Tag: Greater Bengaluru Authority

  • ನಾವು ಅಧಿಕಾರಕ್ಕೆ ಬಂದ್ರೆ ಜಿಬಿಎ ರದ್ದು ಮಾಡ್ತೀವಿ: ಆರ್.ಅಶೋಕ್

    ನಾವು ಅಧಿಕಾರಕ್ಕೆ ಬಂದ್ರೆ ಜಿಬಿಎ ರದ್ದು ಮಾಡ್ತೀವಿ: ಆರ್.ಅಶೋಕ್

    ನಾವು (BJP) ಅಧಿಕಾರಕ್ಕೆ ಬಂದ್ರೆ ಜಿಬಿಎ (Greater Bengaluru Authority) ತೆಗೆದು, ಒಂದೇ ಕಾರ್ಪೋರೇಷನ್ ಮಾಡ್ತೀವಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಹೇಳಿದ್ದಾರೆ.

    ಬೆಂಗಳೂರಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೆಂಪೇಗೌಡ ಕಟ್ಟಿದ ನಾಡನ್ನ ಒಂದೇ ಮಾಡ್ತೀವಿ. ಜಿಬಿಎ ನಾವು ರದ್ದು ಮಾಡ್ತೀವಿ. ಅಧಿಕಾರ ವಿಕೇಂದ್ರೀಕರಣ ಅಂದರೆ 5 ಪಾಲಿಕೆ ಮಾಡಿದ ಹಾಗೇ ರಾಜ್ಯವನ್ನು ಭಾಗ ಮಾಡ್ತೀರಾ? 5 ಸಿಎಂ ಆಗೋಕೆ ಒಪ್ಪುತ್ತೀರಾ? ಬೆಂಗಳೂರು ಗೆಲ್ಲೋಕೆ ಆಗೊಲ್ಲ ಅಂತ ಕಾಂಗ್ರೆಸ್‍ಗೆ ಗೊತ್ತು. ಅದಕ್ಕೆ ಜಿಬಿಎ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಣ – ಹೋಮ ನೆರವೇರಿಸಿ ಬಿಜೆಪಿ ಕೌಂಟರ್‌

    ಕೆಲವು ಶಾಸಕರು ಅನುಮತಿ ಪಡೆದು ಬೇರೆ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಜಿಬಿಎ ಮೊದಲ ಸಭೆ ಇವತ್ತು ಸರ್ಕಾರ ಮಾಡ್ತಿದೆ. ಸರ್ಕಾರ ಅಂತ ಹೇಳಬೇಕಾ ಅಂತ ಅನುಮಾನ ಬಂದಿದೆ. ಸರ್ಕಾರ ಅಂದರೆ ಕಾನೂನು, ಸಂವಿಧಾನ ಎಲ್ಲ ಇರಬೇಕು. ನಿನ್ನೆ ಸಭೆ ಇದೆ ಅಂತ ಫೋನ್ ಮಾಡಿದ್ರು. ಇವತ್ತು ಬೆಳಗ್ಗೆ 12 ಗಂಟೆಗೆ ಅಜೆಂಡಾ ಕೊಟ್ಟರು. ಸಂಜೆ 4 ಗಂಟೆಗೆ ಮೀಟಿಂಗ್ ಅಂತ ಹೇಳಿದ್ದಾರೆ. ಸಭೆ ಮಾಡಬೇಕಾದ್ರೆ 7 ದಿನ ಮುಂಚೆ ನೊಟೀಸ್ ಕೊಡಬೇಕು ಎಂದಿದ್ದಾರೆ.

    ಅಧಿವೇಶನದಲ್ಲಿ ಬಿಲ್ ಕೊಡಬೇಕಾದ್ರೆ ಮೊದಲು ಕೊಡ್ತಾರೆ. ಜಿಬಿಎ ಅಜೆಂಡಾ ಓದೋಕೆ ಆಗೊಲ್ಲ. 12 ಗಂಟೆಗೆ ಅಜೆಂಡಾ ಕೊಟ್ಟಿದ್ದಾರೆ. ಹೇಗೆ ನಾವು ಓದೋದು? ನೋಟಿಸ್ ಕೊಟ್ಟಿರೋದು ನಮಗೆ ಗೊತ್ತಿಲ್ಲ. ಇವರ ಯೋಗ್ಯತೆ ಏನು ಅಂತ ಗೊತ್ತಾಗ್ತಿದೆ. ಇವರಿಗೆ ಜವಾಬ್ದಾರಿ ಇದೆಯಾ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿಗಣತಿ, GBA ಚುನಾವಣೆಗೆ ತಯಾರಿ ಎಲ್ಲಿ?: ಸರ್ಕಾರಕ್ಕೆ ವಿಜಯೇಂದ್ರ ಪ್ರಶ್ನೆ

  • ನಕ್ಷೆ ಮಂಜೂರಾತಿ, ಟಿಡಿಆರ್ ನೀಡುವ ಅಧಿಕಾರ ಇನ್ಮುಂದೆ GBA ವ್ಯಾಪ್ತಿಗೆ – ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಣಯ

    ನಕ್ಷೆ ಮಂಜೂರಾತಿ, ಟಿಡಿಆರ್ ನೀಡುವ ಅಧಿಕಾರ ಇನ್ಮುಂದೆ GBA ವ್ಯಾಪ್ತಿಗೆ – ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಣಯ

    – 5 ಪಾಲಿಕೆಗಳಿಗೆ ಐದು ಕಚೇರಿ ಅಂತಿಮ
    – ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೊದಲ ಸಭೆಯಲ್ಲಿ ಮಹತ್ವದ ನಿರ್ಣಯ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿಂದು ಬೆಂಗಳೂರಿನಲ್ಲಿ ಜಿಬಿಎ ಮೊದಲ ಸಭೆ ನಡೀತು. ಜಿಬಿಎ (GBA) ಅಡಿಯಲ್ಲಿರುವ 5 ನಗರ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳು ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳ ಚುನಾವಣೆ ಸಂಬಂಧಿಸಿದಂತೆ ಸಭೆ ಮಾಡಲಾಯಿತು. ಸಭೆಯಲ್ಲಿ ಬೆಂಗಳೂರಿನ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳು ಹಾಗೂ ಕುಂದುಕೊರತೆಗಳ ಬಗ್ಗೆಯೂ ಚರ್ಚೆ ನಡೀತು.

    ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಬೆಂಗಳೂರು ನಗರ ಕಾಂಗ್ರೆಸ್ ಶಾಸಕರು, ಜಿಬಿಎ ಪಾಲಿಕೆಗಳ ಆಯುಕ್ತರು, ಸದಸ್ಯರು ಭಾಗಿಯಾಗಿದ್ದರು. ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನ ಕೈಗೊಳ್ಳಲಾಯಿತು. ಇದನ್ನೂ ಓದಿ: ಟ್ರಾಫಿಕ್‌ ಸಮಸ್ಯೆ ಒಳ್ಳೆಯದು, ಇದು ಬೆಂಗಳೂರಿನ ಪ್ರಗತಿಯ ದಿಕ್ಸೂಚಿ: ಪ್ರಿಯಾಂಕ್‌ ಖರ್ಗೆ ವ್ಯಾಖ್ಯಾನ

    ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (BDA)ಕ್ಕೆ ಇದ್ದ ಇದ್ದ ನಕ್ಷೆ ಮಂಜೂರಾತಿ ಹಾಗೂ TDR (ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು) ನೀಡುವ ಅಧಿಕಾರವನ್ನ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ತರಲು ನಿರ್ಧರಿಸಲಾಯಿತು. ಜಿಬಿಎ ವ್ಯಾಪ್ತಿಯ 5 ನಗರಪಾಲಿಕೆಗಳಿಗೆ ಬಜೆಟ್‌ ತೀರ್ಮಾನ ಮಾಡುವ ಜೊತೆಗೆ ಬಿಎಂಟಿಸಿ ಹಾಗೂ ಅಗ್ನಿಶಾಮಕ ದಳವನ್ನೂ ಸಹ ಬಿಜೆಪಿ ವ್ಯಾಪ್ತಿಗೆ ಸೇರಿಸಿ ನಿರ್ಣಯ ಕೈಗೊಳ್ಳಲಾಯಿತು. ಇದನ್ನೂ ಓದಿ: ಪೂರ್ವತಯಾರಿ ಇಲ್ಲದೇ ಆತುರಾತುರವಾಗಿ ಜಾತಿಗಣತಿ, GBA ಚುನಾವಣೆಗೆ ತಯಾರಿ ಎಲ್ಲಿ?: ಸರ್ಕಾರಕ್ಕೆ ವಿಜಯೇಂದ್ರ ಪ್ರಶ್ನೆ

    ಸಭೆಯ ಮಹತ್ವದ ನಿರ್ಣಯಗಳೇನು?
    – ಬಿಡಿಎಗೆ ಇದ್ದ ನಕ್ಷೆ ಮಂಜೂರಾತಿ ಇನ್ಮುಂದೆ ಜಿಬಿಎ ವ್ಯಾಪ್ತಿಗೆ
    – ಟಿಡಿಆರ್ ನೀಡುವ ಅಧಿಕಾರ ಕೂಡ ಇನ್ಮುಂದೆ ಜಿಬಿಎ ವ್ಯಾಪ್ತಿಗೆ
    – ಐದು ಪಾಲಿಕೆಗಳ ಬಜೆಟ್ ತೀರ್ಮಾನ
    – ಬಿಎಂಟಿಸಿ, ಅಗ್ನಿ ಶಾಮಕ ದಳ, ಇನ್ಮುಂದೆ ಜಿಬಿಎ ವ್ಯಾಪ್ತಿಗೆ
    – ಕೇಂದ್ರ ಸಂಯೋಜನಾ ಸಮಿತಿ ರಚನೆಗೆ ತೀರ್ಮಾನ (ಇಲಾಖೆಗಳ ನಡುವಿನ ಸಮನ್ವಯತೆಗೆ)
    – ಜಿಬಿಎ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಲು ತೀರ್ಮಾನ
    – ಐದು ಪಾಲಿಕೆಗಳಿಗೆ ಐದು ಕಚೇರಿ ಅಂತಿಮ
    – ಸೆಂಟ್ರಲ್ ಪಾಲಿಕೆ ಜಿಬಿಎ ಕೇಂದ್ರ ಕಚೇರಿಯಲ್ಲೇ ಕಚೇರಿ ಇರಲಿದೆ
    – ಹೊಸ ಪಾಲಿಕೆ ಕಚೇರಿ ಕಟ್ಟಡಗಳು ಒಂದೇ ರೀತಿ ಇರಬೇಕೆಂದು ತೀರ್ಮಾನಿಸಲಾಗಿದೆ
    – ಒಂದೇ ಮಾದರಿಯಲ್ಲಿ ಕಚೇರಿ ನಿರ್ಮಾಣ ಮಾಡಲು ತೀರ್ಮಾನ
    – ಹೊಸದಾಗಿ ಐದು ಪಾಲಿಕೆಗಳಿಗೆ ಕಚೇರಿ ನಿರ್ಮಾಣ

    ಬಿಜೆಎ ಸಭೆಗೆ ಬಿಜೆಪಿ ಶಾಸಕರ ಗೈರು
    ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮೊದಲ ಸಭೆಗೆ ಬಿಜೆಪಿ ಶಾಸಕರು ಗೈರಾದರು. ಜಿಬಿಎ ರಚನೆ ಬಗ್ಗೆ ನಮಗೆ ವಿರೋಧವಿದೆ ಹಾಗಾಗಿ ನಾವು ಸಭೆಗೆ ಹಾಜರಾಗುವುದಿಲ್ಲ ಎಂದು ವಿರೋಧಿಸಿದ್ರು. 75 ಜಿಬಿಎ ಸದಸ್ಯರ ಪೈಕಿ ಕೇವಲ 35 ಸದಸ್ಯರು ಮಾತ್ರ ಸಭೆಗೆ ಹಾಜರಾಗಿದ್ದರು. ಹೀಗಾಗಿ ಮೊದಲ ಸಭೆಯಲ್ಲಿ ಸಿಎಂಗೆ ಹಿನ್ನಡೆಯಾಯ್ತು. ಇದನ್ನೂ ಓದಿ: ಸಿಎಂ ಡಿನ್ನರ್ ಮೀಟಿಂಗ್ ಸಿದ್ದರಾಮಯ್ಯ ಅಧಿಕಾರ ಅಂತ್ಯದ ಮುನ್ಸೂಚನೆಯಾ- ಛಲವಾದಿ ಪ್ರಶ್ನೆ

  • ಬೆಂಗಳೂರು | ಮೊದಲ ದಿನವೇ ಜಾತಿಗಣತಿ ಸಮೀಕ್ಷೆಗೆ ವಿಘ್ನ – ಗೊಂದಲ ನಿವಾರಣೆಗೆ ಗಣತಿದಾರರಿಂದ ಪ್ರತಿಭಟನೆ

    ಬೆಂಗಳೂರು | ಮೊದಲ ದಿನವೇ ಜಾತಿಗಣತಿ ಸಮೀಕ್ಷೆಗೆ ವಿಘ್ನ – ಗೊಂದಲ ನಿವಾರಣೆಗೆ ಗಣತಿದಾರರಿಂದ ಪ್ರತಿಭಟನೆ

    ಬೆಂಗಳೂರು: ನಗರದಲ್ಲಿ ತಡವಾಗಿ ಆರಂಭವಾಗಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ಹತ್ತಾರು ವಿಘ್ನ ಎದುರಾಗಿದೆ. ಹೀಗಾಗಿ ವೈಯಾಲಿಕಾವಲ್ ಬಿಬಿಎಂಪಿ (BBMP) ಕಚೇರಿಯಲ್ಲಿ ಗೊಂದಲಗಳ ನಿವಾರಣೆಗೆ ಆಗ್ರಹಿಸಿ ನೂರಾರು ಜನ ಗಣತಿದಾರರು ಪ್ರತಿಭಟನೆ ನಡೆಸಿದರು.

    ಬಹಳಷ್ಟು ಜನ ಗಣತಿದಾರರು ವೈಯಾಲಿಕಾವಲ್ ಬಿಬಿಎಂಪಿ ಕಚೇರಿಯಿಂದ ಸಮೀಕ್ಷೆಗೆ ಹೋಗದೇ ಗೊಂದಲಗಳಿಂದಾಗಿ ಪರದಾಡಿದರು. ವಾರ್ಡ್‌ಗಳ ಹಂಚಿಕೆಯಲ್ಲಿ ಗೊಂದಲ, ರೋಗಿಗಳನ್ನೂ ಗಣತಿಗೆ ನೇಮಕ, ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಸೇರಿ ಹತ್ತಾರು ಗೊಂದಲಗಳಿಂದಾಗಿ ಮೊದಲ ದಿನವೇ ಸಮೀಕ್ಷೆಗೆ ವಿಘ್ನ ಎದುರಾಗಿದೆ. ಗೊಂದಲಗಳ ಬಗೆಹರಿಸಲು ಆಗ್ರಹಿಸಿ ಜಿಬಿಎ ಅಧಿಕಾರಿಗಳ ಜೊತೆ ಗಣತಿದಾರರು ವಾಗ್ವಾದ ನಡೆಸಿದರು.ಇದನ್ನೂ ಓದಿ: ಮುಜರಾಯಿಂದ ಬಿಗ್‌ಶಾಕ್ – 40 ವರ್ಷಗಳಿಂದ ಬೆಂಗ್ಳೂರಲ್ಲಿದ್ದ 10ಕ್ಕೂ ಹೆಚ್ಚು ಅಂಗಡಿಗಳು ಜಪ್ತಿ

    ತಮ್ಮ ಕ್ಷೇತ್ರ ಬಿಟ್ಟು 30-40 ಕಿ.ಮೀ ದೂರದ ಕ್ಷೇತ್ರಗಳಿಗೆ ಸಮೀಕ್ಷೆಗೆ ನಿಯೋಜನೆ ಮಾಡಿದ್ದಾರೆ. ಜೊತೆಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಗಣತಿದಾರರು ಬೇಸರ ಹೊರಹಾಕಿದರು. ಕೊನೆಗೆ ಗೊಂದಲ ಬಗೆಹರಿಸಲು ಎರಡು ದಿನ ಸಮಯಾವಕಾಶ ಪಡೆದ ಜಿಬಿಎ ಅಧಿಕಾರಿಗಳು, ಗಣತಿದಾರರಿಂದ ಕೋರಿಕೆ ಅರ್ಜಿಗಳನ್ನು ಸ್ವೀಕರಿಸಿ ಕಳುಹಿಸಿದರು.

    ಬೆಂಗಳೂರು ಗಣತಿದಾರರ ಗೊಂದಲಗಳೇನು?
    – ವಾರ್ಡ್‌ಗಳ ಹಂಚಿಕೆಯಲ್ಲಿ ಗೊಂದಲ – ಸ್ಥಳೀಯವಾಗಿ ಹತ್ತು ವಾರ್ಡ್‌ಗಳ ಆಯ್ಕೆಗೆ ಅವಕಾಶ. ಆದರೆ ಗಣತಿದಾರರು ಆಯ್ಕೆ ಮಾಡಿದ ವಾರ್ಡ್‌ಗಳನ್ನು ಬಿಟ್ಟು ದೂರ ದೂರದ ವಾರ್ಡ್ಗಳಿಗೆ ಹಂಚಿಗೆ ಮಾಡಲಾಗಿದೆ.
    – ವಿಕಲ ಚೇತನರಿಗೆ, ಮಕ್ಕಳಿರುವ ತಾಯಂದಿರು, ಗರ್ಭಿಣಿಯರಿಗೆ ದೂರದ ವಾರ್ಡ್‌ಗಳ ಹಂಚಿಕೆಯಿಂದ ಭಾರೀ ಸಮಸ್ಯೆ.
    – ಬೆಂಗಳೂರು ಗ್ರಾಮಾಂತರ ಜಿಲ್ಲೆಯವರಿಗೆ ನಗರದೊಳಗೆ ಗಣತಿಗೆ ನಿಯೋಜನೆ ಮಾಡಿದ್ದು, 20, 30, 40 ಕಿ.ಮೀ ದೂರ ಬರಬೇಕಾದ ಅನಿವಾರ್ಯತೆ ಉಂಟಾಗಿದೆ.
    – ಹೃದ್ರೋಗ ಸೇರಿ ಕೆಲ ರೋಗಗಗಳಿಂದ ನರಳುತ್ತಿರುವ ಸರ್ಕಾರಿ ನೌಕರರಿಗೂ ಗಣತಿಗೆ ನೇಮಕ ಮಾಡಿದ್ದಾರೆ. ಗಣತಿಯಿಂದ ವಿನಾಯಿತಿ ಕೊಡ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
    – ಹಲವು ವಿಕಲಚೇತನರು ಗಣತಿಯಿಂದ ವಿನಾಯಿತಿ ಕೋರಿದ್ದಾರೆ. ಆದರೆ ಅಧಿಕಾರಿಗಳು ಸ್ಪಂದಿಸ್ತಿಲ್ಲ ಎಂದು ಆರೋಪ
    – ಸಮೀಕ್ಷೆ ಆ್ಯಪ್ ಗೊಂದಲ, ತಾಂತ್ರಿಕ ಸಮಸ್ಯೆ ನಿವಾರಣೆ ಆಗಿಲ್ಲ.

    ಪ್ರತಿ ಗಣತಿದಾರರಿಗೆ ಒಟ್ಟು 300 ಮನೆಗಳ ಗಣತಿಗೆ ಸೂಚನೆ ನೀಡಲಾಗಿದ್ದು, ಅ.4ರಿಂದ ಒಟ್ಟು 14 ದಿನಗಳ ಕಾಲ ಗಣತಿ ನಡೆಯಲಿದೆ. ಇನ್ನೂ ಗಣತಿ ಸಂದರ್ಭದಲ್ಲಿ ಒಂದು ಮನೆಯ ಗಣತಿಗೆ ಕನಿಷ್ಟ ಅರ್ಧ ಗಂಟೆಯಿಂದ ಒಂದು ಗಂಟೆ ಕಾಲ ಬೇಕೇ ಬೇಕು. ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿದ್ದಷ್ಟೂ ಸಮೀಕ್ಷೆಗೆ ಹೆಚ್ಚು ಸಮಯ ಹಿಡಿಯಲಿದೆ. ಜೊತೆಗೆ ಒಟ್ಟು 60 ಪ್ರಶ್ನೆಗಳ ಪೈಕಿ 40 ಪ್ರಶ್ನೆಗಳನ್ನು ಮನೆಯ ಪ್ರತಿ ಸದಸ್ಯರಿಗೂ ಪ್ರತ್ಯೇಕವಾಗಿ ಕೇಳಿ ಬರೆದುಕೊಳ್ಳಬೇಕು. ಉಳಿದ 20 ಸಾಮಾನ್ಯ ಪ್ರಶ್ನೆಗಳಿಗೆ ಕುಟುಂಬದ ಯಾರಾದರೂ ಒಬ್ಬರಿಂದ ಉತ್ತರ ಪಡೆಯಬೇಕು ಎಂಬ ಸೂಚನೆಯಿದೆ.ಇದನ್ನೂ ಓದಿ: ಪ್ರತಿ ಜಿಲ್ಲೆಗೆ ಒಂದು ಸರ್ಕಾರಿ ಮೆಡಿಕಲ್ ಕಾಲೇಜು, ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ: ಸಿಎಂ

     

  • ಅಕ್ಟೋಬರ್‌ ಒಳಗೆ ಗುಂಡಿ ಮುಚ್ಚದಿದ್ರೆ ಚೀಫ್‌ ಎಂಜಿನಿಯರ್‌ಗಳೇ ಸಸ್ಪೆಂಡ್‌: ಸಿದ್ದರಾಮಯ್ಯ ಖಡಕ್‌ ವಾರ್ನಿಂಗ್‌

    ಅಕ್ಟೋಬರ್‌ ಒಳಗೆ ಗುಂಡಿ ಮುಚ್ಚದಿದ್ರೆ ಚೀಫ್‌ ಎಂಜಿನಿಯರ್‌ಗಳೇ ಸಸ್ಪೆಂಡ್‌: ಸಿದ್ದರಾಮಯ್ಯ ಖಡಕ್‌ ವಾರ್ನಿಂಗ್‌

    – ಜನರ ಕಷ್ಟ ನಿಮ್ಮ ಕಣ್ಣಿಗೆ ಬೀಳ್ತೀಲ್ವಾ? ನಿಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು; ಸಿಎಂ ಫುಲ್‌ ಗರಂ
    – ಒಟ್ಟು 14,795 ರಸ್ತೆ ಗುಂಡಿಗಳ ಗುರುತು; 8,046 ಗುಂಡಿಗಳು ಮುಚ್ಚಲು ಬಾಕಿ

    ಬೆಂಗಳೂರು: ಬೆಂಗಳೂರು ನಗರ ರಸ್ತೆಗಳ (Bengaluru City Roads) ಸುಧಾರಣೆ ಹಾಗೂ ಸಂಚಾರ ವ್ಯವಸ್ಥೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿದಂದು ಮಹತ್ವದ ಸಭೆ ನಡೆಯಿತು. ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಸಿದ್ದರಾಮಯ್ಯ (Siddaramaiah) ಅವರು ಎಂಜಿನಿಯರ್‌ಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

    ಸಭೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಂದ ಮಾಹಿತಿ ಪಡೆದ ಸಿಎಂ, ಹಾಳಾಗಿರುವ ನಗರದ ರಸ್ತೆ ಗುಂಡಿಗಳಿಂದ (Potholes) ಜನ ಹೈರಾಣಾಗಿದ್ದಾರೆಂದು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ರಸ್ತೆ ಗುಂಡಿಗಳನ್ನು ಮುಚ್ಚಲು ನಿಮಗೇನು ಕಷ್ಠ? ನಿಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು, ನಾಚಿಕೆ ಆಗುವುದಲ್ಲವೇ ನಿಮ್ಗೆ? ಮಚ್ಚಿರುವ ಗುಂಡಿಗಳೂ ನೆಟ್ಟಗಿಲ್ಲ. ಜನರ ಪ್ರತಿನಿತ್ಯದ ಸಂಕಷ್ಟ ನಿಮ್ಮ ಕಣ್ಣಿಗೆ ಬೀಳುತ್ತಿಲ್ಲವಾ? ತುರ್ತು ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ? ಪ್ರತಿ ವಾರ್ಡ್‌ನ ಎಂಜಿನಿಯರ್‌ಗಳು, ಮುಖ್ಯ ಎಂಜಿನಿಯಋಗಳು ಏನ್‌ ಮಾಡ್ತಿದ್ದಾರೆ? ಇನ್ನು ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ರಸ್ತೆ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ವಹಿಸಲೇಬೇಕು ಮತ್ತು ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲೇಬೇಕು. ರಸ್ತೆ ನಿರ್ವಹಣೆಗೆ ಸೂಕ್ತ ಕ್ರಮ ವಹಿಸದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾನು ಯಾರ ಮುಖವನ್ನೂ ನೋಡಲ್ಲ. ಗುಂಡಿ ಮುಚ್ಚದಿದ್ದರೇ ಎಲ್ಲ ಚೀಫ್ ಎಂಜಿನಿಯರ್‌ಗಳನ್ನ ಸಸ್ಪೆಂಡ್‌ ಮಾಡಿ ಮನೆಗೆ ಕಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಗುತ್ತಿಗೆದಾರರೊಂದಿಗೆ ಶಾಮೀಲಾಗದೇ ಒದಗಿಸಿರುವ ಅನುದಾನಕ್ಕೆ ಉತ್ತಮ ಗುಣಮಟ್ಟದ, ವೈಜ್ಞಾನಿಕವಾದ ಕಾಮಗಾರಿಗಳನ್ನು ಪೂರೈಸಲು ಕ್ರಮ ವಹಿಸಿ. ಮಳೆಗಾಲಕ್ಕೆ ಮುನ್ನವೇ ರಸ್ತೆ ಕಾಮಗಾರಿಗಳನ್ನು ಯಾಕೆ ಮಾಡುತ್ತಿಲ್ಲ? ಮಳೆಗಾಲದಲ್ಲಿಯೇ ಏಕೆ ಪ್ರಾರಂಭಿಸುವಿರಿ? ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೂತನವಾಗಿ ನೇಮಕಗೊಂಡಿರುವ ಆಯುಕ್ತರು ಫೀಲ್ಡ್ ವರ್ಕ್ ಮಾಡಿ, ನಿಗಾ ಇರಿಸಬೇಕು ಎಂದು ತಾಕೀತು ಮಾಡಿದರು.

    ಬಿಡಿಎ, ಬಿಎಂಆರ್ ಸಿಎಲ್, ಜಲಮಂಡಳಿ ಅಧಿಕಾರಿಗಳ ನಡುವೆ ಸಮನ್ವಯವೇ ಇರುವುದಿಲ್ಲ. ರಸ್ತೆ ಗುಂಡಿಗಳನ್ನು ಮುಚ್ಚಲು ಹಾಗೂ ಎಲ್ಲಾ ರಸ್ತೆಗಳನ್ನು ಸಂಚಾರ ಯೋಗ್ಯ ಮಾಡಲು ಒಂದು ತಿಂಗಳ ಗಡುವು ನೀಡಲಾಗುವುದು. ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮುಖ್ಯ ಆಯುಕ್ತರು ಪ್ರತಿ ವಾರ 5 ವಲಯಗಳ ಆಯುಕ್ತರೊಂದಿಗೆ ಸಭೆ ನಡೆಸಿ, ನಿರಂತರ ಸಂಪರ್ಕದಲ್ಲಿರಬೇಕು. ಹಣದ ಕೊರತೆಯಿದ್ದರೆ ಆರ್ಥಿಕ ಇಲಾಖೆಯಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುತ್ತೇವೆ. ಆದ್ಯತೆ ಮೇರೆಗೆ ಕ್ರಮ ವಹಿಸಿ. ಒಂದು ತಿಂಗಳ ನಂತರ ಮತ್ತೆ ಮೌಲ್ಯ ಮಾಪನ ನಡೆಸಲಾಗುವುದು ಎಂದು ಹೇಳಿದರು ಸಿಎಂ

    14,795 ರಸ್ತೆ ಗುಂಡಿಗಳ ಗುರುತು
    ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಸ್ತೆ ಜಾಲದಲ್ಲಿ 1,648.43 ಕಿ.ಮೀ ಉದ್ದದ ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಿವೆ. 46.61 ಕಿ.ಮೀ ಹೈಡೆನ್ಸಿಟಿ ಕಾರಿಡಾರ್ ರಸ್ತೆಗಳಿವೆ. ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ, ಪಶ್ಚಿಮ ಉತ್ತರ ಮತ್ತು ದಕ್ಷಿಣ ನಗರಪಾಲಿಕೆಗಳಲ್ಲಿ ಒಟ್ಟು 14,795 ರಸ್ತೆ ಗುಂಡಿಗಳನ್ನು ಗುರುತಿಸಿಲಾಗಿದೆ. ಈಗಾಗಲೇ 6,749 ಗುಂಡಿಗಳನ್ನು ಮುಚ್ಚಲಾಗಿದ್ದು 8,046 ಗುಂಡಿಗಳು ಮುಚ್ಚಲು ಬಾಕಿ ಇವೆ. ಅಕ್ಟೋಬರ್ ಅಂತ್ಯ ವೇಳೆಗೆ ಎಲ್ಲಾ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈಗಾಗಲೇ 108.20 ಕಿ.ಮೀ ಉದ್ದದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ.‌ 143.68 ಕಿ.ಮೀ ಉದ್ದದ ರಸ್ತೆ ಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. 401.63 ಕಿ. ಮೀ ರಸ್ತೆಗಳು ಡಾಂಬರೀಕರಣ ಗೊಂಡಿದ್ದು, 440.92 ಕಿ.ಮೀ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಒಟ್ಟಾರೆ 584.60 ಕಿ ಮೀ ಉದ್ದದ ರಸ್ತೆಗಳಲ್ಲಿ  ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.

    * ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು 2025-26ರ ಆಯವ್ಯಯದಲ್ಲಿ 18 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ.
    * ಎಲ್ಲಾ ನಗರ ಪಾಲಿಕೆಗಳಿಗೂ ತುರ್ತು ಕಾಮಗಾರಿ ಕೈಗೊಳ್ಳಲು 25 ಕೋಟಿ ರೂ.ಗಳ ಹಣ ಬಿಡುಗಡೆ ಮಾಡಲಾಗಿದ್ದು, ಪಾಲಿಕೆಗಳಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮ ವಹಿಸಲಾಗಿದೆ.
    * ನೂತನ ತಂತ್ರಜ್ಞಾನ JETPATCHER ಬಳಸಿಕೊಳ್ಳಲು 2.50 ಕೋಟಿ ರೂ.ಗಳ ಮೊತ್ತದ ಟೆಂಡರ್ ಚಾಲ್ತಿಯಲ್ಲಿದ್ದು ಸದರಿ ತಂತ್ರಜ್ಞಾನದಿಂದ ತೇವಾಂಶವಿರುವ ಸಮಯದಲ್ಲಿಯೂ ಗುಂಡಿಗಳನ್ನು ಮುಚ್ಚಬಹುದಾಗಿದೆ.
    * ಐದೂ ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಲು ಒಬ್ಬ ತಾಂತ್ರಿಕ ಸಮನ್ವಯಾಧಿಕಾರಿ ನೇಮಿಸಲು ಕ್ರಮ.
    * ಇಬ್ಬಲೂರು ಜಂಕ್ಷನ್, ಅಗರ, ವೀರಣ್ಣನ ಪಾಳ್ಯ, ನಾಗವಾರ ಮತ್ತು ಹೆಬ್ಬಾಳ ಜಂಕ್ಷನ್‌ಗಳಲ್ಲಿ ಜಲಮಂಡಳಿ ಮತ್ತು ಮೆಟ್ರೋ ಕಾಮಗಾರಿಯಿಂದ ಜಂಕ್ಷನ್ ಹಾಳಾಗಿದ್ದು 400 ಕೋಟಿ ರೂ.ಗಳ ಹೊರವರ್ತುಲ ರಸ್ತೆ ಅಭಿವೃದ್ಧಿ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಸಿಎಂ ತಿಳಿಸಿದರು.

  • ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ 125 ಕೋಟಿ ಅನುದಾನ

    ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗಳಿಗೆ 125 ಕೋಟಿ ಅನುದಾನ

    ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengalruu Authority) ಅಡಿ ರಚನೆಯಾಗಿರುವ ಐದು ಪಾಲಿಕೆಗಳಿಗೆ ರಾಜ್ಯ ಸರ್ಕಾರ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.

    ಹೊಸದಾಗಿ ರಚನೆಯಾಗಿರುವ ಐದು ಪಾಲಿಕೆಗಳಿಗೆ ತಲಾ 25 ಕೋಟಿ ರೂ.ಯಂತೆ 125 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆರಂಭಿಕ ಹಂತದಲ್ಲಿ ಪಾಲಿಕೆಗಳ ದೈನಂದಿನ ಆಡಳಿತಾತ್ಮಕ ಮತ್ತು ಇತರೆ ವೆಚ್ಚಗಳಿಗಾಗಿ ಅನುದಾನ ಅಗತ್ಯವಿದೆ. ಹೀಗಾಗಿ ನಗರಾಭಿವೃದ್ಧಿ ಇಲಾಖೆಯಿಂದ 125 ಕೋಟಿ ರೂ. ಬಿಡುಗಡೆಯಾಗಿದೆ.ಇದನ್ನೂ ಓದಿ:ಬ್ಯಾಗ್ ಇಡುವ ನೆಪದಲ್ಲಿ ಖಾಸಗಿ ಅಂಗಕ್ಕೆ ಕೈ ಹಾಕಿ ವಿಕೃತಿ – ಆಟೋ ಚಾಲಕ ಅರೆಸ್ಟ್

    ಪ್ರಸ್ತುತ ಸಂಗ್ರಹ ಆಗುತ್ತಿರುವ ಆಸ್ತಿ ತೆರಿಗೆಯ ಹಣ ಸರ್ಕಾರದ ಸುಪರ್ದಿಯಲ್ಲಿದೆ. ಸಂಗ್ರಹವಾದ ತೆರಿಗೆ ಹಣ ಇನ್ನೂ ಹೊಸ ಪಾಲಿಕೆಗಳ ಬ್ಯಾಂಕ್ ಅಕೌಂಟ್‌ಗೆ ಬರುತ್ತಿಲ್ಲ. ಹೀಗಾಗಿ ಅದೆಲ್ಲವೂ ಸರ್ಕಾರದ ಸುಪರ್ದಿಯಲ್ಲಿದೆ. 2025-26ನೇ ಸಾಲಿನಲ್ಲಿ 300 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹ ಆಗಿದೆ. 300 ಕೋಟಿ ರೂ.ಯಲ್ಲಿ ಸರ್ಕಾರ 125 ಕೋಟಿ ರೂ.ಯನ್ನ ದೈನಂದಿನ ಆಡಳಿತಾತ್ಮಕ ಮತ್ತು ಇತರೆ ವೆಚ್ಚಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬ್ಯಾಂಕ್ ಅಕೌಂಟ್‌ಗೆ ಅನುದಾನವನ್ನ ವರ್ಗಾಯಿಸಿದೆ.

  • ಗ್ರೇಟರ್ ಬೆಂಗಳೂರು ಅಥಾರಿಟಿ ಹೆಸರು ಬದಲಾವಣೆ?

    ಗ್ರೇಟರ್ ಬೆಂಗಳೂರು ಅಥಾರಿಟಿ ಹೆಸರು ಬದಲಾವಣೆ?

    ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ (Greater Bengaluru Authority) ಹೆಸರು ಬದಲಾವಣೆಗೆ ಸರ್ಕಾರದ ಸಿದ್ದತೆ ನಡೆಸಿದೆ ಎನ್ನಲಾಗಿದೆ.

    ಬಿಬಿಎಂಪಿಯನ್ನು (BBMP) ಗ್ರೇಟರ್ ಬೆಂಗಳೂರು ಅಥಾರಿಟಿ ಆಗಿಸಿ 5 ಪಾಲಿಕೆಯಾಗಿ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಅಥಾರಿಟಿಯಲ್ಲಿ ಕನ್ನಡ ಪದಕ್ಕೆ ಒತ್ತು ನೀಡಿ ಗ್ರೇಟರ್ ಎಂಬ ಪದ ಬದಲಾವಣೆಗೆ ಸರ್ಕಾರ ಚಿಂತನೆ ನಡೆಸಿದೆ.

     

    ಬೆಂಗಳೂರು ಅಥಾರಿಟಿ ಉಳಿಸಿಕೊಂಡು ಗ್ರೇಟರ್ ಬದಲಾವಣೆಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಗ್ರೇಟರ್ ಬದಲಿಗೆ ಕನ್ನಡದ ಸೂಕ್ತ ಪದ ಬಳಕೆಗೆ ಬರುವಂತೆ ಹೆಸರು ಸೂಚಿಸಲು ಅಧಿಕಾರಿಗಳಿಗೆ ಮೌಕಿಕ ಸೂಚನೆ ನೀಡಲಾಗಿದೆ.  ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಸಮಗ್ರ ಟೌನ್‌ಶಿಪ್ ಜಮೀನು ಡಿನೋಟಿಫೈ ಮಾಡಿ BSY ರೀತಿ ಜೈಲಿಗೆ ಹೋಗಲು ಸಿದ್ಧನಿಲ್ಲ: ಡಿಕೆಶಿ

    ಗ್ರೇಟರ್‌ ಪದ ಬಳಕೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು. ಕನ್ನಡದಲ್ಲಿ ಈ ಪದಕ್ಕೆ ಪರ್ಯಾಯವಾಗಿ ಬೇರೆ ಯಾವುದೇ ಪದ ಸಿಕ್ಕಿಲ್ಲವೇ ಎಂದು ಜನರು ಪ್ರಶ್ನಿಸಿದ್ದರು.

  • ಇಂದಿನಿಂದ ಗ್ರೇಟರ್ ಬೆಂಗಳೂರು ಆಡಳಿತ ಜಾರಿ

    ಇಂದಿನಿಂದ ಗ್ರೇಟರ್ ಬೆಂಗಳೂರು ಆಡಳಿತ ಜಾರಿ

    ಬೆಂಗಳೂರು: ಇಂದಿನಿಂದ (ಸೆ.1) ಗ್ರೇಟರ್ ಬೆಂಗಳೂರು ಆಡಳಿತ (Greater Bengaluru Authority) ಜಾರಿಯಾಗಿದ್ದು, ಬೆಂಗಳೂರನ್ನು ಐದು ಪಾಲಿಕೆಗಳಾಗಿ ವಿಂಗಡಿಸಿ ಆಡಳಿತ ನಡೆಸಲಾಗುತ್ತದೆ.

    ಹೌದು, ಸಿಲಿಕಾನ್ ಸಿಟಿ (Silicon City) ಬೆಳೆಯುತ್ತಿರುವ ನಗರ. ಹೀಗಾಗಿ ಒಂದೇ ಸಂಸ್ಥೆಯಿಂದ ನಿರ್ವಹಣೆ ಕಷ್ಟ ಅಂತಾ ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿ ಐದು ಪಾಲಿಕೆಗಳಾಗಿ ವಿಂಗಡಿಸಿ ಆಡಳಿತ ನಡೆಸೋದಕ್ಕೆ ಆದೇಶಿಸಿತ್ತು. ಅದರಂತೆ ಇಂದಿನಿಂದ (ಸೆ.2) ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಜಾರಿ ಆಗಿದೆ. ಈ ಹಿಂದೆ ಬಿಬಿಎಂಪಿ ಇತ್ತು, ಆದರೆ ಇನ್ಮುಂದೆ ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಲ್ಲಿರಲಿದೆ. ಈಗಾಗಲೇ ಐದು ಪಾಲಿಕೆಗಳಿಗೆ 10 ಕಚೇರಿಯನ್ನ ಗುರುತು ಮಾಡಲಾಗಿದೆ.ಇದನ್ನೂ ಓದಿ: ಹಾಸನ | ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದ ಪಾಲಿಕೆಯ ಶೆಡ್ ಕುಸಿತ – ಕಾರ್ಮಿಕರು ಪಾರು

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದು ಇತಿಹಾಸ ಪುಟ ಸೇರಲಿದೆ. 1949ರಲ್ಲಿ ಬೆಂಗಳೂರಿನಲ್ಲಿ ನಗರ ಸಭೆ ರೂಪುಗೊಂಡಿತ್ತು. ಆರ್.ಸುಬ್ಬಣ್ಣ ಮೊದಲ ಮೇಯರ್ ಆಗಿದ್ದರು. ಅಂದಿನಿಂದ 1995ರವರೆಗೆ ನಗರಸಭೆ ಆಡಳಿತ ಜಾರಿಯಲ್ಲಿತ್ತು. ನಂತರ 1996ರಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾಗಿ 2006ರವರೆಗೆ ಆಡಳಿತ ನಡೆಸಿತ್ತು. ಬಳಿಕ ವ್ಯಾಪ್ತಿಯನ್ನು ಹಿರಿದಾಗಿಸಿ 2010ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾಗಿತ್ತು. ಅಂದಿನಿಂದ 2025ರವರೆಗೆ ಬಿಬಿಎಂಪಿ (BBMP) ಆಡಳಿತ ನಡೆಸಿಕೊಂಡು ಬಂದಿದೆ. 2019-20ರಲ್ಲಿ ಮೇಯರ್ ಆದ ಎಂ.ಗೌತಮ್ ಕುಮಾರ್ ಬೆಂಗಳೂರಿನ ಏಕೀಕೃತ ಆಡಳಿತದ ಕೊನೆಯ ಮೇಯರ್ ಆಗಿದ್ದರು. ಇದೀಗ ಮಹಾನಗರ ಪಾಲಿಕೆಯನ್ನು 5 ನಗರಪಾಲಿಕೆಗಳನ್ನು ವಿಂಗಡಿಸಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಆರಂಭವಾಗಿದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿದ್ದ ಎಲ್ಲಾ ನಾಮಫಲಕಗಳು ಇಂದೇ ಬದಲಾಗಲಿದ್ದು, ಜಿಬಿಎ ವ್ಯಾಪ್ತಿಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನಿಯಮ ರೂಪಿಸಿದೆ.

    ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ ಐದು ಪಾಲಿಕೆಗಳಿಗೆ ಎರಡೆರಡು ಕಚೇರಿಗಳನ್ನ ಗುರುತು ಮಾಡಲಾಗಿದೆ.
    1. ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಕಾರ್ಪೋರೇಷನ್ ಸರ್ಕಲ್ ಕೇಂದ್ರ ಕಚೇರಿ ಮುಖ್ಯ ಕಟ್ಟಡ ಅನೆಕ್ಸ್ 1 – ಅನೆಕ್ಸ್ – 2

    2. ಬೆಂಗಳೂರು ನಗರ ಕೇಂದ್ರ ನಗರ ಪಾಲಿಕೆ: ಹಾಲಿ ಪೂರ್ವ ವಲಯ ಕಚೇರಿ, ಕೇಂದ್ರ ಕಚೇರಿ ಅನೆಕ್ಸ್ ಕಟ್ಟಡ

    3. ಬೆಂಗಳೂರು ಪೂರ್ವ ನಗರ ಪಾಲಿಕೆ: ಮಹಾದೇವಪುರ ವಲಯ ಕಚೇರಿ, ಕೆ.ಆರ್ ಪುರಂ ಕಚೇರಿ

    4. ಪಶ್ಚಿಮ ವಲಯ: ಆರ್.ಆರ್ ನಗರ ವಲಯ ಕಚೇರಿ, ಹಾಲಿ ಪಾಲಿಕೆ ಸೌಧ ಚಂದ್ರಲೇಔಟ್

    5. ಬೆಂಗಳೂರು ಉತ್ತರ ನಗರ ಪಾಲಿಕೆ: ಹಾಲಿ ಯಲಹಂಕ ವಲಯ ಕಚೇರಿ, ಹಾಲಿ ದಾಸರಹಳ್ಳಿ ವಲಯ ಕಚೇರಿ

    6. ಬೆಂಗಳೂರು ದಕ್ಷಿಣ ನಗರ ಪಾಲಿಕೆ: ಹಾಲಿ ದಕ್ಷಿಣ ವಲಯ ಕಚೇರಿ, ಹಾಲಿ ಬೊಮ್ಮನಹಳ್ಳಿ ವಲಯ ಕಚೇರಿ

    ಇನ್ನೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 15 ಐಎಎಸ್, 20ಕ್ಕೂ ಹೆಚ್ಚು ಕೆಎಎಸ್ ಮತ್ತು ಇಬ್ಬರು ಐಪಿಎಸ್ ಅಧಿಕಾರಗಳ ಹುದ್ದೆಯನ್ನ ರಚನೆ ಮಾಡಲಾಗಿದೆ ಹಾಗೂ ಐದು ಪಾಲಿಕೆಗಳಿಗೆ 28 ವಿಧಾನಸಭಾ ಕ್ಷೇತ್ರಗಳನ್ನ ಹಂಚಿಕೆ ಮಾಡಲಾಗಿದೆ.ಇದನ್ನೂ ಓದಿ: ಟಿ20 ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ ಮಿಚೆಲ್‌ ಸ್ಟಾರ್ಕ್

    ಯಾವ್ಯಾವ ಪಾಲಿಕೆಗೆ ಎಷ್ಟೆಷ್ಟು ವಿಧಾನಸಭಾ ಕ್ಷೇತ್ರ?

    1. ಬೆಂಗಳೂರು ಪಶ್ಚಿಮ ನಗರ ಪಾಲಿಕೆ – 10 ವಿಧಾನಸಭಾ ಕ್ಷೇತ್ರ
    2. ಬೆಂಗಳೂರು ಕೇಂದ್ರ ನಗರ ಪಾಲಿಕೆ – 07 ವಿಧಾನಸಭಾ ಕ್ಷೇತ್ರ
    3. ಬೆಂಗಳೂರು ಪೂರ್ವ ನಗರ ಪಾಲಿಕೆ – _02 ವಿಧಾನಸಭಾ ಕ್ಷೇತ್ರ
    4.ಬೆಂಗಳೂರು ಉತ್ತರ ನಗರ ಪಾಲಿಕೆ – 07 ವಿಧಾನಸಭಾ ಕ್ಷೇತ್ರ
    5. ಬೆಂಗಳೂರು ದಕ್ಷಿಣ ನಗರ ಪಾಲಿಕೆ – 08 ವಿಧಾನಸಭಾ ಕ್ಷೇತ್ರ

    ಇನ್ನೂ ಗ್ರೇಟರ್ ಬೆಂಗಳೂರು ಎಂಬುದು ಆಂಗ್ಲ ಪದ ಕನ್ನಡ ಪದ ಇಲ್ಲವಾ ಎಂಬ ಪ್ರಶ್ನೆ ಎದ್ದಿತ್ತು. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸದನದಲ್ಲಿಯೇ ಡಿಕೆ ಶಿವಕುಮಾರ್ ಅವರನ್ನ ಪ್ರಶ್ನೆ ಮಾಡಿದ್ದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬದಲು ಬೃಹತ್ ಬೆಂಗಳೂರು ಪ್ರಾಧಿಕಾರ ಮಾಡಿ ಅಂತಾ ಒತ್ತಾಯ ಎದ್ದಿದೆ. ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಹೆಸರು ಬದಲಾವಣೆ ವಿಚಾರವನ್ನ ಪ್ರಾಧಿಕಾರದ ಸಮಿತಿ ಗಮನಕ್ಕೆ ತರಲು ಮುಂದಾಗಿದ್ದಾರೆ.ಇದನ್ನೂ ಓದಿ: ಅಮೆರಿಕದಲ್ಲಿ ಭೀಕರ ಅಪಘಾತ – ಕೋಲಾರ ಮೂಲದ ಬಾಡಿ ಬಿಲ್ಡರ್ ದುರ್ಮರಣ

  • ಸೆ.2 ರಿಂದ ಗ್ರೇಟರ್ ಬೆಂಗಳೂರು ಆಡಳಿತ – ಐದು ಪಾಲಿಕೆಗಳ ರಚನೆ

    ಸೆ.2 ರಿಂದ ಗ್ರೇಟರ್ ಬೆಂಗಳೂರು ಆಡಳಿತ – ಐದು ಪಾಲಿಕೆಗಳ ರಚನೆ

    – ಐದು ಪಾಲಿಕೆಗಳಿಗೆ 10 ತಾತ್ಕಾಲಿಕ ಕಚೇರಿಗಳ ಗುರುತು
    – 16 ಐಎಎಸ್, 2 ಐಪಿಎಸ್ ಅಧಿಕಾರಿಗಳು

    ಬೆಂಗಳೂರು: ಬೆಳೆಯುತ್ತಿರುವ ಬೆಂಗಳೂರು ನಗರ ಒಂದೇ ಸಂಸ್ಥೆಯಿಂದ ನಿರ್ವಹಣೆ ಕಷ್ಟ ಎಂದು ಸರ್ಕಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಿ ಐದು ಪಾಲಿಕೆಗಳಾಗಿ ವಿಂಗಡಿಸಿ ಆಡಳಿತ ನಡೆಸುವುದಕ್ಕೆ ಆದೇಶ ಮಾಡಿದೆ. ಸೆ.2 ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ಜಾರಿಯಾಗಲಿದೆ. ಈ ಹಿಂದೆ ಬಿಬಿಎಂಪಿ ಜಾರಿ ಇತ್ತು. ಆದರೆ, ಇನ್ಮುಂದೆ ಗ್ರೇಟರ್ ಬೆಂಗಳೂರು ಆಡಳಿತ ಜಾರಿಯಲ್ಲಿ ಇರಲಿದೆ.

    ಐದು ಪಾಲಿಕೆಗಳು ಯಾವ್ಯಾವು? ಮತ್ತೆ ಐದು ಪಾಲಿಕೆಗಳ ಕಚೇರಿ ಎಲ್ಲಿ ಬರುತ್ತೆ ಎಂಬ ಪ್ರಶ್ನೆಗಳು ಜನರಲ್ಲಿವೆ. ಅದಕ್ಕೆ ಉತ್ತರ ಕೂಡ ಸಿಕ್ಕಿದೆ. ಐದು ಪಾಲಿಕೆಗಳಿಗೆ 10 ಕಚೇರಿಯನ್ನ ಗುರುತು ಮಾಡಲಾಗಿದೆ.

    5 ಪಾಲಿಕೆಗಳಿಗೆ 10 ತಾತ್ಕಾಲಿಕ ಕಚೇರಿಗಳ ಗುರುತು
    * ಗ್ರೇಟರ್ ಬೆಂಗಳೂರು ಪ್ರಾಧಿಕಾರ
    ಕಾರ್ಪೋರೇಷನ್ ಸರ್ಕಲ್ ಕೇಂದ್ರ ಕಚೇರಿ ಮುಖ್ಯ ಕಟ್ಟಡ ಅನೆಕ್ಸ್ 1 – ಅನೆಕ್ಸ್ 2

    * ಬೆಂಗಳೂರು ನಗರ ಕೇಂದ್ರ ನಗರ ಪಾಲಿಕೆ
    ಹಾಲಿ ಪೂರ್ವ ವಲಯ ಕಚೇರಿ
    ಕೇಂದ್ರ ಕಚೇರಿ ಅನೆಕ್ಸ್ ಕಟ್ಟಡ

    * ಬೆಂಗಳೂರು ಪೂರ್ವ ನಗರ ಪಾಲಿಕೆ
    ಮಹಾದೇವಪುರ ವಲಯ ಕಚೇರಿ
    ಕೆ.ಆರ್ ಪುರಂ ಕಚೇರಿ

    * ಪಶ್ಚಿಮ ವಲಯ
    ಆರ್.ಆರ್ ನಗರ ವಲಯ ಕಚೇರಿ
    ಹಾಲಿ ಪಾಲಿಕೆ ಸೌಧ ಚಂದ್ರ ಲೇಔಟ್

    * ಬೆಂಗಳೂರು ಉತ್ತರ ನಗರ ಪಾಲಿಕೆ
    ಹಾಲಿ ಯಲಹಂಕ ವಲಯ ಕಚೇರಿ
    ಹಾಲಿ ದಾಸರಹಳ್ಳಿ ವಲಯ ಕಚೇರಿ

    * ಬೆಂಗಳೂರು ದಕ್ಷಿಣ ನಗರ ಪಾಲಿಕೆ
    ಹಾಲಿ ದಕ್ಷಿಣ ವಲಯ ಕಚೇರಿ
    ಹಾಲಿ ಬೊಮ್ಮನಹಳ್ಳಿ ವಲಯ ಕಚೇರಿ

    ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 15 ಐಎಎಸ್, 20 ಕ್ಕೂ ಹೆಚ್ಚು ಕೆಎಎಸ್ ಮತ್ತು ಇಬ್ಬರು ಐಪಿಎಸ್ ಅಧಿಕಾರಗಳ ಹುದ್ದೆಯನ್ನ ರಚನೆ ಮಾಡಲಾಗಿದೆ. ಐದು ಪಾಲಿಕೆಗಳಿಗೂ 28 ವಿಧಾನಸಭಾ ಕ್ಷೇತ್ರಗಳನ್ನ ಹಂಚಿಕೆ ಮಾಡಲಾಗಿದೆ.

    ಯಾವ್ಯಾವ ಪಾಲಿಕೆಗೆ ಎಷ್ಟೆಷ್ಟು ವಿಧಾನಸಭಾ ಕ್ಷೇತ್ರ ಹಂಚಿಕೆ?
    * ಬೆಂಗಳೂರು ಪಶ್ಚಿಮ ನಗರ ಪಾಲಿಕೆ – 10 ವಿಧಾನಸಭಾ ಕ್ಷೇತ್ರ
    * ಬೆಂಗಳೂರು ಕೇಂದ್ರ ನಗರ ಪಾಲಿಕೆ – 7 ವಿಧಾನಸಭಾ ಕ್ಷೇತ್ರ
    * ಬೆಂಗಳೂರು ಪೂರ್ವ ನಗರ ಪಾಲಿಕೆ – 2 ವಿಧಾನಸಭಾ ಕ್ಷೇತ್ರ
    * ಬೆಂಗಳೂರು ಉತ್ತರ ನಗರ ಪಾಲಿಕೆ – 7 ವಿಧಾನಸಭಾ ಕ್ಷೇತ್ರ
    * ಬೆಂಗಳೂರು ದಕ್ಷಿಣ ನಗರ ಪಾಲಿಕೆ – 8 ವಿಧಾನಸಭಾ ಕ್ಷೇತ್ರ

  • ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಡಿಕೆ ಶಿವಕುಮಾರ್‌ ನೇಮಕ

    ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಅಧ್ಯಕ್ಷ ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಡಿಕೆ ಶಿವಕುಮಾರ್‌ ನೇಮಕ

    * 75 ಸದಸ್ಯರನ್ನೊಳಗೊಂಡ ಪ್ರಾಧಿಕಾರ ರಚಿಸಿ ಸರ್ಕಾರ ಆದೇಶ

    ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಧಿಕಾರದ (Greater Bengaluru Aauthority) ಅಧ್ಯಕ್ಷರಾಗಿ ಸಿಎಂ ಸಿದ್ದರಾಮಯ್ಯ, ಉಪಾಧ್ಯಕ್ಷರಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿದಂತೆ 75 ಸದಸ್ಯರನ್ನು ನೇಮಿಸಲಾಗಿದೆ.

    ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಶೋಭಾ ಕರಂದ್ಲಾಜೆ ಹಾಗೂ ರಾಜ್ಯ ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್‌, ಬೈರತಿ ಸುರೇಶ್‌, ದಿನೇಶ್‌ ಗುಂಡೂರಾವ್‌, ಕೃಷ್ಣ ಬೈರೇಗೌಡ, ಜಮೀರ್‌ ಅಹ್ಮದ್‌ ಪದನಿಮಿತ್ತ ಸದಸ್ಯರಾಗಿ ಪ್ರಧಿಕಾರದಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಗ್ರೇಟರ್‌ ಬೆಂಗಳೂರು, ದೇವದಾಸಿ ಪದ್ಧತಿ ನಿರ್ಮೂಲನೆ ಸೇರಿ ಹಲವು ಮಸೂದೆಗಳಿಗೆ ಸಂಪುಟ ಒಪ್ಪಿಗೆ

    ಐದು ವಲಯದ ಮಹಾಪೌರರು, ಐದು ವಲಯದ ಆಯುಕ್ತರು, ಬೆಂಗಳೂರು ವಿಧಾನಸಭಾ ಸದಸ್ಯರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಸಂಸದರನ್ನು ಪ್ರಾಧಿಕಾರ ಒಳಗೊಂಡಿದೆ.

    ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪಾಲಿಕೆಗಳಾಗಿ ವಿಭಜಿಸಿ, ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಈಚೆಗೆ ಆದೇಶ ಹೊರಡಿಸಿತ್ತು. ಇದನ್ನೂ ಓದಿ: ʻಬಿಬಿಎಂಪಿʼ ಹೆಸರು ಇತಿಹಾಸ ಪುಟಕ್ಕೆ – ಮೇ 15ರಿಂದ ʻಗ್ರೇಟರ್‌ ಬೆಂಗಳೂರುʼ ಆಡಳಿತ ಜಾರಿ

  • ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

    ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

    ಬೆಂಗಳೂರು: ಗ್ರೇಟರ್ ಬೆಂಗಳೂರು (Greater Bengaluru) ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲಿ ಗುರುವಾರ ಅಂಗೀಕಾರ ದೊರೆಯಿತು.

    ವಿಧಾನಸಭೆಯಲ್ಲಿ ಅಂಗೀಕೃತ ಸ್ವರೂಪದಲ್ಲಿರುವ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಅನ್ನು ಬೆಂಗಳೂರು ನಗರಾಭಿವೃದ್ದಿ ಸಚಿವ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ಮೇಲ್ಮನೆಯಲ್ಲಿ ಮಂಡಿಸಿದರು. ಅಲ್ಪ ಚರ್ಚೆ ಬಳಿಕ ಅನುಮೋದನೆ ನೀಡಲಾಯಿತು. ಇದನ್ನೂ ಓದಿ: ಹೊರರಾಜ್ಯದ ಜಾನುವಾರನ್ನು ಕಾಡಲ್ಲಿ ಮೇಯಿಸಲು ನಿರ್ಬಂಧ, ರಾಜ್ಯದ ಕುರಿಗಾಹಿಗಳಿಗೆ ಇಲ್ಲ ತೊಂದರೆ: ಈಶ್ವರ್ ಖಂಡ್ರೆ

    ತಿದ್ದುಪಡಿ ವಿಧೇಯಕದ ಪ್ರಸ್ತಾವನೆ ವೇಳೆ ಮಾತನಾಡಿದ ಶಿವಕುಮಾರ್ ಅವರು, ಈ ವಿಧೇಯಕದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಂವಿಧಾನದ 74ನೇ ತಿದ್ದುಪಡಿ ಅಡಿಯಲ್ಲಿ ಬರುವ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ. ಭವಿಷ್ಯದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು ಎಂಬ ಉದ್ದೇಶದಿಂದ ಈ ತಿದ್ದುಪಡಿಯಲ್ಲಿ ಜಿಬಿಎ ಪಾಲಿಕೆಗಳ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಸ್ಪಷ್ಟನೆ ನೀಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗದ್ದಲದ ನಡುವೆ ಮುಂಗಾರು ಅಧಿವೇಶನ ಅಂತ್ಯ – ಲೋಕಸಭೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

    ಸದಸ್ಯರಾದ ಗೋವಿಂದರಾಜು, ಟಿ.ಎ ಶರವಣ, ಹೆಚ್.ಎಸ್ ಗೋಪಿನಾಥ್ ಅವರು ಕೋರಿದ ಸ್ಪಷ್ಟನೆಗೆ ಉತ್ತರ ನೀಡಿದ ಸಚಿವರು, ನಾವು ಅನೇಕ ಬಾರಿ ನೋಡಿರುವಂತೆ ರಾಜ್ಯ ಸರ್ಕಾರ ಒಂದು ಪಕ್ಷ ಅಧಿಕಾರದಲ್ಲಿದ್ದರೆ, ಪಾಲಿಕೆಯಲ್ಲಿ ಮತ್ತೊಂದು ಪಕ್ಷ ಅಧಿಕಾರದಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ಸಂವಿಧಾನದ 74ನೇ ತಿದ್ದುಪಡಿಗೆ ಧಕ್ಕೆಯಾಗದಂತೆ ಹಾಗೂ ರಾಜ್ಯ ಸರ್ಕಾರ ಪಾಲಿಕೆಗಳನ್ನು ನಿಯಂತ್ರಿಸುವಂತಾಗದಂತೆ ಎಚ್ಚರಿಕೆ ವಹಿಸಲು ಈ ತಿದ್ದುಪಡಿ ತರಲಾಗಿದೆ ಎಂದರು.

    ಕೆಲವು ಶಾಸಕರು ಜನಸಂಖ್ಯೆ ಹಾಗೂ ವಾರ್ಡ್ ರಚನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈಗ ನಾವು ಬಳಸಿರುವುದು 2011ರ ಜನಗಣತಿ. ಆಗ ಒಂದು ವಾರ್ಡ್ನಲ್ಲಿ 18 ಸಾವಿರ ಜನಸಂಖ್ಯೆ ಇದ್ದರೆ ಈಗಿನ ಪರಿಸ್ಥಿತಿಯಲ್ಲಿ 30 ಸಾವಿರದಷ್ಟು ಇರಲಿದೆ. ಮುಂದೆ ಹೊಸ ಪ್ರದೇಶಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಒಳಪಡಿಸುವ ಸಂದರ್ಭದಲ್ಲಿ ನಿಮ್ಮ ಪಕ್ಷದ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಲಾಗುವುದು. ಈ ವಿಚಾರವನ್ನು ಬೇರೆ ರೂಪದಲ್ಲಿ ಚರ್ಚೆಗೆ ಪ್ರಸ್ತಾವನೆ ನೀಡಿ, ಆಗ ಈ ವಿಚಾರವಾಗಿ ನಿಮಗಿರುವ ಅನುಮಾನಗಳಿಗೆ ಸಂಪೂರ್ಣವಾಗಿ ವಿವರಣೆ ನೀಡುತ್ತೇನೆ. ಈಗ ಈ ವಿಧೇಯಕ ಅಂಗೀಕಾರ ಮಾಡಿಕೊಡಿ ಎಂದು ತಿಳಿಸಿದರು.