Tag: formerpm

  • ತ್ರಿವರ್ಣ ಧ್ವಜ ಅರ್ಧಕ್ಕೆ ಇಳಿಸಿ ಮಾಜಿ ಪ್ರಧಾನಿಗೆ ರಾಜ್ಯ ಸರ್ಕಾರದಿಂದ ಗೌರವ

    ತ್ರಿವರ್ಣ ಧ್ವಜ ಅರ್ಧಕ್ಕೆ ಇಳಿಸಿ ಮಾಜಿ ಪ್ರಧಾನಿಗೆ ರಾಜ್ಯ ಸರ್ಕಾರದಿಂದ ಗೌರವ

    ಬೆಂಗಳೂರು: ಮಾಜಿ ಪ್ರಧಾನಿ, ಅಜಾತ ಶತ್ರು ಹಾಗೂ ಭಾರತ ರತ್ನ ಪುರಸ್ಕೃತ ಅಟಲ್ ಬಿಹಾರಿ ನಿಧನರಾದ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರದಿಂದ ಅವರಿಗೆ ಗೌರವ ಸೂಚಿಸಲಾಯಿತು.

    ವಿಧಾನಸೌಧ, ಹೈಕೋರ್ಟ್, ಸರ್ಕಾರಿ ಕಚೇರಿಗಳ ಮೇಲಿನ ತ್ರಿವರ್ಣ ಧ್ವಜ ಅರ್ಧಕ್ಕೆ ಇಳಿಸಿ ಗೌರವ ಸಲ್ಲಿಸಲಾಯಿತು. ಅಲ್ಲದೇ ಕರ್ನಾಟಕ ಸರ್ಕಾರದಿಂದ ಶ್ರದ್ಧಾಂಜಲಿ ಕೂಡ ಅರ್ಪಿಸಲಾಯಿತು.

    ರಾಜ್ಯ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಹಿರಿಯ ನಾಯಕ ರಾಮಚಂದ್ರೇಗೌಡ, ಮಾಜಿ ಡಿಸಿಎಂ ಆರ್.ಅಶೋಕ್, ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆದರೆ ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಟ್ಟಿನಲ್ಲಿ 9 ವಾರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅಟಲ್ ಜಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.

    ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಒಟ್ಟಿನಲ್ಲಿ ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅವಕಾಶ ಸಿಕ್ಕರೆ ಖಂಡಿತ ಎಚ್‍ಡಿಡಿ ಆಸೆ ನೆರವೇರಿಸುತ್ತೇನೆ- ಪ್ರಜ್ವಲ್ ರೇವಣ್ಣ

    ಅವಕಾಶ ಸಿಕ್ಕರೆ ಖಂಡಿತ ಎಚ್‍ಡಿಡಿ ಆಸೆ ನೆರವೇರಿಸುತ್ತೇನೆ- ಪ್ರಜ್ವಲ್ ರೇವಣ್ಣ

    ಹಾಸನ: ಲೋಕಸಭೆಗೆ ಸ್ಪರ್ಧಿಸುವ ಕುರಿತು ಎಚ್‍ಡಿಡಿ ಅವರು ನನ್ನ ಬಳಿ ಏನೂ ಹೇಳಿಲ್ಲ. ದೇವರ ಪೂಜೆ ಮಾಡಿಸಿ ಹೊರ ಬರುತ್ತಿದ್ದಂತೆಯೇ ಒಳ್ಳೆಯ ಸುದ್ದಿ ಕೇಳಿದ್ದೇನೆ. ಒಂದು ವೇಳೆ ಅಂತಹ ಸಂದರ್ಭ ಬಂದ್ರೆ ಖಂಡಿತವಾಗಿಯೂ ಅವರ ಆಸೆ ನೆರವೇರಿಸುತ್ತೇನೆ ಅಂತ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.

    ನಗರದ ಹರದನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕ್ಷೇತ್ರ ಎನ್ನುವುದರ ಕುರಿತು ಇದುವರೆಗೂ ಯಾವುದೇ ಚರ್ಚೆ ಆಗಿಲ್ಲ. ಯಾವ ಕ್ಷೇತ್ರವೇ ಆಗಲಿ. ದೇವೇಗೌಡ ಅವರು ಏನು ಆಶೀರ್ವಾದ ಮಾಡುತ್ತಾರೆಯೋ ಅದನ್ನು ಸ್ವೀಕರಿಸಲು ನಾನು ತಯಾರಾಗಿದ್ದೇನೆ. ಅವರು ಏನೇ ಅವಕಾಶ ಕೊಟ್ಟರೂ ಈ ರಾಜ್ಯದ ಜನತೆಗೋಸ್ಕರ ದುಡಿಯುತ್ತೇನೆ ಅಂದ್ರು.

    ಪುರಸಭೆ ಚುನಾವಣೆಯಲ್ಲಿ ಅತೀ ಹೆಚ್ಚಿನ ಸೀಟುಗಳನ್ನು ಪಡೆದು ಬಹುತ ಸಾಧಿಸಬೇಕೆಂಬುದು ನಮ್ಮ ಆಶಯವಾಗಿದೆ. ಪ್ರತಿಯೊಂದು ಚುನಾವಣೆಯೂ ನಮಗೆ ಅತಿ ಮುಖ್ಯವಾದುದಾಗಿದೆ. ವಿಧಾಸನಭೆ, ಪುರಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಅಥವಾ ಸಂಸದರ ಚುನಾವಣೆಯೇ ಇರಬಹುದು. ಹೀಗೆ ಪ್ರತಿಯೊಂದು ಚುನಾವಣೆಯೂ ಬಹುಮುಖ್ಯವಾಗಿದ್ದು, ಇದಕ್ಕಾಗಿ ಶ್ರಮ ವಹಿಸುತ್ತೇನೆ. ಇದನ್ನೂ ಓದಿ: ಲೋಕಸಭಾ ಚುನಾವಣಾ ಸಮರ – ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಸ್ಪರ್ಧೆ ನಿಶ್ಚಿತ

    ಇದೇ ವೇಳೆ ಮಂಡ್ಯದಲ್ಲಿ ಜನರು ಪ್ರಜ್ವಲ್ ರೇವಣ್ಣ ಅವರು ಇಲ್ಲೇ ಸ್ಪರ್ಧಿಸಬೇಕೆಂದು ಕೇಳಿಕೊಳ್ಳುವುದಕ್ಕೆ ಪ್ರತಿಕ್ರಿಯಿಸಿದ ಅವರು, ಮಂಡ್ಯ ಜನತೆಗೆ ಮೊದಲು ನಾನು ಧನ್ಯವಾದ ತಿಳಿಸುತ್ತೇನೆ. ಯಾಕಂದ್ರೆ ನಾನು ಆ ಜಿಲ್ಲೆಗೆ ಅಥವಾ ಕ್ಷೇತ್ರಕ್ಕೆ ಸಂಬಂಧಪಡದೇ ಇದ್ದರೂ ಕೂಡ ಅಲ್ಲಿನ ಜನತೆ 7 ಸೀಟು ಕೊಟ್ಟು ಇಂದು ನಮಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಆ ಜಿಲ್ಲೆಯ ಜನತೆಗೆ ನಾನು ಯಾವತ್ತೂ ಚಿರಋಣಿಯಾಗಿರುತ್ತೇನೆ. ಒಂದು ವೇಳೆ ಅದೇ ಕ್ಷೇತ್ರದಲ್ಲಿ ಅವಕಾಶ ಸಿಕ್ಕರೇ ಅದು ನನ್ನ ಪುಣ್ಯ, ಖಂಡಿತವಾಗಿಯೂ ಅದನ್ನು ನಾನು ಸ್ವೀಕರಿಸುತ್ತೇನೆ ಅಂತ ಹೇಳಿದ್ರು.

    ಒಟ್ಟಿನಲ್ಲಿ ದೊಡ್ಡವರ ನಿರ್ಧಾರಕ್ಕೆ ನಾನು, ನಮ್ಮ ನಾಯಕರು ಹಾಗೂ ಕಾರ್ಯಕರ್ತರೆಲ್ಲರೂ ಬದ್ಧರಾಗಿರುತ್ತೇವೆ ಅಂತ ಅವರು ತಿಳಿಸಿದ್ರು. ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://www.youtube.com/watch?v=PPxd3hiJGY4