Tag: gopala bhandary

  • ಬಸ್ಸಿನಲ್ಲಿ ಕುಳಿತಲ್ಲೇ ಮಾಜಿ ಶಾಸಕ ಗೋಪಾಲ ಭಂಡಾರಿ ನಿಧನ

    ಬಸ್ಸಿನಲ್ಲಿ ಕುಳಿತಲ್ಲೇ ಮಾಜಿ ಶಾಸಕ ಗೋಪಾಲ ಭಂಡಾರಿ ನಿಧನ

    ಮಂಗಳೂರು: ಮಾಜಿ ಸಿಎಂ ವೀರಪ್ಪ ಮೋಯ್ಲಿ ಆಪ್ತ ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಭಂಡಾರಿ(66) ನಿಧನರಾಗಿದ್ದಾರೆ.

    ಗುರುವಾರ ಮಧ್ಯಾಹ್ನ ಬೆಂಗಳೂರಿಂದ ಮಂಗಳೂರಿಗೆ ಕೆಎಸ್ಆರ್‌ಟಿಸಿ ಬಸ್‍ನಲ್ಲಿ ಹೋಗುತ್ತಿದ್ದಾಗ ಬಸ್‍ನಲ್ಲೇ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

    ರಾತ್ರಿ 10.40ರ ವೇಳೆಗೆ ಮಂಗಳೂರು ಬಸ್ ನಿಲ್ದಾಣ ತಲುಪಿದ ಬಳಿಕ ನಿದ್ದೆ ಮಾಡಿದ್ದಾರೆಂದು ತಿಳಿದು ಎಬ್ಬಿಸಲು ಯತ್ನಿಸಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ನಂತರ ಮೃತದೇಹವನ್ನು ಬಸ್ಸಿನಲ್ಲೇ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

    ಹೆಬ್ರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ್ದ ಇವರು, ಯಾವುದೇ ಜಾತಿ ಬಲ, ಹಣ ಬಲ ಇಲ್ಲದೆ 1998 ಮತ್ತು 2008ರಲ್ಲಿ ಕಾರ್ಕಳದಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿದ್ದರು. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ವಿರುದ್ಧ ಸೋಲು ಕಂಡಿದ್ದರು.  ಒಂದು ಅವಧಿಗೆ ಹೆಬ್ರಿ ಬ್ಲಾಕ್ ಅಧ್ಯಕ್ಷರಾಗಿದ್ದರು. ಸದ್ಯ ಕೆಪಿಸಿಸಿ ಕಾರ್ಯದರ್ಶಿ ಆಗಿದ್ದರು.

    ಶಾಸಕರಾಗಿದ್ದಾಗಲೂ ಇವರು ಬಸ್‍ನಲ್ಲೇ ಓಡಾಡುತ್ತಿದ್ದರು. ವೆನ್‍ಲಾಕ್ ಆಸ್ಪತ್ರೆಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ, ಶಾಸಕ ಸುನಿಲ್ ಕುಮಾರ್, ನಗರಾಭಿವೃದ್ದಿ ಸಚಿವ ಯುಟಿ ಖಾದರ್ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಇಂದು ಬೆಳಗ್ಗೆ 9 ಗಂಟೆಗೆ ಹುಟ್ಟೂರು ಹೆಬ್ರಿಗೆ ಪಾರ್ಥಿವ ಶರೀರವನ್ನು ಕೊಂಡೊಯ್ದು ಅಂತ್ಯಕ್ರಿಯೆ ನಡೆಸಲಾಗುತ್ತದೆ. ಉಡುಪಿ ಜಿಲ್ಲೆ ಹೆಬ್ರಿ ನಿವಾಸಿಯಾಗಿರುವ ಇವರು 1952 ಜುಲೈ 5 ರಂದು ಜನಿಸಿದ್ದರು.