Tag: groom

  • ಅತಿಥಿ ಹಾರಿಸಿದ ಗುಂಡಿಗೆ ಮದುಮಗನ ಪ್ರಾಣವೇ ಹೋಯ್ತು!

    ಅತಿಥಿ ಹಾರಿಸಿದ ಗುಂಡಿಗೆ ಮದುಮಗನ ಪ್ರಾಣವೇ ಹೋಯ್ತು!

    ನವದೆಹಲಿ: ವಿವಾಹ ಸಮಾರಂಭದ ಸಂಭ್ರಮದಲ್ಲಿ ಗುಂಡು ಹಾರಿಸುವ ಪದ್ದತಿ ವಿವಿಧೆಡೆ ಚಾಲ್ತಿಯಲ್ಲಿದೆ. ಈ ಸಂಭ್ರಮವೇ ಸಾವಿಗೆ ಕಾರಣವಾಗುತ್ತಿದ್ದು, ಈಗ ಮತ್ತೊಂದು ಅಂತಹುದೇ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

    ಈಶಾನ್ಯ ದೆಹಲಿಯ ಸೀಮಾಪುರಿಯಲ್ಲಿ ಮಂಗಳವಾರ ರಾತ್ರಿ ಈ ದುರ್ಘಟನೆ ಸಂಭವಿಸಿದ್ದು, ಮದುವೆ ಮೆರವಣಿಗೆಯಲ್ಲಿ ಬರುತ್ತಿದ್ದ ಮದುಮಗ ದೀಪಕ್ ಕುಮಾರ್ (21) ಸಂಭ್ರಮಾಚರಣೆಯ ಫೈರಿಂಗ್ ಗೆ ಬಲಿಯಾಗಿದ್ದಾನೆ.

    ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ಸೀಮಪುರಿಯಲ್ಲಿ ಮನೆಯಿಂದ ಮದುವೆಯ ಮೆರವಣಿಗೆ ಹೊರಟಿತ್ತು. ಮದುವೆಯ ಮೆರವಣಿಗೆಯ ಸಂದರ್ಭದಲ್ಲಿ ಕುಡುಕನೊಬ್ಬ ಎರಡು ಗುಂಡು ಹಾರಿಸಿದ್ದಾನೆ. ಒಂದು ಗುಂಡು ವರ ದೀಪಕ್ ತಲೆಯ ಹಿಂಭಾಗಕ್ಕೆ ಬಿದ್ದಿದೆ. ತಕ್ಷಣ ದೀಪಕ್ ಕುಮಾರ್ ಕುದುರೆಯಿಂದ ಕೆಳಗೆ ಕುಸಿದು ಬಿದ್ದಿದ್ದಾನೆ. ನಂತರ ಆತನನ್ನು ಗುರುತೇಜ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸುಮಾರು 2 ಸಾವನ್ನಪ್ಪಿದ್ದಾನೆ.

    ಆರೋಪಿಯನ್ನು ಪೂರ್ವ ದೆಹಲಿಯ ಶಹೀದ್ ನಗರ ನಿವಾಸಿ ಆದಿಲ್ ಎಂದು ಗುರುತಿಸಲಾಗಿದೆ. ಆದಿಲ್ ಮದುವೆ ಅತಿಥಿಯಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಕುಟುಂಬದ ಸದಸ್ಯರು ದೀಪಕ್ ಕುಮಾರ್ ನನ್ನು ಕೊಲೆ ಮಾಡಲಾಗಿದೆ. ಈ ಕೃತ್ಯದಲ್ಲಿ ನೆರೆಮನೆಯವರ ಪಾತ್ರ ಇದೆ ಎಂದು ಆರೋಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ನಪುರ್ ಪ್ರಸಾದ್ ತಿಳಿಸಿದ್ದಾರೆ.

    ಈ ಅವಘಡದಲ್ಲಿ ಇನ್ನೊಂದು ಗುಂಡು ಕುದುರೆಯ ಮೇಲೆ ಕುಳಿತ್ತಿದ್ದ ಮಗುವಿಗೆ ಬಿದ್ದಿದೆ. ಆದರೆ ಅದೃಷ್ಟವಶಾತ್ ಮಗು ಪಾರಾಗಿದೆ. ಕುಟುಂಬ ಸದಸ್ಯರು ನೆರೆಮನೆಯ ಮುಂದೆ ರಸ್ತೆಯ ಮೇಲೆ ದೇಹವನ್ನು ಇಟ್ಟು ಪ್ರತಿಭಟನೆ ನಡೆಸುತ್ತಿದ್ದರು. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿ ವಿರುದ್ಧ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

    ಮದುಮಗ ಆನಂದ್ ವಿಹಾರ್ ನಲ್ಲಿರುವ ಖಾಸಗಿ ಬಸ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಈತ ತಾಯಿ ರಾಧಾ ದೇವಿ, ಸಹೋದರ ಶಿವ ಮತ್ತು ಅವರ ಪತ್ನಿ, ಮತ್ತು ಇಬ್ಬರು ವಿವಾಹಿತ ಸಹೋದರಿಯಾದ ಸೋನಮ್ ಮತ್ತು ಮೀನಾಕ್ಷಿ ಜೊತೆ ವಾಸಿಸುತ್ತಿದ್ದನು. ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

  • ಭಾವಿ ಪತಿ ಬಾಲ್ಡ್ ಆಗ್ತಿದ್ದಾನೆಂದು ಗೊತ್ತಾಗಿ ಸ್ಥಳದಲ್ಲೇ ಮದ್ವೆ ಕ್ಯಾನ್ಸಲ್ ಮಾಡಿದ ವಧು

    ಭಾವಿ ಪತಿ ಬಾಲ್ಡ್ ಆಗ್ತಿದ್ದಾನೆಂದು ಗೊತ್ತಾಗಿ ಸ್ಥಳದಲ್ಲೇ ಮದ್ವೆ ಕ್ಯಾನ್ಸಲ್ ಮಾಡಿದ ವಧು

    – ತರಕಾರಿ ವ್ಯಾಪರಿಯ ಮಗಳೊಂದಿಗೆ ವಿವಾಹವಾದ ಡಾಕ್ಟರ್ ವರ

    ಪಾಟ್ನಾ: ವರ ಬೋಳುಮಂಡೆಯವನಾಗ್ತಿದ್ದಾನೆಂದು ಗೊತ್ತಾಗಿ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿರುವ ಘಟನೆ ಬಿಹಾರದಲ್ಲಿ ನಡೆದಿದೆ.

    ವರ ರವಿ ಕುಮಾರ್ ವೃತ್ತಿಯಲ್ಲಿ ವೈದ್ಯರಾಗಿದ್ದು, ತಾನು ಭೇಟಿಯೇ ಆಗದ ಯುವತಿಯೊಂದಿಗೆ ಮದುವೆಯಾಗಲು ದೆಹಲಿಯಿಂದ 1 ಸಾವಿರ ಕಿ.ಮೀ ದೂರದಲ್ಲಿರುವ ಬಿಹಾರದ ಸುಗೌಲಿ ಗ್ರಾಮಕ್ಕೆ ಬಂದಿದ್ದರು.

    ವಧುವಿನ ತಂದೆ ವರ ರವಿಕುಮಾರ್ ಅವರ ತಂದೆಯ ಮನೆಯಲ್ಲಿ ಮೂರು ಬಾರಿ ಉಳಿದುಕೊಂಡಿದ್ದ ಬಳಿಕ 1 ವರ್ಷ ಮುಂಚಿತವಾಗಿಯೇ ಕುಟುಂಬಸ್ಥರು ಮದುವೆಯನ್ನ ನಿಶ್ಚಯಿಸಿದ್ದರು.

    ನಿಗದಿಪಡಿಸಿದಂತೆ ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಅತಿಥಿಗಳು ಮದುವೆ ತಯಾರಿಯಲ್ಲಿ ತೊಡಗಿ, ಊಟೋಪಚಾರವೂ ನಡೆದಿತ್ತು. ವಧು ವರ ಹೂಮಾಲೆ ಬದಲಾಯಿಸಿಕೊಳ್ಳುವ ಶಾಸ್ತ್ರವನ್ನೂ ಮುಗಿಸಿದ್ದರು. ಆದ್ರೆ ಮತ್ತೊಂದು ಶಾಸ್ತ್ರ ಮಾಡುವಾಗ ವರ ರವಿಕುಮಾರ್ ತನ್ನ ಪೇಟವನ್ನು ತೆಗೆಯಬೇಕಿತ್ತು. ಹೀಗಾಗಿ ಅವರು ಪೇಟ ತೆಗೆದಿದ್ದು, ಮುಂದೆ ನಿಂತಿದ್ದ ವಧುಗೆ ಶಾಕ್ ಆಗಿತ್ತು. ತಾನು ಮದುವೆಯಾಗ್ತಿರೋ ಹುಡುಗ ಬಾಲ್ಡ್ ಆಗ್ತಿದ್ದಾನೆ ಎಂದು ಆಗಲೇ ವಧುವಿಗೆ ಗೊತ್ತಾಗಿದ್ದು. ಯಾಕಂದ್ರೆ ಅಲ್ಲಿಯವರೆಗೆ ಆಕೆ ರವಿಕುಮಾರ್ ಅವರನ್ನ ಫೋಟೋಗಳಲ್ಲಿ ಮಾತ್ರ ನೋಡಿದ್ದಳು.

    ವರನ ಕೂದಲ ಉದುರುವಿಕೆಯನ್ನೇ ದೊಡ್ಡದಾಗಿ ಪರಿಗಣಿಸಿದ ವಧು ಸ್ಥಳದಲ್ಲೇ ಮದುವೆ ಕ್ಯಾನ್ಸಲ್ ಮಾಡಿದ್ದು, ಕುಟುಂಬಸ್ಥರು ಹಾಗೂ ಮದುವೆಗೆ ಬಂದಿದ್ದ ಅತಿಥಿಗಳು ಬೆರಗಾಗುವಂತೆ ಮಾಡಿದ್ದಾಳೆ.

    ಎರಡೂ ಕುಟುಂಬದವರು ಎಷ್ಟೇ ಹೇಳಿದ್ರೂ ವಧು ತನ್ನ ನಿರ್ಧಾರ ಬದಲಾಯಿಸಲು ಸಿದ್ಧಳಿರಲಿಲ್ಲ. ಆದ್ರೆ ವರ ರವಿಕುಮಾರ್ ಅಷ್ಟು ದೂರದಿಂದ ಬಂದು, ಮದುವೆಯಾಗಿಯೇ ಮನೆಗೆ ಹಿಂದಿರುಗಬೇಕು ಎಂದು ಸಂಕಲ್ಪ ಮಾಡಿದ್ದರು. ಹೀಗಾಗಿ ರವಿಕುಮಾರ್ ಕುಟುಂಬದವರು ಗ್ರಾಮ ಪಂಚಾಯ್ತಿಯ ಮೊರೆ ಹೋದ್ರು. ಅವರು ಗ್ರಾಮದ ಬಡ ತರಕಾರಿ ವ್ಯಾಪಾರಿಯ ಮಗಳಾದ ನೇಹಾ ಕುಮಾರಿಯನ್ನು ಮದುವೆಯಾಗುವಂತೆ ಸೂಚಿಸಿದ್ದರು.

    ಹೀಗಾಗಿ ಮದುವೆ ಮುರಿದು ಬಿದ್ದ ಎರಡು ದಿನಗಳ ಬಳಿಕ ರವಿಕುಮಾರ್‍ ದೇವಸ್ಥಾನವೊಂದರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನೇಹಾ ಕುಮಾರಿ ಜೊತೆ ಮದುವೆ ಆಗಿದ್ದಾರೆ.

  • ಆರತಕ್ಷತೆಯಲ್ಲಿ ಸೊಸೆಗೆ ಲಿಪ್ ಟು ಲಿಪ್ ಕಿಸ್ ಕೊಟ್ಟ ಕಿಲಾಡಿ ಮಾವ!

    ಆರತಕ್ಷತೆಯಲ್ಲಿ ಸೊಸೆಗೆ ಲಿಪ್ ಟು ಲಿಪ್ ಕಿಸ್ ಕೊಟ್ಟ ಕಿಲಾಡಿ ಮಾವ!

    ಬೀಜಿಂಗ್: ಮಾವನೊಬ್ಬ ಆರತಕ್ಷತೆಯಲ್ಲಿ ಸೊಸೆಗೆ ಲಿಪ್‍ಟುಲಿಪ್ ಕಿಸ್ ನೀಡಿರುವ ಘಟನೆ ಚೀನಾದ ಜಿಂಗಸು ಪ್ರಾಂತ್ಯದ ಪೂರ್ವ ಯಾಂಚೆಂಗ್ ನಲ್ಲಿ ನಡೆದಿದೆ.

    ಆರತಕ್ಷತೆಯಲ್ಲಿ ಮಧು ಮಗಳನ್ನು ಮಾವ ವೇದಿಕೆಯತ್ತ ಕರೆದುಕೊಂಡು ಬರುವುದು ಚೀನಾದ ಪದ್ಧತಿ. ಈ ವೇಳೆ ವಧುವನ್ನು ಕರೆದುಕೊಂಡು ಬರುವಾಗ ಮಾವ ಆಕೆಯ ಹಣೆಗೆ ಮುತ್ತಿಟ್ಟು ಹಾರೈಸುವುದು ಸಾಮಾನ್ಯ. ಆದ್ರೆ ಈ ವ್ಯಕ್ತಿ ಮಗನ ಪತ್ನಿಯನ್ನು ವೇದಿಕೆಯತ್ತ ಕರೆತರುತ್ತಾ, ಮದುವೆ ಸಭಾಂಗಣದಲ್ಲಿ ಕುಳಿತಿದ್ದ ನೂರಾರು ಜನರು ಮುಂದೆಯೇ ಲಿಪ್ ಟು ಲಿಪ್ ಕಿಸ್ ಮಾಡಿದ್ದಾನೆ. ಈ ಎಲ್ಲ ದೃಶ್ಯಗಳು ಸಂಬಂಧಿಕರ ಮೊಬೈಲ್ ನಲ್ಲಿ ಸೆರೆಯಾಗಿವೆ.

    ಮಾವ ತನ್ನ ಸೊಸೆಯಾಗುವವಳನ್ನು ವೇದಿಕೆಯತ್ತ ಕರೆತರುವಾಗಲೇ ಈ ರೀತಿ ವರ್ತನೆ ತೋರಿದ್ದರಿಂದ ವಧು ಹಾಗೂ ನೆರೆದವರಲ್ಲಿ ಇರಿಸು ಮುರಿಸು ಉಂಟುಮಾಡಿದೆ. ಇತ್ತ ವಧುವಿಗೆ ಬಲವಂತವಾಗಿ ಕಿಸ್ ನೀಡುತ್ತಲೇ ಎರಡು ಕುಟುಂಸ್ಥರ ನಡುವೆ ಗಲಾಟೆ ಆರಂಭವಾಗಿದೆ. ಈ ಜಗಳ ತಾರಕ್ಕೇರಿ ಕೆಲವರು ಡೆಕೋರೇಶನ್ ಸಾಮಾಗ್ರಿಗಳನ್ನು ಬಿಸಾಕಿದ್ದಾರೆ. ಈ ಎಲ್ಲಾ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಕುಟುಂಬಸ್ಥರು, ಸದ್ಯ ಎರಡು ಕುಟುಂಬಗಳ ನಡುವಿನ ಮುನಿಸು ಬಗೆಹರಿದಿದೆ. ಆರತಕ್ಷತೆಯಲ್ಲಿ ವರನ ತಂದೆ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ದರಿಂದ ಈ ಘಟನೆ ನಡೆದಿದೆ. ಈ ರೀತಿ ಮಾಡುವ ಮೂಲಕ ಪ್ರಚಾರ ಪಡೆದುಕೊಳ್ಳವವರು ನಾವಲ್ಲ. ಈ ಘಟನೆಯಿಂದಾಗಿ ನಮಗೆ ತೀವ್ರ ಮುಜುಗರ ಉಂಟಾಗಿದೆ ಅಂತಾ ಹೇಳಿಕೊಂಡಿದ್ದಾರೆ.

  • ಶೌಚಕ್ಕೆಂದು ಹೋದ ವಧು ನಾಪತ್ತೆ-ಮದುವೆ ಮಂಟಪದಲ್ಲಿ ಕಾಯುತ್ತಾ ಕುಳಿತ ವರ

    ಶೌಚಕ್ಕೆಂದು ಹೋದ ವಧು ನಾಪತ್ತೆ-ಮದುವೆ ಮಂಟಪದಲ್ಲಿ ಕಾಯುತ್ತಾ ಕುಳಿತ ವರ

    ಲಕ್ನೋ: ಶೌಚಕ್ಕೆ ತೆರಳುವುದಾಗಿ ಹೇಳಿ ಪ್ರಿಯಕರನ ಜೊತೆ ವಧು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಕೊತವಾಲಿ ಕ್ಷೇತ್ರದ ಗುರಖಶ್‍ಗಂಜ್ ಎಂಬಲ್ಲಿ ನಡೆದಿದೆ.

    ಸಂಜೆ ವರನ ಕಡೆಯವರು ಮದುವೆ ಮನೆಗೆ ಆಗಮಿಸಿದ್ದಾರೆ. ವರ ಬಂದ ಕೂಡಲೇ ವಧುವಿನ ಪೋಷಕರು ಸಂಭ್ರಮದಿಂದ ಎಲ್ಲರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡಿದ್ದಾರೆ. ಸ್ವಾಗತದ ಬಳಿಕ ಮದುವೆಯ ಶಾಸ್ತ್ರಗಳು ಕೂಡ ಆರಂಭವಾಗಿದ್ದವು. ವಧು-ವರ ಇಬ್ಬರು ಸಹ ಹಾರ ಬದಲಾಯಿಸಿಕೊಂಡಿದ್ದಾರೆ. ಇನ್ನೇನು ಸಪ್ತಪದಿ ತುಳಿಯುವ ಮುನ್ನ ವಧು ಶೌಚದ ನೆಪ ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ.

     

    ವಧುವಿನ ಮನೆಗೆ ಬಂದಿದ್ದ ವರ ಮಂಟಪದಲ್ಲಿ ಕಾಯುತ್ತಾ ಕುಳಿತಿದ್ದಾನೆ. ವರನೊಂದಿಗೆ ಹಾರ ಬದಲಾಯಿಸಿಕೊಂಡ ವಧು ಶೌಚಕ್ಕೆ ಹೋಗಬೇಕೆಂದು ಅಲ್ಲಿಯ ಚಿಕ್ಕ ಹೆಣ್ಣು ಮಕ್ಕಳ ಜೊತೆ ತೆರಳಿದ್ದಾಳೆ. ಕೆಲವು ಸಮಯದ ಬಳಿಕ ಮಕ್ಕಳು ವಾಪಸ್ಸಾದ್ರೆ ವಧು ಅಲ್ಲಿಂದಲೇ ತನ್ನ ಪ್ರಿಯಕರನ ಜೊತೆ ಎಸ್ಕೇಪ್ ಆಗಿದ್ದಾಳೆ. ಇತ್ತ ವಧು ನಾಪತ್ತೆ ವಿಷಯ ತಿಳಿದ ಕೂಡಲೇ ಆಕೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗ್ರಾಮದ ಇಬ್ಬರು ಯುವಕರ ವಿರುದ್ಧ ದೂರು ದಾಖಲಿಸಿದ್ದಾರೆ. ವರನ ಕಡೆಯವರು ವಧು ಪರಾರಿಯಾಗಿದ್ದರಿಂದ ಮದುವೆ ಕ್ಯಾನ್ಸಲ್ ಮಾಡಿ ಹಿಂದಿರುಗಿದ್ದಾರೆ.

    ಯುವತಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಯುವತಿಗೆ ಆಕೆಯ ಪೋಷಕರು ಬಲವಂತವಾಗಿ ಮದುವೆ ಮಾಡಿಸಲು ಮುಂದಾಗಿದ್ದಾರೆ. ವರನ ಪೋಷಕರು ಬೆಳಗ್ಗೆವರೆಗೂ ಕಾದು ತಮ್ಮ ಊರಿಗೆ ಮರಳಿದ್ದಾರೆ ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

  • 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿದ್ದಕ್ಕೆ ಮದುವೆಯನ್ನು ಮುರಿದ ವರ!

    50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿದ್ದಕ್ಕೆ ಮದುವೆಯನ್ನು ಮುರಿದ ವರ!

    ಬೀಜಿಂಗ್: 26 ವರ್ಷದ ಯುವತಿಯೊಬ್ಬಳು ತನ್ನ ಮದುವೆಯಲ್ಲಿ ಗಂಡನನ್ನು ತಮಾಷೆ ಮಾಡಲೆಂದು 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿಕೊಂಡು ಬಂದಿದ್ದಕ್ಕೆ ಆಕೆಯ ಮದುವೆಯೇ ಮುರಿದುಬಿದ್ದ ಘಟನೆ ಚೀನಾದಲ್ಲಿ ನಡೆದಿದೆ.

    ಕ್ವಿಂಗ್ ಕಾವೋ (26) 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾಳೆ. ಕ್ವಿಂಗ್ ತನ್ನ ತಲೆ ಕೂದಲಿಗೆ ಬೂದಿ ಬಣ್ಣ ಹಾಗೂ ಬಿಳಿ ಬಣ್ಣದ ಗೆರೆಗಳನ್ನು ಹಾಕಿಕೊಂಡು 50 ವರ್ಷದ ಮಹಿಳೆಯಂತೆ ಮೇಕಪ್ ಮಾಡಿದ್ದಾಳೆ.

    ತನಗೆ ವಯಸ್ಸಾದರೂ ನನ್ನ ಗಂಡ ನನ್ನನ್ನು ಪ್ರೀತಿಸುತ್ತಾನಾ ಎಂಬುದನ್ನು ಪರೀಕ್ಷಿಸಲು ಕ್ವಿಂಗ್ ಕಾವೋ ಈ ರೀತಿ ಮಾಡಿದ್ದಳು. ಆದರೆ ಮದುವೆ ಗಂಡು ಗುವೊ ಚಿಯನ್ ಇದನ್ನು ತಮಾಷೆಯಾಗಿ ತೆಗೆದುಕೊಳ್ಳದೇ ಗಂಭೀರವಾಗಿ ತೆಗೆದುಕೊಂಡಿದ್ದಾನೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ನಡುರಸ್ತೆಯಲ್ಲಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಇಬ್ಬರ ಜಗಳದಿಂದ ಕೆಲವರಿಗೆ ತೊಂದರೆಯಾದರೆ, ಇನ್ನೂ ಕೆಲವರಿಗೆ ಮನರಂಜನೆ ನೀಡುತ್ತಿತ್ತು. ಅವರಿಬ್ಬರು ಜಗಳವಾಡುತ್ತಿದ್ದಾಗ ಕೆಲವರು ಫೋಟೋ, ವಿಡಿಯೋವನ್ನು ತೆಗೆದಿದ್ದಾರೆ.

    ಕ್ವಿಂಗ್‍ನ ಮೇಕಪ್ ತೆರೆಯಲು ಗುವೊ ಹೇಳಿದ್ದಾನೆ. ಆದರೆ ಕ್ವಿಂಗ್ ಇದಕ್ಕೆ ನಿರಾಕರಿಸಿದ್ದಾಳೆ. ನೀನು ನನ್ನನ್ನು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ನನ್ನ ಮೇಕಪ್‍ನಿಂದ ನಿನಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಕ್ವಿಂಗ್ ಪ್ರತಿಕ್ರಿಯೆ ನೀಡಿದ್ದಾಳೆ.

    ತಾನು ಎಷ್ಟು ಹೇಳಿದರೂ ಪತ್ನಿ ಕೇಳದ್ದಕ್ಕೆ ಸಿಟ್ಟಾದ ಗುವೋ ತನ್ನ ಕನ್ನಡಕವನ್ನು ಎಸೆದು, ಟ್ಯಾಕ್ಸಿ ಹಿಡಿದು ಅಲ್ಲಿಂದ ಹೊರಟು ಹೋಗಿದ್ದಾನೆ. ಆದರೆ ಕ್ವಿಂಗ್ ಅಳುತ್ತಾ ಅಲ್ಲಿಯೇ ಕುಳಿತು ಆತನಿಗಾಗಿ ಕಾದಿದ್ದಾಳೆ. ಆದರೆ ಗುವೋ ಮಾತ್ರ ಮತ್ತೆ ಹಿಂತಿರುಗಲಿಲ್ಲ. ನಂತರ ಕ್ವಿಂಗ್ ಕೂಡ ಟ್ಯಾಕ್ಸಿ ಹಿಡಿದು ಅಲ್ಲಿಂದ ಹೊರಟು ಹೋಗಿದ್ದಾಳೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

  • ಮದುವೆಯಲ್ಲಿ ನಾಪತ್ತೆಯಾಗಿದ್ದ ವಧು-ವರ ಪ್ರಕರಣಕ್ಕೆ ಟ್ವಿಸ್ಟ್-ಬೇರೊಂದು ಯುವತಿಯೊಂದಿಗೆ ಸಪ್ತಪದಿ ತುಳಿದ ವರ

    ಮದುವೆಯಲ್ಲಿ ನಾಪತ್ತೆಯಾಗಿದ್ದ ವಧು-ವರ ಪ್ರಕರಣಕ್ಕೆ ಟ್ವಿಸ್ಟ್-ಬೇರೊಂದು ಯುವತಿಯೊಂದಿಗೆ ಸಪ್ತಪದಿ ತುಳಿದ ವರ

    ಕೋಲಾರ: ಕಳೆದ ಕೆಲ ದಿನಗಳ ಹಿಂದೆ ಮದುವೆ ಮಂಟಪದಲ್ಲಿ ನಾಪತ್ತೆಯಾಗಿದ್ದ ವಧು-ವರ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮದುವೆ ವೇಳೆ ನಾಪತ್ತೆಯಾಗಿದ್ದ ವರ ಗುರೇಶ್ ಇಂದು ಸಂಬಂಧಿ ಮಾನಸ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿಯೊಂದಿಗೆ ರಹಸ್ಯವಾಗಿ ಮದುವೆಯಾಗಿದ್ದಾರೆ.

    ಇಬ್ಬರ ವಿವಾಹ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಬಳಿಯ ಕೈವಾರ ಕ್ಷೇತ್ರದಲ್ಲಿ ನಡೆದಿದೆ. ಇದರೊಂದಿಗೆ ಮದುವೆ ಸಂಬಂಧ ನಡೆದ ಹೈಡ್ರಾಮದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ.

    ಏನಿದು ಘಟನೆ?: ಕಳೆದ ಜನವರಿ 26 ರಂದು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಮಾಲೂರು ತಾಲೂಕಿನ ಚನ್ನಕಲ್ಲು ಗ್ರಾಮದ ಗುರೇಶ್ ಜೊತೆ ಬಂಗಾರಪೇಟೆ ತಾಲೂಕಿನ ನರ್ನಹಳ್ಳಿ ಗ್ರಾಮದ ಚೈತ್ರ (ಹೆಸರು ಬದಲಾಯಿಸಲಾಗಿದೆ) ಜೊತೆ ಮದುವೆ ನಡೆಯಬೇಕಿತ್ತು. ಆದರೆ ಮದುವೆ ಮುನ್ನ ಆರಕ್ಷರತೆ ದಿನದಂದು ವಧು ನಾಪತ್ತೆಯಾಗಿದ್ದಳು. ನಂತರದಲ್ಲಿ ವರ ಗುರೇಶ್ ಮದುವೆಯನ್ನು ಕುಟುಂಬದ ಮತ್ತೊಂದು ಹುಡುಗಿಯ ಜೊತೆ ಮದುವೆ ನಿಶ್ಚಯಿಸಿದ್ದರು.

    ಆದರೆ ಮದುವೆ ದಿನ ಮುನ್ನ ಮುಂಜಾನೆ ವರ ಗುರೇಶ್ ಮದುವೆ ಮಂಟಪದಿಂದ ನಾಪತ್ತೆಯಾಗಿದ್ದ, ಇದರೊಂದಿಗೆ ಮದುವೆ ಮುರಿದು ಬಿದ್ದಿತ್ತು. ಮದುವೆ ಮನೆಯಲ್ಲಿ ನಡೆದ ವರ-ವಧು ನಾಪತ್ತೆಯ ದೊಡ್ಡ ಹೈ-ಡ್ರಾಮಾ ರಾಜ್ಯದೆಲ್ಲೆಡೆ ಸುದ್ದಿಯಾಗಿತ್ತು.

  • ಮದ್ವೆಗೆ ನಾಲ್ಕು ದಿನ ಇದ್ದಾಗ ದುಷ್ಕರ್ಮಿಗಳು ವರನ ಮರ್ಮಾಂಗ ಕತ್ತರಿಸಿ ತೆಗೆದುಕೊಂಡು ಹೋದ್ರು!

    ಮದ್ವೆಗೆ ನಾಲ್ಕು ದಿನ ಇದ್ದಾಗ ದುಷ್ಕರ್ಮಿಗಳು ವರನ ಮರ್ಮಾಂಗ ಕತ್ತರಿಸಿ ತೆಗೆದುಕೊಂಡು ಹೋದ್ರು!

    ಭೋಪಾಲ್: 25 ವರ್ಷದ ಯುವಕನೊಬ್ಬನ ಮರ್ಮಾಂಗವನ್ನ ದುಷ್ಕರ್ಮಿಗಳು ಕತ್ತರಿಸಿ ತೆಗೆದುಕೊಂಡು ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.

    ಫೆಬ್ರವರಿ 6ರಂದು 25 ವರ್ಷದ ಯುವಕನ ಮದುವೆ ನಿಶ್ಚಯವಾಗಿತ್ತು. ಫೆಬ್ರವರಿ 1ರಂದು ಯುವಕ ತಮ್ಮ ಮನೆಯ ಪಕ್ಕ ಇದ್ದ ನದಿಯ ಬಳಿ ಶೌಚಾಲಯಕ್ಕೆ ಹೋಗಿದ್ದಾನೆ. ಈ ವೇಳೆ ಯಾರೋ ಅಪರಿಚಿತ ವ್ಯಕ್ತಿಗಳಿಬ್ಬರು ಆತನ ಮೇಲೆ ದಾಳಿ ಮಾಡಿ ಆತನ ಮರ್ಮಾಂಗವನ್ನು ಕತ್ತರಿಸಿದ್ದಾರೆ. ಬಳಿಕ ಕತ್ತರಿಸಿದ್ದ ಅಂಗವನ್ನು ತೆಗೆದುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇದನ್ನು ಓದಿ: ಸೆಕ್ಸ್, ಮದುವೆಗೆ ನಿರಾಕರಿಸಿದ್ದಕ್ಕೆ ಪ್ರಿಯಕರನ ಮರ್ಮಾಂಗವನ್ನೇ ಕತ್ತರಿಸಿದ ಮಹಿಳೆಯ ಬಂಧನ

    ಯುವಕನನ್ನು ಸ್ಥಿತಿ ಗಂಭೀರವಾಗಿದ್ದು, ಗ್ರಾಮಸ್ಥರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಯುವಕ ಪ್ರಜ್ಞೆಹೀನಾ ಸ್ಥಿತಿಯಲ್ಲಿ ಇದ್ದಾನೆ. ಆದ್ದರಿಂದ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಸಾಧ್ಯವಾಗುತ್ತಿಲ್ಲ. ಕುಟುಂಬಸ್ಥರು ಕೂಡ ಕಾರಣವೇನು ಎಂಬುದನ್ನು ತಿಳಿದಿಲ್ಲ. ಕತ್ತರಿಸಲ್ಪಟ್ಟ ಅಂಗ ಸಿಕ್ಕಿದರೆ ಮರು ಜೋಡಣೆ ಮಾಡಬಹುದಿತ್ತು ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸಬ್ ಇನ್ಸ ಪೆಕ್ಟರ್ ಅಮೀತ್ ಶರ್ಮಾ ತಿಳಿಸಿದ್ದಾರೆ. ಇದನ್ನು ಓದಿ: ಲಾಡ್ಜ್ ನಲ್ಲಿ ಜಗಳ: ಪ್ರೇಮಿಯ ಮರ್ಮಾಂಗವನ್ನು ಕತ್ತರಿಸಿದ್ಳು ಪ್ರೇಯಸಿ

    ಸಂತ್ರಸ್ತನ ಸಂಬಂಧಿಗಳು ಯಾರ ಮೇಲೆಯೂ ಶಂಕೆ ವ್ಯಕ್ತಪಡಿಸಿಲ್ಲ. ಆದ್ದರಿಂದ ನಾವು ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದೇವೆ. ಯುವಕನ ಹೇಳಿಕೆಗಾಗಿ ನಾನು ಕಾಯುತ್ತಿದ್ದೇವೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದರು. ಇದನ್ನು ಓದಿ: ಬ್ಯಾಚುಲರ್ ಪಾರ್ಟಿಯಲ್ಲಿ ವರನ ಮರ್ಮಾಂಗಕ್ಕೆ ಗೆಳೆಯನಿಂದ್ಲೇ ಬಿತ್ತು ಗುಂಡೇಟು!

  • ಪ್ರೀ-ವೆಡ್ಡಿಂಗ್ ಶೂಟ್ ಗೆ ತೆರಳ್ತಿದ್ದಾಗ ಅಪಘಾತ – ವಧು, ವರ ಸಾವು

    ಪ್ರೀ-ವೆಡ್ಡಿಂಗ್ ಶೂಟ್ ಗೆ ತೆರಳ್ತಿದ್ದಾಗ ಅಪಘಾತ – ವಧು, ವರ ಸಾವು

    ಹಾಸನ: ಮದುವೆಯಾಗಿ ದಂಪತಿಯಾಗಬೇಕಿದ್ದ ವಧು ಮತ್ತು ವರ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.

    ತುಮಕೂರು ಜಿಲ್ಲೆಯ ವಧು ರಾಧಿಕಾ(25) ವರ ಸುಪ್ರೀತ್(27) ಮತ್ತು ಮಾನಸಿಕ ಅಸ್ವಸ್ಥ ಮಹಿಳೆ ರತ್ನಮ್ಮ (40) ಮೃತಪಟ್ಟಿದ್ದಾರೆ. ಆಲೂರು ತಾಲೂಕಿನ ಪಾಳ್ಯ ಬಳಿ ಈ ಅಪಘಾತ ಸಂಭವಿಸಿ ರಾಧಿಕಾ ಮತ್ತು ರತ್ನಮ್ಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವರ ಸುಪ್ರೀತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

    ಅಪಘಾತ ಹೇಗಾಯ್ತು?
    ಫೆಬ್ರವರಿ 5 ರಂದು ಮದುವೆ ನಡೆಯಲಿರುವ ಹಿನ್ನೆಲೆಯಲ್ಲಿ ವಿವಾಹ ಪೂರ್ವ ಫೋಟೋ ಶೂಟ್ ಮಾಡಲು ರಾಧಿಕಾ, ಸುಪ್ರೀತ್ ಮತ್ತು ರಾಧಿಕಾ ತಾಯಿ  ಕಾರಿನಲ್ಲಿ ಹಾಸನದ ಶೆಟ್ಟಿಹಳ್ಳಿ ಚರ್ಚ್‍ನಲ್ಲಿ ಮುಗಿಸಿ ಮಂಜ್ರಾಬಾದ್ ಕೋರ್ಟ್ ಕಡೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅಸ್ವಸ್ಥ ಮಹಿಳೆ ಅಡ್ಡ ಬಂದಿದ್ದಾರೆ. ಆಕೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕ ಕಾರಿನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಸ್ಥಳದಲ್ಲಿಯೇ ವಧು ರಾಧಿಕ ಮತ್ತು ಅಸ್ವಸ್ಥ ಮಹಿಳೆ ಇಬ್ಬರು ಮೃತಪಟ್ಟಿದ್ದಾರೆ.

    ಅಪಘಾತದಿಂದ ಕಾರಿನಲ್ಲಿದ್ದ ಕ್ಯಾಮೆರಾಮನ್‍ಗೆ ಮತ್ತು ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸುಪ್ರೀತ್ ಮತ್ತು ರಾಧಿಕ ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವರ ಸುಪ್ರೀತ್ ಕೂಡ ಮೃತಪಟ್ಟಿದ್ದಾರೆ.

    ಕ್ಯಾಮೆರಾ ಮನ್ ಮತ್ತು ಚಾಲಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • 2ನೇ ಮದ್ವೆಯಲ್ಲಿ ಮೊದಲ ಮದ್ವೆಯ ಡ್ರೆಸ್ ಧರಿಸಿ ಸಿಕ್ಕಿ ಬಿದ್ದ ವರ!

    2ನೇ ಮದ್ವೆಯಲ್ಲಿ ಮೊದಲ ಮದ್ವೆಯ ಡ್ರೆಸ್ ಧರಿಸಿ ಸಿಕ್ಕಿ ಬಿದ್ದ ವರ!

    ಮುಂಬೈ: ವರನೊಬ್ಬ ಮೊದಲ ಮದುವೆಯಲ್ಲಿ ಧರಿಸಿದ್ದ ಬಟ್ಟೆಯನ್ನೇ, ತನ್ನ ಎರಡನೇ ಮದುವೆಯಲ್ಲಿಯೂ ಧರಿಸುವ ಮೂಲಕ ಸಿಕ್ಕಿಬಿದ್ದಿರುವ ಘಟನೆ ನಗರದ ಮಲ್ವಾನಿಯಲ್ಲಿ ಶುಕ್ರವಾರ ನಡೆದಿದೆ.

    26 ವರ್ಷದ ಸೊಹೈಲ್ ಸೈಯದ್ ಎಂಬಾತನೇ ತನ್ನ ಎರಡನೇ ಮದುವೆಯಲ್ಲಿ ಸಿಕ್ಕಿ ಬಿದ್ದಿರುವ ವರ. ಸೊಹೈಲ್ ಆರು ತಿಂಗಳ ಹಿಂದೆಯೇ ತಾನು ಪ್ರೀತಿಸಿದ್ದ ಯುವತಿಯೊಂದಿಗೆ ಮದುವೆ ಆಗಿದ್ದನು. ಸೊಹೈಲ್ ಪ್ರೀತಿಸಿರುವ ಹುಡುಗಿಯನ್ನು ಆತನ ಪೋಷಕರು ಒಪ್ಪಿರದ ಕಾರಣ ಯಾರಿಗೂ ತಿಳಿಯದಂತೆ ಗುಟ್ಟಾಗಿ ಮದುವೆ ಆಗಿದ್ದನು.

    ಇತ್ತ ಸೊಹೈಲ್ ಪೋಷಕರು ತಮ್ಮ ಏರಿಯಾದಲ್ಲಿ ವಾಸವಾಗಿರುವ ಯುವತಿಯೊಂದಿಗೆ ಶುಕ್ರವಾರ ಮದುವೆ ನಿಶ್ಚಯ ಮಾಡಿದ್ರು. ಪೋಷಕರು ನೋಡಿರುವ ಹುಡುಗಿಯನ್ನು ಮದುವೆಯಾಗಲು ಸೊಹೈಲ್ ಒಪ್ಪಿಕೊಂಡಿದ್ದರಿಂದ ಎರಡು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಶುಕ್ರವಾರ ರಾತ್ರಿ ಮದುವೆ ನಡೆದಿದೆ. ಬಿದಾಯಿ (ವಧುವನ್ನು ಗಂಡನ ಮನೆಗೆ ಕಳುಹಿಸುವ ಸಮಯ) ವೇಳೆ ವಧುವಿನ ತಂದೆಯ ಮೊಬೈಲ್‍ಗೆ ಫೋಟೋವೊಂದನ್ನು ಕಳುಹಿಸಿದ್ದಾರೆ.

    ಒಂದೇ ಡ್ರೆಸ್: ಮೊಬೈಲಿಗೆ ಬಂದ ಫೋಟೋವನ್ನು ಡೌನ್‍ಲೋಡ್ ಮಾಡಿ ನೋಡಿದ್ರೆ ಅಳಿಯ ಬೇರೆ ಯುವತಿಯೊಂದಿಗೆ ಮದುವೆ ಆಗಿರುವ ಫೋಟೋ. ಅಳಿಯ ಸೊಹೈಲ್ ಧರಿಸಿರುವ ಡ್ರೆಸ್ ಮತ್ತು ಫೋಟೋದಲ್ಲಿ ಹಾಕಿರುವ ಶೇರ್ವಾನಿ ಎರಡೂ ಒಂದೇ ಆಗಿದ್ದರಿಂದ ವಧುವಿನ ತಂದೆಗೆ ಸಂಶಯ ಹುಟ್ಟಿಕೊಂಡಿದೆ.

    ಮದುವೆ ಮನೆಯಿಂದ ಪೊಲೀಸ್ ಠಾಣೆಗೆ: ಇತ್ತ ಅಳಿಯ ಸೊಹೈಲ್ ಮೊದಲ ಮದುವೆ ವಿಚಾರ ತಿಳಿದ ವಧುವಿನ ಪೋಷಕರು ಮಲ್ವಾನಿ ಠಾಣೆಗೆ ತೆರಳಿದ್ದಾರೆ. ಪೊಲೀಸರು ಮಾತ್ರ ಇದೊಂದು ಗಂಭೀರವಲ್ಲದ ಪ್ರಕರಣ ಅಂತಾ ಹೇಳಿ ಎಫ್‍ಐಆರ್ ದಾಖಲಿಸಿಕೊಳ್ಳಲಿಲ್ಲ. ಠಾಣೆಯಲ್ಲಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಸುನಿತಾ ಕದಮ್ ಎಫ್‍ಐಆರ್ ದಾಖಲಿಸದೇ ಎನ್‍ಸಿಆರತ್ ಅಂತಾ ಹಾಕಿದ್ದರು ಅಂತಾ ವಧುವಿನ ಕುಟುಂಬಸ್ಥರಾದ ಶಮಿಮ್ ಭಾಯ್ ಆರೋಪಿಸಿದ್ದಾರೆ.

    ಮಂಟಪದಿಂದ ಕಾಲ್ಕಿತ್ತ ಸೊಹೈಲ್ ಪೋಷಕರು: ವಧುವಿನ ಪೋಷಕರಿಂದ ಆಕ್ರೋಶ ವ್ಯಕ್ತವಾದ ಕೂಡಲೇ ಪೊಲೀಸರು ಶನಿವಾರ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಆದ್ರೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿದ್ದಂತೆ ವರ ಮತ್ತು ಆತನ ಪೋಷಕರು ನಾಪತ್ತೆಯಾಗಿದ್ದಾರೆ.

    ಶನಿವಾರ ಸೊಹೈಲ್ ಕಿರಿಯ ಸಹೋದರನ ಆರತಕ್ಷತೆಯ ಕಾರ್ಯಕ್ರಮಕ್ಕೆ ತೆರಳಿ ಆತನ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಸೊಹೈಲ್ ವಿರುದ್ಧ ಐಪಿಸಿ ಸೆಕ್ಷನ್ 420, 406, 495 ಅಡಿ ದೂರು ದಾಖಲಿಸಿಕೊಂಡಿದೆ. ಕಾಣೆಯಾಗಿರುವ ಸೊಹೈಲ್ ಪತ್ತೆಗಾಗಿ ವಿಶೇಷ ಜಾಲ ಬೀಸಲಾಗಿದೆ ಎಂದು ಮಲ್ವಾನಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.

  • 60 ವರ್ಷದ ವ್ಯಕ್ತಿಯೊಂದಿಗೆ ಮದ್ವೆಯಾದ್ಳು -ಆರೇ ದಿನಕ್ಕೆ ಬಯಲಾಯ್ತು ವಧುವಿನ ನಿಜ ರೂಪ

    60 ವರ್ಷದ ವ್ಯಕ್ತಿಯೊಂದಿಗೆ ಮದ್ವೆಯಾದ್ಳು -ಆರೇ ದಿನಕ್ಕೆ ಬಯಲಾಯ್ತು ವಧುವಿನ ನಿಜ ರೂಪ

    ಇಂದೋರ್: ನಗರದ 60 ವರ್ಷದ ನಿವೃತ್ತ ಸರ್ಕಾರಿ ನೌಕರನೊಬ್ಬರನ್ನು ಮದುವೆಯಾಗಿದ್ದ ಮಹಿಳೆ ಆರೇ ದಿನದಲ್ಲಿ ಮನೆಯಲ್ಲಿ ಚಿನ್ನಾಭರಣ ಮತ್ತು ನಗದಿನೊಂದಿಗೆ ಪರಾರಿಯಾಗಿದ್ದಳು. ಈ ಕುರಿತು ಬರೋಬ್ಬರಿ 45 ದಿನಗಳ ಬಳಿಕ ಪೊಲೀಸರು ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ನಗರದ ಮಂದಸೌರ ನಿವಾಸಿ 60 ವರ್ಷದ ರೂಪ್ ದಾಸ್ ಮೋಸಕ್ಕೊಳಗಾದ ವ್ಯಕ್ತಿ. ಪೂಜಾ ಅಲಿಯಾಸ್ ಹೇಮಾ ಬಂಧಿತ ಆರೋಪಿ. ರೂಪ್ ದಾಸ್ ವಿದ್ಯುತ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ನಿವೃತ್ತಿಯ ನಂತರ ರೂಪ್ ದಾಸ್ ಎರಡನೇ ಮದುವೆಯಾಗಲು ಇಚ್ಛಿಸಿದ್ದರು. ರೂಪ್ ದಾಸ್ ಮೊದಲ ಪತ್ನಿ 1992ರಲ್ಲಿ ನಿಧನ ಹೊಂದಿದ್ದು, ಮಕ್ಕಳನ್ನು ಸಹ ಹೊಂದಿಲ್ಲ. ನಿವೃತ್ತಿವರೆಗೂ ರೂಪ್ ದಾಸ್ ಏಕಾಂಗಿ ಜೀವನ ನಡೆಸಿಕೊಂಡು ಬಂದಿದ್ದರು. ವೃದ್ಧಾಪ್ಯದಲ್ಲಿ ಯಾರಾದರೂ ಜೊತೆಗೆ ಇರಬೇಕೆಂದು ಸ್ನೇಹಿತರು ಹಾಗು ಕುಟುಂಬಸ್ಥರ ಸಲಹೆಯ ಮೇರೆಗೆ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು.

    ಆವತ್ತು ಪರಿಚಯವಾಗಿದ್ದೇ ಪೂಜಾ: 18 ನವೆಂಬರ್ 2017ರಂದು ಸ್ನೇಹಿತ ಅಶೋಕ್ ಕುಮಾರ್ ಗೆ ಬ್ರಾಹ್ಮಣ ಸಮುದಾಯದ 40 ರಿಂದ 50 ವಯಸ್ಸಿನ ವಿಧವೆಯನ್ನು ತೋರಿಸುವಂತೆ ಹೇಳಿದ್ದರು. ಕೆಲವು ದಿನಗಳ ಬಳಿಕ ಅಶೋಕ್ ಕುಮಾರ್ ಪೂಜಾ ಎಂಬ ಮಹಿಳೆಯನ್ನು ಪರಿಚಯ ಮಾಡಿಸಿದ್ದಾನೆ. ನನಗೆ ಮಹಿಳೆಯ ಕುಟುಂಬ ಮತ್ತು ಆಕೆಯ ಹಿನ್ನೆಲೆಯ ಬಗ್ಗೆ ಚೆನ್ನಾಗಿ ಗೊತ್ತಿದ್ದು, ಚಿಂತೆ ಮಾಡುವ ಅಗತ್ಯವಿಲ್ಲ ಅಂತ ತಿಳಿಸಿದ್ದಾನೆ. ಪೂಜಾ ಜೊತೆಗೆ ಸಹೋದರ ಎಂದು ಹೇಳಿಕೊಂಡು ಜಿತೇಂದ್ರ ಎಂಬ ವ್ಯಕ್ತಿಯನ್ನು ಪರಿಚಯ ಮಾಡಿಸಿದ್ದನು.

    ದೇವಸ್ಥಾನದಲ್ಲಿ ಮದುವೆ: 22 ನವೆಂಬರ್ 2017ರಂದು ಅಶೋಕ್ ಮತ್ತು ಜಿತೇಂದ್ರ ಸಮ್ಮುಖದಲ್ಲಿ ನಗರದ ಸಂತೋಷಿ ಮಾ ದೇವಸ್ಥಾನದಲ್ಲಿ ರೂಪ್ ದಾಸ್ ಮತ್ತು ಪೂಜಾ ಇಬ್ಬರ ಮದುವೆ ನಡೆದಿದೆ. ಮದುವೆ ಬಳಿಕ ರೂಪ್ ದಾಸ್ ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆಯ ಎಲ್ಲ ಜವಾಬ್ದಾರಿಗಳನ್ನು ನೋಡಿಕೊಳ್ಳುವಂತೆ ತಿಳಿಸಿ ತಿಜೋರಿಯ ಬೀಗದ ಕೈಯನ್ನು ನೀಡಿದ್ದಾರೆ.

    ನವೆಂಬರ್ 29ರಂದು ರೂಪ್ ದಾಸ್ ಎರಡನೇ ಮಹಡಿಯನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಸಹಾಯಕ್ಕಾಗಿ ಪತ್ನಿ ಪೂಜಾಳನ್ನು ಕರೆದಿದ್ದಾರೆ. ರೂಪ್ ದಾಸ್ ಕೂಗಿದ್ದಕ್ಕೆ ಉತ್ತರ ನೀಡದೇ ಇರುವುದರಿಂದ ಕೆಳಗೆ ಬಂದು ನೋಡಿದ್ರೆ ತಿಜೋರಿಯ ಬಾಗಿಲು ತೆರೆದಿದ್ದು, ಗೃಹ ಪ್ರವೇಶಕ್ಕೆ ಅಂತ ಇರಿಸಿದ್ದ 3 ಲಕ್ಷ ರೂ. ಹಣ ಮತ್ತು ಚಿನ್ನ, ಬೆಳ್ಳಿ ಆಭರಣಗಳೊಂದಿಗೆ ಪೂಜಾ ಎಸ್ಕೇಪ್ ಆಗಿದ್ದಾಳೆ.

    ಮನೆಯಿಂದ ಪೂಜಾ ನಾಪತ್ತೆಯಾಗಿದ್ದನ್ನು ಕಂಡ ರೂಪ್ ದಾಸ್ ಕೂಡಲೇ ಮದುವೆ ಮಾಡಿಸಿದ್ದ ಅಶೋಕ್‍ಕುಮಾರ್ ಗೆ ಕರೆ ಮಾಡಿ ವಿಷಯವನ್ನು ತಿಳಿಸಿದ್ದಾರೆ. ನನ್ನ ಹಣ ಮತ್ತು ಆಭರಣಗಳನ್ನು ಹಿಂದುರುಗಿಸಿ ಕೊಡುವಂತೆ ಹೇಳಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಸಿಕ್ಕಿದ್ದು ಹೀಗೆ: ಪೊಲೀಸರು ಅಶೋಕ್ ಕುಮಾರ್‍ನನ್ನು ಕರೆದು ವಿಚಾರಣೆ ನಡೆಸಿದಾಗ ಕಾಣೆಯಾಗಿರುವ ಪೂಜಾಳ ವಿಳಾಸ ಗೊತ್ತಿಲ್ಲ. ಕೇವಲ ಫೋನ್ ನಂಬರ್ ನಿಂದಲೇ ಸಂಪರ್ಕಿಸಿ ಇಬ್ಬರ ಮದುವೆ ಮಾಡಿಸಲಾಗಿತ್ತು ಅಂತ ವಿಚಾರಣೆಯಲ್ಲಿ ತಿಳಿಸಿದ್ದಾರೆ. ಪೊಲೀಸರು ಆಶೋಕ್‍ಕುಮಾರ್ ಪತ್ನಿಯಿಂದ ಪೂಜಾಳ ನಂಬರ್ ಗೆ ಕರೆ ಮಾಡಿಸಿ, ತನ್ನ ಪತಿಗೆ ಆರೋಗ್ಯ ಸರಿಯಿಲ್ಲ, ಬಂದು ಭೇಟಿಯಾಗಿ ಅಂತ ಹೇಳಿಸಿದ್ದಾರೆ. ಅಶೋಕ್ ಕುಮಾರ್ ಪತ್ನಿಯ ಮಾತು ನಂಬಿ ಮನೆಗೆ ಬಂದ ಪೂಜಾಳನ್ನು ಪೊಲೀಸರು ಬಂಧಿಸಿದ್ದಾರೆ.

    ತನಿಖೆ ವೇಳೆ ಪೂಜಾ ತನ್ನ ಮೂಲ ಹೆಸರು ಹೇಮಾ ಎಂದು ತಿಳಿಸಿದ್ದಾಳೆ. ಪೂಜಾ ಮತ್ತು ಅಶೋಕ್‍ಕುಮಾರ್ ಇಬ್ಬರ ಬಳಿ ತಲಾ 5 ಸಾವಿರ ರೂ.ಹಣ ದೊರೆಕಿದೆ. ಪ್ರಕರಣ ಸಂಬಂಧ ಪೊಲೀಸರು ಅಶೋಕ್ ಕುಮಾರ್ ಮತ್ತು ಪೂಜಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇನ್ನೂ ಮದುವೆ ವೇಳೆ ಪೂಜಾಳ ಅಣ್ಣ ಅಂತಾ ಹೇಳಿಕೊಂಡಿದ್ದ ಜಿತೇಂದ್ರ ನಾಪತ್ತೆಯಾಗಿದ್ದು, ಆತನ ಬಲೆಗಾಗಿ ಪೊಲೀಸರು ವಿಶೇಷ ಜಾಲ ಬೀಸಿದ್ದಾರೆ.