದಲ್ಲಿ ರಿಯಾಯಿತಿ – ನಿತಿನ್ ಗಡ್ಕರಿ

    ಪ್ರಸ್ತಾವಿತ ಹೊರ ವರ್ತುಲ ರಸ್ತೆಯು ಬೆಂಗಳೂರು-ನೆಲಮಂಗಲ-ಮಂಗಳೂರು ರಸ್ತೆ (NH-75) ಅನ್ನು ಹಾಸನ ವಿಮಾನ ನಿಲ್ದಾಣ, ಹಾಸನ-ಅರಸೀಕೆರೆ ರಸ್ತೆ (SH-71), ಹಾಸನ-ಹಳೇಬೀಡು-ಹಾಸನ ರಸ್ತೆ ಮತ್ತು ಹಾಸನ-ಬೆಲೂರು ರಸ್ತೆ (NH-373)ಗೆ ಸಂಪರ್ಕಿಸುತ್ತದೆ. ಈ ಸಂಪರ್ಕವು ಸುಗಮ ಸಾರಿಗೆಗೆ ಅನುಕೂಲವಾಗುತ್ತದೆ. ಅಲ್ಲದೆ, ಹಾಸನ ಜಿಲ್ಲೆಯಲ್ಲಿರುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳು ಮತ್ತು ರಾಷ್ಟ್ರೀಯ ಪ್ರವಾಸಿ ಸರ್ಕ್ಯೂಟ್‌ನ ಭಾಗವಾಗಿರುವ ಹಾಸನ, ಬೇಲೂರು, ಹಳೇಬೀಡು, ಚಿಕ್ಕಮಗಳೂರು, ಶ್ರವಣಬೆಳಗೊಳ, ಮೈಸೂರು, ಮಡಿಕೇರಿ ಮತ್ತು ಮಂಗಳೂರಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ದೇವೇಗೌಡರು ಕೇಂದ್ರ ಸಾರಿಗೆ ಸಚಿವರಿಗೆ ವಿವರಿಸಿದರು.

    ಯೋಜನೆಯ ವಿವರ:
    ಪ್ರಸ್ತಾವಿತ ವರ್ತುಲ ರಸ್ತೆಯ ಒಟ್ಟು ಉದ್ದ 21.950 ಕಿ.ಮೀ. ದೂರವನ್ನು ಹೊಂದಿದ್ದು, ಯೋಜನೆಗೆ ಸುಮಾರು 120 ಹೆಕ್ಟೇರ್ ಭೂಮಿ ಅಗತ್ಯವಿದೆ. ಜಿಎಸ್‌ಟಿ, ಭೂಸ್ವಾಧೀನ ಮತ್ತು ಸ್ಥಳಾಂತರ ಸೇರಿದಂತೆ ಯೋಜನೆಯ ಅಂದಾಜು ವೆಚ್ಚ ಸುಮಾರು 750 ಕೋಟಿ ರೂ. ಆಗಲಿದೆ ಎಂದು ಮಾಜಿ ಪ್ರಧಾನಿಗಳು ಸಾರಿಗೆ ಸಚಿವರಿಗೆ ವಿವರಿಸಿದರು.

    ಯೋಜನೆಯ ಆರ್ಥಿಕ ಪರಿಣಾಮದ ಕುರಿತು ವಿವರಿಸಿದ ದೇವೇಗೌಡರು, ಉತ್ತಮ ರಸ್ತೆ ಮೂಲಸೌಕರ್ಯವು ಈ ಪ್ರದೇಶದಲ್ಲಿ ವೇಗಯುತ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಈ ವರ್ತುಲ ರಸ್ತೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದಲ್ಲದೆ, ವ್ಯಾಪಾರ, ಕೃಷಿ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಹಾಸನದ ಜನರಿಗೆ ಹೊಸ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಹನಿಟ್ರ್ಯಾಪ್‌ ಪ್ರಕರಣ ತನಿಖೆಗೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ

    ನಿಯೋಗದಲ್ಲಿ ಮಾಜಿ ಸಚಿವ ಸಂಸದ ಹೆಚ್.ಡಿ.ರೇವಣ್ಣ, ಕೋಲಾರದ ಲೋಕಸಭೆ ಕ್ಷೇತ್ರದ ಸದಸ್ಯ ಎಂ.ಮಲ್ಲೇಶ್ ಬಾಬು, ಮಾಜಿ ಸಚಿವ ಎ.ಮಂಜು, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎ.ತಿಪ್ಪೇಸ್ವಾಮಿ, ಚೌಡರೆಡ್ಡಿ ತೂಪಲ್ಲಿ ಅವರಿದ್ದರು.

  • ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ ತರಲು ಹೆಚ್.ಡಿ.ದೇವೇಗೌಡರ ಒತ್ತಾಯ

    ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಹೃದಯಾಘಾತ, ಪಾರ್ಶ್ವವಾಯುಗೆ ಚಿಕಿತ್ಸೆ ತರಲು ಹೆಚ್.ಡಿ.ದೇವೇಗೌಡರ ಒತ್ತಾಯ

    – ಗ್ರಾಮೀಣ ವೈದ್ಯರು, ಆಸ್ಪತ್ರೆ ಸಿಬ್ಬಂದಿ, ದಾದಿಯರ ವೇತನ ಹೆಚ್ಚಳಕ್ಕೆ ಸಲಹೆ
    – ರಾಜ್ಯಸಭೆಯಲ್ಲಿ ಆರೋಗ್ಯ ಕ್ಷೇತ್ರದ ಬಗ್ಗೆ ಮಾಜಿ ಪ್ರಧಾನಿಗಳ ಚರ್ಚೆ
    – ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ಹಂಚಿಕೆ 99,058 ಕೋಟಿಗೆ ಏರಿಕೆ; ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ಮಾಜಿ ಪ್ರಧಾನಿ

    ನವದೆಹಲಿ: ಆಯುಷ್ಮಾನ್ ಭಾರತ್ ಕಾರ್ಯಕ್ರಮದಡಿಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುಗೆ ಚಿಕಿತ್ಸೆ ಪಡೆಯಲು ರಾಷ್ಟ್ರವ್ಯಾಪಿ ಯೋಜನೆ ರೂಪಿಸಬೇಕು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದರು.

    ರಾಜ್ಯಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಪ್ರಧಾನಿಗಳು, ಹೃದಯಾಘಾತ ಮತ್ತು ಪಾರ್ಶ್ವವಾಯುನಿಂದ ಮರಣ ಹೊಂದುವವರು ಭಾರತದಲ್ಲಿ ಹೆಚ್ಚುತ್ತಿದ್ದಾರೆ. ಪ್ರತಿ ವರ್ಷ ನಾವು ಲಕ್ಷಾಂತರ ಜನರನ್ನು ಕಳೆದುಕೊಳ್ಳುತ್ತಿದ್ದೇವೆ ಮತ್ತು ದುರದೃಷ್ಟವಶಾತ್ ಶೇ.30 ರಷ್ಟು ಹೃದಯಾಘಾತಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಸಂಭವಿಸುತ್ತವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

    ಗ್ರಾಮೀಣ ಪ್ರದೇಶದಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿರುವ ಸಲುವಾಗಿ ತಾಲ್ಲೂಕು ಆಸ್ಪತ್ರೆಗಳಲ್ಲಿ 18,000 ರೂ.ಗೆ ರಕ್ತ ಹೆಪ್ಪುಗಟ್ಟುವಿಕೆ ಕರಗಿಸುವ ಇಂಜೆಕ್ಷನ್‌ಗಳು ಲಭ್ಯವಾಗುವಂತೆ ಮಾಡಬೇಕೆಂದು ಕೋರಿದರು. ಹೀಗೆ ಮಾಡುವುದರಿಂದ ಗೋಲ್ಡನ್. ಅವರ್ ನಲ್ಲಿಯೇ, ಆರು ಗಂಟೆಗಳ ಒಳಗಾಗಿ ಜೀವಗಳನ್ನು ಉಳಿಸಬಹುದು. ಆರಂಭಿಕವಾಗಿ ಆಯುಷ್ಮಾನ್ ಭಾರತ್ ಅಡಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಮತ್ತು ಸ್ಟಂಟ್ ಅಳವಡಿಸುವುದಕ್ಕಾಗಿ ರೋಗಿಗಳನ್ನು ಹತ್ತಿರದ ನಗರಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.

    ಆಯುಷ್ಮಾನ್ ಭಾರತ್ ಅಡಿಯಲ್ಲಿ ಆಂಜಿಯೋಪ್ಲ್ಯಾಸ್ಟಿ ಒಳಗೊಳ್ಳಲ್ಪಟ್ಟಿದ್ದರೂ ಜೀವ ರಕ್ಷಕ ಔಷಧಿಗಳನ್ನು ಸಹ ಈ ಯೋಜನೆಯಲ್ಲಿ ಸೇರಿಸಬೇಕು ಎಂದು ಮನವಿ ಮಾಡಿದರು.

    ಕಳೆದ ಹತ್ತು ವರ್ಷಗಳಲ್ಲಿ ರಾಷ್ಟ್ರದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ತೀವ್ರಗತಿಯ ಸುಧಾರಣೆಗೆಲೈ ಆಗುತ್ತಿವೆ. 2013-14ರಲ್ಲಿ ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ಹಂಚಿಕೆ ಕೇವಲ 37,000 ಕೋಟಿ ರೂ.ಗಳಷ್ಟಿತ್ತು. ಈಗ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಹಂಚಿಕೆ 99,058 ಕೋಟಿ ರೂ.ಗಳಿಗೆ ಏರಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಹೇಳಿದರು. ಎನ್‌ಡಿಎ ಹಾಗೂ ಯುಪಿಎ ಸರ್ಕಾರಗಳ ಅವಧಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಆಗಿರುವ ಬೆಳವಣಿಗೆಯನ್ನು ಹೋಲಿಸಿ ಮಾತನಾಡಿದರು.

    ಗ್ರಾಮೀಣ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ದಾದಿಯರ ಕೊರತೆ ನೀಗಿಸಿ
    ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಎಂಬಿಬಿಎಸ್ ವೈದ್ಯರ ವೇತನ ಹೆಚ್ಚಳಕ್ಕೆ ದೇವೇಗೌಡರು ಬಲವಾಗಿ ಪ್ರತಿಪಾದಿಸಿದರು. ಗ್ರಾಮೀಣ ವೈದ್ಯರು ಪ್ರಸ್ತುತ ತಿಂಗಳಿಗೆ 50,000-60,000 ರೂ. ವೇತನ ಪಡೆಯುತ್ತಿದ್ದಾರೆ. ಕಡಿಮೆ ಸಂಬಳದಿಂದಾಗಿ ವೈದ್ಯರು ಸಹ ಗ್ರಾಮೀಣ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿಲ್ಲ. ಪಿಎಚ್‌ಸಿಗಳು, ಸಿಎಚ್‌ಸಿಗಳು ಮತ್ತು ತಾಲ್ಲೂಕು ಆಸ್ಪತ್ರೆಗಳಿಗೆ ಹೆಚ್ಚಿನ ವೃತ್ತಿಪರರನ್ನು ಆಕರ್ಷಿಸಲು ಸರ್ಕಾರ ಅವರ ವೇತನವನ್ನು ಕನಿಷ್ಠ 80,000-90,000 ರೂ.ಗೆ ಹೆಚ್ಚಿಸಬೇಕು ಎಂದು ಮಾಜಿ ಪ್ರಧಾನಿಗಳು ಒತ್ತಾಯಿಸಿದರು.

    ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಪ್ರೋತ್ಸಾಹ ಧನ ನೀಡಬೇಕು. ಗ್ರಾಮೀಣ ಆರೋಗ್ಯವನ್ನು ನಾವು ಸುಧಾರಿಸದೇ ಇದ್ದರೆ, ನಮ್ಮ ಹಳ್ಳಿಗಳು ಸರಿಯಾದ ವೈದ್ಯಕೀಯ ಆರೈಕೆಯ ಕೊರತೆಯಿಂದ ಬಳಲುತ್ತಲೇ ಇರುತ್ತವೆ ಎಂದು ಅವರು ಎಚ್ಚರಿಸಿದರು.

    ಅದೇ ರೀತಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಮತ್ತು ದಾದಿಯರಿಗೆ ಕಡಿಮೆ ಸಂಬಳದ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. ಅವರಿಗೆ ಪ್ರಸ್ತುತ ತಿಂಗಳಿಗೆ ಕೇವಲ 13,000 ರೂ. ವೇತನ ನೀಡಲಾಗುತ್ತದೆ. ಈ ವೇತನವು ದೈನಂದಿನ ವೇತನ ಮಾನದಂಡಕ್ಕಿಂತ ಕಡಿಮೆಯಾಗಿದೆ. ದಾದಿಯರು ತಮ್ಮ ಕುಟುಂಬಗಳನ್ನು ಉಳಿಸಿಕೊಳ್ಳಲು ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದನ್ನು ಮುಂದುವರಿಸಲು ವೇತನವನ್ನು ಕನಿಷ್ಠ 20,000-28,000 ರೂ.ಗೆ ಹೆಚ್ಚಿಸಬೇಕು ಎಂದು ಕೋರಿದರು.

    HPV ಲಸಿಕೆ ಮತ್ತು ಕ್ಯಾನ್ಸರ್ ತಡೆಗಟ್ಟುವಿಕೆ
    ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದಲ್ಲಿ HPV ಲಸಿಕೆಯನ್ನು ಸೇರಿಸಬೇಕೆಂದು ದೇವೇಗೌಡರು ಮನವಿ ಮಾಡಿದರು. ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಒಂದಾಗಿದೆ. HPV ಲಸಿಕೆಯು ಅದರ ಸಂಭವವನ್ನು ಶೇ.80-90ರಷ್ಟು ಕಡಿಮೆ ಮಾಡುತ್ತದೆ. ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮದ ಭಾಗವಾಗಿ ಪ್ರೌಢಶಾಲಾ ಹುಡುಗಿಯರಿಗೆ ಲಸಿಕೆ ಹಾಕುವುದು ಉತ್ತಮ ಪರಿಹಾರೋಪಾಯ ಆಗಿದೆ ಅವರು ಒತ್ತಿ ಹೇಳಿದರು.

    ಗ್ರಾಮೀಣ ಆರೋಗ್ಯ ರಕ್ಷಣೆಯಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಪ್ರೋತ್ಸಾಹಿಸಿ
    ಸೇವೆಯಲ್ಲಿ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸಲು, ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ವಿಶೇಷ ಕೇಂದ್ರಗಳನ್ನು ಸ್ಥಾಪಿಸುವ ಖಾಸಗಿ ಆಸ್ಪತ್ರೆಗಳಿಗೆ ಐದು ವರ್ಷಗಳ ತೆರಿಗೆ ವಿನಾಯಿತಿ ನೀಡುವ ಬಗ್ಗೆ ದೇವೇಗೌಡರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದರು.

    ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಉತ್ತಮ ಆರ್ಥಿಕ ನೆರವು ನೀಡಬೇಕೆಂದು ಅವರು ಒತ್ತಾಯಿಸಿದ ಅವರು, ಈ ಕಾರ್ಯಕರ್ತರು ನಮ್ಮ ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಜನರಿಗೆ ಸೇವೆ ಸಲ್ಲಿಸಲು ಅವರ ಪ್ರೇರಣೆ ಮತ್ತು ಬದ್ಧತೆಯನ್ನು ಖಚಿತಪಡಿಸಿಕೊಳ್ಳಲು ಅವರ ಗೌರವಧನವನ್ನು ನಿಯತಕಾಲಿಕವಾಗಿ ಪರಿಷ್ಕರಿಸಬೇಕು ಎಂದು ಅವರು ಸರ್ಕಾರದ ಗಮನ ಸೆಳೆದರು.

    ಆಯುಷ್ಮಾನ್ ಭಾರತ್ ಯೋಜನೆ ಬಲಪಡಿಸಿ
    ಆಯುಷ್ಮಾನ್ ಭಾರತ್ ಯೋಜನೆಯ ಯಶಸ್ಸನ್ನು ದೇವೇಗೌಡರು ಶ್ಲಾಘಿಸಿದರು. ಭಾರತದ ಜನಸಂಖ್ಯೆಯ ಶೇ.70ಕ್ಕೂ ಹೆಚ್ಚು ಜನರು ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. 2018ರಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಪ್ರಾರಂಭಿಸಲಾದ ಈ ಉಪಕ್ರಮವು ಲಕ್ಷಾಂತರ ಜನರಿಗೆ ಆರೋಗ್ಯ ಸೇವೆಯನ್ನು ಕಲ್ಪಿಸಿದೆ. ಬಡ ನಾಗರಿಕರು ಸಹ ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮತ್ತು ಆರೋಗ್ಯ ಸಚಿವರನ್ನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದರು.

  • ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು: ಹೆಚ್.ಡಿ.ದೇವೇಗೌಡ

    ಗೋದಾವರಿ-ಕೃಷ್ಣ-ಕಾವೇರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು: ಹೆಚ್.ಡಿ.ದೇವೇಗೌಡ

    ಬೆಂಗಳೂರು: ಗೋದಾವರಿ-ಕೃಷ್ಣ-ಕಾವೇರಿ ನೀರಾವರಿ ಯೋಜನೆಯಲ್ಲಿ ಕರ್ನಾಟಕಕ್ಕೆ 25 TMC ನೀರು ಕೊಡಬೇಕು ಅಂತ ಮಾಜಿ ಪ್ರಧಾನಿ ದೇವೇಗೌಡ ಪುನರುಚ್ಚಾರ ಮಾಡಿದ್ದಾರೆ.

    ಸಂಸತ್ ಅಧಿವೇಶನದಲ್ಲಿ ಇದೇ ವಿಷಯ ಪ್ರಸ್ತಾಪ ಮಾಡಿದ್ದ ದೇವೇಗೌಡರು ಇಂದು ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರಕ್ಕೆ ಮತ್ತೆ ಮನವಿ ಮಾಡಿದ್ರು. ಗೋದಾವರಿ-ಕೃಷ್ಣ-ಕಾವೇರಿ ಯೋಜನೆ ವಿಚಾರವಾಗಿ ನೀರು ಹೆಚ್ಚಳ ಮಾಡುವಂತೆ ನಾನು ಪ್ರಧಾನಿಗಳು, ಕೇಂದ್ರ ನೀರಾವರಿ ಸಚಿವರಿಗೆ 2022 ಮತ್ತು 2024 ರಲ್ಲಿ ಪತ್ರ ಬರೆದಿದ್ದೆ. ಸದ್ಯ ನಮಗೆ 15.891 TMC ನೀರು ಹಂಚಿಕೆ ಮಾಡಲಾಗಿದೆ. ಆದರೆ, ಈ ಪ್ರಮಾಣವನ್ನು 25 TMC ಗೆ ಹೆಚ್ಚಳ ಮಾಡಬೇಕು ಅಂತ ಒತ್ತಾಯ ಮಾಡಿದ್ದಾರೆ.

    ಸಂಸತ್‌ನಲ್ಲಿ ಈ ಬಗ್ಗೆ ನಾನು ಮಾತಾಡಿದ್ದೇನೆ. ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ ಅವರು ಪ್ರಧಾನಿ ಮೋದಿ ಅವರ ಬಳಿ ಮಾತಾಡ್ತಾರೆ. ಮೋದಿ ಅವರು ನಮಗೆ ಹತ್ತಿರ ಇರೋದ್ರಿಂದ ಈ ಯೋಜನೆ ಅನುಷ್ಠಾನಕ್ಕೆ ಪ್ರಯತ್ನ ಮಾಡ್ತೀನಿ. ನೀರಾವರಿ ವಿಚಾರವಾಗಿ ನಮ್ಮಲ್ಲಿ ಯಾವುದೇ ರಾಜಕೀಯ ಇಲ್ಲ. ಸಿದ್ದರಾಮಯ್ಯ, ಡಿಕೆಶಿವಕುಮಾರ್, ಕಾಂಗ್ರೆಸ್ ಸಂಸದರು ಎಲ್ಲರ ಜೊತೆ ನಾನು ನೀರಾವರಿ ವಿಚಾರವಾಗಿ ಮಾತಾಡೋಕೆ ಸಿದ್ಧ. ನಮಗೆ ಸಮಸ್ಯೆ ಪರಿಹಾರ ಆಗಬೇಕು. ಇದಕ್ಕೆ ನನ್ನ ಹೋರಾಟ ಮುಂದುವರೆಸುತ್ತೇನೆ ಅಂತ ತಿಳಿಸಿದ್ದಾರೆ.

    ನಾನು ಇನ್ನು ನಾಕಾರು ವರ್ಷ ಬದುಕಿರುತ್ತೇನೆ. ಅಷ್ಟರಲ್ಲಿ ಈ ನೀರಾವರಿ ಸಮಸ್ಯೆಗೆ ಪರಿಹಾರ ಕಂಡುಕೊಡುವ ಪ್ರಯತ್ನ ಮಾಡ್ತೀನಿ. ನೀರಾವರಿ ವಿಚಾರದಲ್ಲಿ ರಾಜಕೀಯ ಮಾಡೊಲ್ಲ. ರಾಜ್ಯ ಸರ್ಕಾರದ ಜೊತೆಗೆ ಕೆಲಸ ಮಾಡ್ತೀನಿ. ಹಿಂದೊಮ್ಮೆ ಸಿದ್ದರಾಮಯ್ಯ ಜೊತೆ ಸಂಬಂಧ ಸರಿಯಿಲ್ಲದ ವೇಳೆ ಸಿದ್ದರಾಮಯ್ಯ ಅವರೇ ನಮ್ಮ ಮನೆಗೆ ಬಂದಿದ್ದರು. ನೀರಾವರಿ ವಿಷಯ ಆದ ಹಿನ್ನೆಲೆ ‌ನಾನು ಅವರ ಜೊತೆ ಸಹಕಾರ ಕೊಟ್ಡಿದ್ದೆ ಅನ್ನೋ ಮೂಲಕ ನೀರಾವರಿ ವಿಷಯದಲ್ಲಿ ರಾಜಕೀಯ ಮಾಡೊಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ರಾಜ್ಯಕ್ಕೆ 25 TMC ನೀರು ತರುವ ಪ್ರಯತ್ನವನ್ನು ಮಾಡ್ತೀನಿ ಅಂತ ಭರವಸೆ ನೀಡಿದ್ದಾರೆ.

  • ಭಾರತದ 130 ಟನ್ ಚಿನ್ನ ಅಡ ಇಟ್ಟ ಭೀಕರ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಸಿಂಗ್ ಕೆಲಸ ಮಾಡಿದ್ರು: ಹೆಚ್‌ಡಿಡಿ ಸ್ಮರಣೆ

    ಭಾರತದ 130 ಟನ್ ಚಿನ್ನ ಅಡ ಇಟ್ಟ ಭೀಕರ ಪರಿಸ್ಥಿತಿಯಲ್ಲಿ ದೇಶಕ್ಕಾಗಿ ಸಿಂಗ್ ಕೆಲಸ ಮಾಡಿದ್ರು: ಹೆಚ್‌ಡಿಡಿ ಸ್ಮರಣೆ

    ಬೆಂಗಳೂರು: ಆಗ ನಮ್ಮ ದೇಶದ 130 ಟನ್ ಚಿನ್ನವನ್ನು ಅಡ ಇಟ್ಟಿದ್ದ ಭೀಕರ ಪರಿಸ್ಥಿತಿಯಲ್ಲಿ ಹಣಕಾಸು ಮಂತ್ರಿಯಾಗಿ ಮನಮೋಹನ್ ಸಿಂಗ್ (Manmohan Singh) ಅವರು ದೇಶಕ್ಕಾಗಿ ಕೆಲಸ ಮಾಡಿದ್ದರು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಸ್ಮರಿಸಿದರು.

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಜೆಡಿಎಸ್ ಕಚೇರಿಯಲ್ಲಿ ಸಂತಾಪ ಸೂಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೆಚ್‌ಡಿಡಿ ಮಾತನಾಡಿದರು. ಇವತ್ತು ಅತ್ಯಂತ ದುಃಖದ ದಿವಸ. ಮನಮೋಹನ್ ಸಿಂಗ್ ಅವರನ್ನು ನಾನು ನೋಡಿದ್ದು ಲೋಕಸಭೆಯಲ್ಲಿ. 1991 ರಲ್ಲಿ ನಾನು ಕರ್ನಾಟಕದಿಂದ ಮೊದಲ ಬಾರಿಗೆ ಲೋಕಸಭೆಗೆ ಹೋದಾಗಿ ನೋಡಿದ್ದೆ. ಅವರು ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಮಂತ್ರಿ ಆಗಿದ್ರು. ಅದಕ್ಕೂ ಮುಂಚೆ ಹಲವಾರು ಹುದ್ದೆಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಪ್ರಯತ್ನ ಮಾಡಿದ್ದಾರೆ ಎಂದು ನೆನೆದರು. ಇದನ್ನೂ ಓದಿ: ಅಮೆರಿಕದಲ್ಲಿ ಅವಮಾನ – ಸಿಂಗ್‌ ಬೆಂಬಲಿಸಿ ಪಾಕ್‌ ಪ್ರಧಾನಿ ಷರೀಫ್‌ ವಿರುದ್ಧ ಗುಡುಗಿದ್ದ ಮೋದಿ

    ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದರು. ವಿಶ್ವಸಂಸ್ಥೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ರು. ಅವರ ತಂದೆ ಪಾಕಿಸ್ತಾನದಿಂದ ಬಂದವರು. ಸಿಂಗ್ ಅವರು ಆರ್ಥಿಕವಾಗಿ ತುಂಬಾ ಬುದ್ದಿವಂತರು. ಅವರಿಗೆ ಬಹಳ ಅನುಭವ ಆರ್ಥಿಕ ವಿಚಾರದಲ್ಲಿ ಇತ್ತು. ನರಸಿಂಹ ರಾವ್ ಪ್ರಧಾನಿ ಆದಾಗ ದೇಶದ ಸ್ಥಿತಿ ತುಂಬಾ ಹದಗೆಟ್ಟಿತ್ತು. ಆಗ ನಮ್ಮ ದೇಶದ 130 ಟನ್ ಚಿನ್ನವನ್ನ ಅಡ ಇಡುತ್ತಾರೆ. ಅಂತಹ ಭೀಕರ ಪರಿಸ್ಥಿತಿ ಅವತ್ತು ಇತ್ತು. ಅಂತಹ ಸನ್ನಿವೇಶದಲ್ಲಿ ಹಣಕಾಸು ಮಂತ್ರಿಯಾಗಿ ಕೆಲಸ ಮಾಡಿದ್ರು. ಈ ದೇಶವನ್ನ, ದೇಶದ ಗೌರವ ಉಳಿಸಲು ಆರ್ಥಿಕ ತಜ್ಞರಾಗಿ ತಮ್ಮ ಪ್ರಯತ್ನ ಪ್ರಾರಂಭ ಮಾಡಿದ್ರು ಎಂದು ನೆನಪಿಸಿಕೊಂಡರು.

    ನಾನು ತುಂಬಾ ಕ್ರಿಟಿಸೈಸ್ ಮಾಡಿದ್ದೇನೆ. ಉದಾರೀಕರಣ, ಖಾಸಗೀಕರಣ, ಎಫ್‌ಡಿಐ ನೀತಿ ಮಾರ್ಪಾಡು ಹೀಗೆ ಅನೇಕ ಸುಧಾರಣೆಗಳನ್ನ ಅವರು ತಂದರು. ನಾನು ಆಗ ನಡೆದ ಬೇರೆ ಬೇರೆ ಘಟನೆ ಹೇಳೊಲ್ಲ. ಇವತ್ತು ಅವೆಲ್ಲ ಹೇಳಬಾರದು. ಅವರು ನಮ್ಮನ್ನ ಅಗಲಿ ಹೋಗಿದ್ದಾರೆ. ಹೀಗಾಗಿ ಅವರ ಕಾಲದಲ್ಲಿ ಅವರು ನಮ್ಮ ಸ್ಥಿತಿ ಹೇಗಿತ್ತು. ಅದನ್ನ ಸರಿ ಮಾಡೋಕೆ ಸರ್ವ ಪ್ರಯತ್ನ ಸಿಂಗ್ ಮಾಡಿದ್ರು. ಪ್ರತಿಯೊಬ್ಬರು ಹೇಳೋದು ಈ ದೇಶ ಸಂಕಷ್ಟದಲ್ಲಿ ಇದ್ದಾಗ ಹಲವಾರು ಕ್ರಮ ತೆಗೆದುಕೊಂಡರು ಅಂತ. ಅನೇಕ ಸುಧಾರಣೆ ಕ್ರಮ ತೆಗೆದುಕೊಂಡರು. ಅದಾದ ಮೇಲೆ ಅವರೇ ಪ್ರಧಾನಿ ಆದ್ರು. 10 ವರ್ಷ ಪ್ರಧಾನಿ ಆಗಿ ದೇಶ ಆಳಿದ್ರು. ನೆಹರೂ, ಇಂದಿರಾ ಗಾಂಧಿ ಬಿಟ್ಟರೆ ಅವರೇ 10 ವರ್ಷ ಪ್ರಧಾನಿ ಆಗಿದ್ದರು. ಸರಳ, ಸಜ್ಜನ, ಪ್ರಾಮಾಣಿಕ ವ್ಯಕ್ತಿ ಎಂದು ಮಾತನಾಡಿದರು. ಇದನ್ನೂ ಓದಿ: ಮನಮೋಹನ್‌ ಸಿಂಗ್‌ಗೆ ಅಂತಿಮ ನಮನ ಸಲ್ಲಿಸಿದ ರಾಹುಲ್‌, ಸೋನಿಯಾ ಗಾಂಧಿ

    ಅವರೊಬ್ಬ ದೇಶದ ಪ್ರಧಾನಿ ಆಗಿದ್ದವರು. ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ಪಕ್ಷದ ಪರವಾಗಿ, ವಯಕ್ತಿಕವಾಗಿ ಗೌರವ ಸಲ್ಲಿಸಿದ್ದಾರೆ. ಇವತ್ತು ನಮ್ಮ ಪಕ್ಷದ ಸಂಘಟನೆ ಸಭೆ ಇತ್ತು. ಇದೊಂದು ಶೋಕ ದಿನ. 7 ದಿನ ಶೋಕಾಚರಣೆ ಮಾಡಲಾಗ್ತಿದೆ. ಸಿಂಗ್ ಅವರ ಗೌರವಾರ್ಥವಾಗಿ ಯಾವುದೇ ಸರ್ಕಾರಿ ಕೆಲಸ ಮಾಡಬಾರದು. ಭಾರತದ ಬಾವುಟ ಅರ್ಧಕ್ಕೆ ಇಳಿಸಬೇಕು. 10 ವರ್ಷ ಪ್ರಧಾನಿ, 5 ವರ್ಷ ಹಣಕಾಸು ಮಂತ್ರಿಯಾಗಿ, ಆರ್‌ಬಿಐ ಗವರ್ನರ್ ಆಗಿ ದೇಶಕ್ಕೆ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅವರು ನಮ್ಮನ್ನ ಅಗಲಿ ಹೋಗಿದ್ದಾರೆ. ಸಿಂಗ್ ಅವರ ಬಗ್ಗೆ ವೈಯಕ್ತಿಕವಾಗಿ ಗೌರವ ಇದೆ. ಅವರ ಆತ್ಮಕ್ಕೆ ಭಗವಂತ ಮೋಕ್ಷ ಕೊಡಲಿ. ಅವರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿ ದೇವರು ಕೊಡಲಿ. ಈ ದೇಶದ ಆರ್ಥಿಕತೆಗೆ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಅವರೊಬ್ಬ ಉತ್ತಮ ಆರ್ಥಿಕ ತಜ್ಞ. ಅವರು ಮಾಡಿರೋ ಸೇವೆ ನಾವು ಸ್ಮರಣೆ ಮಾಡಿಕೊಳ್ಳಬೇಕು. ಅವರ ಆತ್ಮಕ್ಕೆ ಚಿರಶಾಂತಿ ದೇವರು ಕೊಡಲಿ ಎಂದು ಪ್ರಾರ್ಥಿಸಿದರು.

  • ಅಮಿತ್ ಶಾರ ಭಾಷಣ ತಿರುಚಿ ಅಪಪ್ರಚಾರ: ಕಾಂಗ್ರೆಸ್ ವಿರುದ್ಧ ಹೆಚ್‌ಡಿಡಿ ವಾಗ್ದಾಳಿ

    ಅಮಿತ್ ಶಾರ ಭಾಷಣ ತಿರುಚಿ ಅಪಪ್ರಚಾರ: ಕಾಂಗ್ರೆಸ್ ವಿರುದ್ಧ ಹೆಚ್‌ಡಿಡಿ ವಾಗ್ದಾಳಿ

    – ಬಿ.ಎಲ್.ಸಂತೋಷ್ ಯಾವುದೇ ಅಧಿಕಾರಕ್ಕೆ ಆಸೆಪಟ್ಟವರಲ್ಲ: ಹೊಗಳಿದ ಮಾಜಿ ಪ್ರಧಾನಿ
    – ಅಟಲ್ ಪುರಸ್ಕಾರ ಸ್ವೀಕರಿಸಿದ ದೇವೇಗೌಡರು

    ಬೆಂಗಳೂರು: ಅಧಿವೇಶನದಲ್ಲಿ ನಾನು ಅಮಿತ್ ಶಾ ಅವರ ಭಾಷಣ ಕೇಳಿದ್ದೇನೆ. ಕೇಂದ್ರ ಗೃಹ ಸಚಿವರ ಭಾಷಣ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆಂದು ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದರು.

    ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಮಾನೋತ್ಸವ ಹಿನ್ನೆಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್‌ಡಿಡಿ ಪಾಲ್ಗೊಂಡಿದ್ದರು. ಅಟಲ್ ಪುರಸ್ಕಾರ ಸ್ವೀಕರಿಸಿ ನಂತರ ಮಾತನಾಡಿದರು.

    ಪ್ರಜಾಪ್ರಭುತ್ವದ ಹೆಸರಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಳ್ತಿದ್ದಾರೆ ಅಂದರೆ ದೇಶದ ಜನರು ತಲೆ ತಗ್ಗಿಸಬೇಕು ಹಾಗೆ ಮಾಡ್ತಾರೆ. ಅಧಿವೇಶನದಲ್ಲಿ ನಾನು ಅಮಿತ್ ಶಾ ಭಾಷಣ ಕೇಳಿದ್ದೇನೆ. ಗೃಹ ಸಚಿವ ಅಮಿತ್ ಶಾ ಭಾಷಣ ತಿರುಚಿ ಅಪಪ್ರಚಾರ ಮಾಡ್ತಿದ್ದಾರೆ ಎಂದು ಗರಂ ಆದರು.

    ಅಟಲ್ ಜೀ ವಿರೋಧ ಪಕ್ಷದಲ್ಲಿ ಇದ್ದಾಗ ನಾನು ಅವರ ಭಾಷಣ ಕಾರಿನಲ್ಲಿ ಹೋಗುವಾಗ ಕೇಳ್ತಿದ್ದೆ. ಅಟಲ್ ಜೀ ಭಾಷಣ ಕೇಳಿ, ನಾನು ವಿರೋಧ ಪಕ್ಷ ನಾಯಕನಾದಾಗ ಹೇಗೆ ಮಾತನಾಡಬೇಕು ಎಂದು ತಿಳಿದುಕೊಳ್ಳುತ್ತಿದ್ದೆ. 186 ಪಕ್ಷದ ಶಕ್ತಿ ಪಡೆದ ನಾಯಕ ಅಟಲ್ ಜೀ. ನಾನು ವಿರೋಧ ಪಕ್ಷದಲ್ಲಿ ಇದ್ದಾಗ ಅವರು ತುಂಬಾ ಗೌರವದಿಂದ ಕಾಣ್ತಿದ್ರು. ನಿಮ್ಮ ಹಿಂದಿ ದೇಶದ ಸಮಸ್ಯೆ ಬಗೆ ಹರಿಸಲ್ಲ ಅಂತ ಅಟಲ್ ಜೀಗೆ ನಾನು ಹೇಳಿದ್ದೆ. ತಮಾಷೆಗೆ ಹೇಳಿದ್ದೆ ನಾನು ಎಂದು ನೆನಪಿಸಿಕೊಂಡರು.

    ಎಲ್ಲ ರಾಜ್ಯಗಳಲ್ಲಿ ಸುಶಾಸನ ದಿನಾಚರಣೆ ನಡೀತಾ ಇದೆ. ಅನಾರೋಗ್ಯ ಕಾರಣ ಕಾರ್ಯಕ್ರಮಕ್ಕೆ ಬರಲು ಆಗಲ್ಲ ಎಂದಿದ್ದೆ. ಆದ್ರೆ ತುಂಬ ಒತ್ತಾಯ ಮಾಡಿದ ಕಾರಣ ಬಂದೆ. ಅಟಲ್ ಅವರ ಹೆಸರಲ್ಲಿ ನಡೆಯುವ ಕಾರ್ಯಕ್ರಮ ತಪ್ಪಿಸಿಕೊಳ್ಳಬಾರದು ಎಂದು ಬಂದೆ. ಒಂದು ಗಂಟೆಗೂ ಹೆಚ್ಚುಕಾಲ ಸಂತೋಷ್ ಅವರು ಮಾತಾಡಿದ್ದಾರೆ. ಪ್ರಜಾಪ್ರಭುತ್ವ, ಅಂಬೇಡ್ಕರ್ ಹಾಗೂ ಕಾಂಗ್ರೆಸ್ ಬಗ್ಗೆ ಮಾತಾಡಿದ್ದಾರೆ. ಅನಾವಶ್ಯಕ ಬಿಜೆಪಿ ಬಗ್ಗೆ ಟೀಕೆ ಮಾಡ್ತಾರೆ, ಆ ಎಲ್ಲ ವಿಷಯದ ಬಗ್ಗೆ ಮಾತಾಡಿದ್ದಾರೆ. ವಾಜಪೇಯಿ ಅವರ ಕೊಡುಗೆ ಬಗ್ಗೆ ಎಳೆಎಳೆಯಾಗಿ ಹೇಳಿದ್ದಾರೆ. ನಾನು ಆಳುವ ಪಕ್ಷದಲ್ಲಿದ್ದೆ, ವಾಜಪೇಯಿ ವಿಪಕ್ಷ ನಾಯಕ ಎಂದು ಮೆಲುಕು ಹಾಕಿದರು.

    ಕರ್ನಾಟಕ ವಿಧಾನ ಸಭೆಯಲ್ಲಿ ವಿಪಕ್ಷ ನಾಯಕನಾಗಿ ನಾನು ಹೇಗೆ ನಡೆದುಕೊಳ್ಳಬೇಕು ಎಂದು ತಿಳಿದುಕೊಳ್ಳಲು ವಾಜಪೇಯಿ ಅವರ ಭಾಷಣ ಕೇಳ್ತಿದ್ದೆ. ವಾಜಪೇಯಿ ವಿಪಕ್ಷ ನಾಯಕನಾಗಿ ಹೇಗೆ ನಡೆದುಕೊಂಡ್ರು ಅನ್ನೋದನ್ನ ಎಲ್ಲರು ಓದಬೇಕು. ನಿಮ್ಮ ಹಿಂದಿ ಈ ದೇಶದ ಸಮಸ್ಯೆ ಬಗೆಹರಿಸಲ್ಲ ಎಂದು ನಾನು ಅವರಲ್ಲಿ ತಮಾಷೆ ಮಾಡ್ತಿದ್ದೆ, ಗ್ರೇಟ್ ಮ್ಯಾನ್. ಒಂದು ವೋಟ್‌ನಲ್ಲಿ 13 ತಿಂಗಳ ಸರ್ಕಾರ ಬಿತ್ತು. ಕಾಂಗ್ರೆಸ್‌ನವರು ಮಂತ್ರಿಯಾಗಿದ್ದವರನ್ನ ತಂದು ವೋಟ್ ಮಾಡಿಸಿದ್ದರು ಎಂದು ನೆನಪಿಸಿಕೊಂಡರು.

    ಬಿ.ಎಲ್.ಸಂತೋಷ್ ಯಾವುದೇ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಕೇಂದ್ರ, ರಾಜ್ಯದಲ್ಲಿ ಮಂತ್ರಿ ಆಗಬೇಕು ಎಂದು ಆಸೆ ಪಟ್ಟವರಲ್ಲ. ನಿಸ್ವಾರ್ಥದಿಂದ ಪಕ್ಷ ಕಟ್ಟುತ್ತಿದ್ದಾರೆ ಎಂದು ಹಾಡಿ ಹೊಗಳಿದರು. ಅಶ್ವತ್ಥನಾರಾಯಣ್ ನೀನು ಹಠಮಾರಿಯಪ್ಪ. ನಿನ್ ಮಾತಿಗೆ ಬೆಲೆ ಕೊಟ್ಟು ಬಂದಿದ್ದೀನಿ. ಆರೋಗ್ಯ ಸರಿ ಇಲ್ಲ ಆದರೂ ಬಂದಿದ್ದೀನಿ ಎಂದರು. ಇದೇ ವೇಳೆ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ವಿಶ್ರಾಂತ ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಅವರಿಗೆ ಅಟಲ್ ಪುರಸ್ಕಾರ ಪ್ರದಾನ ಮಾಡಲಾಯಿತು.

  • ಚನ್ನಪಟ್ಟಣದ ಅಕಿಲ್ ಷಾ ಖಾದ್ರಿ ದರ್ಗಾ ಗುರುಗಳ ಭೇಟಿಯಾದ ಹೆಚ್‌ಡಿಡಿ – ಮೊಮ್ಮಗನ ಗೆಲ್ಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ

    ಚನ್ನಪಟ್ಟಣದ ಅಕಿಲ್ ಷಾ ಖಾದ್ರಿ ದರ್ಗಾ ಗುರುಗಳ ಭೇಟಿಯಾದ ಹೆಚ್‌ಡಿಡಿ – ಮೊಮ್ಮಗನ ಗೆಲ್ಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ

    – ಧರ್ಮ ಗುರುಗಳ ಭೇಟಿ ಮೂಲಕ ಮುಸ್ಲಿಂ ಮತಗಳ ಸೆಳೆಯಲು ಜೆಡಿಎಸ್ ಕಸರತ್ತು

    ರಾಮನಗರ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರು ಇಂದು ಮುಸ್ಲಿಂ ಧರ್ಮಗುರುಗಳ ಮನೆಗೆ ಭೇಟಿ ನೀಡಿದರು. ಚನ್ನಪಟ್ಟಣದಲ್ಲಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಗೆಲ್ಲಿಸುವಂತೆ ಮುಸ್ಲಿಂ ಸಮುದಾಯದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ.

    ಚನ್ನಪಟ್ಟಣದಲ್ಲಿ (Channapatna) ಅಲ್ಪಸಂಖ್ಯಾತ ಮತಗಳ ಸೆಳೆಯಲು ಜೆಡಿಎಸ್ ತಂತ್ರಗಾರಿಕೆ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಹೆಚ್.ಡಿ.ದೇವೇಗೌಡರು ಇಂದು ಮುಸ್ಲಿಂ ಧರ್ಮಗುರುಗಳ ಮನೆಗೆ ಭೇಟಿ ಕೊಟ್ಟರು. ಅಖಿಲ್ ಷಾ ಖಾದ್ರಿ ದರ್ಗಾದ ಧರ್ಮಗುರು ಸಯ್ಯದ್ ಮಸನ್ನ ಷಾ ಖಾದ್ರಿ ನಿವಾಸಕ್ಕೆ ಮಾಜಿ ಪ್ರಧಾನಿಗಳು ಭೇಟಿ ನೀಡಿದರು. ಈ ವೇಳೆ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು. ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ರಾ ಜಮೀರ್‌? – ಪ್ರಚಾರದ ವೇಳೆ ಮಹಿಳೆಗೆ 500 ರೂ. ಹಣಕೊಟ್ಟ ಸಚಿವ

    ಚನ್ನಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರ ಜತೆ ದೇವೇಗೌಡರು ಪ್ರಚಾರ ಸಭೆ ನಡೆಸಿದರು. ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ. ಅವರ ಗೆಲುವಿಗೆ ಸಹಕರಿಸಿ ಎಂದು ಮುಸ್ಲಿಂ ಸಮಯದಾಯದ ಬೆಂಬಲ ಕೋರಿದರು. ಮೊಮ್ಮಗ ನಿಖಿಲ್ ಗೆಲ್ಲಿಸುವಂತೆ ದೇವೇಗೌಡರರಿಂದ ಮನವಿ

    ಮೊನ್ನೆಯಷ್ಟೇ ಚನ್ನಪಟ್ಟಣದಲ್ಲಿ ಹೆಚ್‌ಡಿಡಿ ಅಲ್ಪಸಂಖ್ಯಾತರ ಸಭೆ ಮಾಡಿದ್ದರು. ಕಳೆದ ಐದು ದಿನಗಳಿಂದಲೂ ಮೊಮ್ಮಗನ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಮುಸ್ಲಿಂ ಮತಗಳು 30 ಸಾವಿರಕ್ಕೂ ಹೆಚ್ಚಿವೆ. ಇದನ್ನೂ ಓದಿ: ಈ ಉಪಚುನಾವಣೆ ಬಿಜೆಪಿ ಬಸವರಾಜ ಬೊಮ್ಮಾಯಿ ವರ್ಸಸ್ ಕಾಂಗ್ರೆಸ್ ಸರ್ಕಾರ: ಬೊಮ್ಮಾಯಿ