Tag: Gram Panchayat

  • ಸೋಂಕಿತನ ಸಹೋದರ ಸಭೆಯಲ್ಲಿ ಭಾಗಿ – ಗ್ರಾ.ಪಂ ಅಧ್ಯಕ್ಷೆ ಸೇರಿ 44 ಮಂದಿ ಕ್ವಾರಂಟೈನ್

    ಸೋಂಕಿತನ ಸಹೋದರ ಸಭೆಯಲ್ಲಿ ಭಾಗಿ – ಗ್ರಾ.ಪಂ ಅಧ್ಯಕ್ಷೆ ಸೇರಿ 44 ಮಂದಿ ಕ್ವಾರಂಟೈನ್

    ಮಂಗಳೂರು: ಕೊರೊನಾ ಸೋಂಕಿತನ ಸಹೋದರ ಗ್ರಾಮ ಪಂಚಾಯತ್ ಸಭೆಯಲ್ಲಿ ಭಾಗಿಯಾಗಿದ್ದ ಹಿನ್ನೆಲೆ ಗ್ರಾ.ಪಂ. ಅಧ್ಯಕ್ಷೆ ಮತ್ತು ಪಿ.ಡಿ.ಒ ಸಹಿತ ಒಟ್ಟು 44 ಮಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮ ಪಂಚಾಯತ್‍ನಲ್ಲಿ ಕೊರೊನಾ ರಕ್ಷಣಾ ಕಾರ್ಯಪಡೆಯ ಮೀಟಿಂಗ್ ನಡೆದಿತ್ತು. ಈ ಸಭೆಯಲ್ಲಿ ದುಬೈನಿಂದ ಬಂದು ಕೊರೊನಾ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಸಹೋದರ ಕೂಡ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಸಭೆಯಲ್ಲಿದ್ದ ಎಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ.

    ಮಾರ್ಚ್ 18ರಂದು ದುಬೈನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಮಂಗಳೂರಿಗೆ ಬಂದಿದ್ದ ವ್ಯಕ್ತಿ, ಅಜ್ಜಾವರದ ಮನೆಯಲ್ಲೇ ಕ್ವಾರಂಟೈನ್ ಆಗಿದ್ದ. ನಂತರ ಮಾರ್ಚ್ 28 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಮಾರ್ಚ್ 31ರಂದು ಸೋಂಕು ಇರುವುದು ದೃಢಪಟ್ಟಿತ್ತು. ಇದಕ್ಕೂ ಮೊದಲು ಸೋಂಕಿತ ವ್ಯಕ್ತಿಯ ಸಹೋದರ ಸಭೆಯಲ್ಲಿ ಭಾಗಿಯಾಗಿದ್ದರು.

    ಈ ಸೋಂಕಿತ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 13 ಮಂದಿ ಈಗಾಗಲೇ ಪ್ರತ್ಯೇಕ ಕ್ವಾರಂಟೈನ್ ಮಾಡಲಾಗಿತ್ತು. ಇದರ ಜೊತೆಗೆ ಈಗ ಗ್ರಾ.ಪಂ. ಅಧ್ಯಕ್ಷೆ, ಪಿ.ಡಿ.ಒ ಮತ್ತು ಎಂಟು ಮಂದಿ ಸದಸ್ಯರು ಸೇರಿ ಒಟ್ಟು 44 ಮಂದಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಸೋಂಕಿತ ಸಂಪರ್ಕದಲ್ಲಿದ್ದ 57 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.

  • ಪ್ರವಾಹ ಸಂತ್ರಸ್ತರಿಂದ ಪ್ರತಿಭಟನೆ – ಗ್ರಾ.ಪಂ.ಯಿಂದ ಘಟನಾ ಸ್ಥಳದ ವಿದ್ಯುತ್ ಕಟ್

    ಪ್ರವಾಹ ಸಂತ್ರಸ್ತರಿಂದ ಪ್ರತಿಭಟನೆ – ಗ್ರಾ.ಪಂ.ಯಿಂದ ಘಟನಾ ಸ್ಥಳದ ವಿದ್ಯುತ್ ಕಟ್

    ಮಡಿಕೇರಿ: ಪ್ರವಾಹದಲ್ಲಿ ಮನೆ ಕಳೆದುಕೊಂಡು ಆರು ತಿಂಗಳು ಕಳೆದರೂ ಸರ್ಕಾರ ಮಾತ್ರ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ ಎಂದು ಕೊಡಗಿನ ಪ್ರವಾಹ ಸಂತ್ರಸ್ತರು ಅಹೋರಾತ್ರಿ ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.

    ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ಎದುರು ನೂರಕ್ಕೂ ಹೆಚ್ಚು ಕುಟುಂಬಗಳು ನಿನ್ನೆಯಿಂದ ಪಂಚಾಯತಿ ಎದುರು ಧರಣಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಸಿದ್ದಾಪುರ ಗ್ರಾಮ ಪಂಚಾಯತಿಯವರು ಪ್ರತಿಭಟನೆ ಸ್ಥಳದಲ್ಲಿ ಇದ್ದ ವಿದ್ಯುತ್ ಅನ್ನು ಕಟ್ ಮಾಡಿದ್ದಾರೆ.

    ಇದರಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರು ಮೇಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಈ ರೀತಿ ಹೋರಾಟವನ್ನು ಹತ್ತಿಕ್ಕಲು ಎಷ್ಟು ಪ್ರಯತ್ನ ನಡೆಸಿದರು ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

  • ಹಳೆ ದ್ವೇಷ – ಗ್ರಾ.ಪಂ ಮಾಜಿ ಉಪಾಧ್ಯಕ್ಷನ ಕತ್ತು ಕಡಿದು ಹತ್ಯೆ

    ಹಳೆ ದ್ವೇಷ – ಗ್ರಾ.ಪಂ ಮಾಜಿ ಉಪಾಧ್ಯಕ್ಷನ ಕತ್ತು ಕಡಿದು ಹತ್ಯೆ

    ರಾಮನಗರ: ಬೈಕ್‍ನಲ್ಲಿ ತೆರಳುತ್ತಿದ್ದ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷನ ಬೈಕಿಗೆ ಕಾರಿನಿಂದ ಡಿಕ್ಕಿ ಹೊಡೆದು, ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಮನಗರ ತಾಲೂಕಿನ ಜಾಲಮಂಗಲ ಸಮೀಪದ ನಾಗರಕಲ್ಲುದೊಡ್ಡಿ ಗ್ರಾಮದ ಬಳಿ ನಡೆದಿದೆ.

    ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದ ನಿವಾಸಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀಧರ್ (37) ಕೊಲೆಯಾದ ದುರ್ದೈವಿ. ಕೊಲೆಯಾದ ಶ್ರೀಧರ್ ತನ್ನ ಸ್ನೇಹಿತ ಮಧು ಜೊತೆ ಬೈಕ್‍ನಲ್ಲಿ ರಾಮನಗರಕ್ಕೆ ತೆರಳುತ್ತಿದ್ದ ಈ ವೇಳೆ ಹಿಂಬದಿಯಿಂದ ಬಂದ ಇಂಡಿಕಾ ಕಾರ್ ಡಿಕ್ಕಿ ಹೊಡೆದಿದೆ. ಬೈಕ್‍ನಿಂದ ಕೆಳಗೆ ಬಿದ್ದ ಶ್ರೀಧರ್ ಅನ್ನು ಇಂಡಿಕಾ ಕಾರಿನಲ್ಲಿದ್ದ ನಾಲ್ಕೈದು ಜನ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಶ್ರೀಧರ್ ನ ಜೊತೆಗಿದ್ದ ಮಧು ಎಂಬಾತ ದುಷ್ಕರ್ಮಿಗಳಿಂದ ಪರಾರಿಯಾಗಿ ಗಾಯಗೊಂಡಿದ್ದಾನೆ.

    ಜೆಡಿಎಸ್ ಪಕ್ಷದಲ್ಲಿದ್ದ ಶ್ರೀಧರ್ ಕಳೆದ 2016 ರಲ್ಲಿ ಜಾಲಮಂಗಲ ಗ್ರಾಮ ಪಂಚಾಯಿತಿಯ ಸದಸ್ಯನಾಗಿದ್ದ. ಜೊತೆಗೆ ಕಾಂಗ್ರೆಸ್‍ನ ದತ್ತಾತ್ರೇಯ ಎಂಬಾತನನ್ನು ತನ್ನ ಸಂಗಡಿಗರ ಜೊತೆ ಸೇರಿ ಕೊಲೆ ಮಾಡಿದ್ದ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ 3 ತಿಂಗಳ ಹಿಂದೆ ಜೈಲಿನಿಂದ ಹೊರಗೆ ಬಂದಿದ್ದ.

    ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷನಾದ ಬಳಿಕ ಮಾಜಿ ಶಾಸಕ ಎಚ್‍ಸಿ ಬಾಲಕೃಷ್ಣ ಜೊತೆಗೆ ಜೆಡಿಎಸ್ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದ. ಗ್ರಾಮ ಪಂಚಾಯತ್‍ನ ಅನುದಾನಗಳನ್ನು ಬಳಸಿಕೊಂಡು ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ನರೇಗಾ ಕಾಮಗಾರಿಗಳನ್ನು ಮಾಡಿಸುತ್ತಿದ್ದ. ದತ್ತಾತ್ರೇಯ ಕೊಲೆಯ ಹಳೆಯ ದ್ವೇಷ ಹಾಗೂ ರಾಜಕೀಯ ವೈಷಮ್ಯದಿಂದಲೇ ಶ್ರೀಧರ್ ನನ್ನ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

    ಅಲ್ಲದೇ ಘಟನೆ ನಡೆದ ವೇಳೆ ಶ್ರೀಧರ್ ನ ಜೊತೆಗಿದ್ದ ಮಧು ಸಹ ಕೊಲೆಯಲ್ಲಿ ಭಾಗಿಯಾಗಿದ್ದು, ಶ್ರೀಧರ್‍ನ ಚಲನವಲನಗಳನ್ನ ದುಷ್ಕರ್ಮಿಗಳಿಗೆ ನೀಡಿದ್ದಾನೆ. ಕೊಲೆಗೆ ಸ್ಕೆಚ್ ಹಾಕಿರುವುದು ಎರಡು ದಿನಗಳ ಹಿಂದೆಯೇ ತಿಳಿದಿತ್ತು, ಆದರೆ ಶ್ರೀಧರ್ ಗೆ ತಿಳಿಸುವ ವೇಳೆಗೆ ಆತನನ್ನ ಕೊಲೆ ಮಾಡಲಾಗಿದೆ ಎಂದು ಶ್ರೀಧರ್ ನ ಸೋದರ ರಾಜು ಆರೋಪಿಸಿದ್ದಾರೆ.

    ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಗಾರರಿಗಾಗಿ ಬಲೆ ಬೀಸಿದ್ದಾರೆ.

  • ‘ಕನ್ಯೆ ಹುಡುಕಿ ಮದುವೆ ಮಾಡಿ’ – ಗ್ರಾಮ ಪಂಚಾಯತಿಗೆ 50ರ ವ್ಯಕ್ತಿಯಿಂದ ಮನವಿ

    ‘ಕನ್ಯೆ ಹುಡುಕಿ ಮದುವೆ ಮಾಡಿ’ – ಗ್ರಾಮ ಪಂಚಾಯತಿಗೆ 50ರ ವ್ಯಕ್ತಿಯಿಂದ ಮನವಿ

    ಹಾವೇರಿ: ಮದುವೆ ಆಗಲು ಒಂದು ವರ್ಷ, ಎರಡು ವರ್ಷ ಹಾಗೂ ಐದು ವರ್ಷ ಕನ್ಯೆ ಹುಡುಕುತ್ತಾರೆ. ಅದರೂ ಕೆಲವರಿಗೆ ಕನ್ಯೆ ಸಿಗುವುದಿಲ್ಲ. ಆದರೆ ಕನ್ಯೆ ಹುಡುಕಿ ಮದುವೆ ಮಾಡಿ ಎಂದು ಗ್ರಾಮ ಪಂಚಾಯತಿಗೆ ವ್ಯಕ್ತಿ ಮನವಿ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ನರೇಗಲ್ ಗ್ರಾಮದಲ್ಲಿ ನಡೆದಿದೆ.

    ಐವತ್ತು ವರ್ಷದ ದ್ಯಾಮಣ್ಣ ಕಮ್ಮಾರ ಗ್ರಾಮ ಪಂಚಾಯತಿಗೆ ಮನವಿ ಕೊಟ್ಟ ವ್ಯಕ್ತಿ. ಎಷ್ಟು ಹುಡುಕಿದರೂ ಕನ್ಯೆ ಸಿಗುತ್ತಿಲ್ಲ. ಅಡುಗೆ ಮಾಡಲು ಯಾರು ಇಲ್ಲ. ಮದುವೆ ಆಗೋ ಆಸೆಯಾಗಿದೆ, ಕನ್ಯೆ ಹುಡುಕಿ ಮದುವೆ ಮಾಡಬೇಕು ಎಂದು ದ್ಯಾಮಣ್ಣ ಮನವಿ ಮಾಡಿಕೊಂಡಿದ್ದಾರೆ.

    ಅಲ್ಲದೆ ಒಂದು ಪತ್ರವನ್ನ ಬರೆದು ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಪಿಡಿಓಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಸೋಮಣ್ಣ ಬಾರ್ಕಿ ಮನವಿಯನ್ನು ಸ್ವೀಕರಿಸಿದ್ದಾರೆ. ವ್ಯಕ್ತಿಯ ಮನವಿ ಕಂಡು ಪಂಚಾಯತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದಾರೆ.

  • ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಮಪಂಚಾಯತ್ ಸದಸ್ಯನ ಕೊಲೆಗೆ ಯತ್ನ

    ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಮಪಂಚಾಯತ್ ಸದಸ್ಯನ ಕೊಲೆಗೆ ಯತ್ನ

    ಚಿಕ್ಕಬಳ್ಳಾಪುರ: ಬೈಕಿನಲ್ಲಿ ತೆರಳುತ್ತಿದ್ದ ಗ್ರಾಮಪಂಚಾಯ್ತಿ ಸದಸ್ಯನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಎಚ್ ಕ್ರಾಸ್ ಬಳಿ ನಡೆದಿದೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ತರಬಹಳ್ಳಿ ಗ್ರಾಮದ ಗ್ರಾಮಪಂಚಾಯತ್ ಸದಸ್ಯ ತ್ಯಾಗರಾಜ್ ಹಲ್ಲೆಗೊಳಗಾದವ. ಬೆಳಗ್ಗೆ ಎಚ್ ಕ್ರಾಸ್‍ನಿಂದ ಸ್ವಗ್ರಾಮ ತರಬಹಳ್ಳಿಗೆ ತೆರಳುತ್ತಿದ್ದ ಗ್ರಾಮಪಂಚಾಯ್ತಿ ಸದಸ್ಯನ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ ಮನಸ್ಸೋ ಇಚ್ಚೆ ಲಾಂಗ್‍ನಿಂದ ಅಟ್ಯಾಕ್ ಮಾಡಿ ಹೊಟ್ಟೆಯ ಹಿಂಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

    ಸದ್ಯ ಗಾಯಾಳು ಗ್ರಾಮಪಂಚಾಯ್ತಿ ಸದಸ್ಯನನ್ನು ಹೊಸಕೋಟೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ನಂತರ ಶಿಡ್ಲಘಟ್ಟ ಗ್ರಾಮಾಂತರ ಪಿಎಸ್‍ಐ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ಬಳಿಕ ಪಿಎಸ್‍ಐ ಹರೀಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆ ಘಟನೆ ನಡೆದಿದೆ ಎನ್ನಲಾಗಿದ್ದು, ಪೊಲೀಸರ ತನಿಖೆಯಿಂದ ದುಷ್ಕರ್ಮಿಗಳು ಯಾರೆಂಬುದು ಬಯಲಾಗಬೇಕಿದೆ.

  • ಗ್ರಾಮ ಪಂಚಾಯ್ತಿಯಲ್ಲಿ ಲಕ್ಷಾಂತರ ರೂ. ಅಕ್ರಮ- ತನಿಖಾ ವರದಿಯ ಕಡತಗಳೇ ಮಾಯ

    ಗ್ರಾಮ ಪಂಚಾಯ್ತಿಯಲ್ಲಿ ಲಕ್ಷಾಂತರ ರೂ. ಅಕ್ರಮ- ತನಿಖಾ ವರದಿಯ ಕಡತಗಳೇ ಮಾಯ

    ರಾಯಚೂರು: ತಾಲೂಕಿನ ಚಂದ್ರಬಂಡಾ ಗ್ರಾಮ ಪಂಚಾಯತಿಯಲ್ಲಿ ನಡೆದ ಅಕ್ರಮ ಕುರಿತ ತನಿಖಾ ವರದಿಯ ಕಡತಗಳ ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲೇ ಮಾಯಾವಾಗಿರುವ ಘಟನೆ ನಡೆದಿದೆ. ಪಿಡಿಓ ಶರಫನ್ನೂಶಾ ಬೇಗಂ ವಿರುದ್ಧ ಚಂದ್ರಬಂಡ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹುಲಿಗೆಮ್ಮ ದೂರು ನೀಡಿದ್ದರು. ದೂರಿನ ಹಿನ್ನೆಲೆ ಜಿಲ್ಲಾ ಪಂಚಾಯತಿ ಅಧಿಕಾರಿಗಳು ತನಿಖೆ ನಡೆಸಿದ್ದರು. ತನಿಖೆಗೆ ಸಂಬಂಧಿಸಿದ ದಾಖಲೆಗಳು ಕಾಣೆಯಾಗಿವೆ.

    13 ಮತ್ತು 14ನೇ ಹಣಕಾಸು ಯೋಜನೆಯ ಹಣ ದುರ್ಬಳಕೆಯಾಗಿದ್ದು, 28 ಲಕ್ಷ ರೂಪಾಯಿ ಹಣ ದುರ್ಬಳಕೆ ಮಾಡಿಕೊಂಡಿದ್ದು ತನಿಖೆ ವೇಳೆ ಬಯಲಾಗಿತ್ತು. ಕ್ರಿಯಾಯೋಜನೆಗೆ ಅನುಮೋದನೆ ಪಡೆಯದೇ ಹಣ ಖರ್ಚು ಮಾಡಿ ಅಕ್ರಮ ಎಸಗಲಾಗಿತ್ತು. ಉದ್ಯೋಗ ಖಾತ್ರಿ ಯೋಜನೆಯಲ್ಲೂ ಕೂಲಿ ಮಾಡದವರಿಗೂ ಹಣ ಪಾವತಿಸಿ ಅಕ್ರಮ ಎಸಗಲಾಗಿತ್ತು. ಕೂಲಿ ಮಾಡಿದ ಕಾರ್ಮಿಕರಿಗೆ ಕೂಲಿ ಹಣ ನೀಡದೇ ವಂಚಿಸಿರೋದು ತನಿಖೆಯಿಂದ ಬಯಲಾಗಿತ್ತು.

    2011 ರಿಂದ ನಡೆದ ಅಕ್ರಮದ ಬಗ್ಗೆ 2015 ರಲ್ಲಿ ತನಿಖಾಧಿಕಾರಿಗಳು ಜಿಲ್ಲಾ ಪಂಚಾಯತಿಗೆ ತನಿಖಾ ವರದಿ ಸಲ್ಲಿಸಿದ್ರು. ಆದ್ರೆ ಆ ತನಿಖಾ ವರದಿ ಕಾಣೆಯಾದ ಹಿನ್ನೆಲೆ ಇದುವರೆಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಪಂಚಾಯತ್ ಕಚೇರಿಯಲ್ಲಿನ ಕೆಲ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳೇ ಈ ಅಕ್ರಮ ಮುಚ್ಚಿ ಹಾಕುವ ಯತ್ನ ನಡೆಸ್ತಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಹೀಗಾಗಿ ಈ ಪ್ರಕರಣವನ್ನ ಜಿ.ಪಂ.ಸಿಇಓ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

  • ನೂತನ ಗ್ರಾಮ ಪಂಚಾಯತಿ ಕಾರ್ಯಾಲಯ ನಿರ್ಮಾಣಕ್ಕೆ ಪರ, ವಿರೋಧ- ಜೆಸಿಬಿ ಯಂತ್ರಕ್ಕೆ ಅಡ್ಡಲಾಗಿ ಕುಳಿತ ಗ್ರಾಮಸ್ಥರು

    ನೂತನ ಗ್ರಾಮ ಪಂಚಾಯತಿ ಕಾರ್ಯಾಲಯ ನಿರ್ಮಾಣಕ್ಕೆ ಪರ, ವಿರೋಧ- ಜೆಸಿಬಿ ಯಂತ್ರಕ್ಕೆ ಅಡ್ಡಲಾಗಿ ಕುಳಿತ ಗ್ರಾಮಸ್ಥರು

    ನೆಲಮಂಗಲ: ಸಾಕಷ್ಟು ವಿವಾದಕ್ಕೆ ಕಾರಣವಾಗಿ ಏಕಾಏಕಿ ಊರ ಹೊರಗೆ ಗ್ರಾಮ ಪಂಚಾಯತಿ ಕಾರ್ಯಾಲಯದ ನಿರ್ಮಾಣಕ್ಕೆ ಪರ ವಿರೋಧ ವ್ಯಕ್ತವಾಗಿದ್ದು, ಜೆಸಿಬಿ ಯಂತ್ರಕ್ಕೆ ಅಡ್ಡಲಾಗಿ ಕುಳಿತ ಗ್ರಾಮಸ್ಥ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಉತ್ತರ ತಾಲೂಕಿನ ಆಲೂರು ಗ್ರಾಮದಲ್ಲಿ ಹೈಡ್ರಾಮಾ ನಡೆದಿದೆ.

    ಇಂದು ಕೆಲ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದ ಹೊರ ಭಾಗದ ಸರ್ಕಾರಿ ಗೋಮಾಳದಲ್ಲಿ ಗುದ್ದಲಿ ಪೂಜೆಗೆ ಮುಂದಾಗಿದ್ದರು. ಇನ್ನೂ ಜನಸಾಮಾನ್ಯರಿಗೆ ಅನಾನುಕೂಲವಾಗುವ ನಿಟ್ಟಿನಲ್ಲಿ ಕೆಲ ಸದಸ್ಯರು ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ. ಈ ನೂತನ ಪಂಚಾಯತಿ ಕಟ್ಟಡ ನಿರ್ಮಾಣ ಮಾಡಲು ಬೆಂಗಳೂರು ಜಿಲ್ಲಾಧಿಕಾರಿ ಮೊದಲು ಅನುಮತಿ ನೀಡಿದ್ದು, ನಂತರ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನಲೆ ತಡೆಹಿಡಿಯಲಾಗಿದೆ.

    ಕೆಲ ಸದಸ್ಯರು ತಮ್ಮ ಸ್ವಾರ್ಥಕ್ಕಾಗಿ ಹಾಗೂ ದಬ್ಬಾಳಿಕೆಯಿಂದ ಈ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಅಲ್ಲದೆ ಈ ಪ್ರದೇಶದಲ್ಲಿ ಸಾಕಷ್ಟು ಕಳ್ಳತನ ಸುಲಿಗೆ ಪ್ರಕರಣಗಳು ನಡೆಯುತ್ತಿದೆ. ಮಹಿಳೆಯರು, ವೃದ್ಧರು, ಅಂಗವಿಕಲರು ಪಂಚಾಯತಿಯ ಕೆಲಸದಲ್ಲಿ ತೊಡಗಲು ಅನಾನುಕೂಲವಾಗಿದೆ ಎಂದು ದೂರುದಾರ ಹರೀಶ್ ಆರೋಪಿಸಿದ್ದಾರೆ.

    ಈ ವಿಚಾರದಲ್ಲಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಹೀಗಾಗಲೇ ಗ್ರಾಮದಲ್ಲಿ ಇದ್ದ ಹಳೆಯ ಕಟ್ಟಡವನ್ನು ನೆಲಸಮ ಮಾಡಿದ್ದು, ಎಲ್ಲಾ ಗ್ರಾಮಸ್ಥರ ಅನುಕೂಲಕ್ಕಾಗಿ ಒಂದೇ ಸೂರಿನಡಿ ಪಂಚಾಯತಿ ಕಾರ್ಯಾಲಯ, ಅಂಚೆ ಕಚೇರಿ, ಗ್ರಾಮ ಲೆಕ್ಕಾಧಿಕಾರಿ ಕಚೇರಿ, ಗ್ರಂಥಾಲಯ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಆದರೆ ಈ ಯೋಜನೆಗೆ ಉದ್ದೇಶ ಪೂರ್ವಕವಾಗಿ ಕೆಲವರು ತಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಗ್ರಾಮ ಪಂಚಾಯತಿ ಪಿಡಿಒ ರಾಜೇಶ್ ಮಾತನಾಡಿ, ಪಂಚಾಯತಿ ಕಾರ್ಯಾಲಯ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪಂಚಾಯತಿಯ ಸರ್ವ ಸದಸ್ಯರ ಒಪ್ಪಿಗೆ ಮೇರೆಗೆ ಈ ನಿವೇಶನದಲ್ಲಿ ಪಂಚಾಯತಿ ಕಟ್ಟಡ ಕಟ್ಟಲು ಮುಂದಾಗಿದ್ದೇವೆ ಎಂದರು. ಒಟ್ಟಾರೆ ಈ ನೂತನ ಪಂಚಾಯತಿ ಕಟ್ಟಡಕ್ಕೆ ಗ್ರಾಮದಲ್ಲಿ ಪರ ವಿರೋಧಕ್ಕೆ ಕಾರಣವಾಗಿದ್ದು ಜನಸಾಮಾನ್ಯರ ಪರದಾಟಕ್ಕೆ ಕಾರಣವಾಗಿದೆ.

  • ಮುನ್ನಹಳ್ಳಿ ಗ್ರಾ.ಪಂ ವತಿಯಿಂದ ವಿದ್ಯಾರ್ಥಿನಿಯರಿಗೆ ಉಚಿತ ಬಸ್

    ಮುನ್ನಹಳ್ಳಿ ಗ್ರಾ.ಪಂ ವತಿಯಿಂದ ವಿದ್ಯಾರ್ಥಿನಿಯರಿಗೆ ಉಚಿತ ಬಸ್

    – ಕಲಬುರಗಿಯ ಸಿದ್ಧಾರೂಢ ಇವತ್ತಿನ ಪಬ್ಲಿಕ್ ಹೀರೋ

    ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಮನ್ನಹಳ್ಳಿ ಗ್ರಾಮಪಂಚಾಯ್ತಿ ವಿದ್ಯಾರ್ಥಿನಿಯರಿಗಾಗಿ ಉಚಿತ ಬಸ್ ಸೇವೆಯನ್ನು ಒದಗಿಸಿದೆ. ಗ್ರಾಮದ ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಪಂಚಾಯ್ತಿ ಹೊಸ ಬಸ್ ಖರೀದಿಸಿದೆ.

    ಈ ಬಸ್ ಸೌಕರ್ಯದಿಂದ ಶಿಕ್ಷಣ ವಂಚಿತರಾಗಿದ್ದ ವಿದ್ಯಾರ್ಥಿನಿಯರು ಇದೀಗ ಇದೀಗ ಕಾಲೇಜಿನತ್ತ ಮುಖ ಮಾಡುತ್ತಿದ್ದಾರೆ. ಗ್ರಾಮಪಂಚಾಯ್ತಿ ಅಧ್ಯಕ್ಷ ಸಿದ್ದಾರೂಢರು ವಿಶೇಷ ಆಸ್ಥೆ ವಹಿಸಿ ಪಂಚಾಯತ್ ಅನುದಾನದಲ್ಲಿ 2 ತಿಂಗಳ ಹಿಂದೆ ಈ ಬಸ್ ವ್ಯವಸ್ಥೆ ಮಾಡಿಸಿ ಕೊಟ್ಟಿದ್ದಾರೆ. ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ. ಇದರಿಂದಾಗಿ ಇಲ್ಲಿನ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನಿರಾಳರಾಗಿ ಆಳಂದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೆ ಹೋಗಿ ಬರುತ್ತಿದ್ದಾರೆ.

    ಸದ್ಯ ಮೂರು ತಿಂಗಳ ಮಟ್ಟಿಗೆ ಈ ಬಸ್‍ನ ಸೌಕರ್ಯವನ್ನು ವಿದ್ಯಾರ್ಥಿನಿಯರಿಗೆ ಕಲ್ಪಿಸಲಾಗಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕರೆ ಮುಂಬರುವ ದಿನಗಳಲ್ಲಿ ಇದನ್ನು ಮುಂದುವರೆಸಿಕೊಂಡು ಹೋಗಲು ಪಂಚಾಯ್ತಿ ಸದಸ್ಯರು ಚಿಂತನೆ ನಡೆಸಿದ್ದಾರೆ.

  • ಇನ್ನೂ 10 ಜನ್ಮ ಬಂದ್ರೂ ಎಚ್‍ಡಿಕೆ ಸಿಎಂ ಆಗಲ್ಲ: ಸಚಿವ ಈಶ್ವರಪ್ಪ ಲೇವಡಿ

    ಇನ್ನೂ 10 ಜನ್ಮ ಬಂದ್ರೂ ಎಚ್‍ಡಿಕೆ ಸಿಎಂ ಆಗಲ್ಲ: ಸಚಿವ ಈಶ್ವರಪ್ಪ ಲೇವಡಿ

    ಶಿವಮೊಗ್ಗ: ಮಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಕೆಲ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿದ್ದಾರೆ. ಜೆಡಿಎಸ್ ಪಕ್ಷ ಇನ್ನು ಬದುಕಿದೆ, ರಾಜಕೀಯದಲ್ಲಿ ಇದ್ದೀನಿ ಎಂದು ತೋರಿಸುವ ಸಲುವಾಗಿ ಈ ವಿಡಿಯೋಗಳನ್ನು ಅವರು ಬಿಡುಗಡೆ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವ ಸಚಿವ ಈಶ್ವರಪ್ಪ ಲೇವಡಿ ಮಾಡಿದ್ದಾರೆ.

    ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವರು, ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದರು. ಅವರು ಎಷ್ಟೇ ವಿಡಿಯೋ ರಿಲೀಸ್ ಮಾಡಿದರೂ, ಇನ್ನೂ ಹತ್ತು ಜನ್ಮ ಬಂದರೂ ಮತ್ತೆ ಮುಖ್ಯಮಂತ್ರಿಗಳಾಗಲು ಆಗುವುದಿಲ್ಲ ಎಂದರು.

    ಜೆಡಿಎಸ್ ಪಕ್ಷದವರು ಅಲ್ಲೊಂದು, ಇಲ್ಲೊಂದು ಶಾಸಕರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಸಹ ಬಿಜೆಪಿ ಸೇರಲಿದ್ದಾರೆ. ಅವರ ಪಕ್ಷ ಜೀವಂತವಾಗಿದೆ ಎಂದು ತೋರಿಸಲು ವಿಡಿಯೋ ರಿಲೀಸ್ ಮಾಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ವಿನಾಃ ಕಾರಣ ಆರೋಪ ಮಾಡುತ್ತಿದ್ದಾರೆ. ಗೂಂಡಾಗಳು ಮಂಗಳೂರಿನಲ್ಲಿ ಸಂಚು ನಡೆಸಿ ಗಲಭೆ ನಡೆಸಿದರು ಎಂಬುದು ಎಲ್ಲಾ ಮಾಧ್ಯಮಗಳಲ್ಲಿ ಬಂದಿದೆ. ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಬಳಸಿದ್ದನ್ನು ಕುಮಾರಸ್ವಾಮಿ ನಂಬುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ರಾಜ್ಯದ ಜನ ಮಾತ್ರ ಈ ಘಟನೆಯನ್ನು ನೋಡಿದ್ದಾರೆ ಎಂದರು.

    ಮಂಗಳೂರಿನಲ್ಲಿ ವ್ಯವಸ್ಥಿತ ಸಂಚು ನಡೆಸಿ ಗಲಭೆ ನಡೆಸಿದ ಕುತಂತ್ರಿಗಳ ಬಗ್ಗೆ ಎಚ್‍ಡಿಕೆ ಮಾತನಾಡುತ್ತಿದ್ದಾರೆ. ಈ ಕುತಂತ್ರ ರಾಜಕಾರಣವನ್ನು ರಾಜ್ಯದ ಜನ ನಂಬಲ್ಲ. ನೀವು ಎಷ್ಟೇ ಆರೋಪ ಮಾಡಿದರೂ, ಆರೋಪವನ್ನು ನಾವು ಒಪ್ಪುವುದಿಲ್ಲ. ಗಲಭೆಯಲ್ಲಿ ವ್ಯವಸ್ಥಿತ ಸಂಚು ನಡೆದಿರುವ ಬಗ್ಗೆ ನ್ಯಾಯಾಂಗ ತನಿಖೆಯ ನಂತರ ತಿಳಿಯಲಿದೆ. ಆ ಬಳಿಕ ಗಲಭೆಯಲ್ಲಿ ಇನ್ನು ಯಾರು ಇದ್ದಾರೆ ಎಂದು ಬಹಿರಂಗಗೊಳ್ಳಲಿದೆ ಎಂದು ತಿಳಿಸಿದರು.

    ಗ್ರಾಮೀಣ ಸಮಸ್ಯೆ ಗಮನಕ್ಕೆ ತನ್ನಿ: ನಗರದ ರಂಗಾಯಣ ಸಭಾಂಗಣದಲ್ಲಿ ಪಂಚಾಯತ್‍ರಾಜ್ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಯೋಜನೆಗಳ ಅನುಷ್ಟಾನದಲ್ಲಿನ ತೊಂದರೆಗಳ ಬಗ್ಗೆ ನೇರವಾಗಿ ತಮ್ಮ ಗಮನಕ್ಕೆ ತರುವಂತೆ ತಿಳಿಸಿದರು.

    ರೈತರ ಅಭಿವೃದ್ಧಿಯಾದರೆ ಮಾತ್ರ ಹಳ್ಳಿಗಳ ಅಭಿವೃದ್ಧಿಯಾಗಲು ಸಾಧ್ಯ. ಹಳ್ಳಿ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುವುದು. ಗ್ರಾಮೀಣ ಅಭಿವೃದ್ಧಿ ಕಾರ್ಯಗಳ ಅನುಷ್ಟಾನದಲ್ಲಿ ಪಂಚಾಯತ್ ರಾಜ್ ಅಧಿಕಾರಿಗಳ ಪಾತ್ರ ಬಹಳ ಪ್ರಮುಖವಾದುದು. ಸರ್ಕಾರದ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವಲ್ಲಿ ಪಿಡಿಒಗಳು ಕೊಂಡಿಯಾಗಿ ಕಾರ್ಯ ನಿರ್ವಹಿಸಬೇಕು. ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ನೇರವಾಗಿ ಜನಪ್ರತಿನಿಧಿಗಳ ಗಮನಕ್ಕೆ ತಂದು ಸರಿಪಡಿಸಬೇಕು. ಪಿಡಿಒಗಳ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

    ಎಲ್ಲಾ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಜಿಲ್ಲೆಯ 271 ಗ್ರಾಮ ಪಂಚಾಯತ್‍ಗಳ ಪೈಕಿ ಕೇವಲ 19 ಪಂಚಾಯತ್ ವ್ಯಾಪ್ತಿಯಲ್ಲಿ ವಿಲೇವಾರಿ ಘಟಕಕ್ಕೆ ಜಮೀನು ಗುರುತಿಸಲಾಗಿದೆ. ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಜಮೀನು ಗುರುತಿಸಿ ಘಟಕವನ್ನು ಆದಷ್ಟು ಬೇಗನೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

    ಗ್ರಾಮೀಣ ಭಾಗದಲ್ಲಿ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಬಗ್ಗೆ ಪ್ರತಿ ಗ್ರಾಮ ಪಂಚಾಯತ್ ಹೊರಗೆ ಬೋರ್ಡ್ ಹಾಕಿ ಮಾಹಿತಿ ಪ್ರಕಟಿಸಬೇಕು. ಹೊಸದಾಗಿ ಘಟಕ ಅಗತ್ಯ ಇರುವ ಕಡೆಗಳಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಬಜೆಟ್‍ನಲ್ಲಿ ಶೌಚಾಲಯ ನಿರ್ಮಾಣದ ಸಹಾಯಧನವನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ಇದೇ ರೀತಿ ಸಾಮೂಹಿಕ ಶೌಚಾಲಯಗಳ ನಿರ್ವಹಣೆಗೂ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆ ಬಾಕಿ ಮೊತ್ತ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

    ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸದಸ್ಯ ವೀರಭದ್ರಪ್ಪ ಪೂಜಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಶ್ರೀರಾಮ್, ಕೇಶವ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

  • ಕಾಂಟ್ರಾಕ್ಟರ್ ಬಳಿ ಲಂಚ ಪಡೆಯುತ್ತಿದ್ದ ಗ್ರಾ.ಪಂ ಸದಸ್ಯ, ಪಿಡಿಓ ಎಸಿಬಿ ಬಲೆಗೆ

    ಕಾಂಟ್ರಾಕ್ಟರ್ ಬಳಿ ಲಂಚ ಪಡೆಯುತ್ತಿದ್ದ ಗ್ರಾ.ಪಂ ಸದಸ್ಯ, ಪಿಡಿಓ ಎಸಿಬಿ ಬಲೆಗೆ

    ರಾಮನಗರ: ಕಾಂಟ್ರಾಕ್ಟರ್ ಬಳಿ ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯತಿ ಸದಸ್ಯ ಹಾಗೂ ಪಿಡಿಓ ಎಸಿಬಿ ಬಲೆಗೆ ಬಿದ್ದ ಘಟನೆ ಚನ್ನಪಟ್ಟಣ ತಾಲೂಕಿನ ಮುದುಗೆರೆ ಗ್ರಾಮ ಪಂಚಾಯತ್‍ನಲ್ಲಿ ನಡೆದಿದೆ.

    ಮುದುಗೆರೆ ಗ್ರಾಮ ಪಂಚಾಯತ್‍ನ ಪಿಡಿಓ ಮಂಜುಳಾ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಎಸಿಬಿ ಬಲೆಗೆ ಬಿದ್ದವರು. ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದ ನಿವಾಸಿಯೊಬ್ಬರು ಮುದುಗೆರೆ ಗ್ರಾಮ ಪಂಚಾಯತಿಯಿಂದ ನರೇಗಾ ಯೋಜನೆಯ ಪೈಪ್‍ಲೈನ್ ಕಾಮಗಾರಿ ಗುತ್ತಿಗೆ ಪಡೆದು ಕಾಮಗಾರಿ ಮುಗಿಸಿದ್ದರು. ಆದರೆ ಅವರಿಗೆ ಕಾಮಗಾರಿಯ 65 ಸಾವಿರ ಬಿಲ್ ಹಣವನ್ನ ಮಂಜೂರು ಮಾಡಲು ಶೇ.17ರಷ್ಟು ಕಮಿಷನ್ ನೀಡುವಂತೆ ಗ್ರಾಮ ಪಂಚಾಯತಿ ಸದಸ್ಯ ಮಹೇಶ್ ಬೇಡಿಕೆ ಇಟ್ಟಿದ್ದರು.

    ಈ ಬಗ್ಗೆ ಪಿಡಿಓ ಬಳಿ ಪ್ರಶ್ನಿಸಿದರೆ ಮಹೇಶ್ ಹೇಳಿದಂತೆ ಮಾಡು. ಕಮಿಷನ್ ಕೊಟ್ಟು ಬಿಲ್ ಮಂಜೂರು ಮಾಡಿಕೊಳ್ಳುವಂತೆ ತಿಳಿಸಿದ್ದರು. ಹೀಗಾಗಿ ಗುತ್ತಿಗೆದಾರ ರಾಮನಗರ ಎಸಿಬಿ ಅಧಿಕಾರಿಗಳಿಗೆ ಸಲ್ಲಿಸಿದ್ದ.

    ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪಿಡಿಓ ಮಂಜುಳಾ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ಮಂಗಳವಾರ ಲಂಚವಾಗಿ 11 ಸಾವಿರ ರೂಪಾಯಿ ಪಡೆಯುತ್ತಿದ್ದರು. ಈ ವೇಳೆ ಎಸಿಬಿ ಡಿವೈಎಸ್‍ಪಿ ಮಲ್ಲೇಶ್ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಈ ಘಟನೆ ಸಂಬಂಧ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.