Tag: Google Map

  • ಗೂಗಲ್ ಮ್ಯಾಪ್ ನಂಬಿ ಗದ್ದೆಗೆ ಬಂದು ನಿಂತ ಟಿಟಿ!

    ಗೂಗಲ್ ಮ್ಯಾಪ್ ನಂಬಿ ಗದ್ದೆಗೆ ಬಂದು ನಿಂತ ಟಿಟಿ!

    ಚಿಕ್ಕಮಗಳೂರು: ಗೂಗಲ್ ಮ್ಯಾಪ್ (Google Map) ನಂಬಿ ಬಂದಿದ್ದ ಪ್ರವಾಸಿಗರು, ವಾಹನವನ್ನು ಗದ್ದೆಗೆ ಇಳಿಸಿಕೊಂಡು ಪರದಾಡಿದ ಘಟನೆ ಆಲ್ದೂರು ಬಳಿ ನಡೆದಿದೆ.

    ಬೆಂಗಳೂರು ಮೂಲದ ಪ್ರವಾಸಿಗರು ಬಾಳೆಹೊನ್ನೂರು ಕಡೆಯಿಂದ ಮೂಡಿಗೆರೆಗೆ (Mudigere) ತೆರಳುತ್ತಿದ್ದರು. ಈ ವೇಳೆ, ಗೂಗಲ್ ಮ್ಯಾಪ್ ಕೈ ಕೊಟ್ಟಿದ್ದು, ವಾಹನ ಗದ್ದೆ ಬಳಿ ಹೋಗಿ ಸಿಕ್ಕಿ ಹಾಕಿಕೊಂಡಿದೆ. ಇದರಿಂದ ವಾಹನ ವಾಪಸ್ ತೆಗೆಯಲಾಗದೆ ಪ್ರವಾಸಿಗರು ಕೆಲವು ಕಾಲ ಅಲ್ಲೇ ಪರದಾಡಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ತಂಡಕ್ಕೆ ಸೇರಿಸೋದಾಗಿ ರಾಜ್ಯಮಟ್ಟದ ಕ್ರಿಕೆಟಿಗನಿಗೆ 24 ಲಕ್ಷ ವಂಚನೆ

    ಪ್ರವಾಸಿಗರ ಪರದಾಟ ನೋಡಿ, ಸ್ಥಳೀಯರು ಟ್ರ್ಯಾಕ್ಟರ್‌ಗೆ ಟಿಟಿಯನ್ನು ಕಟ್ಟಿ, ರಸ್ತೆಯ ಬಳಿ ತಂದು ಬಿಟ್ಟಿದ್ದಾರೆ. ಬಳಿಕ ಸ್ಥಳಿಯರಿಂದ ರಸ್ತೆಯ ಬಗ್ಗೆ ಮಾಹಿತಿ ಪಡೆದು, ಗೂಗಲ್ ಮ್ಯಾಪ್ ಆಫ್ ಮಾಡಿ ಪ್ರವಾಸಿಗರು ಅಲ್ಲಿಂದ ತೆರಳಿದ್ದಾರೆ. ಇದನ್ನೂ ಓದಿ: ದರ್ಶನ್‌ & ಗ್ಯಾಂಗ್‌ ಸದಸ್ಯರಿಗೆ 2 ತಿಂಗಳು ರಿಲೀಫ್‌

  • ಗೂಗಲ್ ಮ್ಯಾಪ್ ನಂಬಿ ಬೆಳಗಾವಿ ಕಾಡಿನಲ್ಲಿ ದಾರಿ ತಪ್ಪಿದ ನಾಲ್ವರು!

    ಗೂಗಲ್ ಮ್ಯಾಪ್ ನಂಬಿ ಬೆಳಗಾವಿ ಕಾಡಿನಲ್ಲಿ ದಾರಿ ತಪ್ಪಿದ ನಾಲ್ವರು!

    ಬೆಳಗಾವಿ: ಗೂಗಲ್ ಮ್ಯಾಪ್ (Google Map) ನಂಬಿ ಗೋವಾ ಪ್ರವಾಸಕ್ಕೆ (Goa) ತೆರಳುತ್ತಿದ್ದ ಕುಟುಂಬ ರಾತ್ರಿಯಿಡಿ ಕಾಡಿನಲ್ಲಿಯೇ ಕಳೆದ ಘಟನೆ ಜಿಲ್ಲೆಯ ಖಾನಾಪುರ (Khanapur) ಭೀಮಗಢ ಅರಣ್ಯ ಪ್ರದೇಶಲ್ಲಿ ನಡೆದಿದೆ.

    ಬಿಹಾರ ಮೂಲದ ಕುಟುಂಬ ಗೋವಾಕ್ಕೆ ಪ್ರವಾಸಕ್ಕೆಂದು ತೆರಳುತ್ತಿತ್ತು. ನಾಲ್ಕು ಮಹಿಳೆಯರು ಹಾಗೂ ಓರ್ವ ಚಾಲಕನಿಂದ ಕಾರಿಗೆ ಶಿರೋಲಿ ಮತ್ತು ಹೆಮ್ಮಡಗಾ ಮಾರ್ಗ ಮಧ್ಯೆ ಸಮೀಪ ಗೂಗಲ್‌ ಮ್ಯಾಪ್ ದಾರಿ ತೋರಿಸಿದೆ. ಮ್ಯಾಪ್ ನಂಬಿ ಭೀಮಗಢ ಅರಣ್ಯದೊಳಗೆ 7-8 ಕಿ.ಮೀ ಬಂದಿದ್ದಾರೆ.

     

     ಕಾಡಿನಲ್ಲಿ ರಾತ್ರಿ ಸಮಯ ಹಾಗೂ ನೆಟ್‌ವರ್ಕ್‌ ಸಿಗದ ಕಾರಣ ಬೆಳಗಿನವರೆಗೂ ಅಲ್ಲೇ ಇದ್ದ ಕುಟುಂಬ ಬೆಳಗಾಗುತ್ತಿದ್ದಂತೆ ನೆಟ್‌ವರ್ಕ್‌ ಹುಡುಕಿ ಖಾನಾಪುರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿತು. ತಕ್ಷಣ ಕಾರ್ಯ ಪ್ರವೃತ್ತರಾದ ಖಾನಾಪುರ ಪೊಲೀಸರು (Khanapur Police) ಕುಟುಂಬವನ್ನು ಮೊಬೈಲ್ ನೆಟ್‌ವರ್ಕ್‌ ಜಾಗ ಪತ್ತೆ ಹಚ್ಚಿ ರಕ್ಷಿಸಿದ್ದಾರೆ.

    ಈ ತುರ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರ ಹಾಗೂ ಸಿಬ್ಬಂದಿ ವರ್ಗದವರಿಗೆ ಬೆಳಗಾವಿ ಎಸ್‌ಪಿ ಅಭಿನಂದನೆ ಸಲ್ಲಿಸಿದ್ದಾರೆ. ಗೂಗಲ್‌ ಮ್ಯಾಪ್‌ನಲ್ಲಿ ʼಶಾರ್ಟ್‌ಕಟ್‌ ಗೋವಾ ರೂಟ್‌ʼ ಎಂದು ಸರ್ಚ್‌ ಮಾಡಿದಗ ತೋರಿಸಿದ ದಾರಿ ನೋಡಿದ್ದರಿಂದ ಈ ಎಡವಟ್ಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

     

  • ದಾರಿ ತಪ್ಪಿಸಿದ ಗೂಗಲ್‌ ಮ್ಯಾಪ್‌ – ನಿರ್ಮಾಣ ಹಂತದ ಸೇತುವೆಯಿಂದ ನದಿಗೆ ಕಾರು ಬಿದ್ದು 3 ಸಾವು

    ದಾರಿ ತಪ್ಪಿಸಿದ ಗೂಗಲ್‌ ಮ್ಯಾಪ್‌ – ನಿರ್ಮಾಣ ಹಂತದ ಸೇತುವೆಯಿಂದ ನದಿಗೆ ಕಾರು ಬಿದ್ದು 3 ಸಾವು

    ಲಕ್ನೋ: ಕಾರೊಂದು ನಿರ್ಮಾಣ ಹಂತದ ಸೇತುವೆಯಿಂದ ನದಿಗೆ ಬಿದ್ದ ಪರಿಣಾಮ ಮೂವರು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ (Uttar Pradesh) ಫರೀದ್‌ಪುರದಲ್ಲಿ ನಡೆದಿದೆ. ಕಾರಿನಲ್ಲಿದ್ದ (Car) ಮೂವರು ಗೂಗಲ್‌ ಮ್ಯಾಪ್‌ ಬಳಸಿಕೊಂಡು ತೆರಳುತ್ತಿದ್ದರು. ಸೇತುವೆ ಸಂಪೂರ್ಣ ನಿರ್ಮಾಣವಾಗಿರದ ಕಾರಣ ಕಾರು ಮಧ್ಯದಲ್ಲಿ ನದಿಗೆ ಬಿದ್ದಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಮೃತರನ್ನು ಫರೂಕಾಬಾದ್‌ನ ವಿವೇಕ್ ಕುಮಾರ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ. ಆತನ ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇಬ್ಬರು ಸಹೋದರರು ಹಾಗೂ ಮತ್ತೋರ್ವ ಬರೇಲಿಯಿಂದ ಬದೌನ್ ಜಿಲ್ಲೆಯ ದತಗಂಜ್‌ಗೆ ತೆರಳುತ್ತಿದ್ದರು. ಈ ವೇಳೆ ಫರೀದ್‌ಪುರದಲ್ಲಿ ರಾಮಗಂಗಾ ನದಿಯ ಮೇಲೆ ನಿರ್ಮಾಣ ಹಂತದ ಸೇತುವೆಯಿಂದ 50 ಅಡಿ ಕೆಳಗೆ ಬಿದ್ದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ಕಾರನ್ನು ನದಿಯಿಂದ ಹೊರತೆಗೆದಿದ್ದಾರೆ. ಅಷ್ಟರಲ್ಲೇ ಅದರಲ್ಲಿದ್ದ ಮೂವರು ಸಾವಿಗೀಡಾಗಿದ್ದರು.

    ಈ ವರ್ಷ ಉಂಟಾದ ಪ್ರವಾಹದಿದ ಸೇತುವೆಯ ಕುಸಿದಿತ್ತು. ಸೇತುವೆಯನ್ನು ಮರು ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಇದು GPS ನಲ್ಲಿ ನವೀಕರಿಸಲಾಗಿಲ್ಲ. ಇದರಿಂದ ಚಾಲಕನ ಗಮನಕ್ಕೆ ಬಂದಿಲ್ಲ. ಇದರಿಂದ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮೃತರ ಕುಟುಂಬಸ್ಥರು, ಸೇತುವೆ ಅಪೂರ್ಣಗೊಂಡಿದೆ. ಬರುವ ವಾಹನಗಳಿಗೆ ಎಚ್ಚರಿಕೆ ನೀಡಲು ಯಾವುದೇ ಬ್ಯಾರಿಕೇಡ್‌ಗಳಿಲ್ಲ ಹಾಗೂ ಸೂಚನಾ ಫಲಕಗಳಿಲ್ಲ ಎಂದು ದೂರಿದ್ದಾರೆ.

  • ಗೂಗಲ್ ಮ್ಯಾಪ್‍ನಲ್ಲಿ ಕೆಜಿಎಫ್ ಮೂವೀ ಲೋಕೆಶನ್!

    ಗೂಗಲ್ ಮ್ಯಾಪ್‍ನಲ್ಲಿ ಕೆಜಿಎಫ್ ಮೂವೀ ಲೋಕೆಶನ್!

    ಕೆಜಿಎಫ್ ಮೂವೀ ಲೋಕೆಶನ್ ನೋಡಿ ಅಭಿಮಾನಿಗಳು ದಂಗಾಗಿದ್ರು. ಯಾವುದಾದರೂ ಮೂವೀ ಇಷ್ಟವಾದ್ರೆ, ಆ ಲೋಕೆಶನ್‍ಗೆ ನಾವು ಹೋಗಬೇಕು ಎಂದು ಅನಿಸುವುದು ಸಾಮಾನ್ಯ. ಅದರಂತೆ ಕೆಜಿಎಫ್ ಮೂವೀ ನೋಡಿದವರು ಲೋಕೆಶನ್ ನೋಡಿ ಸಖತ್ ಇಂಪ್ರೆಸ್ ಆಗಿದ್ದರು. ಈಗ ಆ ಲೋಕೆಶನ್‍ನನ್ನು ಗೂಗಲ್ ತೋರಿಸುತ್ತಿದೆ.

    ಕನ್ನಡದ ಬಹುನಿರೀಕ್ಷೆಯ ಚಿತ್ರ ‘ಕೆಜಿಎಫ್-ಚಾಪ್ಟರ್ 2’ ಇದೇ ವರ್ಷ ಏಪ್ರಿಲ್ 14 ರಂದು ತೆರೆಗೆ ಬರಲಿದೆ. ಈ ಸಿನಿಮಾ ನೋಡಲು ಕನ್ನಡಿಗರು ಮಾತ್ರವಲ್ಲ ಇಡೀ ಜಗತ್ತೇ ಕಾತೂರದಿಂದ ಕಾಯುತ್ತಿದೆ. ಅದಕ್ಕೆ ತಕ್ಕತ್ತೆ ಈ ಸಿನಿಮಾತಂಡ ಸಹ ಹೊಸ ಹೊಸ ಸುದ್ದಿಗಳನ್ನು ಕೊಡುತ್ತ ಜನರಿಗೆ ಇನ್ನೂ ಸಿನಿಮಾ ನೋಡಲು ಕುತೂಹಲ ಮೂಡಿಸುತ್ತಿದೆ. ಅಲ್ಲದೇ ಈ ಸಿನಿಮಾ ರಿಲೀಸ್ ಸಹ ಆಗಿಲ್ಲ. ಈ ನಡುವೆಯೇ ಕೆಜಿಎಫ್ 2 ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಇದನ್ನೂ ಓದಿ: ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ ಕಿರೀಟಿ – ಸ್ಟಂಟ್, ಆ್ಯಕ್ಟಿಂಗ್, ಡ್ಯಾನ್ಸ್‍ಗೆ ರಾಜಮೌಳಿ ಮೆಚ್ಚುಗೆ

    ‘ಕೆಜಿಎಫ್’ ದಾಖಲೆಗೆ ಈಗ ಮತ್ತೊಂದು ಹೊಸ ದಾಖಲೆ ಸೇರಿಕೊಂಡಿದ್ದು, ಈ ಮೂಲಕ ಅಚ್ಚರಿ ಮೂಡಿಸಿದೆ. ಸಿನಿಮಾದಲ್ಲಿ ಯಾವುದೇ ಸೆಟ್‍ಗಳನ್ನು ಹಾಕಿದರು ತಾತ್ಕಾಲಿಕವಾಗಿರುತ್ತೆ. ಸೆಟ್ ಹಾಕಿದ ಮೇಲೆ ಅದನ್ನು ನಿಗದಿತ ಸಮಯದ ಬಳಿಕ ತೆರವು ಮಾಡಲಾಗುತ್ತದೆ. ಆದರೆ ಕೆಜಿಎಫ್ ಸೆಟ್ ತೆರವಾದರೂ, ಆ ಜಾಗ ಮಾತ್ರ ಕೆಜಿಎಫ್ ಖ್ಯಾತಿಯಿಂದಲೇ ಪ್ರಸಿದ್ಧಿ ಹೊಂದಿದೆ.

    ಗೂಗಲ್ ಮ್ಯಾಪ್‍ನಲ್ಲಿ ‘ಕೆಜಿಎಫ್’ ಸೆಟ್‍ನ ವಿಳಾಸ ಸೃಷ್ಟಿಯಾಗಿದೆ. ‘ಕೆಜಿಎಫ್’ ಸಿನಿಮಾ ಶೂಟಿಂಗ್ ಮಾಡಿದ ಸ್ಥಳ ಗೂಗಲ್ ನಲ್ಲಿ ‘ಕೆಜಿಎಫ್ ಫಿಲ್ಮ್ ಸೆಟ್’ ಎಂದು ಮರುನಾಮಕರಣಗೊಂಡಿದೆ. ಇದನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಹಿಂದೆ ಯಾರು ಮಾಡಿರದ ಹೊಸ ದಾಖಲೆಯನ್ನು ಕೆಜಿಎಫ್ ಸಿನಿಮಾ ಮಾಡಿದೆ.

    ‘ಕೆಜಿಎಫ್’ ಸೆಟ್ ಎಂದು ಟೈಪ್ ಮಾಡಿದಾಗ ‘ಕೆಜಿಎಫ್ ಫಿಲ್ಮ್ ಸೆಟ್’ ಬರುತ್ತೆ. ಈ ಸಿನಿಮಾವನ್ನು ಕರ್ನಾಟಕದ ‘ಕೆಜಿಎಫ್’ ಸೇರಿದಂತೆ, ಸುತ್ತಮುತ್ತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಲ್ಲೇ ‘ಕೆಜಿಎಫ್’ನಿಂದ ಸ್ವಲ್ಪ ದೂರದಲ್ಲಿ ಚಿತ್ರದ ಸೆಟ್ಟನ್ನು ನಿರ್ಮಾಣ ಮಾಡಲಾಗಿತ್ತು. ಆ ಸೆಟ್‍ನಲ್ಲಿ ‘ಕೆಜಿಎಫ್’ ಭಾಗ ಒಂದು ಮತ್ತು ಎರಡರ ಚಿತ್ರೀಕರಣ ಮಾಡಲಾಗಿದೆ. ಅಲ್ಲದೆ ಸಿನಿಮಾ ಸೆಟ್ ಹಲವು ವರ್ಷಗಳ ಕಾಲ ಅಲ್ಲೇ ಉಳಿಸಿಕೊಂಡಿತು. ಈಗ ಆ ಜಾಗ ‘ಕೆಜಿಎಫ್ ಫಿಲ್ಮ್ ಸೆಟ್’ ಎಂದು ಗೂಗಲ್ ಮ್ಯಾಪ್‍ನಲ್ಲಿ ರಿಜಿಸ್ಟರ್ ಆಗಿದೆ. ಇದನ್ನೂ ಓದಿ: ಮಜಾಟಾಕೀಸ್ ರಾಣಿಯ ಸ್ನೇಹಿತೆ ಉಕ್ರೇನ್ ನಲ್ಲಿ ಕಳೆದ 10 ದಿನಗಳು: ಶ್ವೇತಾ ಚೆಂಗಪ್ಪ ಬಿಚ್ಚಿಟ್ಟ ರಹಸ್ಯ

    ‘ಕೆಜಿಎಫ್ ಫಿಲ್ಮ್ ಸೆಟ್’ ಎಂದು ಗೂಗಲ್ ನಲ್ಲಿ ಹಾಕಿದರೆ ಸಾಕು ಆ ಸಿನಿಮಾ ಲೋಕೇಶ್ ನನ್ನು ಅದೇ ತೋರಿಸುತ್ತೆ. ಈ ಹಿಂದೆ ಕೆಜಿಎಫ್ 2 ಸಿನಿಮಾ ಟೀಸರ್ ಅಧಿಕೃತವಾಗಿ ಬಿಡುಗಡೆ ಮಾಡುವುದಕ್ಕೂ ಮುನ್ನ ಲಿಂಕ್ ಲೀಕ್ ಆಗಿತ್ತು. ಆದರೂ ಕೂಡ, ರಿಲೀಸ್ ಆದ ಟೀಸರ್ ಕಡಿಮೆ ಸಮಯದಲ್ಲೇ ಹೆಚ್ಚಿನ ವೀಕ್ಷಣೆಯನ್ನು ಪಡೆದುಕೊಂಡಿತ್ತು. ವಿಶ್ವಮಟ್ಟದಲ್ಲಿ ದಾಖಲೆ ಮಾಡಿತು.

  • ಗೂಗಲ್ ಮ್ಯಾಪ್ ನೋಡಿ ಕಾರ್ ಚಾಲನೆ- ಕಾಲುವೆಗೆ ಬಿದ್ದು, 3 ಮಂದಿ ಸಾವು

    ಗೂಗಲ್ ಮ್ಯಾಪ್ ನೋಡಿ ಕಾರ್ ಚಾಲನೆ- ಕಾಲುವೆಗೆ ಬಿದ್ದು, 3 ಮಂದಿ ಸಾವು

    ತಿರುವನಂತಪುರಂ: ಗೂಗಲ್ ಮ್ಯಾಪ್ ಆಧಾರದ ಮೇಲೆ ನಾವು ಕೆಲವು ಸ್ಥಳ ಇರುವ ಜಾಗವನ್ನು ಪತ್ತೆ ಮಾಡಿ ಹೋಗುತ್ತೇವೆ. ಆದರೆ ಹೀಗೆ ಗೂಗಲ್ ಮ್ಯಾಪ್ ಬಳಸುತ್ತಾ ಕಾರ್ ಚಾಲಕ 3 ಮಂದಿಯ ಸಾವಿಗೆ ಕಾರಣನಾಗಿದ್ದಾನೆ.

    ಶ್ರೀಜಾ(45), ಶಕುಂತಲಾ(51), ಇಂದಿರಾ(57) ಮೃತರಾಗಿದ್ದಾರೆ. ಗೂಗಲ್ ಮ್ಯಾಪ್ ಬಳಸಿ ಕಾರ್ ಚಾಲನೆ ಮಾಡುತ್ತಿದ್ದ. ಚಾಲಕನ ನಿಯಂತ್ರಣ ತಪ್ಪಿ ಕಾಲುವೆ ಬಿದ್ದು ಮೂವರು ಮೃತಪಟ್ಟಿದ್ದಾರೆ.

    ನಡೆದಿದ್ದೇನು?: 7 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಕಾರೊಂದು ಕೇರಳದ ಅಡೂರ್ ಬೈಪಾಸ್ ಬಳಿ ಕಾಲುವೆಗೆ ಬಿದ್ದು, ಮೂವರು ಮೃತಪಟ್ಟಿದ್ದಾರೆ. ಕಾರ್ ಚಾಲಕನಿಗೆ ಹೋಗುತ್ತಿದ್ದ ದಾರಿಯ ಪರಿಚಯವಿರಲಿಲ್ಲ. ಹೀಗಾಗಿ ಆತ ಗೂಗಲ್ ಮ್ಯಾಪ್ ಬಳಸುತ್ತಿದ್ದನು. ಮ್ಯಾಪ್ ತೋರಿದ ದಾರಿಯನ್ನೇ ಅನುಸರಿಸುತ್ತಾ ಕಾರ್ ಚಾಲನೆ ಮಾಡುತ್ತಿದ್ದ. ಚಾಲಕ ದಾರಿ ತಪ್ಪಿತ್ತು ಎಂದು ತಿಳಿದಾಗ ಗಾಬರಿಗೊಂಡು ಕಾರನ್ನ ಕಾಲುವೆಗೆ ಇಳಿಸಿದ್ದಾನೆ.

    ಕಾಲುವೆಯಲ್ಲಿ ನೀರು ಹೆಚ್ಚಾಗಿ ಹರಿಯುತ್ತಿದ್ದ ಕಾರಣ ಕಾರು ಕೊಚ್ಚಿ ಹೋಗಿ ಸಂಪೂರ್ಣವಾಗಿ ಮುಳುಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸ್ಥಳೀಯರೊಡನೆ ಸೇರಿ ನಾಲ್ವರನ್ನು ರಕ್ಷಣೆ ಮಾಡಿದ್ದು, ಉಳಿದ ಮೂವರು ಸ್ಥಳದಲ್ಲೇ ಕೊನೆಯುಸಿರೆಳದಿದ್ದಾರೆ. ದನ್ನೂ ಓದಿ: ಹಿಜಬ್- ಕೇಸರಿ ಶಾಲು ವಿವಾದ- ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್..!

    ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾರು ವೇಗವಾಗಿ ಹೋಗುತ್ತಿತ್ತು. ಗೂಗಲ್ ಮ್ಯಾಪ್‍ನಂತೆ ಆಡೂರ್ ಬೈಪಾಸ್‍ನಲ್ಲಿ ಕಾರು ಚಾಲಕ ಎಡ ತಿರುವು ತೆಗೆದುಕೊಂಡಿದ್ದಾನೆ. ತಕ್ಷಣವೇ ತಪ್ಪು ದಾರಿಯಲ್ಲ ಹೋಗುತ್ತಿದ್ದೇವೆ ಎಂದು ಚಾಲಕ ಬ್ರೇಕ್ ಹಾಕುವ ಬದಲು ಕಾರಿನ ಆಕ್ಸಿಲೇಟರ್ ತುಳಿದಿದ್ದಾನೆ. ಬಳಿಕ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾಲುವೆಯಲ್ಲಿ ಬಿದ್ದಿದೆ ಎಂದು ಗಾಯಾಳು ಒಬ್ಬರು ಹೇಳಿದ್ದಾರೆ.

  • ಗ್ರಾಮಗಳ ಹೆಸರನ್ನು ತಪ್ಪಾಗಿ ಬಳಕೆ- ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಗೂಗಲ್‍ಗೆ ಪತ್ರ

    ಗ್ರಾಮಗಳ ಹೆಸರನ್ನು ತಪ್ಪಾಗಿ ಬಳಕೆ- ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಗೂಗಲ್‍ಗೆ ಪತ್ರ

    ಬೆಂಗಳೂರು: ರಾಜ್ಯದ ಬಹಳಷ್ಟು ಗ್ರಾಮ ಮತ್ತು ನಗರಗಳ ಹೆಸರನ್ನು ತಪ್ಪು ತಪ್ಪಾಗಿ ಗೂಗಲ್ ಮ್ಯಾಪ್‍ನಲ್ಲಿ ದಾಖಲಿಸಿರುವುದನ್ನು ಕೂಡಲೇ ಸರಿಪಡಿಸಿ ಬಳಕೆಗೆ ಒದಗಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಗೂಗಲ್ ಇಂಡಿಯಾ ಪ್ರೈ.ಲಿ ಗೆ ಪತ್ರ ಬರೆಯಲಾಗಿದೆ.

    ಗೂಗಲ್ ಮ್ಯಾಪ್‍ನಲ್ಲಿ ರಾಜ್ಯದ ಬಹಳಷ್ಟು ಗ್ರಾಮ ಮತ್ತು ನಗರಗಳ ಹೆಸರುಗಳನ್ನು ತಪ್ಪು ತಪ್ಪಾಗಿ ದಾಖಲಿಸಿರುವುದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಮನಿಸಿ ಪತ್ರ ಬರೆದಿದೆ. ಪ್ರವಾಸಿಗರಿಗೆ ಅನುಕೂಲವಾಗುವ ದೃಷ್ಟಿಯಿಂದ ಗೂಗಲ್ ಮ್ಯಾಪ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಸಾರ್ವಜನಿಕರಿಗೆ ಸಹಾಯವಾಗುತ್ತಿದೆ ಜೊತೆಗೆ ಪ್ರವಾಸಿಗರಿಗೆ ಗೊತ್ತಿರದ ಊರುಗಳಿಗೆ ಹೋದ ಸಂದರ್ಭದಲ್ಲಿ ಪ್ರಸ್ತುತ ವ್ಯಕ್ತಿಗಳಿಗಿಂತ ಹೆಚ್ಚಾಗಿ ಗೂಗಲ್ ಮ್ಯಾಪ್ ಅನ್ನು ಬಳಸುತ್ತಿದ್ದಾರೆ. ಇದನ್ನೂ ಓದಿ: 1ರಿಂದ 8ನೇ ತರಗತಿ ಶಾಲೆಗಳ ಆರಂಭ – ಆ. 30 ರಂದು ಸಿಎಂ ನೇತೃತ್ವದಲ್ಲಿ ಸಭೆ

    ಗೂಗಲ್ ಮ್ಯಾಪ್‍ಗಳನ್ನು ಹೆಚ್ಚಾಗಿ ಜನ ಬಳಕೆಯಲ್ಲಿ ತೊಡಗಿರುವುದರಿಂದಾಗಿ ಅದರಲ್ಲಿರುವ ರಾಜ್ಯದ ನಗರಗಳ ತಪ್ಪು ಹೆಸರುಗಳನ್ನು ಕೂಡಲೇ ಸರಿಪಡಿಸಿ ಬಳಕೆಗೆ ಒದಗಿಸುವಂತೆ ತಿಳಿಸಿದೆ. ಈ ಸಂಬಂಧ ಅಗತ್ಯವಿದ್ದಲ್ಲಿ ಪ್ರಾಧಿಕಾರ ಸಹಾಯವನ್ನು ಒದಗಿಸಲು ಸಿದ್ಧವಿದೆ ಎಂದು ಪ್ರಾಧಿಕಾರದಿಂದ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಆಚಾರ್ ಕುಟುಂಬದವರಿಗೆ ನೋವುಂಟುಮಾಡುವ ಉದ್ದೇಶವಿರಲಿಲ್ಲ: ಬಸವರಾಜ್ ರಾಯರೆಡ್ಡಿ ವಿಷಾದ

  • 99 ಮೊಬೈಲ್ ಎಳೆದುಕೊಂಡು ಹೋಗಿ ಗೂಗಲ್ ಮ್ಯಾಪಿಗೆ ಚಮಕ್ ಕೊಟ್ಟ!

    99 ಮೊಬೈಲ್ ಎಳೆದುಕೊಂಡು ಹೋಗಿ ಗೂಗಲ್ ಮ್ಯಾಪಿಗೆ ಚಮಕ್ ಕೊಟ್ಟ!

    ಬರ್ಲಿನ್: ನಗರದಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎನ್ನುವ ಮಾಹಿತಿ ನೀಡುವ ಗೂಗಲ್ ಕಂಪನಿಗೆ ವ್ಯಕ್ತಿಯೊಬ್ಬ ಚಮಕ್ ಕೊಟ್ಟ ಘಟನೆ ಜರ್ಮನಿಯಲ್ಲಿ ನಡೆದಿದೆ.

    ಗೂಗಲ್ ಮ್ಯಾಪ್ ಸಂಚಾರದ ಸಂದರ್ಭದಲ್ಲಿ ಜಿಪಿಎಸ್ ಸಾಧನಗಳು ಎಷ್ಟು ಆನ್ ಆಗಿದೆ ಎನ್ನುವುದನ್ನು ತಿಳಿದುಕೊಂಡು ಜನರಿಗೆ ಪ್ರದೇಶದಲ್ಲಿ ಎಷ್ಟು ಸಂಚಾರ ದಟ್ಟಣೆಯಿದೆ ಎನ್ನುವ ವಿವರ ಇರುವ ಸಂದೇಶವನ್ನು ನೀಡುತ್ತಿರುತ್ತದೆ. ಈ ವಿಚಾರವನ್ನು ತಿಳಿದ ವ್ಯಕ್ತಿಯೊಬ್ಬ ಗೂಗಲ್ ಕಂಪನಿ ಮುಂದೆ ಕೃತಕವಾಗಿ ಟ್ರಾಫಿಕ್ ಜಾಮ್ ಸೃಷ್ಟಿಸಿ ಸುದ್ದಿ ಮಾಡಿದ್ದಾನೆ.

    ಮಾಡಿದ್ದೇನು?
    ಜರ್ಮನಿಯ ಕಲಾವಿದ ಸೈಮನ್ ವೆಕರ್ಟ್ ಬರ್ಲಿನ್ ನಲ್ಲಿರುವ ಗೂಗಲ್ ಕಚೇರಿಯ ಮುಂದೆ 99 ಮೊಬೈಲ್ ಗಳನ್ನು ಸಣ್ಣ ಗಾಡಿಯಲ್ಲಿ ಎಳೆದುಕೊಂಡು ಹೋಗಿದ್ದಾನೆ. 99 ಮೊಬೈಲ್ ಗಳಲ್ಲಿ ಜಿಪಿಎಸ್ ಆನ್ ಆಗಿದ್ದ ಕಾರಣ ಸಹಜವಾಗಿ ಗೂಗಲ್ ಕಚೇರಿಯ ಮುಂದೆ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ತೋರಿಸಿದೆ.

    ಸೈಮನ್ ವೆಕರ್ಟ್ ತಂತ್ರಜ್ಞಾನವನ್ನು ನಾವು ಹೇಗೆ ಮೂರ್ಖರನ್ನಾಗಿ ಮಾಡಬಹುದು ಎಂದು ತೋರಿಸಲು ನಾನು ಈ ರೀತಿ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ತಾನು ಸಣ್ಣ ಗಾಡಿಯಲ್ಲಿ ಮೊಬೈಲ್‍ಗಳನ್ನು ಎಳೆದುಕೊಂಡು ಹೋಗುತ್ತಿರುವ ವಿಡಿಯೋವನ್ನು ಯೂ ಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.

    ಈ ವಿಡಿಯೋಗೆ ಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೆಲವರು ಸೈಮನ್ ವೆಕರ್ಟ್ ಸೃಜನಶೀಲತೆಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು, ಬೇರೆ ಏನು ಕೆಲಸ ಇಲ್ಲದ ಈ ವ್ಯಕ್ತಿ ತುಂಬಾ ಫ್ರೀ ಇರಬೇಕು. ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದಾನೆ. ತಂತ್ರಜ್ಞಾನ ಇಂತವರಿಂದಲೇ ದುರುಪಯೋಗ ಆಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

  • ನಾಪತ್ತೆಯಾಗಿದ್ದ ವ್ಯಕ್ತಿ 30 ವರ್ಷಗಳ ನಂತ್ರ ಗೂಗಲ್ ಮ್ಯಾಪ್ ಸಹಾಯದಿಂದ ವಾಪಸ್

    ನಾಪತ್ತೆಯಾಗಿದ್ದ ವ್ಯಕ್ತಿ 30 ವರ್ಷಗಳ ನಂತ್ರ ಗೂಗಲ್ ಮ್ಯಾಪ್ ಸಹಾಯದಿಂದ ವಾಪಸ್

    ಚಿತ್ರದುರ್ಗ: ಮೂವತ್ತು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪ್ ಸಹಾಯದಿಂದ ತಮ್ಮ ಗ್ರಾಮಕ್ಕೆ ವಾಪಸ್ ಬರುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

    ವಿರುಪಾಕ್ಷಪ್ಪ ಗೂಗಲ್ ಮ್ಯಾಪ್ ಸಹಾಯದಿಂದ 3 ದಶಕದ ಬಳಿಕ ಚಿತ್ರದುರ್ಗ ತಾಲೂಕಿನ ಹಂಪನೂರು ಗ್ರಾಮಕ್ಕೆ ಮರಳಿ ಬಂದಿದ್ದಾರೆ. ವಿರುಪಾಕ್ಷಪ್ಪ 30 ವರ್ಷದ ಹಿಂದೆ ಮನೆ ಬಿಟ್ಟು ಹೋಗಿದ್ದರು. ಆದರೆ ಹೈದರಾಬಾದ್‍ನಲ್ಲಿ ಆಕಸ್ಮಿಕವಾಗಿ ಅಪಘಾತಕ್ಕೀಡಾಗಿದ್ದರು. ಆ ವೇಳೆ ಅವರ ಸ್ಮರಣಾ ಶಕ್ತಿ ದೋಷದಿಂದಾಗಿ ಹಳೆಯ ನೆನಪನ್ನು ಮರೆತಿದ್ದರು. ಬಳಿಕ ವಿರುಪಾಕ್ಷಪ್ಪನಿಗೆ ಅಪಘಾತ ಮಾಡಿದವರೇ ಆತನಿಗೆ ತಮ್ಮ ಮಗಳನ್ನು ಕೊಟ್ಟು ಹೈದರಾಬಾದ್‍ನಲ್ಲಿ ಮದುವೆ ಮಾಡಿದ್ದರು.

    ಇತ್ತ ಆತ ಎಲ್ಲೋ ಸಾವನ್ನಪ್ಪಿದ್ದಾನೆಂದು ಎಲ್ಲರೂ ಭಾವಿಸಿದ್ದರು. ಆದರೆ 3 ದಶಕ ಬಳಿಕ ಸ್ವಗ್ರಾಮಕ್ಕೆ ಆತ ವಾಪಸ್ ಆಗಮಿಸಿ ಎಲ್ಲರಲ್ಲೂ ಅಚ್ಚರಿ ಹಾಗೂ ಸಂತಸ ಮೂಡಿಸಿದ್ದಾರೆ. ವಿರುಪಾಕ್ಷಪ್ಪ ಕಾರ್ಯ ನಿಮಿತ್ತ ಬೆಂಗಳೂರಿನ ಕೆಲ ವಿಳಾಸಗಳ ಮಾಹಿತಿ ಬಗ್ಗೆ ಗೂಗಲ್‍ನಲ್ಲಿ ಹುಡುಕಾಡಿದ್ದಾರೆ. ಆಗ ಚಿತ್ರದುರ್ಗ, ಚಳ್ಳಕೆರೆ, ಭರಮಸಾಗರ ಹಾಗೂ ಹೊಳಲ್ಕೆರೆ ಸೇರಿದಂತೆ ತಮ್ಮ ಸ್ವಗ್ರಾಮದ ಶ್ರೀ ರಂಗನಾಥಸ್ವಾಮಿ ದೇಗುಲದ ಮಾಹಿತಿಯನ್ನು ಕಂಡು ನೆನಪು ಮರುಕಳಿಸಿದೆ.

    ಈ ವಿಚಾರವನ್ನು ತಮ್ಮ ಪತ್ನಿಯೊಂದಿಗೆ ಚರ್ಚಿಸಿದ ವಿರುಪಾಕ್ಷಪ್ಪ ಪತ್ನಿಯ ನೆರವಿನಿಂದ ಸ್ವಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ಕಳೆದು ಹೋದ ನೆನಪು ಮತ್ತೆ ವಾಪಸ್ ಬರುವಂತೆ ಗೂಗಲ್ ಮಾಡಿದ್ದು, ಅವರ ಸಹೋದರ ಹಾಗೂ ಗ್ರಾಮಸ್ಥರನ್ನು ಮತ್ತೆ ನೋಡುವ ಭಾಗ್ಯ ಗೂಗಲ್ ಕಲ್ಪಿಸಿದೆ. ಸದ್ಯ ಕಾರ್ಯ ನಿಮಿತ್ತ ವಾಪಸ್ ವಿಜಯವಾಡಕ್ಕೆ ತೆರಳಿರುವ ವಿರೂಪಾಕ್ಷಪ್ಪ, ಮುಂದಿನ ವಾರ ಮತ್ತೆ ಸ್ವಗ್ರಾಮವಾದ ಹಂಪನೂರಿಗೆ ಆಗಮಿಸುವುದಾಗಿ ತಿಳಿಸಿದ್ದಾರೆ.

  • ಇವ್ರು ಹೈಟೆಕ್ ಕಳ್ಳರು-ಗೂಗಲ್ ಮ್ಯಾಪ್ ನೋಡಿ ಕಳ್ಳತನದ ಪ್ಲಾನ್

    ಇವ್ರು ಹೈಟೆಕ್ ಕಳ್ಳರು-ಗೂಗಲ್ ಮ್ಯಾಪ್ ನೋಡಿ ಕಳ್ಳತನದ ಪ್ಲಾನ್

    ನವದೆಹಲಿ: ದಾರಿಗಾಗಿ ಜನರು ಗೂಗಲ್ ಮ್ಯಾಪ್ ಬಳಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ದೆಹಲಿಯಲ್ಲಿ ದೆಹಲಿಯಲ್ಲಿ ಇಬ್ಬರು ಗೂಗಲ್ ಮ್ಯಾಪ್ ನೋಡಿ ಕಳ್ಳತನಕ್ಕೆ ಕೈ ಹಾಕಿ ಈಗ ಪೊಲೀಸರ ಅತಿಥಿಯಾಗಿದ್ದಾರೆ.

    ಮುಶೀರ್ ಮತ್ತು ಹರ್ಷ ಗುಪ್ತ ಬಂಧಿತ ಆರೋಪಿಗಳು. ಈ ಇಬ್ಬರು ಗೂಗಲ್ ಮ್ಯಾಪ್ ನೋಡಿಯೇ ಕಳ್ಳತನದ ರೂಪುರೇಷಗಳನ್ನು ರಚಿಸುತ್ತಿದ್ದರು ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ದೆಹಲಿಯ ಸೆಕ್ಟರ್-8ರಲ್ಲಿ ಶುಕ್ರವಾರ ಪೊಲೀಸರು ಕಳ್ಳತನ ಆರೋಪದ ಮೇಲೆ ಇವರಿಬ್ಬರನ್ನು ಬಂಧಿಸಿದ್ದರು. ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಲು ಪ್ಲಾನ್ ಹೇಗೆ ಮಾಡಲಾಗುತ್ತಿತ್ತು ಎಂಬ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ.

     

    ಕಳ್ಳತನಕ್ಕೆ ಹೋಗುವ ಮೊದಲು ಗೂಗಲ್ ಮ್ಯಾಪ್ ನಿಂದ ತಮಗೆ ಬೇಕಾದ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದರು. ಅಂದ್ರೆ ಯಾವ ಮಾರ್ಗದಲ್ಲಿ ಟ್ರಾಫಿಕ್ ಇದೆ. ಎಲ್ಲಿ ಜನರು ವಿರಳವಾಗಿದ್ದರೆ ಎಂಬುದನ್ನು ಪತ್ತೆ ಹಚ್ಚಿ ಅಲ್ಲಿ ಕಳ್ಳತನಕ್ಕೆ ಹೋಗುತ್ತಿದ್ದರು. ಅದೇ ರೀತಿ ಅಲ್ಲಿಂದ ತಮ್ಮ ಅಡ್ಡ ತಲುಪಲು ಇರುವ ಅಡ್ಡದಾರಿಗಳನ್ನು ಸಹ ಗೂಗಲ್ ಮ್ಯಾಪ್ ನಿಂದ ಕಂಡುಹಿಡಿಯುತ್ತಿದ್ದರು. ಇದೇ ತಂತ್ರಗಳನ್ನು ಬಳಸಿ 15 ದಿನಗಳ ಹಿಂದೆ ಶಿಕ್ಷಕಿಯೊಬ್ಬರ ಬಂಗಾರದ ಬಳೆಯನ್ನು ಕದ್ದಿದ್ದರು.

    ಕಳ್ಳರು ಕೆಂಪು ಬಣ್ಣದ ಸಾಕ್ಸ್ ಧರಿಸಿ ಕಳ್ಳತನಕ್ಕೆ ಇಳಿಯುತ್ತಿದ್ದರು. ಕೆಂಪು ಬಣ್ಣ ಸಾಕ್ಸ್ ಧರಿಸಿ ಮಾಡಿದ ಕಳ್ಳತನಗಳು ಯಶಸ್ವಿಯಾಗಿವೆಯಂತೆ. ಬಂಧನಕ್ಕೊಳಗಾದಾಗ ಮುಶೀರ್ ಮತ್ತು ಹರ್ಷ ಕೆಂಪು ಸಾಕ್ಸ್ ಧರಿಸಿದ್ದರು.

    ಶುಕ್ರವಾರ ಆರೋಪಿಗಳನ್ನು ಬಂಧಿಸಿ ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ ಎಂದು ಸೆಕ್ಟರ್ 20ರ ಪೊಲೀಸ್ ಠಾಣೆಯ ಎಸ್‍ಹೆಚ್‍ಓ ಮನೋಜ್ ಕುಮಾರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv