Tag: Grasshopper

  • ಕಾಫಿನಾಡಿಗೂ ಕಾಲಿಟ್ಟ ಮಿಡತೆ- ಆತಂಕದಲ್ಲಿ ಮಲೆನಾಡಿಗರು

    ಕಾಫಿನಾಡಿಗೂ ಕಾಲಿಟ್ಟ ಮಿಡತೆ- ಆತಂಕದಲ್ಲಿ ಮಲೆನಾಡಿಗರು

    – ರೋಗ, ಮಳೆ ಆಯ್ತು, ಈಗ ಮಿಡತೆ ಕಾಟ

    ಚಿಕ್ಕಮಗಳೂರು: ಉತ್ತರ ಭಾರತದ ಕೆಲ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದ ಮಿಡತೆಗಳು ಈಗ ಕಾಫಿನಾಡಿಗೂ ಕಾಲಿಟ್ಟಿದ್ದು ಮಲೆನಾಡಿಗರು ಕಂಗಾಲಾಗಿದ್ದಾರೆ.

    ಜಿಲ್ಲೆಯ ಶೃಂಗೇರಿ ತಾಲೂಕಿನ ತೆಕ್ಕೂರು ಎಂಬ ಗ್ರಾಮದಲ್ಲಿ ಅಡಿಕೆ ತೋಟಗಳ ಮೇಲೆ ದಾಳಿ ಮಾಡಿರೋ ಮಿಡತೆಗಳು ಅಡಿಕೆ ಮರದ ಗರಿಗಳನ್ನು ಸಂಪೂರ್ಣ ನಾಶ ಮಾಡಿವೆ. ಅಡಿಕೆ ತೋಟದಲ್ಲಿ ಮಿಡತೆಗಳನ್ನು ಕಂಡ ಮಲೆನಾಡಿಗರು ಕಂಗಾಲಾಗಿದ್ದಾರೆ. ಈಗಾಗಲೇ ಕಳೆದ ಎರಡು ದಶಕಗಳಿಂದ ಅಡಿಕೆಗೆ ಹಳದಿ ಎಲೆ ರೋಗ ತಗುಲಿದ್ದು ಔಷಧಿಯೇ ಇಲ್ಲದ ರೋಗಕ್ಕೆ ಮಲೆನಾಡಿಗರು ತಲೆಕೆಡಿಸಿಕೊಂಡಿದ್ದಾರೆ.

    ಹತೋಟಿಗೆ ಬಾರದ ಈ ರೋಗಕ್ಕೆ ಬೇಸತ್ತ ಮಲೆನಾಡಿಗರು ಗ್ರಾಮಗಳನ್ನು ತ್ಯಜಿಸಿ, ತೋಟ ಮನೆಗಳನ್ನು ಪಾಳು ಬಿಟ್ಟು ನಗರ ಸೇರಿದ್ದರು. ಗ್ರಾಮಗಳು ವೃದ್ಧಾಶ್ರಮಗಳಾಗಿದ್ದವು. ಕೆಲ ಬೆಳೆಗಾರರು ತೋಟಗಳನ್ನು ನಿರ್ವಹಣೆ ಮಾಡುವುದನ್ನೇ ಕೈ ಬಿಟ್ಟಿದ್ದರು. ಕೆಲವರು ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದರೆ, ಮತ್ತೆ ಕೆಲವರು ನಾನಾ ರೀತಿಯ ಔಷಧಗಳೊಂದಿಗೆ ಅಡಿಕೆ ಮೇಲೆ ಅವಲಂಬಿತರಾಗಿದ್ದರು. ಹಲವರು ವಾಸದ ಮನೆಗಳನ್ನು ಪಾಳು ಬಿಟ್ಟು ಬದುಕಿಗಾಗಿ ದೊಡ್ಡ-ದೊಡ್ಡ ನಗರ ಸೇರಿದ್ದರು.

    ಮಲೆನಾಡಿನ ಸ್ಥಿತಿ ಹೀಗಿರುವಾಗ ಕಳೆದ ಎರಡು ವರ್ಷಗಳ ನಿರಂತರ ಭಾರೀ ಮಳೆಯಿಂದ ಅಡಿಕೆ ತೋಟಕ್ಕೆ ಕೊಳೆ ರೋಗ ಕೂಡ ಆವರಿಸಿತ್ತು. ತೋಟದಲ್ಲಿ ಎರಡು ಮೂರು ಅಡಿ ನೀರು ನಿಂತಿತ್ತು. ಇದರಿಂದ ಮಲೆನಾಡಿಗರು ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದರು. ಪ್ರಕೃತಿ ಜೊತೆ ಸದಾ ಜೂಜಿಗಿಳಿದು ಬದುಕು ಕಟ್ಟಿಕೊಂಡಿದ್ದ ಮಲೆನಾಡಿಗರಿಗೆ ಈಗ ಮಿಡತೆ ಕಾಟ ಕೂಡ ಆರಂಭವಾಗಿದ್ದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

  • ಕೋಲಾರದಲ್ಲಿ ಕಾಣಿಸಿಕೊಂಡಿದ್ದು ಉತ್ತರ ಭಾರತದ ಮಿಡತೆ ಅಲ್ಲ: ಕೃಷಿ ವಿಜ್ಞಾನಿಗಳ ಸ್ಪಷ್ಟನೆ

    ಕೋಲಾರದಲ್ಲಿ ಕಾಣಿಸಿಕೊಂಡಿದ್ದು ಉತ್ತರ ಭಾರತದ ಮಿಡತೆ ಅಲ್ಲ: ಕೃಷಿ ವಿಜ್ಞಾನಿಗಳ ಸ್ಪಷ್ಟನೆ

    ಕೋಲಾರ: ಮಹಾಮಾರಿ ಕೊರೊನಾದಿಂದ ಕಂಗಾಲಾಗಿದ್ದ ರೈತರಿಗೆ ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿರುವ ಮಿಡತೆಗಳು ಇನ್ನಷ್ಟು ಆತಂಕಕ್ಕೀಡು ಮಾಡಿದ್ದವು. ಸ್ಥಳಕ್ಕೆ ರೈತ ಮುಖಂಡರು, ಕೃಷಿ ಅಧಿಕಾರಿಗಳು, ವಿಜ್ಞಾನಿಗಳು ಸ್ಥಳ ಪರಿಶೀಲನೆ ನಡೆಸುವ ಮೂಲಕ ರೈತರ ಆತಂಕಕ್ಕೆ ತೆರೆ ಎಳೆದಿದ್ದಾರೆ. ಇದರಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

    ಕೋಲಾರ ತಾಲೂಕಿನ ದಿಂಬ ಹಾಗೂ ದೊಡ್ಡಹಸಾಳ ಗ್ರಾಮಗಳ ರಸ್ತೆ ಪಕ್ಕದಲ್ಲಿ ಮಿಡತೆಗಳ ಹಿಂಡು ಕಾಣಿಸಿಕೊಂಡಿವೆ. ಹಸಿರು ಮಿಶ್ರಿತ ಬಣ್ಣವನ್ನ ಹೋಲುವ ಮಿಡತೆಗಳು, ರಸ್ತೆ ಬದಿಯ ಎರಡು ಎಕ್ಕದ ಗಿಡ ಹಾಗೂ ವಿದ್ಯುತ್ ಕಂಬಕ್ಕೆ ಅಂಟಿಕೊಳ್ಳುವುದರ ಮೂಲಕ ರೈತರಲ್ಲಿ ಭೀತಿ ಸೃಷ್ಟಿಸಿವೆ. ಜೊತೆಗೆ ಮಿಡತೆಗಳು ಉತ್ತರ ಭಾರತದ ರಾಜ್ಯಗಳಲ್ಲಿ ರೈತರು ಬೆಳೆದ ಲಕ್ಷಾಂತರ ಮೌಲ್ಯದ ಬೆಳೆಗಳನ್ನ ನಾಶ ಮಾಡಿದ್ದರಿಂದಾಗಿ, ಇಲ್ಲಿನ ರೈತರಲ್ಲಿ ಆತಂಕ ಶುರುವಾಗಿತ್ತು.

    ಈ ಹಿನ್ನೆಲೆಯಲ್ಲಿ ರೈತರು, ಕೃಷಿ ವಿಜ್ಞಾನ ಕೇಂದ್ರ, ಕೇಂದ್ರ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇವು ಹೆಚ್ಚಾಗಿ ಯಕ್ಕದ ಗಿಡದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಮಿಡತೆಗಳಾಗಿದ್ದು, ಇದರಿಂದ ಯಾವುದೇ ಬೆಳೆಗಳಿಗೆ ಹಾನಿಯಾಗುವುದಿಲ್ಲ. ಇವು ಕ್ಯಾಲೋಟ್ರೋಫಿಸ್ ಗ್ರಾಸೋಫರ್ ಮಿಡತೆಗಳಾಗಿದ್ದು ರೈತರ ಬೆಳೆಗಳಿಗೆ ಯಾವುದೇ ತೊಂದರೆಯಾವುದಿಲ್ಲ ಎಂದು ಕೆವಿಕೆ ವಿಜ್ಞಾನಿಗಳ ತಂಡ ಹಾಗೂ ಕೇಂದ್ರ ಐಪಿಎಂ ವಿಜ್ಞಾನಿಗಳ ತಂಡ ಸ್ಪಷ್ಟೀಕರಣ ನೀಡಿತು.

    ಉತ್ತರ ಭಾರತದಲ್ಲಿ ಕಂಡು ಬಂದಿರುವ ಮಿಡತೆಗಳಿಗೂ ಕೋಲಾರದಲ್ಲಿ ಕಂಡು ಬಂದ ಮಿಡತೆಗಳಿಗೂ ಯಾವುದೇ ಸಂಭಂದವಿಲ್ಲದ ಪರಿಣಾಮ ರೈತರು ಆತಂಕ ಪಡುವ ಅಗತ್ಯ ಇಲ್ಲ. ಜೊತೆಗೆ ಮಿಡತೆಗಳು ಕಂಡು ಬಂದ ಗಿಡವನ್ನ ಸುಟ್ಟುಹಾಕಿ, ಔಷಧಿಗಳನ್ನ ಸಿಂಪಡಣೆ ಮಾಡಿದ್ದಾರೆ. ಇನ್ನೂ ಇವು ರೈತರ ಬೆಳೆಗಳಿಗೆ ಹಾನಿ ಮಾಡೋದಿಲ್ಲ, ರೈತರು ಆತಂಕ ಪಡುವ ಅಗತ್ಯವಿಲ್ಲ, ಉತ್ತರ ಭಾರತದ ಮಿಡತೆಗಳಿಗೂ ಇದಕ್ಕೆ ವ್ಯತ್ಯಾಸವಿದೆ ಎಂದು ವಿಜ್ಞಾನಿಗಳು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

  • ಬೀದರಿಗೆ ಮಿಡತೆ ಸೈನ್ಯ ದಾಳಿ ಸಾಧ್ಯತೆ – ಸಕಲ ಸಿದ್ಧತೆ ಮಾಡ್ಕೊಂಡ ಕೃಷಿ ಇಲಾಖೆ

    ಬೀದರಿಗೆ ಮಿಡತೆ ಸೈನ್ಯ ದಾಳಿ ಸಾಧ್ಯತೆ – ಸಕಲ ಸಿದ್ಧತೆ ಮಾಡ್ಕೊಂಡ ಕೃಷಿ ಇಲಾಖೆ

    ಬೀದರ್: ಪಾಕಿಸ್ತಾನದ ಮೂಲಕ ದೇಶದ ನಾನಾ ರಾಜ್ಯಗಳಿಗೆ ದಾಳಿ ಮಾಡಿರುವ ಮಿಡತೆ ಸೇನೆಗೆ ದೇಶದ ರೈತರು ಆತಂಕಗೊಂಡಿದ್ದಾರೆ. ಈ ಮಿಡತೆ ದಂಡು ಕರ್ನಾಟಕದ ಗಡಿ ಜಿಲ್ಲೆ ಬೀದರಿಗೂ ದಾಳಿ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಉತ್ತರ ಭಾರತ, ಮಹಾರಾಷ್ಟ್ರ ಆಯ್ತು, ಈಗ ಕರ್ನಾಟಕಕ್ಕೂ ಮಿಡತೆ ಆತಂಕ

    ಮಿಡತೆ ಸೈನ್ಯ 500 ಕಿಲೋಮೀಟರ್ ದೂರದಲ್ಲಿರುವ ಮಹಾರಾಷ್ಟ್ರದ ನಾಗಪುರದಲ್ಲಿ ದಾಳಿ ಮಾಡಿವೆ. ಈ ಹಿನ್ನೆಲೆಯಲ್ಲಿ ಈ ಮಿಡತೆ ಸೈನ್ಯ ಗಡಿ ಜಿಲ್ಲೆ ಬೀದರಿಗೆ ದಾಳಿ ಮಾಡುವ ಸಾಧ್ಯತೆಯಿಂದಾಗಿ ಮಿಡತೆ ದಾಳಿ ಎದುರಿಸಲು ಬೀದರ್ ಕೃಷಿ ಇಲಾಖೆಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

    ಪ್ರಮುಖವಾಗಿ ಜಿಲ್ಲೆಯ ಗಡಿ ಭಾಗದ ತಾಲೂಕುಗಳಾದ ಬಸವಕಲ್ಯಾಣ, ಭಾಲ್ಕಿ ಹಾಗೂ ಔರಾದ್‍ನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತಮಟೆ ಹಾಗೂ ಬಿತ್ತಿ ಪತ್ರ ಹಂಚಲು ಕೃಷಿ ಇಲಾಖೆ ನಿರ್ಧಾರ ಮಾಡಿದೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೃಷಿ ಜಂಟಿ ನಿರ್ದೇಶಕರು ಈಗಾಗಲೇ ಸೂಚನೆ ನೀಡಿದ್ದಾರೆ. ಸೊಲ್ಲಾಪುರ ಕಡೆಯಿಂದ ಬೀದರಿಗೆ ಮಿಡತೆಗಳು ದಂಡು ಎರಡು ದಿನಗಳಲ್ಲಿ ಎಂಟ್ರಿಯಾಗುವ ಸಾಧ್ಯತೆ ಇದೆ.

    ಒಟ್ಟು 4 ಲಕ್ಷ ಎಕರೆ ಕೃಷಿ ಭೂಮಿ ಇದೆ. ಇದರಲ್ಲಿ ಕಬ್ಬು, ತರಕಾರಿ ಹಾಗೂ ಹಣ್ಣುಗಳನ್ನು 30 ಸಾವಿರ ಎಕರೆಯಲ್ಲಿ ರೈತರು ಬೆಳೆದಿದ್ದಾರೆ. ಒಂದು ವೇಳೆ ಮಿಡತೆ ದಾಳಿ ಮಾಡಿದರೆ ಎಲ್ಲಾ ರೀತಿ ಕ್ರಿಮಿನಾಶಕಗಳನ್ನ ರೈತ ಸಂಪರ್ಕ ಕೇಂದ್ರದಲ್ಲಿ ಸಿದ್ಧತೆ ಮಾಡಿಕೊಂಡಿದ್ದು, ರೈತರಿಗೆ ಒದಗಿಸುತ್ತೇವೆ ಎಂದು ಜಂಟಿ ಕೃಷಿ ನಿರ್ದೇಶಕರಾದ ವಿದ್ಯಾನಂದ ಮಾಹಿತಿ ನೀಡಿದ್ದಾರೆ.

    ಒಂದು ವೇಳೆ ಗಾಳಿ ದಿಕ್ಕು ಬದಲಾದರೆ ಮಧ್ಯಪ್ರದೇಶದ ಕಡೆ ಹೋಗುತ್ತವೆ ಎಂದು ಕೃಷಿ ಅಧಿಕಾರಿಗಳು ಲೆಕ್ಕಾಚಾರ ಹಾಕಿದ್ದು, ಜಿಲ್ಲೆಯ ರೈತರು ಈ ಕಡೆ ಮಿಡತೆ ದಂಡು ಸುಳಿಯದಿರಲಿ ಎನ್ನುತ್ತಿದ್ದಾರೆ.