Tag: Girlfriends

  • ವಿದೇಶಿ ಪ್ರವಾಸಕ್ಕೆ ಪತ್ನಿ, ಗೆಳತಿಯನ್ನ ಕರೆದೊಯ್ಯಬಹುದು: ಬಿಸಿಸಿಐ

    ವಿದೇಶಿ ಪ್ರವಾಸಕ್ಕೆ ಪತ್ನಿ, ಗೆಳತಿಯನ್ನ ಕರೆದೊಯ್ಯಬಹುದು: ಬಿಸಿಸಿಐ

    – ಕೋಚ್, ಕ್ಯಾಪ್ಟನ್‍ಗಷ್ಟೇ ಇದ್ದ ಅವಕಾಶ ಎಲ್ಲರಿಗೂ ಸಿಗುತ್ತಾ?

    ನವದೆಹಲಿ: ವಿದೇಶಿ ಪ್ರವಾಸಕ್ಕೆ ಪತ್ನಿ ಅಥವಾ ಗೆಳತಿಯೊಂದಿಗೆ ಹೋಗಲು ಬಿಸಿಸಿಐ ಈಗ ಅನುಮೋದನೆ ನೀಡಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಮಾಜಿ ಸಿಎಜಿ ವಿನೋದ್ ರೈ ನೇತೃತ್ವದ ಆಡಳಿತ ಸಮಿತಿ (ಸಿಒಎ)ಯು ಕಳೆದ ವರ್ಷ ಮೇ ತಿಂಗಳಲ್ಲಿ ಈ ವಿಶೇಷ ಅವಕಾಶವನ್ನು ಟೀಂ ಇಂಡಿಯಾ ನಾಯಕ ಮತ್ತು ತರಬೇತುದಾರರಿಗೆ ನೀಡಿತ್ತು. ಆದರೆ ಈಗ ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ಹೊಸ ಬದಲಾವಣೆ ತಂದಿದೆ. ಇತ್ತ 2019ರ ವಿಶ್ವಕಪ್ ಸಮಯದಲ್ಲಿ ಕೆಲವು ಆಟಗಾರರು ಪತ್ನಿ, ಗೆಳತಿಯರನ್ನು ನಿಗದಿತ ಅವಧಿಗಿಂತ ಹೆಚ್ಚು ಕಾಲ ಒಟ್ಟಿಗೆ ಇಟ್ಟುಕೊಂಡಿದ್ದರು ಎಂಬುದು ತಿಳಿದುಬಂದಿದೆ.

    ಈ ವಿಚಾರದಲ್ಲಿ ಸಿಒಎ ತನ್ನ ನಿರ್ಧಾರವನ್ನು ಬದಲಾಯಿಸಿದೆ. ಮಂಡಳಿಯ ಅಧಿಕಾರಿಯೊಬ್ಬರು, ಪತ್ನಿ ಅಥವಾ ಗೆಳತಿಯನ್ನು ಪ್ರವಾಸಕ್ಕೆ ಕರೆದೊಯ್ಯಬಹುದು ಎಂದು ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಇದು ತುಂಬಾ ದೊಡ್ಡ ವಿಷಯವಲ್ಲ. ಆದರೆ ಇದನ್ನು ಪರಿಹರಿಸಲು ಅತ್ಯುತ್ತಮ ಮಾರ್ಗ ಬೇಕಿದೆ ಎಂದು ಹೇಳಿದ್ದಾರೆ ಅಂತ ವರದಿಯಾಗಿದೆ.

    ಈ ವಿಷಯದಲ್ಲಿ ಸಿಒಎ 2019ರ ಮೇ 21ರಂದು ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು. ಈ ಮೂಲಕ ಕ್ಯಾಪ್ಟನ್ ಮತ್ತು ತರಬೇತುದಾರನಿಗೆ ಪತ್ನಿ ಅಥವಾ ಗೆಳತಿಯನ್ನು ಕರೆದೊಯ್ಯಲು ಅಧಿಕಾರ ನೀಡಲಾಗಿತ್ತು. ಆದರೆ ಸಮಿತಿಯ ಈ ನಿರ್ಧಾರದಿಂದ ಅನೇಕ ಆಟಗಾರರು ಅಸಮಾಧಾನ ಹೊರ ಹಾಕಿದ್ದರು. ಅಷ್ಟೇ ಅಲ್ಲದೆ ವಿಶ್ವಕಪ್ ಸಮಯದಲ್ಲಿ ಹಿರಿಯ ಆಟಗಾರರು ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಕುಟುಂಬವನ್ನು ತಮ್ಮೊಟ್ಟಿಗೆ ಉಳಿಸಿಕೊಂಡಿದ್ದರು ಆರೋಪ ಕೇಳಿ ಬಂದಿತ್ತು.

    ಸಿಒಎ ಕೋಚ್ ಮತ್ತು ನಾಯಕನಿಗೆ ಮಾತ್ರ ವಿಶೇಷ ಅವಕಾಶ ನೀಡಿದ್ದಕ್ಕೆ ಆಗ ಸಮಿತಿಯ ಸದಸ್ಯರಾಗಿದ್ದ ಡಯಾನಾ ಇಡುಲ್ಜಿ ಒಪ್ಪಲಿಲ್ಲ. ಈಗ ಅವರು ಹೊಸ ಬದಲಾವಣೆಯನ್ನು ಸ್ವಾಗತಿಸಿದ್ದಾರೆ. ಇದು ತಂಡದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಂಡಳಿಯ ಅಧಿಕಾರಿಗಳು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂದು ಡಯಾನಾ ಆಗ ಹೇಳಿದ್ದರು.

    ಆಡಳಿತಾತ್ಮಕ ಕಾರ್ಯಗಳಿಗಿಂತ ನಾಯಕ ಮತ್ತು ತರಬೇತುದಾರನ ಗಮನವು ಆಟದ ಮೇಲೆ ಇರಬೇಕು ಎಂದು ಇಡುಲ್ಜಿ ಹೇಳಿದ್ದಾರೆ. ಟೀಂ ಇಂಡಿಯಾ ಈ ತಿಂಗಳ ಕೊನೆಯಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಪ್ರವಾಸದ ಎರಡನೇ ಭಾಗದಲ್ಲಿ ಎರಡು ಅಥವಾ ಮೂರು ವಾರಗಳವರೆಗೆ ಆಟಗಾಗರರು ಕುಟುಂಬವನ್ನು ತಮ್ಮೊಟ್ಟಿಗೆ ಇರಿಸಲು ಅವಕಾಶ ಸಿಗಲಿದೆ.

  • ಪ್ರಿಯತಮೆಯರಿಗೆ ದೀಪಾವಳಿ ಗಿಫ್ಟ್ ಕೊಡಿಸಲು ಕಳ್ಳತನ ಮಾಡಿದ ಯುವಕರು

    ಪ್ರಿಯತಮೆಯರಿಗೆ ದೀಪಾವಳಿ ಗಿಫ್ಟ್ ಕೊಡಿಸಲು ಕಳ್ಳತನ ಮಾಡಿದ ಯುವಕರು

    ನವದೆಹಲಿ: ತಮ್ಮ ಗೆಳತಿಯರಿಗೆ ದೀಪಾವಳಿ ಹಬ್ಬದ ಉಡುಗೊರೆ ನೀಡಲು ಯುವಕರಿಬ್ಬರು ಕಳ್ಳತನಕ್ಕೆ ಕೈಹಾಕಿ ಪೊಲೀಸರ ಅತಿಥಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಬಂಧಿತರನ್ನು ಶಾಸ್ತ್ರಿ ನಗರ ದೆಹಲಿ ನಿವಾಸಿ ಶಶಾಂಕ್ ಅಗರ್ವಾಲ್ (32) ಮತ್ತು ಶಕುರ್ಬಸ್ತಿ ನಿವಾಸಿ ಅಮರ್ ಸಿಂಗ್ (29) ಎಂದು ಗುರುತಿಸಲಾಗಿದೆ. ದೀಪಾವಳಿ ಹಬ್ಬಕ್ಕೆ ಗೆಳತಿಯರಿಗೆ ದುಬಾರಿ ಉಡುಗೊರೆ ಕೊಡಿಸಲು ಆನ್‍ಲೈನ್ ಶಾಪಿಂಗ್ ಡೆಲಿವರಿ ಹುಡುಗನ ಬಳಿಯಿಂದ ದರೋಡೆ ಮಾಡಿದ್ದಾರೆ.

    ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಗುರುವಾರ ಡೆಲಿವರಿ ಹುಡುಗನೊಬ್ಬ ಪಂಜಾಬಿ ಬಾಗ್ ಪ್ರದೇಶಕ್ಕೆ ಪಾರ್ಸೆಲ್ ತಲುಪಿಸಲು ಬಂದಿದ್ದಾಗ ಈ ಇಬ್ಬರು ಅವನಿಂದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಪಾರ್ಸೆಲ್ ಬ್ಯಾಗ್‍ನಲ್ಲಿ ದುಬಾರಿ ಮೊಬೈಲ್ ಫೋನ್‍ಗಳು ಸೇರಿದಂತೆ ಹಲವಾರು ಉಡುಗೊರೆ ವಸ್ತುಗಳು ಇದ್ದವು ಎಂದು ಹೇಳಿದ್ದಾರೆ.

    ಸದ್ಯ ಇಬ್ಬರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಮೊದಲು ಯುವಕರು ಆನ್‍ಲೈನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿದ್ದು, ಇಬ್ಬರಿಗೂ ದೀಪಾವಳಿ ಸಮಯದಲ್ಲಿ ಜನ ಜಾಸ್ತಿ ಆನ್‍ಲೈನ್ ಅಲ್ಲಿ ಶಾಪಿಂಗ್ ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಜನರು ಆಫರ್ ಇರುವ ಕಾರಣ ದುಬಾರಿ ಮೊಬೈಲ್ ಖರೀದಿಸುತ್ತಾರೆ ಎಂದು ತಿಳಿದಿತ್ತು. ಆದ್ದರಿಂದ ಆನ್‍ಲೈನ್ ಶಾಪಿಂಗ್ ಡೆಲಿವರಿ ಹುಡುಗನ ಬ್ಯಾಗ್ ಕಳವು ಮಾಡಿರುವುದಾಗಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.

    ಈಗ ಕಳವು ಮಾಡಿದ ಬ್ಯಾಗನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಇಬ್ಬರಿಗೂ ಗೆಳತಿಯರಿದ್ದು ಅವರು ದೀಪಾವಳಿ ಹಬ್ಬಕ್ಕೆ ಐಫೋನ್-11 ಗಿಫ್ಟ್ ಕೇಳಿದ್ದಾರೆ. ಅವರಿಗೆ ಉಡುಗೊರೆ ನೀಡಲು ಈ ರೀತಿ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.