Tag: former Prime Minister

  • ಮಾಜಿ ಪ್ರಧಾನಿಗೆ ಸಿಕ್ಕಿದೆ 7 ಟಾಪ್ ಗೌರವಗಳು- ನಿಭಾಯಿಸಿದ ಹುದ್ದೆಗಳು ಎಷ್ಟು ಗೊತ್ತೆ?

    ಮಾಜಿ ಪ್ರಧಾನಿಗೆ ಸಿಕ್ಕಿದೆ 7 ಟಾಪ್ ಗೌರವಗಳು- ನಿಭಾಯಿಸಿದ ಹುದ್ದೆಗಳು ಎಷ್ಟು ಗೊತ್ತೆ?

    ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯರಾಗಿದ್ದ ವಾಜಪೇಯಿ ಅವರಿಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ. ಅಷ್ಟೇ ಅಲ್ಲದೇ ಅವರು ಹಲವು ಹುದ್ದೆಗಳುನ್ನು ಅವರು ನಿಭಾಯಿಸಿದ್ದಾರೆ. ಹೀಗಾಗಿ ಇಲ್ಲಿ ವಾಜಪೇಯಿ ಅವರಿಗೆ ಸಿಕ್ಕಿದ ಹುದ್ದೆಗಳು ಮತ್ತು ಪ್ರಶಸ್ತಿಗಳ ಕಿರು ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಪ್ರಶಸ್ತಿಗಳು:
    * 1992: ಪದ್ಮವಿಭೂಷಣ
    * 1993: ಕಾನ್ಪುರ ವಿವಿಯಿಂದ ಗೌರವ ಡಾಕ್ಟರೇಟ್
    * 1994: ಲೋಕಮಾನ್ಯ ತಿಲಕ್ ಪ್ರಶಸ್ತಿ
    * 1994: ಅತ್ಯುತ್ತಮ ಸಂಸದೀಯ ಪಟು ಪ್ರಶಸ್ತಿ
    * 1994: ಭಾರತ ರತ್ನ ಪಂಡಿತ್ ಗೋವಿಂದ ವಲ್ಲಭ ಪಂತ್ ಪ್ರಶಸ್ತಿ
    * 2015: ಭಾರತ ರತ್ನ ಗೌರವ
    * 2015: ಬಾಂಗ್ಲಾ ಸರ್ಕಾರದಿಂದ ‘ಲಿಬರೇಶನ್ ಆಫ್ ವಾರ್ ಪ್ರಶಸ್ತಿ ( ಬಾಂಗ್ಲಾದೇಶ ಸರ್ಕಾರ ನೀಡುವ ಅತ್ಯುತ್ತನ ನಾಗರಿಕ ಗೌರವ)

    ನಿಭಾಯಿಸಿದ ಹುದ್ದೆಗಳು

    * 1951: ಭಾರತೀಯ ಜನಸಂಘದ ಸಂಸ್ಥಾಪಕ ಸದಸ್ಯ
    * 1957: ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆ(ಮೂರು ಕಡೆ ಸ್ಪರ್ಧೆ, ಮಥುರಾ, ಲಕ್ನೋದಲ್ಲಿ ಸೋಲು. ಉತ್ತರ ಪ್ರದೇಶದ ಬಲ್‍ರಂಪುರ ಕ್ಷೇತ್ರದಿಂದ ಆಯ್ಕೆ ಆಯ್ಕೆ, ಜನಸಂಘ ಪಕ್ಷ)
    * 1957-77: ಭಾರತೀಯ ಜನಸಂಘದ ಸಂಸದೀಯ ಸಮಿತಿಯ ನಾಯಕ
    * 1962: ಲೋಕಸಭಾ ಚುನಾವಣೆಯಲ್ಲಿ ಸೋಲು
    * 1962: ರಾಜ್ಯಸಭೆಯ ಸದಸ್ಯನಾಗಿ ಆಯ್ಕೆ
    * 1966: ಸರ್ಕಾರದ ಭರವಸೆಗಳ ಕುರಿತಾದ ಸಮಿತಿಯ ಅಧ್ಯಕ್ಷ

    * 1967-71 ಎರಡನೇ ಬಾರಿಗೆ ಲೋಕಸಭೆಗೆ ಆಯ್ಕೆ (ಬಲ್‍ರಂಪುರ ಕ್ಷೇತ,ಜನಸಂಘ ಪಕ್ಷ್ರ)
    * 1967-70: ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ
    * 1968-73: ಭಾರತೀಯ ಜನಸಂಘದ ಅಧ್ಯಕ್ಷ
    * 1971-77 ಲೋಕಸಭೆಗೆ ಮೂರನೇ ಬಾರಿ ಆಯ್ಕೆ(ಗ್ವಾಲಿಯರ್ ಮಧ್ಯಪ್ರದೇಶ ಜನಸಂಘ ಪಕ್ಷ)
    * 1977-80: ಲೋಕಸಭೆಗೆ ನಾಲ್ಕನೇಯ ಬಾರಿ ಆಯ್ಕೆ(ದೆಹಲಿ, ಜನತಾ ಪಕ್ಷದಿಂದ ಆಯ್ಕೆ)

    * 1977-79: ಮೋರಾರ್ಜಿ ದೇಸಾಯಿ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆ
    * 1977-80: ಜನತಾ ಪಕ್ಷದ ಸಂಸ್ಥಾಪಕ ಸದಸ್ಯ
    * 1980-84: ಲೋಕಸಭೆಗೆ ಐದನೇ ಬಾರಿ ಆಯ್ಕೆ(ದೆಹಲಿ, ಬಿಜೆಪಿಯಿಂದ ಆಯ್ಕೆ)
    * 1980-86: ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾಗಿ ನೇಮಕ
    * 1986 : ರಾಜ್ಯಸಭೆ ಸದಸ್ಯರಾಗಿ ನೇಮಕ

    * 1991: ಆರನೇ ಬಾರಿ ಲೋಕಸಭೆಗೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1991-93: ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ
    * 1993-96: ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ, ಲೋಕಸಭೆಯ ವಿರೋಧ ಪಕ್ಷದ ನಾಯಕ
    * 1996: ಏಳನೇ ಬಾರಿ ಲೋಕಸಭೆಗೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1996 ಮೇ.16: ಪ್ರ್ರಧಾನಿಯಾಗಿ ನೇಮಕ. 13 ದಿನಗಳಲ್ಲಿ ಸರ್ಕಾರ ಪತನ

    * 1996-97: ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿ ನಿರ್ವಹಣೆ* 1998: ಎಂಟನೇ ಬಾರಿಗೆ ಲೋಕಸಭೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1998-99: ಎರಡನೇ ಬಾರಿ ಪ್ರಧಾನಿಯಾಗಿ ನೇಮಕ
    * 1999: ಒಂಭತ್ತನೆ ಬಾರಿ ಲೋಕಭೆಗೆ ಆಯ್ಕೆ (ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 1999 ಅಕ್ಟೋಬರ್ 13 ರಿಂದ 2004 ಮೇ 13ರವರೆಗೆ ಅಧಿಕಾರ
    * 2004: ಹತ್ತನೇ ಬಾರಿ ಲೋಕಸಭೆಗೆ ಆಯ್ಕೆ(ಲಕ್ನೋ ಕ್ಷೇತ್ರ. ಉತ್ತರಪ್ರದೇಶ)
    * 2005: ರಾಜಕೀಯದಿಂದ ನಿವೃತ್ತಿ

    https://youtu.be/RuoTJWHKNDY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜಕಾರಣದಲ್ಲಿ ಉತ್ತುಂಗದಲ್ಲಿ ಕಾಣುವ ಮೊದಲನೇ ವ್ಯಕ್ತಿ ವಾಜಪೇಯಿ: ಹೆಚ್‍ಡಿಡಿ

    ರಾಜಕಾರಣದಲ್ಲಿ ಉತ್ತುಂಗದಲ್ಲಿ ಕಾಣುವ ಮೊದಲನೇ ವ್ಯಕ್ತಿ ವಾಜಪೇಯಿ: ಹೆಚ್‍ಡಿಡಿ

    ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅಟಲ್ ಬಿಹಾರ್ ವಾಜಪೇಯಿಯವರು ರಾಜಕಾರಣದಲ್ಲಿ ಉತ್ತುಂಗದಲ್ಲಿ ಕಾಣುವ ಮೊದಲನೇ ವ್ಯಕ್ತಿಯೆಂದು ಕೊಂಡಾಡಿದ್ದಾರೆ.

    ಭಾವುಕರಾದ ಎಚ್‍ಡಿಡಿ:
    ವಾಜಪೇಯಿಯವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ಆಘಾತವಾಗಿದೆ. 4 ದಶಕಗಳ ಕಾಲ ರಾಜಕೀಯದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಹೊಂದಿ ಇಂದು ತಮ್ಮ ಪಯಣವನ್ನು ಮುಕ್ತಗೊಳಿಸಿದ್ದಾರೆ. ಅವರು ವಿದೇಶಾಂಗ ಮಂತ್ರಿಯಾಗಿ, ಪ್ರಧಾನಿಯಾಗಿ ರಾಷ್ಟ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಾರೆ.

    ಅವರೊಬ್ಬ ಶ್ರೇಷ್ಠ ನಾಯಕರು. ಅವರ ಭಾಷಣ ಕೇಳಲು ವಿರೋಧ ಪಕ್ಷದಲ್ಲಿದ್ದ ನಾನು ಸ್ವತಃ ತೆರಳುತ್ತಿದ್ದೆ. ಅವರ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ತನ್ನ ಶತ್ರುವನ್ನು ಸಹ ಎಂದಿಗೂ ಕಟುವಾಗಿ ಮಾತನಾಡಿಸಿದ ವ್ಯಕ್ತಿ ಅವರಲ್ಲ. ನಾನು ಪ್ರಧಾನಿಯಾಗಿದ್ದಾಗ ಲೋಕಸಭಾ ಕಾರ್ಯಕಲಾಪಕ್ಕೆ ಎಂದಿಗೂ ಅಡ್ಡಿಪಡಿಸಿರಲಿಲ್ಲ. ಯುದ್ಧ ಸಾಮಗ್ರಿ ಖರೀದಿ ವೇಳೇ ನನ್ನ ಸರ್ಕಾರದ ಪರ ನಿಂತಿದ್ದರು. ಅಲ್ಲದೇ ನಾನು ರಾಜೀನಾಮೆ ಕೊಡುವ ಸಮಯ ಬಂದಾಗ, ನೀವು ನಿಶ್ಚಂತೆಯಿಂದಿರಿ ನಾನು ನಿಮ್ಮ ಸ್ಥಾನವನ್ನು ಉಳಿಸಿಕೊಡುತ್ತೇನೆಂದು ಪಕ್ಷದ ಮುಖಂಡರ ಮನವೊಲಿಸಿದ ಮಹಾನ್ ವ್ಯಕ್ತಿ ವಾಜಪೇಯಿ.

    ಅಟಟಲ್ ಬಿಹಾರಿ ವಾಜಪೇಯಿಯವರು ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆದ ವ್ಯಕ್ತಿಯಾಗಿದ್ದಾರೆ. ಅಲ್ಲದೇ ಅವರು ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ಸಂಬಂಧ ಉತ್ತಮ ಪಡಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಅಲ್ಲದೇ ಲಾಹೋರ್‍ಗೂ ತೆರಳಿ ಮುಷರಫ್‍ರೊಂದಿಗೆ ಮಾತುಕತೆಯನ್ನು ಮಾಡಿದ್ದರು. ಆದರೆ ಅವರ ಪ್ರಯತ್ನ ಸಫಲವಾಗಲಿಲ್ಲ. ಪಾಕಿಸ್ತಾನ ತನ್ನ ಕುತಂತ್ರದಿಂದ ಯುದ್ಧ ಮಾಡಿತು. ಆದರೆ ನಮ್ಮ ಶಕ್ತಿ ಏನೆಂದು ಕಾರ್ಗಿಲ್ ಯುದ್ಧದ ಮೂಲಕ ಪಾಕಿಸ್ತಾನಕ್ಕೆ ತೋರಿಸಿ ಕೊಟ್ಟಿದ್ದರು.

    ನಾನು ಪ್ರಧಾನಿಯಾಗಿದ್ದಾಗ ಅಣು ಪರೀಕ್ಷೆ ನಿರ್ಧಾರಕ್ಕೆ ಅನುಮತಿ ನೀಡಿರಲಿಲ್ಲ. ಆದರೆ ಅವರು ಅದನ್ನು ಮಾಡಿಸಿ ತೋರಿಸಿ, ಎಲ್ಲಾ ರಾಷ್ಟ್ರಗಳಲ್ಲೂ ಭಯ ಹುಟ್ಟಿಸುವಂತೆ ಮಾಡಿದ್ದರು. ರಾಜಕಾರಣ ಹೇಗೆ ನಡೆಸಬೇಕು ಅನ್ನೋದನ್ನ ಅವರ ಗೋದ್ರಾ ಪ್ರಕರಣವೇ ಸಾಕ್ಷಿಯಾಗಿದೆ. ಖುದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜಧರ್ಮ ಪಾಲನೆ ಮಾಡಿಲ್ಲ ಅಂತ ಹೇಳಿದ್ದರು. ಅದು ವಾಜಪೇಯಿಯವರ ವ್ಯಕ್ತಿತ್ವ, ಇಂದು ನಮ್ಮನ್ನೆಲ್ಲಾ ಅವರು ಬಿಟ್ಟುಹೋಗಿದ್ದಾರೆ ವಿಷಾದ ವ್ಯಕ್ತಪಡಿಸಿದರು.

    ಅಟಲ್ ಬಿಹಾರಿ ವಾಜಪೇಯಿಯವರು ದೇಶಕ್ಕೆ ಅಪಾರ ಕೊಡಗೆಯನ್ನು ನೀಡಿದ್ದಾರೆ. ಅವರು ಜಾತಿ, ಧರ್ಮ ಎನ್ನದೇ ಕೇವಲ ಭಾರತೀಯರ ಅಭಿವೃದ್ಧಿಗೆ ಶ್ರಮಿಸಿದ್ದರು. ಯಾರ ಮನಸ್ಸನ್ನು ನೋಯಿಸಬಾರದು ಅನ್ನುವುದು ಅವರ ಆಶಾವಾದವಾಗಿತ್ತು. ನನ್ನ ಸರ್ಕಾರವನ್ನು ಉಳಿಸಲು ಕೊನೆ ಕ್ಷಣದವರೆಗೂ ಪ್ರಯತ್ನ ಪಟ್ಟವರು ಅಟಲ್ ಜೀ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ದೇವರು ಅವರ ಕುಟುಂಬಕ್ಕೆ ಅಗಲಿಕೆ ತುಂಬುವ ಶಕ್ತಿ ನೀಡಲಿ, ನಾನು ಸಹ ದೆಹಲಿಗೆ ಪ್ರಯಾಣ ಬೆಳೆಸಿ, ಅವರ ಅಂತಿಮ ದರ್ಶನ ಮಾಡಿಕೊಳ್ಳುತ್ತೇನೆಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿಯ ಕವಿ ಸಮಯ: ಕೇಳಿ ಆ ಮಧುರ ಕಂಠದಲಿ ಕವಿತೆ- ವಿಡಿಯೋ ನೋಡಿ

    ವಾಜಪೇಯಿಯ ಕವಿ ಸಮಯ: ಕೇಳಿ ಆ ಮಧುರ ಕಂಠದಲಿ ಕವಿತೆ- ವಿಡಿಯೋ ನೋಡಿ

    ಹಾರ್ ನಹೀಂ ಮಾನೂಂಗಾ, ರಾರ್ ನಯೀ ಥಾನುಂಗಾ ಅಂದವರು ವಾಜಪೇಯಿ. ಗೀತ್ ನಹೀ ಗಾತಾ ಹೂಂ ಅಂದವ್ರೂ ಅವರೇ, ಗೀತ್ ನಯಾ ಗಾತಾ ಹೂಂ ಅಂತಾ ಹೇಳಿದವರು ಅದೇ ಅಟಲ್‍ಜೀ. ಭಾಷಣಕ್ಕೆ ನಿಂತ್ರೆ ಸ್ಪಟಿಕದಂತೆ ಸಿಡಿಯುವ ಅವರ ಸಾಲುಗಳನ್ನ ಹೇಗೆ ತಾನೆ ಮರೆಯೋಕೆ ಸಾಧ್ಯ..? ರಾಜಕೀಯದಲ್ಲಿ ಅಟಲ್‍ಜೀ ಸರ್ವೋತ್ತಮ ನಾಯಕನಾಗಿ ಎಲ್ಲರಿಂದ ಮೆಚ್ಚುಗೆ ಗಳಿಸಲು ಅವರೊಳಗಿದ್ದ ಒಬ್ಬ ಸಂವೇದನಾಶೀಲ ಕವಿ ಕೂಡಾ ಕಾರಣ. ಅವರು ನಮ್ಮಿಂದ ದೂರವಾದರೂ ಅವರ ಕವಿತೆಗಳು, ಪ್ರತಿಭಟನೆಯ ಸಾಲುಗಳು ಸದಾ ಅಟಲ್‍ಜೀ ಅವರನ್ನ ನಮ್ಮ ಹತ್ತಿರದಲ್ಲೇ ಇರಿಸುತ್ತವೆ. ಕವಿಯಾಗಿ ವಾಜಪೇಯಿ ನಮ್ಮೊಂದಿಗೆ ಹೇಗಿದ್ರು ಅನ್ನೋದನ್ನು ಹೇಳುತ್ತಾ ಅವರಿಗೆ ನಮ್ಮದೊಂದು ನುಡಿ ನಮನ ಇದು.

    ಇತ್‍ನಾ ಕಾಫೀ ಹೈ, ಅಂತಿಮ್ ದಸ್ತಕ್ ಪರ್
    ಖುದ್ ದರ್ವಾಜಾ ಖೋಲೇ…
    ಅಪ್ನೇ ಹೀ ಮನ್ ಸೇ ಕುಛ್ ಬೋಲೇ…

    (ಇಷ್ಟು ಮಾತ್ರವೇ ನನ್ನ ಇಚ್ಛೆ.. ಕೊನೆಯ ಕ್ಷಣಕ್ಕೆ ಬಾಗಿಲು ಬಡಿದ ದನಿ ಕೇಳಿದಾಗ, ನಾನೇ ಹೋಗಿ ಬಾಗಿಲು ತೆರೆಯುವೆ.. ನನ್ನ ಮನದೊಂದಿಗೇ ಒಂದಿಷ್ಟು ಮಾತನಾಡುವೆ.)

    ದೇಶದ ಪ್ರಧಾನಮಂತ್ರಿ ಹುದ್ದೆವರೆಗೆ ಏರಿದ್ರೂ, ಅಟಲ್ ಜೀ ಕೊನೆಗೂ ಕೇಳಿಕೊಂಡಿದ್ದು ಇಷ್ಟೇ. ಈ ಕವಿತೆಯನ್ನ ಕೇಳ್ತಿದ್ರೆ ಕವಿ ಮತ್ತು ಓದುಗನ ನಡುವಿನ ಅಂತರವೇ ಕರಗಿ ಹೋಗುತ್ತೆ. ವಾಜಪೇಯಿ ಅಂದ್ರೆನೇ ಹಾಗೆ, ಅವರೊಬ್ಬ ಗಾಢ ಮನಸ್ಸಿನ ಅತಿ ಸೂಕ್ಷ್ಮ ಸಂವೇದನಾಶೀಲ ಕವಿ. ಸ್ಪಟಿಕದಂತೆ ಪುಟಿಯುವ ಅವರ ಸಾಲುಗಳು ಯಾರನ್ನು ಪ್ರಭಾವಗೊಳಿಸಿಲ್ಲ ಹೇಳಿ. ಈ ವ್ಯವಸ್ಥೆ, ರಾಜಕೀಯವನ್ನ ನೋಡಿ ಹೀಗೆ ಹಾಡಿದ್ರು ಅಟಲ್ ಜೀ. ಹಾಗಂತ ಅಟಲ್‍ಜೀ ಅತ್ಯಂತ ಪ್ರತಿಭಟನಾತ್ಮಕ, ನಮ್ಮನ್ನ ಡಿಪ್ರೆಷನ್‍ಗೆ ಒಯ್ಯುವ ಕವಿ ಅಂದುಕೊಳ್ಳಬೇಡಿ. ಅವರು ಎಷ್ಟೊಂದು ಆಶಾವಾದಿ ಆಗಿದ್ರು ಅಂದ್ರೆ ನಮ್ಮನ್ನು ಹತಾಶೆಯಿಂದ ಭರವಸೆಯಡೆಗೆ ಕರೆದೊಯ್ತಿದ್ರು.

    ಹೊಸ ಗೀತೆ ಹಾಡುತ್ತೇನೆ ಅಂತಾನೇ ಅದನ್ನ ಮಾಡಿ ತೋರಿಸಿದವರು ಅಟಲ್‍ಜೀ. ಬಹುಷಃ ಬರೆದಂತೆ ಬದುಕಿದ ಅತಿ ವಿರಳ ಕವಿಗಳ ಸಾಲಿನಲ್ಲಿ ವಾಜಪೇಯಿ ಕೂಡಾ ಒಬ್ಬರು.. ತಮ್ಮ ಕವಿತೆಗಳಲ್ಲೇ ರಾಷ್ಟ್ರಪ್ರೇಮವನ್ನ ಮೆರೆಯುತ್ತಿದ್ರು. ಕೊನೆವರೆಗೂ ಕಟ್ಟಾ ಹಿಂದೂ, ರಾಷ್ಟ್ರಪ್ರೇಮಿ ಆಗಿಯೇ ಇದ್ರು. ಗಗನ್ ಮೇ ಲೆಹರ್‍ತಾ ಹೈ ಭಗವಾನ್ ಹಮಾರಾ ಅಂತ ನಮ್ಮ ಸಂಸ್ಕೃತಿಯನ್ನ ಹೆಮ್ಮೆಯಿಂದ ಹೇಳಿಕೊಂಡವರು ಅಟಲ್‍ಜೀ. ಅಷ್ಟೇ ನಮ್ಮ ಜನರ ಸ್ವಾರ್ಥವನ್ನ ಕಟುವಾಗಿ ಟೀಕಿಸಿದ್ರು.

    ಭಾರತ್ ಜಮೀನ್ ಕಾ ತುಕ್ಡಾ ನಹೀಂ,
    ಜೀತಾ ಜಾಗ್ ತಾ ರಾಷ್ಟ್ರ್ ಪುರುಷ್ ಹೇ
    ಯೇ ವಂದನ್ ಕೀ ಭೂಮಿ ಹೇ
    ಅಭಿನಂದನ್ ಕಿ ಭೂಮಿ ಹೇ
    ಯೇ ತರ್ಪಣ್ ಕೀ ಭೂಮಿ ಹೇ
    ಯೇ ಅರ್ಪಣ್ ಕೀ ಭೂಮಿ
    ಇಸ್ ಕಾ ಕಂಕರ್ ಕಂಕರ್ ಶಂಕರ್ ಹೇ
    ಇಸ್ ಕಾ ಬಿಂದು ಬಿಂದು ಗಂಗಾ ಜಲ್ ಹೇ
    ಹಮ್ ಜೀಯೇಂಗೇತೋ ಇಸ್ ಕೇ ಲಿಯೇ,
    ಹಮ್ ಮರೇಂಗೇ ತೋ ಇಸ್ ಕೇ ಲಿಯೇ..

    (ಭಾರತ ಕೇವಲ ಒಂದು ಜಮೀನಿನ ತುಂಡಲ್ಲ, ಅದು ಗೆಲ್ಲುತ್ತಾ, ಎಚ್ಚರದಿಂದಿರುವ ಜಾಗೃತ ರಾಷ್ಟ್ರ ಪುರುಷ. ಅದು ವಂದಿಸುವ ಭೂಮಿ, ಅಭಿನಂದಿಸುವ ಭೂಮಿ. ಅದು ತರ್ಪಣದ ಭೂಮಿ, ಅರ್ಪಣೆಯ ಭೂಮಿ. ಇದರ ಕಣ ಕಣದಲ್ಲಿಯೂ ಶಂಕರನಿದ್ದಾನೆ.. ಇದರ ಹನಿ ಹನಿಯಲ್ಲೂ ಗಂಗಾಜಲವಿದೆ. ನಾವು ಬದುಕುವುದಾದರೆ ಭಾರತಕ್ಕಾಗಿ, ನಾವು ಸಾಯುವುದಾದರೆ ಭಾರತಕ್ಕಾಗಿ.)

    ಪಾಂಚ್ ಹಜಾರ್ ಸಾಲ್ ಕೀ ಸಂಸ್ಕೃತಿ:
    ಗರ್ವ ಕರೇಂ ಯಾ ರೋಯೇ?
    ಸ್ವಾರ್ಥ್ ಕೀ ದೌಡ್ ಮೇ, ಕಹೀಂ ಆಜಾದಿ ಫಿರ್ ನಾ ಖೋಯೇಂ.

    (ಐದು ಸಾವಿರ ವರ್ಷಗಳ ಸಂಸ್ಕೃತಿ. ಇದರ ಮೇಲೆ ಗರ್ವ ಮಾಡಲೋ, ಇಲ್ಲಾ ಕಣ್ಣೀರು ಹಾಕಲೋ.. ಸ್ವಾರ್ಥದ ಈ ಓಟದಲ್ಲಿ ಭಾರತ ಮತ್ತೊಮ್ಮೆ ತನ್ನ ಸ್ವಾತಂತ್ರ್ಯ ಕಳೆದುಕೊಳ್ಳಲಿಕ್ಕಿಲ್ಲವೇ.?)

    ಹಲವು ರಾಜಕೀಯ ಏಳು ಬೀಳುಗಳನ್ನ ಕಂಡ ವಾಜಪೇಯಿ, ಪಾಕಿಸ್ತಾನ ಭಾರತವನ್ನು ಕೆಣಕಿದಾಗ ತಮ್ಮ ಪ್ರತಿಭಟನಾತ್ಮಕ ಸಾಲುಗಳ ಮೂಲಕವೇ ಬುದ್ಧಿ ಹೇಳಿದವರು.. ಏಕ್ ನಹೀ ದೋ ನಹೀ ಕರೋ ಬೀಸೋ ಸಮ್‍ಜೋತೆ.. ಪರ್ ಸ್ವತಂತ್ರ ಭಾರತ್ ಕಾ ಮಸ್ತಕ್ ಕಭೀ ನಹೀ ಚುಕೆಗಾ ಅಂತ ಅಮೆರಿಕಾಕ್ಕೆ ಎಚ್ಚರಿಕೆ ನೀಡಿದ್ರು. ಆಜಾದಿ ಅನ್ಮೊಲ್ ನಹೀ ಇಸ್ ಕಾ ಮೋಲ್ ಲಗಾವ್ ಅಂತ ಪಾಕಿಸ್ತಾನಕ್ಕೆ ಪಾಠ ಹೇಳಿದ್ರು.

    ಈ ಎಲ್ಲ ಸಾಲುಗಳು ವಾಜಪೇಯಿ ಅವರನ್ನ ಮತ್ತೆ ಮತ್ತೆ ನೆನಪಿಸುತ್ತವೆ. ವಾದ ಪ್ರತಿವಾದಕ್ಕೆ ಅವರ ಅರ್ಥಪೂರ್ಣ ಕವಿತೆಗಳು ಎಂಥವರನ್ನು ಎದ್ದು ನಿಲ್ಲುವಂತೆ ಮಾಡುತ್ತೆ.. ಹಾಗೆ ಅವರೊಬ್ಬ ಸಂವೇದನಾಶೀಲ ಕವಿ ಆಗಿದ್ರು.. ಅವರ ಊಂಛಾಯೀ ಅನ್ನೋ ಕವಿತೆಯಲ್ಲಿ ಒಂದು ಕಡೆ ಅವರ ಸರಳತೆಯನ್ನ ಪ್ರದರ್ಶಿದ್ದು ಹೀಗೆ..

    ಮೇರೆ ಪ್ರಭು, ಮುಝೆ ಇತ್ ನೀ ಊಂಛಾಯೀ ಕಭಿ ಮತ್ ದೇನಾ,
    ಗೈರೋಂ ಕೊ ಗಲೇ ಲಾ ಲಗಾ ಸಕೊಂ,
    ಇತ್ ನೀ ರುಖಾಯೇ ಕಭಿ ಮತ್ ದೇನಾ.

    (ಓ ಪ್ರಭು, ನನ್ನನ್ನ ಇಷ್ಟೊಂದು ಎತ್ತರದವನಾಗಿ ಎಂದೂ ಮಾಡಬೇಡ, ನನ್ನ ಜನರನ್ನ ಅಪ್ಪಿಕೊಳ್ಳಲು ಆಗದಷ್ಟು ಒಣ ಮನಸ್ಸಿನವನಾಗಿ, ಎಂದೂ ಮಾಡಬೇಡ)

    ಹಲವು ಬಾರಿ ವಾಜಪೇಯಿ ಕವಿಯಾಗಿ ಹಲವು ಸಾಲುಗಳನ್ನ ಹೇಳಿದ್ದಾರೆ, ಬರೆದಿದ್ದಾರೆ. ಬಿಜೆಪಿ ಒಡೆದು ಹೋದಾಗ ಕದಮ್ ಮಿಲಾಕರ್ ಚಲ್‍ನಾ ಹೋಗಾ ಅಂತ ಹಾಡಿದವರು ವಾಜಪೇಯಿ. ಸಿಕ್ಕ ಸಮಯದಲ್ಲಿ ಮಾನವೀಯತೆ, ಮೌಲ್ಯಗಳು ಸಂವೇದನಾಶೀಲತೆಯನ್ನ ಮೆರೆದವರು ಎಲ್ಲರ ಪ್ರೀತಿಯ ಅಟಲ್‍ಜೀ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿ ದಿನಚರಿ ಹೀಗಿರುತ್ತಿತ್ತು..!

    ವಾಜಪೇಯಿ ದಿನಚರಿ ಹೀಗಿರುತ್ತಿತ್ತು..!

    ಟಲ್ ಬಿಹಾರಿ ವಾಜಪೇಯಿ ಅವರು ಶಿಸ್ತಿನ ಸಿಪಾಯಿ, ಬೆಳಗ್ಗೆ ಹಾಸಿಗೆಯಿಂದ ಎದ್ದ ಕೂಡಲೇ ಸಾಕಷ್ಟು ದೂರದವರೆಗೆ ಕಾಲ್ನಡಿಗೆಯಲ್ಲಿ ಸುತ್ತಾಡಿ ಬರುವುದು ಅವರ ದೈನಂದಿನ ಕ್ರಮವಾಗಿತ್ತು. ಅವರ ಸಾಕು ನಾಯಿಗಳ ಜೊತೆಗೂಡಿ ಸುತ್ತಾಡುವುದು ಒಂದು ವಿಶೇಷ. ಸುತ್ತಾಟದ ಅವಧಿಯಲ್ಲಿ ಯಾರೊಂದಿಗೂ ಮಾತನಾಡದೇ ಇರುವುದು ಅವರು ಅನುಸರಿಸಿಕೊಂಡು ಬಂದ ಕ್ರಮ. (ಪ್ರಧಾನಿಯಾದ ಮೇಲೆ ಬೆಳಗಿನ ವಾಯು ಸಂಚಾರ, ಅವರ ಬಂಗಲೆಯ ಸುತ್ತಮುತ್ತಲಿನ ಆವರಣದಲ್ಲಿ ಮಾತ್ರ ಮಾಡುತ್ತಿದ್ದರು).

    ಬೆಳಗಿನ ಸುತ್ತಾಟದ ನಂತರ ವಾರ್ತಾ ಪತ್ರಿಕೆಗಳನ್ನು ಓದುವುದು ಮತ್ತು ವ್ಯಂಗ್ಯ ಚಿತ್ರಗಳನ್ನು ಆಸಕ್ತಿಯಿಂದ ನೋಡುವುದು ಅವರ ನಿತ್ಯ ಪದ್ಧತಿಯಾಗಿತ್ತು. ಮನರಂಜನೆಗಾಗಿ ಸಂಗೀತ ಕೇಳುವುದು, ಉತ್ತಮ ಚಲನಚಿತ್ರಗಳನ್ನು ನೋಡಿ ಆನಂದಿಸುವುದು ಅವರ ಅಭ್ಯಾಸ. ಓದುವ ಚಟ ಅವರಿಗೆ ಬಹಳ. ಎಲ್ಲರೂ ಈ ಚಟ ಬೆಳೆಸಿಕೊಳ್ಳಬೇಕೆಂಬುದೇ ಅವರ ಆಶಯ, ಗ್ವಾಲಿಯರ್ ನ ಸ್ವಂತ ಮನೆಯಲ್ಲಿ ಸಾರ್ವಜನಿಕ ವಾಚನಾಲಯ ಪ್ರಾರಂಭಿಸುವ ಉದ್ದೇಶವೂ ಅವರಿಗಿತ್ತು..

    ಒಂಟಿಯಾಗಿ ಕುಳಿತು ಕವನ ರಚಿಸುವುದೆಂದರೆ ಅಟರ್‍ರವರಿಗೆ ಬಹಳ ಸಂತಸ. ತಾವು ಬರೆದ ಕವನಗಳನ್ನು ಅವರು ಯಾರಿಗೂ ತೋರಿಸುತ್ತಿರಲಿಲ್ಲ. ಆದರೆ ಅವರು ತಮ್ಮ ಹುಟ್ಟುಹಬ್ಬದಂದು ಮನೆ ಮಂದಿಗೆ ತಾವು ಬರೆದ ಕವನವನ್ನು ಕೊಡುಗೆಯಾಗಿ ನೀಡುವುದನ್ನು ಒಂದು ಸಂಪ್ರದಾಯವಾಗಿ ಮಾಡಿಕೊಂಡಿದ್ದರು. ಕವನ ಬರೆಯಲಿ, ಸ್ವಯಂಸೇವಕನಾಗಿ ದುಡಿಯಲಿ, ರಾಜಕಾರಣದಲ್ಲಿ ತೊಡಗಲಿ, ಪ್ರಧಾನಿಯ ಪಟ್ಟಕ್ಕೇರಲಿ, ಇವುಗಳೆಲ್ಲವುಗಳಿಗಿಂತ ಪ್ರಮಾಣಿಕತೆಯೇ ಮುಖ್ಯ ಎನ್ನುತ್ತಾರೆ.

    ಭಾರತದ ಯಾವ ರಾಜಕೀಯ ನಾಯಕನಲ್ಲೂ ಇರದ ಮಹಾನ್ ಆದರ್ಶ ಗುಣಗಳು ಇವರಲ್ಲಿ ಮನೆ ಮಾಡಿತ್ತು. ವಾಜಪೇಯಿ ಅವರು ಯಾವುದೇ ಸ್ಥಳಕ್ಕೆ ಬಂದು ಭಾಷಣ ಮಾಡುತ್ತಾರೆಂದರೆ ಆ ಸ್ಥಳಕ್ಕೆ ಲಕ್ಷಾಂತರ ಜನ ಬಂದು ಸೇರುತ್ತಿದ್ದರು. ಅವರ ಭಾಷಣಗಳು, ಕಾವ್ಯಮಯ, ಭಾಷಣ ಅತಿಮಹತ್ವದಾಗಿ ಎದ್ದು ಕಾಣುತ್ತದೆ. ರಾಜಕೀಯ ನಾಯಕರಲ್ಲಿ ಸಾಹಿತ್ಯ ಅಡಗಿರುತ್ತದೆಂದರೆ ಅದು ವಾಜಪೇಯಿ ಅವರ ಮನದಲ್ಲಿ ಕರಗತವಾಗಿತ್ತು. ಯಾವ ಕವಿಗಿಂತಲೂ ಕಮ್ಮಿಯಿಲ್ಲ ಎನ್ನುವ ರೀತಿಯಲ್ಲಿ ಅರ್ಥಪೂರ್ಣವಾಗಿ ಸಾಹಿತ್ಯವನ್ನು, ನಮ್ಮ ಪರಂಪರೆಯನ್ನು ಗಟ್ಟಿಯಾಗಿ ಹೇಳುವ ಭರವಸೆಯ ಮುತ್ಸದ್ಧಿ ನಾಯಕರಾಗಿದ್ದರು ವಾಜಪೇಯಿ.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೊದಲ ಬಾರಿಗೆ ಕೇವಲ 13 ದಿನಗಳ ಪ್ರಧಾನಿಯಾಗಿದ್ರು ವಾಜಪೇಯಿ!

    ಮೊದಲ ಬಾರಿಗೆ ಕೇವಲ 13 ದಿನಗಳ ಪ್ರಧಾನಿಯಾಗಿದ್ರು ವಾಜಪೇಯಿ!

    ರಾಮ ಜನ್ಮ ಭೂಮಿ ಹೋರಾಟದಲ್ಲಿ ಎಲ್‍ಕೆ ಅಡ್ವಾಣಿ ದೇಶವ್ಯಾಪಿ ಸಂಚರಿಸುವ ಮೂಲಕ ಬಿಜೆಪಿಗೆ ಜನಬೆಂಬಲವನ್ನು ತಂದು ಕೊಟ್ಟಿದ್ದರು. ಈ ಹೋರಾಟಕ್ಕೆ ವಿಎಚ್‍ಪಿ ಮತ್ತು ಆರ್‍ಎಸ್‍ಎಸ್ ಬೆಂಬಲ ನೀಡಿತ್ತು. ಪರಿಣಾಮ 1994 ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳಿಸಲು ಯಶಸ್ವಿಯಾಗಿತ್ತು. 1995ರಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆದುಕೊಳ್ಳುವಲ್ಲಿ ಸಫಲವಾಯಿತು. ಮಹಾರಾಷ್ಟ್ರದಲ್ಲಿ 65 ಸ್ಥಾನ ಹಾಗೂ ಗುಜರಾತ್‍ನಲ್ಲಿ 121 ಸ್ಥಾನ ಬಿಜೆಪಿಗಳಿಸಿತ್ತು.

    ಇವೆಲ್ಲದರ ಪರಿಣಾಮ 1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 161 ಸ್ಥಾನಗಳಿಸಿದ್ದರೆ, ಕಾಂಗ್ರೆಸ್ 140, ಜನತಾದಳ 40 ಸ್ಥಾನಗಳಿಸಿತ್ತು. ಮುಂಬೈನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪ್ರಧಾನಿ ಮಾಡಲು ಒಮ್ಮತದ ನಿರ್ಣಯವನ್ನು ಕೈಗೊಳ್ಳಲಾಯಿತು.

    ವಾಜಪೇಯಿಯವರು ದೇಶದ 10ನೇ ಪ್ರಧಾನಿಯಾಗಿ ಮೇ 16, 1996ರಲ್ಲಿ ಸಂಸತ್ತಿನ ಅಶೋಕ ಹಾಲ್‍ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಅಂದು ರಾಷ್ಟ್ರಪತಿಯಾಗಿದ್ದ ಡಾ. ಶಂಕರ್ ದಯಾಳ್ ಶರ್ಮಾ ಅವರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಪ್ರಮಾಣವಚನ ಬೋಧಿಸಿದ್ದರು.

    ಅಟಲ್ ಜೊತೆಗೆ ಅಂದು ಸಿಕಂದರ್ ಭಕ್ತ್, ಡಾ.ಮುರಳಿ ಮನೋಹರ ಜೋಶಿ, ಸೂರಜ್ ಬಾನ್, ಪ್ರಮೋದ್ ಮಹಾಜನ್, ಜಸ್ವಂತ್ ಸಿಂಗ್, ಕರಿಯಾ ಮುಂಡಾ, ರಾಮ್ ಜೇಠ್ಮಲಾನಿ, ಧನಂಜಯ್ ಕುಮಾರ್, ಸುರೇಶ್ ಪ್ರಭು, ಸುಷ್ಮಾ ಸ್ವರಾಜ್ ಸೇರಿದಂತೆ ಅನೇಕರು ಸಂಪುಟ ದರ್ಜೆ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ಅಂದಿನ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಉಪರಾಷ್ಟ್ರಪತಿ ಕೆ.ಆರ್.ನಾರಾಯಣ, ಎಲ್.ಕೆ.ಅಡ್ವಾಣಿ, ವಿಜಯರಾಜೇ ಸಿಂಧಿಯಾ, ಪಿವಿ ನರಸಿಂಹ ರಾವ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಅದೇ ದಿನ ಸಂಜೆ 5 ಗಂಟೆಗೆ ಅಟಲ್ ನೇತೃತ್ವದಲ್ಲಿ ಮೊದಲ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಮಾತನಾಡಿದ ವಾಜಪೇಯಿ ಅವರು, ಸದನದಲ್ಲಿ ಬಹುಮತ ಸಾಬೀತು ಪಡಿಸಲು ನಮಗೆ ಮೇ 31ರವರೆಗೆ ಸಮಯ ನೀಡಲಾಗಿದೆ. ಬಹುಮತ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ನಾವು ಮರ್ಯಾದೆಯಿಂದ ಹಿಂದೆ ಸರಿಯುತ್ತೇವೆ. ಆದರೆ ನಾವು ಯಾವುದೇ ಕುದುರೆ ವ್ಯಾಪಾರದ ಮಾರ್ಗವನ್ನು ಅನುಸರಿಸುವುದಿಲ್ಲ. ನಮ್ಮಲ್ಲಿರುವ ಎಲ್ಲಾ ಸಾಮಥ್ರ್ಯ ಬಳಸಿ ಬಹುಮತ ಸಾಬೀತು ಮಾಡುತ್ತೇವೆ. ಆದರೆ ನಮ್ಮ ಹೋರಾಟದ ಅಂತಿಮ ಗುರಿ ಅಧಿಕಾರ ಪಡೆಯುವುದೊಂದೇ ಅಲ್ಲ. ಒಳ್ಳೆಯ ಸರ್ಕಾರ ನಡೆಸುವುದು ಕೂಡಾ ನಮ್ಮ ಉದ್ದೇಶ ಎಂದು ಹೇಳಿದ್ದರು.

    ಮುಂದುವರಿದು ಮಾತನಾಡಿದ ಅವರು, ರಾಷ್ಟ್ರ ಇಂದು ಸಂಕಷ್ಟಮಯ ಪರಿಸ್ಥಿತಿಯಲ್ಲಿದೆ. ದೇಶದ ಆರ್ಥಿಕ ಸ್ಥಿತಿ ಬಿಗಡಾಯಿಸಿದೆ. ಏಕೈಕ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಜನರು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಸ್ವಚ್ಛ, ಪ್ರಾಮಾಣಿಕ, ಸಂವೇದನಾಶೀಲ ಹಾಗೂ ಪಾರದರ್ಶಕ ಸರ್ಕಾರ ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದ್ದರು.

    ಕಳೆದ 40 ವರ್ಷಗಳಿಂದ ನಾನು ರಾಜಕಾರಣದಲ್ಲಿದ್ದೇನೆ. ನಾನು ಕುರ್ಚಿಗಾಗಿ ಅಥವಾ ಯಾವುದೇ ಪದವಿಗಾಗಿ ದುಡಿಯುತ್ತಿಲ್ಲ. ನನ್ನ ಕರ್ತವ್ಯದ ಭಾವನೆಯಿಂದ ನಾನು ರಾಷ್ಟ್ರಕ್ಕಾಗಿ, ಮಾತೃಭೂಮಿಗಾಗಿ, ಸೇವೆಗಾಗಿ, ಸಮರ್ಪಣಾ ಭಾವದಿಂದ ದುಡಿಯುತ್ತಿದ್ದೇನೆ. ರಾಷ್ಟ್ರ ಉತ್ಥಾನದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಅಂದು ಸಂಪುಟ ಸಭೆಯಲ್ಲಿ ಮಾತು ಮುಗಿಸಿದ್ದರು ಅಟಲ್ ಬಿಹಾರಿ ವಾಜಪೇಯಿ. ಆದರೆ ಸಿಕ್ಕಿದ ಅವಕಾಶದಲ್ಲಿ ಬಹುಮತ ಸಾಬೀತು ಪಡಿಸಲು ಆಗಲಿಲ್ಲ. ಹೀಗಾಗಿ 13 ದಿನಗಳಲ್ಲೇ ವಾಜಪೇಯಿ ಸರ್ಕಾರ ಬಿದ್ದು ಹೋಯಿತು.

    13 ತಿಂಗಳ ಪ್ರಧಾನಿ: 1998 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳಿಸಿತು. ಮಿತ್ರ ಪಕ್ಷಗಳನ್ನು ಸೇರಿಸಿ ಎನ್‍ಡಿಎ ಒಕ್ಕೂಟ ರಚಿಸುವ ಮೂಲಕ ಎರಡನೇ ಬಾರಿ ವಾಜಪೇಯಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಎಐಡಿಎಂಕೆ ಅಧಿನಾಯಕಿ ಜಯಲಲಿತಾ ಸರ್ಕಾರಕ್ಕೆ ನೀಡಿದ ಬಹುಮತವನ್ನು ಹಿಂತೆಗೆದ ಕಾರಣ ವಾಜಪೇಯಿ ಅವರ 13 ತಿಂಗಳ ಅಧಿಕಾರ ಅವಧಿ ಅಂತ್ಯವಾಯಿತು.

    ಕಾರ್ಗಿಲ್ ಯುದ್ದ, ಪೋಕ್ರಾನ್‍ನಲ್ಲಿ ಅಣುಬಾಂಬು ಸ್ಪೋಟ ಪರಿಣಾಮದಿಂದಾಗಿ 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 182 ಸ್ಥಾನಗಳಿಸಿತು. ಮಿತ್ರಪಕ್ಷಗಳನ್ನು ಸದಸ್ಯರನ್ನು ಸೇರಿಸಿ ಎನ್‍ಡಿಎ ಒಕ್ಕೂಟ ಲೋಕಸಭೆಯ ಒಟ್ಟು 543 ಸದಸ್ಯರಲ್ಲಿ 303 ಎನ್‍ಡಿಎ ಸದಸ್ಯರು ಆಯ್ಕೆ ಆದ್ದರಿಂದ ವಾಜಪೇಯಿ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಆಯ್ಕೆಯಾದರು.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ಯಥಾವತ್ ವಿವರ)

    https://youtu.be/c6bRPaIlo1s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ರಿಕೋದ್ಯಮಿಯೂ ಆಗಿದ್ದರು ಅಟಲ್‍ಜೀ

    ಪತ್ರಿಕೋದ್ಯಮಿಯೂ ಆಗಿದ್ದರು ಅಟಲ್‍ಜೀ

    ಟಲ್‍ಜೀಯವರು ಎಂ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ `ಪ್ರಚಾರಕ’ರಾಗಿ ನಿಂತರು. ಲಕ್ನೋ ಸಮೀಪದ ಶಾಂಡಿಲಾ ಶಾಖೆಯಲ್ಲಿ ಅವರು ಕಾರ್ಯಾರಂಭ ಮಾಡಿದರು. ಬೆಳಗಿನ ವೇಳೆಯಲ್ಲಿ `ಶಾಖೆ’ಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸುತ್ತಿದ್ದರು. ಮಧ್ಯಾಹ್ನದ ವೇಳೆಯಲ್ಲಿ ಕವನಗಳನ್ನು ರಚಿಸುತ್ತಿದ್ದರು. ಈ ಪ್ರಕಾರ ಸತತ ಒಂದು ವರ್ಷಕಾಲ ಸಂಘದ ಪ್ರಚಾರಕ್ಕಾಗಿ ಸೇವೆ ಸಲ್ಲಿಸಿದರು. ಆ ಬಳಿಕ ಅವರ ಗಮನ ಪತ್ರಿಕೋದ್ಯಮದತ್ತ ಹರಿಯಿತು.

    ಪ್ರಾರಂಭದಲ್ಲಿ `ರಾಷ್ಟ್ರಧರ್ಮ’ ಎಂಬ ಮಾಸ ಪತ್ರಿಕೆಯನ್ನು ಪಂಡಿತ ದೀನದಯಾಳ್ ಉಪಾಧ್ಯಾಯರ ಜೊತೆಗೂಡಿ ಲಕ್ನೋದಲ್ಲಿ ಪ್ರಾರಭಿಸಿದ್ದರು. ಈ ಪತ್ರಿಕೆ ಪ್ರಾರಂಭವಾಗಿದ್ದು 1947ರಲ್ಲಿ. ಈ ಪತ್ರಿಕೆಯ ಪ್ರಧಾನ ಸಂಪಾದಕರಾಗಿದ್ದರು. ಮುಂದೆ ಅಟಲ್‍ರವರ ಸಂಪಾದಕತ್ವದಲ್ಲಿ `ಪಾಂಚಜನ್ಯ’ ಎಂಬ ವಾರಪತ್ರಿಕೆ ಪ್ರಾರಂಭವಾಯಿತು. ಹೀಗೆ ಪತ್ರಿಕೋದ್ಯಮದಲ್ಲಿ ಸಾಕಷ್ಟು ಅನುಭವ ಪಡದ ನಂತರ ಅಟಲ್‍ರವರು `ಸ್ವದೇಶ’ ಮತ್ತು `ಅರ್ಜುನ್’ ಎಂಬ ಎರಡು ದೈನಿಕ ಪತ್ರಿಕೆಗಳ ಸಂಪಾದಕತ್ವದ ಹೊಣೆಗಾರಿಕೆಯನ್ನು ವಹಿಸಿಕೊಂಡರು. ಅಟಲ್‍ಜೀ ಯವರ ಸಂಪಾದಕೀಯ ತುಂಬಾ ಹರಿತವಾಗಿರುತ್ತಿತ್ತು. ಓದುಗರ ಮನಸ್ಸಿನ ಮೇಲೆ ಅದು ಹೆಚ್ಚು ಪರಿಣಾಮ ಬೀರುತ್ತಿತ್ತು ಎಂಬುದು ಆ ಕಾಲದ ವಾಚಕರ ಅನಿಸಿಕೆಯಾಗಿತ್ತು. ತೀಕ್ಷ್ಣ ಹಾಗೂ ನಿಖರವಾದ ಬರವಣಿಗೆ ಅವರದಾಗಿರುತ್ತಿತ್ತು.

    ದಿನದ ಕಾರ್ಯ ಮುಗಿದ ನಂತರ ಏಕಾಂತದಲ್ಲಿ ಕುಳಿತು ಕೊಳ್ಳುವುದು ಅವರ ಸ್ವಭಾವ. ಬಿಡುವಿನ ವೇಳೆಯಲ್ಲಿ ಸ್ನೇಹಿತರೊಂದಿಗೆ ಹರಟೆ ಹೊಡೆಯವುದು ಮತ್ತು ಸಂಜೆ ವೇಳೆಯಲ್ಲಿ ಒಳ್ಳೆಯ ಚಲನಚಿತ್ರ ನೋಡುವುದು ಅವರ ಹವ್ಯಾಸವಾಗಿತ್ತು. ಉತ್ತಮ ಚಲನಚಿತ್ರ ನೋಡುವುದು ಎಂದರೆ ಅವರಿಗೆ ಎಲ್ಲಿಲ್ಲದ ಪ್ರಾಣ. ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಪತ್ರಿಕಾರಂಗದ ಮೂಲಕ ಭಾರತೀಯರಲ್ಲಿ ರಾಷ್ಟ್ರೀಯತೆ, ಮೂಢನಂಬಿಕೆ, ಸಮಾಜದಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಪತ್ರಕರ್ತರಾಗಿ ಜನಮನಕ್ಕೆ ಅರಿವು ತಲುಪಿಸಿದರು. ಮುಂದೆ ಪ್ರಧಾನಮಂತ್ರಿಯಾದಾಗ ಅಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರು.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)

    https://www.youtube.com/watch?v=c6bRPaIlo1s

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿಯವರ ಬಾಲ್ಯದ ಅಚ್ಚರಿಯ ಮಾಹಿತಿಯಿದು!

    ವಾಜಪೇಯಿಯವರ ಬಾಲ್ಯದ ಅಚ್ಚರಿಯ ಮಾಹಿತಿಯಿದು!

    ಭಾರತದ ದೇಶದ ಮಹಾನ್ ರಾಜಕೀಯ ನಾಯಕರಾದ ಅಟಲ್‍ಜೀ ಅವರ ಜನನವಾದದ್ದು ಮಧ್ಯಪ್ರದೇಶದ ಗ್ವಾಲಿಯರ್ ನ ಶಿಂಧೆಯ ದಂಡು ಪ್ರದೇಶದಲ್ಲಿ. ಸುಸಂಸ್ಕೃತ ಮನೆತನದಲ್ಲಿ ಜನಿಸಿದರು. ಅವರು ಜನಿಸಿದ್ದು 1924ರ ಡಿಸೆಂಬರ್ 25 ರಂದು.

    ಅಟಲ್ ಅವರ ತಂದೆ ಕೃಷ್ಣಬಿಹಾರಿ ವಾಜಪೇಯಿ, ತಾಯಿ ಕೃಷ್ಣಾದೇವಿ. ತಂದೆ-ತಾಯಿ ಚಿಂತನೆ ಮಾಡಿ ಮಗುವಿಗೆ `ಅಟಲ್ ಬಿಹಾರಿ’ ಎಂದು ನಾಮಕರಣ ಮಾಡಿದರು. ಅಟಲ್ ಎಂದರೆ `ಗಟ್ಟಿ’ (ಕಾರ್ಯಸಾಧಕ) ಎಂದರ್ಥ. ಬಿಹಾರಿ ಎಂದರೆ `ವಿಚಾರ ಮಾಡುವವ’ ಎಂದರ್ಥ. ನಿಜವಾಗಿಯೂ ಒಬ್ಬ ಮಹಾನ್ ಗಟ್ಟಿ ವಿಚಾರಶೀಲ ವ್ಯಕ್ತಿಯಾಗಿದ್ದರು ಅಟಲ್ ಬಿಹಾರಿ.

    ಶಿಶುವಿನ ಚಂಚಲತೆ, ಹೊಳೆಯುವ ಕಣ್ಣುಗಳು, ದಷ್ಟ-ಪುಷ್ಟ ಶರೀರ, ಲವಲವಿಕೆಯ ಮುಖ ಸದಾ ಮುಗಳ್ನಗು ಮತ್ತು ಎಲ್ಲರೊಂದಿಗೂ ಬೆರೆಯುವ ಗುಣ ಅವರಲ್ಲಿತ್ತು. ಮಗುವನ್ನು ಒಮ್ಮೆ ನೋಡಿದರೆ ಸಾಕು ಯಾರಿಗಾದರೂ ಎತ್ತಿ ಮುದ್ದಾಡಬೇಕೆಂಬ ಆಸೆಯಾಗುತ್ತಿತ್ತು. ಹಾಗಿದ್ದರು ಅಟಲ್‍ರವರು.

    ಚಿಕ್ಕಂದಿನಿಂದಲೇ ಅಕ್ಷರದ ಜ್ಞಾನ ಬೆಳೆಸಿಕೊಳ್ಳುವ ಹಾಗೆ ಮನೆಯವರು ಪ್ರಯತ್ನಿಸುತ್ತಿದ್ದರು. ಹಾಗೇ ಬೇಗನೆ ಎಬ್ಬಿಸಿ ತಣ್ಣೀರು ಸ್ನಾನ ಮಾಡಿಸಿ ಜಪ-ತಪ, ಮಂತ್ರ ಪಠಣ, ರಾಮಾಯಣ, ಮಹಾಭಾರತ, ಗೀತೆ ಮತ್ತು ಶ್ರೀ ಮದ್ಭಾಗವತದ ಅಧ್ಯಯನದಲ್ಲಿ ತೊಡಗಿಸುತ್ತಿದ್ದರು ಮತ್ತು ಇತರೆ ಭಾಷೆಯ ಗ್ರಂಥಗಳನ್ನು ಅಭ್ಯಸಿಸಲು ಹೇಳುತ್ತಿದ್ದರು.

    ಬಾಲಕ ಅಟಲ್‍ರನ್ನು ನಂತರದ ದಿನಗಳಲ್ಲಿ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಮಾಡಿದ ಪಾಠ ತಿಳಿಯದೆ ಇದ್ದಾಗ ತನ್ನ ತಂದೆ ಸ್ವಂತ ಅಧ್ಯಾಪಕರಿರುವುದರಿಂದ ಅವರನ್ನು ಕೇಳಿ ತಿಳಿದುಕೊಳ್ಳುವುದಕ್ಕೆ ಅಟಲ್‍ಜೀ ಹಾತೊರೆಯುತ್ತಿದ್ದರು. ಶಾಲೆಗೆ ಚಕ್ಕರ್ ಹೊಡೆಯದೆ ಓದು ಮತ್ತು ಮನೆಪಾಠಗಳಲ್ಲಿ ನಿರತರಾಗಿದ್ದರು.

    ಅಟಲ್‍ರವರು ಗ್ವಾಲಿಯರ್ ನಲ್ಲಿದ್ದ ಗೋರಖಿ ವಿದ್ಯಾಲಯದ ಮಿಡಲ್ ಪರೀಕ್ಷೆ ಪಾಸು ಮಾಡಿದರು. ಅಭ್ಯಾಸದಲ್ಲಿ ಅವರು ಯಾವತ್ತು ಹಿಂದೆ ಬೀಳದವರು. ಎಲ್ಲಾ ವಿದ್ಯಾರ್ಥಿಗಳಿಗಿಂತ ಪತ್ರಿಭಾವಂತ ವಿದ್ಯಾರ್ಥಿಯಾಗಿದ್ದರು. ಹೈಸ್ಕೂಲಿನಲ್ಲಿ ನಡೆಯುವ ಚರ್ಚಾಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಜಾಣತನದ ಮಾತು ಹಾಗೂ ನಡವಳಿಕೆಗಳಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಯಾವುದೇ ಪರೀಕ್ಷೆ ಇರಲಿ ಅದರಲ್ಲಿ ಕ್ಲಾಸಿಗೆ ಪ್ರಥಮ ರ‍್ಯಾಂಕ್ ಬರುತ್ತಿದ್ದರು. ಶಾಲಾ ಪಠ್ಯಪುಸ್ತಕಗಳಿಗಿಂತ ಆಧ್ಯಾತ್ಮಿಕ, ಪೌರಾಣಿಕ, ಭಾಗವತ, ರಾಮಾಯಣ ಮತ್ತು ಮಹಾಭಾರತ ಪುಸ್ತಕಗಳ ಓದಿನಲ್ಲೇ ಅವರಿಗೆ ಹೆಚ್ಚು ಆಸಕ್ತಿ. ಕತೆ, ಕಾದಂಬರಿ ಹಾಗೂ ವಿಚಾರ ಸಾಹಿತ್ಯ ಅವರಿಗೆ ಅಚ್ಚುಮೆಚ್ಚು, ಕಬಡ್ಡಿ ಎಂದರೆ ಅತಿ ಇಷ್ಟವಾದ ಆಟ. ಅವರೊಬ್ಬ ಉತ್ತಮ ಕಬ್ಬಡಿ ಪಟುವೂ ಹೌದು.

    ತಂದೆಯ ಕವಿತೆಗಳನ್ನು ಕೇಳಿ ಕೇಳಿ ತಾನು ಪ್ರಾಸಬದ್ಧವಾಗಿ ಹೇಳತೊಡಗಿದ, ಮಾತಿನ ಗಾದೆ, ಹೋಲಿಕೆ, ತಿಳಿಹಾಸ್ಯ, ವ್ಯಂಗ್ಯಗಳನ್ನು ಹೇಗೆ ಪ್ರಯೋಗಿಸಬೇಕೆಂಬುದನ್ನು ತಂದೆಯಿಂದ ಕಲಿತರು. ಹಾಗೇ ನಮ್ಮ ದೇಶದ ಹಬ್ಬ ಹರಿದಿನ ಸಾಂಸ್ಕೃತಿಕ ಪರಂಪರೆಯನ್ನು ಗಟ್ಟಿಯಾಗಿ ಮೈಗೂಡಿಕೊಂಡು ಬೆಳೆದರು.

    ಅಟಲ್ ಜೀ ಅವರ ಬಾಲ್ಯದ ದಿನಗಳನ್ನು ಮೆಲುಕು ಹಾಕಿದಾಗ ಮನೆಯಲ್ಲಿ ಶುದ್ಧ ಭಾರತೀಯ ವಾತಾವರಣ, ಸುಸಂಸ್ಕೃತ, ಆಧ್ಯಾತ್ಮಕದ ಪರಿಸರ, ಆರ್ಯ ಸಮಾಜದ ನಾಯಕರು ಮತ್ತು ಕಾರ್ಯಕರ್ತರು ತಂದೆಯನ್ನು ಕಾಣಲು ಸದಾ ಬರುತ್ತಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೂ ಆಗಮಿಸುತ್ತಿದ್ದರು. ವಂಶಾನುಕ್ರಮ ಮತ್ತು ಮನೆಯ ವಾತಾವರಣದ ಉಜ್ವಲ ರಾಷ್ಟ್ರಭಕ್ತಿ ಅವರಿಗೆ ದೊರೆತ ಪರಿಸರ ಅವರ ವ್ಯಕ್ತಿತ್ವದ ಮೇಲೆ ಸಾಕಷ್ಟು ಪರಿಣಾಮವನ್ನುಂಟು ಮಾಡಿತು. ಇದುವೇ ಮುಂದೆ ದೇಶ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿತು.

    ಅಟಲ್ ಹೈಸ್ಕೂಲ್ ದಿನಗಳಿಂದಲೂ ಉತ್ತಮ ಭಾಷಣಕಾರರಾಗಿದ್ದರು. ಭಾಷಣಕಾರನ ಸತ್ವ, ಕತೆಗಾರಿಕೆ ಮತ್ತು ಗುಣಗಳು ಅಟಲ್‍ಗೆ ಅವರ ತಂದೆ ಮತ್ತು ತಾತನಿಂದ ಬಳುವಳಿಯಾಗಿ ಹರಿದು ಬಂದಿದೆ ಎನ್ನಬಹುದು. ಏಕೆಂದರೆ ಅವರಿಬ್ಬರೂ ಕೂಡ ಉತ್ತಮ ವಾಗ್ಮಿಗಳಾಗಿದ್ದರು.

    ಕಾವ್ಯಮಯವಾದ ಭಾಷೆ, ಪ್ರಾಸಬದ್ಧ ಮಾತು, ಚುರುಕು ಮತ್ತು ಚಾಟಿಯೇಟಿನಂತಹ ನುಡಿ ಅವರ ಮಾತುಗಾರಿಕೆಯಾಗಿತ್ತು. ಶಾಲಾ ದಿನಗಳಲ್ಲಿ ತಮ್ಮ ಸಹಪಾಠಿಗಳೊಂದಿಗೆ ಉತ್ತಮ ಸ್ಪರ್ಧೆಯನ್ನು ಮಾಡುತ್ತ ಬೆಳೆದ ಇವರಿಗೆ ಮನೆಯ ಕೌಟುಂಬಿಕ ವಾತಾವರಣ ವ್ಯಕ್ತಿತ್ವ ನಿರೂಪಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)

    https://www.youtube.com/watch?v=gopOVPqsjmU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೈಕಲ್ ಸವಾರಿ ಪ್ರಿಯರಾಗಿದ್ರು ಅಟಲ್

    ಸೈಕಲ್ ಸವಾರಿ ಪ್ರಿಯರಾಗಿದ್ರು ಅಟಲ್

    1971ರಲ್ಲಿ ಅಟಲ್ ಅವರು ಸಂಸತ್ ಸದಸ್ಯರಾಗಿದ್ದರು. ಗ್ವಾಲಿಯರ್ ಗೆ ಆಗಮಿಸಿದಾದ ರೈಲು ನಿಲ್ದಾಣದಿಂದ ನೇರವಾಗಿ ಟಾಂಗಾದಲ್ಲಿ ಮನೆಗೆ ಹೋದರು. ಗ್ವಾಲಿಯರ್ ನಲ್ಲಿ ಸ್ನೇಹಿತರ ಮತ್ತು ಸಹೋದರಿ ಮನೆಗೆ ಹೋಗಲು ತನ್ನ ಮನೆಯಲ್ಲಿ ಅಣ್ಣನಾದ ಪ್ರೇಮ ಬಿಹಾರಿ ಅವರ ಸೈಕಲ್ಲೊಂದಿತ್ತು. ಅದನ್ನೇರಿ ಸಹೋದರಿ ಮನಗೆ ಹೊರಟೇ ಬಿಟ್ಟರು. ಮಾರ್ಗ ಮಧ್ಯದಲ್ಲಿ ಗ್ವಾಲಿಯರ್ ಸಂಸ್ಥಾನದ ರಾಜಮಾತಾ ವಿಜಯ ರಾಜೇ ಸಿಂಧಿಯಾ ಅಟಲ್ ಜೀ ಸೈಕಲ್ ತುಳಿಯುತ್ತಾ ಹೋಗುವುದನ್ನು ಗಮನಿಸಿದರು.

    ತಮ್ಮ ಸಹಾಯಕನನ್ನು ಕಳುಹಿಸಿ ಅಟಲ್ ಅವರನ್ನು ಒಂದು ಕ್ಷಣ ನಿಲ್ಲುವಂತೆ ತಿಳಿಸಿದ್ದರು. ಏನಿದು ಅವಸ್ಥೆ. ನೀವು ಮೊದಲೇ ತಿಳಿಸಿದರೆ ನಾನು ಕಾರನ್ನು ಕಳುಸುತ್ತಿದ್ದೆ ಎಂದರು ರಾಜಮಾತಾ. ಅದಕ್ಕೆ ಉತ್ತರಿಸಿದ ಅಟಲ್ ಅವರು ಹೇಳಿದರು, ಪರವಾಗಿಲ್ಲ ನನಗೇನೂ ತೊಂದರೆ ಇಲ್ಲ. ಗ್ವಾಲಿಯರ್ ನ ಜನತೆಗೆ ನಾನು ಯಾರೆಂದು ಗೊತ್ತು, ಅವರನ್ನು ನಾನು ಬಲ್ಲೆ. ರಾಜಮಾತಾ ಅವರನ್ನು ಅಭಿನಂದಿಸಿ ಅಟಲ್ ಸೈಕಲ್ ಸವಾರನಾಗಿ ನಡೆದರು.

    ಅಷ್ಟೊಂದು ಸರಳ ಸ್ವಭಾವದ ವ್ಯಕ್ತಿಯಾಗಿದ್ದವರು ಇವರು. ವ್ಯಕ್ತಿ ಎಷ್ಟೇ ಉನ್ನತ ಶಿಖರಕ್ಕೇರಿದರೂ, ತನ್ನ ಮೂಲದ ಕಲ್ಪನೆ ಹೊಂದಿರಬೇಕು. ಅಂತವರು ಮಾತ್ರ ಎಂಥ ಸಮಸ್ಯೆಗಳನ್ನೂ ಎದುರಿಸಬಲ್ಲರು ಎಂಬುದನ್ನು ತಿಳಿಸಿ ಕೊಡುತ್ತದೆ ಅವರ ವ್ಯಕ್ತಿತ್ವ. ದೇಶದ ಬಡತನ, ಅಭಿವೃದ್ಧಿಯನ್ನು ಅರಿಯಬೇಕಾದರೆ ಎಲ್ಲಾ ರಾಜಕಾರಣಿಗಳು ಎಸಿ ಕಾರುಗಳನ್ನು ಬಿಟ್ಟು ಸೈಕಲ್ ನಡೆಸಬೇಕು. ಆಗ ನಿಜವಾಗಿಯೂ ಸಾಮಾನ್ಯ ಜನರ ಸಮಸ್ಯೆಗಳನ್ನು ಅರಿಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವಾಜಪೇಯಿ ಅವರು ಸೈಕಲ್ ನಡೆಸುವುದರೊಂದಿಗೆ ಕನಸಿನ ಭಾರತದ ಚಿಂತನೆಯ ಪೆಡಲ್‍ಗಳನ್ನು ತುಳಿಯುತ್ತಾ ಮುಂದೆ ಸಾಗಿ ಬಂದವರಾಗಿದ್ದಾರೆ.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ವಿವರ)

  • ಅಜಾತಶತ್ರು ವಾಜಪೇಯಿ ಹೆಸರಿನ ಗುಟ್ಟು ನಿಮಗೊತ್ತಾ?

    ಅಜಾತಶತ್ರು ವಾಜಪೇಯಿ ಹೆಸರಿನ ಗುಟ್ಟು ನಿಮಗೊತ್ತಾ?

    ಭಾರತದ ಧೀಮಂತ, ಸತ್ಯ, ನಿಷ್ಠೆ, ಪ್ರಾಮಾಣಿಕ, ಜನಪರ ಕಾಳಜಿ ಹೊಂದಿದ ಶ್ರೇಷ್ಠ ವ್ಯಕ್ತಿತ್ವದ, ದೇಶದ ಕಂಡ ಅಪರೂಪದ ಪ್ರಧಾನ ಮಂತ್ರಿಯಾಗಿದ್ದರು ಅಟಲ್ ಬಿಹಾರಿ ವಾಜಪೇಯಿ.

    ಪ್ರಚಂಡವಾದ ಭಾರತ ಪ್ರೀತಿ, ಕೋಟಿ ಕೋಟಿ ಜನರ ನರನಾಡಿಗಳನ್ನು ಅಲುಗಾಡಿಸುವಂತಹ ಮಿಂಚಿನಂತಹ ಮಾತುಗಳು, ಉನ್ನತ ಹಾಗೂ ಉದಾತ್ತ ಧ್ಯೇಯ್ಯಳಿಂದ ಆರು ದಶಕಗಳ ಕಾಲ ರಾಷ್ಟ್ರ ರಾಜಕಾರಣದಲ್ಲಿ ಅಜಾತ ಶತ್ರುವಾಗಿ, ಸವ್ಯಸಾಚಿಯಾಗಿ ವಿಜೃಂಭಿಸಿದ ಮಹಾನ್ ಶಕ್ತಿ ಅಟಲ್ ಬಿಹಾರಿ ವಾಜಪೇಯಿ.

    ಅವರ ತಾತ ಬಟೇಶ್ವರದವರು. ಅಟಲ್ ಜೀ ಅವರ ಪೂರ್ವಜರಾದ ಮಣೀರಾಮಜೀ ಇಲ್ಲಿ ವಾಜಪೇಯಿ ಯಜ್ಞವನ್ನು ಮಾಡಿಸಿದರಾಗಿ ಆ ವಂಶಸ್ಥರಿಗೆ ವಾಜಪೇಯಿ ಎಂಬ ಹೆಸರು ಬಂದಿದೆ ಎನ್ನುತ್ತಾರೆ.

    ಬಟೇಶ್ವರ ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಬಾಹತಹ ಸೋಲಿನಲ್ಲಿ ಯಮುನಾ ನದಿಯ ತೀರದ ಒಂದು ಗ್ರಾಮ. ಇದು ಆಗ್ರಾಗೆ 70 ಕಿಮೀ ದೂರದಲ್ಲಿದೆ. ಈ ಗ್ರಾಮ ಹಿಂದಿನಿಂದಲೂ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯದ ಚಟುವಟಿಕೆಗಳ ಕೇಂದ್ರವಾಗಿತ್ತು. ಈ ಗ್ರಾಮದಲ್ಲಿ ಬಟೇಶ್ವರ ಮಹಾದೇವನ ದೇವಸ್ಥಾನವಿದೆ.

    (ಮಾಹಿತಿ ಕೃಪೆ: ಬಿ.ಎಚ್.ನಿರಗುಡಿ ಅವರ 2006ರಲ್ಲಿ ಮುದ್ರಣವಾದ ‘ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ’ ಕನ್ನಡ ಕೃತಿಯ ಯಥಾವತ್ ವಿವರ)

    https://youtu.be/gopOVPqsjmU

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿ ಆರೋಗ್ಯ ಸುಧಾರಿಸಿಲ್ಲ- ಏಮ್ಸ್ ವರದಿ

    ವಾಜಪೇಯಿ ಆರೋಗ್ಯ ಸುಧಾರಿಸಿಲ್ಲ- ಏಮ್ಸ್ ವರದಿ

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಮತ್ತಷ್ಟು ಗಂಭೀರವಾಗಿದ್ದು, ಅವರ ಆರೋಗ್ಯದಲ್ಲಿ ಯಾವ ರೀತಿಯೂ ಸುಧಾರಣೆಯಾಗಿಲ್ಲ ಎಂದು ಏಮ್ಸ್ ವೈದ್ಯರಿಂದ ಮಾಹಿತಿ ಲಭ್ಯವಾಗಿದೆ.

    ಬುಧವಾರ ಅಟಲ್ ಬಿಹಾರಿ ವಾಜಪೇಯಿ ಮಧುಮೇಹ, ಮೂತ್ರದ ಸೋಂಕು ಸೇರಿ ವಿವಿಧ ರೀತಿಯ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಬುಧವಾರ ಯಾವ ಪರಿಸ್ಥಿತಿಯಲ್ಲಿದ್ದರೋ ಅದೇ ಪರಿಸ್ಥಿತಿಯಲ್ಲಿ ಇಂದು ಕೂಡ ಇದ್ದಾರೆ ಎಂದು ದೆಹಲಿಯ ಏಮ್ಸ್ ವೈದ್ಯರಿಂದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದೆ.

    ವಾಜಪೇಯಿ ಆರೋಗ್ಯ ಚೇತರಿಗೆ ದೇಶದಾದ್ಯಂತ ಪೂಜೆ ನಡೆಯುತ್ತಿವೆ. ಈಗಾಗಲೇ ಬಿಜೆಪಿ ಶಾಸಕರು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ. ಆಸ್ಪತ್ರೆಗೆ ಎಲ್ ಕೆ ಅಡ್ವಾಣಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಅಮಿತ್ ಶಾ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆಸ್ಪತ್ರೆಯಲ್ಲಿ ವಾಜಪೇಯಿ ಕುಟುಂಬಸ್ಥರು ಈಗಾಗಲೇ ಜಮಾಯಿಸಿದ್ದು, ಕಣ್ಣೀರು ಹಾಕುತ್ತಿದ್ದಾರೆ.

    ಆಸ್ಪತ್ರೆ ಬಳಿ ಹೆಚ್ಚುವರಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ. ಆರೋಗ್ಯ ಸಚಿವ ಜೆ.ಪಿ ನಡ್ವಾ ಭೇಟಿ ನಿಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಹುಲ್ ಗಾಂಧಿ ಕೂಡ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ರಾಜ್ಯ ಪ್ರವಾಸದಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಪ್ರವಾಸವನ್ನು ಕೂಡ ರದ್ದು ಮಾಡಿದ್ದಾರೆ.

    ಮಧುಮೇಹ, ಮೂತ್ರದ ಸೋಂಕು ಸೇರಿ ವಿವಿಧ ರೀತಿಯ ಅನಾರೋಗ್ಯದ ಕಾರಣ ಕಳೆದ ಜೂನ್ 11ರಂದು ವಾಜಪೇಯಿ ಏಮ್ಸ್ ಗೆ ದಾಖಲಾಗಿದ್ದರು. ವಾಜಪೇಯಿ ಆರೋಗ್ಯ ಇನ್ನಷ್ಟು ಕ್ಷೀಣಿಸಿದ್ದು, ಆಮ್ಲಜನಕದ ಬೆಂಬಲ ನೀಡಲಾಗುತ್ತಿದೆ ಎಂದು ಬುಧವಾರ ಏಮ್ಸ್ ಆಸ್ಪತ್ರೆ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv