Tag: Government house

  • ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಭರ್ಜರಿ ಗಿಫ್ಟ್: ಆರ್.ಅಶೋಕ್

    ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಭರ್ಜರಿ ಗಿಫ್ಟ್: ಆರ್.ಅಶೋಕ್

    ಬೆಂಗಳೂರು: ಸಿಲಿಕಾನ್ ಸಿಟಿಯ ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಮನೆ ಕಟ್ಟಿಕೊಂಡಿದ್ದವರಿಗೆ ಸಕ್ರಮಕ್ಕೆ ಸರ್ಕಾರ ಚಾಲನೆ ಕೊಡಲು ರೆಡಿಯಾಗಿದೆ. ಜನವರಿ 28 ರಂದು ಸಿಎಂ ಯಡಿಯೂರಪ್ಪ ಹಕ್ಕುಪತ್ರ ವಿತರಣೆ ಮಾಡಲಿದ್ದಾರೆ. ಹಾಗಾದ್ರೆ ಏನಿದು ಭರ್ಜರಿ ಗಿಫ್ಟ್ ಎನ್ನುವ ಕುತೂಹಲ ನಿಮಗಿರಬಹುದು. ನಮ್ಗೂ ಗಿಫ್ಟ್ ಸಿಗಬಹುದಾ ಅಂದ್ಕೊಂಡವರು ಈ ಸುದ್ದಿಯನ್ನು ಪೂರ್ಣವಾಗಿ ಓದಿ.

    ಇದು ಬೆಂಗಳೂರು ಅಷ್ಟೇ ಅಲ್ಲ, ರಾಜ್ಯದ ಎಲ್ಲ ಕಡೆಗಳಲ್ಲೂ ಯೋಜನೆ ಜಾರಿಗೆ ತಂದಿದೆ ಸರ್ಕಾರ. ಆದ್ರೆ ಮೊದಲ ಹಂತವಾಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 10 ಸಾವಿರ ಫಲಾನುಭವಿಗಳು ಲಾಭ ಪಡೆಯಲಿದ್ದಾರೆ ಅಂತಾ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಆರ್.ಅಶೋಕ್, ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿಕೊಂಡಿರುವ ಬಡವರ ಹೆಸರಿಗೆ ಸೈಟು ನೋಂದಣಿ ಮಾಡಿಸಿಕೊಡೋದು ಸರ್ಕಾರದ ನಿರ್ಧಾರವಾಗಿದೆ, ಹಾಗಾಗಿ ಬೆಂಗಳೂರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನವರಿ 28ರಂದು ಮುಖ್ಯಮಂತ್ರಿ ಯಡಿಯೂರಪ್ಪ ಹಕ್ಕುಪತ್ರ ನೀಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಲಿದ್ದಾರೆ ಅಂತಾ ಹೇಳಿದ್ರು.

    ಏನಿದು ಯೋಜನೆ..? ಯಾರಿಗೆ ಉಪಯೋಗ..?
    ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ, ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಸರ್ಕಾರಿ ಜಮೀನಲ್ಲಿ ಮನೆ ಕಟ್ಟಿಕೊಂಡಿರುವ ಕೆಲವರಿಗೆ ಮಾತ್ರ ಅನುಕೂಲ. 2012 ಜನವರಿ 1ರೊಳಗೆ ಕಟ್ಟಿರುವ 20*30, 30*40 ಅಳತೆಯಲ್ಲಿ ಕಟ್ಟಿರುವ ಮನೆಗಳಿಗೆ ಮಾತ್ರ ನಿವೇಶನ ಹಕ್ಕುಪತ್ರ ನೀಡಲಾಗುತ್ತದೆ. ಈಗಾಗಲೇ ಅರ್ಜಿ ಸಲ್ಲಿಸಿ ಅಧಿಕಾರಿಗಳಿಂದ ಪರಿಶೀಲನೆಗೆ ಒಳಪಟ್ಟವರಿಗೆ ಮಾತ್ರ ಲಾಭ.

    ರಾಜ್ಯದಲ್ಲಿ ಸಕ್ರಮಕ್ಕೆ 2.53 ಲಕ್ಷ ಅರ್ಜಿ ಬಂದಿದ್ದು, 6,0061 ಅರ್ಜಿಗಳಿಗೆ ಮಂಜೂರಾತಿ ಸಿಕ್ಕಿದೆ. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯಲ್ಲೇ 10 ಸಾವಿರ ಫಲಾನುಭವಿಗಳಿಗೆ ಮಂಜೂರಾತಿ. ಅಲ್ಲದೆ 1,47,465 ಅರ್ಜಿಗಳು ತಿರಸ್ಕೃತವಾಗಿದ್ದು, 45,546 ಅರ್ಜಿಗಳು ಇನ್ನೂ ಬಾಕಿ ಇವೆ. ಬೆಂಗಳೂರು ನಗರದಲ್ಲಿ 20*30 ಅಳತೆಯ ಮನೆಗಳಿಗೆ ಹಕ್ಕುಪತ್ರ ಪಡೆಯಲು ಎಸ್ ಸಿ, ಎಸ್ ಟಿ ವರ್ಗಕ್ಕೆ 2,500 ರೂಪಾಯಿ, ಸಾಮಾನ್ಯ ವರ್ಗಕ್ಕೆ 5 ಸಾವಿರ ರೂಪಾಯಿ, 30*40 ಅಳತೆಯ ಮನೆಗಳಿಗೆ ಹಕ್ಕುಪತ್ರ ಪಡೆಯಲು ಎಸ್ ಸಿ, ಎಸ್ ಟಿ ವರ್ಗಕ್ಕೆ 5 ಸಾವಿರ ರೂಪಾಯಿ ಸಾಮಾನ್ಯ ವರ್ಗಕ್ಕೆ 10 ಸಾವಿರ ರೂಪಾಯಿ ಶುಲ್ಕ ಪಾವತಿಸಬೇಕು.

  • 3 ವರ್ಷ ಕಳೆದರೂ ದಾಖಲೆಗಳಲ್ಲಿಯೇ ನಿರಾಶ್ರಿತರ ಸೂರು

    3 ವರ್ಷ ಕಳೆದರೂ ದಾಖಲೆಗಳಲ್ಲಿಯೇ ನಿರಾಶ್ರಿತರ ಸೂರು

    ಕೊಪ್ಪಳ: ವಿರುಪಾಪುರ ಗಡ್ಡೆ ನಿರಾಶ್ರಿತರಿಗೆ ತಾಲೂಕು ಆಡಳಿತದ ವತಿಯಿಂದ ಉಚಿತ ನಿವೇಶನಗಳ ವಿತರಣೆ ಮಾಡಬೇಕಾದ ಕಾಯಕವು 3 ವರ್ಷಗಳು ಕಳೆದರೂ ಸಹ ದಾಖಲೆಗಳಲ್ಲಿಯೇ ಉಳಿದುಕೊಂಡಿದೆ. ಇದರಿಂದಾಗಿ ನಿರಾಶ್ರಿತರು ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಜೀವನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಕೊಪ್ಪಳದ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳನ್ನು ಒಕ್ಕಲೆಬ್ಬಿಸಿ, ಅರಣ್ಯ ಭೂಮಿಯನ್ನು ರಕ್ಷಣೆ ಮಾಡಲಾಗಿತ್ತು. ಪರ್ಯಾಯವಾಗಿ ಗಡ್ಡೆಯ ನಿರಾಶ್ರಿತರಿಗೆ ಸೂರು ಕಲ್ಪಿಸಿಕೊಡಲಾಗುವುದು ಎಂದು ತಾಲೂಕು ಆಡಳಿತವು ಮೂರು ವರ್ಷಗಳ ಹಿಂದೆ ಆದೇಶವನ್ನು ಹೊರಡಿಸಿತ್ತು. ಆಗಿನಿಂದ ಇಲ್ಲಿಯವರೆಗೂ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಇಲಾಖೆ ಅಧಿಕಾರಿಗಳು ನಿವೇಶನಗಳನ್ನು ಗುರುತಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

    ತಾಲೂಕು ಆಡಳಿತದ ವತಿಯಿಂದ ತಾಲೂಕಿನ ಕರಿಯಮ್ಮ ಗಡ್ಡಿ ಹಾಗೂ ತಿಮ್ಮಲಾಪೂರ ಗ್ರಾಮದಲ್ಲಿ ನವೇಶನಗಳನ್ನು ಗುರುತಿಸಲಾಗಿತ್ತಿದೆ ಎಂದು ದಾಖಲೆಗಳನ್ನು ತೊರಿಸಲಾಗುತ್ತಿದೆ. ಆದರೆ ಮೂರು ವರ್ಷಗಳು ಕಳೆದರೂ ಸಹ ಇದುವರೆಗೂ ನಿರಾಶ್ರಿತರಿಗೆ ನಿವೇಶನಗಳು ಹಂಚಿಕೆಯನ್ನು ಮಾಡದೆ ಅಧಿಕಾರಿಗಳು ಕಾಲಹರಣವನ್ನು ಮಾಡುತ್ತಿದ್ದಾರೆ ಎನ್ನುವ ಆರೋಪಗಳು ನಿರಾಶ್ರಿತ ಕುಟುಂಬಗಳಿಂದ ಕೇಳಿ ಬರುತ್ತಿವೆ.

    ವಿರುಪಾಪುರ ಗಡ್ಡೆಯಲ್ಲಿನ ಸರ್ವೆ ನಂಬರ್ 49ರಲ್ಲಿನ ಅರಣ್ಯ ಭೂಮಿಯಲ್ಲಿ ಮನೆಗಳನ್ನು ಹಾಗೂ ಸಣ್ಣಪುಣ್ಣ ರೆಸ್ಟೋರೆಂಟ್‍ಗಳನ್ನು ನಿರ್ಮಿಸಿಕೊಂಡು ಕೂಲಿಕಾರರ ಕುಟುಂಬಗಳು ಉಪ ಜೀವನವನ್ನು ನಡೆಸುತ್ತಿದ್ದರು. ದಾಖಲೆಗಳು ಇಲ್ಲದೆ ಅರಣ್ಯ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಕಾರಣಕ್ಕೆ ಹಂಪಿ ಪ್ರಾಧಿಕಾರ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆಯನ್ನು ನಡೆಸಿ, ಗಡ್ಡೆಯಲ್ಲಿ ವಾಸವಾಗಿದ್ದ 70 ಕುಟುಂಬಗಳನ್ನು 2016 ಮೇ 2ರಂದು ಒಕ್ಕಲೆಬ್ಬಿಸಲಾಗಿತ್ತು. ಬಡ ಕುಟುಂಬದವರು ನಿರ್ಮಿಸಿಕೊಂಡಿದ್ದ ಮನೆಗಳನ್ನು ತೆರವುಗೊಳಿಸಿ, ನೆಲಸಮ ಮಾಡಲಾಗಿತ್ತು. ಆಗ ಈ 70 ಕುಟುಂಬಗಳು ಬೀದಿಗೆ ಬಿದ್ದಿದ್ದವು.

    ನ್ಯಾಯಕ್ಕಾಗಿ ತಾಲೂಕು ಆಡಳಿತಕ್ಕೆ ಮೊರೆ ಹೋಗಿರುವುದರಿಂದ ಮಾನವೀಯತೆ ದೃಷ್ಟಿಯಿಂದ ನಿರಾಶ್ರಿತರ 70 ಕುಟುಂಬಗಳಿಗೆ ನಿವೇಶನವನ್ನು ಕಲ್ಪಿಸಲಾಗುವುದು ಎಂದು ಆದೇಶವನ್ನು ಹೊರಡಿಸಿತ್ತು. ಆದೇಶದಂತೆ ನಿವೇಶನಗಳನ್ನು ನೀಡುತ್ತಾರೆ ಎನ್ನುವ ಭರವಸೆಯಲ್ಲಿಯೇ ನಿರಾಶ್ರಿತರು ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    70 ಬಡ ಕುಟುಂಬಗಳು ವಿರುಪಾಪುರ ಗಡ್ಡೆ ಸಮೀಪದ ಇರುವ ಬೆಟ್ಟದಲ್ಲಿ ಕೆಲ ಕುಟುಂಬಗಳು ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡು ಉಪ ಜೀವನವನ್ನು ನಡೆಸುತ್ತಿದ್ದಾರೆ. ಕೆಲ ಕುಟುಂಬಗಳು ಕರಿಯಮ್ಮನ ಗಡ್ಡೆಯಲ್ಲಿ ಇರುವ ಸಮೂದಾಯ ಭವನದಲ್ಲಿ ಮನೆಯ ವಸ್ತುಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳಾದ ಚರಂಡಿ, ವ್ಯವಸ್ಥಿತ ರಸ್ತೆ, ಶುದ್ಧ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ ಇಲ್ಲದೆ ಇಲ್ಲಿನ ನಿರಾಶ್ರಿತ ಕುಟುಂಬಗಳು ಪ್ರತಿ ದಿನ ಸಂಕಷ್ಟವನ್ನು ಎದುರಿಸುತ್ತಿವೆ. ಯಾವ ಚುನಾಯಿತ ಪ್ರತಿನಿಧಿಯು ಸಹ ಇತ್ತ ಗಮನ ಹರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.