Tag: GSLV

  • 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    ನವದೆಹಲಿ: ಯಶಸ್ವಿ ಚಂದ್ರಯಾನ ಮತ್ತು ಮಂಗಳಯಾನದ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶುಕ್ರಯಾನಕ್ಕೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ, 2024ರ ವೇಳೆಗೆ ಶುಕ್ರಗ್ರಹಕ್ಕೆ ಇಸ್ರೋದಿಂದ ನೌಕೆಯೊಂದು ಹಾರಲಿದೆ. ತಪ್ಪಿದರೆ, 2031ಕ್ಕೆ ಕಾಯಬೇಕಾಗುತ್ತದೆ ಎಂದು ಹೇಳಲಾಗಿದೆ.

    ISRO ROCKET
    ಸಾಂದರ್ಭಿಕ ಚಿತ್ರ

    ಈಗಾಗಲೇ ಶುಕ್ರಯಾನಕ್ಕೆ ಸಜ್ಜಾಗಿರುವ ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳಿಗೆ ಭಾರತ ಪೈಪೋಟಿ ನೀಡಲು ಮುಂದಾಗಿದೆ. ಭೂಮಿಯ ಒಂದು ಪಕ್ಕದಲ್ಲಿ ಮಂಗಳ ಗ್ರಹವಿದ್ದರೆ, ಇನ್ನೊಂದು ಪಕ್ಕದಲ್ಲಿ ಶುಕ್ರಗ್ರಹವಿದೆ. ಮಂಗಳನ ಅಂಗಳಕ್ಕೆ ಈಗಾಗಲೇ ಇಸ್ರೊ? ಯಶಸ್ವಿಯಾಗಿ ನೌಕೆಗಳನ್ನು ಕಳುಹಿಸಿ ಅಧ್ಯಯನ ಕೈಗೊಂಡಿದೆ. ಅಲ್ಲೂ ಮನುಷ್ಯರು ವಾಸಿಸಲು ಯೋಗ್ಯವೇ ಇಲ್ಲವೇ ಎಂಬ ಹಲವು ಮಾಹಿತಿಗಳನ್ನು ಸಂಗ್ರಹಿಸಿದೆ. ಇದನ್ನೂ ಓದಿ: ಫಿನ್‍ಲ್ಯಾಂಡ್ ಪ್ರಧಾನಿಯನ್ನು ಭೇಟಿ ಮಾಡಿದ ಮೋದಿ – ಕಾರಣವೇನು? 

    Chandrayana 02
    ಸಾಂದರ್ಭಿಕ ಚಿತ್ರ

    ಹೇಗಿದೆ ಶುಕ್ರಗ್ರಹದ ವಾತಾವರಣ?: ಈಗ ಶುಕ್ರಗ್ರಹಕ್ಕೆ ತನ್ನ ನೌಕೆ ಕಳುಹಿಸಿ ಅಲ್ಲಿನ ವಾತಾವರಣವನ್ನು ಅಧ್ಯಯನ ನಡೆಸಲು ಮುಂದಾಗಿದೆ. ಶುಕ್ರಗ್ರಹದಲ್ಲಿ ಸಲ್ಫರಿಕ್ ಆ್ಯಸಿಡ್‌ನ ಮೋಡಗಳು ಕವಿದಿರುತ್ತವೆ. ಅಲ್ಲಿನ ವಾತಾವರಣ ವಿಷಯುಕ್ತವಾಗಿದೆ ಎಂದು ಹೇಳಲಾಗಿದೆ. ಇಲ್ಲಿನ ವಾತಾವರಣವನ್ನು ಇನ್ನಷ್ಟು ನಿಖರವಾಗಿ ತಿಳಿಯಲು ಹಾಗೂ ಇಲ್ಲಿ ಜ್ವಾಲಾಮುಖಿಗಳು, ಲಾವಾರಸ, ಮಣ್ಣು ಇತ್ಯಾದಿಗಳನ್ನು ಅಧ್ಯಯನ ಮಾಡಲು ಇಸ್ರೋ ಶುಕ್ರಯಾನ ಸಹಕಾರಿಯಾಗಲಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮೋದಿ ಗಿಫ್ಟ್‌ಗೆ ವಿಶೇಷ ಸ್ಥಾನಕೊಟ್ಟ ಡೆನ್ಮಾರ್ಕ್ ಪ್ರಧಾನಿ

    PSLV ISRO
    ಸಾಂದರ್ಭಿಕ ಚಿತ್ರ

    ಹಲವು ವರ್ಷಗಳ ಸಿದ್ಧತೆ: ಹಲವು ವರ್ಷಗಳಿಂದ ಸಿದ್ಧತೆ ಪ್ರಾರಂಭಿಸಿದ್ದ ಇಸ್ರೋ ಶುಕ್ರಯಾನದ ಮಹತ್ವದ ಯೋಜನೆ ಈಗ ಯೋಜನೆ ಸಿದ್ಧಗೊಂಡಿದೆ. ಈ ಕುರಿತು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಅಧ್ಯಕ್ಷತೆಯಲ್ಲಿ ಶುಕ್ರಗ್ರಹ ಅಧ್ಯಯನ ತಂಡದ ವಿಜ್ಞಾನಿಗಳ ಜೊತೆ ಇತ್ತೀಚೆಗೆ ಸಭೆ ನಡೆದಿತ್ತು. ಸಭೆಯ ನಂತರ ಸೋಮನಾಥ್, ಈ ನಿರ್ಧಾರ ಪ್ರಕಟಿಸಿದ್ದರು. ಶುಕ್ರಯಾನಕ್ಕೆ ಹಣ ನಿಗದಿಪಡಿಸಿದ್ದು, ಸಾಕಷ್ಟು ಕಡಿಮೆ ಸಮಯದಲ್ಲಿ ಶುಕ್ರಯಾನ ನೌಕೆಯನ್ನು ಸಿದ್ಧಪಡಿಸುವ ಶಕ್ತಿ ನಮಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಜಮ್ಮು-ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡಣೆ ವರದಿ ಸಲ್ಲಿಕೆ – ಯಾವ ಪ್ರದೇಶಕ್ಕೆ ಎಷ್ಟು ಸೀಟು?‌

    ನೌಕೆ ಉಡಾವಣೆ ಯಾವಾಗ? 2024ರ ಡಿಸೆಂಬರ್‌ನಲ್ಲಿ ಶುಕ್ರಗ್ರಹವು ಭೂಮಿಯ ಸಮೀಪದ ಕಕ್ಷೆಗೆ ಬರುತ್ತದೆ. ಆಗ ನೌಕೆಯನ್ನು ಶುಕ್ರಗ್ರಹದ ಕಕ್ಷೆಗೆ ತಳ್ಳುವುದಕ್ಕೆ ಕಡಿಮೆ ಶಕ್ತಿ ಸಾಕಾಗುತ್ತದೆ. ಹೀಗಾಗಿ ಆ ಸಮಯವನ್ನೆ? ಶುಕ್ರಯಾನ ನೌಕೆಯ ಉಡಾವಣೆಗೆ ಆಯ್ಕೆ ಮಾಡಿಕೊಳ್ಳಬೇಕು. 2024ನ್ನು ಬಿಟ್ಟರೆ ಮುಂದೆ 2031ರಲ್ಲಿ ಅಂತಹ ಅವಕಾಶ ಸಿಗುತ್ತದೆ ಎಂದು ಹೇಳಿರುವ ಇಸ್ರೋ 2024ರಲ್ಲೇ ಶುಕ್ರಯಾನ ಕೈಗೊಳ್ಳುವ ಬಗ್ಗೆ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ.

    isro center main
    ಸಾಂದರ್ಭಿಕ ಚಿತ್ರ

    ಅಮೆರಿಕ, ಯುರೋಪ್‌ನಿಂದ ಯೋಜನೆ: ಅಮೆರಿಕದ ನಾಸಾ ಮತ್ತು ಯುರೋಪಿಯನ್ ಯೂನಿಯನ್‌ನ ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಈಗಾಗಲೇ ಶುಕ್ರಯಾನಕ್ಕೆ ಸಜ್ಜಾಗಿವೆ. ಅವುಗಳ ಬೆನ್ನಲ್ಲೇ ಶುಕ್ರನ ಸುತ್ತ ಸುತ್ತುವ 3ನೇ ನೌಕೆ ಭಾರತದ್ದಾಗಿರಲಿದೆ. ಅಮೆರಿಕವು ಶುಕ್ರಯಾನಕ್ಕೆ 1 ಬಿಲಿಯನ್ ಡಾಲರ್ (ಸುಮಾರು 7500 ಕೋಟಿ ರೂ.) ಹಣ ಮೀಸಲಿಟ್ಟಿದೆ.

  • ಹೊಸ ಮೈಲಿಗಲ್ಲು ಬರೆಯಲಿದೆ ಇಸ್ರೋ: ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್, ಜಿಸ್ಯಾಟ್ ಉಪಗ್ರಹದ ಲಾಭ ಏನು?

    ಹೊಸ ಮೈಲಿಗಲ್ಲು ಬರೆಯಲಿದೆ ಇಸ್ರೋ: ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್, ಜಿಸ್ಯಾಟ್ ಉಪಗ್ರಹದ ಲಾಭ ಏನು?

    ಶ್ರೀಹರಿಕೋಟಾ: ಚಂದ್ರಯಾನ, ಮಂಗಳಯಾನ, ಸ್ವದೇಶಿ ಜಿಪಿಎಸ್ ಹೊಂದುವ ಕನಸನ್ನು ನನಸಾಗಿಸಿದ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಇಂದು ಮತ್ತೊಂದು ಮೈಲಿಗಲ್ಲು ಸಾಧಿಸಲು ಸನ್ನದ್ಧವಾಗಿದೆ. ಇಸ್ರೋ ಇತಿಹಾಸದಲ್ಲೇ ಅತೀ ಹೆಚ್ಚು ಶಕ್ತಿಶಾಲಿಯಾದ ಜಿಎಸ್‍ಎಲ್‍ವಿ ಎಂಕೆ3 ರಾಕೆಟ್ ಉಡಾವಣೆ ಮಾಡಲಿದೆ.

    ಸ್ವದೇಶಿ ಕ್ರಯೋಜನಿಕ್ ಸಿ-25 ಇಂಜಿನ್ ಹೊಂದಿರುವ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ 5.28ಕ್ಕೆ ನಭಕ್ಕೆ ಚಿಮ್ಮುವ ಮೂಲಕ ಜಿಸ್ಯಾಟ್ 19 ಉಪಗ್ರಹವನ್ನು ಇಂದು ಕಕ್ಷೆಗೆ ಸೇರಲಿದೆ. ಹೀಗಾಗಿ ಈ ರಾಕೆಟ್ ವಿಶೇಷತೆ ಏನು? ಉಪಗ್ರಹದಿಂದ ಆಗೋ ಲಾಭ ಏನು? ಭಾರತಕ್ಕೆ ಆಗುವ ಲಾಭ ಏನು ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

    ಏನಿದು ಜಿಎಸ್‍ಎಲ್‍ವಿ ಮಾರ್ಕ್-3?
    ಇಸ್ರೋ ವಿಜ್ಞಾನಿಗಳ 25 ವರ್ಷಗಳ ಪರಿಶ್ರಮದ ಫಲದಿಂದ ಜಿಎಸ್‍ಎಲ್‍ವಿ ರಾಕೆಟ್ ತಯಾರಾಗಿದೆ. 640 ಟನ್ ತೂಕದ ಈ ರಾಕೆಟ್‍ಗೆ ಸ್ವದೇಶಿ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಬಳಕೆಯಾಗಿದೆ. 43.43 ಮೀಟರ್ ಉದ್ದ, 4 ಮೀಟರ್ ಸುತ್ತಳತೆಯನ್ನು ಈ ರಾಕೆಟ್ ಹೊಂದಿದ್ದು, 200 ಕ್ಕೂ ಹೆಚ್ಚು ಬಾರಿ ಪರೀಕ್ಷೆಗೊಳಪಡಿಸಲಾಗಿದೆ.

    ಸ್ವದೇಶಿ ಕ್ರಯೋಜನಿಕ್ ಎಂಜಿನ್ ರೂಪುಗೊಂಡಿದ್ದು ಹೇಗೆ?
    1999ರ ಭಾರತ ಪಾಕ್ ಯುದ್ಧದ ವೇಳೆ ಅಮೆರಿಕ ಜಿಪಿಎಸ್ ಮಾಹಿತಿ ನೀಡಲು ನಿರಾಕರಿಸಿದ್ದಕ್ಕೆ ಇಸ್ರೋ ವಿಜ್ಞಾನಿಗಳು ಈಗ ಸ್ವದೇಶಿ ಜಿಪಿಎಸ್ ವ್ಯವಸ್ಥೆಯನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದರೆ. ಇದೇ ರೀತಿಯ ಕಥೆ ಸ್ವದೇಶಿ ಕ್ರಯೋಜನಿಕ್ ಎಂಜಿನ್ ತಯಾರಿಕೆಯಲ್ಲೂ ಇದೆ. ಕ್ರಯೋಜನಿಕ್ ಎಂಜಿನ್ ಗಾಗಿ ಭಾರತ ರಷ್ಯಾವನ್ನು ಅವಲಂಬಿಸಿತ್ತು ಅಷ್ಟೇ ಅಲ್ಲದೇ ಒಪ್ಪಂದ ಸಹ ಮಾಡಿಕೊಂಡಿತ್ತು. ಆದರೆ ಈ ಕ್ರಯೋಜನಿಕ್ ಎಂಜಿನ್ ಭಾರತ ಕ್ಷಿಪಣಿಗಳಿಗೆ ಬಳಸುತ್ತದೆ ಎನ್ನುವ ಭೀತಿಯನ್ನು ಅಮೆರಿಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಷ್ಯಾ ಭಾರತಕ್ಕೆ ನೀಡಲು ನಿರಾಕರಿಸಿತು. ಇದರಿಂದಾಗಿ ಇಸ್ರೋ ವಿಜ್ಞಾನಿಗಳು ಸ್ವದೇಶಿ ಕ್ರಯೋಜನಿಕ್ ಎಂಜಿನ್ ತಯಾರಿಸಲು ಮುಂದಾದರು. 2014ರ ಡಿಸೆಂಬರ್ 18ರಂದು ಜಿಎಸ್‍ಎಲ್‍ವಿ ಮಾರ್ಕ್-3ಯ ಪ್ರಾಯೋಗಿಕ ಉಡಾವಣೆ ಮಾಡಲಾಗಿತ್ತು. ಆದರೆ ಇದರಲ್ಲಿ ಕ್ರಯೋಜೆನಿಕ್ ಎಜಿನ್ ಬಳಕೆ ಮಾಡಿರಲಿಲ್ಲ. ಈ ಬಾರಿ ಕ್ರಯೋಜೆನಿಕ್ ಎಂಜಿನ್ ಅಳವಡಿಸಲಾಗಿದೆ.

    ಪವರ್‍ಫುಲ್ ರಾಕೆಟ್:
    ಇಸ್ರೋ ಹೆಚ್ಚಾಗಿ ತನ್ನ ಉಪಗಹಗಳನ್ನು ಉಡಾವಣೆ ಮಾಡಲು ಪಿಎಸ್‍ಎಲ್‍ವಿ(ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್), ಮತ್ತು ಜಿಎಸ್‍ಎಲ್‍ವಿ(ಜಿಯೋಸಿಂಕ್ರೋನಾಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಬಳಕೆ ಮಾಡುತ್ತದೆ. ಪಿಎಸ್‍ಎಲ್‍ವಿ 1500 ಕೆಜಿ ತೂಕ ಸಾಮಥ್ರ್ಯದ ಉಪಗ್ರಹಗಳನ್ನು ಕಕ್ಷಗೆ ಸೇರಿಸುವ ಸಾಮಥ್ರ್ಯವನ್ನು ಹೊಂದಿದ್ದರೆ, ಈ ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ 4 ಸಾವಿರ ಕೆಜಿ ತೂಕದ ಉಪಗ್ರಹಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. 640 ಟನ್ ತೂಕದ ಈ ರಾಕೆಟ್ ಪ್ರಯಾಣಿಕರಿಂದ ತುಂಬಿರುವ 5 ಜಂಬೋ ವಿಮಾನಗಳ ತೂಕಕ್ಕೆ ಸಮವಾಗಿದೆ.

    ಭಾರತಕ್ಕೆ ಲಾಭ ಏನು?
    ಇಸ್ರೋ ಇಲ್ಲಿಯವರೆಗೆ ಭಾರದ ಉಪಗ್ರಹಗಳನ್ನು ವಿದೇಶಿ ರಾಕೆಟ್‍ಗಳ ಮೂಲಕ ಉಡಾವಣೆ ಮಾಡುತಿತ್ತು. ಇನ್ನು ಮುಂದೆ ಈ ಯಶಸ್ಸಿನಿಂದ ಅನ್ಯದೇಶಗಳ ಅವಲಂಬನೆ ತಪ್ಪಲಿದೆ. ಅಷ್ಟೇ ಅಲ್ಲದೇ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲು ಈ ರಾಕೆಟ್ ಸಹಾಯವಾಗಲಿದೆ.

    ಈ ರಾಕೆಟ್ ಮಹತ್ವ ಯಾಕೆ?
    ಈಗಾಗಲೇ ಕೇವಲ 454 ಕೋಟಿ ರೂ. ಮಂಗಳಯಾನ ಕೈಗೊಳ್ಳುವ ಮೂಲಕ ಇಸ್ರೋ ವಿಶ್ವದಲ್ಲೇ ಕಡಿಮೆ ವೆಚ್ಚದಲ್ಲಿ ಮಂಗಳನ ಅಂಗಳಕ್ಕೆ ಉಪಗ್ರಹ ಕಳುಹಿಸಿದ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗ ಇಸ್ರೋದಿಂದ ಉಪಗ್ರಹ ಉಡಾವಣೆ ವೆಚ್ಚ ಉಳಿದ ಏಜೆನ್ಸಿಗಳಿಗಿಂತ 11 ಪಟ್ಟು ಅಗ್ಗವಾಗಿದ್ದು, ಪ್ರತಿವರ್ಷ 12 ಉಪಗ್ರಹಗಳನ್ನು ಉಡಾವಣೆ ಮಾಡುವ ಉದ್ದೇಶವನ್ನು ಇಸ್ರೋ ಹೊಂದಿದೆ.

    ಉಪಗ್ರಹದ ವಿಶೇಷತೆ ಏನು?
    ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ 3136 ಕೆಜಿ ತೂಕವಿರುವ ಜಿಸ್ಯಾಟ್ -19 ಉಪಗ್ರಹವನ್ನು ಕಕ್ಷೆಗೆ ಸೇರಿಸಲಿದೆ. ಇದು ಇಸ್ರೋ ಉಡಾಯಿಸುತ್ತಿರುವ ಭಾರೀ ತೂಕ ಉಪಗ್ರಹವಾಗಿದೆ. ಕಳೆದ ತಿಂಗಳ 5 ರಂದು ಜಿಎಸ್‍ಎಲ್‍ವಿ ಮಾರ್ಕ್ 2 ರಾಕೆಟ್‍ನೊಂದಿಗೆ 2,230 ಕೆಜಿ ತೂಕದ ದಕ್ಷಿಣ ಏಷ್ಯಾ ಉಪಗ್ರಹ ಜಿಸ್ಯಾಟ್ 9 ಉಡಾವಣೆಯನ್ನು ಇಸ್ರೋ ಮಾಡಿತ್ತು. ಇದು ಇದೂವರೆಗಿನ ಇಸ್ರೋ ಉಡಾಯಿಸಿದ ಅತಿಹೆಚ್ಚು ತೂಕದ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಉಪಗ್ರಹದ ಲಾಭ ಏನು?
    ಈ ಹಿಂದೆ ಉಡಾವಣೆಯಾಗಿರುವ ಹಳೆಯ 6,7 ಸಂವಹನ ಉಪಗ್ರಹಗಳಿಗೆ ಜಿಸ್ಯಾಟ್-19 ಸಮವಾಗಿದ್ದು ಕೆ-ಎ ಮತ್ತು ಕೆ-ಯು ಬ್ಯಾಂಡ್‍ನ ಟ್ರಾನ್ಸ್ ಪಾಂಡರ್ ಅಳವಡಿಸಲಾಗಿದೆ. ಇದರ ಬಳಕೆಯಿಂದ ಇಂಟರ್‍ನೆಟ್, ದೂರವಾಣಿ ಮತ್ತು ವಿಡಿಯೋ ಸೇವೆಗಳ ಗುಣಮಟ್ಟ ಸುಧಾರಣೆಯಾಗಲಿದೆ. ಕಕ್ಷೆ ಸೇರಿದ ಬಳಿಕ ಇಂಟರ್‍ನೆಟ್ ವೇಗ ಮತ್ತು ಕನೆಕ್ಟಿವಿಟಿ ಹೆಚ್ಚಾಗಲಿದೆ. ಇಸ್ರೋ ಇದರಲ್ಲಿ ಮಲ್ಟಿಪಲ್ ಸ್ಪಾಟ್ ಬೀಮ್ ಅಳವಡಿಸಿದೆ. ಉಪಗ್ರಹದಲ್ಲಿ ವಿಕಿರಣ ಸ್ಪೆಕ್ಟ್ರೋಮೀಟರ್(ಜಿಆರ್‍ಎಎಸ್‍ಪಿ) ಅಳವಡಿಸಲಾಗಿದ್ದು ಇದು ಪ್ರಕೃತಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ವಿಕಿರಣಗಳ ಪ್ರಭಾವವನ್ನೂ ಅಧ್ಯಯನ ನಡೆಸಲಿದೆ. ಅಷ್ಟೇ ಅಲ್ಲದೇ ಮೊದಲ ಬಾರಿಗೆ ಸ್ವದೇಶಿ ಲಿಥಿಯಾಂ ಆಯಾನ್ ಬ್ಯಾಟರಿಯನ್ನು ಇಸ್ರೋ ಬಳಕೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ಬಸ್, ಕಾರುಗಳಲ್ಲಿ ಬಳಸಬಹುದಾಗಿದೆ.

    ಆದಿಚುಂಚನಗಿರಿ ಶ್ರೀ ಭಾಗಿ:
    ರಾಕೆಟ್ ಉಡಾವಣೆಗೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಹಸಿರು ನಿಶಾನೆ ತೋರಲಿದ್ದಾರೆ. ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿ ನಡೆಯಲಿರುವ ರಾಕೆಟ್ ಉಡಾವಣೆಗೆ ಇಸ್ರೋದಿಂದ ಸ್ವಾಮೀಜಿ ಅವರಿಗೆ ಆಹ್ವಾನ ಬಂದಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಮಲಾನಂದನಾಥ ಸ್ವಾಮೀಜಿ ತೆರಳಿದ್ದಾರೆ.

    ಇಸ್ರೋದ ಸ್ವದೇಶಿ ಜಿಪಿಎಸ್ ಸಾಧನೆ ಇನ್ಫೋಗ್ರಾಫಿಕ್