Tag: Gujarat Man

  • ಹೆಣ್ಣು ಅಂತ 7 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ಪಾಪಿ ತಂದೆ

    ಹೆಣ್ಣು ಅಂತ 7 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ಪಾಪಿ ತಂದೆ

    ಗಾಂಧೀನಗರ: ಗುಜರಾತ್‌ನಲ್ಲಿ ವ್ಯಕ್ತಿಯೊಬ್ಬರು ಮೀನು ನೋಡಲು 7 ವರ್ಷದ ಮಗಳನ್ನು ಕರೆದುಕೊಂಡು ಹೋಗಿ ಕಾಲುವೆಗೆ ತಳ್ಳಿರುವ ಘಟನೆ ನಡೆದಿದೆ.

    ಭೂಮಿಕಾ ಮೃತ ದುರ್ದೈವಿ. ಖೇಡಾ ನಿವಾಸಿ ವಿಜಯ್‌ ಸೋಲಂಕಿ ತನ್ನ ಮಗಳನ್ನು ಹತ್ಯೆ ಮಾಡಿದ ತಂದೆ. ಪತಿ ವಿರುದ್ಧ ಅಂಜನಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ನನ್ನ ಮಗಳು ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ. ಪತಿ ಗುಜರಾತ್‌ನ ನರ್ಮದಾ ಕಾಲುವೆಗೆ ತಳ್ಳಿ ಹತ್ಯೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಇದನ್ನೂ ಓದಿ: ತಪ್ಪಿತು ದೊಡ್ಡ ದುರಂತ – ಮತ್ತೆ ಟೇಕಾಫ್ ಆಗಿ ಇಂಡಿಗೋ ಸೇಫ್ ಲ್ಯಾಂಡಿಂಗ್

    ಸೋಲಂಕಿ ದಂಪತಿ ತಮ್ಮ ಮಗಳ ಜೊತೆ ಸ್ಥಳೀಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮೂವರು ದ್ವಿಚಕ್ರ ವಾಹನದಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ, ತವರು ಮನೆಗೆ ಹೋಗುವ ಬಯಕೆಯನ್ನು ಅಂಜನಾ ವ್ಯಕ್ತಪಡಿಸಿದರು. ಅದಕ್ಕೆ ಪತಿ ನಿರಾಕರಿಸಿದ. ‘ನನಗೆ ಗಂಡು ಮಗು ಬೇಕಿತ್ತು. ಆದರೆ, ನೀನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೀಯಾ’ ಎಂದು ಪತ್ನಿಯನ್ನು ನಿಂದಿಸಿದ್ದ.

    ಕೆಲವು ನಿಮಿಷಗಳ ನಂತರ, ರಾತ್ರಿ 8 ಗಂಟೆ ಸುಮಾರಿಗೆ, ಆ ವ್ಯಕ್ತಿ ಕಪದ್ವಾಂಜ್‌ನ ವಾಘಾವತ್ ಸೇತುವೆಯ ಮೇಲೆ ಬೈಕ್ ನಿಲ್ಲಿಸಿ ತನ್ನ ಮಗಳನ್ನು ವೇಗವಾಗಿ ಹರಿಯುವ ನರ್ಮದಾ ಕಾಲುವೆಗೆ ತಳ್ಳಿದ್ದಾನೆ. ಈ ಘಟನೆಯನ್ನು ಯಾರಿಗಾದರೂ ತಿಳಿಸಿದರೆ ವಿಚ್ಛೇದನ ನೀಡುವುದಾಗಿ ಪತ್ನಿಗೆ ಹೆದರಿಸಿದ್ದ. ಇದರಿಂದ ಅಂಜನಾ ತುಂಬಾ ದುಃಖಿತಳಾಗಿದ್ದಳು. ಕೊನೆಗೆ ಆಕೆಯನ್ನು ತವರು ಮನೆಗೆ ಬಿಟ್ಟು ಬಂದಿದ್ದ. ಮಗಳನ್ನು ಕಳೆದುಕೊಂಡ ನೋವನ್ನು ತಾಳಲಾರದೇ ಪತ್ನಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸ್‌ನಲ್ಲೇ ಗಂಡು ಮಗು ಜನನ – ಬಟ್ಟೆ ಸುತ್ತಿ ಕಿಟಿಕಿಯಿಂದ ಆಚೆ ಎಸೆದ ಪಾಪಿ ತಾಯಿ

    ಮೀನುಗಳನ್ನು ನೋಡಲು ಕಾಲುವೆಯ ಬಳಿ ನಿಂತಿದ್ದಾಗ ಮಗಳು ಜಾರಿಬಿದ್ದಳು ಎಂದು ವಿಜಯ್‌ ಕತೆ ಕಟ್ಟಿದ್ದ. ಪೊಲೀಸರು ಹುಡುಗಿಯ ಚಪ್ಪಲಿ ಮತ್ತು ಆಕೆಯ ಮೃತದೇಹವನ್ನು ಪತ್ತೆಮಾಡಿ ಹೊರತೆಗೆದರು. ಅಂತರಸುಬಾ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಬಾಲಕಿ ಸಾವಿನ ಬಗ್ಗೆ ಅನುಮಾನಗೊಂಡು ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿದಾಗ, ಪತಿಯಿಂದಲೇ ಈ ಕೃತ್ಯ ನಡೆದಿದೆ ಎಂಬುದನ್ನು ಪತ್ನಿ ಒಪ್ಪಿಕೊಂಡಿದ್ದಾರೆ.

  • ಪಾಕ್‌ ಏಜೆಂಟ್‌ ಜೊತೆ ಭಾರತೀಯ ಸೇನಾ ತಾಣಗಳ ಫೋಟೊ ಹಂಚಿಕೆ – ಗುಜರಾತ್‌ ವ್ಯಕ್ತಿ ಬಂಧನ

    ಪಾಕ್‌ ಏಜೆಂಟ್‌ ಜೊತೆ ಭಾರತೀಯ ಸೇನಾ ತಾಣಗಳ ಫೋಟೊ ಹಂಚಿಕೆ – ಗುಜರಾತ್‌ ವ್ಯಕ್ತಿ ಬಂಧನ

    – ಭಾರತೀಯ ವಾಯುಪಡೆ, ಬಿಎಸ್‌ಎಫ್‌ ಸೂಕ್ಷ್ಮ ಮಾಹಿತಿ ನೀಡಿ 40,000 ಹಣ ಪಡೆದಿದ್ದ ಆರೋಪಿ

    ಗಾಂಧೀನಗರ: ಭಾರತೀಯ ವಾಯುಪಡೆ (IAF) ಮತ್ತು ಗಡಿ ಭದ್ರತಾ ಪಡೆಗೆ (BSF) ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಪಾಕಿಸ್ತಾನದ ಏಜೆಂಟ್‌ ಜೊತೆ ಹಂಚಿಕೊಂಡ ಆರೋಪದ ಮೇಲೆ ಗುಜರಾತ್‌ನ (Gujarat Man) ವ್ಯಕ್ತಿಯನ್ನು ಬಂಧಿಸಲಾಗಿದೆ.

    ಕಛ್ ನಿವಾಸಿಯಾಗಿರುವ ಆರೋಪಿ ಸಹದೇವ್ ಸಿಂಗ್ ಗೋಹಿಲ್ ಆರೋಗ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ ಎಂದು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಹಿರಿಯ ಅಧಿಕಾರಿ ಕೆ. ಸಿದ್ಧಾರ್ಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು

    ಅದಿತಿ ಭಾರದ್ವಾಜ್‌ (28) ಹೆಸರಿನ ಮಹಿಳೆ 2023ರಲ್ಲಿ ವಾಟ್ಸಪ್‌ ಮೂಲಕ ಏಜೆಂಟ್‌ ಜೊತೆ ಸಂಪರ್ಕಕ್ಕೆ ಬಂದಿದ್ದಳು. ಆರೋಪಿ ಸಹದೇವ್‌ ಆಕೆಗೆ ನಿರ್ಮಾಣ ಹಂತದಲ್ಲಿರುವ ಐಎಎಫ್‌ ಮತ್ತು ಬಿಎಸ್‌ಎಫ್‌ ತಾಣಗಳ ಫೋಟೊ, ವೀಡಿಯೋಗಳನ್ನು ಕಳುಹಿಸಿದ್ದ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

    2025 ರ ಆರಂಭದಲ್ಲಿ ಆತ ಸಿಮ್ ಕಾರ್ಡ್ ಖರೀದಿಸಿದ್ದ. OTP ಸಹಾಯದಿಂದ ಅದಿತಿ ಭಾರದ್ವಾಜ್‌ಗಾಗಿ ಆ ಸಂಖ್ಯೆಯಲ್ಲಿ ವಾಟ್ಸಾಪ್ ಅನ್ನು ಸಕ್ರಿಯಗೊಳಿಸಿದ್ದ. ಅದಾದ ಬಳಿಕ BSF ಮತ್ತು IAFಗೆ ಸಂಬಂಧಿಸಿದ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಆ ಸಂಖ್ಯೆಯಲ್ಲಿ ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಗಡಿಯಲ್ಲಿ ಭಾರತಕ್ಕೆ ನುಸುಳಲು ಯತ್ನ – ಶಂಕಿತ ಪಾಕಿಸ್ತಾನಿ ಹೊಡೆದುರುಳಿಸಿದ ಬಿಎಸ್‌ಎಫ್‌

    ಗೋಹಿಲ್ ಮಾಹಿತಿ ಹಂಚಿಕೊಳ್ಳಲು ಬಳಸಿದ ಸಂಖ್ಯೆಗಳನ್ನು ಪಾಕಿಸ್ತಾನದಿಂದ ನಿರ್ವಹಿಸಲಾಗುತ್ತಿತ್ತು ಎಂದು ವಿಧಿವಿಜ್ಞಾನ ವಿಶ್ಲೇಷಣೆಯು ಬಹಿರಂಗಪಡಿಸಿದೆ. ಗೋಹಿಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು 40,000 ರೂ. ಹಣ ನೀಡಿರುವುದು ತನಿಖೆಯಿಂದ ಗೊತ್ತಾಗಿದೆ.

    ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಗೆ ಕಾರಣವಾಯಿತು. ಪರಿಣಾಮವಾಗಿ ಎಲ್ಲೆಡೆ ತನಿಖೆ ಚುರುಕುಗೊಳಿಸಲಾಗಿದೆ. ಭಾರತದ ವಿರುದ್ಧ ಬೇಹುಗಾರಿಕೆಯ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಯೂಟ್ಯೂಬರ್, ಉದ್ಯಮಿ ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಹತ್ತುಕ್ಕೂ ಹೆಚ್ಚು ಜನರಲ್ಲಿ ಗೋಹಿಲ್ ಕೂಡ ಒಬ್ಬ. ಇದನ್ನೂ ಓದಿ: ಉಗ್ರರ ದಾಳಿಯಿಂದ 20,000 ಭಾರತೀಯರು ಸಾವು: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ಭಾರತ ಕಿಡಿ