Tag: Food Order

  • ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋರಿಗೆ ಶಾಕ್

    ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡೋರಿಗೆ ಶಾಕ್

    ಬೆಂಗಳೂರು: ಇಡ್ಲಿ-ವಡೆ, ಬಿಸಿಬಿಸಿ ಮಸಾಲೆ ದೋಸೆಯಿಂದ ಹಿಡಿದು ಎಲ್ಲವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ತಿನ್ನುವವರಿಗೆ ಡೆಲಿವರಿ ಆ್ಯಪ್‌ಗಳು (Delivery App) ಶಾಕ್ ನೀಡೋಕೆ ಮುಂದಾಗಿವೆ.

    ಹೌದು, ಬೆಳಿಗ್ಗೆ ತಿಂಡಿಗೆ ಇಡ್ಲಿ-ವಡೆ, ಬಿಸಿಬಿಸಿ ಮಸಾಲೆ ದೋಸೆಯಿಂದಿಡಿದು ರಾತ್ರಿ ಸೌತ್, ನಾರ್ಥ್ ಮೀಲ್ಸ್, ಚಿಕನ್, ಮಟನ್ ಸೇರಿದಂತೆ ಬೇಕಾದ ಎಲವನ್ನು ಆನ್‌ಲೈನ್‌ನಲ್ಲೇ ಬುಕ್ ಮಾಡ್ಕೊಂಡು ಸವಿಯುತ್ತಿದ್ದಾರೆ. ಅಂತಹ ಸಿಲಿಕಾನ್ ಸಿಟಿ ಜನರಿಗೆ ಆನ್‌ಲೈನ್ ಕಂಪನಿಗಳು ಶಾಕ್ ನೀಡಲು ಮುಂದಾಗಿವೆ. ಅದಲ್ಲದೇ ಹೋಟೆಲ್ ಮಾಲೀಕರು ಕೂಡ ಆನ್‌ಲೈನ್ ಸಂಸ್ಥೆಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ.ಇದನ್ನೂ ಓದಿ: ಇಂದು ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ – 20 ಸಾವಿರಕ್ಕೂ ಹೆಚ್ಚು ಜನ ಭಾಗಿ ಸಾಧ್ಯತೆ

    ಡೆಲಿವರಿ ಸಂಸ್ಥೆಗಳು ಗ್ರಾಹಕರಿಗೆ ಶಾಕ್ ನೀಡಲು ಸಜ್ಜಾಗಿದೆ. ಸ್ವಿಗ್ಗಿ, ಜೊಮೊಟೊ ಸೇರಿದಂತೆ ಫುಡ್ ಡೆಲಿವರಿ ಆಪ್‌ಗಳು ಫ್ಲಾಟ್‌ಫಾರಂ ಚಾರ್ಜ್ ಹೆಚ್ಚು ಮಾಡಲು ಮುಂದಾಗಿದೆ. ಈಗಾಗಲೇ ಆನ್‌ಲೈನ್ ಡೆಲಿವರಿ ಆಪ್‌ಗಳು ಡೆಲಿವರಿ ಚಾರ್ಜ್ ಎಂದು ಹಣವನ್ನು ತೆಗೆದುಕೊಳ್ಳುತ್ತಿದ್ದು, ಕಳೆದ ವರ್ಷದಿಂದ ಫ್ಲಾಟ್ ಫಾರಂ ಚಾರ್ಜ್ ತೆಗೆದುಕೊಳ್ಳಲು ಮುಂದಾಗಿದ್ದರು. 2 ರಿಂದ 3 ರೂ. ಇದ್ದ ದರ ಇದೀಗ 12 ರಿಂದ 15 ರೂ.ವರೆಗೆ ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಸ್ವಿಗ್ಗಿ ಫ್ಲಾಟ್‌ಫಾರಂ ಚಾರ್ಜ್ 12 ರೂ., ಜೊಮಾಟೊ 15 ರು.ಗೆ ಏರಿಕೆ ಆಗಲಿದೆ.

    ಇನ್ನೂ ಹಬ್ಬಗಳು ಆರಂಭವಾಗಿರುವ ಈ ಹೊತ್ತಿನಲ್ಲಿ ಕಂಪನಿಗಳು ದರ ಹೆಚ್ಚಳ ಮಾಡಿವೆ. ಅಲ್ಲದೆ ಈ ಕಂಪನಿಗಳು ಊಟ, ತಿಂಡಿಯನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಗೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ, ಶೇಕಡ 18ರಷ್ಟು ತೆರಿಗೆಯನ್ನು ಸೆಪ್ಟೆಂಬರ್ 22ರಿಂದ ಜಾರಿ ಬರಲಿರುವ ಕಾರಣಕ್ಕೆ ಅದರ ಹೊರೆಯೂ ಗ್ರಾಹಕರ ಮೇಲೆ ಬೀಳಲಿದೆ. ಜೊತೆಗೆ ಸಂಸ್ಥೆಗಳ ಪ್ಲಾಟ್‌ಫಾರಂ ಚಾರ್ಜ್ ಕೂಡ ಹೆಚ್ಚು ಮಾಡ್ತಿದೆ. ಇದಕ್ಕೆ ಹೋಟೆಲ್ ಮಾಲೀಕರು ನಾವು ಆನ್‌ಲೈನ್ ಸಂಸ್ಥೆಗೆ ಮನವಿ ಮಾಡಿದರೂ ಉಪಯೋಗ ಆಗ್ತಿಲ್ಲ, ಕೋವಿಡ್ ಸಮಯದಲ್ಲಿ ಅನಿವಾರ್ಯವಾಗಿ ಹೋಂ ಡೆಲಿವರಿ ತೆಗೆದುಕೊಳ್ಳಬೇಕಾಗಿತ್ತು. ಈಗ ಅಂತಹ ಸ್ಥಿತಿ ಕೂಡ ಇಲ್ಲ, ಹೋಮ್ ಡೆಲಿವರಿ ಮಾಡಿಸಿಕೊಳ್ಳೊದ್ರಿಂದ ಊಟದ ತಾಜತನ, ಬಿಸಿ ಕೂಡ ಇರೋಲ್ಲ, ಹೋಟೆಲ್‌ಗೆ ಬನ್ನಿ, ಅಲ್ಲೇ ಊಟ ಮಾಡಿ, ಹಣ ಕೂಡ ಉಳಿಸಿಕೊಳ್ಳಿ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಫ್ಲಾಟ್‌ಫಾರಂ ಚಾರ್ಜ್ ಹೆಸರಲ್ಲಿ ಕಳೆದ ವರ್ಷದಿಂದ ಗ್ರಾಹಕರಿಗೆ ಕಡಿಮೆ ಪ್ರಮಾಣದಲ್ಲಿ ಹೊರೆ ಹಾಕಲು ಮುಂದಾಗಿದ್ದ ಈ ಆನ್‌ಲೈನ್ ಕಂಪನಿಗಳು, ಇದೀಗ ದೊಡ್ಡಮಟ್ಟದಲ್ಲಿ ಹೊರೆ ಹಾಕಲು ಮುಂದಾಗಿವೆ. ಇದರಿಂದ ಗ್ರಾಹಕರು ಮಾತ್ರವಲ್ಲ, ಹೋಟೆಲ್ ಮಾಲೀಕರು ಕೂಡ ಆಕ್ರೋಶ ವ್ಯಕ್ತಪಡಸ್ತಿದ್ದಾರೆ.ಇದನ್ನೂ ಓದಿ: ನೇಪಾಳ ಪ್ರಧಾನಿ ಹುದ್ದೆ ರೇಸಲ್ಲಿ ಕರ್ನಾಟಕದ ಎಂಟೆಕ್ ಪದವೀಧರ

  • ಫುಡ್ ಆರ್ಡರ್ ಪಡೆಯುವ ವಿಚಾರಕ್ಕೆ ಜಗಳ- ಸ್ನೇಹಿತನನ್ನೇ ಕೊಲೆಗೈದಿದ್ದವರು ಅಂದರ್

    ಫುಡ್ ಆರ್ಡರ್ ಪಡೆಯುವ ವಿಚಾರಕ್ಕೆ ಜಗಳ- ಸ್ನೇಹಿತನನ್ನೇ ಕೊಲೆಗೈದಿದ್ದವರು ಅಂದರ್

    ಬೆಂಗಳೂರು: ಸ್ನೇಹಿತನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ, ಆರೋಪಿಗಳನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಪ್ರವೀಣ್ ಹಾಗೂ ತೇಜಸ್ ಬಂಧಿತ ಆರೋಪಿಗಳು. ಬಿಟಿಎಂ ಲೇಔಟ್ 2ನೇ ಹಂತದ 16 ಮೇನ್ ಮನೆಯೊಂದರಲ್ಲಿ ಫೆಬ್ರವರಿ 28ರ ಬೆಳಗ್ಗೆ ಸುನಿಲ್‍ನನ್ನು (28) ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು.

    ಸುನಿಲ್, ಆರೋಪಿಗಳಾದ ಪ್ರವೀಣ್ ಮತ್ತು ತೇಜಸ್ ಖಾಸಗಿ ಫುಡ್ ಡೆಲಿವರಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಫುಡ್ ಆರ್ಡರ್ ಪಡೆದುಕೊಳ್ಳುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು. ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತ ಎನ್ನುವುದನ್ನೂ ನೋಡದೆ ಆರೋಪಿಗಳು  ಮಾರಣಾಂತಿಕ ಹಲ್ಲೆ ಮಾಡಿದ್ದರು.

    ಗಂಭೀರವಾಗಿ ಗಾಯಗೊಂಡಿದ್ದ ಸುನಿಲ್‍ನನ್ನ ಸ್ಥಳೀಯರು ಗಾಯಾಳು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಮಾರ್ಚ್ 4ರಂದು ಮೃತಪಟ್ಟಿದ್ದ. ಇತ್ತ ಆರೋಪಿಗಳು ಕೃತ್ಯದ ಬಳಿಕ ತುಮಕೂರಿನಲ್ಲಿ ತಲೆಮರೆಸಿಕೊಂಡಿದ್ದರು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮೈಕೋ ಲೇಔಟ್ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದರು. ಪ್ರವೀಣ್ ಮತ್ತು ತೇಜಸ್ ತುಮಕೂರಿನಲ್ಲಿ ಇರುವ ಮಾಹಿತಿ ಪಡೆದ ಪೊಲೀಸರು ತಂಡವನ್ನು ರಚಿಸಿ, ಆರೋಪಿಗಳನ್ನು ಬಂಧಿಸಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ವೈದ್ಯಾಧಿಕಾರಿಗಳಿಂದ ವಸಂತನಗರ ಡರ್ಟಿ ಕಿಚನ್ ಮೇಲೆ ದಾಳಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ವೈದ್ಯಾಧಿಕಾರಿಗಳಿಂದ ವಸಂತನಗರ ಡರ್ಟಿ ಕಿಚನ್ ಮೇಲೆ ದಾಳಿ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆನ್‍ಲೈನ್ ಫುಡ್ ಆರ್ಡರ್ ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದ್ದು, ಈ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ನಡೆಸಿತ್ತು. ಈ ಡರ್ಟಿ ಕಿಚನ್‍ಗಳ ಬಗ್ಗೆ ಇಂದು ಬೆಳಗ್ಗಿನಿಂದಲೇ ವಿಸ್ತೃತವಾದ ವರದಿ ಕೂಡ ಪ್ರಸಾರ ಮಾಡಿತ್ತು. ಈ ಸುದ್ದಿ ಪ್ರಸಾರವಾದ ಬೆನ್ನಲ್ಲೇ ವಸಂತನಗರದ ವೈದ್ಯಾಧಿಕಾರಿಗಳು ಎಚ್ಚೆತ್ತು ದಾಳಿ ಮಾಡಿದ್ದಾರೆ.

    ಬೆಂಗಳೂರಿನ ವಸಂತನಗರ ತಡ್ಕವಾಲಾ, ಬನ್ನೆರುಗಟ್ಟದ ಶುದ್ಧ್ ದೇಸಿ ಖಾನ, ಲೆಟ್ ನೈಟ್ ಕಿಚನ್‍ಗಳಿಂದ ಅರ್ಧ ಬೆಂಗಳೂರಿಗೆ ಫುಡ್ ಡೆಲಿವರಿ ಆಗುತ್ತಿತ್ತು. ಆದರೆ ಇಲ್ಲಿ ಸ್ವಚ್ಛತೆ ಅನ್ನೋದೇ ಇರಲಿಲ್ಲ. ಅದರಲ್ಲೂ ವಸಂತನಗರ ತಡ್ಕವಾಲಾ ಕಿಚನ್‍ನಲ್ಲಿ ಟಾಯ್ಲೆಟ್ ರೂಮಿನಲ್ಲಿ ಕಡಾಯಿ ಇಟ್ಟುಕೊಂಡು ಅಡುಗೆ ಮಾಡಲಾಗುತ್ತಿತ್ತು. ಇದೀಗ ಈ ಡರ್ಟಿ ಕಿಚನ್‍ನ ಮೇಲೆ ಪಾಲಿಕೆಯ ವೈದ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಹುಷಾರ್

    ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ರೇಡ್ ಮಾಡಿ ವಸಂತನಗರದ ತಡ್ಕವಾಲಾ ಡರ್ಟಿ ಕಿಚನ್‍ಗೆ ಶಿವಾಜಿನಗರದ ಆರೋಗ್ಯ ವೈದ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ವಸಂತನಗರ ಹೆಲ್ತ್ ಇನ್ಸ್ ಪೆಕ್ಟರ್ ರೇಣುಕಾಂಬ, ಹಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಸಿಬ್ಬಂದಿ ಕೂಡ ಇದ್ದರು.

    ದಾಳಿ ವೇಳೆ ಕಿಚನ್‍ನಲ್ಲಿ ಸಿಕ್ಕಿದ ಪ್ಲಾಸ್ಟಿಕ್ ಹಾಗೂ ಕೊಳೆತ ವಸ್ತುಗಳು, ಅವಧಿ ಮುಗಿದ ಚಿಲ್ಲಿ, ಟೊಮೆಟೋ ಸಾಸ್ ಮೊದಲಾದವುಗಳನ್ನು ವೈದ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವೈದ್ಯಾಧಿಕಾರಿಗಳ ದಾಳಿಯಿಂದ ಸಿಬ್ಬಂದಿ ಹೆದರಿದ್ದು, ಈ ಬಗ್ಗೆ ಮಾಹಿತಿ ತಿಳಿದರೂ ಕಿಚನ್ ಮಾಲೀಕ ಮಾತ್ರ ಸ್ಥಳಕ್ಕೆ ಬಂದಿಲ್ಲ.

  • ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಹುಷಾರ್

    ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡೋ ಮುನ್ನ ಹುಷಾರ್

    ಬೆಂಗಳೂರು: ಆನ್‍ಲೈನ್‍ನಲ್ಲಿ ಫುಡ್ ಆರ್ಡರ್ ಮಾಡುವ ಮುನ್ನ ಗ್ರಾಹಕರೇ ಹುಷಾರಾಗಿರಿ. ಯಾಕೆಂದರೆ ಬೆಂಗಳೂರಿನ ಹಲವೆಡೆ ಆನ್‍ಲೈನ್ ಫುಡ್ ಮಾಫಿಯಾ ನಡೆಯುತ್ತಿದೆ.

    ಆನ್‍ಲೈನ್‍ನಲ್ಲಿ ಫುಡ್ ಡೆಲಿವರಿ ಮಾಡುವ ಧಾವಂತದಲ್ಲಿ ಸ್ವಚ್ಛತೆಯನ್ನೇ ಹೋಟೆಲ್‍ಗಳು ಮರೆಯುತ್ತಿವೆ. ಜೊಮಾಟೋ, ಸ್ವಿಗ್ಗಿ ಸೇರಿದಂತೆ ಆನ್‍ಲೈನ್ ಆ್ಯಪ್‍ಗಳ ಮೂಲಕ ಫುಡ್ ಡೆಲಿವರಿ ಮಾಡುವ ಡರ್ಟಿ ಕಿಚನ್‍ಗಳ ಅಸಲಿ ಬಣ್ಣವನ್ನ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯ ಮೂಲಕ ಬಯಲಿಗೆಳೆದಿದೆ. ಮುಖ್ಯವಾಗಿ ನಗರದ ಹಲವೆಡೆ ಹೊರ ರಾಜ್ಯದಿಂದ ಬಂದವರೇ ಈ ಬ್ಯುಸಿನೆಸ್ ನಡೆಸುತ್ತಿದ್ದಾರೆ.

    ವಸಂತನಗರ, ಫ್ಯಾಸೂಸ್‍ನ, ತಡ್ಕವಾಲಾ ಕಿಚನ್:
    ವಸಂತನಗರದಲ್ಲಿರುವ ಪ್ಯಾಸೂಸ್ ಫುಡ್ ಸರ್ವಿಸಸ್ ಕಂಪನಿಯ ತಡ್ಕವಾಲಾ ಕಿಚನ್‍ನಲ್ಲಿ ಸ್ವಚ್ಛತೆ ಅನ್ನೋದೆ ಇಲ್ಲ. ಫ್ರಿಜ್‍ನಲ್ಲಿ ಹೆಪ್ಪುಗಟ್ಟಿರುವ ಮಟನ್, ಚಿಕನ್ ಪೀಸ್‍ಗಳು, ಟಾಯ್ಲೆಟ್ ರೂಮಿನಲ್ಲಿ ಕಬಾಬ್ ಹಾಗೂ ರೈಸ್ ಬೇಯಿಸುವ ಕಡಾಯಿಗಳು ಹಾಗೂ ಕೊಳೆತ ಸ್ಥಿತಿಯಲ್ಲಿರುವ ಸೊಪ್ಪು ಪದಾರ್ಥಗಳು ಕಂಡು ಬಂದಿವೆ. ಫ್ಯಾಸೂಸ್ ಫುಡ್ ಸರ್ವಿಸಸ್ ಕಂಪನಿ ಮೂಲಕ ನಗರದ ಮಾರತಹಳ್ಳಿ, ಹೆಚ್‍ಎಸ್‍ಆರ್ ಲೇಔಟ್, ಬೊಮ್ಮನಹಳ್ಳಿ, ರಾಜಾಜಿನಗರ, ಬೊಮ್ಮನಹಳ್ಳಿ, ಕೆಂಗೇರಿ ಸೇರಿ 20 ರಿಂದ 25 ಹೋಟೆಲ್‍ಗಳನ್ನ ನಡೆಸುತ್ತಿದ್ದಾರೆ.

    ಕಂಪನಿಯ ಹೆಸರಿನ ಮೇಲೆ ಅನುಮತಿ ಪಡೆದು ಅಕ್ರಮವಾಗಿ ಕಿಚನ್‍ಗಳ ಮೂಲಕ ಲಂಚ್ ಬಾಕ್ಸ್, ಬಿರಿಯಾನಿ ಹೌಸ್ ಹೀಗೆ ನಾನಾ ಹೆಸರಿನ ಮೇಲೆ ಆನ್ ಲೈನ್ ಫುಡ್ ಡೆಲಿವರಿ ಮಾಡಲಾಗುತ್ತದೆ. ಇದು ಕಳೆದ ನಾಲ್ಕು ವರ್ಷಗಳಿಂದ ಈ ಗಲೀಜು ವ್ಯವಹಾರ ನಡೆಯುತ್ತಿದೆ. ಪುಣೆ ಮೂಲದ ಕಲೋಲ್ ಸಚಿ ಬ್ಯಾನರ್ಜಿ ಇಷ್ಟೆಲ್ಲಾ ಅಕ್ರಮ ವ್ಯವಹಾರ ಮಾಡುತ್ತಿದ್ದಾರೆ. ಕೋಲ್ಕತ್ತಾ, ಪುಣೆ ಹುಡುಗರನ್ನು ಇಲ್ಲಿಗೆ ಕರೆಸಿಕೊಂಡು ವ್ಯವಹಾರ ನಡೆಸುತ್ತಿದ್ದಾರೆ.

    ಫ್ಯಾಸೂಸ್ ಹೋಟೆಲ್ ಮೂಲಕ ಪ್ರತಿನಿತ್ಯ ಸಾವಿರಾರು ಜನರ ಹೊಟ್ಟೆಗೆ ಕಲುಷಿತ ಆಹಾರ ಸೇರುತ್ತಿದೆ. ಒಂದೇ ಪರವಾನಿಗೆ ಪತ್ರದಿಂದ 20 ರಿಂದ 25 ಹೋಟೆಲ್‍ಗಳಲ್ಲಿ ವ್ಯವಹಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಂದು ಕ್ಲೌಡ್ ಕಿಚನ್‍ನಿಂದ ಪ್ರತಿನಿತ್ಯ 250ಕ್ಕೂ ಹೆಚ್ಚು ಫುಡ್ ಡೆಲಿವರಿಯಾಗುತ್ತದೆ. ಪ್ರತಿದಿನ 25 ಹೋಟೆಲ್‍ಗಳಿಂದ, 250 ರಂತೆ ಒಟ್ಟು 6,250 ಜನರಿಗೆ ಫುಡ್ ಡೆಲಿವರಿಯಾಗುತ್ತದೆ. ಪ್ರತಿನಿತ್ಯ ಲಕ್ಷ ಲಕ್ಷ ಹಣ ಸಂಪಾದಿಸುವ ಪ್ಯಾಸೂಸ್ ಫುಡ್ ಸರ್ವಿಸಸ್ ಸ್ವಚ್ಛತೆ ಬಗ್ಗೆ ಗಮನವೇ ಹರಿಸಿಲ್ಲ.

    ಬನ್ನೇರುಗಟ್ಟ ರಸ್ತೆಯ ಬಿಳೆಕಹಳ್ಳಿ, ಶುದ್ಧ್ ದೇಸಿ ಖಾನ ಕಿಚನ್:
    ಬನ್ನೇರುಗಟ್ಟದ ಬಿಳೆಕಹಳ್ಳಿಯ ಶುದ್ಧ್ ದೇಸಿ ಖಾನ ಕಿಚನ್ ಅನ್ಸೂಮನ್ ಬೋವಲ್ ಹಾಗೂ ನಿಖಿಲ್ ರಾಜು ಎಂಬವರ ಮಾಲೀಕತ್ವದಲ್ಲಿದೆ. ಕಿಚನ್ ಡಸ್ಟ್ ಬೀನ್‍ನಲ್ಲಿ ಎರಡು ದಿನದ ಹಿಂದಿನ ರೈಸ್ ಹಾಗೂ ತಂದೂರಿ ರೊಟ್ಟಿ ಇಟ್ಟಿದ್ದರು. ಇದನ್ನು ರೆಕಾರ್ಡ್ ಮಾಡುತ್ತಿದ್ದ ನಮ್ಮ ತಂಡದ ಮೇಲೆಯೇ ಅಲ್ಲಿನ ಸಿಬ್ಬಂದಿ ಅವಾಜ್ ಹಾಕಿದರು. ವಿಡಿಯೋ ಚಿತ್ರಿಕರಣ ಮಾಡದಂತೆ ತಡೆದರು. ಅಷ್ಟೇ ಅಲ್ಲದೆ ಅವರ ಮಾಲೀಕನಿಗೆ ಕಾಲ್ ಮಾಡಿ ನಮ್ಮ ಕೈಗೆ ಮೊಬೈಲ್ ಕೊಟ್ಟರು. ಮಾಲೀಕ ನಾನು ಬರುವ ತನಕ ಅಲ್ಲಿಂದ ಹೋಗಬೇಡಿ ಎಂದು ತಾಕೀತು ಮಾಡಿದರು.

    ಇಂತಹ ಭಯಂಕರ ಪರಸ್ಥಿತಿಯಲ್ಲಿಯೂ ಡರ್ಟಿ ಸ್ಪಾಟ್‍ನ್ನ ಪಬ್ಲಿಕ್ ಟಿವಿ ತಂಡ ಬಯಲಿಗೆಳೆದಿದೆ. ನಾವು ಕಿಚನ್‍ಗೆ ಹೋಗುತ್ತಿದ್ದಂತೆ ಅಲ್ಲಿನ ಸಿಬ್ಬಂದಿ ಕಿಚನ್ ಕ್ಲೀನ್ ಮಾಡೋಕೆ ಮುಂದಾಗಿದ್ದರು. ಇನ್ನು ಈ ಬಗ್ಗೆ ಇಲ್ಲಿನ ಇನ್ ಚಾರ್ಜ್ ಕೇಳಿದರೆ, ಆರ್ಡರ್ ಜಾಸ್ತಿ ಇದ್ದಾಗ ಹೀಗೆ ಆಗುತ್ತೆ ಸಾರ್ ಎಂದು ಸಮಜಾಯಿಷಿ ನೀಡಿದ್ದಾರೆ.

    ಬನ್ನೇರುಗಟ್ಟ ಮುಖ್ಯರಸ್ತೆ, ಲೇಟ್ ನೈಟ್ ಕಿಚನ್:
    ಲೇಟ್ ನೈಟ್ ಕಿಚನ್ ನಿಂದ ಬೆಂಗಳೂರಿನಲ್ಲಿ ಅರ್ಧ ರಾತ್ರಿಯಲ್ಲಿಯೂ ಫುಡ್ ಡೆಲಿವರಿ ಆಗುತ್ತದೆ. ಅಲ್ಲಿಯೂ ಕೂಡ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿತ್ತು. ಅಲ್ಲಿ ಅಡುಗೆ ಮಾಡುವ ಸಿಬ್ಬಂದಿಯೊಬ್ಬ ಚಪ್ಪಲ್ ಹಾಕಿಕೊಂಡೆ ಪಾತ್ರೆಗಳನ್ನು ತೊಳೆಯುತ್ತಿದ್ದ. ಅಡುಗೆ ಮನೆಯ ಕೋಣೆಯ ನೆಲ ಕೂಡ ಗಬ್ಬು ವಾಸನೆಯಿಂದ ಕೂಡಿತ್ತು. ಮೊದಲೆರಡು ಕಿಚನ್‍ಗಳಿಗೆ ಹೊಲಿಸಿಕೊಂಡರೆ ಕೊಂಚ ಮಟ್ಟಿಗೆ ಇಲ್ಲಿ ಸ್ವಚ್ಛತೆ ಇತ್ತು.

    ಒಟ್ಟಿನಲ್ಲಿ ಆನ್‍ಲೈನ್ ಫುಡ್ ಡೆಲಿವರಿಯ ಹೆಸರಲ್ಲಿ ಹೋಟೆಲ್ ಮಾಲೀಕರು ಸ್ವಚ್ಛತೆಯನ್ನೇ ಮರೆತಿದ್ದಾರೆ. ನೇಪಾಳಿ, ಬೆಂಗಾಳಿ ಹುಡುಗರನ್ನು ಕೆಲಸಕ್ಕೆ ಇಟ್ಟುಕೊಂಡು ಡರ್ಟಿ ಕಿಚನ್‍ಗಳಿಂದ ಫುಡ್ ಡಿಸ್ಟ್ರೂಬ್ಯೂಟ್ ಮಾಡುತ್ತಿದ್ದಾರೆ. ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಕಾಯ್ದೆಗೆ ಕ್ಯಾರೇ ಅಂತಿಲ್ಲ. ಸುರಕ್ಷತಾ ಹಾಗೂ ಗುಣಮಟ್ಟ ಕಾಯ್ದುಕೊಳ್ಳದ ಹೋಟೆಲ್‍ಗಳಿಗೆ ಬಿಬಿಎಂಪಿಯ ಆಹಾರ ಇಲಾಖೆ ಅಧಿಕಾರಿಗಳು ಹೇಗೆ ಲೈಸನ್ಸ್ ನ್ನು ರಿನಿವಲ್ ಮಾಡಿಕೊಟ್ಟರು ಅನ್ನೋ ಪ್ರಶ್ನೆ ಕಾಡುತ್ತಿದೆ.