Tag: Gandhigiri

  • ನಮಗೆ ರಾಗಿಣಿ ಬೇಕೇ ಬೇಕು ಎಂದು ‘ಗಾಂಧಿಗಿರಿ’!

    ನಮಗೆ ರಾಗಿಣಿ ಬೇಕೇ ಬೇಕು ಎಂದು ‘ಗಾಂಧಿಗಿರಿ’!

    ಬೆಂಗಳೂರು: ರಾಜ್ಯದಲ್ಲಿ ಡ್ರಗ್ಸ್ ಕೇಸ್ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಈಗಾಗಲೇ ಸಿಸಿಬಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಸಿನಿಮಾಗೆ ಬಂಡವಾಳ ಹಾಕಿದ ಕೆಲ ನಿರ್ಮಾಪಕರಿಗೆ ಟೆನ್ಷನ್ ಆರಂಭವಾಗಿದೆ.

    ಹೌದು. ಕೊರೊನಾ ವೈಸರ್ ಭೀತಿಯಿಂದ ಚಿತ್ರೀಕರಣ ಸ್ಥಗಿತಗೊಂಡಿದ್ದರಿಂದ ಇಡೀ ಚಿತ್ರರಂಗವೇ ಕಂಗಾಲಾಗಿತ್ತು. ಈ ಮಧ್ಯೆ ಇದೀಗ ಡ್ರಗ್ಸ್ ಮಾಫಿಯಾ ಹಿಂದೆ ಇರುವ ನಟ-ನಟಿಯರ ಬಣ್ಣ ಒಂದೊಂದಾಗಿ ಬಯಲಾಗುತ್ತಿದೆ. ಪರಿಣಾಮ ಈಗಾಗಲೇ ಹಣ ಹೂಡಿಕೆ ಮಾಡಿರುವ ನಿರ್ಮಾಪಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಡ್ರಗ್ಸ್ ಕೇಸಿನಲ್ಲಿ ರಾಗಿಣಿ ಅರೆಸ್ಟ್ ಆಗಿರುವುದರಿಂದ ನಿರ್ಮಾಪಕರೊಬ್ಬರಿಗೆ ದೊಡ್ಡ ತಲೆನೋವು ಎದುರಾಗಿದೆ. ಇದೇ ವಿಚಾರವಾಗಿ ಚಿತ್ರತಂಡ ವಾಣಿಜ್ಯ ಮಂಡಳಿಗೆ ಮನವಿ ಪತ್ರ ನೀಡಿದ್ದು, ಈ ವಿಚಾರದಲ್ಲಿ ಚಿತ್ರತಂಡಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡಿದೆ. ಪ್ರೇಮ್ ಹಾಗೂ ರಾಗಿಣಿ ಅಭಿನಯದ ಸಿನಿಮಾ “ಗಾಂಧಿಗಿರಿ” ಸದ್ಯ ಶೇ.80 ಚಿತ್ರೀಕರಣ ಮುಗಿಸಿದ್ದು, ಇದೇ ತಿಂಗಳು 14ರಿಂದ ಮತ್ತೆ ಶೂಟಿಂಗ್ ಶುರುವಾಗಬೇಕಿತ್ತು. ಆದರೆ ಇದೀಗ ರಾಗಿಣಿ ಸಿಸಿಬಿ ಕಸ್ಟಡಿಯಲ್ಲಿದ್ದರಿಂದ ಚಿತ್ರತಂಡ ನಮಗೆ ರಾಗಿಣಿ ಬೇಕೇ ಬೇಕು ಎಂದು ಹಠ ಹಿಡಿದಿದೆ.

    ಪತ್ರದಲ್ಲೇನಿದೆ..?
    ಕರ್ನಾಟಕ ಚಲಚನಚಿತ್ರ ವಾಣಿಜ್ಯ ಮಂಡಳಿಗೆ ಬರೆದ ಪತ್ರದಲ್ಲಿ, ಪ್ರೇಮ್, ರಾಗಿಣಿ, ಅರುಂಧತಿ ನಾಗ್, ಜೆ.ಡಿ ಚಕ್ರವರ್ತಿ, ರಂಗಾಯಣ ರಘು ಮುಂತಾದ ತಾರಬಳಗವಿರುವ ರಘು ಹಾಸನ್ ನಿರ್ದೇಶನದ ”ಗಾಂಧಿಗಿರಿ” ಎಂಬ ಸಿನಿಮಾವನ್ನು ನಿರ್ಮಿಸುತ್ತಿದ್ದೇವೆ. ಇದೀಗ ಸಿನಿಮಾ ನಿರ್ಮಾಣ ಹಂತದಲ್ಲಿದ್ದು ಶೇ.80ರಷ್ಟು ಚಿತ್ರೀಕರಣಗೊಂಡಿದೆ. ಇನ್ನೂ ಶೇ.20ರಷ್ಟು ಬಾಕಿ ಇದೆ. ಹೀಗಿರುವಾಗ ಇದೇ ತಿಂಗಳು 14ರಿಂದ ಉಳಿದ ಭಾಗದ ಚಿತ್ರೀಕರಣ ಮಾಡುವ ಯೋಜನೆಯಲ್ಲಿದ್ದೇವೆ. ಅದಕ್ಕೆ ಪೂರಕವಾಗಿ ಎಲ್ಲಾ ಕಲಾವಿದರು, ತಂತ್ರಜ್ಞರು ಒಪ್ಪಿಗೆ ಸೂಚಿಸಿದ್ದರು. ಆದರೆ ಇದೀಗ ರಾಗಿಣಿಯವರ ವಿಷಯದಲ್ಲಿ ಆಗಿರುವ ಬೆಳವಣಿಗೆಯಿಂದ ಚಿತ್ರೀಕರಣ ಸ್ಥಗಿತಗೊಂಡಿದೆ. ಜೊತೆಗೆ ಇದರಿಂದ ಚಿತ್ರೀಕರಣದ ಭವಿಷ್ಯ ಏನೆಂದು? ಚಿತ್ರತಂಡ ಕಂಗಾಲಾಗಿದೆ.

    ಇಷ್ಟಲ್ಲದೆ ನಾನು ಈಗಾಗಲೇ ಗಾಂಧಿಗಿರಿ ಚಿತ್ರದ ಮೇಲೆ ಬಹಳಷ್ಟು ಹಣ ಹೂಡಿದ್ದು ಹಾಗೂ ಇನ್ನುಳಿದ ಚಿತ್ರೀಕರಣಕ್ಕೆ ಬೇಕಾಗಿರುವ ಹಣವನ್ನು ಬಡ್ಡಿಗೆ ತಂದಿದ್ದೇನೆ. ಸದ್ಯ ಮುಂದಿನ ದಾರಿ ತಿಳಿಯದೇ ಕಳವಳವಾಗಿದೆ. ಇಂತಹ ಸಮಯದಲ್ಲಿ ನಮಗೆ ಇರುವ ಒಂದೇ ಭರವಸೆಯ ದಾರಿ ಕರ್ನಾಟಕ ವಾಣಿಜ್ಯ ಮಂಡಳಿ ಎಂದು ಭಾವಿಸಿ ನಿಮ್ಮಲ್ಲಿಗೆ ಬಂದಿರುತ್ತೇವೆ. ದಯವಿಟ್ಟು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ನಮ್ಮ ಚಿತ್ರೀಕರಣ ಸುಸೂತ್ರವಾಗಿ ನಡೆಸಲು ಬೇಕಾದಂತಹ ಸಹಕಾರವನ್ನು ಮಾಡಿಕೊಡಬೇಕು ಎಂದು ಪತ್ರದ ಮೂಲಕ ಕೇಳಿಕೊಳ್ಳುವುದಾಗಿ ನಿರ್ಮಾಪಕ ರಾಜೇಶ್ ಪಟೇಲ್ ಹಾಗೂ ನಿರ್ಮಾಪಕ ರಘು ಹಾಸನ್ ಮನವಿ ಮಾಡಿಕೊಂಡಿದ್ದಾರೆ.

    ಒಟ್ಟಿನಲ್ಲಿ ಡ್ರಗ್ಸ್ ಕೇಸಿನಲ್ಲಿ ನಟ-ನಟಿಯರ ಹೆಸರು ಕೇಳಿಬರುತ್ತಿದ್ದಂತೆಯೇ ಭಾರೀ ಚರ್ಚೆ ಆರಂಭವಾಗಿದೆ. ಈ ಮಧ್ಯೆ ಕೆಲವರು ಇಂತಹ ನಟಿಯರನ್ನು ಚಿತ್ರರಂಗದಿಂದ ಬಹಿಷ್ಕಾರ ಹಾಕಬೇಕೆಂದು ಆಗ್ರಹಿಸುತ್ತಿದ್ದಾರೆ.

  • ಕೊರಗರನ್ನು 7 ವರ್ಷ ಸತಾಯಿಸಿದ ರಾಜ್ಯ ಸರ್ಕಾರದ ವಿರುದ್ಧ ‘ಪಬ್ಲಿಕ್ ಹೀರೋ’ ಗಾಂಧಿಗಿರಿ!

    ಕೊರಗರನ್ನು 7 ವರ್ಷ ಸತಾಯಿಸಿದ ರಾಜ್ಯ ಸರ್ಕಾರದ ವಿರುದ್ಧ ‘ಪಬ್ಲಿಕ್ ಹೀರೋ’ ಗಾಂಧಿಗಿರಿ!

    ಉಡುಪಿ: ದಲಿತ- ದಮನಿತರಿಗಾಗಿ ನಮ್ಮಜೀವನ ಮುಡಿಪು. ಪ್ರತಿ ಚುನಾವಣೆ ಬಂದಾಗ ರಾಜಕಾರಣಿಗಳ ಬಾಯಲ್ಲಿ ಪ್ರಣಾಳಿಕೆಯಲ್ಲಿ ಕೇಳಿ ಬರುವ ವಾಕ್ಯ ಇದು. ಆಮೇಲೆ ಓಟು ಹಾಕಿದವರನ್ನು ಮರೆತು ಬಿಡೋದು ಜನಪ್ರತಿನಿಧಿಗಳ ರೋಗ. ಉಡುಪಿಯಲ್ಲಿ ಇಂತದ್ದೇ ಒಂದು ಘಟನೆಯಾಗಿದೆ. ಸ್ಮಶಾನಕ್ಕೂ ಲಾಯಕ್ಕಿಲ್ಲದ ಜಮೀನು ಮಂಜೂರು ಮಾಡಿ ಅದನ್ನು ನಿವೇಶನ ಕೂಡಾ ಮಾಡಿಕೊಡದೆ ಸರ್ಕಾರ ಸತಾಯಿಸುತ್ತಿರುವ ಸ್ಟೋರಿ. ಸರ್ಕಾರದ ವಿರುದ್ಧ ನಮ್ಮ ಪಬ್ಲಿಕ್ ಹೀರೋ ಗಾಂಧಿಗಿರಿ ಮಾಡಲು ಹೊರಟ ಕಥೆಯಿದು.

    ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪದ ಕೊಂಡಾಡಿ ಗ್ರಾಮ ಇದು. ಸ್ಮಶಾನಕ್ಕೂ ಲಾಯಕ್ಕಿಲ್ಲದ ಜಾಗವನ್ನು ಸರ್ಕಾರ ಕೊರಗ ಸಮುದಾಯದ 23 ಕುಟುಂಬಗಳಿಗೆ 2011ರಲ್ಲಿ ಮನೆ ಕಟ್ಟಲು ನೀಡಿತ್ತು. ಜಿಲ್ಲಾಧಿಕಾರಿ ಕಚೇರಿಯೊಳಗೆ ನಕ್ಷೆಯಲ್ಲಿ ನೋಡಿ ಜಮೀನನ್ನು ಸರ್ಕಾರ ನೀಡಿತ್ತು. ಆದರೆ ಆ ಪ್ರದೇಶ ಅಕ್ಷರಶಃ ನರಕ. ಹೊಂಡ, ಗುಂಡಿ, ಬಂಡೆಕಲ್ಲು ತುಂಬಿದ ನಿರ್ಜನ ಕಾಡು. ಜಮೀನು ಸಮತಟ್ಟು ಮಾಡಲು ಸರ್ಕಾರದಿಂದ 3 ಲಕ್ಷ ಮಂಜೂರಾದರೂ ಅದು ತಲುಪಿಲ್ಲ.

    ಸಂತ್ರಸ್ಥೆ ಹೇಳಿದ್ದು ಹೀಗೆ: ಸಂತ್ರಸ್ಥೆ ಮಹಾಲಕ್ಷ್ಮೀ ಮತ್ತು ಸುಬೇಧ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವು 7 ವರ್ಷ ನಾಯಿಗಳ ಹಾಗೆ ಸರ್ಕಾರಿ ಕಚೇರಿಗಳಿಗೆ ಸುತ್ತಾಡಿ ಸುತ್ತಾಡಿ ಸತ್ತು ಹೋಗಿದ್ದೇವೆ. ಕೊನೆಗೆ ನಮಗೆ ಆಸರೆಯಾಗಿ ಕಾಣಿಸಿದ್ದು ಡಾ. ರವೀಂದ್ರನಾಥ ಶಾನುಭಾಗ್. ಅವರ ಬಳಿ ಬಂದ ಮೇಲೂ ಕೂಡಾ ಒಂದು ಬಾರಿ ಎಲ್ಲರನ್ನು ಸಂಪರ್ಕಿಸಿ ಆಯ್ತು. ಆಗಲೂ ಕೆಲಸ ಆಗದಿದ್ದಾಗ ಶಾನುಭಾಗರೇ ಕೆಲಸ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ನಾವು ಹೆದರಲ್ಲ ಎಂದು ಹೇಳಿದ್ದಾರೆ.

    ಸರ್ಕಾರದ ಹಣಕ್ಕಾಗಿ ಕಾಯಬೇಡಿ ನೀವೇ ಹಣ ಹೊಂದಿಸಿ ಜಮೀನು ಹದ ಮಾಡಿ ಎಂದು ಆಗಿನ ಡಿಸಿ ಎಂಟಿ ರೇಜು ಸಲಹೆ ಕೊಟ್ಟಿದ್ದರು. ಅದರಂತೆ ಎರಡು ಹೊತ್ತು ಊಟಕ್ಕೆ ಕಷ್ಟಪಡುವವರು ಸಾಲ ಸೋಲ ಮಾಡಿ ಒಂದೊಂದು ಕುಟುಂಬ ಐದೈದು ಸಾವಿರ ಒಟ್ಟು ಮಾಡಿತ್ತು. ಒಂದು ಲಕ್ಷ ಮೂವತ್ತೈದು ಸಾವಿರ ಹೊಂದಿಸಿ ಜಮೀನನ್ನು ಸಮತಟ್ಟು ಮಾಡಲು ಶುರುಮಾಡಿತು.

    ಬಂಡೆಕಲ್ಲುಗಳು ತುಂಬಿದ ಬೋಳುಗುಡ್ಡದ ಒಂದು ಭಾಗವನ್ನು ಸಮತಟ್ಟು ಮಾಡಲು ಸಾಧ್ಯವಾಗಿರಲಿಲ್ಲ. ಅದಾಗಿ ನಾಲ್ಕು ವರ್ಷ ಮನವಿ ಮೇಲೆ ಮನವಿ ಕೊಡುತ್ತಾ ಬಂದರೂ ಕೆಲಸ ನಡೆಯಲಿಲ್ಲ. ಕಾದು ಕಾದು ಬೇಸತ್ತ 23 ಕುಟುಂಬದವರು ಉಡುಪಿಯ ಮಾನವಹಕ್ಕುಗಳ ಪ್ರತಿಷ್ಟಾನವನ್ನು ಸಂಪರ್ಕಿಸಿದೆ. ಈ ಸಂಸ್ಥೆ 1 ವರ್ಷ ಹೋರಾಟ ಮಾಡಿದ್ರೂ ಸರ್ಕಾರ ಕಣ್ಣು ಬಿಡಲೇ ಇಲ್ಲ. ಸರ್ಕಾರದಿಂದ ಕೆಲಸ ಆಗುವುದಿಲ್ಲ ಎಂದು ಗೊತ್ತಾದ ಮೇಲೆ ನಮ್ಮ ಪಬ್ಲಿಕ್ ಹೀರೋ ಡಾ. ರವೀಂದ್ರನಾಥ ಶಾನುಭಾಗ್ ಗಾಂಧಿಗಿರಿ ಮಾಡಲು ಹೊರಟಿದ್ದಾರೆ. ದಾನಿಗಳು ಮತ್ತು ಸಂಸ್ಥೆಯ ಸದಸ್ಯರು ಹಣ ಹಾಕಿ ಕೆಲಸ ಮಾಡಲು ನಿರ್ಧರಿಸಿದ್ದಾರೆ.

    ಶಾನುಭಾಗ್ ಹೇಳಿದ್ದು ಹೀಗೆ: ಸಣ್ಣ ನಿವೇಶನಕ್ಕಾಗಿ ಕೊರಗರು ಹೋರಾಡುವುದು ಇಷ್ಟು ಕಷ್ಟವಿದೆಯಾ? 2011ರಲ್ಲಿ ಹಕ್ಕು ಪತ್ರ ಕೊಟ್ಟರೂ 7 ವರ್ಷ ಜಮೀನು ಸಮತಟ್ಟು ಮಾಡಲು ಬೇಕಾ? ಸರ್ಕಾರ ಹೇಳುವ ಅಹಿಂದಾ ಬೆಂಬಲ ಎಷ್ಟರ ಮಟ್ಟಿಗೆ ನಂಬುವುದು? ಸರ್ಕಾರ ರಿಜೆಕ್ಟ್ ಮಾಡಲು ಯಾವುದೇ ಕಾರಣಗಳಿಲ್ಲ. ಮಾನವಹಕ್ಕುಗಳ ಪ್ರತಿಷ್ಟಾನ ಈ ಕೊರಗ ಕುಟುಂಬದ ಜೊತೆ ಕೊನೆಯವರೆಗೆ ನಿಲ್ಲುತ್ತದೆ. ಜಮೀನು ಸಮತಟ್ಟು ಮಾಡಿಸಿ, ಮನೆ ಕಟ್ಟಿ ಕುಟುಂಬಗಳು ಅಲ್ಲಿ ನೆಲೆಸುವವರೆಗೆ ಆ ನಂತರದ ಸಮಸ್ಯೆಗಳ ಬಗ್ಗೆ ಕೂಡಾ ಮಾನವ ಹಕ್ಕುಗಳ ಹೋರಾಟ ಪ್ರತಿಷ್ಟಾನ ಬೆಂಬಲವಾಗಿ ನಿಲ್ಲುತ್ತದೆ ಎಂದು ಡಾ. ರವೀಂದ್ರನಾಥ ಶಾನುಭಾಗ್ ಹೇಳಿದ್ದಾರೆ.

    23 ಕುಟುಂಬಗಳು, ಅವರ ಸಂಬಂಧಿಕರು, ಮಣಿಪಾಲ ವಿಶ್ವವಿದ್ಯಾನಿಲಯದ ಸುಮಾರು 600 ಸ್ವಯಂಸೇವಕ ಸಂಘದ ಸದಸ್ಯರು ಜಮೀನು ಸಮತಟ್ಟು ಮಾಡಲು ನಾವು ಸಿದ್ಧರೆಂದು ಘೋಷಿಸಿದ್ದಾರೆ. ಒಟ್ಟಿನಲ್ಲಿ ಈ ಭೂಮಿಯ ಮೂಲ ನಿವಾಸಿಗಳಿಗೆ ನೆಲೆಯಿಲ್ಲದಂತಾಗಿರೋದು ನಾಚಿಕೆಗೇಡಿನ ವಿಚಾರ.

    https://www.youtube.com/watch?v=mUP-1N8wHHE

     

  • ಜನರು ರಸ್ತೆಯಲ್ಲಿ ಕಸ ಹಾಕೋದನ್ನ ತಡೆಯಲು ಪಾಲಿಕೆ ಸದಸ್ಯ ಗಾಂಧಿಗಿರಿ ಶುರು ಮಾಡಿದ್ರು!

    ಜನರು ರಸ್ತೆಯಲ್ಲಿ ಕಸ ಹಾಕೋದನ್ನ ತಡೆಯಲು ಪಾಲಿಕೆ ಸದಸ್ಯ ಗಾಂಧಿಗಿರಿ ಶುರು ಮಾಡಿದ್ರು!

    ಮೈಸೂರು: ಜನರು ರಸ್ತೆಗಳಲ್ಲಿ ಕಸ ಹಾಕುವುದನ್ನು ತಡೆಯುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ಸದಸ್ಯರೊಬ್ಬರು ಗಾಂಧಿಗಿರಿ ಶುರು ಮಾಡಿದ್ದಾರೆ.

    ವಾರ್ಡ್ ನಂಬರ್ 10ರ ಪಾಲಿಕೆ ಸದಸ್ಯ ಸುನೀಲ್ ಎಂಬವರು ಜನರು ಹೆಚ್ಚಾಗಿ ಕಸ ಹಾಕುವ ಪ್ರದೇಶದಲ್ಲಿ ರಾತ್ರಿ-ಹಗಲು ಕುಳಿತು ಗಾಂಧಿಗಿರಿಯನ್ನು ಆರಂಭಿಸಿದ್ದಾರೆ. ಚೆನ್ನಾಗಿರುವ ಸ್ಥಳವನ್ನೇ ಕಸ ಹಾಕುವ ಜಾಗ ಮಾಡಿಕೊಂಡಿದ್ದ ಸ್ಥಳೀಯರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಕಸ ಹಾಕುವುದನ್ನು ಮಾತ್ರ ನಿಲ್ಲಿಸಿಲ್ಲ. ಇದರಿಂದ ಗಾಂಧಿಗಿರಿ ಶುರು ಮಾಡಿದೆ ಎಂದು ಪಾಲಿಕೆ ಸದಸ್ಯ ಸುನೀಲ್ ಅವರು ಹೇಳಿದ್ದಾರೆ.

    ನಗರದ ವಿದ್ಯಾರಣ್ಯಪುರಂನಲ್ಲಿ ಸಿಕ್ಕ-ಸಿಕ್ಕಲ್ಲಿ ಕಸ ಹಾಕುವ ಸ್ಥಳವನ್ನು ಸದಸ್ಯರೇ ಸಂಪೂರ್ಣವಾಗಿ ಸ್ವಚ್ಛ ಮಾಡಿ ರಂಗೋಲಿ ಬಿಡಿಸಿದ್ದಾರೆ. ನಂತರ ಅದೇ ಸ್ಥಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬೇಡಿ ಎಂದು ಬೋರ್ಡ್ ಹಿಡಿದು ಕುಳಿತಿದ್ದಾರೆ. ಸುನೀಲ್ ಅವರಿಗೂ ಕೆಲವು ಸ್ಥಳೀಯರು ಸಾಥ್ ನೀಡಿ ಜೊತೆಗೆ ಕುಳಿತಿದ್ದಾರೆ. ಬೆಳಗ್ಗೆಯಿಂದ ಅದೇ ಸ್ಥಳದಲ್ಲಿ ಕುಳಿತು ಜನರು ಕಸ ಹಾಕುವುದನ್ನು ತಪ್ಪಿಸುವ ಪ್ರಯತ್ನ ಆರಂಭಿಸಿದ್ದಾರೆ. ಈ ಪ್ರಯತ್ನ ಮಧ್ಯರಾತ್ರಿವರೆಗೂ ಮುಂದುವರಿಯಲಿದೆ.

    ಇದನ್ನು ಓದಿ: ಮೈಸೂರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸುಸು ಮಾಡಿದವರಿಗೆ ಸನ್ಮಾನ – ಕ್ಲೀನ್ ಸಿಟಿ ಹೆಸರುಳಿಸಲು ಅಭಿಯಾನ